Thursday 28 November 2013

ಸಿರಿಭೂವಲಯದಲ್ಲಿ ನರ್ತನಶಾಸ್ತ್ರಕ್ಕೆ ಸಂಬಂಧಿಸಿದಂತೆ ಒಂದು ತುಣುಕು:


  ಜಗತ್ತಿನಲ್ಲಿ ಜ್ಞಾನಕ್ಕೆ ಸಂಬಂಧಿಸಿದಂತೆ ಸಕಲಭಾಷೆಗಳು ಹಾಗೂ ಸಕಲ ವಿಚಾರಗಳಿಗೂ ಸೇರಿದ, ಸಕಲ ಸಾಹಿತ್ಯವನ್ನೂ ಕೇವಲ ಸೊನ್ನೆಸಹಿತವಾದ ೧ ರಿಂದ ೯ ಕನ್ನಡ ಅಂಕಿಗಳ ರೂಪದಲ್ಲಿ ೬ ಲಕ್ಷ ಮೂಲ ಕನ್ನಡ ಸಾಂಗತ್ಯ ಪದ್ಯಗಳಲ್ಲಿ; ನೂರುಸಾವಿರಲಕ್ಷಕೋಟಿ ಶ್ಲೋಕಗಳ ವ್ಯಾಪ್ತಿಯಲ್ಲಿ ಆಯಾಯಾ ಭಾಷೆಗಳ ಮೂಲಸ್ವರೂಪದಲ್ಲಿ ಕನ್ನಡಭಾಷೆಯಲ್ಲಿ ಕಟ್ಟಿರಿಸಿರುವ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯವು ಈ ಜಗತ್ತಿನ ಹತ್ತನೇ ಅಚ್ಚರಿಯೆಂದು ಪ್ರಖ್ಯಾತವಾಗಿದೆ!
  ಕುಮುದೇಂದು ಮುನಿಯು ಸರ್ವಧರ್ಮಗಳನ್ನೂ ಸಮನ್ವಯಗೊಳಿಸಿಕೊಂಡಿದ್ದ ಯಾಪನೀಯ ಜೈನಸಂಪ್ರದಾಯದ ದಿಗಂಬರ ಮುನಿ. ಜೈನಸಂಪ್ರದಾಯದ ಪ್ರಮುಖ ಗ್ರಂಥಗಳಾದ ಷಟ್ಖಂಡಾಗಮಗಳಿಗೆ ಧವಳಟೀಕೆಯನ್ನು ರೂಪಿಸಿದ ವೀರಸೇನಾಚಾರ್ಯ ಹಾಗೂ ಜಿನಸೇನಾಚಾರ್ಯರ ಶಿಷ್ಯನಾಗಿದ್ದವನು.  ಕರ್ನಾಟಕದ ಪ್ರಸಿದ್ಧ ರಾಜರುಗಳಾದ ಗಂಗರಸ ಸೈಗೊಟ್ಟಸಿವಮಾರನಿಗೂ, ಅಮೋಘವರ್ಷ ನೃಪತುಂಗನಿಗೂ ಗುರುವಾಗಿದ್ದವನು. ಕಾವ್ಯದಲ್ಲಿ ಕಾಣಬರುವ ಈ ಮಾಹಿತಿಗಳ ಆಧಾರದಲ್ಲಿ ಈ ಮುನಿಯ ಕಾಲವು ಕ್ರಿ. ಶ. ೮೦೦ ರ ಸುಮಾರು. ನಂದಿಬೆಟ್ಟದ ತಪ್ಪಲಿನಲ್ಲಿರುವ ಯಲವಳ್ಳಿ ಎಂಬ ಗ್ರಾಮವು ಈತನ ವಾಸಸ್ಥಳ.
  ಪಂಪನಿಗಿಂತಲೂ  ಪ್ರಾಚೀನನಾದ ಈ ಮಹಾನ್ ಕವಿಯು ತನ್ನ ಈ ಅಚ್ಚರಿಯ ಕಾವ್ಯದಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳಲ್ಲಿ ಬಳಕೆಯಾಗುವ ಕನ್ನಡಭಾಷೆಯನ್ನು ಬಳಸುವ ಮೂಲಕ ಓದುಗರಿಗೆ ವಿಸ್ಮಯವನ್ನುಂಟುಮಾಡಿದ್ದಾನೆ! ತನ್ನದೇ ಆದ ಒಂದು ವಿಶೇಷಕ್ರಮದಲ್ಲಿ ಬಳಕೆಯಾಗಿರುವ ಇಲ್ಲಿನ ಕನ್ನಡಭಾಷೆಯು ಬಹಳ ಕಠಿಣವೆಂದು ಭಾಸವಾಗುತ್ತದೆ. ಆದರೆ, ಭಾಷೆಯ ಬಳಕೆಯ ಪರಿಚಯವಾದರೆ, ಯಾರುಬೇಕಾದರೂ ಓದಿ, ತಿಳಿಯಬಹುದಾದ ಸರಳ ಕಾವ್ಯವಾಗಿದೆ. ಈ ಸಿರಿಭೂವಲಯ ಕಾವ್ಯ!   
   ಕರ್ಲಮಂಗಲಂ ಶ್ರೀಕಂಠಯ್ಯನವರು ಈ ಸಿರಿಭೂವಲಯ ಗ್ರಂಥದ ವಿಚಾರವಾಗಿ ತಮ್ಮ್ಮ ಜೀವಮಾನ ಪೂರ್ತ ಶ್ರಮಿಸಿದವರು. ಮೂಲಗ್ರಂಥದ ವಾರಸುದಾರರಾಗಿದ್ದ  ಪಂಡಿತ ಯಲ್ಲಪ್ಪಶಾಸ್ತ್ರಿಯೆಂಬುವವರು ಹಾಗೂ ಕನ್ನಡ ಟೈಪ್ ರೈಟರ್ ಜನಕ ಕೆ. ಅನಂತಸುಬ್ಬರಾಯರು ಈ ಮಹಾನ್ ಗ್ರಂಥದ ಪ್ರಚಾರಕಾರ್ಯದಲ್ಲಿ ತೊಡಗಿದ್ದವರು. ಹಾಸನದ ಸುಧಾರ್ಥಿಯು ಈ ಗ್ರಂಥವನ್ನು ಸರಳವಾದ ಕನ್ನಡಭಾಷೆಯಲ್ಲಿ ಪರಿಚಯಮಾಡಿದ್ದಾಗಿದೆ.
  ಸಿರಿಭೂವಲಯಗ್ರಂಥದಲ್ಲಿ ನರ್ತನಶಾಸ್ತ್ರಕ್ಕೆ ಸಂಬಂಧಿಸಿದಂತೆ ಕಾಣಬರುವ ಮಾಹಿತಿಯನ್ನು ಕೆ. ಶ್ರೀಕಂಠಯ್ಯನವರು  ಸಂಸ್ಸೃತ ಭಾಷೆಯಲ್ಲಿ ಹಾಡುಗಬ್ಬಗಳು ಎಂಬ ಲೇಖನದಲ್ಲಿ  ಉಲ್ಲೇಖಿಸಿರುವುದನ್ನು ಕಾಣಬಹುದು.
   ಈ ಭಾಗವು ಸಿರಿಭೂವಲಯದ ಪ್ರಥಮಖಂಡದ ೫೨ನೇ ಅಧ್ಯಾಯದ ಪೂರ್ಣಪದ್ಯಗಳ ೪ನೇ ಪಾದದ ಕೊನೆಯಿಂದ ೪ನೇ ಅಕ್ಷರವನ್ನು ಹಿಡಿದು ಮೇಲಿನಿಂದ ಕೆಳಕ್ಕೆ ಸಾಗಿದಾಗ ದೊರೆಯುವ ಅಕ್ಷರಗಳ ಸರಪಣಿಯಲ್ಲಿ ಕಾಣಬರುತ್ತದೆ. (ಇದರ ಹಿಂದಿನ ಹಾಗೂ ಮುಂದಿನ ಅಧ್ಯಾಯಗಳಲ್ಲೂ ಇದೇ ಸ್ಯಾನದಲ್ಲಿ ಈ ಸಾಹಿತ್ಯಭಾಗವು ಪ್ರವಹಿಸಿದೆ)
  ಸಾಮಾನ್ಯವಾಗಿ ಮಾತೃದೇವೋಭವ, ಪಿತೃದೇವೋಭವ ಎಂಬುದಾಗಿ ಮೊದಲಿಗೆ ತಾಯಿಯನ್ನೂ ಅನಂತರ ತಂದೆಯನ್ನೂ ಸ್ಮರಿಸುವುದು ವೈದಿಕಸಂಪ್ರದಾಯದ ಕ್ರಮ. ಆದರೆ, ಜೈನಸಂಪ್ರದಾಯದ ಸಿರಿಭೂವಲಯದಲ್ಲಿ ನರ್ತನದ ವಿಚಾರಕ್ಕೆ (ಕುಣಿತ) ಸಂಬಂಧಿಸಿದ ಈ ಸಾಹಿತ್ಯಭಾಗದಲ್ಲಿ   ಮೊದಲಿಗೆ ವಾಸುದೇವನನ್ನೂ, ಕೊನೆಗೆ ಶ್ರೀಲಕ್ಷ್ಮಿಯನ್ನೂ ಸ್ತುತಿಸಿರುವುದು  ಒಂದು ವಿಶೇಷ ಸಂಗತಿಯಾಗಿದೆ! ಇದಕ್ಕೆ ಸಂಬಂಧಿಸಿದ ಮೂಲ ಸಾಹಿತ್ಯದ ರುಚಿಯನ್ನು ನೀವೀಗ ಸವಿಯಬಹುದು.   
*  *  *

 ಶ್ರೀವಾಸುದೇವಂ ವಸುಪೂಜ್ಯನಾಥಂ| ಸುದೇವ ಪೂಜ್ಯಂ ಖಗಭರ್ತೃ ಪೂಜ್ಯಂ|
 ಸದ್ಧರ್ಮಬೀಜಂ ವರ ಬೋಧಬೀಜಂ| ಸುಶರ್ಮಕಾರಂ ಪ್ರಣಮಾಮಿ ನಿತ್ಯಂ||೧||

ವ್ಯಂತರೀ ಕಿನ್ನರೀ ಸ್ವರ್ಗದೇವಾಮರೀ| ಭೂಚರೀ ಖೇಚರೀ ಸರ್ವವಿದ್ಯಾಧರೀ|
ಹಾವಭಾವ ವಿಲಾಸ ಸಂಸದಾ ಸುಂದರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ ||೨||

ಧುಮಿ ಧುಮಿ ಧುಮಿ ಧುಮಿ ಮದ್ದಲಾವಜ್ಜಯಾ| ದುಮಿ ದುಮಿ ದುಮಿ ದುಮಿ ದೋಂದಲಾಗಜ್ಜಲಾ|
ಝಿಮಿಕಿಟೀ ಝಿಮಿಕಿಟೀ ಘಂಗರೀ ಸುಂದರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೩||

ಭೋಂ ಭೋಂ ಭೋಂ ಭೋಂ ಭೋಂ ಭೋಂ ಶಬ್ದಯಾ ಭುಂಗಲಾ|
ಥೋಂಗಿಣಿ ಥೋಂಗಿಣಿ ಗಜ್ಜಯಾ ಮದ್ದಲಾ|
ತಿಮಿಕಿಟ ತಿಮಿಕಿಟ ತಾಲಶಬ್ದಾಕರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೪||

ರುಣು ರುಣು ರುಣು ರುಣೂ ದಿವ್ಯ ವೀಣಾಸ್ವರಾ| ದಪಮಧ ಸಮಧಪ ಡೋಲಶಬ್ದಾಕರಾ|
ದಮ ದಮ ದಮ ದಮ ಸದ್ದಮೀ ಕಿನ್ನರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೫||

ಖಿಣಿ ಖಿಣಿ ಖಿಣಿ ಖಿಣಿ ಕಂಸ ಕಂಸಾಲಯಾ| ಪಿಮಿ ಪಿಮಿ ಪಿಮಿ ಪಿಮೀ ವಂಶ ವಿಶಾಲಯಾ| ಝರ ಝರಾ ಝರ ಝರಾ ಝಲ್ಲರೀ ಸುಸ್ವರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೬||

ತೋಂ ತೋಂ ತೋಂ ತೋಂ ತೋಂ ತೋಂ ವಾದ್ಯಶ್ರೀಮಂಡಲಾ|
ಭುಂ ಭುಂ ಭುಂ ಭುಂ ಭುಂ ಭುಂ ಶಬ್ದಶೋಭಾಮಲಾ|
ಹುಂ ಹುಂ ಹುಂ ಹುಂ ಹುಂ ಹುಂ ಶಂಖ ಶೋಭಾಕರಾ| ಣಚ್ಚ ಈ ಅಪ್ಸರಾದಿವ್ಯರೂಪಾಧರಾ||೭||

ಪಂಚಮಂ ಭೈರವ ನಾದಮಲ್ಹಾರಯಾ|ಥಾಥ ಈ ಥಾಥ ಈ ಪಾದಸಂಚಾರಯಾ|
ನಿತ್ಯ ಗಾನಾಸನ ದೇವ ಚೇತೋಹರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೮||

ಕರ್ಜಕೈ ರ್ಮೋದಕೈ ಸೇವಸೋಹಾಲಯಾ|ಪಂಕಜೈ ಶ್ಚಂಪಕೈ ರ್ಜಾತಿಸನ್ಮಾಲಕೈಃ| ಪೂಜಯೋಜ್ಜೀವರಂ ದೇವಯೋಗೀಶ್ವರಂ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೯||

ಧರ್ಮಶೋಭಾಕರೇ ಚೈತ್ಯಶ್ರೀಮಂದಿರೇ| ನರ್ತನಾ ಗೀತ ಗಾನಾ ಸದಾ ಚಕ್ರಿರೇ|
ಕರ್ಪುರೇ ರಾರತೀಭವ್ಯ ಅರ್ತೀಹರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೧೦||

ವಕ್ತ್ರಾಬ್ದೇ ಶಂಖಲಕ್ಷ್ಮೀ: ಕರತಲ ಕಮಲೇ ಸರ್ವದಾ ದಾನಲಕ್ಷ್ಮೀಃ |
ದೋರ್ದಂಡೇ ವೀರಲಕ್ಷ್ಮೀರ್ಹೃದಯ ಸರಸಿಜೇ ಭೂತಕಾರುಣ್ಯಲಕ್ಷ್ಮೀಃ|
ಸರ್ವಾಂಗೇ ಸೌಮ್ಯಲಕ್ಷ್ಮೀರ್ನಿಖಿಲ ಗುಣಗಣಾಡಂಬರೇ ಕೀರ್ತಿಲಕ್ಷ್ಮೀಃ|
ಖಡ್ಗೇಸೌಂದರ್ಯಲಕ್ಷ್ಮೀರ್ಜಯತು ಭುವಲಯೇ ಸರ್ವಸಾಂರಾಜ್ಯಲಕ್ಷ್ಮೀಃ||

*   *   *

 ಈ ಸಂಸ್ಕೃತ ಹಾಡುಗಬ್ಬವನ್ನು ಅಕ್ಷರಗಣ-ಮಾತ್ರಾಗಣಗಳಲ್ಲಿ ಬರೆಯದೇ ಕುಮುದೇಂದುವು ಶಬ್ದಗಣದಲ್ಲಿ ಬರೆದಿದ್ದಾನೆ. ನಾಟ್ಯಕ್ಕೇ (ಕುಣಿತ) ಮೀಸಲಾದ ವಿಷಯಗಳನ್ನು ನಾಟ್ಯ ಪದ್ಧತಿಗೆ ಹೊಂದಿಬರುವ ಹಾಡುಗಬ್ಬಗಳಲ್ಲೇ ವಿವರಿಸಿರುವುದು ಮತ್ತೊಂದು ಹೆಚ್ಚಿನ ವಿಷಯ. ಈ ಪದ್ಯಗಳಲ್ಲಿ ನಾಟ್ಯರಂಗ ಪರಿವಾರ-ಉಪಪರಿವಾರಗಳನ್ನೂ ನಿರ್ದೇಶಿಸುತ್ತಾ ಮದ್ದಲ, ದೊಂದಲ, ಘುಂಗರಿ, ಭುಂಗಲ, ಗಜ್ಜೆ(ಗೆಜ್ಜೆ) ತಾಲ,ವೀಣಾ, ಡೋಲ, ಕಿನ್ನರಿ, ಕಂಸ, ವಂಶ, ಝಲ್ಲರಿ, ಮಂಡಲ, ಶೋಭಾ, ಶಂಖ ಇವುಗಳನ್ನೂ; ಅವುಗಳಲ್ಲಿ ಕೆಲವು ಮೊದಲಿನ ಸ್ವರಗಳನ್ನೂ ಹೇಳುತ್ತಾನೆ. ಇವುಗಳಿಗೆ ಅನುಸರಿಸಿ ಕುಣಿಯುವ ಥಾಥ ಈ ಥಾಥ ಈ ಈ ಪಾದ ಸಂಚಾರ ಪದ್ಧತಿಯನ್ನೂ ಮನೋಹರವಾಗಿ ನಿರೂಪಿಸುತ್ತಾನೆ. ಇಲ್ಲಿ ಕುಮುದೇಂದುವು ಹೇಳಿರುವ ವಾದ್ಯಗಳಲ್ಲಿ, ಅವುಗಳ ಸ್ವರಪದ್ಧತಿಗಳಲ್ಲಿ ಅನೇಕ ಹೆಸರುಗಳೂ, ಸ್ವರ ವಿಶೇಷಗಳೂ ತೀರ ಅಪರಿಚಿತವಾದವುಗಳು. ಇದನ್ನೂ ದೊರೆಯುವ ನರ್ತನ ಶಾಸ್ತ್ರ ಗ್ರಂಥಗಳಿಗೆ ಹೋಲಿಸಿ, ಇದಕ್ಕೂ ಉಪಲಬ್ದವಿರುವ ಶಾಸ್ತ್ರ ಪದ್ಧತಿಗಳಿಗೆ ಸಾಮ್ಯವೆಷ್ಟು? ವೈಷಮ್ಯವೆಷ್ಟು? ಮೊದಲಾದ ಸಂಗತಿಗಳನ್ನು ವಿವೇಚಿಸುವ ವಿಷಯವನ್ನು ನಾಟ್ಯಾಚಾರ್ಯರು ಮಾಡಬೇಕು ಎಂಬುದಾಗಿಯೂ ಕೆ. ಶ್ರೀಕಂಠಯ್ಯನವರು ತಮ್ಮ ಲೇಖನದಲ್ಲಿ ಸೂಚಿಸಿದ್ದಾರೆ. ಈ ಲೇಖನವು ಪ್ರಕಟವಾಗಿ ಅರ್ಧಶತಮಾನವೇ ಕಳೆದರೂ ಯಾರೊಬ್ಬರೂ ಇತ್ತ ಗಮನಹರಿಸಿದಂತಿಲ್ಲ! ಇದಕ್ಕೆ ಮುಖ್ಯಕಾರಣ: ಈ ಪ್ರಾಚೀನ ಕನ್ನಡಕಾವ್ಯವು ಇದುವರೆವಿಗೂ ಕಬ್ಬೀಣದಕಡಲೆ ಎನಿಸಿಕೊಂಡು ಸಾಮಾನ್ಯ ಓದುಗರ ಗಮನಕ್ಕೆ ಬಾರದೇ ಅಜ್ಞಾತವಾಗಿದ್ದುದು!
   ಹಾಸನದ ಸುಧಾರ್ಥಿಯ ಮೂಲಕ ಈಗ ಈ ಮಹಾನ್ ಗ್ರಂಥದ ಸರಳ ಪರಿಚಯಕೃತಿಗಳು ರಚನೆಯಾಗಿ ಪ್ರಕಟವಾಗಿರುವ ಕಾರಣ ಈ ಭಾಗವನ್ನು  ನರ್ತನಶಾಸ್ತ್ರ್ರ ವಿಶಾರದರ ಗಮನಕ್ಕೆ ತಂದು, ಇದರ ಸೊಬಗನ್ನು ನೃತ್ಯಾಭ್ಯಾಸಿಗಳಿಗೆ ಪರಿಚಯಿಸುವ ಪ್ರಯತ್ನಮಾಡಲಾಗಿದೆ. ಈ ಭಾಗದಲ್ಲಿ ಕುಮುದೇಂದುವು ಸೂಚಿಸಿರುವ ಸಂಗೀತವಾದ್ಯಗಳ ಪೈಕಿ ಕಂಸಾಳೆ; ವಂಶ (ಬಿದಿರಿನ ಕೊಳಲು) ಶಂಖ; ಕಿನ್ನರಿ; ಗಜ್ಜೆ(ಗಜ್ಜುಗದ ಆಕಾರವಿರುವ ಗೆಜ್ಜೆ) ಮದ್ದಲೆ; ಡೋಲು; ವೀಣಾ; ತಾಲ ಮುಂತಾದುವು ಇಂದಿಗೂ ಪರಿಚಿತವಾದುವು. ದೊಂದಲ; ಭುಂಗಲ; ಮಂಡಲ; ಘುಂಗರಿ; ಝಲ್ಲರಿ; ಶೋಭಾ ಮುಂತಾದ ಅಪರಿಚಿತ ವಾದ್ಯಗಳ ಸ್ವರೂಪವನ್ನು ಅನುಭವಶಾಲಿಗಳಾದ ವಿದ್ವಾಂಸರು ಖಚಿತವಾಗಿ ವಿವರಿಸಬೇಕಾದ ಅಗತ್ಯವಿದೆ.  
*   *   *

ವಿವರಗಳಿಗೆ ಸಂಪರ್ಕಿಸಿ: ಸಿರಿಭೂವಲಯದ ಸುಧಾರ್ಥಿ, ಹಾಲುವಾಗಿಲು, ತಟ್ಟೇಕೆರೆ ಅಂಚೆ, ಹಾಸನ. ಸಂಚಾರಿ ದೂರವಾಣಿ: ೯೪೪೯೯೪೬೨೮೦.
sudharthyhassan@gmail.com 

Thursday 23 May 2013

ಓದುಗರೊಂದಿಗೆ ಕೃತಿಕರ್ತ ಸುಧಾರ್ಥಿ, ಹಾಸನ



  ಕುಮುದೇಂದುಮುನಿ, ಕರ್ಲಮಂಗಲಂ ಶ್ರೀಕಂಠಯ್ಯನವರು ಹಾಗೂ ಕೆ. ಅನಂತಸುಬ್ಬರಾಯರಂಥವರ ಅನನ್ಯವಾದ ಕನ್ನಡಾಭಿಮಾನದಿಂದ ಪ್ರೇರಿತನಾಗಿ ನಾನು ಈ ಸಿರಿಭೂವಲಯ ಎಂಬ ಅಚ್ಚರಿಯ ಗ್ರಂಥದ ಪ್ರಭಾವಕ್ಕೆ ಒಳಗಾದಮೇಲೆ, ಕಳೆದ ಅರುವತ್ತು ವರ್ಷಗಳ ಅವಧಿಯಲ್ಲಿ ಕನ್ನಡನಾಡಿನ ಸಾರಸ್ವತಲೋಗದ ದಿಗ್ಗಜಗಳು ಈ ಮಹಾನ್ ಗ್ರಂಥದ ವಿಚಾರವಾಗಿ ತಳೆದಿರುವ ಉದಾಸೀನ ಮನೋಭಾವದಿಂದ ಬಹಳ ಬೇಸಗೊಂಡದ್ದು ಸಹಜ ಸಂಗತಿ. ಕಬ್ಬಿಣದ ಕಡಲೆ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಈ ಅದ್ಭುತ ಗ್ರಂಥವನ್ನು ಕುರಿತು ಸಾಮಾನ್ಯ ಓದುಗರಿಗೆ ಪರಿಚಯಮಾಡಿಕೊಡುವ ನಿರ್ಧಾರಮಾಡಿ, ಗ್ರಂಥದ ಅಧ್ಯಯನಕ್ಕೆ ಪ್ರಾರಂಭಿಸಿದಮೇಲೆ, ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದವರು ನಾಡಿನ ಹಿರಿಯ ವಿದ್ವಾಂಸರುಗಳ ಸಮೂಹದೊಂದಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಈ ಪ್ರಾಚೀನ ಕೃತಿಯ ಪುನರುತ್ಥಾನ ಮಾಡುವ ಪ್ರಯತ್ನ ಪ್ರಾರಂಭಿಸಿದ ವಿಚಾರ ತಿಳಿಯಿತು. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಅವರ ಕೆಲವು ಕೃತಿಗಳೂ ಪ್ರಕಟವಾದುವು. ಆದರೆ, ೧೯೫೩ ರಲ್ಲಿ ಸಿರಿಭೂವಲಯದ ಅಕ್ಷರ ಅವತರಣಿಕೆಯು ಪ್ರಕಟವಾದ ವಿಚಾರವಾಗಿ ದಿ| ಕೆ. ಅನಂತಸುಬ್ಬರಾಯರಿಂದ ನಾನು ತಿಳಿದಿದ್ದ ಮಾಹಿತಿಗಳಿಗೂ, ಈಗ ಪುಸ್ತಕಶಕ್ತಿ ಪ್ರಕಾಶನದವರು ನಡೆಸಿರುವ ಪುನರುತ್ಥಾನ ಕಾರ್ಯದ ವಿವರಗಳಿಗೂ ಇರುವ ಅಂತರವನ್ನು ಗಮನದಲ್ಲಿರಿಸಿಕೊಂಡು, ಈ ಪುನರುತ್ಥಾನದ ಕಾಯಕಕ್ಕೆ ನೆರವಾದ ವಿದ್ವಾಂಸರ ಪ್ರತಿಯೊಂದು ಮಾತುಗಳನ್ನೂ ನಾನು ಗಮನವಿಟ್ಟು ಅಭ್ಯಸಿಸಿ, ಅಲ್ಲಿನ ನ್ಯೂನತೆಗಳನ್ನು ಗುರುತಿಸತೊಡಗಿದೆ. 
  ಸಿರಿಭೂವಲಯದ ಸಂಶೋಧನೆಗೆ ಸಂಬಂಧಿಸಿದಂತೆ ಇಲ್ಲದ ಇತಿಹಾಸವನ್ನು ನಿರೂಪಿಸುವ ಅನುಚಿತ ಪ್ರಯತ್ನದ ಯಶಸ್ಸನ್ನು ಗಮನಿಸಿ ನನಗೆ ಖೇದವಾಯಿತು. ಸಂಬಂಧಿಸಿದ ವಿದ್ವಾಂಸರ ಸಮೂಹವು ಸಿರಿಭೂವಲಯವನ್ನು ಸಮರ್ಪಕವಾಗಿ ಅಧ್ಯಯನಮಾಡದೇ, ನಾನಾರೀತಿಯ ಒತ್ತಡಗಳಿಗೆ ಸಿಲುಕಿ, ಸಿರಿಭೂವಲಯದ ಘನತೆಗೆ ಕುಂದುತರುತ್ತಿರುವರೆಂಬ ಅಸಮಾಧಾನ ನನ್ನಲ್ಲಿ ಉಂಟಾಯಿತು. ಈ ಕಾರಣದಿಂದಾಗಿ ನಾನು ಸಿರಿಭೂವಲಯಸಾರದಲ್ಲಿ ಸಂಬಂಧಿಸಿದ ವಿದ್ವಾಂಸರೆಲ್ಲರ ಹಾಗೂ ಹಿಂದೆ ಈ ಗ್ರಂಥದ ಅಕ್ಷರ ಸಂಸ್ಕರಣೆಯ ಪ್ರಕಟಣೆಯ ಪ್ರಾರಂಭದಲ್ಲಿ ವಿರೋಧ ಸೂಚಿಸಿದ ಅಂದಿನ ಸಾಹಿತ್ಯಕ್ಷೇತ್ರದ ದಿಗ್ಗಜಗಳ ವಿರುದ್ಧ ಸಕಾರಣವಾದ, ಸಮರ್ಪಕವಾದ, ವಾಕ್ಸಮರನಡೆಸಿದಾಯಿತು. 
   ಸಿರಿಭೂವಲಯದ ನಿಜವಾದ ಕಠಿಣತೆ, ಅದನ್ನ ಸರಳವಾಗಿ ಓದಲು ಸಾಧ್ಯವಿರದ ವಿಚಾರ, ತಮ್ಮ ವೃತ್ತಿ, ಪ್ರವೃತ್ತಿಗಳೊಂದಿಗೆ ವಿದ್ವಾಂಸರು ಇದನ್ನು ಸರಿಯಾಗಿ ತಿಳಿಯಲು ಅವಕಾಶವಾಗದೆ ಹೋದುದು ಸಹಜ ಎಂಬ ವಿಚಾರ ನನಗೆ ಈಗ ಮನವರಿಕೆಯಾಗಿದೆ. ಏಕೆಂದರೆ, ಎಲ್ಲರೂ ಎಲ್ಲವಿಚಾರಗಳಲ್ಲೂ ಸಮಾನವಾದ ಆಸಕ್ತಿ ಹೊಂದಿರುವು ಅಸಂಭವ. ನನ್ನ ವಿಚಾರವನ್ನೇ ತೆಗೆದುಕೊಂಡರೂ ಸಿರಿಭೂವಲಯದ ವಿಚಾರದಲ್ಲಿ ನನಗಿರುವಷ್ಟು ತೀವ್ರವಾದ ಆಸಕ್ತಿಯು ಬೇರೆ ಯಾವುದೇ ವಿಚಾರದಲ್ಲೂ ಇಲ್ಲವೆಂಬುದು ನನ್ನ ಸ್ವಾನುಭವ. ಅಲ್ಲದೇ ಈ ಸಿರಿಭೂವಲಯದ ಸರಳ ಪರಿಚಯದ ಕಾರ್ಯವನ್ನು ಈಹಿಂದೆಯೇ ಯಾರಾದರೂ ಮಾಡಿದ್ದರೆ, ನನಗೆ ಅಲ್ಲಿ ಪ್ರವೇಶವೇ ಇರುತ್ತಿರಲಿಲ್ಲ! ಒಟ್ಟಿನಲ್ಲಿ ಸಿರಿಭೂವಲಯದ ವಿಚಾರವಾಗಿ ಸೂಕ್ತ ಗಮನಹರಿಸಲಿಲ್ಲವೆಂದು ಉಳಿದವರನ್ನು ಆಕ್ಷೇಪಿಸುವುದು ಸೂಕ್ತವಲ್ಲವೆನಿಸಿತು. ನನ್ನ ಕಠಿಣವಾದ ಬರಹದ ವಿಚಾರವಾಗಿ ನನಗೇ ಮುಜುಗರವಾಯಿತು, ಇದರ ಪರಿಣಾಮವಾಗಿಯೇ ಮೈಸೂರಿಗೆ ಹೋದಾಗ, ಡಾ|| ಟಿ. ವಿ. ವೆಂಕಟಾಚಲಶಾಸ್ತ್ರಿಯವರನ್ನು ಕಂಡು ಮಾತನಾಡಿದ್ದಾಯಿತು. ನನ್ನ ಭಾವನೆಯೊಂದಿಗೆ ಅವರು ಪೂರ್ಣ ಸಹಮತ ಸೂಚಿಸದೇ ಹೋದರೂ, ನಾನು ಆ ವಿಚಾರದಲ್ಲಿ ತಟಸ್ಥನಾದೆ. ಕನ್ನಡ ಚೆನ್ನುಡಿಯ ಈ ಮಹಾ ಚೇತನಕ್ಕೆ ನನ್ನ ಗೌರವ ಸೂಚಿಸುವಲ್ಲಿ ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ ಕೃತಿಯನ್ನು ಅವರಿಗೆ ಅರ್ಪಿಸಿದೆ. ಇದುವರೆವಿಗೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 
  ವ್ಯಕ್ತಿಜೀವನದ ಸಾರ್ಥಕತೆಯ ದಿಸೆಯಲ್ಲಿ ಸಾಹಿತ್ಯದ ಪಾತ್ರವು ಬಹಳ ಪ್ರಮುಖವಾದುದೆಂಬುದು ನಿರ್ವಿವಾದ. ಪ್ರತಿಯೊಂದು ಸಾಹಿತ್ಯಕೃತಿಗೂ ತನ್ನದೇಆದ ನೆಲೆಬೆಲೆ ಇರುತ್ತದೆ. ಈ ಕಾರಣದಿಂದಾಗಿಯೇ ವೇದಮಂತ್ರಗಳು, ಉಪನಿಷತ್ತುಗಳು, ಸಹಸ್ರನಾಮಗಳು ಮುಂತಾದುವು ರಚನೆಯಾಗಿವೆ, ಇಂಥ ಸಾರ್ಥಕ ಸಾಹಿತ್ಯಕೃತಿಗಳ ನಿಜವಾದ ಪ್ರಯೋಜನ ನಮಗೆ ದೊರೆಯಬೇಕಾದರೆ ನಾವು ಓದಿದ ಸಾಹಿತ್ಯಕೃತಿ ನಮಗೆ ಅರ್ಥವಾಗಬೇಕು! ಅಂದರೆ, ಸಾಹಿತ್ಯಕೃತಿಯಲ್ಲಿ ಬಳಸಿರುವ ಪ್ರತಿಯೊಂದು ಪದದ ಅರ್ಥವೂ ನಮಗೆ ಖಚಿತವಾಗಿ ತಿಳಿದಿರಬೇಕು. ಈ ರೀತಿಯಲ್ಲಿ ಯಾವುದೆ ಭಾಷೆಯ ಯಾವುದೇ ಪದವು ಪ್ರತಿನಿಧಿಸುವ ನಾನಾ ರೀತಿಯ ಅರ್ಥಗಳನ್ನು ನಮಗೆ ತಿಳಿಸಿಕೊಡುವ ಕಾರ್ಯವನ್ನು ಅರ್ಥಕೋಶವು ನಿರ್ವಹಿಸುತ್ತದೆ. ವ್ಯಾಪಕವಾದ ಜೀವನಾನುಭವದ ಸಂಪಾದನೆಗೆ ಸಮರ್ಪಕವಾದ ಪ್ರವಾಸವು ನೆರವಾಗುತ್ತದೆ. ಈ ಕಾರಣದಿಂದಾಗಿಯೇ ದೇಶಸುತ್ತಿನೋಡು; ಕೋಶ ಓದಿನೋಡು ಎಂಬ ಗಾದೆಯಮಾತು ರೂಢಿಗೆ ಬಂದಿದೆ. ಇಂದಿಗೂ ಜಗದ್ವ್ಯಾಪಿಯಾಗಿರುವ ಸಂಸ್ಕೃತಭಾಷೆಗೆ ಬಹಳ ಪ್ರಾಚೀನ ಕಾಲದಲ್ಲಿ ನಿರೂಪಿತವಾದ ನಿರುಕ್ತ ಎಂಬ ಅರ್ಥಕೋಶವನ್ನು ನಿರೂಪಿಸಿದ ಯಾಸ್ಕಾಚಾರ್ಯನ ಕಾಲದಿಂದ ಇಂದಿನ ವರೆವಿಗೂ ಜಗತ್ತಿನಲ್ಲಿ ಸಾವಿರಾರು ಭಾಷೆಗಳಿಗೆ ಲಕ್ಷಾಂತರ ನಿಘಂಟುಗಳು ರಚನೆಯಾಗಿವೆ. ಕನ್ನಡಭಾಷೆಯಲ್ಲಿ ಕಿಟೆಲ್ ಕೋಶವು ಪ್ರಸಿದ್ಧವಾಗಿತ್ತು. ಅನಂತರ ಹಲವಾರು ಜನಗಳು ಈ ಅರ್ಥಕೋಶದ ರಚನೆಯಲ್ಲಿ ಕೈಹಾಕಿರುವುದುಂಟು. ನಿಘಂಟು, ಶಬ್ದಕೋಶ, ಅರ್ಥಕೋಶ, ಶಬ್ದಾರ್ಥಚಿಂತಾಮಣಿ, ಪದಾರ್ಥಚಿಂತಾಮಣಿ ಮುಂತಾದ ಶಬ್ದಗಳೆಲ್ಲವೂ ನಾವು ಬಳಸುವ ಭಾಷೆಯ ಪದಗಳ ಅರ್ಥವನ್ನು ಸೂಚಿಸುವ ಡಿಕ್ಷ್‌ನರಿ ಎಂಬ ಶಬ್ದದವ್ಯಾಪ್ತಿಗೇ ಬರುತ್ತವೆ. ಇವುಮಾತ್ರವಲ್ಲ; ಸಮಯಾವಕಾಶವಿದ್ದು, ಲಭ್ಯವಿರುವ ಹಲವಾರು ಶಬ್ದಕೋಶಗಳನ್ನು ತೆರೆದು, ಅವುಗಳ ಅರ್ಥವಿವರಣೆಯನ್ನು ಗಮನಿಸಿದಾಗ, ಅಲ್ಲಿ ಕಾಣಬರುವ ಪ್ರತಿಯೊಂದು ಶಬ್ದದ ಅರ್ಥವ್ಯಾಪ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಪರಸ್ಪರ ಸಂಬಂಧ ಹೊಂದಿ ಎಲ್ಲವೂ ಒಂದೇ ಎಂಬುದು ಮನವರಿಕೆಯಾಗುತ್ತದೆ. ಅದನ್ನೇ ಶಬ್ದಬ್ರಹ್ಮವೆನ್ನುವುದು. ಅನಾದಿ, ಅನಂತಕಾಲಾವಾಧಿಯಲ್ಲಿ ಒಂದೇ ಒಂದಾಗಿರುವ ಪರಮಾತ್ಮವು ಜೀವಾತ್ಮವಾಗಿ, ಕೋಟ್ಯಾಂತರ ದೇಹಗಳ ರೂಪದಲ್ಲಿ ಪ್ರಕಟವಾಗಿರುವಂತೆ! ಸಹಸ್ರನಾಮಗಳಲ್ಲಿಯೂಕೂಡ ಇದೇ ಮಾತುಗಳು ವ್ಯಕ್ತವಾಗುತ್ತವೆ. ಅನೇಕಕೋಟಿಬ್ರಹ್ಮಾಂಡಜನನಿ ಆಬ್ರಹ್ಮಕೀಟ ಜನನಿ ಮುಂತಾದ ಪದಪುಂಜಗಳ ಅರ್ಥವು ಧ್ವನಿಸುವುದೂ ಇದನ್ನೇ. ಕನ್ನಡ ಭಾಷೆಗೆ ಸಂಬಂಧಿಸಿದ ಲಕ್ಷಾಂತರ ಪದಗಳ -ಶಬ್ದಗಳ ಅರ್ಥವಿವರಿಸಿರುವ ಮಹಾನ್ ಚೇತನ ಪ್ರೊ. ಜಿ, ವೆಂಕಟಸುಬ್ಬಯ್ಯನವರು. ಸಮಕಾಲೀನ ಸಾಹಿತ್ಯ ಕ್ಷೆತ್ರದಲ್ಲಿ ಹೆಚ್ಚು ಉಪಯೋಗಕ್ಕೆ ಬಂದು, ಹೆಚ್ಚು ಪ್ರಸಿದ್ಧಿಗೆ ಬಂದಿರುವ ಹಲವಾರು ಅರ್ಥಕೋಶಗಳನ್ನು ನಿರೂಪಿಸಿ ನಿಘಂಟುಬ್ರಹ್ಮ ಎಂದೇ ಪ್ರಖ್ಯಾತರಾಗಿರುವ ಈ ಮಹನೀಯರದು ಜಗದ್ವಿಖ್ಯಾತವಾದ ವ್ಯಕ್ತಿತ್ವ. ನಾಡಿನ ಜ್ಞಾನವೃದ್ಧರೂ, ವಯೋವೃದ್ಧರೂ ಆಗಿರುವ ಈ ಹಿರಿಯ ಚೇತನವು ಈಗ ಶತಾಯುಷಿ. ಇಂಥ ಮಹನೀಯರ ಸಂಪರ್ಕ ಹೊಂದಿರುವುದು ಸಾಧಾರ್ಥಿಯ ಸುಕೃತವಾಗಿದೆ.  
  ಸಿರಿಭೂವಲಯದ ಪರಿಚಯಕ್ಕೆ ಸೇರಿದ ಐದು ಕೃತಿಗಳ ಪ್ರಕಟಣೆಯಾದಮೇಲೆ, ಬೆಂಗಳೂರಿಗೆ ಹೋಗಿದ್ದಾಗ ನಾಡಿನ ಸಾಹಿತ್ಯಕ್ಷೇತ್ರದ ಹಿರಿಯ ಚೇತನ ಶ್ರೀ ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಲು ಹೋದೆ. ನನ್ನ ಸಾಹಿತ್ಯಿಕ ಚಟುವಟಿಕೆಯ ವಿಚಾರದಲ್ಲಿ ಸುಮಾರು ನಲವತು ವರ್ಷಗಳಿಂದ ಪರಿಚಿತರಾಗಿ ಹಿತೈಷಿಯಾಗಿರುವ ಈ ಮಹನೀಯರನ್ನು ಕಳೆದ ಸುಮಾರು ೧೪ ವರ್ಷಗಳಿಂದ ಸಂಪರ್ಕಿಸಿರಲಿಲ್ಲ!  ಸಿರಿಭೂವಲಯಸಾರ ದಲ್ಲಿನ ನನ್ನ ನಿಷ್ಟುರವಾದ ಬರಹದಿಂದ ಅವರಿಗೆ ಮನನೊಂದಿರುವ ವಿಚಾರದಲ್ಲಿ ನನಗೆ ಸಂಶಯವೇನಿರಲಿಲ್ಲ. ಹೀಗಿದ್ದೂ ಮನೆಗೆ ಹೋಗಿ, ಕರೆಗಂಟೆಯ ಗುಂಡಿ ಒತ್ತಿದಾಗ, ಸ್ವತಃ ತಾವೇ ಬಂದು ಬಾಗಿಲು ತೆರೆದು, ಸಾಂಪ್ರದಾಯಿಕವಾಗಿ ನಾನು ನಮಸ್ಕರಿಸುವ ಮೊದಲೇ ಓಹೋ, ಬನ್ನಿ ಬನ್ನಿ. ಬಹಳದಿನಗಳಮೇಲೆ ಹಳೇ ಪರಿಚಯದವರನ್ನು ನೋಡಿದಂತಾಯ್ತು ಎಂದು ನಗುಮೊಗದಿಂದ ಸ್ವಾಗತಿಸಿದರು! ನಿಜಕ್ಕೂ ನನಗೆ ಬಹಳ ನಾಚಿಕೆಯಾಯ್ತು. ಸಾಕಷ್ಟು ಸಮಯ ಮಾತನಾಡಿದಮೇಲೆ, ನಾನು ಬರೆದಿರುವ ಸಿರಿಭೂವಲಯದ ಪರಿಚಯ ಕೃತಿಗಳನ್ನು ಅವರಿಗೆ ಒಪ್ಪಿಸಿದೆ.  ಏನಪ್ಪ, ಇಷ್ಟು ಅಲ್ಪ ಕಾಲದಲ್ಲಿ ಇಷ್ಟೊಂದು ಕೃತಿಗಳನ್ನು ಪ್ರಕಟಿಸಿದ್ದೀಯೆ. ಕುಮುದೇಂದುವನ್ನು ಕುರಿತು ಒಂದು ಪುಟ್ಟ ಗ್ರಂಥಾಲಯವೇ ಸಿದ್ಧವಾಗಿದೆ! ಇರಲೀ ನಿಧಾನವಾಗಿ ಓದಿ ನನ್ನ ಅನಿಸಿಕೆಯನ್ನು ಬರೆಯುತ್ತೇನೆ ಎಂದು ಆಶಿರ್ವದಿಸಿದರು. ಅಲ್ಲಿಂದ ಮುಂದೆ ಸಿರಿಭೂವಲಯಕ್ಕೆ ಸಂಬಂಧಿಸಿದ ನನ್ನ ಚಟುವಟಿಕೆಗಳನ್ನೆಲ್ಲ ಅವರಿಗೆ ವರದಿ ಮಾಡುವುದು ರೂಢಿಯಾಯಿತು. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ನನ್ನ ಶ್ರೀಮತಿಯು ಪ್ರಕಟಿಸಿರುವ ಯಾವ ಕೃತಿಯೂ ಸರ್ಕಾರದ ಯಾವುದೇ ಇಲಾಖೆಯ ಗ್ರಂಥಾಲಯಕ್ಕೆ ಆಯ್ಕೆಯಾಗದೇ ತಿರಸ್ಕೃತವಾಗಿರುವ ಸಂಗತಿ ಅವರಿಗೆ ಅಚ್ಚರಿಯನ್ನುಂಟುಮಾಡಿತು. ಅದಕ್ಕೆ ಸಂಬಂಧಿಸಿದಂತೆ ನಾನು ಗಮನವನ್ನೇ ಹರಿಸಿರಲಿಲ್ಲ!  
  ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ನನ್ನ ಮುಂದಿನ ಹೆಜ್ಜೆಯಾಗಿ ಸಿರಿಭೂವಲಯಸಾಗರರತ್ನಮಂಜೂಷ ವನ್ನು ನಿರೂಪಿಸಿರುವ ವಿಚಾರ ತಿಳಿಸಿ, ಅದರ ಪ್ರಮುಖ ಮಾಹಿತಿಗಳನ್ನು ಅವರಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಿ, ಓದಲು ಸಲ್ಲಿಸಿ, ಈ ಪ್ರಯತ್ನಕ್ಕೆ ನಿಮ್ಮಿಂದ ಮುನ್ನುಡಿಯಾಗಬೇಕೆಂದು ವಿನಂತಿಸಿದೆ. ಸಂತೋಷದ ಮುಗುಳ್ನಗೆ ಸೂಸಿದ ಈ ಶತಾಯುಷಿಯು ಯಾವುದೇ ಆಕ್ಷೇಪ ಸೂಚಿಸದೇ ನನ್ನ ವಿಂತಿಗೆ ಸಮ್ಮತಿಸಿದರು! ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಈಗ ತಮ್ಮ ಅಂತರಂಗದ ಭಾವನೆಗಳಿಗೆಲ್ಲ ಅಕ್ಷರ ರೂಪನೀಡಿದ ಮೌಲಿಕವಾದ ಮುನ್ನುಡಿಗೆ ಅಂಕಿತವಿಟ್ಟು ನನ್ನ ಈ ಪ್ರಯತ್ನವನ್ನು ತುಂಬು ಹೃದಯದಿಂದ ಆಶೀರ್ವದಿಸಿರು. ಮೊದಲಿಗೆ ಈ ಸಂತಸದ ಸುದ್ದಿ ತಿಳಿದ ನನ್ನ ಆತ್ಮೀಯ ಗೆಳೆಯರಬಳಗದ ಶ್ರೀ ನೀರಗುಂದ ಕೇಶವಮೂರ್ತಿರಾವ್ ಅವರಂತೂ ನಿನ್ನ ಮೂರುದಶಕಗಳ ಪ್ರಯತ್ನವು ಸಾರ್ಥಕವಾಯಿತು. ಶೀಘ್ರಕೋಪಿಯಾದ ವಿಶ್ವಾಮಿತ್ರನು ಸದಾ ಶಾಂತಿಸ್ವರೂರಾದ ವಸಿಷ್ಠರಿಂದ ಬ್ರಹ್ಮರ್ಷಿ ಪದವಿ ಪಡೆದಂತಾಯ್ತು ಎಂದು ಅಭಿನಂದಿಸಿದರು. ಈವಿಚಾರ ಕೇಳಿತಿಳಿದು ಶತಾಯುಷಿಯು ಸಂತೋಷದಿಂದ ಮನಃಪೂರ್ವಕವಾಗಿ ನಕ್ಕದ್ದೂ ಆಯಿತು. ಜೀವನದಲ್ಲಿ ಇದಕ್ಕಿಂತ ಹೆಚ್ಚಿನ ಸಂತೋಷ, ಸಂಭ್ರಮ ಇನ್ನೇನಿದೆ?! 
  ಸಿರಿಭೂವಲಯ ಕುರಿತು ಸುಧಾರ್ಥಿಯು ನಿರೂಪಿಸಿರುವ ಪರಿಚಯ ಕೃತಿಗಳಲ್ಲಿ ಕಿರೀಟಪ್ರಾಯವಾದ ಸಿರಿಭೂವಲಯಸಾಗರರತ್ನಮಂಜೂಷವು ಈ ಮಹನೀಯರ ಮುನ್ನುಡಿಯಿಂದಾಗಿ ತನ್ನದೆ ಆದ ಘನತೆ, ಗಾಂಭೀರ್ಯವನ್ನು ಪಡೆದಂತಾಗಿದೆ. ನನ್ನ ಪಾಲಿಗೆ ಇದು ಜಗತ್ತಿನ ಯಾವುದೇ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗಿಂತಲೂ ಮಿಗಿಲಾದುದು. ಯಾವುದೇ ಪ್ರತಿಷ್ಠಿತ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಪ್ರಶಸ್ತಿಗಿಂತಲೂ ಉನ್ನತವಾದುದು. ನನ್ನ ಜೀವನದ ಸಾರ್ಥಕತೆ ನನಗೆ ಲಭಿಸಿದೆ. ಇದಕ್ಕಿಂತ ಮಿಗಿಲಾದುದು ನನಗೆ ಏನೂಯಿಲ್ಲ. ಈ ಸಾರ್ಥಕತೆಯನ್ನು ಅನುಗ್ರಹಿಸಿದ್ದಕ್ಕಾಗಿ ನಾನು ಈ ಶತಾಯುಷಿಗೆ ಈ ಸಿರಿಭೂವಲಯಸಾಗರರತ್ನಮಂಜೂಷವನ್ನು ಸಮರ್ಪಿಸುವದರೊಂದಿಗೆ,  ನನ್ನ ಅನಂತ ವಂದನೆಗಳನ್ನರ್ಪಿಸುತ್ತಿದ್ದೇನೆ. 
  ಸಿರಿಭೂವಲಯವು ಮೂಲತಃ ಒಂದು ಪದ್ಧತಿಗ್ರಂಥ. ಅಂದರೆ, ಕನ್ನಡ; ಪ್ರಾಕೃತ; ಸಂಸ್ಕೃತಭಾಷಾ ಮಿಶ್ರಿತ ಕಾವ್ಯವೆಂಬ ಆಧಾರದಲ್ಲಿ ಅಶ್ವಗತಿಯ ಅಂತರ್ಸಾಹಿತ್ಯವನ್ನು ಪ್ರತ್ಯೇಕಿಸುವಾಗ, ಅಲ್ಲಿನ ಶಬ್ದಗಳ ಆಧಾರದಲ್ಲಿ ಕನ್ನಡ,ಪ್ರಾಕೃತ,ಸಂಸ್ಕೃತಭಾಷಾ ಅಂತರ್ಸಾಹಿತ್ಯಎಂದು ಸೂಚಿಸಲಾಗಿದೆ. ಆದಾಗ್ಯೂ ಅಲ್ಲಿ ಮಾಗಧಿ, ಅರ್ಧಮಾಗಧಿ, ಶೂರಸೇನಿ, ಪೈಶಾಚಿಕ, ಅಪಭ್ರಂಶ ಇತ್ಯಾದಿ ಬೇರೆಬೇರೆ ಭಾಷೆಗಳ ಶಬ್ದಗಳೂ ಅಡಕವಾಗಿರುವ ಸಾಧ್ಯತೆ ಉಂಟು. ಅಂಥ ಶಬ್ದಗಳ ಸಮೂಹವನ್ನು ಪ್ರತ್ಯೇಕಿಸಿ ಅವು ಯಾವ ಭಾಷೆಗೆ ಸೇರಿದುವುಗಳು ಎಂಬುದನ್ನು ತಿಳಿದವರು ಗುರುತಿಸಿ, ಅದರ ಪರಿಚಯ ಮಾಡಿಕೊಡಬೇಕಾಗಿದೆ. ಮೂಲ ಸಾಹಿತ್ಯದಲ್ಲಿ ಕೆಲವು ಭಾಗವನ್ನು ಬಿಟ್ಟು, ಒಟ್ಟುಸೇರಿರುವ ಈ ಅಂತರ್ಸಾಹಿತ್ಯದಲ್ಲಿ ಬೇರೆಭಾಷೆಯ ಸಾಹಿತ್ಯಕ್ಕಾಗಿ ಹುಡುಕಾಟ ನಡೆಸುವವರಿಗೆ ನೆರವಾಗಲೆಂಬ ಉದ್ದೇಶದಿಂದ ಈ ಪ್ರಯತ್ನನಡೆಸಲಾಗಿದೆ. 
ಕೆ. ಅನಂತಸುಬ್ಬರಾಯರ ಸಮರ್ಪಕ ಮಾರ್ಗದರ್ಶನದ ನೆರವಿದ್ದೂ, ಸಿರಿಭೂವಲಯದ ೧೯೫೩ರ ಪ್ರಥಮ ಮುದ್ರಣದ ೩೩ ಅಧ್ಯಾಯಗಳನ್ನು ಓದಿ ಅರ್ಥಮಾಡಿಕೊಂಡು, ಅದರಿಂದ ಪುನರುತ್ಪತ್ತಿಯಾಗುವ ಅಂತರ್ಸಾಹಿತ್ಯವನ್ನು ಕ್ರಮವರಿತು ಪ್ರತ್ಯೇಕವಾಗಿ ನಿರೂಪಿಸಿ, ಮುದ್ರಣಮಾಡಿಸುವ ಕಾರ್ಯಕ್ಕೆ ಸುಮಾರು ೨೭ ವರ್ಷಗಳ ಕಾಲಾವಧಿ ಹಿಡಿದಿತ್ತು. ಈಗ ಮುಂದಿನ ೨೬ ಅಧ್ಯಾಯಗಳ ಕಾರ್ಯವನ್ನು ಕೈಗೆತ್ತಿಕೊಂಡಾಗ, ಅಸಮರ್ಪಕವಾದ ಕೈಬರಹದ ಕರಡುಪ್ರತಿಯನ್ನು ಮುಂದಿರಿಸಿಕೊಂಡು ಅಧ್ಯಯನ ಮಾಡುವುದು ಅಸಾಧ್ಯವಾದಕಾರ್ಯವೆಂದು ಭಾಸವಾಯಿತು. ಅಲ್ಲಿನ ಅಶ್ವಗತಿಯ ಗುರುತುಗಳನ್ನು ಗಮನಿಸಿದಾಗ, ಯಾವ ಅಕ್ಷರವನ್ನು ತೆಗೆದುಕೊಳ್ಳುವುದು? ಯಾವ ಅಕ್ಷರವನ್ನು ಬಿಡುವುದು? ಎಂಬ ಸಮಸ್ಯೆ ಎದುರಾಯಿತು. ಇದರೊಂದಿಗೆ ಝರಾಕ್ಸ್ ಪ್ರತಿಯಲ್ಲಿನ ಕೈಬರಹದಲ್ಲಿ ಹಲವೆಡೆ ಕ/ತ, ಅ/ಲ; ರ/ಲ, ಪ/ಷ, ಮ/ಯ, ಲಿ/ತಿ/ರೆ, ಉ/ಲು ರ/ಗ ಮುಂತಾದ ಅಕ್ಷರಗಳನ್ನು ಸರಿಯಾಗಿ ಗುರುತಿಸುವುದು ಕಠಿಣವಾಗಿತ್ತು. ಅಂಥಲ್ಲಿ ಕೆಲವು ಅಕ್ಷರ ದೋಷಗಳು ಉಳಿದಿರುವ ಸಾಧ್ಯತೆ ಉಂಟು. ಅಂತರ್ಸಾಹಿತ್ಯವನ್ನು ಓದುವಾಗ ಕೆಲವೆಡೆ ಇಂಥ ತಪ್ಪುಗಳು ತಕ್ಷಣವೇ ಗಮನಕ್ಕೆ ಬಂದಿವೆ ಸಾಧ್ಯವಿರುವ ಮಟ್ಟಿಗೆ ಅವುಗಳನ್ನು ತಿದ್ದಲಾಗಿದೆ.
    ಈ ಕಾರ್ಯವನ್ನು ಸಾಧಿಸಲೇಬೇಕೆಂಬ ಛಲದಿಂದ, ನನ್ನಿಂದ ಸಾಧ್ಯವಾದಷ್ಟು ಕಾರ್ಯಪ್ರಗತಿಯನ್ನು ಸಾಧಿಸಿದ್ದೇನೆ. ಈ ಕಾರ್ಯಸಾಧಿಸಲು ಸಿರಿಭೂವಲಯಸಾರ  ನಿರೂಪಣೆಯ ಕಾಲಾವಧಿಯಂತೆಯೇ ಲೆಕ್ಕಹಾಕಿದರೆ,  ೧೫-೨೦ ವರ್ಷಗಳ ಕಾಲಾವಧಿಯಾದರೂ ಬೇಕೇನೋ ಎನಿಸಿತ್ತು. ಆದರೆ ಜೀವನಾವಧಿಯು ಕೊನೆಯಾಗುವುದರೊಳಗೆ ಈ ಕಾರ್ಯಕ್ಕೆ ಒಂದು ಖಚಿತ ಸ್ವರೂಪವನ್ನು ನೀಡಲೇಬೇಕೆಂಬ ಆತಂರಿಕ ಒತ್ತಡದ ಕಾರಣದಿಂದಾಗಿ, ಹಗಲು ಇರುಳಿನ ಪರಿವೆಯೂ ಇಲ್ಲದೇ ಅಧ್ಯಯನವು ಮುನ್ನಡೆಯಿತು. ಅಲ್ಲಿ ಎದುರಾದ ಅಡ್ಡಿ ಆತಂಕಗಳ ವಿವರವು ಇಲ್ಲಿ ಅನಗತ್ಯವಾದುದು. ನನ್ನ ನಿರೀಕ್ಷೆಮೀರಿ ಕೇವಲ ೧೫-೨೦ ತಿಂಗಳ ಅವಧಿಯೊಳಗಾಗಿಯೇ ಈ ಅಚ್ಚರಿಯ ಕಾವ್ಯದ ಮುಂದಿನ ಪರಿಚಯವು ಸಿರಿಭೂವಲಯಸಾಗರರತ್ನಮಂಜೂಷ ಎಂಬ ರೂಪದಲ್ಲಿ ಒಂದು ಸೀಮಿತ ಹಂತದ ಪರಿಧಿಯನ್ನು ತಲುಪಿತು. ಇದು ನಿಜಕ್ಕೂ ನನಗೆ ನೆಮ್ಮದಿಯ ವಿಚಾರವಾಗಿದೆ. ಈ ಪರಿಚಯಕೃತಿ ನಿರೂಪಣೆಯ ಕಾರ್ಯದಲ್ಲಿ ಶ್ರಮಿಸಿದವನು ಈಗ ನಾನೊಬ್ಬನೇ ಅಲ್ಲ. ನನ್ನ ಅರ್ಧಾಂಗಿ ಶ್ರೀಮತಿ ಗಿರಿಜೆಯಪಾಲೂ ಈ ಕಾರ್ಯದಲ್ಲಿ ನನಗಿಂತಲೂ ಮಿಗಿಲಾದುದು ಎಂದರೆ, ಅದು ಅತಿಶಯೋಕ್ತಿಯಲ್ಲ. ಮನೆಗೆಲಸದ ದಿನನಿತ್ಯದ ಕಾಯಕವನ್ನು ನಿರ್ವಹಿಸುವುದರೊಂದಿಗೆ ಈ ಸಾಧ್ವಿಯು ಅಕ್ಷರಶಃ ಹಗಲಿರುಳೂ ಶ್ರಮಿಸಿ, ೨೫ ಅಧ್ಯಾಯಗಳ ಸ್ತಂಭಕಾವ್ಯರೂಪದ ಅಂತರ್ಸಾಹಿತ್ಯವನ್ನು ಒಂದೊಂದೇ ಅಕ್ಷರವಾಗಿ ಬಿಡಿಸಿ; ಜೋಡಿಸಿಕೊಟ್ಟು, ಪರಿಚಯ ಕೃತಿ ನಿರೂಪಣೆಯ ಕಾರ್ಯದಲ್ಲಿ ನೆರವಾದುದು ನಿಜಕ್ಕೂ ಶ್ಲಾಘನೀಯವಾದ ಕಾರ್ಯ. ಈ ನಿರೂಪಣೆಯಲ್ಲಿ ಸುಧಾರ್ಥಿಯ ಶ್ರಮಕ್ಕೆ ಸರಿಮಿಗಿಲಾಗಿ ಗಿರಿಜೆಯೂ ಪಾಲುದಾರಳೆಂದು ಸಂಕೋಚವಿಲ್ಲದೇ ಸಂತೋಷದಿಂದ ಸೂಚಿಸುತ್ತಿದ್ದೇನೆ. ಆದರೆ ಒಂದೇ ಒಂದು ಪ್ರಮುಖ ಕೊರತೆ. ನನ್ನಂತೆಯೇ ಈಕೆಗೂ ವಿಶ್ವವಿದ್ಯಾಲಯದ ಶಿಕ್ಷಣಾರ್ಹತೆಯ ಮುದ್ರೆ ಇಲ್ಲ!. 
  ಸಿರಿಭೂವಲಯಸಾರವನ್ನು ನೋಡಿದ, ಓದಿದ ಕೆಲವು ಅಭಿಮಾನಿಗಳು ನನ್ನ ಬರವಣಿಗೆಯ ವಿಚಾರವಾಗಿ ಮೆಚ್ಚುಗೆಯ ಮಾತುಗಳನ್ನು ಸೂಚಿಸಿರುವುದಿದೆ. ಅಲ್ಲಿನ ವಿಷಯವ್ಯಪ್ತಿಯನ್ನು ಗಮನಿಸಿದ ಕೆಲವರು ನೀವು ಎಷ್ಟೊಂದು ಕಷ್ಟಪಟ್ಟು ಈ ಗ್ರಂಥ ರಚಿಸಿದ್ದೀರಿ ಎಂದಿರುವುದಿದೆ. ಇನ್ನು ಕೆಲವರು ನೀವಾಗುವ ಹೊತ್ತಿಗೆ ಈ ಗ್ರಂಥ ರಚಿಸಿದ್ದೀರಿ, ನಮಗೆ ಸಾಧ್ಯವಿಲ್ಲ ಎಂದಿರುವುದುಂಟು. ಮತ್ತೆ ಕೆಲವರು ಕಾಲೇಜು ಶಿಕ್ಷಣವೂ ಇಲ್ಲದ ಈ ಮನುಷ್ಯ ಇದನ್ನು ಹೇಗೆ ಬರೆದ?!  ಎಂದು ಅಚ್ಚರಿಪಟ್ಟಿರುವುದಿದೆ. ಆತ್ಮೀಯ ಗೆಳೆಯ ಶ್ರೀ ಹೆಚ್.ಎಂ ಸದಾನಂದ ಅವರಂತೂ  ಸುಧಾರ್ಥಿಯನ್ನು ಬಿಟ್ಟರೆ ಬೆರೆ ಯಾರೂ ಈ ಪರಿಚಯಗ್ರಂಥಗಳನ್ನು ಇಷ್ಟು ಶ್ರಮವಹಿಸಿ, ಇಷ್ಟು ಸಮರ್ಪಕವಾಗಿ ರೂಪಿಸಲು ಸಾಧ್ಯವೇ ಇಲ್ಲ ಎಂದು ಮೆಚ್ಚುಗೆ ಸೂಚಿಸಿರುವುದಿದೆ. ಇವರೆಲ್ಲರ ಅಂತರಂಗದ ಭಾವನೆಯನ್ನೂ ಸುಧಾರ್ಥಿಯು ಅರ್ಥಮಾಡಿಕೊಳ್ಳಬಲ್ಲ. ಸರಿಯಾದ ವಿಳಾಸವಿದ್ದರೂ ಕೆಲವೆಡೆ ನಮಗೆ ಬೇಕಾದವರ ಮನೆಯನ್ನು ಹುಡುಕುವುದು ಶ್ರಮದ ಕೆಲಸ. ಕಾಡಿನಲ್ಲಿಓಡಾಡಿ ಅನುಭವವಿಲ್ಲದವರು ಅಲ್ಲಿ ಒಳಗೆಸೇರಿದರೆ, ಸುರಕ್ಷಿತವಾಗಿ ಹೊರಬರುವುದು ಬಹಳ ಕಷ್ಟ. ಆದರೂ ಈ ಸಿರಿಭೂವಲಯದ ಕೆಲಸ ಸುಧಾರ್ಥಿಗೆ ಬಹಳ ಇಷ್ಟ! 
  ಈ ಸಿರಿಭೂವಲಯದ ಸಾಗರದಲ್ಲಿ ಸುಳಿವು ಸಿಗದಂತೆ ಒಳಗೆ ಅಡಗಿಕುಳಿತ ಒಂದೊಂದೇ ಅಕ್ಷರದ ಜಾಡನ್ನು ಹಿಡಿದು ಅವುಗಳನ್ನು ಒಂದೆಡೆ ಕಲೆಹಾಕಿ, ಅವುಗಳನ್ನು ವಿಂಗಡಿಸಿ, ಅರ್ಥಪೂರ್ಣವಾಗಿ ಸರಳವಾಗಿ ಪರಿಚಯಿಸುವ ಕಾರ್ಯವು ಸುಲಭವಾದುದಲ್ಲ; ನಿಜ. ಆದರೆ ಆಸಕ್ತಿಯಿದ್ದು, ಇಚ್ಛಾಶಕ್ತಿಯನ್ನು ಹೊಂದಿ, ಕ್ರಿಯಾಶಕ್ತಿಯನ್ನು ಸೂಕ್ತವಾಗಿ ಬಳಸಿಕೊಳ್ಳುವ ಜ್ಞಾನಶಕ್ತಿ ಉಳ್ಳವರಾದರೆ, ಅವರು ಸುಧಾರ್ಥಿಗಿಂತಲೂ ಸಾಮಾನ್ಯವ್ಯಕ್ತಿಗಳಾಗಿದ್ದರೂ, ಒಬ್ಬಿರಲ್ಲ; ಹಲವಾರು ಜನಗಳು ಈ ಸಾಧನೆಯನ್ನು ಸಾಧಿಸಬಲ್ಲರೆಂಬ ನಂಬಿಕೆ ಸುಧಾರ್ಥಿಗಿದೆ. ಇದುವರೆವಿಗೂ ಯಾರೊಬ್ಬರೂ ಸೂಕ್ತವಾಗಿ ಕೈಹಾಕದೇ ಇದ್ದ ಕೆಲಸಕ್ಕೆ ಈಗ ಸುಧಾರ್ಥಿಯು ಕೈಹಾಕಿ ಸಾಧ್ಯವಿವಷ್ಟು ಸಾಧನೆ ಮಾಡಿದ್ದಾಗಿದೆ. ಇಲ್ಲವಾಗಿದ್ದರೆ, ಇನ್ನಾರಾದರೂ ಈ ಕೆಲಸಕ್ಕೆ ಕೈಹಾಕಿ ಯಶಸ್ಸು ಪಡೆಯುತ್ತಿದ್ದುದು ಖಚಿತ. ಪ್ರಕೃತ ಸುಧಾರ್ಥಿಯು ಈ ಕಾರ್ಯಕ್ಕೆ ನಿಮಿತ್ತಮಾತ್ರವೇ ವಿನಃ, ಅವನಿಲ್ಲದಿದ್ದರೆ ಇದು ಸಾಧ್ಯವೇ ಆಗುತ್ತಿರಲಿಲ್ಲ ಎಂಬ ಭಾವನೆಯು ಸರ್ವಥಾ ಸಲ್ಲದು. ಈಗಲೂ ಅಷ್ಟೇ, ಸುಧಾರ್ಥಿಯ ಕಾಲಮುಗಿದಕೂಡಲೇ ಬೇರೊಬ್ಬರು ಈ ಕಾರ್ಯವನ್ನು ಮುಂದುವರೆಸಲೇಬೇಕು. ಮುಂದುವರೆಸುತ್ತಾರೆ. ಶ್ರೀಕಂಠಯ್ಯನವರಿಗೆ ಅಕ್ಷರಭೂವಲಯದ ಮಾರ್ಗದರ್ಶನವಿದ್ದಂತೆ; ಕೆ. ಅನಂತಸುಬ್ಬರಾಯರಿಗೆ ಶ್ರೀಕಂಠಯ್ಯನವರ ಮಾರ್ಗದರ್ಶನವಿದ್ದಂತೆ, ಸುಧಾರ್ಥಿಗೆ ಅನಂತಸುಬ್ಬರಾಯರ ಮಾರ್ಗದರ್ಶನವಿದ್ದಂತೆ, ಸುಧಾರ್ಥಿಯ ಕೃತಿಗಳು ಮುಂದಿನವರಿಗೆ ದಿಕ್ಸೂಚಿಯಾಗಿ, ಅವರು ಇನ್ನಷ್ಟು ಹೆಚ್ಚಿನ ಸಾಧನೆ ಸಾಧಿಸಲೆಂದು ನಾನು ಆಶಿಸುತ್ತೇನೆ. 
  ೧೯೫೩ ರಲ್ಲಿ ಸರ್ವಾರ್ಥಸಿದ್ಧಿಸಂಘವು ಸಿರಿಭೂವಲಯದ ಅಕ್ಷರ ಅವತರಣಿಕೆಯನ್ನು ರೂಪಿಸಿದಾಗ, ಕರ್ಲಮಂಗಲಂ ಶ್ರೀಕಂಠಯ್ಯನವರ ಅಪಾರ ವಿದ್ವತ್ತು ಹಾಗೂ ಯುಗಾಂತರ ಮುದ್ರಣಾಲಯದವರ ತಾಳ್ಮೆ, ಶ್ರದ್ಧೆ ಹಾಗೂ ಕೌಶಲ್ಯದ ಪರಿಣಾಮವಾಗಿ ಮೂಲಸಾಹಿತ್ಯದಲ್ಲಿ ಸಂಸ್ಕೃತ; ಪ್ರಾಕೃತ ಇತ್ಯಾದಿ ಅನ್ಯ ಭಾಷೆಗಳ ಸಾಹಿತ್ಯವನ್ನು ಗುರುತಿಸಲು ಓದುಗರಿಗೆ ಸುಲಭವಾಗುವಂತೆ ಹಲವಾರು ಲೇಖನ ಚಿಹ್ನೆಗಳನ್ನು ಬಳಸಿ, ಬಹಳ ಸುಂದರವಾಗಿ ಮದ್ರಣಮಾಡಲಾಗಿದೆ. ನನಗೆ ಆಮಟ್ಟದ ಸಮರ್ಥ್ಯವಿಲ್ಲ. ಈ ನನಗೆ ಸಾಧ್ಯವಾದಮಟ್ಟಿಗೆ ಮೂಲಸಾಹಿತ್ಯದ ವಿನ್ಯಾಸವನ್ನು ರೂಪಿಸಿದ್ದೇನೆ. ಸಮರ್ಥರಾದ ಮುಂದಿನ ಆಸಕ್ತ ಸಂಶೋಧಕರು ಈ ನ್ಯೂನತೆಯನ್ನು ಪರಿಷ್ಕರಿಸಬೇಕಾಗಿ ವಿನಂತಿ.
  ಸಿರಿಭೂವಲಯವನ್ನು ಕುರಿತು ಕನ್ನಡ ನಾಡಿನಲ್ಲೇ ಸಾಕಷ್ಟು ಅನಾದರಣೆಯಿರುವುದು ವಾಸ್ತವ ವಿಚಾರ. ವಿಶ್ವವಿದ್ಯಾಲಯಗಳೂ ಈ ಅಚ್ಚರಿಯ ಕೃತಿಯಿಂದ ದೂರವುಳಿದಿವೆ. ಇಂಥ ಪರಿಸರದಲ್ಲಿ  ಹಂಪಿಯ ಕನ್ನಡವಿಶ್ವವಿದ್ಯಾಲಯದವರು ಈ ವಿಚಾರದಲ್ಲಿ ಈಚೆಗೆ ಆಸಕ್ತಿವಹಿಸಿರುವುದು ಸಂತೋಷದ ಸಂಗತಿಯಾಗಿದೆ. ಇಲ್ಲಿನ ಆಡಳಿಯವು ಸಿರಿಭೂವಲಯ ಕುರಿತು ಮಹಾಪ್ರಬಂಧ ರಚಿಸುವವರಿಗೆ ಸೂಕ್ತ ಅವಕಾಶಕಲ್ಪಿಸಿರುವುದು ಹೆಮ್ಮೆಯ ವಿಚರ. ಉಳಿದೆಲ್ಲ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗವೂ ಇತ್ತ ಗಮನ ಹರಿಸಿ, ಸಿರಿಭೂವಲಯದ ಅಧ್ಯಯನವನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸುವತ್ತ ಗಮನ ಹರಿಸಿದರೆ, ಮುಂದಾದರೂ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಿರಿಭೂವಲಯದ ವ್ಯಾಪಕವಾದ ಅಧ್ಯಯನಕ್ಕೆ ಅವಕಾಶ ಲಭಿಸಲು ಸಾಧ್ಯವಾದೀತು. 
  ಈ ಪರಿಚಯಕೃತಿಯ ರಚನೆಯಲ್ಲಿ ನೆರವಾದವರಿಗೆ ಕೃತಜ್ಞತೆಯನ್ನರ್ಪಿಸುವುದು ಕೃತಿಕರ್ತೃವಿನ ಆದ್ಯಕರ್ತವ್ಯ. ಈ ದಿಸೆಯಲ್ಲಿ ನಾನು ಕೃತಜ್ಞತೆ ಸೂಚಿಬೇಕಾದುದು ನನ್ನ ಈ ಪ್ರತ್ನಕ್ಕೆ ಮೂಲಕರಣರಾಗಿ, ನನಗೆ ಸಿರಿಭೂವಲಯದ ಮೂಲಕೃತಿಯ ಝೆರಾಕ್ಸ್ ಪ್ರತಿಯನ್ನು ಅನಿರೀಕಿತವಾಗಿ, ಅಯಾಚಿತವಾಗಿ ತಂದು ತಲುಪಿಸಿದ ಅಪರಿಚಿತ ಮಿತ್ರರೊಬ್ಬರಿಗೆ. -ಅವರು ಅಪರಿಚಿತರಾಗಿಯೇ ಉಳಿಯುವಂತಾದುದು ನನಗೆ ಖೇದದ ಸಂಗತಿಯಾದರೂ- ನನ್ನ ಈ ಪ್ರಯತ್ನಕ್ಕೆ ಮೂಲಕಾರಣರಾದ ಅವರಿಗೆ ನನ್ನ ಹೃದಯಪೂರ್ವಕ ನಮನಗಳನ್ನರ್ಪಿಸುತ್ತಿದ್ದೇನೆ.   
  ಈ ಅಪರಿಚಿತ ಮಿತ್ರನಿಂದ ದೊರೆತ ಅಸಮರ್ಪಕವಾದ ಪ್ರತಿಯನ್ನು ಸುವ್ಯವಸ್ಥಿತಗೊಳಿಸುವಲ್ಲಿ ನೆರವಾಗುವುದರೊಂದಿಗೆ, ತಮ್ಮ ಸಂಶೋಧನಾ ಪ್ರಬಂಧ ರಚನೆಗಾಗಿ, ತಾವು ಅಧಿಕೃತವಾಗಿ ನಿಗಧಿತ ಶುಲ್ಕತೆತ್ತು  ದೆಹಲಿಯ ಪಾಚ್ಯಪತ್ರಾಗಾರದಿಂದ ಸಂಗ್ರಹಿದ ಸಿರಿಭೂವಲಯದ ಮೂಲಪ್ರತಿಯ ಝೆರಾಕ್ಸ್ ನಕಲನ್ನು ನನ್ನ ಪರಿಶೀಲನೆಯ ಕಾರ್ಯಕ್ಕೆ ಕೆಲವು ಸಮಯ ಎರವಲು ನೀಡಿದ ಆತ್ಮೀಯ ಮಿತ್ರ ಶ್ರೀ ಎಚ್. ಎಂ. ಸದಾನಂದರಿಗೆ, ತಾವು ಇಂದೂರಿನ ಕುಂದ ಕುಂದ ಜ್ಞಾನಪೀಠದ ಪದಾಧಿಕಾರಿಗಳಿಂದ ಪಡೆದು ತಂದ ಸಿರಿಭೂವಲಯದ ಅಕ್ಷರಪ್ರತಿ ಹಾಗೂ ಅಂಕಪ್ರತಿಯನ್ನು ನನ್ನ ಪರಿಶೀಲನೆಗೆ ಒದಗಿಸುವ ಮೂಲಕ ಈ ಮಹತ್ಕಾರ್ಯಕ್ಕೆ ನೆರವಾದ ಹಿರಿಯ ಮಿತ್ರ, ವೇದಗಣಿತ ತಜ್ಞ ಶ್ರೀ ಎಂ.ಕೆ. ಶಿವಪ್ಪನವರಿಗೆ, ಎಂದಿನಂತೆ ಇಂದಿಗೂ ನನ್ನ ಈ ಸಾಹಿತ್ಯಿಕ ಸಾಧನೆಯ ಆರ್ಥಿಕ ಸಾಮಥಕ್ಕೆ ಸಹಕಾರಿಯಾಗಿರುವ ಆತ್ಮೀಯ ಮಿತ್ರ ಶ್ರೀ ಯತಿರಾಜುಲುನಾಯ್ಡು ಹಾಗೂ ಅವರ ಕುಟುಂಬಕ್ಕೆ ನನ್ನ ಅನಂತ ವಂದನೆಗಳು. 
  ಹಿರಿಯಮಿತ್ರ ಶ್ರೀ ವೆಂಕಟರಮಣಯ್ಯನವರಿಗೆ; ಬೆಳಗಾವಿಯ ಶ್ರೀ ಧರಣೇಂದ್ರಕುಮಾರ್, ಹಾಗೂ ಪತ್ರಿಕೋದ್ಯೋಗಿ ಮಿತ್ರರು- ಮೂಲತಃ ವಕೀಲರಾದ ಗೆಳೆಯ ಶ್ರೀ ಎಂ.ವಿ.ಆರ್. ಅವರಿಗೆ, ವೈದ್ಯರೂ ಬರಹಗಾರರೂ ಆದ  ಡಾ|| ಪ್ರದೀಪಕುಮಾರ್ ಹೆಬ್ರಿ ಅವರಿಗೆ, ಶ್ರೀ ಡಿ. ಎನ್. ಅಕ್ಕಿ ಮಾಸ್ತರಿಗೆ, ಕೊಕ್ಕರಣೆ ಅರಮನೆಯ ಶ್ರೀ ಗುಣವರ್ಮರಾಜಾ ಅವರಿಗೆ, ಬೆಳಗಾವಿಯ ಭರತೇಶ ಶಿಕ್ಷಣ ಸಮೂಹದ ಪದಾಧಿಕಾರಿಗಳಿಗೆ, ಶ್ರೀ ಹರಿಹರಪುರ ಶ್ರೀಧರ್ ಅವರಿಗೆ; ಶ್ರೀ ಹೆಚ್. ಎಸ್. ಪ್ರಭಾಕರ್ ಅವರಿಗೆ; ಮಾಧ್ಯಮದ ಮಿತ್ರರೆಲ್ಲರಿಗೆ; ನನ್ನ ಬರಹದ ವಿಚಾರದಲ್ಲಿ ಅದರಲ್ಲೂ ಸಿರಿಭೂವಲಯಕ್ಕೆ ಸಂಬಂಧಿಸಿದ ಪರಿಚಯಗ್ರಂಥಗಳ ವಿಚಾರದಲ್ಲಿ ಆಸಕ್ತಿವಹಿಸಿ, ಅದರ ಪ್ರಚಾರಕ್ಕೆ ನೆರವಾಗಿರುವ ನೂರಾರು ಅಭಿಮಾನಿಗಳಿಗೆನನ್ನ ಕೃತಜ್ಞತೆಗಳು. 
  ಸಿರಿಭೂವಲಯಸಾರದಲ್ಲಿ ಪ್ರಥಮ ಖಂಡದ ೧ ರಿಂದ ೩೩ ಅಧ್ಯಾಯಗಳ ಅಂತರ್ಸಹಿತ್ಯ ಹಾಗೂ ಅದಕ್ಕೆ ಪೂರಕವಾದ ಕೆಲವರು ಮಾಹಿತಿಗಳನ್ನು ಅಳವಡಿಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಸಿರಿಭೂವಲಯಸಾರ ೨ ಎಂಬ ಹೆಸರಿನಿಂದ ೩೪ ರಿಂದ ೫೯ನೇ ಅಧ್ಯಾಯದ ವರೆಗಿನ ಮೂಲಸಾಹಿತ್ಯ, ಅವುಗಳ ಅಂತರ್ಸಾಹಿತ್ಯ ಹಾಗೂ ಪೂರಕವಾದ ಕೆಲವಾರು ಮಾಹಿತಿಗಳನ್ನು ನಿರೂಪಿಸಿ, ಪ್ರಕಟಿಸುವ ನಿರ್ಧಾರವಾಗಿತ್ತು. ವಿವಿಧ ಮೂಲಗಳಿಂದ ಲಭ್ಯವಾದ ಮೂಲಸಾಹಿತ್ಯದ ಝೆರಾಕ್ಸ್ ಪ್ರತಿಗಳನ್ನು ಪರಸ್ಪರ ತಾಳೆನೋಡಿ, ಅಲ್ಲಿನ ವ್ಯತ್ಯಾಸಗಳನ್ನು ಸಾಧ್ಯವಿರುವಷ್ಟು ಸಮರ್ಪಕವಾಗಿ ಸರಿಪಡಿಸಿಕೊಂಡು, ಮೂಲಸಾಹಿತ್ಯವನ್ನು ರೂಪಿಸಿಕೊಳ್ಳುವುದೇ ಸಾಕಷ್ಟು ಸಮಯವನ್ನು ತೆಗೆದುಕೊಂಡಿತು. ಉಳಿದ ವಿಚಾರಗಳ ಸೂಕ್ತ ನಿರ್ವಹಣೆ ಇತ್ಯಾದಿಗಳಿಂದಾಗಿ, ನಿಗದಿತ ಗುರಿಯನ್ನು ಕ್ಲುಪ್ತಕಾಲವಧಿಯಲ್ಲಿ ಮಾಡಿ ಮುಗಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ೩೪ ರಿಂದ ೫೦ನೇ ಅಧ್ಯಾಯದ ವರೆವಿಗೆ ಮಾತ್ರರವೇ ಮೂಲಸಾಹಿತ್ಯ ಹಾಗೂ ಸಂಬಂಧಿಸಿದ ಅಂತರ್ಸಾಹಿತ್ಯವನ್ನು ನಿರೂಪಿಸಿ ಪ್ರಕಟಿಸಲು ಸಾಧ್ಯವಾಯಿತು. ಪ್ರಥಮ ಖಂಡದ ಉಳಿದ ಅಧ್ಯಾಯಗಳು ಹಾಗೂ ಮುಂದಿನ ಅಪಾರ ಸಾಹಿತ್ಯಸಾಗರದ ಮೂಲಸಾಹಿತ್ಯ ಹಾಗೂ ಅದಕ್ಕೆ ಸಂಬಂಧಿಸಿದ ಅಂತರ್ಸಾಹಿತ್ಯ ಮತ್ತು ಇತರ ಮಾಹಿತಿಗಳನ್ನು ಪರಿಚಯಿಸಿ, ಪ್ರಕಟಿಸುವ ನಿರ್ಧಾರವಿದೆ. ನನ್ನ ಶ್ರೀಮತಿಯ ನಿರ್ಧಾರದಂತೆ ಈ ಪರಿಚಯ ಕೃತಿಗೆ ಸಿರಿಭೂವಲಯಸಾಗರರತ್ನಮಂಜೂಷ ಎಂದು ನಾಮಕರಣ ಮಾಡಲಾಯಿತು. ಮಕ್ಕಳನ್ನು ಹೆತ್ತವಳು ತಾಯಿಯಾದರೂ ಹೆಸರಿಡುವವರು ಬೇರೆಯವರೇ ತಾನೆ! 
  ತಂದೆಯಮಾತಿಗೆ ಪ್ರತಿಯಾಡದೇ ತಾಯಿಯ ಶಿರವನ್ನೇ ತರಿದೊಗೆದ ಕೊಡಲಿಯಾಯುಧನ (ಪರಶುರಾಮನ) ತಂದೆಯಗೋತ್ರದಲ್ಲಿ ಜನಿಸಿದ ಈ ಮುಂಗೋಪಿ ಗಂಡನ ಕೈಹಿಡಿದಂದಿನಿಂದಲೂ ನೆರಳಿನಂತೆ ಸಹಚರಳಾಗಿದ್ದು, ಮಾತೃಸ್ವರೂಪಳಾಗಿ ಇಲ್ಲಿಯವರೆವಿಗೂ ನನ್ನನ್ನು ತಾಳ್ಮೆಯಿಂದ ಸಹಿಸಿರುವುದರೊಂದಿಗೆ, ಈಗ ಸಿರಿಭೂವಲಯದ ಅಂತರ್ಸಾಹಿತ್ಯದ ಅಕ್ಷರಸರಪಣಿಯನ್ನು ಹೊರತೆಗೆಯುವಲ್ಲಿ ನನಗಿಂತ ಹೆಚ್ಚು ಉತ್ಸಾಹದಿಂದ ಮುನ್ನುಗ್ಗಿ, ಈ ಕೃತಿರಚನೆಯಲ್ಲಿ ನನಗೆ ನೆರವು ನೀಡಿದ್ದು ಮಾತ್ರವಲ್ಲ; ಇದನ್ನು ಪ್ರಕಟಿಸುವ ಗುರುತರವಾದ ಹೊಣೆಯನ್ನು ಅಕ್ಷರಶಃ ಶ್ರಮವಹಿಸಿ ನಿರ್ವಹಿಸಿರುವ ನನ್ನ ಶ್ರೀಮತಿ ಗಿರಿಜೆಗೂ, ಈ ಯಜ್ಞದ ಫಲವನ್ನು ಆತ್ಮೀಯತೆಯಿಂದ ಸ್ವೀಕರಿಸಿ ನಮಗೆ ಸಾರ್ಥಕತೆಯನ್ನೊದಗಿಸುವ ನನ್ನ ಆತ್ಮೀಯ ಓದುಗರಿಗೂ, ಈ ಪ್ರಯತ್ನದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೆರವಾಗಿರಯವ ಆತ್ಮೀಯರೆಲ್ಲರಿಗೂ ಈಮೂಲಕ ನನ್ನ ತುಂಬುಹೃದಯದ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಸರ್ವಜ್ಞ ಸ್ರೂಪಿಯಾದ ಕುಮುದೇಂದು ಮುನಿಯ ಕೃಪೆಯು ಸಜ್ಜನರೆಲ್ಲರಿಗೂ ಒದಗಿಬಂದು ಈ ಕೃತಿಯ ವಾಚನದಿಂದ ಅವರು ಪಾರಮಾರ್ಥಿಕವಾಗಿ ಹೊಸಮಾನವರಾಗುವಂತಾಗಲೆಂದು ಪ್ರಾರ್ಥಿಸುತ್ತೇನೆ. 

ದಿನಾಂಕ ೧೩ -೦೫- ೨೦೧೩.
                                                   ಸುಧಾರ್ಥಿ ಹಾಸನ. ಸಂಚಾರಿದೂರವಾಣಿ: ೯೪೪೯೯೪೬೨೮೦.    


ಕುಮುದೇಂದುವಿನ ಬಗ್ಗೆ ಸಂಶೋಧನೆ ನಡೆಯಬೇಕಾಗಿದೆ


ನಂದಿಬೆಟ್ಟದ ಸಮೀಪದ ಇಂದಿನ ಯಲವಳ್ಳಿಗೆ ಯಲವ ಯಲವಳಾ ಎಂಬ ಹೆಸರಿದ್ದದ್ದು, ಹಾಗೂ ಅಲ್ಲಿನ ಒಂದು ವಿಸ್ತರಣಕ್ಕೆ ನಂದಗಿರಿಪುರ ಎಂಬ ಹೆಸರಿದ್ದ ವಿಚಾರವು ಸಷ್ಟವಾಗುತ್ತದೆ. ಅಂದರೆ ಕುಮುದೇಂದುವಿನ ೧೫೦೦ ಶಿಷ್ಯರ ಸಮೂಹದ ಅಂದಿನ ವಿಶ್ವವಿದ್ಯಾಲಯದ ಈ ನಗರವು ಬಹಳ ವಿಸ್ತಾರವಾಗಿದ್ದುದು ಸ್ವಾಭಾವಿಕ. ಅಲ್ಲಿನ ಮಂದರತೀರ್ಥ ಚೈತ್ಯಾಲಯದಲ್ಲಿ ಋಷಭದೇವನಾದಿಯಾಗಿ ಕೃಷ್ಣನಪರ್ಯಂತ ತೀರ್ಥಂಕರರು ಹರಿಪೀಠಸ್ಥಿತರಾಗಿದ್ದ ಸಂಗತಿಯು ಸೂಚಿತವಾಗಿದೆ.  ಶಕರಾಯನೃಪಪಾಲಿತ ಪ್ರದೇಶವೆಂಬ ಮಾಹಿತಿಯೂ ಇಲ್ಲಿ ಉಕ್ತವಾಗಿದ್ದು ಇದೊಂದು ಚಾರಿತ್ರಿಕ ಮಹತ್ವದ ಮಾಹಿತಿಯಾಗಿದೆ. ಇತಿಹಾಸಕಾರರು ಈವಿಚಾರವಾಗಿ ಪರಿಶೀಲನೆ ಮಾಡಬಹುದಾದ ಅವಕಾಶವಿದೆ. ಯಲವಳ್ಳಿಯ ಸಮೀಪದಲ್ಲಿ ಹಾದುಹೋಗಿರುವ ಹೆದ್ದಾರಿಯ ಪಕ್ಕದ ಜಮೀನಿನಲ್ಲಿ ಕುಮುದೇಂದುವಿನಬಾವಿ ಎಂಬ ಪ್ರಾಚೀನವಾದ ಬಾವಿಯೊಂದು ಕೆಲದಿನಗಳ ಹಿಂದಿನ ವರೆವಿಗೂ ಅಸ್ಥಿತ್ವದಲ್ಲಿ ವಿಚಾರವನ್ನು ಅಲ್ಲಿನ ಸ್ಥಳೀಯರು ತಿಳಿಸುತ್ತಾರೆ. ಹಂಪೆಯ ಮಾದರಿಯಲ್ಲಿ ಇಲ್ಲಿಯೂ ಸಮರ್ಪಕವಾದ ಉತ್ಕನನವು ನಡೆದಲ್ಲಿ ಕುಮುದೇಂದು ಮುನಿಗೆ ಸಂಬಂಧಿಸಿದ ಚಾರಿತ್ರಿಕ ಮಹತ್ವದ ಅವಶೇಷಗಗಳು ದೊರೆಯುವುದು ಖಚಿತ. ಈವಿಚಾರದತ್ತ ಪ್ರಾಚ್ಯವಸ್ತು ಇಲಾಖೆಯವರು ಗಮನಹರಿಸಬೇಕಾದ ಅಗತ್ಯವಿದೆ. ಆದರೆ ಕುಮುದೇಂದುವೇ ಅಜ್ಞಾತ ವ್ಯಕ್ತಿಯಾಗಿರುವ ಕಾರಣ, ಈಮಾಹಿತಿಗಳಿಗೆ ನಮ್ಮ ವಿಶ್ವವಿದ್ಯಾಲಯದ ವಿದ್ವಾಂಸರಲ್ಲಿ ಮಾನ್ಯತೆ ದೊರೆಯುವುದಾರೂ ಹೇಗೆ?! 

ಸಿರಿಭೂವಲಯಸಾಗರರತ್ನಮಂಜೂಷ ಕೃತಿಗೆ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಮುನ್ನುಡಿ

OLYMPUS DIGITAL CAMERA

    ಸಿರಿಭೂವಲಯಸಾಗರರತ್ನಮಂಜೂಷವು ಕವಿಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯವನ್ನು ಕುರಿತಂತೆ ಹಾಸನದ ಸುಧಾರ್ಥಿಯು ರಚಿಸಿರುವ ಏಳನೇ ಪರಿಚಯಕೃತಿಯಾಗಿದೆ. ಒಬ್ಬ ಪ್ರಾಚೀನ ಕನ್ನಡ ಕವಿಯನ್ನು, ಅವನ ಕಾವ್ಯವನ್ನು ಕುರಿತು     ಇಷ್ಟು ದೀರ್ಘಕಾಲಾವಧಿಯನಂತರ, ಇಷ್ಟು ಅಲ್ಪಕಾಲಾವಧಿಯಲ್ಲಿ ಒಬ್ಬನೇ ಲೇಖಕನ ಪ್ರಯತ್ನದಿಂದ ಈರೀತಿಯ ಏಳು ಪರಿಚಯಕೃತಿಗಳು ಪ್ರಕಟವಾಗಿರುವುದು ಒಂದು ಸಂತೋಷದ ಸಂಗತಿ. ೨೦೧೦ರ ಅನಂತರ ಹಾಸನದ ಸುಧಾರ್ಥಿಯು ನಿರೂಪಿಸಿ ಪ್ರಕಟಿಸಿರುವ ಆರು ಪರಿಚಯಕೃತಿಗಳನ್ನೂ ನಾನು ಗಮನಿಸಿದ್ದೇನೆ. ಸಿರಿಭೂವಲಯದ ವಿಚಾರವಾಗಿ ಇದುವರೆವಿಗೂ ಅಜ್ಞಾತವಾಗಿದ್ದ ಹಲವಾರು ಅಚ್ಚರಿಯ ಮಾಹಿತಿಗಳನ್ನು ಪರಿಚಯಕಾರನು ಈ ಬೃಹತ್ ಕೃತಿಯಲ್ಲಿ ಅಳವಡಿಸಿರುವ  ಅತಿಪ್ರಮುಖವಾದ ವಿಚಾರಗಳ ಸಾರಾಂಶವನ್ನು ನನ್ನ ಓದಿಗೆ ಪ್ರತ್ಯೇಕವಾಗಿ ಒದಗಿಸಿದ್ದು, ಅಲ್ಲಿ ಕಾಣಬರುವ ಹಲವಾರು ಹೊಸವಿಚಾರಗಳು ನನ್ನ ಗಮನ ಸೆಳೆದಿವೆ. ಈ ಕಾರಣದಿಂದಾಗಿ ಈ ಪರಿಚಯಕೃತಿಗೆ ಒಂದೆರಡು ಮಾತುಗಳನ್ನು ಮುನ್ನುಡಿಯಾಗಿ ಬರೆಯಲು ಸಂತೋಷವಾಗಿದೆ.
   ೧೯೪೫ರಲ್ಲಿ ನಾನು ಬೆಂಗಳೂರಿಗೆ ಬಂದು ಖಾಸಗೀ ಕಾಲೇಜೊಂದನ್ನು ಪ್ರಾರಂಭಿಸುವ ಕಾರ್ಯದಲ್ಲಿ ತೊಡಗಿದ್ದಾಗಲೇ ಈ ಸಿರಿಭೂವಲಯಗ್ರಂಥವು ಅಂದಿನ ಹಿರಿಯ, ಕಿರಿಯ ಸಾಹಿತಿಗಳ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದ ಸಂಗತಿ; ಸಿರಿಭೂವಲಯದ ಸಂಶೋಧನೆಯಲ್ಲಿ ಕರ್ಲಮಂಗಲಂ ಶ್ರೀಕಂಠಯ್ಯನವರೂ, ಕನ್ನಡ ಬೆರಳಚ್ಚುಯಂತ್ರಶಿಲ್ಪಿ ಕೆ. ಅನಂತಸುಬ್ಬರಾಯರೂ ತುಂಬಾ ಶ್ರಮವಹಿಸಿ ಗ್ರಂಥದ ಅಂತರಂಗ ಶೋಧನೆಯಲ್ಲಿ ತೊಡಗಿದ್ದ ವಿಚಾರ ಮುಂತಾದುವನ್ನು ಕುರಿತು ನಾನು ಈಗಾಗಲೇ ಒಮ್ಮೆ ಬರೆದದ್ದಾಗಿದೆ. ೧೯೫೩ರ ಸುಮಾರಿನಲ್ಲಿ ಅಕ್ಷರರೂಪದಲ್ಲಿ ಪ್ರಕಟವಾದ ಈ  ಗ್ರಂಥದ ಸ್ವಲ್ಪಭಾಗವು ಅಂದಿನ ದಿನಗಳಲ್ಲಿ ಸಾಕಷ್ಟು ಚರ್ಚೆಯ ವಿಷಯವಾಗಿತ್ತು. ಕನ್ನಡ ಅಂಕಲಿಪಿಯಲ್ಲಿ ರಚನೆಯಾಗಿರುವುದೆಂದು ಪ್ರಚಾರವಾಗಿದ್ದ ಈ ಗ್ರಂಥದ ವಿಚಾರಗಳು ಸಾಕಷ್ಟು ನಿಗೂಢವೆನಿಸಿಕೊಂಡು ಓದಲು ಸುಲಭವಾಗಿರಲಿಲ್ಲ. ಈ ಕಾರಣದಿಂದ ಇದು ಹೆಚ್ಚು ಪ್ರಚಾರಕ್ಕೆ ಬಾರದೇ ಕತ್ತಲೆಯಕೋಣೆ ಸೇರಿತ್ತು. ೨೦೦೩ರಲ್ಲಿ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದ ಶ್ರೀ ವೈ.ಕೆ.ಮೋಹನ್ ಅವರು ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸುವ ಆಲೋಚನೆ ಕೈಗೊಂಡಾಗ, ಗ್ರಂಥದ ಚಮತ್ಕಾರರೂಪವನ್ನು ತಿಳಿದಿದ್ದ ನಾನು ಅವರಿಗೆ ಡಾ| ಟಿ.ವಿ. ವೆಂಕಟಾಚಲಶಾಸ್ತ್ರಿಗಳ ಸಹಾಯಪಡೆಯುವಂತೆ ಸೂಚಿಸಿದ್ದೆ. ಅದರಂತೆ ಡಾ| ವೆಂಕಟಾಚಲಶಾಸ್ತ್ರಿಗಳೂ, ಡಾ| ಮರುಳಯ್ಯನವರೂ, ಡಾ|ಗಣೇಶ್ ಅವರೂ ಸೇರಿ ತಮ್ಮ ಅರಿವಿಗೆ ದೊರೆತ ಅಂಶಗಳನ್ನು ಸೇರಿಸಿ ಲೇಖನಗಳನ್ನು ಬರೆದರು. ಪುಸ್ತಕಶಕ್ತಿಪ್ರಕಾಶನದವರು ಅವುಗಳನ್ನು ಸೇರಿಸಿ ಕೆಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
   ಈಚೆಗೆ ಹಾಸನದ ಸುಧಾರ್ಥಿಯು ರೂಪಿಸಿ ಪ್ರಕಟಿಸಿರುವ ಸಿರಿಭೂವಲಯಸಾರ ಸಿರಿಭೂವಲಯದ ಸಾಂಗತ್ಯಪದ್ಯಗಳ ಸಂಗ್ರಹ ಸಿರಿಭೂವಲಯ ಒಂದು ಮಿಂಚುನೋಟ  ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ ಸಿರಿಭೂವಲಯಕೀ ಏಕ್ ಝಾಂಕಿ ಸಿರಿಭೂವಲಯದ ಒಳನೋಟ ಎಂಬ ಪರಿಚಯ ಕೃತಿಗಳು ಈ ನಿಗೂಢಗ್ರಂಥದ ವಿಚಾರವಾಗಿ ಸಾಕಷ್ಟು ವಿವರವಾದ, ಸರಳವಾದ ಪರಿಚಯ ನೀಡುವ ಮೂಲಕ ಗ್ರಂಥದ ಅಂತರಂಗವನ್ನು ಸಾಮಾನ್ಯ ಓದುಗರಿಗೆ ತಿಳಿಸುವ ಕಾರ್ಯದಲ್ಲಿ ಸಾರ್ಥಕತೆ ಪಡೆದಿವೆ. ಸಾಮಾನ್ಯ ಓದುಗರಿಗೂ ಈಗ ಕುಮುದೇಂದು ಮುನಿ ಹಾಗೂ ಅವನ ಸಿರಿಭೂವಲಯವು ಸಾಕಷ್ಟು ಸಮೀಪವಾಗಿರುವುದು ಖಚಿತ. ಅಂಕ ಚಕ್ರಗಳ ಭೂವಲಯ, ಅಕ್ಷರಭೂವಲಯ, ಇವುಗಳ ಮೂಲಸಂಶೋಧನೆ, ಅವುಗಳ ಕೆಲವೊಂದು ಭಾಗವು ರಾಷ್ರೀಯ ಪ್ರಾಚ್ಯಪತ್ರಾಗಾರದಲ್ಲಿ ಸಂರಕ್ಷಿತವಾಗಿರುವ ವಿಚಾರ, ಸಂಶೋಧನೆಯ ವಿಚಾರದಲ್ಲಿ ಕಾಣಬರುವ ಗೊಂದಲಗಳು, ಇತ್ಯಾದಿ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಸುಧಾರ್ಥಿಯು ತರ್ಕಬದ್ಧವಾಗಿ ನಿರೂಪಿಸಿರುವ ಮಾಹಿತಿಗಳು ಆಸಕ್ತಿದಾಯಕವಾಗಿವೆ., ನಿಗೂಢವಾಗಿವೆ. ಈ ಮಾಹಿತಿಗಳಿಗೆ ಸಮ್ಮತಿಸುವುದೂ; ಸಮ್ಮತಿಸದಿರುವುದೂ ಓದುಗರ ವಿವೇಚನೆಗೆ ಬಿಟ್ಟದ್ದು.
  ೧೯೫೩ರಲ್ಲಿ ಪ್ರಕಟವಾದ ಸಿರಿಭೂವಲಯದ ಅಕ್ಷರಮುದ್ರಣವನ್ನು ಸರಳವಾಗಿ ಓದಿತಿಳಿಯುವುದು ಕಠಿಣವಾದ, ಹಾಗೂ ಹೆಚ್ಚಿನ ಸಮಯನಿರೀಕ್ಷಿಸುವ ಕಾರ್ಯವಾಗಿದ್ದ ಕಾರಣದಿಂದ ಅದರಲ್ಲಿನ ವಿವರಗಳು ಕತ್ತಲಕೋಣೆಸೇರುವಂತಾಗಿತ್ತು.  ಈಚೆಗೆ  ಪುಸ್ತಕಶಕ್ತಿಪ್ರಕಾಶನದವರು ಪರಿಷ್ಕರಿಸಿ ಮಾಡಿದ ಮರುಮುದ್ರಣದ ಪ್ರಯತ್ನದಿಂದಲೂ ಪರಿಸ್ಥಿಯು ಬದಲಾಗಲಿಲ್ಲ. ಈ ಗ್ರಂಥದಲ್ಲಿ ಅಡಕವಾಗಿರುವ ಕೆಲವೊಂದು ಪ್ರಮುಖ ವಿಚಾರಗಳನ್ನಾದರೂ ಓದಿ ತಿಳಿಯದೇ,  ಕುಮುದೆಂದುವಿನ ಸಿರಿಭೂವಲಯ ಗ್ರಂಥವು ಸರ್ವಭಾಷಾಮಯಿ, ಸರ್ವಜ್ಞಾನಮಯಿ, ಸರ್ವಶಾಸ್ತ್ರಮಯಿ ಎಂಬ ಹೇಳಿಕೆಗೆ ಸಮ್ಮತಿಸುವುದು ಸಾಧ್ಯವಿರದ ಸಂಗತಿಯಾಗಿತ್ತು. ಈಗ ಸುಧಾರ್ಥಿಯು ನಿರೂಪಿಸಿರುವ ಸಿರಿಭೂವಲಯ ಸಂಬಂಧವಾದ ಪರಿಚಯ ಕೃತಿಗಳ ಅವಲೋಕನದಿಂದ ಈ ಹೇಳಿಕೆಯನ್ನು ಏಕಾಏಕಿ ನಿರಾಕರಿಸಲು ಸಾಧ್ಯವಾಗದೆಂಬ ಪರಿಸರ ನಿರ್ಮಾಣವಾಗಿರುವುದು ನಿಶ್ಚಯ. ಮೇಲಿನ ಎರಡು ಪ್ರಯತ್ನಗಳಲ್ಲಿ ಪ್ರಕಟವಾಗಿದ್ದ ಕೆಲವಾರು ಮಾಹಿತಿಗಳಗಿಂತಲೂ ಹೊಸದಾದ, ಖಚಿತವಾದ, ಹಲವಾರು ಮೌಲಿಕ ಮಾಹಿತಿಗಳನ್ನು ಸುಧಾರ್ಥಿಯ  ಕೃತಿಗಳಲ್ಲಿ ಓದುಗರು  ಕಾಣಬಹುದಾಗಿದೆ.
  ಕಾವ್ಯದಲ್ಲಿ ಬಳಕೆಯಾಗಿರುವ ಛಂದಸ್ಸು ಹಾಗೂ ಭಾಷೆಯ ಸ್ವರೂಪದ ಆಧಾರದಲ್ಲಿ, ಕವಿ ಮತ್ತು ಕಾವ್ಯದ ಕಾಲವನ್ನು ಕುರಿತು ಇನ್ನೂ ಖಚಿತವಾದ ನಿರ್ಧಾರವಾಗಿಲ್ಲ. ಕಾವ್ಯದಲ್ಲಿ ಪದೇಪದೇ ಕಾಣಬರುವ ಗಂಗರಸ ಸೈಗೊಟ್ಟ ಸಿವಮಾರ ಹಾಗೂ ಮಾನ್ಯಖೇಟದ ಅಮೋಘವರ್ಷ, ಧವಳಗ್ರಂಥಗಳ ಕರ್ತೃ ವೀರಸೇನಾಚಾರ್ಯ, ಮಹಾಪುರಾಣದ ಕರ್ತೃ ಜಿನಸೇನಾಚಾರ್ಯ ಮುಂತಾದವರ ವಿಚಾರದಲ್ಲಿ ಚಾರಿತ್ರಿಕವಾಗಿ ನಿರ್ಧಾರವಾಗಿರುವ ಕಾಲಮಾನದ ಆಧಾರದಲ್ಲಿ ಕವಿ ಹಾಗೂ ಕಾವ್ಯವು ಒಂಬತ್ತನೇ ಶತಮಾನದಿಂದ ಈಚಿನದಲ್ಲ ಎಂಬ ಡಾ| ಎಸ್. ಶ್ರೀಕಂಠಶಾಸ್ತ್ರಿಯವರ ಖಚಿತ ಹೇಳಿಕೆಯು ಗಮನಾರ್ಹವಾದುದು. ಸ್ವತಃ ಕವಿಯೇ ತಾನು ಮಹಾವೀರನ ನಿರ್ವಾಣಾನಂತರ ಸಾವಿರದ ಒಂದೂವರೆ ವರ್ಷಕ್ಕೆ ಸರಿಯಾಗಿ ಸಿರಿಭೂವಲಯದ ರಚನೆಮಾಡಿರುವೆನೆಂದು ಸೂಚಿಸಿರುವ ಮಾಹಿತಿಯ ಆಧಾರದಲ್ಲಿ ಮಹಾವೀರನ ಕಾಲನಿರ್ಣಯದಲ್ಲಿ ಕಾಣಬರುವ ಗೊಂದಲವನ್ನು ಸೂಚಿಸಿ, ಸುಧಾರ್ಥಿಯು ವಿವರವಾಗಿ ಚರ್ಚಿಸಿ, ಕವಿ ಹಾಗೂ ಕಾವ್ಯದ ಕಾಲವು ಕ್ರಿ.ಶ. ೮೦೦ ರ ಸುಮಾರಿನದೆಂಬ ಅಂಶವನ್ನು ಬಲವಾಗಿ ಸಮರ್ಥಿಸಿರುವುದನ್ನು ಸಂಬಂಧಿಸಿದವರು ಸೂಕ್ತವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ.
   ಸಿರಿಭೂವಲಯದಲ್ಲಿ ೭೧೮ ಭಾಷೆಗಳ ಸಾಹಿತ್ಯವು ಅಡಕವಾಗಿರುವುದೆಂಬ ಕಾರಣದಿಂದ ಪ್ರಚಾರಕ್ಕೆ ಬಂದಿರುವ ಸರ್ವಭಾಷಾಮಯೀ ಎಂಬುದನ್ನು ಒಪ್ಪುವುದೂಕೂಡ ಅವರವರ ನಿರ್ಧಾರಕ್ಕೆ ಬಿಟ್ಟವಿಚಾರ. ಆದರೆ, ಅಂತರ್ಸಾಹಿತ್ಯರೂಪದಲ್ಲಿ ಈಗಾಗಲೇ ಸಂಸ್ಕೃತ, ಪ್ರಾಕೃತ, ಮಾಗಧಿ, ಅರ್ಧಮಾಗಧಿ, ಶೂರಸೇನಿ, ಪಾಳಿ ಮುಂತಾದ ಹಲವಾರು ಭಾಷಾ ಸಾಹಿತ್ಯದ ತುಣುಕುಗಳನ್ನು ಉದಾಹರಣೆಗಾಗಿ ತೋರಿಸಿರುವ ಹಿನ್ನೆಲೆಯಲ್ಲಿ, ಕಾವ್ಯದಲ್ಲಿ ಬೇರೆ ಬೇರೆ ಭಾಷೆಯ ಅಂತರ್ಸಾಹಿತ್ಯವು ಉಗಮವಾಗುವ ಕ್ರಮವನ್ನು ಗಮನಿಸಿದಾಗ ಉಳಿದ ಭಾಷೆಗಳ ಸಾಹಿತ್ಯವೂ ಉಗಮವಾಗುವ ಸಂಗತಿಯನ್ನು ನಿರಾಕರಿಸಲು ಸಾಧ್ಯವೆ? ಒಟ್ಟು ಗ್ರಂಥದ ವ್ಯಾಪ್ತಿಯು ಆರುಲಕ್ಷ ಮೂಲ ಕನ್ನಡ ಶ್ಲೋಕಗಳು ಎಂಬ ಮಾಹಿತಿನ್ನು ಒಪ್ಪಿ, ಅವುಗಳ ಪೈಕಿ ಈಗ ಸುಲಭವಾಗಿ ಓದಲು ಸಾಧ್ಯವಾಗುವ ಕ್ರಮದಲ್ಲಿ ಪ್ರಕಟವಾಗಿರುವುದು ಸುಮಾರು ೨೧೦೦೦ ಪದ್ಯಗಳು ಮಾತ್ರ ಎಂಬ ಮಾಹಿತಿಯ ಆಧಾರದಲ್ಲಿ ಗಮನಿಸಿದಾಗ, ಇಲ್ಲಿ ಉಗಮವಾಗಿರುವ ಅಂತರ್ಸಾಹಿತ್ಯದ ವ್ಯಾಪ್ತಿಯನ್ನು ನೋಡಿದಾಗ, ಗ್ರಂಥವು ಸಮಗ್ರವಾಗಿ ಪ್ರಕಟವಾದಲ್ಲಿ ಕವಿಯ ಹೇಳಿಕೆಯಂತೆ ಸಾವಿರದಂಟು ಭಾಷೆಗಳಿದ್ದರೂ ಅವುಗಳ ಸಾಹಿತ್ಯವನ್ನು ಸಿರಿಭೂವಲಯವು ಕಟ್ಟರಿಸಿದೆ ಎಂಬುದನ್ನು ನಿರಾಕರಿಸುವುದು ಸುಲಭವಲ್ಲ.
     ಕುಮುದೇಂದುಮುನಿಯು ತನ್ನ ಸಿರಿಭೂವಲಯದಲ್ಲಿ ಅಣುವಿಜ್ಞಾನದ ಮಾಹಿತಿಯನ್ನು ಕನ್ನಡದಲ್ಲಿ ಬಹಳ ಸರಳವಾಗಿ ವಿವರಿಸಿದ್ದಾನೆ. (ಊ೨o) ಎಂಬ  ಆಧುನಿಕ ವಿಜ್ಞಾನ ಸೂತ್ರದ ಕನ್ನಡ ಅವತರಣಿಕೆಯನ್ನು ನಾವು ಸಿರಿಭೂವಲಯದಲ್ಲಿ ಸ್ಪಷ್ಟವಾಗಿ ಕಾಣಬಹುದು! ಅಣುವು ನೀರೊಳಗೆಷ್ಟು|ಅನಲವಾಯುಗಳೆಷ್ಟು| ನೆನೆದು ಸುಡದ ಅಣುವೆಷ್ಟು| ಮುಂತಾಗಿ ವಿವರಿಸಿದ್ದಾನೆ. ತನುವನು ಆಕಾಶಕೆ ಹಾರಿಸಿ ನಿಲಿಸುವ ಘನವೈಮಾನಿಕ ಕಾವ್ಯ ಎಂಬಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ವಿಚಾರವನ್ನು ಸೂಚಿಸಿದ್ದಾನೆ. ಇಂದಿನ ಜಗತ್ತಿನ ಅತ್ಯಾಧುನಿಕವಾದ ಗಣಕಯಂತ್ರ ಕ್ರಮ ಹಾಗೂ ಮೊಬೈಲ್ ತಂತ್ರಜ್ಞಾನವೂ ಕುಮುದೇಂದುವಿಗೆ ಕರತಲಾಮಲಕವಾಗಿದ್ದ ವಿಚಾರ. ಯವೆಯಕಾಳಿನ ಕ್ಷೇತ್ರದಳತೆಯೊಳಡಗಿಸಿ..  ; ಜೋಡಿಯಂಕದ ಕೂಟದಂಗ ಎಂಬಲ್ಲಿ ಈ ವಿಚಾರವು ನಿರೂಪಿತವಾಗಿದೆ. ಕಟ್ಟಡ ನಿರ್ಮಾಣ ತಂತ್ರಜ್ಞಾನ ಹಾಗೂ ಭೂಮಾಪನ ವಿಜ್ಞಾನಕ್ಕೆ  (ಸರ್ವೆ) ಸಂಬಂಧಿಸಿದ ವಿವರಗಳು ಗ್ರಂಥದಲ್ಲಿ ಅಡಗಿವೆಎಂದು ಸಿರಿಭೂವಲಯಸಾರದಲ್ಲಿ  ಸುಧಾರ್ಥಿ ಪರಿಚಯಿಸಿರುವುದಿದೆ.
  ಪ್ರಕೃತ ಸಿರಿಭೂವಲಯ ಸಾಗರರತ್ನಮಂಜೂಷದಲ್ಲಿ ಇನ್ನೂ ಮುಂದುವರೆದು ದೂರವಾಣಿ, ಆಕಾಶವಾಣಿ, ದೂರದರ್ಶನ, ಮುಂತಾದ ಸಮೂಹಮಾಧ್ಯಮಗಳು ಆಧುನಿಕ ವಿಜ್ಞಾನದ ಸಾಧನೆಗಳು ಎಂಬ ತಪ್ಪುಗ್ರಹಿಕೆಯು ಜಗತ್ತಿನಲ್ಲಿ ತುಂಬಿದೆ! ಆದರೆ ಈ ತಂತ್ರಜ್ಞಾನದ ನೈಪುಣ್ಯವನ್ನು ಹೊಂದಿದ್ದ ಕುಮುದಚಂದ್ರನ (ಕುಮುದೆಂದುವಿನ) ಪ್ರತಿಭೆಗೆ ತಲಕಾಡಿನ ಗಂಗರಸ ಸೈಗೊಟ್ಟ ಸಿವಮಾರನೂ, ರಾಷ್ಟ್ರಕೂಟ ಅಮೋಘವರ್ಷ ನೃಪತುಂಗನೂ ಮೆಚ್ಚುಗೆ ಸೂಚಿಸಿದ್ದ ಸಂಗತಿ, ಈರೀತಿಯ ಯಶಸ್ಸು ಹಾಗೂ ಕೀರ್ತಿಯಿಂದ  ಪಡೆಯಬಹುದಾದ ಅಪಾರ ಸಂಪತ್ತನ್ನು ಕಾಲಿನಿಂದ ಒದೆಯುವ ಮುನಿವಂಶದವರ ಭೂವಲಯ ಎಂಬುದಾಗಿ ಸಿರಿಭೂವಲಯವು ಸೂಚಿಸಿದೆ! ನೋಡಿ: ೩೬ನೇ ಅಧ್ಯಾಯದ  ಪೂರ್ಣಪದ್ಯಗಳ ಅಶ್ವಗತಿಯ ಅಂತರ್ಸಾಹಿತ್ಯ ಪದ್ಯಸಂಖ್ಯೆ ೫೨-೫೪. ಪಾರಮಾರ್ಥಿಕವಾಗಿ ನಿರುಪಯೋಗಿಯಾದ ಇಂಥ ಲೌಕಿಕ ಸಂಪತ್ತನ್ನು ಕುಮುದೆಂದುಮುನಿಯು ಕಾಲಿನಿಂದ ಒದ್ದು, ಪರಮಾರ್ಥದೆಡೆಗೆ ಸಾಗಿದ್ದಾನೆ.  ಎಂಬ ವಿಚಾರವನ್ನೂ, ಆಧುನಿಕ ವೈದ್ಯಕೀಯ ವಿಜ್ಞಾನವು ವ್ಯಾಸೆಕ್ಟಮಿ ಟ್ಯೂಬೆಕ್ಟಮಿ ಎಂಬ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನೂತನವಾಗಿ ರೂಪಿಸಿದೆ ಎಂಬ ವಿಚಾರವು ಲೋಕಪ್ರಸಿದ್ಧಿ ಪಡೆದಿದೆ. ಆದರೆ ನಮ್ಮ ಪೂರ್ವಿಕರಿಗೆ ಪ್ರಾಚೀನಕಾಲದಲ್ಲೇ ಈ ತಂತ್ರಜ್ಞಾನವು ತಿಳಿದಿದ್ದ ಸಂಗತಿಯಾಗಿತ್ತೆಂದರೆ ಅಚ್ಚರಿಯ ವಿಚಾರವಾಗಬಹುದು. ಅದನ್ನು ಯಾರೂ ನಂಬಲಾರರು! ಆದರೆ ಕುಮುದೇಂದುಮುನಿಯು ಕಟ್ಟಿರಿಸಿರುವ ಪ್ರಾಚೀನ ಗ್ರಂಥಮಾಹಿತಿಯಂತೆ ಇದು ಸತ್ಯ ಸಂಗತಿಯಾಗಿದೆ. ಈ ತಂತ್ರಜ್ಞಾನವನ್ನು ಲಿಂಗಛೇಧನವಿಜ್ಞಾನ ಎಂದು ಸೂಚಿಸಲಾಗಿದೆ. ನೋಡಿ: ೪೫ನೇ ಅಧ್ಯಾಯದ ಅಶ್ವಗತಿಯ ಅಂತರ್ಸಾಹಿತ್ಯ ಪದ್ಯ ಸಂಖ್ಯೆ ೫೪.  ಎಂಬ ಮಾಹಿತಿಯನ್ನು ಸುಧಾರ್ಥಿಯು ನೀಡಿರುವುದಿದೆ.  ಇಂಥ ಹೊಸ ಹೊಸ ಮಾಹಿತಿಗಳನ್ನು ಗ್ರಂಥದಲ್ಲಿ ಪ್ರತ್ಯಕ್ಷವಾಗಿ ಗಮನಿಸಿದಾಗ, ಸರ್ವಶಾಸ್ತ್ರಮಯಿ ಎಂಬ ಹೇಳಿಕೆಯನ್ನು ಹೇಗೆ ನಿರಾಕರಿಸಲಾದೀತು?
  ಸಿರಿಭೂವಲಯವು ಪ್ರಾಚೀನ ಕಾಲದಿಂದ ಮಾತ್ರವಲ್ಲ: ಇಂದಿಗೂ ಅಪರಿಚಿತವಾದ ಕೃತಿಯಾಗಿಯೇ ಉಳಿದಿರುವುದನ್ನು ಕುರಿತು ಸುಧಾರ್ಥಿಯು ಮಾಡಿರುವ ವಿಶ್ಲೇಷಣೆಯೂ ಸ್ವಾರಸ್ಯವಾಗಿದೆ!  ಮಾನವಕುಲದ ಜೀವನಪ್ರವಾಹದಲ್ಲಿ ಋಗ್ವೇದವು ಅತ್ಯಂತ ಪ್ರಾಚೀನವಾದ ಜ್ಞಾನಮೂಲವೆಂಬ ಸಂಗತಿಯನ್ನು ಸಂಶಯಾತೀತವಾಗಿ ನಿರೂಪಿಸುವಲ್ಲಿ ಕುಮುದೇಂದುಮುನಿಯ ಸಿರಿಭೂವಲಯವು ಪ್ರತ್ಯಕ್ಷ ಸಾಕ್ಷಿಯಾಗಿದೆ. ಜೈನಸಂಪ್ರದಾಯವು ಎಷ್ಟೇ ಕೋಟ್ಯಾಂತರ ವರ್ಷಗಳ ಪ್ರಾಚೀನ ಪರಂಪರೆಯನ್ನು ಹೊಂದಿದ್ದರೂ ಈ ಸಂಪ್ರದಾಯದ ಮೂಲ ಬೇರಿರುವುದು ವೇದೋಪನಿಷತ್ತುಗಳಲ್ಲಿಯೇ. ಈ ವೇದೋಪನಿಷತ್ತುಗಳೆಲ್ಲವೂ ಪಾವನ ತೀರ್ಥಗಳೆಂದೇ ಕುಮುದೆಂದು ಮುನಿಯು ಖಚಿತವಾಗಿ ನಿರೂಪಿಸಿರುವುದನ್ನು ಕಾಣಬಹುದು. ಸಿರಿಭೂವಲಯದ ಪ್ರಥಮಕಾಂಡದಲ್ಲಿ ಋಗ್‌ವೇದಕ್ಕೆ ಸಂಬಂಧಿಸಿದಂತೆ ಋಗ್ವೇದ, ಋಗ್‌ಭೂವಲಯ ಋಗ್, ಮುಂತಾದ ಶಬ್ದಗಳು ಸಾವಿರಾರುಸಲ ಪ್ರಯೋಗವಾಗಿರುವುದನ್ನು ಗಮನಿಸಬೇಕು.  ಕುಮುದೇಂದುಮುನಿಯು ಋಗ್ವೇದದ ಮಹತ್ವವನ್ನು ಸಮರ್ಪಕವಾಗಿ ಅರಿತವನು. ಮಹಾಬಂಧ ವು ಸಿರಿಭೂವಲಯದ ಪ್ರಾಚೀನ ಹೆಸರೆಂಬುದು ಸ್ಪಷ್ಟವಿದೆ. ಕುಮುದೇಂದುಮುನಿಯು ಈ ಮಹಾಬಂಧ ಯಾವುದೆಂಬುದನ್ನು ಖಚಿತವಾಗಿ ನಿರೂಪಿಸಿದ್ದಾನೆ. ನೋಡಿ: ೫೮ನೇ ಅಧ್ಯಾಯದ ೧೩೪ನೇ ಪದ್ಯ. ಋಗ್‌ಮಹಾಬಂಧ ಎಂಬ ಇಲ್ಲಿನ ವಿವರಣೆಯ ಮೂಲಕ ಜೈನ ಸಂಪ್ರದಾಯದ ಸಕಲ ಶಾಸ್ತ್ರ ಗ್ರಂಥಗಳಿಗೂ ಋಗ್‌ವೇದವೇ ಮೂಲ ಆಕರ ಎಂಬ ಮೂಲ ಸತ್ಯವನ್ನು ಖಚಿತ ಗೊಳಿಸಿದ್ದಾನೆ. ಇಂಥ ಮಾಹಿತಿಗಳ ಪರಿಚಯದಿಂದಾಗಿಯೇ ಡಾ| ಎಸ್. ಶ್ರೀಕಂಠಶಾಸ್ತ್ರಿಯವರು ಹಾಗೂ ಸತ್ಯ ಪತ್ರಿಕೆಯವರು ೬೦ ವರ್ಷಗಳಿಗೆ ಹಿಂದೆಯೇ ಈ ವಿಚಾರವಾಗಿ ತಮ್ಮ ಖಚಿತ ಅಭೀಪ್ರಾಯ ಸೂಚಿಸಲು ಅವಕಾಶವಾಗಿದೆ. ಆದರೆ ಕಳೆದ ೬೦ ವರ್ಷಗಳಿದಲೂ ಜೈನ ಸಂಪ್ರದಾಯದವರಾಗಲೀ; ವೈದಿಕಸಂಪ್ರದಾಯದವರಾಗಲೀ  ಈವಿಚಾರವಾಗಿ ಚಕಾರವೆತ್ತಿಲ್ಲವೆಂಬುದು ಗಮನಾರ್ಹ ಸಂಗತಿಯಾಗಿದೆ! ಈ ಎರಡೂ ಸಂಪ್ರದಾಯಗಳವರೂ  ತಾವು ಹಾಗೂ ತಮ್ಮ ತತ್ವಸಿಂದ್ಧಾಂತಗಳೇ ಸರ್ವಶ್ರೇಷ್ಠ ಎಂಬ ಮೇಲರಿಮೆಯ ಹುಚ್ಚು ಹೊಳೆಯ ಸೆಳತಕ್ಕೆ ಸಿಲುಕಿ, ಜಗತ್ತಿನ ಈ ಪ್ರಾಚೀನ ಅಮೂಲ್ಯ ಜ್ಞಾನರತ್ನವು ಆಸಕ್ತರ ಅವಗಾಹನೆಗೂ ಸುಲಭಾಗಿ ಸಿಗದಂತಾಗಿದ್ದಿತು. ಈಗ ಪ್ರಥಮ ಖಂಡವಾದರೂ ಪೂರ್ಣವಾಗಿ ಲಭಿಸಿರುವುದು ಸಂತಸದ ಸಂಗತಿ. ಎಂಬ ವಿಶ್ಲೇಷಣೆಯು ಕೆಲವರಿಗೆ ರುಚಿಸದಿರಬಹುದು.
  ಜಾಮದಗ್ನ್ಯಾವತ್ಸಸಗೋತ್ರದ ಸುಧಾರ್ಥಿಯು ಬಹಳವಾಗಿ ಗೌರವಿಸುವ ಕೋಟ ವಾಸುದೇವ ಕಾರಂತರು, ಡಾ| ಮಳಿಯೆ ಗೋಪಾಲಕೃಷ್ಣರಾಯರು, ಕರ್ಲಮಂಗಲಂ ಶ್ರೀಕಂಠಯ್ಯನವರು, ಕೆ. ಅನಂತಸುಬ್ಬರಾಯರು ಮುಂತಾದ ಹಿಂದಿನ ತಲೆಮಾರಿನ ಹಿರಿಯರು ತಾವು ಹಿಡಿದಕಾರ್ಯವನ್ನು ಬಿಡದೇ ಪಟ್ಟುಹಿಡಿದು ಸಾಧಿಸುವ ಛಲಗಾರರು. ಇಂಥವರ ಜೀವನಾದರ್ಶವನ್ನು ಅನುಸರಿಸುವ ಸುಧಾರ್ಥಿಯಲ್ಲೂ ಈ ಹಟದಗುಣ ಮೈಗೂಡಿರುವುದು ಸಹಜ. ಕುಮುದೇಂದುವೂ ಕೂಡ ಸಿರಿಭೂವಲಯವನ್ನು ಛಲಗಾರನಿಗೆ ಒಲಿಯುವ ಕಾವ್ಯ ಎಂದು ಸೂಚಿಸಿರುವುದರಿಂದ ಈ ಪರಿಚಯ ಗ್ರಂಥಗಳ ನಿರೂಪಣೆಯಲ್ಲಿ ಈ ವ್ಯಕ್ತಿಯು ಪಡೆದಿರುವ ಸಾರ್ಥಕತೆ ಸಹಜವಾಗಿದೆ.
  ನಾನು ಕೈಗೊಂಡಿರುವ ಈ ಕಾರ್ಯವು ಕೇವಲ ಸಿರಿಭೂವಲಯದ ಪರಿಚಯಮಾತ್ರ. ಇದು ಸಂಶೋಧನೆಯಲ್ಲ. ಸಮಗ್ರವಾದ, ಸಮರ್ಪಕವಾದ ಸಂಶೋಧನೆಯು ನಡೆಯಲು ಬಹುಭಾಷಾವಿಶಾರದರಾದ ಹಲವಾರು ವಿದಾಂಸರ ಸಮೂಹವೇ ಕಾರ್ಯನಿರ್ವಹಿಸಬೇಕು. ಇದು ವಿಶ್ವವಿದ್ಯಾಲಯಗಳು ಆಸಕ್ತಿವಹಿಸಿ ಮಾಡಬೇಕಾದ ಮಹತ್ಕಾರ್ಯ. ಒಬ್ಬ ವ್ಯಕ್ತಿಯು ಮಾಡಬಹುದಾದ ಪರಿಚಯದ ಕಾರ್ಯವನ್ನು ನನಗೆ ಸಾಧ್ಯವಿರುವ ಮಟ್ಟಿಗೆ ನಿರ್ವಹಿಸದ್ದೇನೆ ಎಂದು ಸೂಚಿಸುವ ಸುಧಾರ್ಥಿಗೆ ಈ ಮಹನ್ ಗ್ರಂಥದಲ್ಲಿ ಅತಂರ್ಗತವಾಗಿರುವ ಅಮೂಲ್ಯ ಮಾಹಿತಿಗಳು ಬೆಳಕುಕಾಣಬೇಕೆಂಬ ಆಕಾಂಕ್ಷೆ ತೀವ್ರವಾಗಿದೆ. ಸಮಕಾಲೀನ ಸಾಹಿತ್ಯ ಸಮೂಹವು ಈದಿಸೆಯಲ್ಲಿ ಸೂಕ್ತ ಗಮನಹರಿಸದಿರುವುದನ್ನು ಕುರಿತು ತೀವ್ರವಾಧ ಅಸಮಾಧಾನವೂ ತುಂಬಿದೆ. ಈಕಾರಣದಿಂದಾಗಿ ಇಲ್ಲಿನ ಬರಹದಲ್ಲಿ ಸಾಕಷ್ಟು ಕಾಠಿನ್ಯ ತುಂಬಿರುವುದೂ ಇದೆ.   ಉದಾಹರಣೆಗೆ ಈ ವಾಕ್ಯಗಳನ್ನು ಗಮನಿಸಬಹುದು: ಈ ಮೊದಲೇ ಒಮ್ಮೆ ಸೂಚಿಸಿರುವಂತೆ ಪೂರ್ಣಪದ್ಯ ಹಾಗೂ ಪಾದ ಪದ್ಯಗಳ ಅಶ್ವಗತಿಯ  ಅಂತರ್ಸಾಹಿತ್ಯವನ್ನು ಗುರುತಿಸುವಾಗ ಎರಡು ಅಥವಾ ಅದಕ್ಕೂ ಹೆಚ್ಚಿನ ಬೇರೆ ಬೇರೆ ಕಾವ್ಯಭಾಗಗಳು ಒಟ್ಟೊಟ್ಟಿಗೇ ಪ್ರವಹಿಸಿರುವಂತೆ ಕಾಣುತ್ತದೆ. ಪ್ರಾಚೀನ ಕನ್ನಡ, ಸಂಸ್ಕೃತ, ಪ್ರಾಕೃತ ಸಾಹಿತ್ಯಗಳ ಪರಿಚಯವಿರುವವರು ಮಾತ್ರ ಇಲ್ಲಿನ ಅಂತರ್ಸಾಹಿತ್ಯವನ್ನು ಕ್ರಮಬದ್ಧವಾಗಿ ಬಿಡಿಸಲು ಸಾಧ್ಯವಾಗುತ್ತದೆ. ನಮ್ಮ ಸಮಕಾಲೀನ ವಿದ್ವಾಂಸರು ಈ ವಿಚಾರವಾಗಿ ಆಸಕ್ತಿವಹಿಸಿ, ಹೊಸವಿಚಾರಗಳನ್ನು ಹೊರತೆಗೆಯುವ ಕಾರ್ಯಕ್ಕೆ ಕೈಹಾಕುವರೆಂಬ ನಂಬಿಕೆ ನನಗಿಲ್ಲ. ಕನ್ನಡದ ಹೆಮ್ಮೆಯನ್ನು ಜಗದ್ವಿಖ್ಯಾತಗೊಳಿಸುವ ಆಕಾಂಕ್ಷೆಹೊಂದಿ, ಮುಂದೆ ಹುಟ್ಟಿಬರುವ ಯಾರಾದರೂ ಪ್ರತಿಭಾಶಾಲಿಯು ಈ ಕಠಿಣವಾದ ಕಾರ್ಯಕ್ಕೆ ಪ್ರಯತ್ನಿಸಬಹುದೇನೋ ಎಂಬ ಆಶೆಯಿಂದ ನಾನು ಈ ಕಾಯಕ ನಡೆಸಿದ್ದೇನೆ. ಸರಳವಾಗಿ ಇಂದಿನ ಲಿಪಿಕ್ರಮದಲ್ಲೇ ಓದಿತಿಳಿಯಬಹುದಾದ ಆವೃತಿಯು ಸಿರಿಭೂವಲಯಸಾರ ಎಂಬುದಾಗಿ ೨೦೧೦ರಲ್ಲೇ ಪ್ರಕಟವಾಗಿದ್ದರೂ ಇದುವರೆವಿಗೆ ಯಾರೊಬ್ಬ ಸಂಸ್ಕೃತ ಅಥವಾ ಪ್ರಾಕೃತಭಾಷಾ ವಿದ್ವಾಂಸರೂ ಇಲ್ಲಿನ ಮಾಹಿತಿಯ ತಪ್ಪು ಒಪ್ಪುಗಳನ್ನು ಕುರಿತು ತಮ್ಮ ತುಟಿಬಿಚ್ಚದಿರುವುದರಿಂದ ನಾನು ಈ ಅನಿಸಿಕೆಯನ್ನು ವ್ಯಕ್ತಗೊಳಿಸುವುದು ಅನಿವಾರ್ಯವಾಗಿದೆ. ವೈದಿಕ ಸಂಪ್ರದಾಯದವರಿಗೆ ಪ್ರಾಕೃತಭಾಷೆಯ ವಿಚಾರವಾಗಿ ಹೆಚ್ಚಿನ ಒಲವಿಲ್ಲದಿರುವುದು ಸಹಜಸಂಗತಿ. ಆದರೆ, ತಮ್ಮ ಸಂಪ್ರದಾಯದ ಧಾರ್ಮಿಕ ವಿಚಾರಗಳಗಣಿ ಎಂಬ ಕಾರಣದಿಂದಾಗಿ ಜೈನಸಂಪ್ರದಾಯದವರು ಇಂದಿಗೂ ಪ್ರಾಕೃತಭಾಷೆಯ ಪೋಷಕರಾಗಿರುವುದು ಸರ್ವವೇದ್ಯ. ಆದರೆ ಸಿರಿಭೂವಲಯವು ಸರ್ವಧರ್ಮ ಸಮನ್ವಯ ಸಾರಿರುವುದರಿಂದ, ಸರ್ವ ಜ್ಞಾನದ ಮೂಲವೂ ಋಗ್ವೇದವೇಂದೇ ಘಂಟಾಘೋಷವಾಗಿ ಸಾರಿರುವುದಿದೆ.. ಇಲ್ಲಿ ವೈದಿಕ ಅಥವಾ ಜೈನ ಸಂಪ್ರದಾಯದ ನಡುವೆ ಯಾವುದು ಹೆಚ್ಚು ಶ್ರೇಷ್ಠ ಎಂಬ ಅನುಚಿತ ವಿಚಾರಕ್ಕಿಂತಲೂ ಈ ಅಚ್ಚರಿಯ ಪ್ರಾಚೀನ ಕನ್ನಡ ಅಂಕಕಾವ್ಯದಲ್ಲಿ ಅಡಗಿರುವ ಮಹತ್ತರವಾದ ಮಾಹಿತಗಳತ್ತ ವಿದಾಂಸರು ಹೆಚ್ಚಿನ ಗಮನ ಹರಿಸಬೇಕೆಂಬುದು ನನ್ನ ಕಳಕಳಿಯ ಮನವಿಯಾಗಿದೆ. ಈ ಕಾರಣದಿಂದಾದರೂ ಇಂದಿನ ವಿದ್ವಾಂಸರು ಇತ್ತ ಗಮನ ಹರಿಸಿದರೆ, ಕುಮುದೆಂದು ಮುನಿಯ ಅಭಿಮಾನಿಗಳೆಲ್ಲರೂ ಹೆಚ್ಚು ಸಂಭ್ರಮ ಪಡಬಹುದಾದ ಪ್ರಾಚೀನ ಮಹತ್ವಗಳು ಬೆಳಕು ಕಾಣಲು ಅವಕಾಶವಾದೀತೆಂದು ನಾನು ಕನಸು ಕಾಣುತ್ತಿದ್ದೇನೆ! ಕುಮುದೇಂದುಮುನಿ, ಕರ್ಲಮಂಗಲಂ ಶ್ರೀಕಂಠಯ್ಯನವರು, ಕೆ ಅಂತಸುಬ್ಬರಾಯರು ಇವರುಗಳ ಅನನ್ಯವಾದ ಕನ್ನಡಾಭಿಮಾನದಿಂದ ಪ್ರೇರಿತನಾಗಿ ನಾನು ಈ ಕಠಣವಾದ ಕಾರ್ಯಕ್ಕೆ ಕೈಹಾಕಿರುವೆನೆಂದು ಸೂಚಿಸುವ ಈ ಪರಿಚಯಕಾರನ ಸಾತ್ವಿಕ ಕೋಪಕ್ಕೆ ಯಾರೊಬ್ಬರೂ ಬೇಸರಿಸುವ ಅಗತ್ಯವಿಲ್ಲ. ಇದು ಕ್ಷಮಾರ್ಹವಾದುದು.
  ಸಿರಿಭೂವಲಯದ ಅಕ್ಷರ ಅವತರಣಿಕೆಯು ಪ್ರಕಟವಾದ ಪ್ರಾರಂಭದಲ್ಲಿ ಅದರ ವಿಚಾರವಾಗಿ ಸಾಕಷ್ಟು ಆಳವಾಗಿ ಅಧ್ಯಯನ ನಡೆಸಿ, ತಮ್ಮ ಖಚಿತವಾದ ಅನಿಸಿಕೆಗಳನ್ನು ವ್ಯಕ್ತಪಡಿಸಿದವರಲ್ಲಿ ಡಾ| ಎಸ್. ಶ್ರೀಕಂಠಶಾಸ್ತ್ರಿಯವರು ಮೊದಲಿಗರು. ಇವರ ಆಲೋಚನೆಯ ಜಾಡನ್ನು ಅನುಸರಿಸಿ, ಕೆ. ಅನಂತಸುಬ್ಬರಾಯರು ನೀಡಿದ ಮಾರ್ಗದರ್ಶನದಲ್ಲಿ ಮುನ್ನಡೆದು, ಅಂತರ್ಸಾಹಿತ್ಯವನ್ನು ಹೊರತೆಗೆದು ಸಿರಿಭೂವಲಯದ ನಿಜವಾದ ಅಂತರಂಗವನ್ನು ಪರಿಚಯಿಸುವ ಕಾರ್ಯದಲ್ಲಿ ಸುಧಾರ್ಥಿಯು ಮೊದಲಿಗನೆಂಬುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಸಿರಿಭೂವಲಯದ ವಿಚಾರವಾಗಿ ಸುಧಾರ್ಥಿಯು ಹೊಂದಿರುವ ಆಸಕ್ತಿಯಫಲವಾಗಿ ಈಗ ಸಿರಿಭೂವಲಯದ ಅಭಿಮಾನಿಗಳ ಸಂಖ್ಯೆ ಸಾಕಷ್ಟು ಬೆಳೆದಿದೆ. ಬೆಳಗಾವಿಯ ಅಭಿಮಾನಿಯೊಬರು ಅಲ್ಲಿನ ಭರತೇಶ ಶಿಕ್ಷಣಸಂಸ್ಥೆಗಳ ಸಮೂಹದ ವತಿಯಿಂದ ಸಿರಿಭೂವಲಯವನ್ನು ಓದುವ ಕ್ರಮಕುರಿತು ಆರುದಿಗಳ ಅವಧಿಯ ಒಂದು ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿದ್ದು ಒಂದು ಪ್ರಮುಖ ಸಂಗತಿ. 
  ತಾನು ಕೈಗೊಂಡ ಈ ಪರಿಚಯಕಾರ್ಯದಲ್ಲಿ ತನ್ನಂತೆಯೇ ಆಸಕ್ತಿ ಹೊಂದಿರುವ ಮುಂದಿನ ಪೀಳಿಗೆಯ ನಿರ್ಮಾಣದಲ್ಲಿಯೂ ಸುಧಾರ್ಥಿಯು ಆಸಕ್ತಿವಹಿಸಿರುವುದು ಸಂತೋಷದ ಸಂಗತಿಯಾಗಿದೆ. ಪವರ್ ಗ್ರಿಡ್ ಕಾರ್ಪೋರೇಷನೆ ಆಫ್ ಇಂಡಿಯಾ ಸಂಸ್ಥೆಯಲ್ಲಿ ಅಧಿಕಾರಿಯಾಗಿ ದೂರದ ಮಿಜೋರಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೆಚ್. ಎಂ. ಸದಾನಂದ ಅವರು ಸಿರಿಭೂವಲಯ ಕುರಿತು ಹಂಪೆಯ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲು ನಿರೂಪಿಸುತ್ತಿರುವ ಮಹಾಪ್ರಬಂಧದ ವಿಚಾರವಾಗಿ ಅವರೊಂದಿಗೆ ಪ್ರತಿದಿನವೂ ದೂರವಾಣಿಯ ಮೂಲಕ ವಿಚಾರವಿನಿಮಯಮಾಡಿ, ಅವರಲ್ಲಿ ಸಾಕಷ್ಟು ಆಸಕ್ತಿ ಹಾಗೂ ವಿಚಾರಗಳನ್ನು ತುಂಬಿ ಒಬ್ಬ ಸಮರ್ಥ ವ್ಯಕ್ತಿಯನ್ನು ಮುಂದಿನ ಕಾರ್ಯಕ್ಕೆ ಇವರು ಸಿದ್ಧಗೊಳಿಸುತ್ತಿರುವುದು ಅನುಕರಣೀಯ.
  ಸಾಹಿತ್ಯಕೃತಿಗಳ ಅಧ್ಯಯನವು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕ್ಷೀಣಿಸಿದೆ. ಅದರಲ್ಲೂ ಸಿರಿಭೂವಲಯವನ್ನು ಸುಲಭವಾಗಿ ಓದಿ ಅರಗಿಸಿಕೊಳ್ಳುವುದು ಬಹಳ ಶ್ರಮದಕಾರ್ಯ. ತಮಗೆ ಆಸಕ್ತಿಯಿರುವ ವಿಚಾರಗಳ ಅಧ್ಯಯನಕ್ಕೆ ಇಂದಿನ ವಿದ್ಯಾವಂತರು ತಮಗೆ ಅನುಕೂಲಕರವಾದ ಅಂತರ್ಜಾಲತಾಣಗಳನ್ನು ವೀಕ್ಷಿಸುವುದು ಸಾಮಾನ್ಯ ಸಂಗತಿಯಾಗಿದೆ. ಸಿರಿಭೂವಲಯವನ್ನು ಕುರಿತಂತೆಯೂ ಈ ಅಂತರ್ಜಾಲತಾಣಗಳಲ್ಲಿ ಸಾಕಷ್ಟುಮಾಹಿತಿಗಳು ಲಭ್ಯವಿವೆ. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ತನಗೆ ಗೋಚರವಾದ ಹೊಸಹೊಸ ಖಚಿತಮಾಹಿತಿಗಳನ್ನು ಅಂತರ್ಜಾಲತಾಣದಲ್ಲಿಯೂ ಪ್ರಚುರಪಡಿಸುತ್ತಿರುವುದು ಸುಧಾರ್ಥಿಯ ಇನ್ನೊಂದು ವಿಶೇಷತೆಯಾಗಿದೆ. ಇದಕ್ಕೆ ನೆರವಾಗುತ್ತಿರುವ ಅಭಿಮಾನಿಗಳೂ ಅಭಿನಂದನಾರ್ಹರು.
  ಸುಧಾರ್ಥಿಯು ರಚಿಸಿರುವ ಸರಳ ಪರಿಚಯಕೃತಿಗಳ ಅಧ್ಯಯನದಿಂದಾಗಿ, ವೈದಯಕೀಯ, ಗಣಿತ, ಗಣಕಯಂತ್ರಕ್ರಮ, ಧರ್ಮ ಮುಂತಾದ ಬೇರೆ ಬೇರೆ ಕ್ಷೇತ್ರಗಳ ಕೆಲವರು ಆಸಕ್ತಿವಹಿಸಿ, ಕುಮುದೇಂದುವಿನ ಕಾವ್ಯದ ವಿಚಾರ ತಿಳಿಯುವ ಉತ್ಸಾಹ ಹೊಂದುವಂತಾಗಿರುವುದು ಸ್ವಾಗತಾರ್ಹವಾದ ಸಂಗತಿ. ಇದೆ ಕ್ರಮದಲ್ಲಿ ಸಂಗೀತ, ನೃತ್ಯ, ವೇದೋಪನಿಷತ್ತುಗಳಿಗೆ ಸಂಬಂಧಿಸಿದ  ಬೇರೆ ಬೇರೆ ಭಾಷೆಯ ತಜ್ಞರೂ ಇದರತ್ತ ಗಮನಹರಿಸಿ, ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಅಚ್ಚರಿಯ ಕಾವ್ಯದಲ್ಲಿ ಅಡಕವಾಗಿರುವ ಮಾಹಿತಿಗಳನ್ನು ಸಮರ್ಪಕವಾಗಿ ಹೊರಗೆಡಹಿ, ಸಿರಿಭೂವಲಯದ ಮಹತ್ವವನ್ನು ಹೆಚ್ಚಿಸಲು ಸಹಕಾರಿಯಾಗಲೀ ಎಂದು ಆಶಿಸುತ್ತೇನೆ. ಈ ರೀತಿ ಆದಲ್ಲಿ ಸುಧಾರ್ಥಿಯ ಶ್ರಮ ಸಾರ್ಥಕವಾದಂತೆ.

   ತಾನು ರೂಪಿಸಿ ಪ್ರಕಟಿಸಿರುವ ಪರಿಚಯಕೃತಿಗಳಿಗಿಂತಲೂ; ಕರ್ಲಮಂಗಲಂ ಶ್ರೀಕಂಠಯ್ಯನವರು ರೂಪಿಸಿರುವ ಸಿರಿಭೂವಲಯದ ಜನತಾಸಂಸ್ಕರಣ ದಲ್ಲಿ ಇನ್ನೂ ಹೆಚ್ಚು ವ್ಯಾಪಕವಾದ ಮಾಹಿತಿಗಳು ಅಡಕವಾಗಿವೆ. ಪ್ರಾಯಶಃ ಅದರಲ್ಲಿ ಸಿರಿಭೂವಲಯದ ನಾಲ್ಕನೇ ಖಂಡದವರೆಗಿನ ಮಾಹಿತಿಗಳು ಲಭ್ಯವಿರಬಹುದು. ಅವುಗಳನ್ನು ನಾನು ಒಮ್ಮೆ ಮಾತ್ರ ನೋಡಿದ್ದೇನೆ. ಶ್ರೀಕಂಠಯ್ಯನವರ ಉತ್ತರಾಧಿಕಾರಿಗಳಲ್ಲಿ ಸುರಕ್ಷಿತವಾಗಿರುವ ಈ ಪ್ರತಿಯನ್ನು ಅವರುಗಳೇ ಆಗಲೀ, ಸರ್ಕಾರವಾಗಲೀ ಆಸಕ್ತಿವಹಿಸಿ ಮುದ್ರಣಮಾಡಿಸುವ ಕಾರ್ಯ ನಿರ್ವಹಿಸಿದರೆ ಅದರಿಂದ ಶ್ರೀಕಂಠಯ್ಯನವರ ಆತ್ಮಕ್ಕೆ ಶಾಂತಿ ಸಿಗುವುದು ಮಾತ್ರವಲ್ಲ; ಜಗತ್ತಿನ ಸಾಹಿತ್ಯಾಸಕ್ತರೆಲ್ಲರಿಗೂ ಮಹತ್ತರವಾದ ಉಪಯೋಗವಾಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಾನೇ ಬೇಕಾದರೂ ಈ ಕಾರ್ಯ ನಿರ್ವಹಿಸುವೆ ಎಂದು ಸುಧಾರ್ಥಿಯು ನನ್ನಲ್ಲಿ ಅನೇಕಸಲ ಸೂಚಿಸಿರುವುದಿದೆ. ಸಂಬಂಧಿಸಿದವರು-ಶ್ರೀಕಂಠಯ್ಯನವರ ವಂಶಸ್ತರು ಅಥವಾ ಸರ್ಕಾರದ ಸಂಬಂಧಿಸಿದ ಸಂಸ್ಥೆಗಳು ಈ ಕಾರ್ಯ ಕೈಗೊಳ್ಳುವುದು ಸೂಕ್ತವೆಂದು ನನಗನಿಸುತ್ತದೆ. ಅಥವಾ ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ-ಅನುಭವ ಹೊಂದಿರುವ ಸುಧಾರ್ಥಿಯಾದರೂ ಈ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕಾದುದು ಅಗತ್ಯ.
  ಕೇವಲ ಸಾಹಿತ್ಯ ಕೃಷಿಮಾತ್ರವಲ್ಲದೇ, ಭೂಮಿಯ ಕೃಷಿಯಲ್ಲೂ ಹೆಚ್ಚಿನ ಆಸಕ್ತಿವಹಿಸಿರುವ ಸುಧಾರ್ಥಿಯ ಶ್ರಮದ ಫಲವನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ. ೩೫ ವರ್ಷಗಳ ಬೆಂಗಳೂರಿನ ಜೀವನವನ್ನು ತೊರೆದು, ಗ್ರಾಮೀಣ ಪರಿಸರದಲ್ಲಿ ನೆಲೆಸುವ ನಿರ್ಧಾರಕ್ಕೆ ಸಮ್ಮತಿಸುವುದು ಬಹಳ ಕಠಿಣ. ಆದರೆ, ಕಠಿಣವಾದ ನಿರ್ಧಾರವಿಲ್ಲದೇ ಇಂಥ ಕಠಿಣವಾದ ಕಾರ್ಯಸಾಧನೆ ಸಾಧ್ಯವಿಲ್ಲ. ಈ ದಿಸೆಯಲ್ಲಿ ಸುಧಾರ್ಥಿಯ ಅರ್ಧಾಂಗಿಯ ಕೊಡುಗೆ ಅಮೂಲ್ಯವಾದುದು. ಸುಧಾರ್ಥಿಯು ರಚಿಸಿದ ಪರಿಚಯಕೃತಿಗಳನ್ನು ಪ್ರಕಟಿಸಲು ಯಾರಾದರೂ ಮುಂದೆ ಬರದಿದ್ದರೆ, ಅದರ ಉಪಯೋಗ ಹೆಚ್ಚುಜನಗಳಿಗೆ ಸಿಗುವ ಅವಕಾಶವಿರಲಿಲ್ಲ! ಸುಧಾರ್ಥಿಯ  ಸಹಧರ್ಮಿಣಿ ಚಿ.ಸೌ. ಗಿರಿಜೆಯು ನಿಜವಾದ ಅರ್ಥದಲ್ಲಿ ಆತನಿಗೆ  ಅರ್ಧಾಂಗಿಯಾಗಿ, ಈ ಕೃತಿಗಳ ಪ್ರಕಟಣೆಯ ಹೊಣೆಹೊತ್ತಿರುವುದು ಆತನ ಪೂರ್ವಾರ್ಜಿತ ಸುಕೃತ. ಕೆ. ಅನಂತಸುಬ್ಬರಾಯರ ಸ್ಮಾರಕಸಂಸ್ಥೆಯಾಗಿ ಸುಮಾರು ಒಂದು ದಶಕದಕಾಲ ಅನಂತಪ್ರಕಾಶನ ವನ್ನು ಯಶಸ್ವಿಯಾಗಿ ನೆಡಸುತ್ತಿದ್ದಾಗಿನಿಂದಲೂ ನನಗೆ ಈ ದಂಪತಿಗಳು ಪರಿಚಿತರು. ಸುಧಾರ್ಥಿಯ ಶ್ರೀಮತಿ ಚಿ.ಸೌ ಗಿರಿಜೆಯು ಕೇವಲ ಪ್ರಕಾಶಕಿಯಾಗಿ ಮಾತ್ರವಲ್ಲ; ಈಗ ಒಂದೊಂದೇ ಅಕ್ಷರಗಳನ್ನು ಹುಡುಕಿಕೊಂಡು ಸಿರಿಭೂವಲಯದ ಅಂತರ್ಸಾಹಿತ್ಯವನ್ನು  ಸಂಗ್ರಹಿಸುವ ಕಾರ್ಯದಲ್ಲಿಯೂ ನೆರವುನೀಡುತ್ತಿರುವ ಸಂಗತಿಯನ್ನು ಸುಧಾರ್ಥಿಯು ನನ್ನ ಗಮನಕ್ಕೆ ತಂದಿರುವುದರಿಂದ ಪ್ರಕಾಶಕಿಯ ಔದಾರ್ಯವನ್ನು ಮೆಚ್ಚಿದ್ದೇನೆ. ಅರ್ಥ ಸಂಪಾದನೆಯ ಅಪೇಕ್ಷೆಯಿಲ್ಲದ ಈ ಅರ್ಥಪೂರ್ಣ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿರುವ ಈ ದಂಫತಿಗಳ ಪ್ರಯತ್ನವು ಸಾರ್ಥಕವಾಗಲೆಂದು ಆಶೀರ್ವದಿಸಿದ್ದೇನೆ.  ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಕೇವಲ ಕನ್ನಡಾಭಿಮಾನದಿಂದ ಸಿರಿಭೂವಲಯ ಕುರಿತು ಇಷ್ಟೆಲ್ಲ ಕಾರ್ಯನಿರ್ವಹಿಸಿರುವ ಹಾಸನದ ಸುಧಾರ್ಥಿಯನ್ನು ಸಿರಿಭೂವಲಯದ ಸುಧಾರ್ಥಿ ಎಂದು ಸೂಚಿಸುವುದು ಹೆಚ್ಚುಸೂಕ್ತವಾದೀತು. ಈ ಪರಿಚಯಗ್ರಂಥದ ಮುಖಬೆಲೆಯನ್ನು ಗಮನಿಸಿದಾಗ ನಿಜಕ್ಕೂ ಇದೊಂದು ಜ್ಞಾನದಾನಯಜ್ಞವೆನಿಸುತ್ತದೆ. ಕನ್ನಡದಮೇಲಿನ ಅಭಿಮಾನದಿಂದ ನಡೆದಿರುವ ಈ ಮಹಾನ್ ಜ್ಞಾನದಾನದ ಪೂರ್ಣಫಲವನ್ನು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ಥಕವಾಗಿ ಬಳಸಿಕೊಳ್ಳಲೆಂದು ಆಶಿಸುತ್ತೇನೆ. ಶ್ರೀ ಸುಧಾರ್ಥಿಯವರ ಶ್ರಮಕ್ಕೆ ನನ್ನ ಅಭಿನಂದನೆಗಳು.

- ಜಿ.ವೆಂಕಟಸುಬ್ಬಯ್ಯ

ಬೆಂಗಳೂರು ೧೮-೦೨-೨೦೧೩