Friday 9 April 2021

ವೇದ, ವೇದ. ಏನಿದನ್ನುಕುರಿತ ವಾದ ಪ್ರತಿವಾದ; ವಿವಾದ!? (ಭಾಗ: ೧)

ಮೊದಲಮಾತು:

ನನ್ನ ಜೀವಿತಲ್ಲಿ ೭೭ ಸಂವತ್ಸರಗಳನ್ನು ಸವೆಸಲಿರುವ ನೆನಪಿಗಾಗಿ  ಸಿರಿಭೂವಲಯದ ಅಂತರ್ಸಾಹಿತ್ಯ ಸೌರಭಎಂಬ ನಾಲ್ಕು ಸಂಪುಟಗಳ ಕೃತಿಯೊಂದನ್ನು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಜ್ಞಾನದಾನವಾಗಿ ನೀಡುವ ಉದ್ದೇಶದಿಂದ ಪ್ರಯತ್ನ ನಡೆಸಿದೆ. ಕಾರಣಾಂತರದಿಂದಾಗಿ ಅದಕ್ಕೆ ತಾತ್ಕಾಲಿಕ ಅಡಚಣೆಯುಂಟಾಯಿತು. ಅದರ ಬದಲಿಗೆ ಈ ಕಿರು ಲೇಖನಮಾಲಿಕೆಯನ್ನು ನನ್ನ ಅಭಿಮಾನಿ ಓದುಗರಿಗೆ ವಿಶ್ವಾಸ ಪೂರ್ವಕವಾಗಿ ಮುಂಗಡವಾಗಿ ಅರ್ಪಿಸಿದ್ದೇನೆ.  ಕೆಲವರಿಗಾದರೂ ಇದು ಉಪಯುಕ್ತವಾದೀತೆಂದು ಭಾವಿಸಿದ್ದೇನೆ.  ಸಾಧ್ಯವಿರುವಷ್ಟು ಶೀಘ್ರವಾಗಿ ಸಿರಿಭೂವಲಯದ ಅಂತರ್ಸಾಹಿತ್ಯ ಸೌರಭವೂ ನಿಮ್ಮ ಕೈಸೇರಲಿದೆ.

***

 ವೇದವೆಂದರದೇನು?

ವೇದಗಳನ್ನು ಓದಿದವರಿಗೆ ಅದು ವೇದ್ಯವಾಗುತ್ತದೆ! ವೇದವೆಂಬ ಶಬ್ದಕ್ಕೆ  ಹಳೆಯಮಾತು; ’ಜ್ಞಾನ’  ತಿಳಿವು ಎಂಬ ಅರ್ಥಗಳಿವೆ.  ಜ್ಞಾನವೆಂದರೆ, ’ಅರಿವು’ ’ಎಚರಎಂಬ ಅರ್ಥಗಳೂ ಇವೆ!  ಇವುಗಳ ಹಿನ್ನೆಲೆಯಲ್ಲಿ ನೋಡಿದಾಗ:  ತಿಳುವಳಿಕೆ’  ಎಂಬ ವಿವರಣೆಯೂ ದೊರೆಯುತ್ತದೆ.  ಈ ಹಿನ್ನೆಲೆಯಲ್ಲಿ ನೋಡಿದಾಗ; ಜಗತ್ತಿನಲ್ಲಿ ತಿಳುವಳಿಕೆಗೆ ಸಂಬಂಧಿಸಿದ್ದೆಲ್ಲವೂ ವೇದಮೂಲದ್ದೇ ಆಗಿರುತ್ತದೆ!!

ವೇದವೆಂಬುದು ಅಪೌರುಷೇಯವಾದುದು ಎಂಬ ವಿಚಾರವು  ಪ್ರಾಚೀನಕಾಲದಂದಲೂ ಪ್ರಚಲಿತವಿರುವ ಸನಾತನಿಗಳ ನಂಬಿಕೆ. ಈ ವೇದವೆಂಬ ಮಹಾನ್ ಸಾಹಿತ್ಯರಾಶಿಯು ಅಪಾರವಾದುದು. ಓದಲು ಅತ್ಯಂತ ಕ್ಲಿಷ್ಟಕರವಾದುದು, ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದ್ದು. ಎಂಬುದು ಪ್ರಾಮಾಣಿಕರಾದ ಕೆಲವರ ಅಭಿಪ್ರಾಯ. 

ವೇದಗಳು ಅಪೌರುಷೆಯ ಎಂಬುದು  ಅರ್ಥಹೀನವಾದ ನಂಬಿಕೆ. ಈ ವೇದವನ್ನು ಪ್ರಾಚೀನಕಾಲದ ಯಾರೋ ಕೆಲವು ಋಷಿ ಮುನಿಗಳು ಬರೆದಿರುವುದು, ವೇದಗಳಲ್ಲೇ ಖಚಿತವಾಗಿದೆ! ಆದ್ದರಿಂದ ವೇದಗಳು ಮಾನವಕೃತವೇ ಹೊರತು; ಅಪೌರುಷೇಯವೆಂಬುದೇನೂ ಇಲ್ಲ!  ಎಂಬುದು ಕೆಲವರ ವಾದ.

ಸಾಕಷ್ಟು ದೀರ್ಘಕಾಲಾವಧಿಗೆ ನಮ್ಮ ದೇಶದಲ್ಲಿ ಆಡಳಿತದ ಚಿಕ್ಕಾಣಿ ಹಿಡಿದಿದ್ದ ಪರಕೀಯರು ಈ ದೇಶದ  ಅಪಾರ ಸಂಪತ್ತನ್ನು ಲೋಟಿಮಾಡಿದ್ದು ಮಾತ್ರವಲ್ಲ, ಇಲ್ಲಿನ ಪ್ರಾಚೀನ ಸಂಸ್ಕೃತಿಯ ನಾಶಕ್ಕೂ ಸಾಕಷ್ಟು ಶ್ರಮಿಸಿದವರು.  ಈ ದೇಶದ ಪ್ರಾಚೀನ ಇತಿಹಾಸದ  ನೆನಪನ್ನೂ ವಿರೂಪಗೊಳಿಸಿ, ಇಲ್ಲಿನವರನ್ನು ಚರಿತ್ರಹೀನರೆನಿಸುವ ಮಟ್ಟಕ್ಕೆ ತಂದವರು. ಇದಕ್ಕೂ ಮೊದಲು ಈ ಪ್ರಾಚೀನ ಸಂಸ್ಕೃತಿಯ ಕವಲುಗಳಾದ ನಿಶ್ರೇಯಸವಾದಿಗಳು (ಜೈನಸಂಪ್ರದಾಯ ದವರು) ಹಾಗೂ ಇವರದೇ ಆದ  ಇನ್ನೊಂದು ಕವಲಾಗಿ ಉಗಮವಾದ ಬೌದ್ಧರುಇಲ್ಲಿನ ಸಾಮಾಜಿಕ ಪರಿಸರದಲ್ಲಿ  ರಾಜಾಶ್ರಯದ ಬೆಂಬಲದಿಂದಪ್ರಾಚೀನವಾದ ಸನಾತನ ಸಂಸ್ಕೃತಿಯಮೇಲೆ ಹೆಚ್ಚಿನ ಪ್ರಮಾಣದ ಧಾಳಿ ನಡೆಸಿದ್ದವರು. ಈ ಸನಾತನ ಸಂಸ್ಕೃತಿಯ ವಿರೋಧಿಗಳ ಪ್ರಾಭಲ್ಯ ಹಾಗೂ ನಿಗೂಢ ತಂತ್ರಗಳು ಹಾಗೂ ಅನುಸರಿಸುತ್ತಿದ್ದ ಕೃತ್ರಿಮ ಮಾರ್ಗಗಳು ಊಹಾತೀತ ವಾಗಿದ್ದವು!

ಉಪಲಬ್ಧವಿರುವ ಸಾಹಿತ್ಯಿಕ ಮಾಹಿತಿಗಳು; ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿ ಬಂದಿರುವ ವೇದೋಕ್ತ ಕ್ರಿಯಾಕಲಾಪಗಳ ಮಾಹಿತಿಗಳ ವಿವರ ಹಾಗೂ ಮಹತ್ತರವಾದ ಧಾರ್ಮಿಕ ಸಾಹಿತ್ಯಗಳ ಆಧಾರದಲ್ಲಿ ವಿವೇಚಿಸಿದಾಗ ಸುಮಾರು ೭೫೦ ಕೋಟಿವರ್ಷಗಳಹಿಂದೆ ಜೈನ ಸಂಪ್ರದಾಯದ ಪ್ರವರ್ತಕ (ಪ್ರಥಮ ತೀರ್ಥಂಕರ) ಋಷಭದೇವನು ಅಂದು ಪ್ರಚಲಿತವಿದ್ದ ಅಭ್ಯುದಯವಾದಕ್ಕೆ (ಸನಾತನಧರ್ಮ) ಪ್ರತಿಯಾಗಿ ನಿಶ್ರೇಯಸವಾದವನ್ನುರೂಪಿಸಿದನು ಎಂಬ ಮಾಹಿತಿಯನ್ನು ಕಾಣಬಹುದು.

(ದೇವತೆಗಳಕೃಪೆಯಿಂದ ಮಾನವರ ಜೀವನದ ಭದ್ರತೆ ಎಂಬುದು ಅಭ್ಯುದಯವಾದ. ತಮ್ಮ ಜೀವನನಿರ್ವಹಣೆಗಾಗಿ ದೇವತೆಗಳನ್ನು ಮೆಚ್ಚಿಸಲು ಹಿಂಸಾತ್ಮಕವಾದ ಯಜ್ಞ ಯಾಗಗಳ ಅಗತ್ಯವಿಲ್ಲ, ಎಂಬುದು ನಿಶ್ಶ್ರೇಯಸವಾದ.  ಇದರಲ್ಲಿ ಸಂಪ್ರದಾಯಗಳ ಆಚರಣೆಯಲ್ಲಿ ಪ್ರತ್ಯೇಕತೆಯೇ ವಿನಃ. ಪ್ರಾಚೀನವಾದ ವೇದಗಳನ್ನೇ ಅಲ್ಲಗಳೆಯುವ ವಿರೋಧವೇನೂ ಇರಲಿಲ್ಲ. ಕಾಲಕ್ರಮದಲ್ಲಿ ಆ ಸಂಪ್ರದಾಯದ ವಿದ್ವಾಂಸರ ಅಗತ್ಯಕ್ಕನುಗುಣವಾಗಿ ವೇದವಿರೋಧವು ಹುಟ್ಟಿ ಬೆಳೆಯಿತು!)  ಈ ಸಂಪ್ರದಾಯದವರು ತಮ್ಮ ಧಾರ್ಮಿಕ ಸಾಹಿತ್ಯದಲ್ಲಿ ಋಷಭನಾಥನೇ ಮೊದಲಿಗನಲ್ಲ; ಭೂತಕಾಲದಲ್ಲಿ ೨೪ ಜನ ತೀರ್ಥಂಕರರು, ವರ್ತಮಾನಕಾಲದಲ್ಲಿ ೨೪ ಜನ ತೀರ್ಥಂಕರರು, ಭವಿಷ್ಯತ್ ಕಾಲದಲ್ಲಿ ೨೪ ಜನ ತೀರ್ಥಂಕರರು, ಈ ತೀರ್ಥಂಕರರ ಜೀವಿತಾವಧಿಯು ಲಕ್ಷಾಂತರವರ್ಷಗಳು ಎಂಬ ಅತಿದೊಡ್ಡ ಕಾಲಾವಧಿಯ ಚರಿತ್ರೆಯನ್ನು ರೂಪಿಸಿಕೊಂಡಿದ್ದಾರೆ! ಒಟ್ಟಿನಲ್ಲಿ  ವೇದಗಳನ್ನು ಅಲ್ಲಗಳೆಯುವುದು ಅವರ ಮೂಲ ಉದ್ದೇಶ. ಕಾಲಕ್ರಮದಲ್ಲಿ ಈ ಜೈನಸಂಪ್ರದಾಯದಿಂದಲೇ ಹೊರಹೊಮ್ಮಿದ ಬೌದ್ಧ ಸಂಪ್ರದಾಯವು  ಸನಾತನಧರ್ಮ ಹಾಗೂ ಜೈನ ಸಂಪ್ರದಾಯಕ್ಕೆ ವಿರೋಧಿಯಾಗಿ ಬೆಳವಣಿಗೆ ಹೊಂದಿ, ನೆರೆಯ ರಾಷ್ಟ್ರ  ಚೀನಾದಲ್ಲೂ ಜನಪ್ರಿಯವಾಯಿತು.  ಸನಾತನ ಧರ್ಮವು ಆಸ್ತಿಕವಾದವನ್ನು  ಪ್ರತಿಪಾದಿಸಿದರೆ , ಜೈನ ಹಾಗೂ ಬೌದ್ಧ ಸಂಪ್ರದಾಯಗಳು ನಾಸ್ತಿಕವಾದವನ್ನು ತಮ್ಮದೇ ಆದ ರೀತಿಯಲ್ಲಿ ಬೆಂಬಲಿಸುತ್ತವೆ. 

ವಿದೇಶಿಯರ ವಿಕೃತ ವಾದಸರಣಿ:

 ಚೀನಾದೇಶದ ನಿವಾಸಿಗಳು ಪ್ರಾಚೀನ ಕಾಲದಿಂದಲೂ ನಿರೀಶ್ವರವಾದಿಗಳು.  ಇದೇ ಜಾಡಿನಲ್ಲಿ ಸಾಗಿದ ಬೌದ್ಧ ಧರ್ಮವು ಸಹಜವಾಗಿಯೇ  ಅವರನ್ನು ಆಕರ್ಷಿಸಿತು! ತಮ್ಮಲ್ಲಿ ಹೆಚ್ಚು ಪ್ರಚಾರಕ್ಕೆ ಬಂದ  ಬುದ್ಧನ ತತ್ವಗಳ ಪ್ರಭಾವದಿಂದ, ಬುದ್ಧನು ಹುಟ್ಟಿಬೆಳೆದ ದೇಶವೆಂಬ ಅಭಿಮಾನದಿಂದ ಚೀನಾದೇಶದ ಕೆಲವು ವಿದ್ವಾಂಸರು ಇಲ್ಲಿಗೆ ಆಗಮಿಸಿ, ಇಲ್ಲಿನ ಸಾಮಾಜಿಕ ಪರಿಸರದ ಕೆಲವು ವಿವರಗಳು ಹಾಗೂ ಇಲ್ಲಿನ ಸಂಸ್ಕೃತಭಾಷೆಯ ಅಮೂಲ್ಯ ಸಾಹಿತ್ಯದಕೆಲವು ಭಾಗಗಳನ್ನು ತಮ್ಮ ಭಾಷೆಗೆ ಅನುವಾದ ಮಾಡಿಕೊಂಡು, ತಮ್ಮಲ್ಲಿ ಪ್ರಚಾರ ನಡೆಸಿರುವುದಿದೆ.

ಇದೇ ಕ್ರಮದಲ್ಲಿ  ವಿಲ್ಸನ್; ವೆಬರ್ಮ್ಯಾಕ್ಸ್ ಮುಲ್ಲರ್; ಮ್ಯಾಕ್ಡೊನಾಲ್ಡ್; ವಿಂಟರ್ನಿಟ್ಸ್ಕೀತ್ಮುಂತಾದವರು ಜರ್ಮನಿ, ಇಂಗ್ಲೇಂಡ್  ದೇಶಗಳವರು  ಇಲ್ಲಿನ ಪ್ರಾಚೀನ  ಸಾಹಿತ್ಯವನ್ನು ತಮ್ಮ ಭಾಷೆಗಳಿಗೆ ಅನುವಾದ ಮಾಡಿಕೊಂಡಿದ್ದಾರೆ.  ಇವರುಗಳಾರೂ ಭಾರತೀಯ  ಶಾಸ್ತ್ರ, ಸಂಪ್ರದಾಯ, ಪ್ರಾಚೀನ ನಾಗರೀಕತೆಯನ್ನು  ಒಪ್ಪದೇ  ಗ್ರೀಕ್ನಾಗರಿಕತೆಯೇ ಜಗತ್ತಿನಲ್ಲಿ ಶ್ರೇಷ್ಠವೆಂದು  ಬಿಂಬಿಸಿದವರು. ನಮ್ಮ ಪ್ರಾಚೀನ ಕಾಲದ ಗ್ರಾಮೀಣಜನರು ಬೆಳಗಾಗ ಎದ್ದಕೂಡಲೇ ಕೆರೆಯಕಡೆ ಹೋಗುವ ಪದ್ಧತಿಯನ್ನು ಅನುಸರಿಸುತ್ತಿದ್ದರು. ಹೊಟ್ಟೆಯಲ್ಲಿದ್ದ ಹೊಲಸು ಹೊರಹೋದಮೇಲೆ. ಹೊಲಸು ಹೋಗುವ ದ್ವಾರವನ್ನು ನೀರಿನಿಂದ ತೊಳೆಯುವ ಆರೋಗ್ಯಕರ ಜ್ಞಾನ ಅವರಿಗಿತ್ತು. ಆಗಿನಿಂದಲೂ ವಿದೇಶಿಯರು ಕಾಗದದಿಂದ ಈ ಕೆಲಸ ಮಾಡುತ್ತಿದ್ದರುನೀರಿನ ಉಪಯೋಗದ ಸುರಕ್ಷತೆಯನ್ನೇ ಅರಿಯದವರು ಇನ್ನೆಂಥ ನಾಗರಿಕತೆ ಹೊಂದಿರಬಹುದು! ’ಅದು ಶೀತದೇಶ. ನೀರಿನಿಂದ ತೊಳೆಯುವುದು ಸಾಧ್ಯವಿಲ್ಲಎಂದು ವಾದಿಸಬಹುದು. ಬಿಸಿನೀರು ಬಳಸಿದರೆ ಜೀವವೇನೂ ಹೋಗಲಾರದಲ್ಲವೇ!? ಇದನ್ನೂ ಅನುಸರಿಸದವರು ಇನ್ನೆಂಥನಾಗರಿಕರಿರಬೇಕು!? 

 ವೇದಸಾಹಿತ್ಯದ ಅರ್ಥನಿರ್ಣಯ ಮಾಡುವುದು ಸುಲಭದ ಕಾರ್ಯವಲ್ಲ. ಪಾಶ್ಚಾತ್ಯರು ಈ ವಿಚಾರವಾಗಿ ಎಷ್ಟೇ ಬರೆದರೂ  ಅದು ವಾಸ್ತವತೆಯ ಪರಿಧಿಯಲ್ಲಿ ಬರುವುದಲ್ಲವೇ ಅಲ್ಲ! 

ಮೋಕ್ಷಮೂಲರು ಎಂಬ ಬಿರುದು ಪಡೆದ ಜರ್ಮನಿಯಮೂಲದ ಮ್ಯಾಕ್ಸ್  ಮುಲ್ಲರ್ ಎಂಬುವವನು  ವೇದಗಳು ಹುಟ್ಟಿದ  ದಿನಾಂಕವನ್ನೇ ಕರಾರುವಾಕ್ಕಾಗಿ ನಿರ್ಧರಿಸಿದವನು!! 

ಆರ್ಯರುಭಾರತಕ್ಕೆ ವಲಸೆಬಂದು  ಇಲ್ಲಿನ ಅನಾಗರಿಕ ಸಮಾಜವನ್ನು  ಉದ್ಧಾರಮಾಡಿದವರು  ಎಂಬ ನಿಲುವು ಪಾಶ್ಚಾತ್ಯ ವಿದ್ವಾಂಸರದು.

 ತನ್ನ ಜೀವಿತಕಾಲದಲ್ಲಿ ಒಮ್ಮೆಯೂ  ಭಾರತಕ್ಕೆ ಕಾಲಿರಿಸದೇ  ಸಂಸ್ಕೃತಭಾಷೆಯ ಪ್ರಾಥಮಿಕ ಪರಿಚಯವೂ ಇಲ್ಲದೇ  ಮ್ಯಾಕ್ಸ್  ಮುಲ್ಲರ್  ಮಹಾಶಯನು ಅಪೌರುಷೇಯವಾದ ವೇದಗಳ ರಾಶಿಯನ್ನು ಅರೆದು ಕುಡಿದು, ಬೆಟ್ಟದಷ್ಟು ರಾಶಿಯ ಮಾಹಿತಿಗಳನ್ನು ರಚಿಸಿರುವುದಿದೆ!  ಭಾರತದ ಬಹಳಷ್ಟುಜನ ಎಡಬಿಡಂಗಿ ವಿದ್ಯಾವಂತರಿಗೆಕೆಲವು ವೇದವಿದ್ವಾಂಸರಿಗೆ ಇಂಥವರ ಹೇಳಿಕೆಗಳೇ ವೇದವಾಕ್ಯ’ !!

ಇದೆಲ್ಲ ಮಾಹಿತಿಗಳನ್ನು ಕುರಿತು ಬರೆಯುತ್ತಿರುವ ಈ ಬರಹಗಾರ ಜ್ಞಾನದ ಪರಿಧಿ ಏನಿದ್ದರೂ, ಕನ್ನಡ ಭಾಷೆಯಲ್ಲಿರುವ ಈ ವಿಚಾರಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಸಾಹಿತ್ಯ ಕೃತಿಗಳ ಅಧ್ಯಯನವಷ್ಟೇ ಈತನ ಬರಹಕ್ಕೆ ಆಶ್ರಯತಾಣ!  ವಾಸ್ತವವಾದ ಈ ಮಾಹಿತಿಯನ್ನರಿತು ಓದುಗರು ಈ ಬರಹದ ಓದುವಿಕೆಯನ್ನು ಮುಂದುವರೆಸಬಹುದು; ಅಥವಾ ಇದೊಂದು ನಿರುಪಯೋಗಿಯಾದ ಮಾಹಿತಿ ಎಂದು ನಿರ್ಧರಿಸಿ, ದೂರವಾಗಬಹುದು!!

ಶಾಸ್ತ್ರಾಧ್ಯಯನ ಸುಲಭದ ವಿಚಾರವಲ್ಲ:

ಯಾವುದೇ ಒಂದು ಶಾಸ್ತ್ರವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಮಾನವನ ಒಂದು ಜೀವಿತಕಾಲದ ಅವಧಿಯು ಸಾಲದೆಂಬ ಹೇಳಿಕೆ ಇದೆ.  ವೇದಗಳಲ್ಲಿರುವ ವಿವರಗಳು ಜಗತ್ತಿನ ಎಲ್ಲ ವಿಚಾರಗಳನ್ನೂ ಒಳಗೊಂಡಿರುವುದೆಂಬ ಮಾಹಿತಿಯೂ ಪ್ರಚಲಿತವಿದೆ.  ವೇದಗಳನ್ನು ಸಂಪೂರ್ಣವಾಗಿ ಓದದೇ ಅದರಲ್ಲಿರುವ ಸಮ್ಯಜ್ಞಾನವನ್ನು ಅರಿಯಲಾಗದು ಎಂಬುದೂ ಸಹಜವಾದುದು.  ಇಂದಿನವರಿರಲೀ, ಹಿಂದಿನ  ವಿದ್ಯಾವಂತರಿಗೇ ಈ ರೀತಿಯಲ್ಲಿ ಸಮ್ಯಜ್ಞಾನ ಸಂಪಾದಿಸುವುದು ಶ್ರಮದ ಸಂಗತಿಯಾಗಿತ್ತು!  ಇದನ್ನರಿತೇ ಕೆಲವು ಮಹಾತ್ಮರು ತಮ್ಮ ಕಾಲಘಟ್ಟದ ಹಾಗೂ ತಮ್ಮ ನಂತರದ ಮುಂದಿನ ಸಮಾಜದ ನೆರವಿಗಾಗಿ ಈ ಸಮ್ಯಜ್ಞಾನವನ್ನು ಕುರಿತು ಅಪರೂಪದ್ದಾದ; ಮಹತ್ವಪೂರ್ಣವಾದ ಮಾಹಿತಿಗಳನ್ನು ಬರೆದಿರಿಸಿರುವುದಿದೆ.  ಅವುಗಳ ಅಂತರಾರ್ಥವನ್ನು ನಾವು ಗಮನಿಸಿದಾಗ; ವೇದಗಳು ಉಗಮವಾಗಿರುವುದು  ಜನಸಾಮಾನ್ಯರ ಮನರಂಜಿಸುವ ಉದ್ದೇಶದಿಂದಲ್ಲ. ಎಂಬುದು ನಮಗೆ ಮನವರಿಕೆ ಯಾಗಬೇಕು. ವೇದೋಪನಿಷತ್ತುಗಳ ಸಮ್ಯಜ್ಞಾನವನ್ನು ಸಮರ್ಪಕವಾಗಿ ವಿವರಿಸುವ ಜನೋಪಯೋಗಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಮೊದಲ ಯತಿ ಶಂಕರಭಗವತ್ಪಾದರು ಎಂಬುದು ಗಮನಾರ್ಹ ಸಂಗತಿ.

ಸಾಮಾನ್ಯವಾಗಿ ಸಂಗೀತ ಹಾಗೂ ನೃತ್ಯಶಾಸ್ತ್ರಗಳಲ್ಲಿ ಪರಿಪೂರ್ಣವಾದ ಪ್ರಭುತ್ವ ಪಡೆಯಲು ಹಲವಾರು ವರ್ಷಗಳ ಸತತ ಅಭ್ಯಾಸದ ಅಗತ್ಯ ವಿರುತ್ತದೆ.  ಇವು ಒಂದೊಂದು ಶಾಸ್ತ್ರಕ್ಕೆ ಸಂಬಂಧಿಸಿದ್ದು. ವೇದಗಳಲ್ಲಿ ಜಗತ್ತಿನ ಎಲ್ಲ ಶಾಸ್ತ್ರಗಳ ಮಾಹಿತಿಯೂ ಅಡಕವಾಗಿದೆ. ಅಂದಮೇಲೆ, ಅವುಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಲು ಎಷ್ಟು ಜೀವಿತದ ಅವಧಿ ಬೇಕಾದೀತೆಂಬುದು ಊಹಾತೀತ!

ಇವುಗಳ ಅಭಾಸಕ್ಕೆ ಸಾಹಿತ್ಯಜ್ಞಾನ; ಸಂಗೀತಜ್ಞಾನ, ರಾಗ ತಾಳಗಳಿಗೆ ಸಂಬಂಧಿಸಿದ ಜ್ಞಾನ, ಸಾಹಿತ್ಯಕ್ಕೆ ಅನುಗುಣವಾದ ಆಂಗಿಕ ಅಭಿನಯದ ಮುದ್ರೆಗಳುಇವೆಲ್ಲವುಗಳಿಗೂ ಮೂಲಾಧಾರವಾದ ಗಣಿತಜ್ಞಾನವು ಅತ್ಯವಶ್ಯಕವಾದುದು.  ಇದನ್ನೆಲ್ಲ ಕಲಿತು, ಸಂಗೀತದಲ್ಲಾಗಲೀ, ನೃತ್ಯದಲ್ಲಾಗಲೀ ಪರಿಣತಿ ಪಡೆಯುವುದರೊಳಗೆ ಸಂಬಂಧಿಸಿದ  ಕಲಾವಿದನ ಆಯುಷ್ಯದ ಬಹುಭಾಗವು ವ್ಯಯವಾಗಿರುತ್ತದೆ! 

ಆದರೂ ಕೆಲವೊಂದು ವಿಶೇಷ ಸನ್ನಿವೇಶಗಳಲ್ಲಿ  ಕೆಲವು ಪ್ರತಿಭಾಶಾಲಿ ಮಕ್ಕಳು ತಮ್ಮ ಎಂಟು- ಹತ್ತು ವರ್ಷಗಳ ಪ್ರಾಯಕ್ಕೇ ಈ ಶಾಸ್ತ್ರದಲ್ಲಿ ಊಹಾತೀತವಾದ ಪ್ರತಿಭೆಯನ್ನು ಸಾಧಿಸಿ; ಪ್ರದರ್ಶಿಸುವುದನ್ನು ಪ್ರತ್ಯಕ್ಷವಾಗಿ ಕಾಣುತ್ತೇವೆ!!  ಇದಕ್ಕೆ ಅವರ ಪೂರ್ವಜನ್ಮದ  ಸಂಸ್ಕಾರವು ಪ್ರಮುಖ ಕಾರಣವಾಗಿರುತ್ತದೆ.   ಕೆಲವು ಮೇಧಾವಿಗಳು ತಮ್ಮ ಜೀವಿತಾವಧಿಯಲ್ಲಿ ಹಲವಾರು ವರ್ಷಗಳ ಅಧ್ಯಯದಿಂದ ಡಾಕ್ಟರೇಟ್ಪಡೆಯುತ್ತಾರೆ. ಇವರ ಪ್ರತಿಭೆಯು ಎಷ್ಟು ವ್ಯಾಪಕವೆಂದರೆ, ಇಂಥವರಲ್ಲಿ ಕೆಲವರು ಹಲವಾರು ಶಾಸ್ತ್ರಗಳನ್ನು ಅಧ್ಯಯನಮಾಡಿ  ನಾಲ್ಕಾರು ಶಾಸ್ತ್ರಗಳಲ್ಲಿ ಈ ರೀತಿಯ ಡಾಕ್ಟರೇಟ್ ಪಡೆಯುತ್ತಾರೆ!! 

ಆದರೆ, ಇಂಥ ಗಹನವಾದ  ಹಲವಾರು ಶಾಸ್ತ್ರಗಳನ್ನು ಒಳಗೊಂಡು ಸರ್ವಶಾಸ್ತ್ರಮಯಿಯಾದ ವೇದಗಳನ್ನು ಸಮಗ್ರವಾಗಿ ಅಧ್ಯಯನಮಾಡಿ , ಪಾರಂಗತರಾಗಲು ಹಲವು ಸಾವಿರ ವರ್ಷಗಳ ಸಾಧನೆಯೂ ಸಾಲದೆಂಬುದು  ಬಲ್ಲವರ ಅನಿಸಿಕೆ.  ಈ ಕಾರಣದಿಂದಾಗಿ ಯಾವುದೇ ವ್ಯಕ್ತಿಯು ತನ್ನ ಬಾಲ್ಯಾವಸ್ಥೆಯಲ್ಲಿಯೇ ವೇದವಿದ್ಯಾ ಪಾರಂಗತ ಎನಿಸಿಕೊಂಡು, ಜಗತ್ತಿನ ಗಮನ ಸೆಳೆದಿರುವ ಉದಾಹರಣೆಯು ಬಹಳ ಅಪರೂಪದ್ದು!!

ಕಲಿಯುಗದ ಜಗದ್ಗುರು ಎಂಬ ಪ್ರಖ್ಯಾತಿಹೊಂದಿರುವ ಶಂಕರಭಗವತ್ಪಾದರು ತಮ್ಮ ಐದನೇ ವಯಸ್ಸಿಗೇ ಸಮಗ್ರವಾಗಿ ವೇದಜ್ಞಾನವನ್ನು ಸಂಪಾದಿಸಿ, ಎಂಟನೆಯ ವಯಸ್ಸಿಗೇ ವೇದೋಕ್ತವಾದ ನಿವೃತ್ತಿಮಾರ್ಗದ ನೆಲೆಯಾದ - ಸನ್ಯಾಸಾಶ್ರಮದ ದೀಕ್ಷೆಹೊಂದಿ, ವೇದೋಪನಿಷತ್ತುಗಳಿಗೆ ಸಂಬಂಧಿಸಿದ ಸಮಗ್ರಜ್ಞಾನವನ್ನು ಸಂಪಾದಿಸಿಪ್ರಾಚೀನ ಕಾಲದಿಂದಲೂ ಪ್ರಚಲಿತವಿದ್ದ  ಮೂರು ಅಧ್ಯಾಯಗಳ ೩೬೩ ಶ್ಲೋಕಗಳ ಭಗವದ್ಗೀತೆಯನ್ನು   ಹದಿನೆಂಟು ಅಧ್ಯಾಯಗಳ ೭೦೦ ಶ್ಲೋಕಗಳ ಅದ್ವೈತಾಮೃತವರ್ಷಿಯಾಗುವಂತೆ ಉಪನಿಷತ್ತಿನ ಮಂತ್ರಗಳ ಆಧಾರದಲ್ಲಿ ವಿಸ್ತರಿಸಿ, ಅದನ್ನೂ ಒಂದು ಪ್ರಸ್ಥಾ ಗ್ರಂಥವನ್ನಾಗಿಸಿದರು.  ಉಪನಿಷತ್ತುಗಳು; ಬ್ರಹ್ಮಸೂತ್ರಗಳು ಹಾಗೂ ಭಗವದ್ಗೀತೆಗೆ (ಪ್ರಸ್ಥಾನತ್ರಯಕ್ಕೆ)  ಸೂಕ್ತವಾದ ವ್ಯಾಖ್ಯಾನವನ್ನು ರಚಿಸಿ, ಲೋಕೋಪಕಾರದ ಕಾರ್ಯವನ್ನು ಎಸಗಿದವರು.  ತಮ್ಮ ಜೀವಿತದ ೩೨ ಸಂವತ್ಸರಗಳು ಕಳೆಯುವ ವೇಳೆಗೆ ಇಹಲೋಕದ ವ್ಯವಹಾರವನ್ನು ತ್ಯಜಿಸಿದ  ಮಹಾಮಹಿಮರು  ಶಂಕರಭವತ್ಪಾದರು.  ವ್ಯಾಸಮಹರ್ಷಿಯು ರಚಿಸಿದ್ದು ಜಯಕಾವ್ಯ, ಇದರಲ್ಲಿ ಪ್ರಾಚೀನವಾದ ಭಗವದ್ಗೀತೆಯು ೩೬ ಶ್ಲೋಕಗಳವ್ಯಾಪ್ತಿಯದು ಎಂಬುದಕ್ಕೆ ೧೨೦೦ ವರ್ಷಗಳ ಹಿಂದಿನದೆಂದು  ಪ್ರಚಲಿತವಿರುವ ಸಿರಿಭೂವಲಯದ ಖಚಿತ ಆಧಾರವಿದೆ.

 ಇಲ್ಲಿ ಪ್ರಸ್ಥಾನತ್ರಯಎಂಬ ಶಬ್ಧಕ್ಕೆ ನಾವು ಅರ್ಥವನ್ನರಿಯಬೇಕು. ಪ್ರಸ್ಥಾನವೆಂದರೆಪ್ರಯಾಣ, ಯುದ್ಧಸಿದ್ಧತೆಹೋರಾಟಕ್ಕೆ ಹೊರಡುವುದು ಎಂಬ ಅರ್ಥವಿದೆ. ಇದು ವ್ಯಕ್ತಿ ವ್ಯಕ್ತಿಗಳ ನಡುವಿನ ಹೋರಾಟದ ಪರಿಯಲ್ಲ!!  ಜಗತ್ತಿನಲ್ಲಿ ಜೀವನದ ಜಂಜಡಗಳಿಂದ ಬಿಡುಗಡೆಹೊಂದಲುಆತ್ಮೋನ್ನತಿಯ ಹಾದಿಯಲ್ಲಿ ನಡೆಸುವ ಹೋರಾಟದ ವಿಚಾರ!

 ಈ ಹೋರಾಟದಲ್ಲಿಆತ್ಮದ ವಿಚಾರವನ್ನು ಸರಿಯಾಗಿ ತಿಳಿದಿರುವ  ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಹಾಗೂ ಭಗವದ್ಗೀತೆಯೆಂಬ  ಪ್ರಸ್ಥಾನತ್ರಯಗಳು. ನಮ್ಮ ಆತ್ಮದ  ಹೋರಾಟಕ್ಕೆ ಬೆಂಬಲನೀಡಿ, ನಮ್ಮ ಹೋರಾಟದಲ್ಲಿ ಜಯಸಾಧಿಸಲು ನೆರವಾಗುತ್ತವೆ ಈ ಪ್ರಸ್ಥಾನತ್ರಯಗಳು!!  ಈ ಕಾರಣಕ್ಕಾಗಿ ನಾವು ಈ ಪ್ರಸ್ಥಾನ ತ್ರಯಗಳ ವಿಚಾರಗಳನ್ನು ಸತತವಾಗಿ ಅಭ್ಯಾಸಮಾಡಬೇಕೆಂಬುದು  ಸಾವಿರಾರುವರ್ಷಗಳಿಂದ ನಮ್ಮ ಪ್ರಾಚೀನರ ಉಪದೇಶ.

ಇದಿಷ್ಟನ್ನು ಸಮರ್ಪಕವಾಗಿ ತಿಳಿಯುವುದರಿಂದ; ನಾವು ಸಮಸ್ಥ ವೇದಗಳ ಸಾರವನ್ನೂ ಅರಿತು, ವೇದೋಕ್ತ ಜೀವನಕ್ರಮವನ್ನು ನಡೆಸುವುದರಿಂದ, ನಮ್ಮ ಜೀವನದಲ್ಲಿ  ಸಾರ್ಥಕತೆ  ದೊರೆಯುತ್ತದೆಂಬ ಮಾಹಿತಿ ಪ್ರಚಲಿತವಿದೆ.  ಆಸಕ್ತಿ ಹೊಂದಿರುವವರು  ಇದನ್ನು ಪಾಲಿಸಬಹುದು. ಇಲ್ಲವರು ನಿರಾಕರಿಸಿ, ತಮ್ಮಿಚ್ಚೆಯಂತೆ ಜೀವಿಸಲು ಸ್ವತಂತ್ರರು

ವೇದಗಳಾಗಲೀ, ವೇದಾಂತವಾಗಲೀ, ಭಗವದ್ಗೀತೆಯಾಗಲೀ ಯಾರೊಬ್ಬರನ್ನೂ ಇದೇ ಕ್ರಮದಲ್ಲಿ ಜೀವಿಸಲೇ ಬೇಕೆಂದು ಒತ್ತಾಯಪಡಿಸಿಲ್ಲ!  ಜಗತ್ತಿನಲ್ಲಿ  ಬೇರಾವುದೇ ಜೀವನ ಸಂಪ್ರದಾಯವೂ ಈ ರೀತಿಯ ಸ್ವಾತಂತ್ರ್ಯವನ್ನು ವ್ಯಕ್ತಿಗೆ ನೀಡಿಲ್ಲವೆಂಬುದು ಸರ್ವವೇದ್ಯ.   ಯಾವುದೇ ವ್ಯಕ್ತಿಯು ತನ್ನ ಜೀವಿತದಲ್ಲಿ ಎಸಗಿದ ಕರ್ಮಕ್ಕೆ ಅನುಗುಣವಾದ ಫಲವನ್ನು  ತಾನೇ  ಅನುಭವಿಸಬೇಕು ಎಂಬುದು ಇಲ್ಲಿನ ನಿಯಮ. ಕೆಲಮಟ್ಟಿಗೆ ನಿಶ್ರೇಯಸವಾದವೂ ಈ ನಿಯಮವನ್ನು ಹೊಂದಿದೆ. ಆದರೆ ಉಳಿದವರು ಪಾರಮಾರ್ಥಿಕ ಜೀವನದಿಂದ ದೂರವಾಗಿ; ಲೌಕಿಕ ಜೀವನದಲ್ಲೇ ಆಸಕ್ತರಾಗಿ, ಜೀವನದ ಜಂಜಡಗಳಿಂದ  ಬೇಸತ್ತರೂವ್ಯರ್ಥವಾದ ಸ್ವೇಚ್ಛಾಜೀವನವನ್ನೇ ಸುಖಎಂದು ಭ್ರಮಿಸಿ, ಜೀವಿಸುತ್ತಾರೆ!! ಇತ್ತೀಚಿನ ದಿನಗಳಲ್ಲಿ ವಿದೇಶಿಯರೂ ಕೆಲವರು ಈ ನೆಮ್ಮದಿಯ ಜೀವನಕ್ರಮವನ್ನು ಅನುಸರಿಸಲು ಸ್ವಪ್ರೇರಣೆಯಿಂದ ಮುಂದೆಬರುತ್ತಿರುವು ದುಂಟು.  ಜೀವನದಲ್ಲಿ ಅನುಸರಿಸಲು ಸರಳವಾದುದು; ಸುಲಭವಾದುದು ಎಂಬ ಕಾರಣಕ್ಕಾಗಿ  ತಾವು ಹುಟ್ಟಿಬೆಳೆದ ಪರಿಸರದ ಧರ್ಮವನ್ನು ತ್ಯಜಿಸಿ; ಬೇರೊಂದು ಧರ್ಮಕ್ಕೆ ಸೇರಿಕೊಳ್ಳುವುದು ಕೆಲವರಿಗೆ ಒಂದು ಹವ್ಯಾಸವಾಗಿರುತ್ತದೆ. ಇದನ್ನು ಕುರಿತು ಶಂಕರಭಗವತ್ಪಾದರು ಸ್ವಧರ್ಮೇ ನಿಧನಃ ಶ್ರೇಯಃ ಅನ್ಯಧರ್ಮ ಭಯಾವಹ’  ಎಂದು ಎಚ್ಚರಿಸಿರುವುದಿದೆ.  ಇದನ್ನು ಅರಿತು ಲೌಕಿಕ ಬಂಧನದಿಂದ ಬಿಡುಗಡೆಯನ್ನು ಬಯಸುವವರಿಗೆ  ಮಾತ್ರವೇ ಇಲ್ಲಿನ ಮಾಹಿತಿಗಳು ಉಪಯುಕ್ತವಾಗುತ್ತವೆ. ಉಳಿದವರಿಗೆ ವ್ಯರ್ಥವಾದ ಕಾಲಹರಣವೆಂಬುದು ನಿಶ್ಚಿತ.

-ಸಿರಿಭೂವಲಯದಸುಧಾರ್ಥಿ 

ವೇದ, ವೇದ. ಏನಿದನ್ನು ಕುರಿತ ವಾದ ಪ್ರತಿವಾದ; ವಿವಾದ!? (ಭಾಗ: ೨)

 

ಬ್ರಹ್ಮಾಂಡದ ವಿಚಾರ:

ನಮ್ಮ ಕಣ್ಣೆದುರಿಗೆ ಕಾಣಿಸುತ್ತಿರುವ ಭೂಮಂಡಲವು ಒಂದು ಬ್ರಹ್ಮಾಂಡದ ಅತಿ ಸಣ್ಣಭಾಗ! ಈ ಭೂಮಂಡಲಕ್ಕೆ ಸಂಬಂಧಿಸಿದಂತೆ ಅತ್ಯವಶ್ಯಕವಾದ ಸೌರಮಂಡಲ, ಹಲವಾರು ಗ್ರಹಗಳು,  ಅವುಗಳಿಗೆ ನಿಗಧಿಯಾಗಿರುವ ಸಂಚಾರಕ್ರಮ ಇತ್ಯಾದಿಗಳೆಲ್ಲವೂ ಒಂದು ಬ್ರಹ್ಮಾಂಡದ ವ್ಯಾಪ್ತಿಯಲ್ಲಿ ಸೇರುತ್ತವೆ.  ನಮ್ಮ ಸೌರಮಂಡಲದ ಬೇರೆ ಬೇರೆ ಗ್ರಹಗಳ ವಿಚಾರವನ್ನರಿಯುವ ಪ್ರಯತ್ನದಲ್ಲೇ ನಮ್ಮ ಆಧುನಿಕ ವಿಜ್ಞಾನವು ಹಲವಾರು ಸಮಸ್ಯೆಗಳನ್ನೆದುರಿಸುತ್ತಿದೆ! ಹಾಗಿರುವಲ್ಲಿ  ಎಂದೆಂದಿಗೂ ನಾಶವಾಗದ  ಕೋಟ್ಯಾಂತರ  ಬ್ರಹ್ಮದ ಮೊಟ್ಟೆಗಳ ರಹಸ್ಯವನ್ನು ಈ ವಿಜ್ಞಾನವು ಅರಿಯುವುದು ಯಾವಾಗ!? ’ಅಖಿಲಾಡಕೋಟಿ ಬ್ರಹ್ಮಾಂಡ ನಾಯಕಿಎಂಬುದಾಗಿ ಸಹಸ್ರ ನಾಮದಲ್ಲಿ ಆದಿಶಕ್ತಿಯನ್ನು ವರ್ಣಿಸಿರುವುದಿದೆ!. ಸಿರಿಭೂವಲಯದಲ್ಲಿ ಕುಮುದೇಂದು ಮುನಿಯೂ ಆದಿಶಕ್ತಿಯ ಈ ಅಚ್ಚರಿಯ  ಕಾರ್ಯವನ್ನು ಸೂಚಿಸುವಲ್ಲಿ ಜಗತ್ತಿನ ಮರುಹುಟ್ಟಿಗೆ ಅಗತ್ಯವಾದ ಮೂಲದ್ರವ್ಯಗಳನ್ನು ಲೋಕಾಕಾಶವು ಕಳೆದುಹೋಗದಂತೆ ತನ್ನಲ್ಲಿ ಅಡಗಿಸಿಕೊಂಡು ರಕ್ಷಿಸಿರುವುದು  ಎಂಬ  ವಿಸ್ಮಯಕಾರಿಯಾದ ಮಾಹಿತಿಯನ್ನು ಸೂಚಿಸಿರುವುದಿದೆ!!)

ಹಲವಾರು ಕೋಟಿ ಬ್ರಹ್ಮಾಂಡಗಳ ಉಗಮ, ವಿಕಾಸ ಹಾಗೂ ಅವಸಾನಕ್ಕೆ ಸಾಕ್ಷಿಯಾಗಿರುವ  ಅನಂತವಾದ  ಬೃಹತ್ ಶಕ್ತಿಯನ್ನು  ವೇದಗಳು ಪರಬ್ರಹ್ಮನ್ಎಂದು  ಸೂಚಿಸಿವೆ.  ಈ ವಿರಾಟ್ ಶಕ್ತಿಯನ್ನು ಯಾರೂ ಅಳತೆಮಾಡಲಾಗದು! (ಅಪ್ರಮೇಯ) ಇದಕ್ಕೆ  ರೂಪವಿಲ್ಲ; ಆಕಾರವಿಲ್ಲ; ಕೈಕಾಲುಗಳಿಲ್ಲ; ವಾಸನೆಯಿಲ್ಲ;  ಅದು ಗಂಡೂ ಅಲ್ಲ; ಹೆಣ್ಣೂ ಅಲ್ಲವೆಂಬ ವಿವರಣೆಗಳಿವೆ! ಇಂಥ ಅಗೋಚರವೂ, ಅಕರ್ತೃವೂ  ಕೇವಲ ಸಾಕ್ಷಿಸ್ವರೂಪವೂ ಆದ  ಪರಬ್ರಹ್ಮನ್ ರೂಪಿಸಿದ ವೇದಗಳು ಸಾಮಾನ್ಯ ಮನುಷ್ಯರಿಗೆ  ತಿಳಿಯುವಬಗೆಹೇಗೆ!?ಇದಕ್ಕೆವೇದೋಪನಿಷತ್ತುಗಳಅಧ್ಯಯನ ಅಗತ್ಯ.

ಅನಾದಿಯೂ; ಅನಂತವೂ ಆಗಿರುವ  ಕಾಲದ  ಪ್ರವಾಹದಲ್ಲಿ ಗುರುತಿಸಲಾಗಿರುವ  ಪ್ರತಿಯೊಂದು ಕಲ್ಪದಲ್ಲಿಯೂ ಈ ಜಗತ್ತಿನ ಸೃಷ್ಠಿ ಸ್ಥಿತಿ, ಲಯಗಳು  ನಡೆಯುತ್ತಲೇ ಇರುತ್ತದೆ.  ಕಾಲದ ಪ್ರವಾಹವು ಇಂತಿಷ್ಟೇ ಪ್ರಮಾಣದ್ದೆಂದು ಯಾರೊಬ್ಬರಿಗೂ ಅಳತೆಮಾಡಲು ಸಾಧ್ಯವಾಗಿಲ್ಲ! ಅದಕ್ಕಾಗಿ ಯಾವುದೇ ಯಂತ್ರವೂ ತಯಾರಾಗಿಲ್ಲ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಮುಂದೆ ತಿಳಿಯೋಣ.

ಸೃಷ್ಟಿ, ಸ್ಥಿತಿ ಲಯಗಳಿಗೆ  ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ನಮ್ಮ ವೇಗಳು,  ಬ್ರಾಹ್ಮಣಗಳು, ಆರಣ್ಯಕಗಳು, ಉಪನಿಷತ್ತುಗಳು  ಬೇರೆ ಬೇರೆ ಸಂದರ್ಭಗಳಲ್ಲಿ ವ್ಯಕ್ತ ಪಡಿಸಿರುವ ಮಾಹಿತಿಗಳನ್ನು ಒಟ್ಟುಗೂಡಿಸಿ, ಸರಳವಾಗಿ ಪರಿಚಯಿಸುವ ಪ್ರಯತ್ನ ನಡೆಸಿದಾಗ ನಾವು ಇಲ್ಲಿ ಸೂಚಿಸಿರುವ ಕವಿಯವಾಣಿಯನ್ನು   ಗಮನಿಸಬಹುದು.

ಅನಂಗವೆನಿಸುವ ಬ್ರಹ್ಮವದೊಂದಿದೆ ಸೃಷ್ಟಿಯು ಅದರದೆ ಕೈಚಳಕ|

ಅನಂತಕಾಲದ ಕಲ್ಪದ ಮೊದಲಲಿ ಸೃಷ್ಟಿಯು ನಡೆದಿದೆ ಈತನಕ||

ತಾನೆ ಎಲ್ಲವುಆಗಿ ಏನೊಂದುಅಲ್ಲದುದ ಪರಬೊಮ್ಮ ನೆಂದಿಹುದು ಶ್ರುತಿಶಾಸ್ತ್ರವು|

ಏನುಮಾಡದೆತಾನು ಎಲ್ಲಕೂ ಕಾರಣವು ಸರ್ವಸಾಕ್ಷಿಯು ತಾನು ಪರಬೊಮ್ಮವು|

ಸಕಲಲೋಕದ ಸಾರದೊಂದಿಗೆ ಉಳಿದ ಲೋಕಸಮಸ್ತ ವೆಲ್ಲವು|ಏಕವಾಗಿಹ ಬೊಮ್ಮದುದರದಿ ಅಡಗಿಕುಳಿತಿರಲು||

ಪರದ ಬೊಮ್ಮದ ನೆರವಿನಿಂದ ಇರುವಕಲ್ಪದ ಪರಮತಪಸಿಯು|

ಬರುವ ಕಲ್ಪಕೆಬೊಮ್ಮನಾಗಿ ಹೊನ್ನಬಸುರಿನ ಹೆಸರಿನಲಿ ಈ ಜಗವ ಸೃಜಿಸುವನು||

ಪರಮ ಸೂಕ್ಷ್ಮಶರೀರವಿರುವುದು ಹೊನ್ನಬಸುರಿನ ಬ್ರಹ್ಮಗೆ|

ಇರವೆ ಕಾಣದ ತೆರದಿ ತಾನವ ಸೃಷ್ಟಿಕಾರ್ಯವ ನಡೆಸುತಿರುವನು  ವೇದಕ್ರಮದಂತೆ|

ಸಮಷ್ಟಿರೂಪದ ಸ್ಥೂಲಶರೀರಿಯು ಲೋಕದಜನಕನು ಪ್ರಜಾಪ್ರತಿ|

ನಮ್ಮೀಕಲ್ಪದ ರಚನೆಗೆ ಬೇಕಿಹ ಸಕಲವು ವ್ಯಾಪಕ ಇವನಲ್ಲಿ||

ಮನುಶತರೂಪೆಯ ರೂಪದಿ ಬರುವನು ಸಮಷ್ಟಿರೂಪದ ಪ್ರಜಾಪತಿ|

ತನುರೂಪದಿತಾ ಜ್ಞಾನಿಗಳವರು ಇವರದೆ ಸಂತತಿ ಮೂಲದಲಿ||

ಯೋನಿಜರಲ್ಲದ ಮಾನವಸಂತತಿ  ಬ್ರಹ್ಮನಕಲ್ಪದ ಮೂಲದಲಿ|

ಏನಿದೆ ಯೋಚನೆ ನಂಬಲು ಇದನು ಸೂಚನೆ ತುಂಬಿದೆ ವೇದದಲಿ||

ಸ್ಮರಣೆ ಮಾತ್ರದಿ ವೇದಶಾಸ್ತ್ರವ ಅರಿತ ಮುನಿಗಳೆ ಮಂತ್ರದ್ರಷ್ಟರು|

ಬರೆದುದಲ್ಲ ಇದಾರು ಗರುವದಿ ಎಂದು ಬಲ್ಲರು ಧರುಮನಿಷ್ಟರು||

ಧರ್ಮನಷ್ಟದಿ ಜನರಮನದಲಿ ದೇಹಬುದ್ಧಿಯ ಬಲವು ಬೆಳೆದರೆ|

ಕರ್ಮಕೂಪದಿ ಮುಳುಗಿ ಎಲ್ಲರು ತಾವೆ ಸತ್ಯವದೆನುವರು!!! 

***

ವೇದೋಪನಿಷತ್ತುಗಳ ವಿಚಾರ:

 ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಅಗತ್ಯವಾಗಿ ಅನುಸರಿಸಲೇಬೇಕಾದ  ನಿಯಮಗಳನ್ನು  ಕುರಿತು ವೇದದಲ್ಲಿ ಅತ್ಯಂತ ಕಠಿಣವಾದ ಸಂಕೇತ ಲಿಪಿಲಿಪಿಕ್ರಮದಲ್ಲಿ ಜಟಿಲವಾದ ಭಾಷಾಶೈಲಿಯನ್ನು ಬಳಸಿ ವಿವರಗಳನ್ನು ಸೂಚಿಸಲಾಗಿರುತ್ತದೆ.

 ಅಂಥ ಮಾಹಿತಿಗಳನ್ನು ಅರ್ಥೈಸಿಕೊಳ್ಳುವುದು ಸಂಬಂಧಿಸಿದ ದೇವತಾ  ವಿಶೇಷಗಳಿಗೆ  (ಚತುರ್ಮುಖ ಬ್ರಹ್ಮ, ವಿಷ್ಣು, ಮಹೇಶ್ವರರು) ಮಾತ್ರವೇ ಸಾಧ್ಯ. ಉಳಿದವರಿಗೆ ಅದರ ಅಗತ್ಯವಿಲ್ಲ!  ಅವರು ಅಂಥಮಾಹಿತಿಗಳನ್ನು ತಿಳಿಯಲು ಶ್ರಮಿಸುವ ಅಗತ್ಯವೂ ಇಲ್ಲ!!  ಆದರೂ, ಲೌಕಿಕವಿಚಾರಗಳಿಗೆ ಸಂಬಂಧಿಸಿದ ಹಲವಾರು ಮಹತ್ವದ ಮಾಹಿತಿಗಳೂ ಈ ವೇದಗಳಲ್ಲಿ ಇಂಥದೇ ಕ್ಲಿಷ್ಟ ಶೈಲಿಯಲ್ಲಿ ನಿರೂಪಣೆಯಾಗಿರುವುದೂ ಉಂಟ. ಅವುಗಳನ್ನು ಸಮರ್ಪಕವಾಗಿ ಅರಿಯಲು ವಿದ್ವಾಂಸರು ಶ್ರಮಿಸಲೇ ಬೇಕಾದುದು ಅನಿವಾರ್ಯ. ವೇದಗಳು ಮೂಲತಃ  ಶೃತಿ, ಸ್ಮೃತಿ ರೂಪದಲ್ಲಿ ಪ್ರಚಲಿತವಿದ್ದದ್ದು!

 (ಶೃತಿ= ಕಿವಿಯಿಂದಕೇಳುವಮೂಲಕ ತಿಳಿಯುವುದು; ಸ್ಮೃತಿ= ಕಿವಿಯಿಂದ ಕೇಳಿದ್ದನ್ನು ಸ್ಮರಣೆಯಲ್ಲಿಟ್ಟುಕೊಂಡು ಅದನ್ನು ಅನುಸರಿಸುವುದು. ಚತುರ್ಮುಖಬ್ರಹ್ಮನು ತನ್ನ ಪೂರ್ವಜನ್ಮದ ಸ್ಮರಣೆಯಿಂದ ವೇದಗಳ ಮಾಹಿತಿಯನ್ನು ನೆನಪು ಮಾಡಿಕೊಳ್ಳುವುದು; ಅವನ ಮಾನಸಪುತ್ರರು ಇವುಗಳನ್ನು ಕಿವಿಯಿಂದ ಕೇಳಿಸಿಕೊಳ್ಳುವ ಮೂಲಕ ಕಂಠಪಾಠ ಮಾಡಿಕೊಳ್ಳುವುದು ಸ್ಮೃತಿ, ಶೃತಿ ಎನಿಸಿಕೊಳ್ಳುತ್ತದೆ. )  ಇದಕ್ಕೂ ಹೆಚ್ಚಿನ ಅಗತ್ಯವಿದ್ದಲ್ಲಿ ಸಂಬಂಧಿಸಿದ ಮಾಹಿತಿಗಳನ್ನು  ಸಂಕೇತಲಿಪಿಯಲ್ಲಿ ದಾಖಲಿಸಲಾಗುತ್ತಿತ್ತು.  ವೇದಾಂತರ್ಗತವಾದ ಮಾಹಿತಿಯನ್ನು  ಯಾವುದೇ ಲಿಪಿ ರೂಪದಲ್ಲಿ ಬರೆದಿರಿಸಬಾರದು; ಬರೆದಿರಿಸಿದರೂ ಅದನ್ನು ಓದಬಾರದು ಎಂಬ ನಿಯಮವು ಪ್ರಚಲಿತವಿತ್ತು!  (ಈ ಖಚಿತವಾದ ಮಾಹಿತಿಯನ್ನು ಸಿರಿಭೂವಲಯವು ಸೂಚಿಸಿರುವುದಿದೆ) ಆದರೆ, ಜಗತ್ತಿನಲ್ಲಿ ಜ್ಞಾನಕ್ಕೆ ಸಂಬಂಧಿಸಿದ ಸಕಲಮಾಹಿತಿಗಳೂ ಎಲ್ಲರಿಗೂ  ಯಾವುದೇ ತಾರತಮ್ಯವಿಲ್ಲದೇ ಹಂಚಿಕೆಯಾಗಬೇಕೆಂಬ ಉದಾರ ಬುದ್ದಿಯ  ಜಾಗತಿಕ ನಿಲುಮೆಯಿಂದಾಗಿ, ದೇವನಾಗರೀ ಲಿಪಿಯನ್ನು ಬಳಸುತ್ತಿದ್ದ ಸಂಸ್ಕೃತಭಾಷೆಯಲ್ಲಿ  ಮೊಟ್ಟಮೊದಲಬಾರಿಗೆ ಈ ವೇದಗಳನ್ನು  ಅಕ್ಷರರೂಪದಲ್ಲಿ ದಾಖಲಿಸಿ ಸಾರ್ವತ್ರಿಕವಾಗಿ ಪ್ರಸಾರ ಮಾಡಲಾಯಿತು. (ಇದೊಂದು ಪ್ರಾಗೈತಿಹಾಸಿಕ ವಿಚಾರವಾದರೂ, ಚರಿತ್ರೆಕಾರರು ಇದನ್ನು ಗುರುತಿಸಿರುವುದಿದೆ) ಇದರ ಪರಿಣಾಮವಾಗಿ ಎಲ್ಲರೂ ಈ ಅಕ್ಷರರೂಪದ ಬರಹವನ್ನು ಕುರಿತು ತಮ್ಮ ಆಲೋಚನಾ ಪರಿಧಿಯಲ್ಲಿ ಅರ್ಥೈಸಿಕೊಂಡು, ತಮಗೆ ತೋಚಿದ  ಅರ್ಥವನ್ನು ಆರೋಪಿಸಿ, ವೇದಗಳ ಪ್ರಾಚೀನ ಪಾವಿತ್ರ್ಯವನ್ನು ಕುಲಗೆಡಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದಂತಾಯಿತು!! 

ಇದರೊಂದಿಗೆ ನಿಜವಾದ ಕೆಲವು ಜಿಜ್ಞಾಸುಗಳು, ನಿಷ್ಟೆಯಿಂದ ಅವುಗಳನ್ನು ಅಧ್ಯಯನಮಾಡಿ, ಅಲ್ಲಿನ ರಹಸ್ಯಗಳನ್ನು ಹೊರಗೆಳೆದು, ಆಧುನಿಕ ವಿಜ್ಞಾನದ ಬೆಳವಣಿಗೆಗೆ ಶ್ರಮಿಸುವ ಕಾಯಕ ನಡೆಸಿದರು.  ಈ ರೀತಿಯ ಉತ್ಸಾಹದ ಪ್ರಯತ್ನಗಳಿಂದಾಗಿ ಇಂದಿನ ಜಗತ್ತು ಆಧುನಿಕ ವಿಜ್ಞಾನದ ಬಲದಿಂದ ವಿಶ್ವಶಕ್ತಿಯನ್ನೇ ಅಲ್ಲಗಳೆಯುವ ಹಂತಕ್ಕೆ ಏರಿದ್ದಾಗಿದೆ!

***

ಮೂಲತಃ ವೇದರಾಶಿಯನ್ನು  ಸಂಹಿತೆಗಳುಎಂದು ವಿಂಗಡಿಸಿರುವುದನ್ನು ಕಾಣಬಹುದು. (ಋಗ್ ಸಂಹಿತೆ; ಯಜುಸ್ಸಂಹಿತೆ; ಸಾಮಸಂಹಿತೆ, ಅಥರ್ವಸಂಹಿತೆ ಎಂದು)  ಈ ವೇದಮಂತ್ರಗಳ ರಚನೆಯು ಛಂದೂಬದ್ದವಾಗಿರುವುದು ಸಾಮಾನ್ಯಸಂಗತಿ. ಇವುಗಳನ್ನು ವಿವರಿಸುವ ಮುಂದಿನ ಸಾಹಿತ್ಯ ಪ್ರಾಕಾರಕ್ಕೆ ಬ್ರಾಹ್ಮಣಗಳೆಂದುಹೆಸರು.  ಇವುಗಳು   ವೇದಮಂತ್ರಗಳ ವಿವರಣೆಯನ್ನು ನೀಡುವುದರೊಂದಿಗೆ,  ವೈದಿಕ ಯಜ್ಞಗಳಿಗೆ  ಸಂಬಂಧಿಸಿದ  ವಿವರಣೆಯನ್ನೂ ನೀಡುತ್ತವೆ.  ಇವುಗಳ ರಚನೆಯಲ್ಲಿ  ಗದ್ಯರೂಪದ್ದೇ ಪ್ರಾಮುಖ್ಯತೆ.   ಸಂಹಿತೆ ಹಾಗೂ ಬ್ರಾಹ್ಮಣಗಳಲ್ಲಿ  ಪಾರಮಾರ್ಥಿಕವಾದ ಹಾಗೂ ಲೌಕಿಕವಾದ ಹಲವಾರು  ವಿಚಾರಗಳು ಬಂದರೂ ಬ್ರಾಹ್ಮಣಗಳು ಇವಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಒಳಗೊಂಡಿವೆ. ಬ್ರಾಹ್ಮಣಗಳ ಸಂಖ್ಯೆ ಅಪಾರವಾಗಿತ್ತು. ಈಗ ಅವುಗಳ ಸಂಖ್ಯೆ ಕ್ಷೀಣಿಸಿದೆ.  ಪ್ರಾಸಂಗಿಕವಾಗಿ ಬ್ರಾಹ್ಮಣಗಳು  ವೇದಮಂತ್ರಗಳಲ್ಲಿರುವ ಹಲವಾರು  ಶಬ್ದಗಳ ಅರ್ಥವನ್ನೂ ವಿವರಿಸುವವಾಗಿವೆ  ಎಂಬುದು  ವಿದ್ವಾಂಸರ ಮತ. ಇಲ್ಲಿಉಕ್ತವಾಗದೇ ಬಿಡಿಸಲಾಗದ ಕಗ್ಗಂಟುಗಳನ್ನು ಸರಳವಾಗಿ ವಿವರಿಸುವ ಕಾರ್ಯವನ್ನು ಯಾಸ್ಕಾಚಾರ್ಯನ  ನಿರುಕ್ತವು ವಿವರಿಸುತ್ತದೆ. ಕೃತಿಯ ಹೆಸರಿನಲ್ಲಿರುವ ಔಚಿತ್ಯವನ್ನು ಗಮನಿಸಿರಿ! ವೇದಮಂತ್ರಗಳಲ್ಲಿ ಅರ್ಥವಿವರಿಸದೇ ಉಳಿದಿರುವ ಪದಗಳಿಗೆ ವಿವರಣೆ ನೀಡುವ ಕೃತಿಯಾದ ಕಾರಣ ಯಾಸ್ಕನ ನಿಘಂಟಿಗೆ ನಿರುಕ್ತಎಂಬ ಹೆಸರು!!  ಕೃತಿಯ ಹೆಸರು ಹೇಳದಿರುವುದುಎಷ್ಟು ಅರ್ಥಪೂರ್ಣವಾಗಿದೆ ನಾಮಕರಣ!!!

ಬ್ರಾಹ್ಮಣಗಳ  ಮುಂದುವರೆದ ಭಾಗವಾಗಿ ಉಗಮವಾದ ಪ್ರಾಚೀನ ಸಾಹಿತ್ಯಕ್ಕೆ ಆರಣ್ಯಕಗಳುಎಂದು ಹೆಸರಾಯಿತು. ಇವುಗಳನ್ನು ರಚಿಸಿದವರು ಅರಣ್ಯಗಳಲ್ಲಿ ವಾಸಿಸುತ್ತಿದ್ದವರಾದ ಕಾರಣ ಈ ಸಾಹಿತ್ಯಭಾಗಕ್ಕೆ ಆರಣ್ಯಕಗಳುಎಂಬುದಾಗಿ ಹೆಸರಾಯಿತೆಂಬುದು ಸಾಯಣಾಚಾರ್ಯರ ಹೇಳಿಕೆಯಾಗಿದೆ ಎಂದು ವಿದ್ವಾಂಸರು ಸೂಚಿಸಿರುವುದಿದೆ.  ಈ ಆರಣ್ಯಕಗಳು ವಿವರಿಸುವ ಮಾಹಿತಿಯು  ಬ್ರಾಹ್ಮಣಗಳ ವಿವರಣೆಗಳಿಗಿಂತ ಬೇರೆಯಾದುದು. ಆರಣ್ಯಕಗಳಲ್ಲಿ ತೈತ್ತೀರಿಯ ಆರಣ್ಯಕವು ಪ್ರಾಚೀನವಾದುದು ಎಂಬ ವಿಚಾರವಿದೆ. ಮುಂದೆ ವೇದಗಳಿಗೆ ಸಮೀಪವಾಗಿ ಉಗಮವಾದ ಸಾಹಿತ್ಯವನ್ನು ಉಪನಿಷತ್ತುಎಂದು ಹೇಳಲಾಗುತ್ತದೆ.   ವೇದ ಸಂಬಂಧವಾದ ಸಾಹಿತ್ಯದಲ್ಲಿ ಈ ಉಪನಿಷತ್ತುಗಳಿಗೆ  ಪ್ರಮುಖವಾದ ಸ್ಥಾನವಿದೆ. ಇವುಗಳನ್ನು ವೇದಾಂತಎಂದೂ ಸೂಚಿಸುವುದಿದೆ.  ಸಂಸ್ಕೃತಭಾಷೆಯನ್ನು ಗದ್ಯರೂಪದಲ್ಲಿ ಎಷ್ಟು  ಪ್ರಭಾವಶಾಲಿಯಾಗಿ ಬಳಸಬಹುದೆಂಬುದಕ್ಕೆ ಈ ಉಪನಿಷತ್ತುಗಳು ಸೂಕ್ತವಾದ ಉದಾಹರಣೆಯೆಂದು ವಿದ್ವಾಂಸರು ಸೂಚಿಸುವುದುಂಟು.

ಇವುಗಳಾವುವೂ ಇಂಥದೇ ಕಾಲಘಟ್ಟದಲ್ಲಿ  ಉಗಮವಾದುವೆಂದು ನಿರ್ಧರಿಸಲು ಸಾಧ್ಯವಿಲ್ಲ!  ಈ ಉಪನಿಷತ್ತುಗಳ ಮಹತ್ವವನ್ನು ಪ್ರತಿಪಾದಿಸಿ ವಿವರಿಸುವುದಕ್ಕಾಗಿಯೇ  ಬಾದರಾಯಣರು  ಬ್ರಹ್ಮಸೂತ್ರವನ್ನು  ರೂಪಿಸಿದ್ದಾರೆ.  ಈ ಬ್ರಹ್ಮಸೂತ್ರದ ಮಹತ್ವವನ್ನು ಮುಂದಿನ ವಿದ್ವಾಂಸರೆಲ್ಲರೂ ಬಹಳವಾಗಿ ಪ್ರಶಂಸಿಸಿ, ಆಧಾರವಾಗಿ ಪರಿಗಣಿಸಿರುವುದಾಗಿದೆ.

ಉಪನಿಷತ್ತುಗಳ ಪ್ರಾಚೀನತೆಯ ಕಾರಣದಿಂದಾಗಿ ಅವುಗಳನ್ನು ಪ್ರಾಕ್ಚಾರಿತ್ರ್ಯಕಾಲದವು  ಎಂಬುದಾಗಿ ಕರೆಯಲ್ಪಡುತ್ತವೆ. ಅಂದರೆ, ನಮಗೆ ದೊರೆಯುವ ಯಾವುದೇ ಚಾರಿತ್ರಿಕ ಮಾಹಿತಿಗಳಿಗಿಂತಲೂ  (ಶಿಲಾಶಾಸನಗಳು; ತಾಮ್ರಪತ್ರಗಳು ಇತ್ಯಾದಿಗಳಿಗಿಂತ) ಪ್ರಾಚೀನವಾದುವು ಎಂದು ತಿಳಿಯಬೇಕು. ವೇದಗಳನ್ನಂತೂ ನಮ್ಮ ಪುರಾತನರು ಅಪೌರುಷೇಯಎಂದು  ಖಚಿತವಾಗಿ ನಿರ್ಧರಿಸಿಸಿರುವುದಿದೆ.  ವೇದೋಕ್ತ ಮಾಹಿತಿಗಳ ಆಧಾರದಲ್ಲಿ  ರೂಪುಗೊಂಡಿರುವ ಬ್ರಾಹ್ಮಣಗಳು ಹಾಗೂ ಅರಣ್ಯಕಗಳು ವೇದಗಳಿಗಿಂತ ಈಚಿನವೆಂಬುದು ನಿಶ್ಚಿತ. 

ಉಪನಿಷತ್ತುಗಳಲ್ಲಿ  ವೇದಮಂತ್ರಗಳೊಂದಿಗೆ ಪ್ರಾಚೀನ  ಇತಿಹಾಸಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ಉಲ್ಲೇಖವಾಗಿರುವ  ಕಾರಣದಿಂದ ಅವುಗಳು ಉಗಮವಾದ ಕಾಲವನ್ನು ಒಂದು ಅಂದಾಜಿನಲ್ಲಿ ನಿರ್ಧರಿಸಲಾಗಿರುತ್ತದೆ.   ಉಪನಿಷತ್ತುಗಳ ಸಂಖ್ಯೆಯನ್ನು ನಿರ್ಧರಿಸುವಲ್ಲಿಯೂ ಹಲವಾರು ಅಭಿಪ್ರಾಯಗಳಿವೆ.  ಈಶ, ಕೇನ, ಕಠ, ಪ್ರಶ್ನ, ಮುಂಡ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯ, ವೆಂಬ  ದಶೋಪನಿಷತ್ತುಗಳು ಪ್ರಮುಖವೆಂದು ಕೆಲವರು ಸೂಚಿಸಿದರೆ; ೧೦೮ ಉಪನಿಷತ್ತುಗಳಿರುವುವೆಂದು ಕೆಲವರು ಸೂಚಿಸುತ್ತಾರೆ!   ಇವುಗಳೊಂದಿಗೆ  ಪುರಾಣಗಳುಎಂಬ ಒಂದು ನೂತನ ಪ್ರಾಕಾರವೂ ನಮ್ಮಲ್ಲಿ ಪ್ರಚಲಿತವಿದೆ.  ಹದಿನೆಂಟು ಪುರಾಣಗಳ ಹೆಸರು ಪ್ರಸಿದ್ಧವಿದೆ.

 ಉಪನಿಷತ್ತುಗಳ ಕಾಲವನ್ನು ಕ್ರಿ.ಪೂ. ೬೦೦ ಕ್ಕಿಂತ ಹಿಂದಿನದೆಂದು ಎಲ್ಲರೂ ಒಪ್ಪುತ್ತಾರೆ. ಕೆಲವರು ಕ್ರಿ.ಪೂ. ೧೨೦೦ ಎಂದೂ ವಾದಿಸಿದರೆ,  ಕೆಲವರು ಕ್ರಿ.ಪೂ. ೪೫೦೦ ಎಂದು ಪ್ರತಿಪಾದಿಸುತ್ತಾರೆ.  ಅಂದರೆ, ಸುಮಾರು  ೬೫೦೦ ವರ್ಷಗಳಿಗೆ ಹಿಂದೆಯೇ ಈ ಸಾಹಿತ್ಯ ಪ್ರಕಾರವು  ಪ್ರಚಲಿತವಿತ್ತೆಂಬುದು ಖಚಿತವಾಗುತ್ತದೆ.

ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ವೇದಗಳು(ಶ್ರುತಿ,ಸ್ಮೃತಿ,) ಬ್ರಾಹ್ಮಣ,  ಅರಣ್ಯಕ, ಉಪನಿಷತ್ತು ಹಾಗೂ ಪುರಾಣಗಳು ಎಂಬ ಕ್ರಮಬದ್ಧವಾದ ವಿಂಗಡೆಣೆಗಳಿರುವುದನ್ನು ತಿಳಿದದ್ದಾಗಿದೆ.  ಇವುಗಳ ಪೈಕಿ ಮೊದಲಿನ ಮೂರು ಪ್ರಾಕಾರಗಳು ಉಗಮವಾದುದು ಯಾವಕಾಲದಲ್ಲಿ ಎಂಬುದನ್ನು ಅರಿತವರಿಲ್ಲ!  ಉಪನಿಷತ್ತುಗಳ ವಿಚಾರದಲ್ಲಿ  ಕೆಲಮಟ್ಟಿಗೆ ಪ್ರಾಚೀನ ಚರಿತ್ರೆಯ ಅಂಶಗಳ ಆಧಾರದಲ್ಲಿ ಇಂತಿಷ್ಟು ವರ್ಷಗಳ ಹಿಂದೆ ಇವು ಉಗಮ ವಾಗಿರುವುದೆಂದು ಊಹಿಸುವುದಾಗಿದೆ.

 ಇನ್ನುಳಿದಿರುವುದು ಪುರಾಣಗಳು’ . ಪುರಾಣವೆಂದರೆ  ಪ್ರಾಚೀನ ಕಾಲದ ಮಾಹಿತಿಗಳೆಂದೇ ಅರ್ಥ.  ಈ ಪುರಾಣಗಳಲ್ಲಿ ವೇದೋಪನಿಷತ್ತುಗಳ ಆಧಾರದ ಮಾಹಿತಿಗಳಿರುವಂತೆಯೇ, ಚಾರಿತ್ರಿಕ ಕಾಲದ ಘಟನೆಗಳ ವಿವರಗಳೂ ಬೆರೆತುಕೊಂಡಿರುತ್ತವೆ. ಹೀಗಾಗಿ . ಇವು ಪ್ರಾಚೀನ ವೇದಶಾಸ್ತ್ರಗಳ ಮಾಹಿತಿ  ಹಾಗೂ ಸಮಕಾಲೀನ ಇತಿಹಾಸದ ದಾಖಲೆಗಳೂ ಹೌದು!  ಇವುಗಳೊಂದಿಗೆ ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ, ಸಹಸ್ರನಾಮಗಳು ಮುಂತಾದ ಪ್ರಾಚೀನ ಸಾಹಿತ್ಯಗಳೂ ಭಾರತದಲ್ಲಿ ಪ್ರಾಚೀನ ವೇದೋಪನಿಷತ್ತುಗಳಿಗೆ ಸಂಬಂಧಿಸಿದ ಮಾಹಿತಿಗಳ ಮೂಲದಿಂದಲೇ ಬಂದದ್ದಾಗಿರುತ್ತವೆ.

ಭಾರತದಲ್ಲಿರುವಂತೆಯೇ ಪರ್ಷಿಯ ದೇಶದಲ್ಲೂ  ಪುರಾಣಗಳುಪ್ರಚಲಿತವಿವೆ! ಆದರೆ, ಪಾಶ್ಚಾತ್ಯ ಸಂಪ್ರದಾಯದ ಪ್ರೇಮಿಗಳು ಪರ್ಷಿಯನ್ ಪುರಾಣಗಳತ್ತ ಕಣ್ಣು ಹಾಯಿಸದೇ, ಭಾರತೀಯ ಪುರಾಣ ಪುಣ್ಯಕಥೆಗಳನ್ನು ಮಾತ್ರ ಅವಹೇಳನ ಮಾಡುವ ಸಂಪ್ರದಾಯ ಹೊಂದಿದ್ದಾರೆ!! 

ಜೆಂದ್ ಅವೆಸ್ತಾದ ದೇವತೆಗಳ ಹೆಸರಿಗೂ ಭಾರತೀಯ ದೇವತೆಗಳ ಹೆಸರಿಗೂ ಹಲವಾರು ಸಾಮ್ಯತೆಗಳಿರುವ ಮಾಹಿತಿಯನ್ನು ಸಿರಿಭೂವಲಯಕಾವ್ಯದ ಸಂಶೋಧಕೆ ಕೆ ಶ್ರೀಕಂಠಯ್ಯನವರು ವಿವರವಾಗಿ ಚರ್ಚಿಸಿರುವುದಿದೆ. ವೇದೋಪನಿಷತ್ತುಗಳಿಂದಾರಂಭಿಸಿ, ಪುರಾಣಗಳ ವರೆವಿಗೂ ಹರಡಿಕೊಂಡಿರು ದೇವತೆಗಳ ವಿಚಾರ ಕುರಿತಂತೆಯೂ ಇವರು ಆಳವಾಗಿ ಅಧ್ಯಯನಮಾಡಿ ಮಾಹಿತಿಗಳನ್ನು ಸೂಚಿಸಿರುವುದಿದೆ. 

ಇನ್ನು ಈ ಪ್ರಾಕಾರದ ಸಾಹಿತ್ಯಗಳ ರಚನೆಯ ಕಾಲವನ್ನು ಕುರಿತಂತೆ ನಿರ್ಧರಿಸಲು ಸಹಾಯಕವಾಗುವ  ಅಗಾಧವಾದ ಕಾಲವನ್ನು ಕುರಿತ ಮಾಹಿತಿಯನ್ನು ಗಮನಿಸೋಣ:

ಜಗತ್ತಿನ ಯಾವುದೇ ಭಾಗದಲ್ಲಿ; ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ  ಗಮನಿಸಿದರೂ ಆಧುನಿಕ ವಿಜ್ಞಾನವು ಕಂಡುಹಿಡಿಯುತ್ತಿರುವ ಹೊಸ ಹೊಸ  ವಸ್ತು ವಿಚಾರಗಳು ಈ ಹಿಂದೆಯೇ ವೇದಗಳು ಸೂಚಿಸಿರುವ ರಹಸ್ಯಗಳೇ ಆಗಿರುತ್ತವೆ!  ಇಲ್ಲಿ ವೇದೋಪನಿಷತ್ತುಗಳಿಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಕನ್ನಡಭಾಷೆಯಲ್ಲಿ ರೂಪಿಸಲಾಗಿದೆ. ಅವುಗಳನ್ನು ಏಕಾಗ್ರಚಿತ್ತದಿಂದ ಗಮನಿಸಿದಾಗ ವೇದಗಳ ಮಾಹಿತಿ ಎಷ್ಟೊಂದು ಸರಳವೂ; ಖಚಿತವೂ, ಸಾರ್ವಕಾಲಿಕವೂ, ಸರ್ವಜನ ಹಿತಕಾರಿಯೂ ಆಗಿರುವುದೆಂಬುದು ತಿಳಿಯುತ್ತದೆ.

ವೇದಗಳ ಮಾಹಿತಿಗಳು ಹಾಗೂ ಆಧುನಿಕ ವಿಜ್ಞಾನ:

ಆಧುನಿಕ ವೈದ್ಯ ವಿಜ್ಞಾನಿಗಳು ಮಾನವನ ಶರೀರದ ಹಲವಾರು ಅವಯವಗಳ ವಿಚಾರವಾಗಿ  ಅತ್ಯದ್ಭುತವಾದ ರಹಸ್ಯ ಮಾಹಿತಿಗಳನ್ನು ಕಂಡುಹಿಡಿದಿರುವುದಿದೆ.  ಶರೀರದ ಪ್ರಧಾನ ಅಂಗವಾದ ಮೆದುಳು,  ಹಾಗೂ ಕಣ್ಣಿನ ಕಾರ್ಯ ನಿರ್ವಹಣೆಯನ್ನು ಕುರಿತ ಕೆಲವು ಮಾಹಿತಿಗಳು ಇದರಲ್ಲಿ ಸೇರುತ್ತವೆ.

ತಲೆಯ ಮಧ್ಯದ ಬೈತಲೆಯ ನೇರಕ್ಕೆ ವ್ಯಕ್ತಿಯ ಮೆದುಳನ್ನು ವಿಭಾಗಮಾಡಿದಾಗ; ಎಡಭಾಗದಲ್ಲಿ ಶರೀರದಲ್ಲಿ ಅರಿವಿಗೆ ಸಂಬಂಧಿಸಿದ ಸೂಕ್ಷ್ಮ ಜ್ಞಾನ ಕ್ರಿಯೆಗೆ ಸಂಬಂಧಿಸಿದ ವಿಚಾರಗಳಿಗೆ ಬಲಭಾಗದ ಮಿದುಳು ಕಾರ್ಯಕ್ಷ್ಟೇತ್ರ ವಾಗಿರುತ್ತದೆ.  ಇವುಗಳಿಗೆ ಹೊರತಾದ ಸ್ಥೂಲಜ್ಞಾನದ  ಕ್ರಿಯೆಗಳಿಗೆ  ಎಡಭಾಗದ ಮಿದುಳಿನಭಾಗವು ಕಾರ್ಯಕ್ಷೇತ್ರ ವಾಗಿರುತ್ತದೆ.  ಇತ್ಯಾದಿ ವಿವರಗಳು. ಇದಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಯೋಗಗಳು ನಡೆದು ಯಶಸ್ವಿಯಾಗಿವೆ.  ಯಾವುದೇ ಕಾರಣದಿಂದ ಮಿದುಳಿನ ಎಡಭ್ಯಾಗಕ್ಕೆ ಧಕ್ಕೆಯಾದಲ್ಲಿ ಶರೀರದ ಬಲಭಾಗದ ಸ್ವಾಧೀನತಪ್ಪುವುದು;  ಮಿದುಳಿನ ಬಲಭಾಗಕ್ಕೆ ಧಕ್ಕೆಯಾದಲ್ಲಿ ಶರೀರದ ಎಡಭಾಗದ ಸ್ವಾಧೀನ ತಪ್ಪುವುದು ಇತ್ಯಾದಿ ವಿಚಾರಗಳ ಹಿನ್ನೆಯಲ್ಲಿ ವೈದ್ಯ ವಿಜ್ಞಾನವು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನಡೆವ ಕ್ರಮವಿರುತ್ತದೆ.

ಛಾಂದೋಗ್ಯೋಪನಿಷತ್ತಿನಲ್ಲಿ ಇದಕ್ಕೆ ಸಂಬಂಧಿಸಿದಂತೆ

ಇಂಧನೆಂಬುವನು ಜ್ಞಾನದ ದೇವತೆ ಬಲಗಣ್ಣಲಿ ತಾನಿರುತಿಹನು|

ಚಂದದಿಶೃತಿಯದು ಒರೆದಿದೆತಾನದು ಅಕ್ಷಿಪುರುಷನು ಅವನೆಂದು.||

ಜ್ಞಾನದನೆಲೆಯದು ದೇಹದ ಬಲಬದಿ ಎಂದಿದೆ ವೇದವು ಬಲುಹಿಂದೆ| (ವಿಜ್ಞಾನದಗುರಿ ಅತ್ತಲೆಸಾಗಿದೆ ಆದರು ವೇದವೆ ಬಲುಮುಂದೆ!!  ಎಂಬ ಸಾರಾಂಶದ ಮಾಹಿತಿಯನ್ನು ಕಾಣಬಹುದು!! )

 ಜಗತ್ತಿನಲ್ಲಿ ಗಿಡಮರಗಳು ಮೊದಲು ಅಸ್ಥಿತ್ವಕ್ಕೆ ಬಂದವೋ? ಅಥವಾ ಅವುಗಳ ಬೀಜಗಳು ಮೊದಲು ಅಸ್ಥಿತ್ವಕ್ಕೆ ಬಂದುವೂ ಎಂಬುದನ್ನು ಕುರಿತ ಚರ್ಚೆ ಎಂದಿಗೂ ಮುಗಿಯದ್ದು!

ಬೀಜವಿಲ್ಲದೇ ಮರವೆಲ್ಲಿ ಬರುತ್ತದೆ? ಎಂದರೆ;  ಮರವೇ ಇಲ್ಲದೇ ಬೀಜಬರುವುದೆಲ್ಲಿಂದ? ಎಂಬ ಪ್ರಶ್ನೆ ಎದುರಾಗುತ್ತದೆ! ಆದರೆ, ವೇದೋಪನಿಷತ್ತುಗಳ ವಿವರಣೆಯಂತೆ ಜಗತ್ತಿನಲ್ಲಿ ಮೊದಲಿಗೆ ಉಗಮವಾಗುವುದು ಮರಗಳೇ ಎಂಬ ಮಾಹಿತಿ ದೊರೆಯುತ್ತದೆ!  ಶಂಕರರ ಭಾಷ್ಯವನ್ನೂ ಹೊಂದಿರುವ ಛಾಂದೋಗ್ಯೋಪನಿಷತ್ತಿನಲ್ಲಿ ವೇದದ ನಿರ್ಣಯ ನೋಡುತಬಂದರೆ ವೃಕ್ಷವೆ ಬೀಜಕೆತಾಮೊದಲು| ವಾದದಿಗೆಲುವನು ಕಾಣಲುಬರುವಿರ  ವಿಜ್ಞಾನಕೆಇದೆಬಲು ದಿಗಿಲು|| ಎಂಬ ಸಾರಾಂಶವನ್ನುಳ್ಳ ಮಾಹಿತಿಯನ್ನು ಕಾಣಬಹುದು!

ಜಗತ್ತು ಉಗಮವಾದ ಬಗೆಯನ್ನು ಕುರಿತಂತೆ ವಿಜ್ಞಾನವು ಹಲವಾರು ಹೇಳಿಕೆಗಳನ್ನು ನೀಡುತ್ತದೆ. ಇದ್ದಕ್ಕಿದ್ದಂತೆಯೇ ಆಕಾಶದಲ್ಲಿ ದೊಡ್ಡ ಸ್ಫೋಟವಾಯಿತು. (ಬಿಗ್ ಬ್ಯಾಂಗ್)  ಆ ಸ್ಫೋಟದ ಅವಶೇಷಗಳೇ ಗ್ರಹಗಳ ಉಗಮಕ್ಕೆ ಕಾರಣ ಎಂಬ ಸಾರಾಂಶದ ಹೇಳಿಕೆಗಳಿವೆ.  ಭೂಮಂಡಲವು ಬಿರುಕುಬಿಟ್ಟು ಬೇರೆಬೇರೆ ಖಂಡಗಳಾದುವೆಂದು (ಕಾಂಟಿನೆಂಟಲ್ ಡ್ರಿಫ್ಟ್)  ಆಧುನಿಕ ವಿಜ್ಞಾನವು ಸೂಚಿಸುವುದನ್ನು ಅನಾದಿ ಕಾಲದಿಂದಲೇ ತೈತ್ತಿರಿಯ ಬ್ರಾಹ್ಮಣ, ಕಾಠಕ ಸಂಹಿತೆ ಹಾಗೂ ಶತಪಥ ಬ್ರಾಹ್ಮಣಗಳು ಹೇಳಿವೆ. ಅವುಗಳ ಸಾರಾಂಶವನ್ನು ನಾವು

ಸೃಷ್ಟಿಯ ಹಂತದಿ ಹೊರಡಲು ಹೊಗೆತಾನದರಲಿ ಕಂಡಿತು ಅಗ್ನಿ|  

ಅಗ್ನಿಯದೃಷ್ಟಿಯೆ ಜ್ವಾಲೆಯದಾಯಿತುತಣಿಯಲುತಾನದೆ ಧರಣಿ|

ತಣಿಯುತ ಧರಣಿಯುಬಿರಿಯುತತಾನಿರೆಸಾಗರವಾದುವು ಹಳ್ಳಗಳು|

ಗಣನೆಗೆ ಬಂದುವು ಸಪ್ತದ್ವೀಪಗಳು ಶೃತಿಗಳೆ ತಿಳಿಸಿವೆ ಇದನೆಲ್ಲ!! ಎಂಬ  ಕವಿವಾಣಿಯ ವಿವರದಲ್ಲಿ ಗಮನಿಸಬಹುದು.

ಸೂರ್ಯನು ಪೂರ್ವದಲ್ಲಿ ಹುಟ್ಟುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ ಎಂಬುದು ಜಗತ್ತಿಲ್ಲಿ ಎಲ್ಲರಿಗೂ ತಿಳಿದಿರುವ ಸಂಗತಿ.  ಆದರೆ, ಛಾಂದೋಗ್ಯದಲ್ಲಿನ ಮಾಹಿತಿ ಇದಕ್ಕಿಂತಲೂ ಹೆಚ್ಚಿನದು!

ಕೆಲವೆಡೆ ಸೂರ್ಯನಗಮನವು ಉತ್ತರ ಕೆಲವೆಡೆ ಇರುವುದು ದಕ್ಷಿಣಕೆ|

ಕೆಲವೆಡೆಉದಯವುಪೂರ್ವದಲಿದ್ದರೆಬರುವನುಕೆಲವೆಡೆಪಶ್ಚಿಮದಿ| ಉದಯವಕಾಣದ ಕೆಲವೆಡೆ ಇದ್ದರೆ ಕೆಲವೆಡೆ ಅಸ್ತವೆತಾನಿರದು|  ಎಂಬ ಸಾರಾಂಶದ ಮಾಹಿತಿಯಲ್ಲಿ   ಛಾಂದೋಗ್ಯದ ಮಾಹಿತಿಯ ಸಾರವನ್ನು ನಾವು ಕವಿವಾಣಿಯಲ್ಲಿ  ಕಾಣಬಹುದು!

 ಇದಕ್ಕೆ ಸಂಬಂಧಿಸಿದ ಕವಿವಾಣಿಯು ಮುಂದುವರೆದು.... ಉದಯದಿಸೂರ್ಯನ ಪರಿಯಿಂತಿರುವುದ ಅರಿಯಲಿ ವಿಜ್ಞಾನವೆ ಮುನ್ನಡೆದು|| ವಿಜ್ಞಾನಿಗಳಾ ಸತತಪ್ರಯೋಗದ ಫಲವಿದು ವಿಜ್ಞಾನದಪ್ರಗತಿ|ಜ್ಞಾನಿಯು ಶೃತಿಗಳನೀತೆರ ಒರೆದನೆ ಎನಿಸದೇತಾನತಿವಿಕೃತಿ| ಎಂಬಲ್ಲಿ ಕಾಣಬಹುದು.   ಇವುಗಳಪೈಕಿ ಕೆಲವನ್ನು  ವಿಜ್ಞಾನವು  ಈಗ ಅರಿತಿದೆ.  ಇನ್ನುಳಿದವನ್ನು ಖಗೋಳ ವಿಜ್ಞಾನಿಗಳಿನ್ನೂ ಕಂಡುಕೊಳ್ಳಬೇಕಿದೆ!

****

 ವೇದೋಪನಿಷತ್ತುಗಳಲ್ಲಿ ಅಡಕವಾಗಿರುವ ಮಾಹಿತಿಗಳನ್ನು ಕ್ರಮಬದ್ಧವಾಗಿ, ಸಂಪೂರ್ಣವಾಗಿ ಓದಿ ತಿಳಿಯುವುದು ಒಂದುಜನ್ಮದಲ್ಲಿ ಸಾಧ್ಯವಿಲ್ಲವೆಂಬ ಹೇಳಿಕೆ ಇದೆ. ಅಂದರೆ, ನಮಗಿರುವುದು ಒಂದೇ ಜನ್ಮವಲ್ಲ; ಹಲವಾರು ಜನ್ಮಗಳಿವೆ ಎಂದಂತಾಯಿತು. ಈಗ ಇಂಥ ಹಲವಾರು ಜನ್ಮಗಳಿಗೆ ಸಂಬಂಧಿಸಿದ ಮಾಹಿತಿಯನ್ನಷ್ಟು ಗಮನಿಸೋಣ:  

ಪುನರ್ಜನ್ಮ:

ಪುನರ್ಜನ್ಮವೆಂದರೆ,  ಮರುಹುಟ್ಟು ಎಂದರ್ಥ.  ಮರುಹುಟ್ಟು ಎಂದರೆ, ಮತ್ತೆ ಹುಟ್ಟಿಬರುವುದು ಎಂದರ್ಥ.  ಈಗ ಜೀವಂತವಿರುವ ವ್ಯಕ್ತಿಯು  ಮುಂದೆ ಮೃತಪಟ್ಟನಂತರ  ಮತ್ತೊಮ್ಮೆ ಹುಟ್ಟಿ ಬರುವನೆಂಬ ಸಂಗತಿಯನ್ನು    ಪುನರ್ಜನ್ಮ; ಮರುಹುಟ್ಟು  ಮುಂತಾದ ಶಬ್ದಗಳು  ಧ್ವನಿಸುತ್ತವೆ.

ಈ ಭೂಮಂಡಲದಲ್ಲಿ  ಮಾನವ ಜೀವನದ  ಪೂರ್ವೇತಿಹಾಸವನ್ನು  ಪರಿಶೀಲಿಸಿದರೆ,  ಅನಾದಿ ಕಾಲದಿಂದ  ಅನಂತಕಾಲದವರೆವಿಗೂ  ಈ ಮಾನವ ಜೀವನವು  ವ್ಯಾಪಕವಾಗಿರುವುದನ್ನು  ಕಾಣಬಹುದು.  ಮನುಷ್ಯರು ಹುಟ್ಟುವುದು;  ಬೆಳೆಯುವುದು; ಜೀವಿಸುವುದು ಕೊನೆಯಲ್ಲಿ  ಮರಣಹೊಂದುವುದು  ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಹುಟ್ಟುವುದು ಇಂದಿನ ದಿನಗಳಲ್ಲಿ  ಸಂಶಯದ ಸಂಗತಿಯಾದರೂ, ಈ ಗಾಗಲೇ ಹುಟ್ಟಿರುವವರು  ಸಾಯುವುದು ಮಾತ್ರ  ಒಂದು ಅನಿವಾರ್ಯವಾದ ಕ್ರಿಯೆಯಾಗಿದೆ.  ಹುಟ್ಟಿದ ಜೀವಗಳಿಗೆಲ್ಲ ಸಾವು ನಿಶ್ಚಿತವೆಂಬುದು  ಒಂದು ಸ್ಥಿರವಾದ ಸಿದ್ಧಾಂತವಾಗಿದೆ.

ಈ ಭೂಮಿಯಲ್ಲ್ಲಿ ನಾವು ಮನುಷ್ಯರಾಗಿ ಹೇಗೆ ಹುಟ್ಟಿದೆವು?  ಹುಟ್ಟುವಮೊದಲು ಎಲ್ಲಿದ್ದೆವು?  ಸಾವು ಎಂದರೇನು? ಸತ್ತನಂತರ ಎಲ್ಲಿಗೆ ಹೋಗುತ್ತೇವೆ?  ಈ ಹುಟ್ಟು ಸಾವುಗಳನ್ನು  ನಿಶ್ಚಿತವಾಗಿ ತಪ್ಪಿಸಲು ಸಾಧ್ಯವಿಲ್ಲವೇ?  ಮುಂತಾದ ಹಲವಾರು ಪ್ರಶ್ನೆಗಳು  ಎಲ್ಲರ ಅಂತರಂಗದಲ್ಲೂ ತಲೆಹಾಕುವುದು ಸ್ವಾಭಾವಿಕವಾದ ಸಂಗತಿ.  ಈ ರೀತಿಯ ಪ್ರಶ್ನೆಗಳಿಗೆ  ಸೂಕ್ತವಾದ ಉತ್ತರವನ್ನು ಕಂಡುಕೊಳ್ಳುವ ದಿಸೆಯಲ್ಲಿ  ನಮಗೆ ಎರಡುರೀತಿಯ ಮಾರ್ಗಗಳಿವೆ.  ದೇವರು, ವೇದೋಪನಿಷತ್ತುಗಳು ಮುಂತಾದುವು ಮೊದಲನೆಯ ಮಾರ್ಗವಾದರೆ, ವಿಜ್ಞಾನವು  ಎರಡನೆಯಮಾರ್ಗ. 

-ಸಿರಿಭೂವಲಯದಸುಧಾರ್ಥಿ

(ಭಾಗ ರಲ್ಲಿ ಮುಂದುವರೆದಿದೆ)