Thursday 20 February 2020

ಸಿರಿಭೂವಲಯಕುರಿತ ಪರಿಚಯಕೃತಿಗಳ ಪ್ರಚಾರವಾಗಿಲ್ಲವೇಕೆ!?

ಕೆಲವು ಲೇಖಕರ ಬರಹಗಳು ಪ್ರಕಟವಾದ ಕೆಲವೇ ದಿಗಳೊಳಗಾಗಿಅಥವಾ ’ಪ್ರಸಿದ್ಧ’ ಬರಹಗಾರರ ಕೃತಿಗಳು ಪ್ರಕಟವಾಗುವ ದಿನದಂದೇ ಸಮೂಹಮಾಧ್ಯಮಗಳಲ್ಲಿ ಅವುಗಳನ್ನು ಕುರಿತ ಪರಿಚಯ ಅಥವಾ  ವಿಸ್ತಾರವಾದ ವಿಮರ್ಶೆಯು ಪ್ರಕಟವಾಗುವುದು ಸಹಜ ಸಂಗತಿ.
 ಇದು ಕಳೆದ ೨-೩ ದಶಕಗಳಿಂದಲೂ ಕನ್ನಡದ ವಿಮರ್ಶಾಕ್ಷೇತ್ರದಲ್ಲಿ ಬೇರುಬಿಟ್ಟಿರುವ ಸ್ಥಿತಿ! ಮಾಧ್ಯಮದವರಿಗೆ ಬೇಕಿರುವ ಬರಹಗಾರರ ಬರಹಕ್ಕೆ ಮಾತ್ರ  ಅಲ್ಲಿ ಅವಕಾಶ. ಇಲ್ಲವಾದಲ್ಲಿ ಅವುಗಳನ್ನು ಕೇಳಿವವರಿಲ್ಲ!!
ಸಿರಿಭೂವಲಯದ  ವಿಷಯಭರಿತ ಪರಿಚಯಕೃತಿಗಳು ಪ್ರಕಟವಾಗಿ ಐದರಿಂದ ಹತ್ತುವರ್ಷಗಳು ಕಳೆದರೂಸೂಕ್ತವಾದ ವಿಮರ್ಶೆಯು ಇನ್ನೂ ಬಾರದಿರುವ ಬಗ್ಗೆ ಕೆಲವು ಆಸಕ್ತರು ವಿಚಾರಿಸುವುದುಂಟು! ಹೇಳೆ ಕೇಳಿ ನಾನೊಬ್ಬ ಹಳ್ಳಿಗನಾದ ಕೃಷಿಕನಾಗಿದ್ದೆ. ಯಾವುದಾದರೂ ಕಾಲೇಜಿನ ಶಿಕ್ಷಕನಾಗಿದ್ದರೆ, ನೂರಾರು;ಸಾವಿರಾರು ಶಿಷ್ಯರ ಪರಂಪರೆಯನ್ನು ಹೊಂದಿ, ನಾನು ಬರೆದದ್ದು ಮಾರಾಟಕ್ಕೂ ವಿಮರ್ಶೆಗೂ; ಪರಿಚಯಕ್ಕೂ ಅರ್ಹವಾಗುತ್ತಿತ್ತು!
ಮೊದಲಿಗೆ ಕುಮುದೇಂದುವು ಜನಪ್ರಿಯತೆ ಪಡೆದ ಕವಿಯಲ್ಲ!  ಸಿರಿಭೂವಲಯದ ಶ್ರೀಕಂಠಯ್ಯನವರು  ವಿದ್ವಾಂಸರ ವಿರೋಧಕ್ಕೆ ಗುರಿಯಾಗಿದ್ದವರು! ಇಂಥ ಅಪ್ರಿಯ ವಿಚಾರಗಳ ವಿವರ ಸೂಚಿಸಿರುವ ಸುಧಾರ್ಥಿಯ ಸರಳ ಪರಿಚಯಕೃತಿಗಳಿಗೆ ವಿಮರ್ಶೆಯಾಗಲೀ, ಪರಿಚಯವಾಗಲೀ ದೊರೆಯಲುಹೇಗೆ ಸಾಧ್ಯ!!??
 ಮಾಧ್ಯಮಗಳ ಪದಾಧಿಕಾರಿಗಳು ಒಂದುರೀತಿಯ ಸಂದಿಗ್ಧತೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ! ಮಾಧ್ಯಮಗಳ ಮಾಲಿಕರ ಮರ್ಜಿಗನುಗುಣವಾಗಿಯೇ ಅವರು ತಮ್ಮ ಕಾರ್ಯನಿರ್ವಹಿಸಬೇಕಿರುತ್ತದೆ. ಮಾಧ್ಯಮಗಳನ್ನು ಒಂದು ಉದ್ಯಮದ ರೀತಿಯಲ್ಲಿ ನಡೆಸುವುದರಿಂದ ಅಲ್ಲಿ ಲಾಭನಷ್ಟದ್ದೇ ಪ್ರಮಖ ಪಾತ್ರವಾಗಿರುತ್ತದೆ.
 ಪ್ರತಿಯೊಬ್ಬ ಮಾಲಿಕನ ಗುರಿಯೂ ’ಲಾಭ’ದತ್ತಲೇ ಕೇಂದ್ರಿತವಾಗಿರುತ್ತದೆ. ಅಲ್ಲಿ ಸಾಮಾಜಿಕ ಬದ್ಧತೆಯ ಮಹತ್ವ ವಿರುವುದಿಲ್ಲ. ಸಾಹಿತ್ಯಕ್ಕೆ ಸಂಬಂಧಿಸಿದ ಮಾಹಿತಿಗಳ ಪ್ರಸಾರಕ್ಕೆ  ಸಾಮಾನ್ಯವಾಗಿ ಆಧ್ಯತೆ ಕಡಿಮೆ. ಅಲ್ಪಸ್ವಲ್ಪ ಇದ್ದರೂ ಅದು ಅಲ್ಲಿನ ಪದಾಧಿಕಾರಿಗಳ ಕೃಪಾಪೋಷಿತರಿಗೆ ಮಾತ್ರ  ಸೀಮಿತವಾಗಿರುತ್ತದೆ. ತಮಗೆ ಬೇಕಾದವರಿಗೆ ಮಾತ್ರ, ಹೆಚ್ಚು ಪ್ರಸಿದ್ಧವ್ಯಕ್ತಿಗಳಿಗೆಮಾತ್ರ ಅವರು ಮಣೆಹಾಕುವುದು ಸಹಜಸಂಗತಿ.
ಹಾಗಿರುವಲ್ಲಿ  ಜನರಿಗೆ ಹೆಚ್ಚು ಪ್ರಿಯವೂ ಅಲ್ಲದ, ಶೀಘ್ರವಾಗಿ ಜನರ ಆಸಕ್ತಿಯನ್ನು ಸೆಳೆಯಲೂ ಆಗದ ಇಂಥ ಪ್ರಾಚೀನಕಾವ್ಯಗಳ ವಿಚಾರದಲ್ಲಿ ಮಾಧ್ಯಮದವರು ಆಸಕ್ತಿ ವಹಿಸುವುದು ದೂರದಮಾತು.  ಇದು ಎಲ್ಲರೀತಿಯ ಮಾಧ್ಯಮದವರಿಗೂ ಅನ್ವಯಿಸುತ್ತದೆ.
೧೯೭೦ ರಿಂದ ೧೯೯೦ರ ದಶಕದವರೆವಿಗೆ ಪತ್ರಿಕೆಗಳಲ್ಲಿ ಪುಸ್ತಕವಿಮರ್ಶೆಯು ಸ್ವಲ್ಪಮಟ್ಟಿಗೆ ಉದಾರವಾಗಿತ್ತು. ಅಲ್ಲಿಂದೀಚೆಗೆ ನೂರಾರು- ಸಾವಿರಾರು ರುಪಾಯಿ ಮುಖಬೆಲೆಯ ಪುಸ್ತಕಗಳನ್ನು ವಿಮರ್ಶೆಗಾಗಿ ಪತ್ರಿಕಾಲಯಗಳಿಗೆ ಹೋಗಿ ತಲುಪಿಸಿದರೆ, ಅದನ್ನು ಕೇಳುವವಾರು ನೋಡುವರು ಯಾರೂ ಗತಿಯಿರುತ್ತಿರಲಿಲ್ಲ!
 ಈ ಕಾರಣದಿಂದಾಗಿ ಸುಧಾರ್ಥಿಯು ಸಿರಿಭೂವಲಯಕ್ಕೆ ಸಂಬಂಧಿಸಿದ ಸರಳ ಪರಿಚಯಕೃತಿಗಳನ್ನು ಯಾವ ಪತ್ರಿಕೆಗೂ ವಿಮರ್ಶೆಗಾಗಿ ಕಳಿಸಿದ್ದಿಲ್ಲ! ಅವುಗಳನ್ನು ತಾಳ್ಮೆಯಿಂದ ಒದಿ, ಸೂಕ್ತವಾಗಿ ವಿಮರ್ಶಿಸುವ ಅರ್ಹತೆಯು ಸಮಕಾಲೀನ ಸಾಹಿತ್ಯಸಮುದಾಯದಲ್ಲಿ ಒಬ್ಬಿಬ್ಬರನ್ನು ಬಿಟ್ಟರೆ, ಬೇರೆ ಯಾರಿಗೂ ಇಲ್ಲವೆಂಬುದು ಸರ್ವವೇದ್ಯವಾದುದರಿಂದ ಅಲ್ಲಿ ಕೈತೋರಿಸಿ ಅವಲಕ್ಷಣವೆನಿಸಿಕೊಳ್ಳುವ ಅಗತ್ಯವೇನಿರುತ್ತದೆ!?
ಈ ಕಾರಣದಿಂದಾಗಿ ೨೦೧೩ರರಲ್ಲಿ ಪ್ರಕಟವಾದ ’ಸಿರಿಭೂವಲಯಸಾಗರರತ್ನಮಂಜೂಷ’ಕ್ಕೆ ನಾಡಿನ ಹಿರಿಯ ಚೇತನ ಪ್ರೊ. ಜಿ ವೆಂಕಟಸುಬ್ಬಯ್ಯನವರಿಂದ ಮುನ್ನುಡಿಬರೆಸುವ ಸಾಹಸಕ್ಕೆ ಕೈಹಾಕಿದ್ದಾಯಿತು!  ೧೯೭೧ರಿಂದಲೂ ಸಾಹಿತ್ಯಕ್ಷೇತ್ರದಲ್ಲಿ ಸುಧಾರ್ಥಿಯ  ಕಾಯಕವನ್ನು ನೋಡಿ ಮೆಚ್ಚುಗೆ ಸೂಚಿಸುತ್ತಿದ್ದ ಪ್ರೊ. ಜಿ.ವೆಂಕಟಸುಬ್ಬಯ್ಯನವರು  ಈತನಿಗೆ ಸಾಕಷ್ಟು ಮಾರ್ಗದರ್ಶನನೀಡಿ, ಬೆಂಬಲಿಸಿದವರೂ ಹೌದು.
 ಸಿರಿಭೂವಲಯ ಕಾವ್ಯದವಿಚಾರವಾಗಿ ಸುಧಾರ್ಥಿಯು ಕಳೆದ ೬೫ ವರ್ಷಗಳಿಂದಲೂ ನಿಷ್ಕ್ರಿಯರಾಗಿರುವ ಹಾಗೂ ಅನುಚಿತವಾಗಿ ವರ್ತಿಸಿರುವ ಕನ್ನಡ ವಿದ್ವತ್ ಲೋಕದ ವಿಚಾರದಲ್ಲಿ ತನ್ನ ಗೋತ್ರಪ್ರವರ್ತಕ ಜಮದಗ್ನಿಸುತನಂತೆ ಮಹಾನ್ ಕೋಪಿಷ್ಟನಾಗಿ ತನ್ನ ಬರಹವನ್ನು ರೂಪಿಸಿರುವನೆಂಬ ವಿಚಾರತಿಳಿದೂ, ಈ ಮಹನೀಯರು ಸಿರಿಭೂವಲಯದ ಘನೆತೆಗೆ ತಕ್ಕಂತೆ; ಸರಳಪರಿಚಯಕೃತಿಗಳ ನಿಜವಾದ ಉದ್ದೇಶ ಮತ್ತು ಕಾಳಜಿಯನ್ನು ಕುರಿತು, ಈ ಸರಳಪರಿಚಯಕೃತಿಗಳು ಸಾಧಿಸಿರುವ ಯಶಸ್ಸನ್ನು ಕುರಿತು, ತುಂಬ ಮೌಲಿಕವಾದ, ವಿಸ್ತಾರವಾದ ವಿಮರ್ಶಾತ್ಮಕ ಮುನ್ನುಡಿಯನ್ನು ಬರೆದು ಕೊಟ್ಟದ್ದು ಅಭೂತಪೂರ್ವವಾದದ್ದಾಗಿದೆ.
 ಈ ವಿಮರ್ಶಾತ್ಮಕವಾದ ಮುನ್ನುಡಿಯು, ಸುಧಾರ್ಥಿಯ ಶ್ರಮದ ಸಾರ್ಥಕತೆಯನ್ನು ಸೂಕ್ತವಾಗಿ ಪರಿಗಣಿಸುವ ಕಾರ್ಯವಾಗಿದೆ. ಇದರಿಂದ ನಿಜಕ್ಕೂ ಸುಧಾರ್ಥಿಯ ಬರಹವನ್ನು ಯಾರೊಬ್ಬರೂ ಗೌಣವಾಗಿ ಕಾಣಲು ಸಾಧ್ಯವಿಲ್ಲದಂತಾಗಿಸಿತು.
 ಕಳೆದ ಹತ್ತುವರ್ಷಗಳಿಂದ ಪತ್ರಿಕೆಗಳಲ್ಲಿ ಈ ಸಿರಿಭೂವಲಯದ ಪರಿಚಯಕೃಗಳನ್ನು ಕುರಿತು ಹೊಗಳಿಕೆಯ ಪ್ರವಾಹ ಹರಿದಿದ್ದರೂ, ಸುಧಾರ್ಥಿಗೆ ನಿಜಕ್ಕೂ ಯಾವುದೇ ನೆಮ್ಮದಿ ಸಮಾಧಾನ. ಸಂತೋಷವಿರುತ್ತಿರಲಿಲ್ಲ.  ಮೌಲಿಕವಾದ ವಿಮರ್ಶೆಯ ಮೂಲ ಉದ್ದೇಶವಿರುವುದು ಸಂಬಂಧಿಸಿದ ಕೃತಿಯ ನಿಜವಾದ ಸಾಹಿತ್ಯಿಕ ಮೌಲ್ಯವು ಸಾಮಾನ್ಯ ಓದುಗರಿಗೆ ತಲುಪುವುದು. ಪ್ರೊ. ಜಿ. ವೆಂಕಟಸುಬ್ಬಯ್ಯನವರ ಈ ಮೌಲಿಕ ಮುನ್ನಡಿಯು ಸುಧಾರ್ಥಿಯ ಪಾಲಿಗೆ ಒಂದು ಜೀವಿತದ ಮಹತ್ಸಾಧನೆ.
ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರಗಳ ವಿಚಾರವಿರಲೀ;  ’ನೊಬೆಲ್’ ಅಥವಾ ’ಪುಲಿಟ್ಜರ್ ’ಪ್ರಶಸ್ತಿಗಿಂತಲೂ  ಈ ಮುನ್ನುಡಿಯು ಮೇಲ್ಮಟ್ಟದ್ದೆಂಬ ಹೆಮ್ಮೆ ಸುಧಾರ್ಥಿಗಿದೆ.   ಯಾವುದೇ ಪ್ರಶಸ್ತಿ, ಪುರಸ್ಕಾರಕ್ಕಾಗಿ ಹಂಬಲಿಸಿ;  ಅದನ್ನು ಪಡೆಯಲು ಪಡಬಾರದ ಯಾತನೆ ಪಡುವ ವಿಚಾರದಲ್ಲಿ ಈತ  ಶಕ್ತಿ ಹೀನ! ಅದರಲ್ಲಿ ಈತನಿಗೆ ಆಸಕ್ತಿಯೂ ಇಲ್ಲ!!
ಇದೇ ಸಮಸ್ಯೆಯು ಸಾಮಾಜಿಕ ಜಾಲತಾಣದಲ್ಲೂ  ತಲೆಹಾಕುವುದರಲ್ಲಿ ಅಚ್ಚರಿಯೇನಿಲ್ಲ. ಇದರೊಂದಿಗೆ ಇಲ್ಲಿನ ಓದುಗರ ಮನೋಭಾವವೂ ತನ್ನದೇ ಆದ ಪರಿಧಿಯನ್ನುಹೊಂದಿರುತ್ತದೆ. ಓದುವ ಹವ್ಯಾಸವೇ ಕಡಿಮೆ. ಏನಿದ್ದರೂ ಬಣ್ಣ ಬಣ್ಣದ ಚಿತ್ರಗಳು ಮತ್ತು ಸಂಕ್ಷಿಪ್ತ ಮಾಹಿತಿಗಳಿಗೆ ಮಾತ್ರ ಇಲ್ಲಿ ಆಧ್ಯತೆ!
ಲೇಖನವು ಚಿತ್ರರಹಿತವಾಗಿದ್ದು, ದೀರ್ಘವಾಗಿದ್ದರಂತೂ ಅದರತ್ತ ಗಮನಹರಿಸುವವರ ಸಂಖ್ಯೆ  ಒಬ್ಬಿಬ್ಬರುಮಾತ್ರ!  ಇಂಥಪರಿಸರದಲ್ಲಿಯೂ ಈ ಸಿರಿಭೂವಲಯದ ಮಾಹಿತಿಗಳನ್ನು ಈ ಬರಡುಭೂಮಿಯಲ್ಲಿ ಬಿತ್ತಿ ಅದರಲ್ಲಿಯೂ ಅಲ್ಪಸ್ವಲ್ಪ ಫಸಲನ್ನು ತೆಗೆದದ್ದಾಯಿತು!
ನಿಜಕ್ಕೂ ಅತಿದೀರ್ಘವಾದ ಲೇಖನಗಳನ್ನು  ಪ್ರತಿದಿನವೂ ಧಾರಾವಾಹಿಯರೂಪದಲ್ಲಿ ಬರೆದು ಪ್ರಕಟಿಸಿ, ಸುಮಾರು ಹತ್ತುಜನಗಳ ಪರಿಧಿಯಲ್ಲಿ ಈ ಕಾವ್ಯದ ಮಾಹಿತಿಯು ಜನರ ಆಸಕ್ತಿಯನ್ನು ಸೆಳೆಯುವಂತೆ ಮಾಡುವಲ್ಲಿ ಯಶಸ್ಸುಪಡೆದದ್ದಾಗಿದೆ!
೧೯೫೬ ರರ ಸುಮಾರಿನಲ್ಲಿ ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು ’ಈ ಸಿರಿಭೂವಲಯವು ಜಗತ್ತಿನಲ್ಲಿ ೫-೬ ಜನಗಳ ಆಸಕ್ತಿಯ ಕಾವ್ಯ’ ಎಂದು ಸೂಚಿಸಿದ್ದಿದ್ದೆ! ಈಗ ೨೦೨೦ರ ಸುಮಾರಿನಲ್ಲಿ ಕರ್ನಾಟಕದಲ್ಲಿಯೇ ಸುಮಾರು ೧೦ಕ್ಕೂ ಹೆಚ್ಚಿನ ಸಿರಿಭೂವಲಯದ  ಆಸಕ್ತರು ಇರುವಂತಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಲ್ಲವೇ!?
ಒಬ್ಬರು ಓದುಗ ಮಿತ್ರರಂತೂ ’fb ನಲ್ಲಿ ಉದ್ದುದ್ದದಲೇಖನ ಹಾಕಿದರೆ ಯಾರೂ ಅದರತ್ತ ಗಮನಹರಿಸುವುದಿಲ್ಲವೆಂಬ ವಿಚಾರವಿತ್ತು. ನಿಮ್ಮ ಬರಹಗಳಿಗೆ ’ಇಷ್ಟ’ ಹಾಕುವವರ ಸಂಖ್ಯೆ ಗಮನಿಸಿದರೆ, ನಿಮ್ಮ ಬರಹಕ್ಕೂ ಓದುಗರು ಇರುವುದು ತಿಳಿಯುತ್ತದೆ!’ ಎಂದು ಅಚ್ಚರಿ ಸೂಚಿಸಿರುವುದುಂಟು!!
  ಸಾಹಿತ್ಯ ಮಾತ್ರವಲ್ಲ; ಸಂಗೀತ, ನಾಟಕ, ಚಲನಚಿತ್ರರಂಗ, ದೂರದರ್ಶನದ ಕಿರುತೆರೆ ಇತ್ಯಾದಿ ಯಾವುದೇ  ಕ್ಷೇತ್ರದಲ್ಲಿ ಪ್ರವೇಶಿಸುವ ವ್ಯಕ್ತಿಗೂ,  ಅವನ/ಅವಳ ಪೂರ್ವಾರ್ಜಿತ ಸುಕೃತದ ಬಲವಿದ್ದಲ್ಲಿಮಾತ್ರವೇ ಅವರಿಗೆ ಅಲ್ಲಿ ಯಶಸ್ಸು, ಪ್ರೋತ್ಸಾಹ, ಪ್ರಚಾರ, ಪ್ರಶಸ್ತಿ, ಪುರಸ್ಕಾರ  ಜನಮನ್ನಣೆ ಇತ್ಯಾದಿಗಳು ಲಭಿಸುತ್ತವೆ. ಇಲ್ಲವಾದಲ್ಲಿ ಎಷ್ಟೇ ಉನ್ನತವಾದ ಪ್ರತಿಭೆ ಇದ್ದರೂ ಅದು ಯಾರಗಮನಕ್ಕೂ ಬಾರದೇ, ಮೂಲೆಗುಂಪಾಗುವುದು ಸಹಜ.
 ಈ ವಾಸ್ತವ ಸತ್ಯವನ್ನರಿತಿರುವ ಕಾರಣದಿಂದಾಗಿಯೇ ಸಿರಿಭೂವಲಯದ ಸುಧಾರ್ಥಿಯು ಇದಾವುದಕ್ಕೂ ಆಶಿಸದೇ, ಕೇವಲ ಕನ್ನಡಭಾಷೆಯ ಮಹತ್ವವನ್ನುಳ್ಳ ಈ ’ಸಿರಿಭೂವಲಯ’ ಕಾವ್ಯದ ಪ್ರಚಾರದಿಂದ ಒಂದು ರೀತಿಯ ಅವರ್ಣನೀಯವಾದ ಸಂತೋಷ. ತೃಪ್ತಿ ಸಿಗುವುದೆಂಬುದನ್ನು ಅನುಭವಿಸುತ್ತ ನಿರ್ಲಿಪ್ತನಾಗಿ ಈ ಕಾರ್ಯದಲ್ಲಿ ಮುಂದುವರೆಯಲು ಅವಕಾಶವಾಗಿದೆ. ನಿರಪೇಕ್ಷವಾದ ಈ ಸಾರ್ಥಕ  ಕಾರ್ಯಕ್ಕೆ ಇದಕ್ಕಿಂತ ಮಿಗಿಲಾದ ’ಪ್ರಚಾರ’ ಇರುವುದೇನು!!??
   -ಸಿರಿಭೂವಲಯದಸುಧಾರ್ಥಿ. 

No comments:

Post a Comment