Thursday 13 February 2020

ಸಿರಿಭೂವಲಯದಲ್ಲಿ ಕನ್ನಡ ಭಗವದ್ಗೀತೆಯ ಸೊಬಗು. ಭಾಗ:೨


ಬ್ರಹ್ಮ, ವಿಷ್ಣು, ಮಹೇಶ್ವರೆಂಬ ದೇವತಾವಿಶೇಷಗಳು ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳ ಹೊಣೆ ಹೊತ್ತಿರುವವು. ಇವುಗಳಪೈಕಿ ಶಿವ ಹಾಗೂ ವಿಷ್ಣುವು ಲೋಕಕ್ಯಾಣಾರ್ಥವಾಗಿ ಹಲವಾರು ಅವತಾರಗಳನ್ನು ಧರಿಸಿರುವುದುಂಟು.   ಭೂಮಿಯಮೇಲೆ ಇಂಥ ಅವತಾರಗಳು ಸಂಭವಿಸಿದಾಗ, ಈ ಶಿವ ಹಾಗೂ ವಿಷ್ಣುನಿನ ನೈಜ ಶಕಿಯು  ಸಂಕುಚಿತಗೊಂಡು, ಅವರು ಇಲ್ಲಿನ ನರಮನುಷ್ಯರಂತೆಯೇ, ಪ್ರಕೃತಿಯ ನಿಯಮಗಳಿಗನುಸಾರವಾಗಿ ವ್ಯವಹರಿಸಬೇಕಾಗುತ್ತದೆ. ಇದು ಈ ಲೋಕದ ಜನಸಾಮಾನ್ಯರಿಗೆ ಅರಿವಿರಬೇಕಾದ ಸಂಗತಿ.
ಇಂಥ ಅವತಾರ ಪುರುಷರಿಗೆ,  ದೈವಾಂಶ ಸಂಭೂತರಿಗೆ  ತಮ್ಮ ಪೂರ್ವದ ಸ್ಮರಣೆಯಿದ್ದರೂ ಅವರು ಅದನ್ನು ಪ್ರಕಟಿಸುವುದಿಲ್ಲ.  ಸಾಮಾನ್ಯವಾಗಿ ಪೂರ್ವಜನ್ಮದ ನೆನಪುಹೊಂದಿರುವವರು ಬಹಳ ಅಪರೂಪ. ಅಂಥವರನ್ನು ’ಜಾತಸ್ಮರರು’ ಎಂದು ಸೂಚಿಸಲಾಗುತ್ತದೆ.
ಭಾಗವತದಲ್ಲಿ ಕೃಷ್ಣನ  ಪೂರ್ವಜನ್ಮದ  ಹಲವಾರು ವೃತ್ತಾಂತಗಳನ್ನು ತಿಳಿಸಿರುವುದಿದೆಯಾದರೂ ಅವನನ್ನು ’ಜಾತಸ್ಮರ’ ಎಂದು ಸೂಚಿಸುವುದಿಲ್ಲ!! ಕಾರಣ  ಅವನು ಮಹಾನ್ ’ಯೋಗಪುರುಷ’ ನಾಗಿದ್ದ. ಅಪರೂಪಕ್ಕೆ ಒಮ್ಮೆ ಕೆಲವರು ಜಾತಸ್ಮರರಾಗುವುದುಂಟು. ( ಇಂಥವರಿಗೆ ಹುಟ್ಟಿನೊಂದಿಗೇ ತಮ್ಮ ಹಿಂದಿನ ಜನ್ಮದ ಸ್ಮರಣೆ ಇರುತ್ತದೆ) ಭಗವದ್ಗೀತೆಯಲ್ಲಿ ಪಾರ್ಥನನ್ನ ಕುರಿತು ದ್ವಾರಕೆಯ ಶ್ರೀಕೃಷ್ಣನು ಉಪದೇಶನೀಡುವಾಗ ಇಂಥ ಹಲವಾರು ಪ್ರಸಂಗಗಳು ಬರುತ್ತವೆ.  ಅವುಗಳ ಸೊಬಗನ್ನು ನೀವು ಮುಂದೆ ಪ್ರತ್ಯಕ್ಷ ಕಾಣಲಿರುವಿರಿ.
ಕುರುಕ್ಷೇತ್ರದಲ್ಲಿ ಕೌರವ-ಪಾಂಡವರನಡುವಿನ ’ಮಹಾಭಾರತಯುದ್ಧ’ದ ಕ್ಷಣಗಣನೆಯು ನಡೆದಿದೆ.  ಕೌರವರ ೧೧ ಅಕ್ಷೌಹಿಣಿ ಸೇನೆಯ ಎದುರು ಪಾಂಡವರ ೭ ಅಕ್ಷೌಹಿಣಿ ಸೇನೆಯು ಎದುರುನಿಂತು ಸಮರೋತ್ಸಾಹದಿಂದ ಚಡಪಡಿಸುತ್ತಿದೆ. ದ್ವಾರಕೆಯ ಶ್ರೀಕೃಷ್ಣನ ಸಾರಥ್ಯದಲ್ಲಿ ರಣಾಂಗಣವನ್ನು ಪ್ರವೇಶಿಸಿದ ಪಾರ್ಥನಿಗೆ ತನ್ನೆದುರು ನಿಂತ ಸೇನೆಯಲ್ಲಿ ಕಾಣಿಸಿದ ಬಂಧುಬಾಂಧವರನ್ನು ನೋಡಿದಕೂಡಲೇ  ರಣೋತ್ಸಾಹವು ಮುದುಡಿಹೋಗುತ್ತದೆ.
 ಇವರನ್ನೆಲ್ಲ ಯುದ್ಧದಲ್ಲಿ ಘಾಸಿಗೊಳಿಸಿ, ಕೊಲೆಮಾಡಿ , ಸಂಪಾದಿಸುವ ರಾಜ್ಯದ ಸಿರಿಗಿಂತಲೂ ತನಗೆ  ದಿಗಂಬರರಾಜ್ಯವೇ ಇದ್ದರೂ ಸಾಕು ಎನಿಸುತ್ತದೆ. ಅದನ್ನೇ ಕೃಷ್ಣನಿಗೆ ತಿಳಿಸುತ್ತಾನೆ.
 ಆಗ ಕೃಷ್ಣನು ’ಕುರುಕ್ಷೇತ್ರದಲ್ಲಿ ಶತೃವಿನ ಸಂಹಾರವಾದಮೇಲೆತಾನೇ ಅಂತರಂಗದಲ್ಲಿರುವ ಕಸವೆಂಬ ಶತೃವನ್ನು ಗೆಲ್ಲುವುದು? ಯಶಸ್ಸಿನ ಶತೃವನ್ನು ಮೊದಲು ನಾಶಮಾಡು, ಆಮೇಲೆ ಕಸವೆಂಬ ಶತೃವಿನ ನಾಶಮಾಡುವೆಯಂತೆ. ವನವಾಸಮಾಡುವಾಗ ತಪಸ್ಸಿನ ಆಶೆಬರಲಿಲ್ಲ! ಆಗ ಒಳ್ಳೆಯ ಗುಣಗಳೆಲ್ಲವೂ ಕೀಳಾಗಿ ಕಾಣುತ್ತಿತ್ತು. ಕಣದಶತೃವಾದ ಜಳ್ಳನ್ನು ಗಾಳಿಯಲ್ಲಿ ತೂರಿ, ಗಟ್ಟಿಯಾದ ಕಾಳನ್ನು ಬುದ್ಧಿಯವಶಕ್ಕೆ ನೀಡಿ,  ತಪಸ್ಸಿಗೆ ತೆರಳಿ ಗುರುಗಳೇ! ಎಂದು ಕೃಷ್ಣನು ಪಾರ್ಥನನ್ನು ಸಲುಗೆಯಿಂದ ಕೆಣಕುತ್ತಾನೆ!!
 ಈ ಸಲುಗೆಯ ಸಂಭೋಧನೆಯು ಇಂದಿಗೂ ಉಳಿದುಬಂದಿದೆ!! ಆತ್ಮೀಯಗೆಳೆಯರು ಮತನಾಡುವಾಗ ಪರಸ್ಪರರನ್ನು ’ಗುರು’ ಎಂದು ಸಂಬೋಧಿಸುವುದು ಸರ್ವವೇದ್ಯ. ಕುಮುದೇಂದು ಮುನಿಯೂ ತನ್ನ ಕಾವ್ಯದಲ್ಲಿ ಇಂಥ ಪರಿಸರವನ್ನು ನಿರ್ಮಿಸಿದ್ದಾನೆ!! ನೋಡಿ:
”ಸರುವಬಾಂಧವರನೋಯಿಸಿಬರ್ಪರಾಜ್ಯದಿಂ| ಸಿರಿದೈಗಂಬರಿರಾಜ್ಯ|ವಿರಲೆನಗೆಂದಾಗಪಾರ್ಥಗೆಕೃಷ್ಣನು| ಕುರುಕ್ಷೇತ್ರದೊಳರಿಹನನ||ವಶವಾದಮೇಲಲ್ಲವೇಅಂತರಂಗದ|ಕಸವೆಂಬ ಅರಿಯಗೆಲ್ವಂಕ|ಯಶದರಿಹನನನೀನಾಗು ಮತ್ತಾಮೇಲೆ| ಕಸದರಿಹನನವಪ್ಪಂಗ|| ವನದೊಳ್ ಹೊಕ್ಕಾಗ ತಪದಾಶೆಬರಲಿಲ್ಲ|ಗುಣವಲ್ಲಕೀಳ್ದಾದುದರಿಕ್| ಕಣದಶತೃವನುಜಳ್ಳನುತೂರಿ| ಕಾಳನುಜ್ಞಾನಕಿತ್ತುತಪಕೈದುಗುರು||”
ಯುದ್ಧಮಾಡುವ ವಿಚಾರದಲ್ಲಿ ನೀನ್ನ ಹರುಷವನ್ನೂ ವಿಷಾದವನ್ನೂ ನನಗೆ ಒಪ್ಪಿಸಿಬಿಡು. ಈ ಯುದ್ಧವು ಕುರುವಂಶದವರ ಅನ್ಯಾಯಗಳ ಪ್ರತಿರೂಪವಯ್ಯಾ.  ಅಧ್ಯಾತ್ಮವನ್ನು ಬೆರೆಸಿ, ಮಮಕಾರವಿರದ ಬುದ್ಧಿಯನ್ನು ಕಾಪಾಡುವವನೇ  ಈಗ ನಿನ್ನ ಕ್ಷಾತ್ರತ್ವವನ್ನು ಮೆರೆಸಬೇಕಯ್ಯಾ.
”ಹರುಷವಿಷಾದಗಳನುನನಗೊಪ್ಪಿಸು|ಕುರುವಂಶದನ್ಯಾಯಗಳರೂ|ಪುರುಹಯ್ಯಕ್ಷಾತ್ರವಮೆರೆಸಯ್ಯಾಧ್ಯತ್ಮ| ಬೆರೆಸಿನಿರ್ಮಮಬುದ್ಧಿವರದ|| ಎಂದು ಪಾರ್ಥನಿಗೆ ಸೂಚಿಸುತ್ತಾನೆ.
 ಅಣತಮ್ಮಂದಿರನ್ನು ಒಂದುಗೂಡಿಸಲು ಮಾಡುತ್ತಿರುವ ಯುದ್ಧವಿದು. ಜೈನಧರ್ಮದವರು, ಶೈವರು, ವೈಷ್ಣವರು, ವ್ಯಾಪಾರಿಗಳು, ಜಗಳವಾಡದಲೇ ಬದುಕುವ ಕುಣಿಯುವ ಅಂಕಗಳ ಯುದ್ಧವಿದು. ಗಟ್ಟಿಯಾದ ಧರ್ಮಶಾಸನದಯಶಸ್ಸಿದು. ಎಂದು ಸೂಚಿಸುತ್ತಾನೆ.
”ಅನುಜರನು ಒಂದುಗೂಡಿಸಲುಮಾಡುವಯುದ್ಧ|ಜಿನಧರ್ಮಹರಿಹರವಣಿಕ|ಶಣಸದೆಬಾಳಲುಕುಣಿಕಂಕದಯುದ್ಧ|
ಘನಧರ್ಮಶಾಸನಯಶರೈಸಾ|| ಎಂದು ಹೇಳುತ್ತಾನೆ.
 ಹರುಷದಿಂದ ಕೇಳದೇ ಇರುವವರಿಗೆ ಏನನ್ನಾದರೂ ಹೇಳುವಾಗಸ್ಥಿರವಾದ ಬುದ್ಧಿ ಇರಬೇಕು. ಇಲ್ಲವಾದರೆ, ಪ್ರಸಂಗದ ರೀತಿ ಅರ್ಥವಾಗುವುದಿಲ್ಲ. ಈ ಲೋಕದ ಅಹಿಂಸೆಯನ್ನು ಬಿಟ್ಟು, ಶತೃವನ್ನು ನಾಶಮಾಡುವುದೇ ಒಳ್ಳೆಯದಲ್ಲವೇ.
”ಹರುಷದೊಳ್ಕೇಳದನೊರೆವಾಗಸ್ಥಿರಬುದ್ಧಿ|ಇರಬೇಕಲ್ಲದೊಡೆಅಸರದ|ಪರಿಯರ್ಥವಾಗದುಭವದಹಿಂಸೆಯಬಿಟ್ಟು| ಅರಿಯಕೊಲುವುದೆಶ್ರೇಯವಲಾ|| ಎಂದು ಕೃಷ್ಣನು ವಿವೇಕ ಹೇಳುತ್ತಾನೆ. (ಮುಂದುವರೆಯುತ್ತದೆ)
                                                                                                            -ಸಿರಿಭೂವಲಯದಸುಧಾರ್ಥಿ

No comments:

Post a Comment