Sunday 14 May 2023

ಸಾವಿನನಂತರ ತಕ್ಷಣಕ್ಕೆ ಜೀವದ ಸ್ಥಿತಿಯೇನು??

 ** ಸಾವಿನನಂತರ ತಕ್ಷಣಕ್ಕೆ ಜೀವದ ಸ್ಥಿತಿಯೇನು??**

ನಿಜಕ್ಕೂ ಇದೊಂದು  ಸಮರ್ಪಕವಾದ  ಉತ್ತರ ಕಾಣಿಸದ 

ಪ್ರಶ್ನೆಯಾಗಿದೆ ನಮ್ಮ ಪ್ರಪಂಚದಲ್ಲಿ!!

’ಕನ್ನಡದವೇದ’  ’ಕನ್ನಡದ ವೇದಾಂತ’ವಾಗಿರುವ ಸಿರಿಭೂವಲಯವು 

ಈ ಪ್ರಶ್ನೆಗೆ ಸೂಕ್ತ ಉತ್ತರ ನೀಡಿರುವುದನ್ನು ನೀವಿಲ್ಲಿ ನೋಡಬಹುದು!!

 ಯಾವುದೇ ಶರೀರವಿರಲೀ,  ಅದರಲ್ಲಿ ಸೇರಿಕೊಂಡು 

ವ್ಯವಹರಿಸುವ ಒಂದು ಅಗೋಚರ ಶಕಿಗೆ; ಯಾವುದೇ ರೂಪ

ಆಕಾರಗಳಿಲ್ಲ.  ಕೇವಲ ಅದೊಂದು ’ಚೈತನ್ಯ’  ಭಾರತೀಯರು ಇದನ್ನು 

’ಜೀವ’ ’ಪ್ರಾಣ’   ಎಂಬ ಹೆಸರಿನಲ್ಲಿ ಸೂಚಿಸುತ್ತಾರೆ. ಆಧುನಿಕ ವಿಜ್ಞಾನಿಗಳ 

 ಅನಿಸಿಕೆಯಂತೆ ಈ ಪ್ರಶ್ನೆಗೆ ಒಂದು ಸೀಮಿತವಾದ ಉತ್ತರವು ಪ್ರಚಲಿತವಿದೆ. 

ಶರೀರ ಕ್ರಿಯೆಗಳ ಚಲನೆಗೆ ನೆರವಾಗುವ  ಚೈತನ್ಯವು (ಜೀವ) ಒಂದು ಶಕ್ತಿ. (ಎನರ್ಜಿ)

ಈ ಶಕ್ತಿಯು ಕಡಿಮೆಯಾದಂತೆ  ಶರೀರದ ಕ್ರಿಯೆಯು ಸೊರಗುತ್ತದೆ.  ಈ ಶಕ್ತಿಯು

ಸಂಪೂರ್ಣವಾಗಿ ಉಡುಗಿದಾಗ ಶರೀರವು ಶಾಶ್ವತವಾಗಿ  ನಿಶ್ಚಲವಾಗಿ,

ನಿರುಪಯೋಗಿಯಾಗುತ್ತದೆ.  

ವ್ಯವಸ್ಥಿತವಾಗಿ  ರೂಪಿಸಲಾದ ಯಂತ್ರಕ್ಕೆ ಇಂಧನ ; ಉರುವಲು; ವಿದ್ಯುತ್ ಶಕ್ತಿಯನ್ನು 

ಒದಗಿಸಿ ಚಾಲನೆಗೊಳಿಸಿದಾಗ , ಅದು ಸಮರ್ಪಕವಾಗಿ  ಕಾರ್ಯಾರಂಭಮಾಡುತ್ತದೆ. 

ಇಂಧನದ ಕೊರತೆಯಾಗಿ ಅದು ಇನ್ನಿಲ್ಲವೆಂಬಂತಾದಾಗ,  ಯಂತ್ರದ ಕಾರ್ಯವು

ಸ್ಥಗಿತಗೊಳ್ಳುತ್ತದೆ. ಮತ್ತೆ ಇಂಧನವನ್ನು ತುಂಬಿದಾಗ, ಅದು ಕ್ರಿಯಾಶೀಲವಾಗುತ್ತದೆ. 

ಇದು ಮಾನವ ನಿರ್ಮಿತ ಯಂತ್ರಗಳ ವಿಚಾರ.  ಆದರೆ, ಪ್ರಕೃತಿ ನಿರ್ಮಿತವಾದ 

ಪ್ರಾಣಿಗಳ  ಶರೀರದಲ್ಲಿ ನೆಲೆಸಿರುವ ಚೈತನ್ಯವು (ಜೀವ/ ಪ್ರಾಣ) ಶಾಶ್ವತವಾಗಿ  

ಇಲ್ಲವಾದಾಗ, ಶರೀರಕ್ರಿಯೆಯು  ಶಾಶ್ವತವಾಗಿ ಸ್ಥಗಿತಗೊಳ್ಳುತ್ತದೆ.  ಈ ಶರೀರಕ್ಕೆ 

ಮತ್ತೆ  ಜೀವವೆಂಬ ಚೈತನ್ಯವನ್ನು ತುಂಬಿ ಅದು ಕ್ರಿಯಾಶೀಲವಾಗುವಂತೆ ಮಾಡಲು 

ಸಾಧ್ಯವಿಲ್ಲ ಎಂಬ ವಿಚಾರ ಸರ್ವವಿದಿತ.  

ಸಾಮಾನ್ಯವಾಗಿ ವಿಚಾರಶಾಲಿಗಳು ಹಾಗೂ ವಿಜ್ಞಾನಿಗಳೂ  ಇದಕ್ಕೆ ಸಮ್ಮತಿಸುತ್ತಾರೆ.  

ಆದರೆ, ಶರೀರಾಂತರ್ಗತವಾದ  ಆತ್ಮವುತಾನು ಆಶ್ರಯಿಸಿದ್ದ  ಶರೀರವನ್ನು ತ್ಯಜಿಸಿ

ಹೊರಬಂದನಂತರ, ಆ ಜೀವದ ಸ್ಥಿತಿಯನ್ನು ಕುರಿತು  ನಮ್ಮ ವೇದೋಪನಿಷತ್ತುಗಳು 

ತಮ್ಮದೇ ಆದ ಮಾರ್ಗದಲ್ಲಿ ಈ ಪ್ರಶ್ನೆಗೆ ಉತ್ತರನೀಡುವಲ್ಲಿ  ಬಹಳ ವಿಸ್ತಾರವಾದ 

ಮಾಹಿತಿಗಳನ್ನು ನೀಡಿ,  ’ದೇಹವನ್ನು ತ್ಯಜಿಸಿದ ಆತ್ಮವು ತನ್ನ ಕರ್ಮಾನುಸಾರವಾಗಿ 

ಬೇರೊಂದು ಶರೀರವನ್ನು ಆಶ್ರಯಿಸಿವ್ಯವಹರಿಸುವ ’ಪುನರ್ಜನ್ಮ’ ಕುರಿತ ಮಾಹಿತಿಯನ್ನು 

ನೀಡುತ್ತವೆ.  ಇದನ್ನು ಒಪ್ಪುವವರಿರಬಹುದು; ನಿರಾಕರಿಸುವವರೂ ಇರಬಹುದು. 

ಸಂಸ್ಕೃತಭಾಷೆಯ ದೇವನಾಗರೀ ಲಿಪಿಯಲ್ಲಿ  ಪ್ರಚಲಿತವಿರುವ ವೇದಗಳು ಹಾಗೂ 

ಉಪನಿಷತ್ತುಗಳ ಮಾಹಿತಿಯನ್ನು ಕನ್ನಡಭಾಷೆಯಲ್ಲಿ ನಿರೂಪಿಸಿರುವವರು 

ಹಲವರಿದ್ದಾರೆ.  ಆದರೆ, ಶೃತಿ; ಸ್ಮೃತಿ ಕ್ರಮದಲ್ಲಿ ಉಳಿದುಬಂದಿರುವ ’ಅಪೌರುಷೇಯವಾದ’

ವೇದಗಳು; ಇದಕ್ಕೆ ಸಂಬಂಧಿಸಿದ ಬ್ರಾಹ್ಮಣಗಳು; ಅರಣ್ಯಕಗಳು;  ಉಪನಿಶತ್ತುಗಳು;  ಸೂತ್ರಗಳು

ಮುಂತಾದವುಗಳಲ್ಲಿ ಅಡಕವಾಗಿರುವ ಖಚಿತಮಾಹಿತಿಗಳನ್ನು ಸಮರ್ಪಕವಾಗಿ ವಿವರಿಸುವುದು

ಸಾಮಾನ್ಯಸ್ಥರದ  ಮಾನವಮಾತ್ರದವರಿಗೆ ಸಾಧ್ಯವಾಗದ ಕಾರ್ಯ.  ಈ ಕಾರ್ಯ ನಿರ್ವಹಿಸುವುದಕ್ಕೆ 

ಸರ್ವಜ್ಞ ಸ್ವರೂಪಿಯಾದ  ತ್ರಿಕಾಲ ಜ್ಞಾನಿಯೇ ಬೇಕಾಗುತ್ತದೆ.  ಅಂಥವರು ಮಾತ್ರವೇ 

ವೇದೋಪನಿಷತ್ತುಗಳ ನೈಜವಿವರಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ಸರಳವಾಗಿ 

ವಿವರಿಸಬಲ್ಲರು. ಇಂಥ ಮಹತ್ತರವಾದ ಕಾರ್ಯವನ್ನು ಸುಮಾರು ೧೨೦೦ ವರ್ಷಗಳ ಹಿಂದೆ

ಕುಮುದೇಂದುವೆಂಬ ಮಹಾನ್ ಜ್ಞಾನಿಯು  ತನ್ನ ’ಸಿರಿಭೂವಲಯ’ ಎಂಬ  ಜಗದಚ್ಚರಿಯ 

ಕನ್ನಡಕಾವ್ಯದಲ್ಲಿ  ಬಹಳ ಸರಳವಾಗಿ; ಖಚಿತವಾಗಿ; ಸಂಕ್ಷಿಪ್ತವಾಗಿ  ಸೂಚಿಸಿರುವುದನ್ನು

ನಾನು ಗಮನಿಸಿದ್ದೇನೆ. 

ಕೋಟ್ಯಾಂತರ ವರ್ಷಗಳ ಹಿಂದೆ ಋಷಭದೇವನಿಗೆ ಪ್ರಾಪ್ತವಾದ ’ಕೇವಲಜ್ಞಾನಕ್ಕೆ’  ’ಜಿನವಾಣಿಗೆ’  

ಭಗವದ್ವಾಣಿ; ಆದಿಗೀತೆ ಎಂದು  ಹೆಸರಾಯಿತು.  ಈ ಆದಿಗೀತೆಯೇ ಮುಂದೆ  ಭಗದ್ಗೀತೆ ಎಂದು 

ಪ್ರಚಲಿತವಾಯಿತು. ನೇಮಿತೀರ್ಥಂಕರನಿಂದ  ಉಪದೇಶವಾದ ಈ ಆದಿಗೀತೆಯು  ದ್ವಾರಕೆಯ

ಶ್ರೀಕೃಷ್ಣನಿಗೂ; ಕೃಷ್ಣದ್ವೈಪಾಯನ ವ್ಯಾಸನಿಗೂ  ಉಪದೇಶವಾಗುತ್ತದೆ. ಈ ಉಪದೇಶವನ್ನು 

ವ್ಯಾಸಮಹರ್ಷಿಯು  ತನ್ನ  ’ಜಯಕಾವ್ಯದಲ್ಲಿ’  ೧೬೨ ಶ್ಲೋಕಗಳ ವ್ಯಾಪ್ತಿಯಲ್ಲಿ  ಮೂರು 

ಅಧ್ಯಾಯಗಳಲ್ಲಿ  ಅಳವಡಿಸುತ್ತಾನೆ.  ಯುದ್ಧ ವಿಮುಖನಾಗಲಿದ್ದ ಪಾರ್ಥನಿಗೆ  ಇದೇ ಗೀತೆಯನ್ನು

ರಣಾಂಗಣದಲ್ಲಿ ಕೃಷ್ಣನು  ’ಭಗವದ್ಗೀತೆ’ ಯಾಗಿ ಬೋಧಿಸುತ್ತಾನೆ.  ಮುಂದೆ ಕಲಿಯುಗದ  ಜಗದ್ಗುರು 

ಶಂಕರ ಭಗವತ್ಪಾದರು ಅಗಾಧವಾದ ವೇದೋಪನಿಶತ್ತುಗಳ ಸಾರವನ್ನೆಲ್ಲ  ೭೦೦ಶ್ಲೋಕಗಳ ೧೮ 

ಅಧ್ಯಾಯದ ಭಗವದ್ಗೀತೆಯಾಗಿ ಪರಿಷ್ಕರಿಸಿ, ಆವೇಳೆಗೆ ಪ್ರಚಲಿತವಿದ್ದ ’ಮಹಾಭಾರತ’ದ 

ಭೀಷ್ಮಪರ್ವದಲ್ಲಿ  ಅಳವಡಿಸುತ್ತಾರೆ. ಇದೊಂದು ಲೋಕಹಿತಕ್ಕಾಗಿ ನಡೆದ ರಹಸ್ಯ ಕಾರ್ಯಾಚರಣೆ. 

ಅಲ್ಲಿನ ಮಾಹಿತಿಗಳೆಲ್ಲವೂ ಸಂಸ್ಕೃತಭಾಷೆಯಲ್ಲಿದ್ದವು. ಕನ್ನಡಿಗರಿಗೆ ಅವು  ಸುಲಭವಾಗಿ; 

ಸಮರ್ಪಕವಾಗಿ ಓದಲಾಗದ್ದು!  ಇದನ್ನು ಪರಿಹರಿಸುವ ದಿಸೆಯಲ್ಲಿ ಮುಂದೆ ಶಂಕರರ 

ಸಮೀಪಕಾಲೀನನೂ, ಶಂಕರರಿಗೆ ಸರಿಮಿಗಿಲಾದ  ಸರ್ವಜ್ಞ ಸ್ವರೂಪಿಯೂ; ತ್ರಿಕಾಲಜ್ಞಾನಿಯೂ

ಆಗಿದ್ದ  ಕುಮುದೇಂದುವೆಂಬ ದಿಗಂಬರ ಜೈನ ಸಂಪ್ರದಾಯದ ಯತಿಯು  ಕನ್ನಡದ ವೇದವೂ, 

ಕನ್ನಡದ ವೇದಾಂತವೂ ಆದ ತನ್ನ  ’ಸಿರಿಭೂವಲಯ’ ಎಂಬ ಜಗತ್ತಿನ ಅಚ್ಚರಿಯ ಕಾವ್ಯವಾದ 

ಬಹಳ ಸರಳವಾಗಿಯೂ; ಸುಲಲಿತವಾಗಿಯೂ  ಸಾಮಾನ್ಯ ಓದುಗರಿಗೆ 

ವೇದ್ಯವಾಗುವಂತೆ ನಿರೂಪಿಸಿರುವುದನ್ನು ನಾನು ಗಮನಿಸಿದ್ದೇನೆ. 

 ಸಿರಿಭೂವಲಯದ ವ್ಯಾಪ್ತಿ ಬಹಳ ವಿಸ್ತಾರವಾದುದು. ಇದರಲ್ಲಿ ಒಂಬತ್ತು ಖಂಡಗಳಿವೆ 

ಪ್ರತಿಯೊಂದು ಖಂಡದಲ್ಲಿಯೂ ಹಲವಾರು ಅಧ್ಯಾಯಗಳಿವೆ. ಜಗತ್ತಿನಲ್ಲಿ ಜ್ಞಾನಕ್ಕೆ 

ಸಂಬಂಧಿಸಿದಂತೆ ೭೧೮ ಭಾಷೆಗಳ,೩೬೨ ಮತಧರ್ಮಗ  ಜ್ಞಾನ- ವಿಜ್ಞಾನಕ್ಕೆ  ಸಂಬಂಧಿಸಿದ 

ಮಾಹಿಗಳೆಲ್ಲವೂ ಈ ಕಾವ್ಯದಲ್ಲಿ’ನೂರುಸಾವಿರಲಕ್ಷಕೋಟಿ’ ಶ್ಲೋಕಗಳ ವ್ಯಾಪ್ತಿಯಲ್ಲಿ ಅಡಕವಾಗಿವೆ. 

ಇಲ್ಲಿನ ಮೂಲ ಸಾಂಗತ್ಯ ಪದ್ಯಗಳ ಸಂಖ್ಯೆ ಆರು ಲಕ್ಷ! ಆರುಸಾವಿರ ಗಣಿತಸೂತ್ರಗಳ ನೆರವಿನಿಂದ 

ಈ ಕಾವ್ಯದ ರಚನೆಯಾಗಿದೆ. ಅರುವತ್ತು ಸಾವಿರಪ್ರಶ್ನೆಗಳಿಗೆ ಈ ಕಾವ್ಯದಲ್ಲಿ ಉತ್ತರವಿದೆಯೆಂಬುದು 

ಕವಿಯ ಘೋಷಣೆ!! ಈ ಕಾವ್ಯದಲ್ಲಿ ಅಡಕವಾಗದೇ ಯಾವುದೇ ವಿಚಾರವೂ 

ಹೊರಗುಳಿದಿಲ್ಲವೆಂದೂ ಕವಿಯು ಘೋಷಿಸಿರುವುದಿದೆ!! ಜಗತ್ತಿನ ಮಾನರೆಲ್ಲರಿಗೂ 

ಒಂದೇ ಧರ್ಮ; ಅದು ಜೀವಧರ್ಮ ಎಂಬುದು ಕವಿಯ ಹೇಳಿಕೆ. 

ಚಕ್ರಬಂಧರೂಪದಲ್ಲಿರುವ ಕನ್ನಡಕಾವ್ಯ ಸಿರಿಭೂವಲಯದ ಒಂಬತ್ತು ಖಂಡಗಳಪೈಕಿ;

ಮಂಗಳಪ್ರಾಭೃತವೆಂಬ ಮೊದಲನೇ ಖಂಡದ ೫೯ ಅಧ್ಯಾಯಗಳ ಮಾಹಿತಿಯನ್ನು 

ಸಾಮಾನ್ಯ ಓದುಗರು ಓದಿತಿಳಿಯಲು  ಸಾಧ್ಯವಿಲ್ಲ.  ಈ ಕಾರಣಕ್ಕಾಗಿ  ಕಾವ್ಯದಲ್ಲಿ

ಅಡಗಿಕುಳಿತಿರುವ  ಅಂತರ್ಸಾಹಿತ್ಯವನ್ನು ಹೊರತೆಗೆದು ಸರಳವಾಗಿ ಪರಿಚಯಿಸುವ 

ಕಾರ್ಯಕ್ಕೆ ಕನ್ನಡ ಬೆರಳಚ್ಚುಯಂತ್ರ ಶಿಲ್ಪಿ ಸ್ವರ್ಗೀಯ ಕೆ. ಅನಂತಸುಬ್ಬರಾಯರು ನನ್ನನ್ನು  

ಪ್ರೇರೇಪಿಸಿದರು.  ಸುಮಾರು ೩೦ ವರ್ಷಗಳ ಅಧ್ಯಯನದಿಂದ ಈ ಕಾರ್ಯವನ್ನು

ಸಾಧ್ಯವಿರುವಮಟ್ಟಿಗೆ ಯಶಸ್ವಿಯಾಗಿ ನಿರ್ವಹಿಸುವ ಭಾಗ್ಯ ನನ್ನದಾಯಿತು. 

 ಈ ಸುದೀರ್ಘವಾದ ಪಯಣದಲ್ಲಿ ನಮ್ಮ ಸಾಮಾಜಿಕ; ಪಾರಮಾರ್ಥಿಕ; ವೈಜ್ಞಾನಿಕ

ವಿಚಾರಗಳಿಗೆ ಸಂಬಂಧಿಸಿದ ಹಲವಾರು ಅಚ್ಚರಿಯ ಮಾಹಿತಿಗಳು ನನ್ನ  ಅರಿವಿಗೆ ದಕ್ಕಿದುವು.

ಅವುಗಳನ್ನು ಅಳವಡಿಸಿ ಸುಮಾರು ೩೦೦೦ ಪುಟಗಳ ವ್ಯಾಪ್ತಿಯಲ್ಲಿ ೯ ಪರಿಚಯಕೃತಿಗಳನ್ನು

ರೂಪಿಸಿದ್ದಾಯಿತು. ಇವುಗಳ ಭಾವಾನುವಾದದ ಸಂಗ್ರಹವನ್ನೂ ಇಂಗ್ಲಿಷ್ ಹಾಗೂ ಹಿಂದಿ 

ಭಾಷೆಯಲ್ಲಿ ಪ್ರಕಟಿಸಿದ್ದಾಯಿತು.  ಕನ್ನಡದ ಮಾನಸ್ತಂಭವಾದ ಈ ಮಹೋನ್ನತವಾದ ಕೃತಿಗೆ 

ಸೂಕ್ತವಾದ ಬೆಂಬಲ ದೊರೆಯಲಿಲ್ಲ! ಈ ಕಾವ್ಯದ ಸರಳ ಪರಿಚಯ ಕೃತಿಗಳನ್ನು 

ಉಚಿತವಾಗಿಯೂ ಹಂಚಿದ್ದಾಯಿತು.  ಆದರೂ ಈ ಕಾವ್ಯವನ್ನು ಆಸ್ವಾದಿಸುವುದು 

ಓದುಗರಿಗೆ ಕಠಿನವೆನಿಸಿತು.  ಈ ಕಾರಣದಿಂದಾಗಿ ಕಾವ್ಯಭಾಗವನ್ನು ಇಂದಿನ ಒತ್ತಕ್ಷರ 

ಕ್ರಮದಲ್ಲಿಯೇ ಪರಿವರ್ತಿಸಿ, ಎರಡು ಸಂಪುಟಗಳಾಗಿ ಸುಮಾರು ೯೦೦ ಪುಟಗಳವ್ಯಾಪ್ತಿಯಲ್ಲಿ 

ಜ್ಞಾನದಾನವಾಗಿ ಮುದ್ರಿಸಿ, ವಿತರಿಸುವ ಕಾರ್ಯ ನಿರ್ವಹಿಸಲು ಯೋಚಿಸಿದೆ. ಸಧ್ಯದಲ್ಲಿಯೇ 

’ಸಿರಿಭೂವಲಯದ ಸಂಕ್ಷಿಪ್ತ ಅಂತರ್ಸಾಹಿತ್ಯ ದರ್ಶನ’ ಎಂಬ ಕೃತಿಯು ಬೆಳಕುಕಾಣಲಿದೆ.  

ಸಿರಿಭೂವಲಯ ಕಾವ್ಯದಲ್ಲಿ ಅಡಕವಾಗಿರುವ ನೂರಾರು ಮಹತ್ವದ ಮಾಹಿತಿಗಳ ಪೈಕಿ

ಪ್ರಕೃತ ಈ ಲೇಖನದ ವಿಚಾರವೂ ಒಂದು.  ಇಲ್ಲಿನ ಓದುಗರಿಗೆ ಈ ಮಾಹಿತಿಯ ಪರಿಚಯ

ಆಗಲೆಂಬುದು ಈ ಬರಹದ ಉದ್ದೇಶ.

ಉನ್ನತವಾದ ಪರ್ವತದಂತೆಮಹೋನ್ನತವಾದ ಬ್ರಹ್ಮಾಂಡದ ಜಾಗದಲ್ಲೆಲ್ಲಾ  ಒಂದೇ ಕ್ಷಣದಲ್ಲಿ

ತಾನೇ ತಾನಾದ ಆತ್ಮನ ಉಗಮವನ್ನು ಕಾಣಿಸುವ ಆನನಂದದ ಎಣಿಕೆಯನ್ನು  ತಿಳಿಯಿರಿ’ 

ಎಂಬ  ಸಾರಾಂಶದ 

ಆನಗದಂತೆ ಮಹೋನ್ನತಬ್ರಹ್ಮಾಂಡ|

ತಾಣವೆಲ್ಲವ ತಾನೊಂದೇಕ್ಷಣದಲಿ|

ತಾನೇ ತಾನಾದಾತ್ಮನುಗಮವಕಾಣಿಪ|

ಆನಂದದಕ್ಷವರಿಯ||

(ಪ್ರಥಮಖಂಡದ ೨೮ನೇ ಅಧ್ಯಾಯದ ಪಾದಪದ್ಯಗಳ ಅಶ್ವಗತಿಯ ಅಂತರ್ಸಾಹಿತ್ಯದಲ್ಲಿ)

ಈ ಸಾಂಗತ್ಯ ಪದ್ಯದಲ್ಲಿ ಕವಿಯು ಬಹಳ ಸಂಕ್ಷಿಪ್ತವಾಗಿ;  ಖಚಿತವಾಗಿ ಈ 

ಸಾವಿನನಂತರದ ಆತ್ಮದ ಸ್ಥಿತಿಯನ್ನು ಕುರಿತು  ವಿವರಿಸಿರುವುದನ್ನು ಗಮನಿಸಿರಿ. 

ಸರ್ವವ್ಯಾಪಿಯಾದ ಪರಮಾತ್ಮನ ಸೂಕ್ಷ್ಮರೂಪವಾದ ಈ ಜೀವಾತ್ಮನಿಗೆ ಯಾವುದೇ 

ದೇಹದಲ್ಲಿನ ವಾಸದ ಅವಧಿಯು  ಆನಂದದ ವಿಚಾರವೇನಲ್ಲ ಎಂಬುದು ಸರ್ವವೇದ್ಯ. 

ಇದೊಂದು ರೀತಿಯ ಬಂಧನ.  ಇಂಥ ಸೀಮಿತ ಪರಿಧಿಯ ದೇಹದಿಂದ ಮುಕ್ತವಾದ

ಕೂಡಲೇ ಆತ್ಮಕ್ಕೆ ತಾನು ಬ್ರಹ್ಮಾಂಡವನ್ನೆಲ್ಲ ವ್ಯಾಪಿಸಿದವನು ಎಂಬುದಾಗಿ ತನ್ನ ಉಗಮದ

ವ್ಯಾಪ್ತಿಯ ಅರಿವಾಗಿ ಆನಂದವಾಗುತ್ತದೆ.  ಈ ಆನಂದದಲೆಕ್ಕವನ್ನು ತಿಳಿದಿಕೋ ಎಂಬುದಾಗಿ

ಕವಿಯು ಮಾರ್ಮಿಕವಾಗಿ ಸೂಚಿಸಿದ್ದಾನೆ.  

ಸಾವಿನನಂತರ ಆತ್ಮದ ಪ್ರೇತತ್ವ; ಈ ಪ್ರೇತತ್ವದ ಮುಕ್ತಿಗಾಗಿ  ನಡೆಯುವ ಕ್ರಿಯೆಗಳು;  ಆತ್ಮದ

ಪರಲೋಕ ಪ್ರಯಾಣ; ಅಲ್ಲಿ ಪಾಪ-ಪುಣ್ಯಗಳನ್ನು ಕುರಿತ ವಿಚಾರಣೆಯ ಲೆಕ್ಕಾಚಾರ;  

ಅದಕ್ಕನುಗುಣವಾಗಿ  ಪ್ರಾಪ್ತವಾಗುವ ಮುಂದಿನ ಜೀವನಮಾರ್ಗ; ಅದಕ್ಕೆ ಸೂಕ್ತವಾದ 

ಪುನರ್ಜನ್ಮ ಇತ್ಯಾದಿಗಳು ಮುಂದಿನ ವಿವರಗಳು.  ಆದರೆ, ಆತ್ಮವು  ದೇಹದಿಂದ 

ಹೊರಬಂದಕೋಡಲೇ ಅದಕ್ಕೆ ಉಂಟಾಗುವ ಅನುಭವವನ್ನು ಕುರಿತು ನೀಡಿರುವ 

ಸಾಹಿತ್ಯಿಕ ಮಾಹಿತಿಯಲ್ಲಿ ಸಿರಿಭೂವಲಯದ ಮಾಹಿತಿಯೇ ಅಪರೂಪದ್ದಾಗಿದೆ. 

ವೇದೋಪನಿಷತ್ತುಗಳ ವಿಸ್ತಾರವಾದ ವಿವರಣೆಗಳಲ್ಲಿ ಈ ಮಾಹಿತಿಯು  ಇರಬಹುದು;

ಅಥವಾ ಇಲ್ಲದಿರಬಹುದು. ಆದರೆ, ಕನ್ನಡದ ವೇದಾಂತವಾದ ತನ್ನ ಕಾವ್ಯದಲ್ಲಿ 

ಕವಿಯು ಈ ವಿಚಾರವನ್ನು ಖಚಿತವಾಗಿ ಸೂಚಿಸಿರುವುದನ್ನಂತೂ ನಾನು ಸರಳವಾಗಿ 

ಅರಿತಿದ್ದೇನೆ.  ಆತ್ಮವು ದೇಹವನ್ನು ತ್ಯಜಿಸಿ ಹೋಗುವ ’ಸಾವು’ ಎಂಬ ಕ್ರಿಯೆಯು 

ಯಾರಿಗೇ ಆಗಲೀ ಸಂಕಟದ ವಿಚಾರವಲ್ಲ.  ಆತ್ಮದ ಅತಿದೀರ್ಘ ಪಯಣದಲ್ಲಿ ಇದೊಂದು

ಅನಿವಾರ್ಯವಾದ ನಿಲ್ದಾಣ. ಇದಕ್ಕಾಗಿ ಸಂಕಟಪಡುವ ಬದಲಿಗೆ ಸಂತಸ ಪಡುವುದುದನ್ನು

ಅರಿತುಕೊಳ್ಳೋಣ. ಸಾವು ವ್ಯಕ್ತಿ ಜೀವನದಲ್ಲಿ ಸಂಭ್ರಮಿಸುವುದಲ್ಲವಾದರೂ 

ಸಂತಾಪಪಡುವುದಂತೂ ಅಲ್ಲವೆಂಬ ಅರಿವು  ನಮಗೆ ದೊರೆಯಲಿ. 

ತನ್ನ ಪ್ರಕೃತಜೀವನದುದ್ದಕ್ಕೂ ಹಲವಾರು ಜಂಜಡಗಳಿಂದ  ಜರ್ಜರಿತವಾಗಿರುವ ’ಆತ್ಮ’ಕ್ಕೆ 

ನಿಜಕ್ಕೂ ತನ್ನನ್ನು ಬಂಧಿಸಿರುವ  ದೇಹ ಮೋಹದ ವಿಚಾರದಲ್ಲಿ  ಜುಗುಪ್ಸೆಯುಂಟಾಗುವುದು

ಸಹಜ.  ಈ ಬಂಧನದಿಂದ ಬಿಡುಗಡೆಯಾದಕೂಡಲೇ ತನ್ನ  ನಿಜವಾದ ಸ್ವರೂಪದ ಅರಿವಾಗಿ 

ಅದಕ್ಕೆಮಹತ್ತರವಾದ  ಆನಂದ ಉಂಟಾಗುವುದು  ಸಹಜ. ಈ ಆನಂದದ ಪರಿಧಿಯ ಲೆಕ್ಕವನ್ನು

ತಿಳಿಯಿರಿ ಎಂದು ಕವಿಯು ಸೂಚಿಸಿದ್ದಾನೆ. ಹೀಗಾಗಿ ಸಾವೆಂಬುದು ನಮಗೆ  ಸಂತಸದ  

ಸಂಗತಿಯೇ ಹೊರತು; ಸಂತಾಪದ ವಿಚಾರವಂತೂ ಅಲ್ಲವೇ ಅಲ್ಲ. ಈ ರೀತಿಯಲ್ಲಿ 

ಮಹತ್ವದ ಹಲವಾರು  ಮಾಹಿತಿಗಳನ್ನು  ಸರಳವಾಗಿ ಓದಿತಿಳಿಯಲು  ಮುಂದೆ ಬೆಳಕುಕಾಣಲಿರುವ

 ’ಸಿರಿಭೂವಲಯದ ಸಂಕ್ಷಿಪ್ತ ಅಂತರ್ಸಾಹಿತ್ಯ ಸೌರಭ’ ಭಾಗ ೧ಮತ್ತು ೨ ಅನ್ನು ಉಚಿತವಾಗಿ

ಪಡೆಯಲು ಸಂಪರ್ಕಿಸಿ: ೭೬೭೬೪೭೪೯೭೨.  ಕೃತಿ ಪ್ರಕಟಣೆಯ ದಿನಾಂಕವನ್ನು ಕುರಿತು

ಸಧ್ಯದಲ್ಲೇ  ಇಲ್ಲಿ ಪ್ರಕಟಿಸಲಾಗುವುದು.  ಈ ವಿಚಾರದಲ್ಲಿ ಆಸಕ್ತಿ ಇರುವವರು ಮಾತ್ರ

ಸಂಪರ್ಕಿಸಿ. ಉಳಿದವರು ಅನವಶ್ಯಕವಾಗಿ ಪ್ರತಿಕ್ರಿಯಿಸುವುದು ಸೂಕ್ತವಲ್ಲ.

ಸಿರಿಭೂವಲಯದಸುಧಾರ್ಥಿ, ಹಾಸನ.

***