Friday 6 November 2020

ಕನ್ನಡದ ಜೈನ ಮುನಿ ಕುಮುದೇಂದುವಿನ ಮಹತ್ವ

 ಜಗತ್ತಿನ ಸಾಹಿತ್ಯೇತಿಹಾಸದಲ್ಲಿ ಕುಮುದೇಂದುಮುನಿಯ ಸ್ಥಾನವು ಅನನ್ಯವಾದುದೆಂಬುದರಲ್ಲಿ ಎರಡುಮಾತಿಲ್ಲ.  ವೇದಗಳು  ಜಗತ್ತಿನಲ್ಲಿ ಅಪೌರುಷೇಯವಾದುವು  ಅದರಮುಂದೆ ಇದಾವುದು ಹಿರಿಮೆಯ ಕಾವ್ಯ!? ಎಂದು ಪ್ರಶ್ನಿಸುವವರಿಸುವುದು ಸಹಜ.  ಆದರೆ,  ಇಲ್ಲಿ ಚರ್ಚಿಸುತ್ತಿರುವ ಅಚ್ಚರಿಯ ಕನ್ನಡಕಾವ್ಯವು  ’ಕನ್ನಡದವೇದ’ವೇ ಆಗಿರುವುದರಿಂದ , ಅದನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ!! 

ಆಧುನಿಕ ವಿಜ್ಞಾನದ ಪಾದಸೇವಕರಾಗಿರುವ  ಇಂದಿನ ಜನತೆಗೆ ಪ್ರಾಚೀನಭಾರತದ ಜೀವನಮೌಲ್ಯಗಳೆಂದರೆ,  ಇನ್ನಿಲ್ಲದ ಅಸಡ್ಡೆ. ಇಂಥ ಅನುಚಿತ ಭಾವನೆಗೆ ಸವಾಲಾಗಿರುವ ೧೨೦೦ ವರ್ಷಗಳ  ಹಿಂದಿನವನಾದ  ಸಾರ್ವಕಾಲಿಕ  ಕನ್ನಡದ  ಆದಿ ಕವಿ ದಿಗಂಬರ ಜೈನ ಸಂಪ್ರದಾಯದ ಯತಿ ಕುಮುದೇಂದುಮುನಿಯು ತನ್ನ ಕಾವ್ಯದಲ್ಲಿ ’ಅಡಗಿಸಿಟ್ಟಿರುವ’  ಅನರ್ಘ್ಯ ಜ್ಞಾನ ಭಂಡಾರದಿಂದಾಗಿ,  ಲೋಕವಿಖ್ಯಾತನಾಗಿದ್ದಾನೆ. 

ಈ ಕವಿಯ ’ಸಿರಿಭೂವಲಯ’ ಕಾವ್ಯದ ಮೂಲವು ಎಂಟರ ಆದಿ. ಎಂಟರ ವರ್ಗವಾದ ೬೪ ಅಂಕಿಗಳು. ಈ ೬೪ ಅಂಕಿಗಳಿಗೆ  ಅನ್ವಯವಾಗುವ  ಸರ್ವಭಾಷಾಮಯಿಭಾಷೆಯಾದ ಕನ್ನಡದ ೬೪ ಅಕ್ಷರಗಳಲ್ಲಿ ಜಗತ್ತಿನ ಎಲ್ಲಭಾಷೆಗಗಳ ಎಲ್ಲ ಜ್ಞಾನದ ಬರಹವನ್ನೂ  ಒಂದೆಡೆ. ಕನ್ನಡ ಲಿಪಿರೂಪದಲ್ಲಿ ಕಟ್ಟಿರಿಸಿರುವ  ಜಗತ್ತಿನ ಏಕೈಕ ಕವಿ  ಕುಮುದೇಂದುಮುನಿ. ಈತನ ಜ್ಞಾನದ ಪರಿಧಿ ’ಸರ್ವಜ್ಞತ್ವ’ ಇದನ್ನು ಕುರಿತಾದರೂ ಇಂದಿನ ಕನ್ನಡಿಗರು; ವಿಶೇಷವಾಗಿ ಜೈನಸಮುದಾಯದವರು ಈ ಕವಿಯನ್ನು ನಮ್ಮವನೆಂದು ಹೆಮ್ಮೆ ಪಡಬೇಕಾದುದು ಅನಿವಾರ್ಯ. 

ಸಿರಿಭೂವಲಯಕಾವ್ಯವು ’ಸರ್ವಭಾಷಾಮಯಿ’  ’ಸರ್ವಶಾಸ್ತ್ರಮಯಿ’  ’ಸರ್ವಜ್ಞಾನಮಯಿ’ ಎಂದು ಸೂಚಿತವಾಗಿದೆ.  ವ್ಯಕ್ತಿಜೀವನಕ್ಕೆ ಸಂಬಂಧಿಸಿದಂತೆ ಲೌಕಿಕ ಹಾಗೂ ಪಾರಮಾರ್ಥಿಕವಿಚಾರಗಳೂ ಈ ಕಾವ್ಯದಲ್ಲಿ ತುಂಬಿವೆ! ಇದರಲ್ಲಿ ಅಡಕವಾಗದಿರುವ ಯಾವ ವಿಚಾರವೂ ಉಳಿದಿಲ್ಲ!  ಅಂಕಕಾವ್ಯವಾಗಿ ಪರಿವರ್ತಿತವಾಗಿರುವ ಈ ಕಾವ್ಯದಲ್ಲಿ ಅಂಕಿಗಳು, ಅಣುವಿಜ್ಞಾನ, ಆಕಾಶಗಮನ, ಗಣಕಯಂತ್ರಕ್ರಮ, ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಮಾಹಿತಿಗಳನ್ನು ವಿವರಿಸಿದ್ದಾಗಿದೆ. 

ಜೀವನದಲ್ಲಿ ಕೆಲವು ನಂಬಿಕೆಗಳಿಗೆ ಸಂಬಂಧಿಸಿದಂತೆ, ’ಮೂಢನಂಬಿಕೆಗಳು’ ಎಂದು ಅಪಪ್ರಚಾರ ಹೊಂದಿರುವ ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ಈಗ  ವಾಸ್ತವವಾದ ಕೆಲವೊಂದು ಮಾಹಿತಿಯನ್ನು ಗಮನಿಸೋಣ. 

ಇಂದಿನ ದಿನಗಳಲ್ಲಿ ಜೋತಿಷಿಗಳುಹಾಗೂ ಜೋತಿಶ್ಶಾಸ್ತ್ರದ ವಿಚಾರವಾಗಿ ಹೆಚ್ಚಿನ ಅವಹೇಳನೆ ಇರುವುದು ಸರ್ವವೇದ್ಯ.  ಇದೊಂದು ಅವೈಜ್ಞಾನಿಕಶಾಸ್ತ್ರವೆಂದು ಬಹಳಷ್ಟುಜನ  ನಿರ್ಧರಿಸಿದ್ದಾಗಿದೆ. ಫಲಜೋತಿಷ್ಯಕ್ಕೆ ಸಂಬಂಧಿಸಿದಂತೆ ಕುಮುದೇಂದು ಮುನಿಯು ರೂಪಿಸಿರುವ ಒಂದು ಚಕ್ರವನ್ನು ಕುರಿತು ಈಗಾಗಲೇ ವಿವರಿಸಿದ್ದಾಗಿದೆ.  ಉದ್ದಗಲಗಳಲ್ಲಿ ೨೭x೨೭ ರಂತೆ ವಿಸ್ತಾರವಾದ ಚೌಕಾಕೃತಿಯನ್ನು  ೭೨೯ ಚೌಕಗಳಾಗಿ ವಿಂಗಡಿಸಿ, ಅವನ್ನು ನವಮಾಂಕ ಕ್ರಮದಲ್ಲಿ ೯ ಭಾಗಗಳಾಗಿ ವಿಂಗಡಿಸಿ, ಅದರಲ್ಲಿ ಎಡಬದಿ ಹಾಗೂ ಮೇಲಿನ ಬದಿಯಲ್ಲಿ ದಿನದ ನಕ್ಷತ್ರಗಳು  ಮತ್ತು  ವ್ಯಕ್ತಿಯ ಜನ್ಮನಕ್ಷತ್ರಗಳನ್ನು ಕ್ರಮವಾಗಿ ನಮೂದಿಸಿ, ೭೨೯ ಚೌಕಗಳಲ್ಲೂ  ೧ ರಿಂದ ೯ ರವರೆಗಿನ ಅಂಕಿಗಳನ್ನು ’ಸೂತ್ರಾಂಕ’ ಗಳಾಗಿ ಸರ್ವ ಸಮಾನವಾಗಿರುವಂತೆ ಸೂತ್ರಬದ್ಧವಾಗಿ ತುಂಬಿರುವಂತೆ ಚಕ್ರವನ್ನು ರೂಪಿಸಲಾಗಿದೆ.  ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಸಿರಿಭೂವಲಯದ ಸರಳ ಪರಿಚಯಕೃತಿಯಲ್ಲಿ ವಿವರಿಸಲಾಗಿದೆ. ಈಗ ಇಲ್ಲಿ ಈ ಫಲಜೋತಿಷ್ಯದ ವಿಚಾರವಾಗಿ ಕವಿಯು ಸೂಚಿಸಿರುವ ಖಚಿತವಾದ ವಿವರಕುರಿತು ತಿಳಿದುಕೊಳ್ಳೋಣ. 

ಸೂರ್ಯ, ಚಂದ್ರ, ತಾರೆಗಳ ಉದಯಾಸ್ತವನ್ನು ತಿಳಿದುಕೊಂಡು, ವ್ಯಕ್ತಿಜೀವನದಲ್ಲಿ ತ್ರಿಕಾಲಗಳಿಗೆ ಸಂಬಂಧಿದ ( ಭೂತ, ವರ್ತಮಾನ. ಭವಿಷ್ಯತ್ ಕಾಲ)  ಸುಖ ದುಃಖದ ವಿವರಗಳನ್ನು ಖಚಿತವಾಗಿ ಅರಿಯಬಹುದೆಂದು ಕಾವ್ಯದಲ್ಲಿ ಸೂಚಿಸಲಾಗಿದೆ.   ಇದನ್ನೂ ಮೀರಿ,  ವ್ಯಕ್ತಿಯ ಮರಣಕಾಲವನ್ನೂ ಸದರವಾಗಿ  ಅರಿಯಬಹುದೆಂದು ಕವಿಯು ಸೂಚಿಸಿರುವುದಿದೆ.!  ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ಒಂದು ಸ್ಪಷ್ಟನೆ ಅತ್ಯಗತ್ಯ. ಈ ಕಾವ್ಯದ ವ್ಯಾಪ್ತಿ ೯ ಖಂಡಗಳು. ಅದರಲ್ಲಿ ಮಂಗಳಪ್ರಾಭೃತವೆಂಬ ಮೊದಲನೇ ಖಂಡವು ಪೀಠಿಕಾರೂಪದ್ದಾಗಿದ್ದು, ಇದರಲ್ಲಿ ಸಮಗ್ರಕಾವ್ಯದ ವಿಷಯವ್ಯಾಪ್ತಿಯನ್ನು ಪರಿವಿಡಿಯರೂಪದಲ್ಲಿ ನೀಡಲಾಗಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿಗಳ ವಿವರವನ್ನು ಮುಂದಿನ ಖಂಡದಲ್ಲಿ ಸೂಚಿಸಲಾಗಿರುತ್ತದೆ. ಈ ಅಂಶವನ್ನು ಗಮದಲ್ಲಿರಿಸಿಕೊಳ್ಳಬೇಕಾದುದು ಓದುಗರ ಕರ್ತವ್ಯ. 

 ಈ ರೀತಿಯ ’ಭವಿಷ್ಯ’ ಹೇಳುವುದು ಕೆಲವರ ಹೊಟ್ಟೆಪಾಡಿನ ಉದ್ಯೋಗವಾಗಿದೆ.  ಅಮಾಯಕಜನರನ್ನು ವಂಚಿಸಿ, ಶೋಷಿಸುವುದಕ್ಕೆ ಇದೊಂದು ತಂತ್ರ ಎಂದು ಕೆಲವರು ವಾದಿಸುವುದಿದೆ. ಆದರೆ,, ಸರ್ವಸಂಗಪರಿತ್ಯಾಗಿಯಾಗಿದ್ದ ಈ ದಿಗಂಬರ ಮುನಿಯು  ಇಂದಿನವರು ಭಾವಿಸುವಂತೆ ಹೊಟ್ಟೆಯಪಾಡಿಗಾಗಿ ಈ ಅಮೂಲ್ಯಮಾಹಿತಿಯನ್ನು ತನ್ನ ಶಾಶ್ವತಕಾವ್ಯದಲ್ಲಿ ಅಡಗಿಸುವ ಅಗತ್ಯವಿರಲಿಲ್ಲವೆಂಬುದು ಗಮನಾರ್ಹವಾದುದು. 

ಸ್ತ್ರೀಪುರುಷರ ಸಮಾಗಮದಿಂದ ನೂತನ ಶಿಶುವು ಉಗಮವಾಗುವುದಕ್ಕೆ ಸಂಬಂಧಿಸಿದ  ವೈಜ್ಞಾನಿಕ ಮಾಹಿತಿಯ ವಿವರಗಳನ್ನು ಕುರಿತು ಈಗಾಗಲೇ ವಿವರಿಸಿದ್ದಾಗಿದೆ.  ಈಗ ವ್ಯಕ್ತಿಯ ಶರೀರದಲ್ಲಿ  ಭೌತಿಕದೇಹದ ಇರುವಿಕೆಗೆ ಅಗತ್ಯವಾದ ’ಸಪ್ತಧಾತು’ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವಲ್ಪ ಗಮನಿಸೋಣ. ವ್ಯಕ್ತಿಯ ತಲೆಯೊಳಗಿರುವ ’ಮಿದುಳು’ ; ಶರೀರಾದ್ಯಂತವಿರುವ  ರಸ,  ದೇಹದೆಲ್ಲೆಡೆಯೂ ಇರುವ ಯುಕ್ತಪ್ರಮಾಣದ  ಮಾಂಸ,  ಅತಿಸೂಕ್ಷ್ಮವಾದ ನಳಿಕೆಯಾಗಿರುವ ನರಮಂಡಲ, ಅವುಗಳಲ್ಲಿ ಪ್ರವಹಿಸುವ ರಕ್ತ, ಶರೀರಕ್ಕೆ ಆಸರೆಯಾಗಿರುವ  ಮೂಳೆಗಳು (ಅಸ್ತಿ)  ಮುಂದಿನಸಂತತಿಯ ನಿರ್ಮಾಣಕ್ಕೆ ಅತ್ಯಗತ್ಯವಾದ  ಶುಕ್ಲ (ವೀರ್ಯ); ಇತ್ಯಾದಿಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ನಾವು ಸಿರಿಭೂವಲಯಕಾವ್ಯದಲ್ಲಿ ಕಾಣಬಹುದು! 

ಭೌಮವೆಂದರೆ, ಭೂಮಿಗೆ ಸಂಬಂಧಿಸಿದ್ದೆಂದು ಅರ್ಥ.  ಆಕಾಶ, ಮಂಗಳ, ನೀರು ಎಂಬ ಅರ್ಥವ್ಯಾಪ್ತಿಯೂ ಈ ಪದಕ್ಕಿದೆ.  ಈ ಭೌಮದ ಸಾಂದ್ರತೆಯನ್ನವಲಂಬಿಸಿ ಭೂಮಿಯಲ್ಲಿ  ಚಿನ್ನ, ತಾಮ್ರ, ಕಬ್ಬಿಣ ಮುಂತಾದ ಲೋಹಗಳ ನಿಕ್ಷೇಪವಿರುವುದರ ವಿವರವು ಸಿರಿಭೂವಲಯದಲ್ಲಿ ಅಡಕವಾಗಿದೆ!  ಮಣ್ಣಿನ ಗಡಸುತನ ಹಾಗೂ ಮೃದುತ್ವ ವನ್ನವಲಂಬಿಸಿ  ಈ ನಿಕ್ಷೇಪವಿರುವುದರ ಮಾಹಿತಿ ಇದೆ.   ಪ್ರಾಚೀನ ಭಾರತೀಯರು ಮಂಕುದಿಣ್ಣೆಗಳು. ಬ್ರಿಟಿಷರು ಮಹಾನ್ ಮೇಧಾವಿಗಳು. ಅವರು ತಮ್ಮ ಪ್ರತಿಭೆಯಿಂದ ಕೋಲಾರದ ಚಿನ್ನದಗಣಿಯನ್ನೆ ಪತ್ತೆಮಾಡಿ, ಭಾರತದ ಸಂಪತ್ತನ್ನು ಹೆಚ್ಚಿಸಿದರು ಎಂಬ ಭ್ರಮೆ ಕೆಲವರಲ್ಲಿದೆ! ಪ್ರಾಚೀನಭಾರತೀಯರಲ್ಲಿ ಪ್ರಾಕೃತಿಕವಾದ ನಿಧಿ ನಿಕ್ಷೇಪಗಳನ್ನು ಸಂರಕ್ಷಿಸುವ ಸಂಪ್ರದಾಯವಿತ್ತೇ ವಿನಃ, ಅದನ್ನು ಬಗೆದು ಬಳಸಿಕೊಳ್ಳುವ ಮೂರ್ಖತನವಿರಲಿಲ್ಲ!! ಶ್ರಮವಹಿಸಿ, ದುಡಿದು ತಿನ್ನುವ ಕ್ರಮವಿತ್ತೇ ವಿನಃ, ಯಾವುದೇ ’ಪುಕ್ಕಟೆ’ ಭಾಗ್ಯಗಳ ಕೊಡುಗೆ ಇರಲಿಲ್ಲ!!  ಬೆಟ್ಟಗಳನ್ನೇ ಪುಡಿಮಾಡಿ, ಮಾರಾಟಕ್ಕಿಟ್ಟು, ನುಂಗಿನೀರುಕುಡಿಯುವವರು ನಿಧಿ ನಿಕ್ಷೇಪ್ಪಗಳನ್ನು ರಕ್ಷಿಸುವುದುಂಟೇ!!?? 

ವ್ಯಕ್ತಿಯು ನಿದ್ರೆಯಲ್ಲಿದ್ದಾಗ ಕಾಣುವ ಕನಸು, ಈ ಕನಸುಗಳು ವ್ಯಕ್ತಿಯ ಭವಿಷ್ಯಜೀವನದ ಸೂಕ್ಷ್ಮಮುನ್ಸೂಚನೆಯಾಗಿರುವುದೆಂಬ ಹೇಳಿಕೆಯು  ಕೆಲವರಿಗೆ  ಅಪಹಾಸ್ಯದ ಸಂಗತಿಯಾಗಿರುತ್ತದೆ!  ಪ್ರಾಚೀನ ಭಾರತೀಯರು ಪ್ರತಿಪಾದಿಸಿರುವ ಜಾಗ್ರತ್, ಸ್ವಪ್ನ, ಸುಷುಪ್ತಿ  ಎಂಬ ಅವಸ್ಥಾತ್ರಯಗಳನ್ನು ಕುರಿತು ಆಧುನಿಕ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಕೆಲವರು ನಂಬುತ್ತಾರೆ, ಕೆಲವರು ತಟಸ್ಥರಾಗುತ್ತಾರೆ. ಈ ಅವಸ್ಥಾತ್ರಯಗಳು ಅರ್ಥಹೀನವಾದ ಹೇಳಿಕೆಗಳಲ್ಲ ಎಂಬುದಕ್ಕೆ ಸಿರಿಭೂವಲಯದಲ್ಲಿ ವಿವರವಿದೆ!

 ಸ್ವಪ್ನವನ್ನು ಕುರಿತ ಹೇಳಿಕೆಗಳಿಗೆ ಕಾವ್ಯದಲ್ಲಿ ಯಾವುದೇ ರೀತಿಯ ವಂಚನೆಯ ಲೇಪವೂ ಇಲ್ಲ!!  ವ್ಯಕ್ತಿಯು ಕನಸಿನಲ್ಲಿ ಕಾಣುವ  ಫಲಗಳು (ಹಣ್ಣುಗಳು) ಪುಷ್ಪಗಳು, ಪ್ರಾಣಿಗಳು, ಸನ್ನಿವೇಶಗಳು ಇತ್ಯಾದಿಗಳಿಗೆ ಬೇರೆ ಬೇರೆಯ ಸೂಕ್ಷ್ಮತೆಗಳಿರುತ್ತವೆ.  ಇವುಗಳನ್ನಾಧರಿಸಿ, ಮುಂದೆ ಎದುರಾಗುವ ಸುಖ ದುಃಖಗಳನ್ನು ತಿಳಿಯಬಹುದೆಂಬ  ಸೂಚನೆಯಿದೆ. ಕತ್ತೆ, ಒಂಟೆ ಇತ್ಯಾದಿ ಪ್ರಾಣಿಗಳು ಕನಸಿನಲ್ಲಿ ಬಂದಾಗ; ಪರದೇಶಕ್ಕೆ ಪ್ರಯಾಣವೆಂಬ ಸೂಕ್ಷ್ಮವನ್ನು ತಿಳಿಸಲಾಗಿದೆ.  ಇಲ್ಲಿ ಓದುಗರು ಗಮನಿಸಬೇಕಾದ ಒಂದು ಮಹತ್ವವಿದೆ. ಈ ರೀತಿಯ ಕನಿಸಿನ ಫಲವನ್ನು ತಿಳಿಯುವಲ್ಲಿ, ಕನಸುಕಂಡ ವ್ಯಕ್ತಿಯ ಆರೋಗ್ಯವು  ವಾತ, ಪಿತ್ಥಾದಿಗಳ ಆಧಿಕ್ಯದಿಂದ ಕೂಡಿರಬಾರದು! 

ಪ್ರಾಣಿಗಳು ಹಾಗೂ ಮಾನವರು ಚಿತ್ರ ವಿಚಿತ್ರವಾಗಿ ಅರಚುವುದನ್ನು (ಕಿರುಚಿಕೊಳ್ಳುವುದು) ಅದಕ್ಕೆ ಸಂಬಂಧಿಸಿದ ಸುಖ ದುಃಖವನ್ನು ಅರಿತುಕೊಳ್ಳುವ ಬಗೆಯನ್ನು ಕಾವ್ಯದಲ್ಲಿ ತಿಳಿಸಲಾಗಿದೆ. 

ಈರೀತಿಯ ಮಾಹಿತಿಗಳೆಲ್ಲವೂ ಪ್ರಾಚೀನಭಾರತದ ಶಕುನಶಾಸ್ತ್ರ ಹಾಗೂ ಇನ್ನಿತರ ಶಾಸ್ತ್ರಗಳಿಗೆ ಸಂಬಂಧಿಸಿದ ಮಾಹಿತಿಗಳಾಗಿರುತ್ತವೆ. ಇವುಗಳನ್ನು ’ಮೂಢನಂಬಿಕೆಗಳು’ಎಂದು ನಿರಾಕರಿಸುವುದು ಅಥವಾ ’ಶಾಸ್ತ್ರವಚನ’ಗಳೆಂದು ಗೌರವಿಸುವುದು ವ್ಯಕ್ತಿಯ ಇಚ್ಛೆಗೆ ಸೇರಿದ್ದಾಗಿದೆ. ಯಾವುದನ್ನೇ ಆಗಲೀ, ಒತ್ತಾಯಪೂರ್ವಕವಾಗಿ ಅನುಸರಿಸಬೇಕೆಂಬ ಒತ್ತಡವನ್ನೆಲ್ಲಿಯೂ ನಮ್ಮ ಶಾಸ್ತ್ರಗ್ರಂಥಗಳು ಹೇರಿಲ್ಲವೆಂಬುದು ಗಮನಾರ್ಹ.  

ಸಿರಿಭೂವಲಯದಸುಧಾರ್ಥಿ. 


Friday 16 October 2020

 ಡಾ|| ಎಸ್. ಶ್ರೀಕಂಠಶಾಸ್ತ್ರಿ

ಯವರ ಹೇಳಿಕೆಯಂತೆ ೧೯೫೩ರಲ್ಲಿ
ಸಿರಿಭೂವಲಯದ ಕಾರ್ಯವು
ಜಗತ್ತಿನಲ್ಲಿ ೭-೮ ಜನಗಳಿಗೆ
ಮಾತ್ರ ಆಸಕ್ತಿ ಇರುವುದೆನಿಸಿತ್ತು!
ಈಗ Fb ಒಂದರಲ್ಲೇ ಸುಮಾರು
೨೦ಕ್ಕೂ ಹೆಚ್ಚುಜನ ಈ ಕಾವ್ಯದಲ್ಲಿ
ಅಭಿಮಾನ ಹೊಂದಿದ್ದಾರೆ!
೩೦ ವರ್ಷದಲ್ಲಿ ಸುಧಾರ್ಥಿಯು
ಸಾಧಿಸಿದ್ದು ಇದಿಷ್ಟನ್ನೇ!!
ಇಂದಿನ ವೈಜ್ಞಾನಿಕಯುಗದಲ್ಲಿ
ಲಕಾಂತರ ಜನಗಳಿಗೆ ಒಮ್ಮೆಗೇ
ಈಕಾವ್ಯದಪರಿಚಯಒದಗಿದರೂ
ದೊರೆತಫಲವಿದು ಗುಡ್ಡವನು
ಬಗೆದು ಇಲಿಯನ್ನುಹಿಡಿದಂತೆ!!
ಕನ್ನಡದ ಕುಲದವರ
ಕಾವ್ಯದಾಸಕ್ತಿಯೂ
ಇದಕಿಂತ ಬೇರಲ್ಲ
ಭೂವಲಯದೊಳಗೆ!!
ಕುದುರೆಯನು ಕರೆದೊಯ್ದು
ಕೆರೆಯೊಳಗೆ ನಿಲಿಸಿದರು,
ನೀರಕುಡಿಯುವುದದುವೆ
ಕುದುರೆಯಾ ಮನದಿಚ್ಛೆ!!
ಕೆರೆಯ ಅಂಗಳಕಂತು
ಕರೆದೊಯ್ದುದಾಗಿಹುದು
ಕುಡಿಯದಲೆ ಬಿಡುತಿರಲು
ನನಗೇಕೆ ಚಿಂತೆ!?
ಸಿರಿಭೂವಲಯದ
ಸುಧೆಯನು ಸವಿಯುತ
ವೃದ್ಧಿಸಲಿನಿಮ್ಮಗಳ
ಸಂಸ್ಕಾರಶರಧಿಯದು
ಜಗದಪರಿಧಿಯವರೆಗೆ.
ಅಧಿಕಮಾಸವಿದು
ಅಧಿಕವಾಗುತಲಿರಲಿ
ಅಧಿಕಜನಗಳಿಗದುವೆ
ಅಧಿಕಫಲತರುತಿರಲಿ
ಹೌದು ಪೂರ್ವಸಿದ್ಧತೆಗಾಗಿ
ಈಕಾವ್ಯದ ಸರಳಪರಿಚಯದಲ್ಲಿ
ಅಲ್ಪ ವಿರಾಮವಿದ್ದದ್ದುನಿಜ.
ಈಗ ಮತ್ತೆ ಹರಿಯಲಿದೆ ಈ
ಕಾವ್ಯರಸದಾ ಪ್ರವಾಹ.
ಸಧ್ಯದಲ್ಲಿಯೇ!!!
-ಸಿರಿಭೂವಲಯದಸುಧಾರ್ಥಿ.

Sunday 4 October 2020

ಕುಮುದೇಂದು/ಪಂಪರೊಳು ಮಿಗಿಲಾರು ಜಗದೊಳಗೆ ಈ ಈರ್ವರೊಳಗೆ?

ಕುಣಿದುಕುಪ್ಪಳಿಸುತಿವೆ ಕೂಪಮಂಡೂಕಗಳು

ಪಂಪನೆಂಬುವನವನೆ ಹಳಗನ್ನಡದ ಮೊದಲ ಕವಿಯೆಂದು! 

ತನ್ನೊಡೆಯನ ಬೆಡಗಂ ಪಿಡಿದು  ’ಪಂಪಭಾರತ’ಮೆಂಬ ’ವಿಕ್ರಮಾರ್ಜುನವಿಜಯ’

ವನು ರಚಿಸಿದೊಡೆ  ಪಂಪನೆಂದು ನೆಗಳ್ತೆವೆತ್ತವನ ಪೊಗಳ್ವುದು ಆಪದಮಲ್ತೆ!?

ಪಂಪನುಸುರಿದವಾಣಿಯ ಕಂಪಿನೊಡಗೂಡಿ ’ಅರ್ಥ’ಪಡೆದವರೆಷ್ಟು ಪೊಡವಿಯೊಳಗೆ!? ಪಂಪನಾಡಿದನುಡಿಯ ಬಿಡಿಸಿಪೇಳ್ದವನೆಂದು  ಖ್ಯಾತಿವೆತ್ತವನೋರ್ವನೇ ಧಾರಿಣಿಯೊಳುತಾ ಮುಳಿಯತಿಮ್ಮನಲಾ! ತಿಮ್ಮಪಯ್ಯನು ಬಿಡಿಸಿದ ನುಡಿಯಬಲದಲಿ ಮುಂದೆ ಮೆರೆದರು  ಅತುಲ ಭುಜಬಲ ಪರಾಕ್ರಮಿಗಳುತಾವ್ ಪೊಡವಿಯೊಳ್ ಪಂಪನ ಪೆಸರ ಮುಗಿಲಿಗೇರಿಸಿದೆವೆಂದು!!

ಈ ಮುದಲ್  ’ಅಭಿನವಪಂಪ’ನೆಂಬಗ್ಗಳಿಕೆ ಪೊಂದಿರ್ದ ಹದಿನಾಲ್ಕುಶತಕಗಳ ಹಿದಿನವ ನಾಗಚಂದ್ರನೂ ತಾನ್  ’ಪಸರಿಪ ಕನ್ನಡಕ್ಕೊಡೆಯನೋರ್ವನೇ ಸತ್ಕವಿ ಪಂಪನಾವಗಂ’  ಎಂದು ಪರಾಕುಹೇಳಿದವ! ಮುಂದಡಿಯಿಡಲ್  ’ಕುವೆಂಪು’ ಪೂರ್ವದ ಬಿ.ಎಂ.ಶ್ರೀ. ಟಿ.ಎಸ್. ವೆಂಕಣಾರ್ಯರೂಂ  ಅನಂತರದ, ತ.ಸು.ಶಾಮರಾಯ, ತುಸು ಮುಂದಿನ  ಹಂಪನಾ ಇತ್ಯಾದಿಗಳ್ ’ಪಂಪ ನಭೂತೋ ನಭವಿಷ್ಯತಿ’  ಎಂದಂದು ಪಂಪನಹೊಗಳುಭಟರೇ ಆಗಿರ್ಪರ್. 

ತನಗೆ ಅಶ್ರಯವಿತ್ತ ಅರಿಕೇಸರಿಯಂ ಪೊಗಳಿ, ಭಾರತದ ಕಥೆಯ ಹಸಗೆಡಿಸಿದ ಪಂಪನ ಗುರಿಯದುತಾನ್ ತನ್ನಯ ಧಣಿಯಕೀರ್ತಿಯು ಶಾಶ್ವತಮಾಗಿರಲೆಂಬುದೊಂದೆವಲಾ. 

 ಆದೊಡಮಿದು ಅಲ್ಪಾಕಾಂಕ್ಷೆ ನಿಚ್ಚಂಮಿದು.

ಪಂಪಪೂರ್ವದ ಶತಕದಿ ಅವತರಿಸಿರ್ದ, ಕುಮುದೇಂದುಮುನಿತಾಂ ಆವ ಅರಸನ ಊಳಿಗದ ಕೂಳಿಗೂ ಕೈಯೊಡ್ಡದವ ತಾನ್. ಸರ್ವಜ್ಞತಾನ್ ದಿಟದಿ. ಜಗದೆಲ್ಲ ಜ್ಞಾನವಂ ವೇದಮಾರ್ಗದಲರಿದವಂ, ಜಗದೊಳಿರುವೆಲ್ಲ ಭಾಷೆಗಳ ಕೃತಿಗಳಂ ಪಿಡಿದೌಂಕಿಸಿತನ್ನ ಕಾವ್ಯದಲಿ ಗಿಡಿದುತುಂಬಿದ ಜಗದೇಕೈಕ ಕವಿ ಪುಂಗವನೀತಂ ಕುಮುದೇಂದು. ಜಗದ ಜ್ಞಾನ,  ಸುಜ್ಞಾನ, ವಿಜ್ಞಾನವಾವುದೇ ಇರಲಿ, ಅವುಗಳಂ ತನ್ನ ಅಂಗುಲಿಯಮೂಲದಲಿ ಕುಣಿಸಿಬಿಸುಟವನೀತಂ   ತಾನಂದು ಹಿಂದಿಂದು, ಮುಂದಿನರೆಲ್ಲರ ಭಾಷಾಶೈಲಿಯಂ  ತಂದು ತುಂಬಿದನು ತನ್ನ ಕಾವ್ಯದುದರದಲಿ. 

ತನ್ನಕಾವ್ಯದ ಹಿರಿಮೆ ಗರಿಮೆಯಕುರಿತು ಬಾರಿಬಾರಿಗೂ ಒರೆದಿರುವನೀತಂ. ತನ್ನನುಂ ಕುರುತಿಲ್ಲಿ ಬರೆದಿರುವುದತಿಅಲ್ಪಂ! 

ಕನ್ನಡದ ಜನುಮವದು ಜಗದಾದಿಯಿಂದೆಂದು ಉಸುರಿ, ತ್ರಿಕಾಲಂಗಳಲಿ ನವರೂಪ ಧರಿಸಿರ್ಪ  ಕನ್ನಡದ ಸೊಗಡು ಸುಭಗತೆ ಸರಳತೆಯ ಶಿಖರಗಳ ನೌಕಿಸಿತನ್ನ ಕಾವ್ಯದಲಿ ಚಿರಸ್ಥಾಯಿಗೊಳಿಸಿದವಂ ಕುಮುದೇಂದು ಮುನಿತಾನ್!!   ಪಂಪರನ್ನರೇ ಇರಲಿ, ಜನ್ನಪೊನ್ನರೆ ಇರಲಿ, ಕುಮರವ್ಯಾಸನ ಕಾವ್ಯಮೆಚ್ಚಿದ ಕುವೆಂಪು  ಪೂರ್ವೋತ್ತರದ ಕನ್ನಡದ ದಿಗ್ಗಜಗಳೇ ಇರಲಿ; ಇಂತಿವರಾರ ಕಣ್ಗಳೂ ಒಮ್ಮೆಯಾದರೂ ಕಾಣದಾಗಿಹ ಕನ್ನಡದ ಆದಿಕಾವ್ಯವಿದು ಸಿರಿಭೂವಲಯ ತಾನ್ ! ಜಗದಕಾವ್ಯವಿದರ ಸನಿಹವೂಂ ಸುಳಿಯದವರೆಂತು ಇದರ ಸೊಬಗನರಿಯಲಕ್ಕುಂ. ಇಂತಿರ್ಪಕಾವ್ಯವಿದು  ಕನ್ನಡದ ಹಾದಿ ಬೀದಿಗಳ ಜನಮೆಚ್ಚುವ ಜನಪದಕಾವ್ಯಮಾಗಲೆಂಬುದೆ ಎನ್ನ ಮನದಿಂಗಿತಮಾಗಿರ್ಪುದಲಾ. 

ದಶಕಗಳ ಹಿಂದಿನಿಂ ಹೃದಯದಲಿ ಹುಗಿದಿದ್ದ ಭಾವಗಳನಿಂದು ಪರಿಯಬಿಟ್ಟಿಹೆನಿಲ್ಲಿ ಕನ್ನಡದ ಕುವರರಿಗೆ ಅರಿವಾಗುವ ಪರಿಯಲಿ ಒರೆದೊರೆ   ಸಿರಿಭೂವಲಯದ ಸುಧೆಯನರ್ಥಿಸುವನಲಾ. 

                             _()_


Sunday 12 July 2020

ಸಿರಿಭೂವಲಯಕಾವ್ಯದ ಪ್ರಥಮಖಂಡದ ಐದನೇ ಅಧ್ಯಾಯಾಂತರ್ಗತ ಸಂಸ್ಕೃತ ಸಾಹಿತ್ಯ:


ಐದನೇ ಅಧ್ಯಾಯದ ಪ್ರರ್ಣಪದ್ಯ ಸಂಖ್ಯೆ ೯೫ ರಿಂದ ೧೪೫ರ ವರೆಗೆ ಅಂತರಶ್ರೇಣಿಯಲ್ಲಿ (ಅಶ್ವಗತಿ) ಸಾಗಿದಾಗ ದೊರೆಯುವ ಸಂಸ್ಕೃತಸಾಹಿತ್ಯವು ಪ್ರಾಚೀನವಾದ ೧೮ಭಾಷೆಗಳ ಲಿಪಿಯ ಸಿದ್ಧಮಾತೃಕಾವರ್ಣಮಾಲೆಯನ್ನು ವಿವರಿಸುವುದಾಗಿದೆ.
'ಅಥವಾ ಪ್ರಾಕೃತ ಸಂಸ್ಕೃತ ಮಾಗಧ ಪಿಶಾಚಭಾಷಾಶ್ಚ ಶೂರಸೇನೀಚ ಷಷ್ಟೋತ್ರಭೇದೋ ದೇಶ ವಿಶೇಷಾದಪಭ್ರಂಶಹ ಕರ್ನಾಟ ಮಾಗಧ ಮಾಲವ ಲಾಟ ಗೌಡ ಗುರ್ಜರ ಪ್ರತ್ಯೇಕತ್ರಯ ಮಿತ್ಯಷ್ಟಾದಶ ಮಹಾಭಾಷಾ ಸರ್ವಭಾಷಾಮಯೀಭಾಷಾ ವಿಶ್ವ ವಿದ್ಯಾವಭಾಸಿನೇ ತ್ರಿಷಷ್ಟಿಹಿ ಚತುಃಷಷ್ಟಿರ್ವಾ ವರ್ಣಾಾಹ ಶುಭಮತೇಮತಾಃ ಪ್ರಾಕೃತೇ ಸಂಸ್ಕೃತೇಚಾಪಿ ಸ್ವಯಂಪ್ರೋಕ್ತಾಹ ಸ್ವಯಂಭುವಾ ಅಕಾರಾದಿ ಹಕಾರಾಂತಂ ಶುದ್ಧಾ ಮುಕ್ತಾವಲೀಮಿವ ಸ್ವರ ವ್ಯಂಜನ ಭೇದೇನ ದ್ವಿದಾಭೇದಮುಪಯ್ಯುಷೀಂ ಅಯೋಗವಾಹಪರ್ಯುಂತಾಂ ಸರ್ವ ವಿದ್ಯಾಸುಸಂಗತಾಂ ಅಯೋಗಾಕ್ಷರಸಂಭುತಿಂ ನೈಕಬೀಜಾಕ್ಷರೈಶ್ಚಿತಾಂ ಸಮವಾದಿಃ ದಧತ್ಬ್ರಾಹ್ಮೀ ಮೇಧವಿನ್ಯತಿಸುಂದರೀ ಸುಂದರೀ ಗಣಿತಂ ಸ್ಥಾನಂ ಕ್ರಮೈಹಿ ಸಂಯುಗಧಾಸ್ಯತ್ ತತೋಭಗವತೋ ವಕ್ತ್ರಾನಿಹಿ ಸ್ರುತಾಕ್ಷರಾವಲೀಂ ನಮ ಇತಿವ್ಯಕ್ತ ಸುಮಂಗಲಾಂ ಸಿದ್ಧಮಾತೃಕಾಂ' ಎಂಬ ಸಾಹಿತ್ಯವು ದೊರೆಯುತ್ತದೆ. ಭಟ್ಟಾಕಳಂಕನ ಶಬ್ದಾನುಶಾಸನದಲ್ಲಿ ಹಾಗೂ ಪಾಣಿಯ ವ್ಯಾಕರಣದಲ್ಲಿ ಅಂದಿನ ಕನ್ನಡ ವರ್ಣಮಾಲೆಯನ್ನು ಕುರಿತು ದೊರೆಯುವ ವಿವರಣೆಯೂಕೂಡ ಕೆಲವೊಂದು ವ್ಯತ್ಯಾಸಗಳೊಂದಿಗೆ ಇದೇ ಆಗಿವೆ ಎಂಬುದನ್ನು ಕರ್ಲಮಂಗಲಂ ಶ್ರೀಕಂಠಯ್ಯನವರು ವಿವರಿಸಿದ್ದಾರೆ. ಈ ಕಾರಣದಿಂದಾಗಿ ಪಾಣಿನಿಯ ಕಾಲದಲ್ಲೇ ೬೪ ಧ್ವನಿಸಂಕೇತಗಳ ವರ್ಣಮಾಲೆಯು ಕನ್ನಡಭಾಷೆಯದೆಂಬ ವಿಚಾರ ಖಚಿತವಾಗಿದೆ! ಆದರೂ ಈ ೬೪ ಧ್ವನಿಸಂಕೇತಗಳ ವರ್ಣಮಾಲೆಯು ಸಂಸ್ಕೃತದ್ದೆಂದು ನಿರ್ಧರಿಸುವ ಆಧುನಿಕ ವಿದ್ವಾಂಸರ ವಿತಂಡವಾದದಿಂದಾಗಿ ಸಂಸ್ಕೃತಭಾಷೆಯ ಪೇಟೆಂಟ್ ಪಡೆದಿರುವ ಜರ್ಮನರು ಇದು ತಮ್ಮ್ಮ ಸ್ವಾಮ್ಯಕ್ಕೆ ಸೇರಿದ್ದೆಂದು ಸ್ವಾತಂತ್ರ್ಯವಹಿಸಲು ಹಾದಿ ಸುಗಮವಾಯಿತು!! ಇದು ಕನ್ನಡದ ಪ್ರಾಚೀನ ಆಸ್ಥಿ ಎಂಬುದನ್ನು ಕನ್ನಡ ವಿದ್ವಾಂಸರು ಆಗಲೇ ಪ್ರತಿಪಾದಿಸಿದ್ದಲ್ಲಿ ಸೂಪರ್ ಕಂಪ್ಯೂಟರಿಗೆ  ಸಾಫ್ಟ್ವೇರ್ ರೂಪಿಸುವಲ್ಲಿ ಸನ್ ಮೈಕ್ರೋಸಿಸ್ಟಮ್ ನವರು  ಕನ್ನಡಭಾಷೆಗೆ ರಾಜಧನ (ರಾಯಲ್ಟಿ) ಕೊಡಬೇಕಾದುದು ಅನಿವಾರ್ಯವಾಗುತ್ತಿತ್ತು.

Sunday 14 June 2020

ಸಿರಿಭೂವಲಯ ಕುರಿತ ನನ್ನ ವಿಶ್ಲೇಷಣೆ ಪಕ್ಷಪಾತದಿಂದ ಕೂಡಿದ್ದಲ್ಲ.

ಸಿರಿಭೂವಲಯ ಕುರಿತ ನನ್ನ ವಿಶ್ಲೇಷಣೆ ಪಕ್ಷಪಾತದಿಂದ ಕೂಡಿದ್ದಲ್ಲ.

ಸಂದೇಶ್ ಜೈನ್ ಅವರೇ,  ಸಿರಿಭೂವಲಯ ಕುರಿತ ನನ್ನ ವಿಶ್ಲೇಷಣೆ ಪಕ್ಷಪಾತದಿಂದ ಕೂಡಿದ್ದು;  ಎಂಬುದನ್ನು ನಾನು ಪ್ರಜ್ಞಾಪೂರ್ವಕವಾಗಿ ನಿರಾಕರಿಸುತ್ತೇನೆ.  ಸಾಮಾಜಿಕವಾಗಿ ಮನೆಬಿಟ್ಟುಹೋಗುವವರು  ಪೂರ್ವಿಕರ ಆಸ್ಥಿಯಲ್ಲಿ ಪಾಲುಪಡೆಯದೇ ಹೋಗುವುದಿಲ್ಲವೆಂಬುದು ಖಚಿತ. ಇದೇ ಅನಿಸಿಕೆ ಹಿಂದೂಧರ್ಮದಿಂದ ಬೇರ್ಪಟ್ಟ ಜೈನಸಂಪ್ರದಾಯಕ್ಕೂ ಅನ್ವಯಿಸುತ್ತದೆ! 
ಇದನ್ನು  ನೀವು ಒಪ್ಪುವಿರೋ ಬಿಡುವಿರೋ ಅದು ನಿಮಗೆ ಸೇರಿದ್ದು! ನಾನು ಈ ಮಾತು ಹೇಳಿದಮಾತ್ರಕ್ಕೆ, ಈ ಆಧಾರದಲ್ಲಿ ನಾನು ಸಿರಿಭೂವಲಯದ ಪರಿಚಯ ಮಾಡಿದ್ದೇನೆಂದು ನಿರ್ಧರಿಸಬಾರದು!  ವೇದಗಳು ಅಪೌರುಷೇಯವೋ ಅಲ್ಲವೋ ಎಂಬುದು ನಂಬಿಕೆಯ ವಿಚಾರ. ನಂಬುವವರು ಇರುವಂತೆಯೇ ನಿರಾಕರಿಸಿವವರೂ ಇದ್ದಾರೆ. ಮುಂದೆಯೂ ಇರುತ್ತಾರೆ. ಇದೊಂದು ನಿರಂತರ ಪ್ರವಾಹ. 
ಷಟ್ಖಂಡಾಗಮದ ಮೂಲ ವೇದವೆಂದು ಸೂಚಿಸಿರುವುದು ನನ್ನ ಅನಿಸಿಕೆಯೆಂದು ಭಾವಿಸಿ ನಿರ್ಧರಿಸಿದ್ದರೆ, ಅದು ಸರಿಯಲ್ಲ.  ತನ್ನ ಆರಾಧ್ಯದೈವ ಅಷ್ಟಮತೀರ್ಥಂಕರ ಚಂದ್ರಪ್ರಭದೇವನ  ವಾಣಿಯಲ್ಲಿ  ಸಂಪೂರ್ಣ ಶ್ರದ್ಧೆ ಹೊಂದಿದ್ದ ಕುಮುದೇಂದುಮುನಿಯ ಸಿರಿಭೂವಲಯದ ಮಾಹಿತಿಯನ್ನು  ನಾನು ವಿವರಿಸಿದ್ದೇನಷ್ಟೇ!  ಇದು ನನ್ನ ಸ್ವಕಪೋಲಕಲ್ಪಿತಮಾಹಿತಿಯಲ್ಲ!!
೨೦೦-೩೦೦ ವರ್ಷಗಳಿಂದೀಚಿನ ಮೇಧಾವಿಗಳು ತಮ್ಮ ಬರಹದಮೂಲಕ ಜೈನಸಂಪ್ರದಾಯವು ವೇದಗಳಿಗಿಂತ ಪ್ರಾಚೀನವೆಂಬ ತಪ್ಪು ಗ್ರಹಿಕೆಯ ಭ್ರಮೆಯನ್ನು ರೂಪಿಸಿದ್ದಾರೆಂದು ನಾನು ಹಲವಾರು ಸಲ ಸೂಚಿಸಿದ್ದೇನೆ.  ಪ್ರಥಮಖಂಡ ೫೯ ಅಧ್ಯಾಯಗಳಲ್ಲೇ ’ಋಗ್’  ’ಋಗ್ವೇದ’  ’ಋಗ್ ಭೂವಲಯ’ ಎಂಬ ಪದಗಳು ಸಾವಿರಾರುಸಲ ಬರುತ್ತವೆ! ಇದು ನಾನು ಪರಿಚಯಿಸಿದ್ದಲ್ಲ!!  ಜೈನ ಸಂಪ್ರದಾಯದವರು ಸಿರಿಭೂವಲಯವನ್ನು ಕತ್ತಲಲ್ಲಿರಿಸಲು ಇದು ಮುಖ್ಯಕಾರಣ! ಆದರೆ ಅವರ ದುರಾದೃಷ್ಟ! ಈ ಮಾಹಿತಿಯು  ಪ್ರಥಮಖಂಡದಲ್ಲೇ  ಪ್ರತ್ಯಕ್ಷವಾಗಿದೆ. ಅಲ್ಲಿಗೆ ಯೋಜನೆ ವಿಫಲವಾಯಿತೆಂದು ನಾನು ವಿಶ್ಲೇಷಿಸಿರುವುದು ನಿಜ.
 ಮುಂದಿನ  ೮ ಖಂಡಗಳಲ್ಲಿ ಪ್ರಾಚೀನ ಶಾಸ್ತ್ರಗ್ರಂಥಗಳಿಗೆ ಸಂಬಂಧಿದ ಮಾಹಿತಿಗಳೇ ಹೆಚ್ಚಿರುತ್ತವೆಂದು ನನ್ನ ಅನಿಸಿಕೆ.  ಅವುಗಳ ಸರಳಪರಿಚದಿಂದ  ದೊರೆಯುವ ಮಾಹಿತಿಗಳನ್ನು”ನಮ್ಮ ಖಾತೆಗೆ ಸೇರಿಸಿವ ಪ್ರಯತ್ನ’  ಎಂದು ನಿರ್ಧರಿಸಬೇಡಿ!!  ಈಗ ಕಾಲ ಬದಲಾಗಿದೆ. ಯಾರೂ ಯಾರನ್ನೂ ಸುಲಭವಾಗಿ ವಂಚಿಸಲಾಗದು.
ನೇಮಿ ತೀರ್ಥಂಕರರಿಂದ ದ್ವಾರಕೆಯ ಶ್ರೀಕೃಷನಿಗೆ ಉಪದೇಶವಾದ ನೇಮಿ ಗೀತೆಯು ಜೈನಸಂಪ್ರದಾಯದ ಕೊಡುಗೆ ಎಂದು ನಾನು ಪರಿಚಯಿಸಿರುವುದು ನಿಮ್ಮಲ್ಲಿ ಯಾರಿಗೂ ತಿಳಿಯದು! ಕೃಷನು ಯುದ್ಧಕ್ಕೆ ಪ್ರೇರಣೆ ಮಾಡಿರುವುದರಿಂದ ಅದು ’ಅಹಿಂಸಾಧರ್ಮಕ್ಕೆ’ ವಿರೋಧವೆಂದು ಲೆಕ್ಕಾಚಾರ ಮಾಡಿ ಅದನ್ನು ಜೈನರ ಕೊಡುಗೆ ಎಂಬುದನ್ನು  ನಿರಾಕರಿಸಿದ್ದವರು, ಇನ್ನೂ ನಿರಾಕರಿಸುವವರು ಜೈನಸಂಪ್ರದಾಯದವರೇ. 
ಈ ಮಾಹಿತಿಯನ್ನು ನಾನು ವಿಸ್ತಾರವಾಗಿ ಚರ್ಚಿಸಿದ್ದೇನೆ.  ಇಲ್ಲಿ ಅದು  ಸೇರಲಾಗದು. ಷಟ್ಖಂಡಾಗಮಗಳ ವಿಚಾರವೂ ಅಷ್ಟೇ! ಸಿರಿಭೂವಲಯದಲ್ಲಿರುವ ಮಾಹಿತಿಯನ್ನು ಪರಿಚಯಿಸಿದ್ದೇನೆ.   ಇದು ಪರಿಚಯಕಾರನ ’ತಿರುಚುವ’ ಪ್ರಯತ್ನವೆಂದು ಯಾರಾದರೂ ಭಾವಿಸಿದರೆ ಅದಕ್ಕೆ ನನ್ನ ಆಕ್ಷೇಪವಿಲ್ಲ. ಅವರಿಗೆ ಆ ಸ್ವಾತಂತ್ರವಿವೆ.  ಆದರೆ, ಇದು ಪಾರಿಚಯಕಾರನ ತಪ್ಪು ಎಂಬುದನ್ನು ಮಾತ್ರ ನಾನು ಜೀವಿಸಿರುವ ವರೆವಿಗೂ ನಿರಾಕರಿಸುತ್ತೇನೆ.  ಇಂದಿನ ಪರಿಸರದಲ್ಲಿ  ಸಂಸ್ಕೃತಭಾಷೆಯ ’ವೇದ’ ಸಾಹಿತ್ಯವು ಹೆಚ್ಚು ಜನಗಳಿಗೆ ಹತ್ತಿರವಾಗಲಾರದೆಂಬುದು ಸರ್ವವಿದಿತ.  ಆದರೆ ಸರ್ವಜ್ಞ ಸ್ವರೂಪಿಯಾದ ಕುಮುದೇಂದು ಮುನಿಯು  ವೇದೋಪನಿಷತ್ತುಗಳ ಸಮಗ್ರ ಮಾಹಿತಿಯನ್ನೂ ಆದಿನಾಥನ ಕೇವಜ್ಞಾನದ ಮಾಹಿತಿಗಳನ್ನೂ ಅಲ್ಲಿಂದ ತನ್ನವರೆಗೆ ಹರಿದುಬಂದಿರುವ ಜ್ಞಾನಗಂಗೆಯನ್ನು ಸಮಾವೇಶಗೊಳಿಸಿ, ಅತ್ಯಂತ ಪುರಾತನವಾದ ಕನ್ನಡಭಾಷೆಯಲ್ಲಿ ಸಿರಿಭೂವಲಯದ ನಿರೂಪಣೆಮಾಡಿರುವುದರಿಂದ ಇದನ್ನು ’ಕನ್ನಡದವೇದ’ ಎಂಬು ನಾನು ನಿರ್ಧರಿಸಿದ್ದೇನೆ. ಅಂದಮಾತ್ರಕ್ಕೇ ಇದನ್ನೂ ’ನಮ್ಮ ಖಾತೆಗೆ ಸೇರಿಸಿಕೊಂಡುಬಿಟ್ಟ’ ಎಂದು ಗಾಭರಿಯಾಗಬೇಡಿ!
 ಇದು ವೇದ ಹಾಗೂ ಜೈನ ಸಂಪ್ರದಾಯದ  ಜಂಟಿಖಾತೆ! ಇದನ್ನು ಯಾರೂ ಅಪಹರಿಸಲಾಗದು!!  ಕನ್ನಡದ ಇಂದಿನ ಶ್ರೇಷ್ಠತೆಗೆ, ಜಗದ್ವಿಖ್ಯಾತಿಗೆ  ಸಿರಿಭೂವಲಕಾರಣ. ಸಿರಿಭೂವಲಯದ ಕರ್ತೃ ಜೈನಸಂಪ್ರದಾಯದವನು.  ಈ ಶ್ರೇಯಸ್ಸಿನಲ್ಲಿ ಹೆಚ್ಚಿನಪಾಲು ಉಳಿದೆಲ್ಲ ಸಂಪ್ರದಾಯದವರಿಗಿಂತಲೂ ಜೈನಸಂಪ್ರದಾಯದವರಿಗೆ  ಸೇರುತ್ತದೆ ಎಂಬ ನನ್ನ ವಿಶ್ಲೇಷಣೆಯು ಬೆಳಗಾವಿಯ ಜೈನ ಸಮುದಾಯಕ್ಕೆ ಮನವರಿಕೆಯಾಗಿದೆ. ಸುಮಾರು ಒಂದು ಗಂಟೆಯ  ’ಪವರ್ ಪಾಯಿಂಟ್ ಪ್ರೆಸೆಂಟೇಷನ್’ ನಲ್ಲಿ  ಇದನ್ನು ಸೂಚಿಸಿದ್ದೇನೆ.  ಇಷ್ಟಾದರೂ ನಾನು ವೇದ ಸಮೂಹದ ಪಕ್ಷಪಾತಿ ಎಂದು ದೋಷಿಸುವುದಾದಲ್ಲಿ ನನಗೆ ತೊಂದರೆ ಏನಿಲ್ಲ!!
 ಸಿರಿಭೂವಲಯದ ಪರಿಚಯಕ್ಕಾಗಿ ಬ್ರಾಹ್ಮಣಸಮುದಾಯದ ಕೆಲವರು ಸುಧಾರ್ಥಿಯನ್ನು ದೂರವಿರಿಸಿರುವುದಿದೆ! ’ಸತ್ಯವನ್ನು ತಿರುಚಿ ತನ್ನ ಖಾತೆಗೆ ಸೇರಿಸಿಕೊಳ್ಳುತ್ತಾನೆ’  ಎಂಬುದು ಜೈನಸಂಪ್ರದಾಯದಲ್ಲಿ ಹಲವರ ಆಪಾದನೆ!!  (ಅಲ್ಲಿಯೂ ಸಲ್ಲದವ; ಇಲ್ಲಿಯೂ ಸೇರದವ; ಎಲ್ಲೂಸಲ್ಲದವನೇನೋ!?) ಇದಾವುದರಿಂದಲೂ ನನಗೆ ಆಗಬೇಕಾದ್ದೇನಿಲ್ಲ!! ಯಾರಹಂಗಿನಲ್ಲೂ ನಾನು ನನ್ನ ಜೀವನವನ್ನು ಸಾಗಿಸಬೇಕಿಲ್ಲ.  ಕನ್ನಡದ ಮಹಾನ್ ಅಭಿಮಾನಿ ಕೆ. ಅನಂತಸುಬ್ಬರಾಯರ ಕಾರಣದಿಂದ (ಅವರೂ ಹಲವಾರು ವೈದಿಕರಿಂದ, ಸ್ವಜಾತಿಯ ಬಂಧುಗಳಿಂದ ದೂರಸರಿಸಲ್ಪಟ್ಟವರು!) ನನಗೆ ಗಂಟುಬಿದ್ದ  ಅಮೂಲ್ಯಕೃತಿಯ ಸರಳಪರಿಚಯ ಮಾಡಿಕೊಡುವುದು ನನ್ನ ಪಾಲಿನ ಕರ್ತವ್ಯವಾಗಿತ್ತು  ಸಾಧ್ಯವಿರುವಷ್ಟನ್ನು ಸಮರ್ಪಕವಾಗಿ ಮಾಡಿ ಮುಗಿಸಿದೆ. ಇದನ್ನು ಯರು ಹೇಗೆಬೇಕಾದರೂ ಸ್ವೀಕರಿಸಬಹುದು/ ನಿರಾಕರಿಸಬಹುದು!  ಜೈನಧರ್ಮಕ್ಕೆ  ಇವನೊಬ್ಬ  ಉಗ್ರವಾದಿಯೆಂದುಬೇಕಾದರೂ ನಿರ್ಧರಿಸಬಹುದು. ಅದಕ್ಕೆ ನನ್ನ ವಿರೋಧವೇನಿಲ್ಲ. ಅದು ಅವರ ನಿಲುವಿನ ’ಸತ್ಯಾನ್ವೇಷಣೆ’ !! ಅಷ್ಟೇ!!
                        -ಸಿರಿಭೂವಲಯದಸುಧಾರ್ಥಿ. ೭೬೭೬೪೭೪೮೭೨.

ಸಿರಿಭೂವಲಯದ ಸರಳ ಪರಿಚಯಗಳನ್ನು ಕುರಿತು ಕನ್ನಡಿಗರ ಆಸಕ್ತಿ ಎಂಥದು!!!

ಸಿರಿಭೂವಲಯದ ಸರಳ ಪರಿಚಯಗಳನ್ನು ಕುರಿತು ಕನ್ನಡಿಗರ ಆಸಕ್ತಿ ಎಂಥದು!!!

ಸಿರಿಭೂವಲಯದ ಒಳಹೊಕ್ಕು, ಅಲ್ಲಿನ ಮಾಹಿತಿಗಳನ್ನು ಸರಳವಾಗಿ ಪರಿಚಿಯಿಸುವಕಾರ್ಯದಲ್ಲಿ ಶ್ರಮವಹಿಸಿ ಯಶಸ್ವಿಯದ ಹಾಸನದ ಸುಧಾರ್ಥಿಯು ,  ಕಳೆದ  ಒಂದು ದಶಕದ ಅವಧಿಯಲ್ಲಿ ಸುಮಾರು ೩೦೦೦ ಪುಟಗಳ ವ್ಯಾಪ್ತಿಯಲ್ಲಿ ೧೧ ಕೃತಿಗಳನ್ನು ಪ್ರಕಟಿಸಿದ್ದಾಯಿತು. ಅವುಗಳನ್ನು ಕೆಲವರು ಮಾತ್ರ ಗಮನಿಸಿ,  ಒಂದು ರೀತಿಯಲ್ಲಿ ಈ ಕೃತಿಗಳನ್ನು ಮೂಲೆಗುಂಪುಮಾಡಿದ್ದಾಯಿತು.  ಕಳೆದೊಂದು ವರ್ಷದಿಂದ ನಾನು fbನಲ್ಲಿ ಬರೆಯತೊಡಗಿದಮೇಲೂ ಕೇವಲ ಕೆಲವರಿಂದಮಾತ್ರ ಅದಕ್ಕೆ ಪ್ರತಿಕ್ರಿಯೆ ದೊರೆಯುತ್ತಿತ್ತು.  ಪ್ರಾಸಂಗಿಕವಾಗಿ ನಾನು ಸಿರಿಭೂವಲಯದಲ್ಲಿ ಅಂತರ್ಗತವಾಗಿರುವ ’ಋಗ್ವೇದವೇ ಜಗತ್ತಿನ ಎಲ್ಲ ಜ್ಞಾನಕ್ಕೂ ಮೂಲ’ ಎಂಬ ಮಾಹಿತಿಯನ್ನು ಸೂಚಿಸುವಲ್ಲಿ ಪ್ರಕಟಿಸಿದ ಕೆಲವು ಸಾಲಿನ ಲೇಖನಕ್ಕೆ ಜೈನಸಮುದಾಯದ ಕೆಲವು ಮಿತ್ರರು ಅದನ್ನು ಪ್ರಶ್ನಿಸಿ ತಮ್ಮ ಅನಿಸಿಕೆಗಳನ್ನು ಸೂಚಿಸಿದರು. ಅವುಗಳಿಗೆ ಸೂಕ್ತ ಉತ್ತರ ನೀಡಿದರೂ ಅವರಿಗೆ ಅದು ಸಮಂಜಸವೆನಿಸಲಿಲ್ಲ.  ಉತ್ತರ; ಪ್ರತ್ಯುತ್ತರಗಳಸರಣಿಯು ಬೆಳೆದು ಅನಪೇಕ್ಷಿತವಾದ ಚರ್ಚೆಯಾಯುತು ಈ ಕಾರಣದಿಂದಾಗಿ ನಾನು ಆ ಚರ್ಚೆಯಿಂದ ಹೊರಬಂದು ಈ ಸಂಬಂಧದ ಚರ್ಚೆಯನ್ನು ಮುಕ್ತಾಯಗೊಳಿಸುವ ನಿರ್ಧಾರಮಾಡುವುದು ಅನಿವಾರ್ಯವಾಯಿತು.  ನನ್ನಲ್ಲಿ ಉಳಿದಿರುವ ಸಿರಿಭೂವಲಯದ ಸರಳ ಪರಿಚಯಕೃತಿಗಳ ದೊಡ್ಡ ರಾಶಿಯನ್ನು  ಮುಂದೆ ಹಣಕ್ಕೆ ಮಾರಾಟಮಾಡದೇ, ’ದಾನ’ವಾಗಿ ನೀಡುವ ನಿರ್ಧಾರಮಾಡಿದೆ.  ಆಸಕ್ತಿ ಇರುವವರು ಖುದ್ಧಾಗಿ ಬಂದು ಅದನ್ನು ಪಡೆಯಬಹುದು.  ಯಾಪನೀಯ ಜೈನಸಂಪ್ರದಾಯದ ಮುನಿ ಕುಮುದೇಂದುವಿನ ಮೂಲಕ ಬೆಳಕುಕಂಡಿರುವ ಜಗತ್ತಿನ ಈ ಅತ್ಯಂತ ಅಚ್ಚರಿಯ ಕಾವ್ಯದಲ್ಲಿ ನಿರೂಪಿತವಾಗಿರುವ ಕನ್ನಡದ  ಪ್ರಾಚೀನತೆ ಹಾಗೂ ಪ್ರಾಧಾನ್ಯತೆಯನ್ನು ಪರಿಚಯಿಸುವ ಏಕೈಕ ಉದ್ದೇಶದಿಂದ ಈ ಸರಳಪರಿಚಯಕಾರ್ಯಕ್ಕೆ ನಾನು ಕೈಹಾಕಿದ್ದೇ ವಿನಃ, ವೇದಸಂಪ್ರದಾಯ ಹಾಗೂ ಶ್ರವಣ ಸಂಪ್ರದಾಯದ ತಿಕ್ಕಾಟವನ್ನು ನೋಡುವುದು ಇದರ ಉದ್ದೇಶವಲ್ಲ,  ಎಂಬುದನ್ನು ಈ ಮೂಲಕ ನನ್ನ ಅಭಿಮಾನಗಳ ಗಮನಕ್ಕೆ ತರಲು ಇಚ್ಛಿಸಿದ್ದೇನೆ. ವಂದನೆಗಳು.
                 - ಸಿರಿಭೂವಲಯದ ಸುಧಾರ್ಥಿ

Friday 29 May 2020

ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆಭಾಗ: ೧.


ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆಭಾಗ: ೧.

೧)** ಕೃತಿಕರ್ತೃವನ್ನು ಕುರಿತು**

ಕ್ರಿ. ಶ. ೮೦೦ ರ ಸುಮಾರಿನಲ್ಲಿ ಕುಮುದೇಂದುಮುನಿಯು ರಚಿಸಿರುವ ಕನ್ನಡ ಅಂಕಕಾವ್ಯ ಸಿರಿಭೂವಲಯದ ಅಕ್ಷರ ಅವತರಣಿಕೆಯನ್ನು  ಬೆಂಗಳೂರಿನ ಸರ್ವಾರ್ಥಸಿದ್ಧಿ ಸಂಘದವರು ೧೯೫೩ ಹಾಗೂ ೧೯೫೫ ರಲ್ಲಿ ಪ್ರಕಟಿಸಿದ್ದರೂ ಈ ಕಾವ್ಯದ ರಚನೆಯು ಸಾಮಾನ್ಯ ಓದುಗರಿರಲೀ, ವಿದ್ವಾಂಸರಿಗೂ ಓದಲು ಸಾಧ್ಯವಾಗದ ಜಟಿಲವಾದ ರಚಾನಾಕ್ರಮವನ್ನು ಹೊಂದಿದ್ದ ಕಾರಣದಿಂದಾಗಿ ಅದೊಂದು ’ಕಬ್ಬಿಣದ ಕಡಲೆ’ ಎಂಬ ಅಪಖ್ಯಾತಿಗೆ ತುತ್ತಾಗಿ, ಕತ್ತಲಕೋಣೆಯನ್ನು ಸೇರಿತ್ತು. 
ಈ ಸಿರಿಭೂವಲಯಕಾವ್ಯವನ್ನು ಸಾಮಾನ್ಯ ಓದುಗರ ಆಲೋಚನೆಗೆ ನಿಲುಕುವಂತೆ  ಸರಳವಾಗಿ ಪರಿಚಯಿಸುವ ದಿಸೆಯಲ್ಲಿ ಹಾಸನದ ಸುಧಾರ್ಥಿಯು ಬೇರೆ ಬೇರೆ ಸ್ತರದಲ್ಲಿ ೧೧ ಪರಿಚಯ ಕೃತಿಗಳನ್ನು ರೂಪಿಸಿದ್ದಾಗಿದೆ.  ಸುಮಾರು ೩೦೦೦ ಪುಟಗಳಿಗೂ ಹೆಚ್ಚಿನ ವ್ಯಾಪ್ತಿಹೊಂದಿರುವ ಅವುಗಳನ್ನು ಓದುವುದೂ ಇಂದಿನ ಸಾಹಿತ್ಯಾಭ್ಯಾಸಿಗಳಿಗೆ  ಶ್ರಮದ ಕಾರ್ಯ. ಈ ಕಾರಣದಿಂದಾಗಿ ಅವುಗಳ ಸಂಕ್ಷಿಪ್ತ ಪರಿಚಯವನ್ನು ಈ ಲೇಖನಮಾಲೆಯ ರೂಪದಲ್ಲಿ ಇಲ್ಲಿನ ಓದುಗರಿಗೆ ಒದಗಿಸುವ ಕಾರ್ಯಕ್ಕೆ ಕೈಹಾಕಿದ್ದೇನೆ. ಆಸಕ್ತಿ ಇರುವ ಕೆಲವರಿಗಾದರೂ ಈ ಪ್ರಯತ್ನವು ಉಪಯುಕ್ತವಾದೀತೆಂಬ ನಂಬಿಕೆ ನನಗಿದೆ.
ಸುಧಾರ್ಥಿಯು ಪ್ರಾರಂಭಿಸಿದ ಸಿರಿಭೂವಲಯದ ಸರಳ ಪರಿಚಯಕೃತಿಗಳಪೈಕಿ ಮೊದಲನೆಯದಾದ  ’ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ’  ಎಂಬ ಕೃತಿಯು ೨೦೧೦ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಕಟವಾಯಿತು.
ಈ ಸರಳಪರಿಚಯಕೃತಿಯ ಲೇಖಕ ಸುಧಾರ್ಥಿಯವರು ’ಅನಂತ ಕೀಬೋರ್ಡಿನ ’  ನಿರೂಪಕ ಸ್ವರ್ಗೀಯ ಕೆ. ಅನಂತಸುಬ್ಬರಾಯರ ಅಭಿಮಾನಿ. ಸಿರಿಭೂವಲಯಕಾವ್ಯದ ಆಳವಾದ ಪರಿಚಯ ಹೊಂದಿದ್ದ ಕೆ. ಅನಂತಸುಬ್ಬರಾಯರು  ಅದರ ರಚನೆಯ ಸ್ವರೂಪವನ್ನು ಕುರಿತು ಸುಧಾರ್ಥಿಗೆ ಸಾಕಷ್ಟು ಮಾಹಿತಿಗಳನ್ನು ವಿವರಿಸಿ, ಈ ಕಾವ್ಯವನ್ನು ಸರಳವಾಗಿ ಪರಿಚಯಿಸುವ ಕಾರ್ಯಕ್ಕೆ ಪ್ರೇರೇಪಿಸಿದವರು.
ಈ ಮಹನೀಯರು ನೀಡಿದ ಸಮರ್ಥ ಮಾರ್ಗದರ್ಶನವನ್ನು  ಮನನ ಮಾಡಿಕೊಂಡು ಸುಮಾರು ೨೭ ವರ್ಷಗಳಕಾಲ ಏಕಾಂಗಿಯಾಗಿ ಈ ವಿಸ್ಮಯಕಾರಿ ಕಾವ್ಯದ ಅಧ್ಯಯನನಡೆಸಿ,  ಸಿರಿಭೂವಲಯಕಾವ್ಯಕ್ಕೆ ಸಂಬಂಧಿಸಿದಂತೆ  ಕಳೆದ ೬೫ ವರ್ಷಗಳಿಂದ ನಡೆದಿರುವ, ನಡೆಯಿತೆಂದು ದಾಖಲಾಗಿರುವ, ನಡೆಯಬೇಕಾಗಿದ್ದ ಹಾಗೂ ಮುಂದೆ ನಡೆಯಬೇಕಿರುವ ಚಟುವಟಿಕೆಗಳನ್ನು ಕುರಿತು ಡೆಮಿ ೧/೪ ಅಳತೆಯ ಸುಮಾರು ೪೫೦ ಪುಟಗಳ ವ್ಯಾಪ್ತಿಯಲ್ಲಿ ಬಹಳ ವಿಸ್ತಾರವಾದ  ಸರಳ ಪರಿಚಯವನ್ನು ರೂಪಿಸಲಾಗಿದೆ.   ಈ ಬರಹಗಳಲ್ಲಿ ತುಂಬಾ ಕಠಿಣವಾದ ಪದಗಳನ್ನು ಬಳಸಿ ಈ ಪರಿಚಯಕಾರನು  ವಿವರಣೆಗಳನ್ನು ನೀಡಿರುವುದಿದೆ.  ಅವುಗಳ ಪೈಕಿ ಕೆಲವೊಂದು ಪ್ರಮುಖ ಮಾಹಿತಿಗಳನ್ನು ಕುರಿತು ನೀವು ಇಲ್ಲಿ ಸಂಕ್ಷಿಪ್ತವಾದ ಮಾಹಿತಿಯನ್ನು ನೋಡಲಿರುವಿರಿ.
 ಮೂಲತಃ ತುಮಕೂರುಜಿಲ್ಲೆಯ ಹೊನ್ನವಳ್ಳಿ ಎಂಬ ಗ್ರಾಮದವರು ಕಂದಚಾರ್   ರಾಮಸ್ವಾಮಯ್ಯನವರು.   ಅರಸೀಕೆರೆಯ ’ದಾಸಪ್ಪಾ ದಿ ಗ್ರೇಟ್’ ಅವರ ಮಗಳು ವೆಂಕಟಲಕ್ಷಮ್ಮ ಹಾಗೂ  ಶ್ರೀಕಂಠಯ್ಯ ದಂಪತಿಗಳ  ಮಗಳು ಶ್ರೀಮತಿ ನರಸಮ್ಮನವರು ಈ ರಾಮಸ್ವಾಮಯ್ಯನವರ ಧರ್ಮಪತ್ನಿ.  ಈ ದಂಪತಿಗಳ ಮಗನಾಗಿ ಹಾಸನ ನಗರದಲ್ಲಿ ಜನಿಸಿದ ಕೆ.ಆರ್. ಶಂಕರನಾರಾಯಣನಿಗೆ ಚಿಕ್ಕಂದಿನಿಂದಲೂ ಕನ್ನಡಸಾಹಿತ್ಯದಲ್ಲಿ ಆಸಕ್ತಿ.  ಹಾಸನದಲ್ಲಿ ಪುರಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಮಯದಲ್ಲೇ ಕನ್ನಡ ಬೆರಳಚ್ಚುಯಂತ್ರ ಶಿಲ್ಪಿ ಕೆ. ಅನಂತಸುಬ್ಬರಾಯರ ಪರಿಚಯ. 
ಶಾಲಾಶಿಕ್ಷಣ ಪೂರೈಸಿದನಂತರ, ಹಾಸನದಲ್ಲೇ ನೂತನವಾಗಿ ಪ್ರಾರಂಭವಾದ ’ಕೈಗಾರಿಕಾ ತರಬೇತಿ ಕೇಂದ್ರ’ದಲ್ಲಿ (ಐ. ಟಿ.ಸಿ) ತರಬೇತಿ.  ೧೯೬೫ರಲ್ಲಿ ಬೆಂಗಳೂರಿಗೆ ವಲಸೆ. ಬೆಂಗಳೂರಿನ ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ (ಐ.ಟಿ.ಐ)  ಉದ್ಯೋಗ.  ಬೆಂಗಳೂರು ಸೇರಿದಮೇಲೆ ಸಾಹಿತ್ಯ ಕ್ಷೇತ್ರದ ಹಿರಿಯ ಚೇತನಗಳಾದ ತಿ. ತಾ ಶರ್ಮರು, ಡಾ|| ಅ.ನ. ಕೃ, ಎಸ್. ಕೆ. ಕರೀಖಾನ್, ಟಿ. ಕೇಶವಭಟ್ಟ, ಡಾ|| ಎಸ್. ಎಲ್. ಭೈರಪ್ಪ,  ನಾಡಿಗೇರ್ ಕೃಷ್ಣರಾಯರು,  ಎಂ.ಕೆ. ಇಂದಿರಾ, ಚಿ.ನ, ಮಂಗಳ ಮುಂತಾದವರೊಂದಿಗೆ  ಹೆಚ್ಚಿನ ಪರಿಚಯ. ಇದರಿಂದಾಗಿ ವ್ಯಕ್ತಿಜೀವನದಲ್ಲಿ ಸಾಕಷ್ಟು ಪರಿಷ್ಕಾರ.  ಈ ದಿಸೆಯಲ್ಲಿ ಶ್ರೀ. ಪರಮಾನಂದಭಾರತೀ ಸ್ವಾಮಿಗಳ ಯುಕ್ತ ಮಾರ್ಗದರ್ಶನ.
ಈ ಹಿಂದೆಯೇ ಕೆಲವಾರು  ನಿಯತಕಾಲಿಕಗಳಿಗೆ ಲೇಖನಗಳ ರಚನೆಗಾಗಿ ’ಸುಧಾರ್ಥಿ’ ಎಂಬ ಕಾವ್ಯನಾಮದ  ಆಯ್ಕೆಯಾಗಿತ್ತು.  ಕವನ, ನಾಟಕ, ವಿಮರ್ಶೆ, ಕಾದಂಬರಿ, ಜೀವನಚರಿತ್ರೆ, ಸಂದರ್ಶನಗಳು, ಧಾರ್ಮಿಕ ವಿಚಾರಗಳು, ಗಾದೆಗಳು  ಇತ್ಯಾದಿ ವಿವಿಧ ಪ್ರಾಕಾರಗಳಿಗೆ ಸೇರಿದ ೧೧ ಕೃತಿಗಳ ರಚನೆ, ಹಾಗೂ ಪ್ರಕಟಣೆ.
 ಅನಂತಸುಬ್ಬರಾಯರ ಪರಿಚಯದಿಂದ  ಸಿರಿಭೂವಲಯ ಕಾವ್ಯದ ಸಂಪರ್ಕ.  ಸಿರಿಭೂವಲಯಕುರಿತು ಅಧ್ಯಯನ ಹಾಗೂ ಅರಳಪರಿಚಯಕ್ಕಾಗಿ ಅವರಿಂದ ಒತ್ತಾಯ.  ಆ ವೇಳೆಗಾಗಲೇ ಕಾಲವಶರಾಗಿದ್ದ  ಕರ್ಲಮಂಗಲಂ ಶ್ರೀಕಂಠಯ್ಯನವರ ಪರೋಕ್ಷ ಪರಿಚಯ.  ಅನಂತಸುಬ್ಬರಾಯರ ಕಾಲಾನಂತರ ಅವರ ಸ್ಮಾರಕಸಂಸ್ಥೆಯಾಗಿ  ಬೆಂಗಳೂರಿನಲ್ಲಿ ’ಅನಂತಪ್ರಕಾಶನ’  ಸ್ಥಾಪಿಸಿ, ಒಂದು ದಶಕದಕಾಲ ಅದರ ಯಶಸ್ವೀ ನಿರ್ವಹಣೆ. ಈತ ರೂಪಿಸಿದ ’ಸಂಜೆಗತ್ತಲು’ ಎಂಬ ಐತಿಹಾಸಿಕ  ನಾಟಕವು ಬೆಂಗಳೂರಿನ ಆಕಾಶವಾಣಿ ನಿಲಯದಿಂದ ಪ್ರಸಾರವಾಗಿದೆ.
ಕೆ. ಅನತಸುಬ್ಬರಾಯರು, ಕೋಟವಾಸುದೇವಕಾರಂತರು, ಸುಪ್ರಸಿದ್ಧ ಆಯುರ್ವೇದ ವೈದ್ಯ ಡಾ|| ಮಳಿಯೆ ಗೋಪಾಲಕೃಷ್ಣರಾಯರು ಇವರುಗಳ ಜೀವನ ಸಾಧನೆ ಕುರಿತು ಮುಂದಿನ ತಲೆಮಾರಿಗೆ ಅಧಿಕೃತ ಆಧಾರಗ್ರಂಥಗಳ ರೂಪದಲ್ಲಿ  ’ಅನಂತ’  ’ವಾಸುದೇವ’  ’ ಧನ್ವಂತರಿ’ ಎಂಬ  ಪ್ರಮುಖ ಜೀವನಚರಿತ್ರೆಗಳ  ರಚನೆ ಹಾಗೂ ಪ್ರಕಟಣೆ. ಇವುಗಳ ಸಂಕ್ಷಿಪ್ತ ಮಾಹಿತಿಯು ಬೆಂಗಳೂರಿನ ಆಕಾಶವಾಣಿಯಿಂದ  ’ಬಾಳಬೆಳಕು’ ಕಾರ್ಯಕ್ರಮದಲ್ಲಿ ಪ್ರಸಾರವಾಗಿವೆ.
ಅಂತಸುಬ್ಬರಾಯರ ಒತ್ತಾಯದಿಂದಾಗಿ ಸಿರಿಭೂವಲಯ ಕಾವ್ಯದ ಅಭ್ಯಾಸಕ್ಕೆ ಪ್ರಯತ್ನ.  ೨೭ ವರ್ಷಗಳ ಅಧ್ಯಯನದ ಫಲವಾಗಿ ’ಸಿರಿಭೂವಲಸಾರ’ ಎಂಬ ಸರಳ ಪರಿಚಯ ಕೃತಿಯ ರಚನೆಮಾಡುವಷ್ಟರ ಮಟ್ಟಿಗೆ ಅದರಲ್ಲಿ ತಲ್ಲೀನತೆ.  ೧೯೯೮ರಲ್ಲಿ  ಐ.ಟಿ.ಐ. ನಿಂದ ಸ್ವಯಂ ನಿವೃತ್ತಿ ಪಡೆದು, ೨೦೦೦ ದಲ್ಲಿ ಹಾಸನದ ಸಮೀಪ ಹಾಲುವಾಗಿಲು ಎಂಬ  ಗ್ರಾಮಕ್ಕೆ ವಲಸೆ.
 ಫಲಭರಿತವಾದ  ಗಿಡಮರಗಳಿಂದ ಕೂಡಿದ, ಮನಸಿಗೆ ಮುದನೀಡುವ  ಚಿಕ್ಕದಾದ ಚೊಕ್ಕ ತೋಟವೊಂದರ ಅಭಿವೃದ್ಧಿಕಾರ್ಯದ ಪ್ರಾರಂಭ. ,  ೨೦೧೦ರಲ್ಲಿ  ಜೀವನದ ಮಹತ್ಸಾಧನೆಯಾಗಿ  ಸಿರಿಭೂವಲಯವನ್ನು ಸರಳವಾಗಿ, ಸಮರ್ಪಕವಾಗಿ ಪರಿಚಯಿಸುವ  ’ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಸಾರ’  ಎಂಬ ಕೃತಿಯ ಪ್ರಕಟಣೆ.
ಮುಂದೆ ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ೮ ಪರಿಚಯಕೃತಿಗಳ ರಚನೆ ಹಾಗೂ ಪ್ರಕಟಣೆ. ಇವುಗಳ ಸಂಕ್ಷಿಪ್ತ ಭಾವಾನುವಾದವು ಹಿಂದಿ ಹಾಗೂ ಇಂಗ್ಲಿಷ್  ಭಾಷೆಯಲ್ಲೂ ಪ್ರಕಟವಾಗಿವೆ. ತನ್ನ ಜೀವನದ ಸಂಗಾತಿ ಶ್ರೀಮತಿ ಗಿರಿಜೆಯು  ತನ್ನ ಕೈಹಿಡಿದಂದಿನಿಂದ  ಇಂದಿನವರೆವಿಗೂ ನೀಡಿರುವ ಸಹಕಾರವನ್ನು ಪ್ರಾಮಾಣಿಕವಾಗಿ ಸ್ಮರಿಸುವುದನ್ನೂ ಈ ವ್ಯಕ್ತಿ ಮರೆಯುವುದಿಲ್ಲ. ಸಿರಿಭೂವಲಯಕಾವ್ಯದಲ್ಲಿ ಕನ್ನಡ ಭಾಷಾ ಸ್ತಂಬಕಾವ್ಯವನ್ನು ಪ್ರತ್ಯೇಕಿಸುವಲ್ಲಿ ಶ್ರೀಮತಿ ಗಿರಿಜಾ ಅವರೂ ನೆರವುನೀಡಿ ಈ ಕಾರ್ಯದ ವೇಗವು ವೃದ್ಧಿಯಾಗುವಲ್ಲಿ ಸಹಕರಿಸಿರುವುದು ಗಮನಾರ್ಹ ಸಗತಿ.
ನಾಡಿನ ಹಿರಿಯ ವಿದ್ವಾಂಸರಾದ ಪ್ರೊ. ಜಿ. ವೆಂಕಟಸುಬ್ಬಯ್ಯನವರು ’ಸಿರಿಭೂವಲಯ ಸಾಗರ ರತ್ನ ಮಂಜೂಷ’ ಎಂಬ ಸರಳಪರಿಚಯಕೃತಿಗೆ ಮುನ್ನುಡಿ ಬರೆಯುವಲ್ಲಿ ಹಾಸನದ ಸುಧಾರ್ಥಿಯನ್ನು ’ಸಿರಿಭೂವಲಯದ ಸುಧಾರ್ಥಿ’  ಎಂದು ಸೂಚಿಸಿರುವುದು;  ಪ್ರೊ. ಜಿ. ಬ್ರಹ್ಮಪ್ಪನವರು  ’ಗೌತಮಗಣಧರರ ಸಂತತಿಗೆ ಸೇರಿದ ಸುಧಾರ್ಥಿ’ ಎಂದು  ಸೂಚಿಸಿರುವುದು ಇವರು ಜೀವನದಲ್ಲಿ ಸಾಧಿಸಿರುವ ಅಮೂಲ್ಯವಾದ ಗೌರವ ಹಾಗೂ ಪಾರಮಾರ್ಥಿಕವಾದ ಸಂಪತ್ತಾಗಿದೆ. ಸಾಹಿತ್ಯಕ್ಷೇತ್ರದಲ್ಲಿ ಅಪರಿಚಿತನಾಗಿಯೇ ಇರುವ ತನಗೆ ಇದನ್ನೂ ಮೀರಿದ ರಾಷ್ಟ್ರೀಯ/ ಅಂತರ್ ರಾಷ್ಟ್ರೀಯ ಪ್ರಶಸ್ತಿಯಗಲೀ ಪುರಸ್ಕಾರವಾಗಲೀ ಯಾವುದೂ ಇಲ್ಲವೆಂಬುದು ಈ ಪರಿಚಯಕಾರನ ನಿಲುವು.
ಕನ್ನಡದಲ್ಲಿ ಸಿರಿಭೂವಲದಂಥ ಮಹತ್ತರವಾದ ಕಾವ್ಯವಿದೆ ಎಂಬ ಮಾಹಿತಿಯು ಮುಂದಿನ ತಲೆಮಾರಿಗೆ  ಸಮರ್ಪಕವಾಗಿ ದೊರೆತರೆ,  ಮುಂದೆ ಇನ್ನೊಬ್ಬ ಸಿರಿಭೂವಲಯದ ಶ್ರೀಕಂಠಯ್ಯನವರ  ಅವತಾರವಾಗಿ, ಮುಂದಿನ ಕನ್ನಡಿಗರಿಗೆ ಸಿರಿಭೂವಲಯದ ಸಮಗ್ರ  ವಿಶ್ವರೂಪದರ್ಶನವಾಗಲು  ಅವಕಾಶವಾದೀತೆಂಬುದು  ಸುಧಾರ್ಥಿಯ  ಹಂಬಲ.   ಸಿರಿಭೂವಲಯಕಾವ್ಯದಲ್ಲಿ ಅಡಗಿರುವ ಹಲವಾರು ಅಚ್ಚರಿಯ ಮಾಹಿತಿಗಳ ಕಾರಣದಿಂದಾಗಿ,  ಸುಧಾರ್ಥಿಯನ್ನೂ, ಆತ ರೂಪಿಸಿರುವ ಸರಳಪರಿಚಯಕೃತಿಗಳನ್ನು ಬಹಳ ಜಾಣ್ಮೆಯಿಂದ ಉಪೇಕ್ಷಿಸುತ್ತ, ಪ್ರಬಲವಾಗಿ ವಿರೋಧಿಸುವವರೂ ಸಾಕಷ್ಟುಜನಗಳಿರುವುದುಂಟು.
ಇದಾವುದನ್ನೂ ಲೆಕ್ಕಿಸದೇ  ಈ ವ್ಯಕ್ತಿಯು ತನ್ನ ಹಾದಿಯಲ್ಲಿ ತಾನು,  ಶ್ರಮಿಸುವುದಾಗಿದೆ.   ಸಾಮಾಜಿಕವಾಗಿ ಯಾವುದೇ ಉನ್ನತಶಿಕ್ಷಣ ಹಾಗೂ ಸ್ಥಾನಮಾನಗಳನ್ನೂ ಹೊಂದಂದೇ  ಎಲೆಮರೆಯ ಕಾಯಿಯಂತೆ ಈ ಕ್ಷೇತ್ರದಲ್ಲಿ  ಇನ್ನೂ ಉಸಿರಾಡುತ್ತಿರುವ ಈ ಸಾಹಿತ್ಯ ಕೃಷಿಕನು ಪ್ರಕೃತ ತನ್ನ ಅಧ್ಯಯನದ ಫಲದ ಸಾರಾಂಶವನ್ನು    ಇಲ್ಲಿನ ಓದುಗರಿಗೆ ಈ ಲೇಖನಮಾಲೆಯ ಮೂಲಕ ಪರಿಚಯಿಸುವುದು ನನ್ನ ಉದ್ದೇಶವಾಗಿದೆ. ಇಲ್ಲಿನ ಓದುಗರ ಪೈಕಿ ಕೆಲವರಿಗಾದರೂ  ಇದರಲ್ಲಿ ಆಸಕ್ತಿ ಇರಬಹುದೆಂದು ಭಾವಿಸಿದ್ದೇನೆ. (ಇನ್ನೂಇದೆ)
                                               -ಜಮದಗ್ನಿಸುತ.

ಸರ್ವಭಾಷಾಮಯೀಭಾಷಾಸಿರಿಭೂವಲಯಸಾರ

ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ
ಭಾಗ: ೨.

೧)** ಸರ್ವಭಾಷಾಮಯೀಭಾಷಾಸಿರಿಭೂವಲಯಸಾರ**

೨೦೧೦ರಲ್ಲಿ ಪ್ರಕಟವಾಗಿರುವ ಈ ವಿನೂತನವಾದ ಪರಿಚಯಕೃತಿಯು ಡೆಮಿ೧/೪ ಆಕೃತಿಯ ೪೪೪ ಪುಟಗಳ ವ್ಯಾಪ್ತಿಯಲ್ಲಿ ಬೆಳೆದಿದೆ.  ಕುಮುದೇಂದುಮುನಿಯು  ಯಾಪನೀಯ ಸಂಪ್ರದಾಯದ ದಿಗಂಬರಮುನಿ. ಯಾಪನೀಯರು ಧರ್ಮದ ವಿಚಾರದಲ್ಲಿ ತುಂಬಾ ಉದಾರಿಗಳಾಗಿದ್ದವರು.  ಕುಮುದೇಂದು ಮುನಿಯಂತೂ ಮಹಾನ್ ಮಾನವತಾವಾದಿ. ಜಗತ್ತಿನಲ್ಲಿ ಪ್ರಚಲಿತವಿರುವ ಮತ ಸಂಪ್ರದಯಗಳೆವೂ ಒಂದೇ ಮೂಲದಿಂದ ಬಂದವು ಎಂಬ ವಿಚಾರದಲ್ಲಿ ನಂಬಿಕೆ ಇದ್ದವನು. ಇದೊಂದು ಪ್ರಧಾನವಾದ ನಿಲುವು. ಇದನ್ನು ಸಮರ್ಪಕವಾಗಿ ಪ್ರತಿಫಲಿಸುವ ಉದ್ದೇಶದಿಂದ ಈ ಪರಿಚಯಕೃತಿಗೆ ಒಂದು ವಿನೂತನವಾದ ಮುಖಚಿತ್ರವನ್ನು ಅಳವಡಿಸಲಾಗಿದೆ.
ಸನತನವಾದ  ’ऒं ’ ಕಾರದಿಂದಲೇ ಜಗತ್ತಿನ ಸಕಲ ಮತಧರ್ಮಗಳೂ ಉಗಮವಾಗಿರುವ ವಿಚಾರವನ್ನು ಸೂಚಿಸುವ ಇಲ್ಲಿನ ಚಿತ್ರದಲ್ಲಿ   ’ऒं ’  ಕಾರವನ್ನು ಸನಾತನಧರ್ಮದ ಪ್ರತಿನಿಧಿಯನ್ನಾಗಿಸಿ, ಅದರಸುತ್ತಲೂ ಕಾಲಾನುಕ್ರಮದಲ್ಲಿ ಮಹಾನ್ ಧರ್ಮೋಪದೇಶಕರಾದರ ಜೈನ, ಕೃಷ್ಣ, ಬುದ್ಧ, ಏಸು, ಪೈಗಂಬರ್  ಶಂಕರ, ರಾಮಾನುಜ, ಬಸವೇಶ್ವರ, ಮಧ್ವಾಚಾರ್ಯರ ಚಿತ್ರಗಳನ್ನು ಅಳವಡಿಸಿ, ಸರ್ವಧರ್ಮ ಸಮನ್ವಯದ  ಸುಂದರವಾದ ಕಲ್ಪನೆಯನ್ನು ಸಾಕಾರಗೊಳಿಸಲಾಗಿದೆ.  ’ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ’ ಎಂಬ ಅನ್ವರ್ಥಕವಾದ ಹೆಸರಿನೊಂದಿಗೆ  ’೧ ರಿಂದ ೬೪ ಅಂಕಿಗಳನ್ನೊಳಗೊಂಡ ೧೬೦೦೦ ಅಂಕಚಕ್ರಗಳು, ೭೧೮ ಭಾಷೆಗಳ ಸಾಹಿತ್ಯ, ೩೬೩ ಮತಧರ್ಮಗಳ ವಿವೇಚನೆ ಮತ್ತಿತರ ವಿಸ್ಮಯಕಾರಿ ಸಂಗತಿಗಳು’ ಎಂಬ  ಮಹತ್ವದ ಮಾಹಿತಿಯನ್ನು ನಮೂದಿಸಲಾಗಿದೆ. ಕವಿ: ಕುಮುದೇಂದುಮುನಿ.  ಸಂಶೋಧಕ: ಕರ್ಲಮಂಗಲಂ ಶ್ರೀಕಂಠಯ್ಯ.  ಸಾರಗ್ರಾಹಿ:  ಸುಧಾರ್ಥಿ ಹಾಸನ ಎಂಬ ಮಾಹಿತಿಯೂ ಅಲ್ಲಿ ನಮೂದಾಗಿದೆ.
ಸಿರಿಭೂವಲಯವನ್ನು ಕುರಿತಂತೆ ಸುಧಾರ್ಥಿಯು ರೂಪಿಸಿರುವ ’ಸಿರಿಭೂವಲಸಾರ’ ಕ್ಕೆ   ಪ್ರಸಿದ್ಧ ಶಿಕ್ಷಣತಜ್ಞ ಹಾಗೂ ಪುತ್ತೂರಿನ ವಿವೇಕಾನಂದ  ಮಹಾವಿದ್ಯಾಲಯದ ಪ್ರಾಂಶುಪಾಲರಾಗಿದ್ದ  ಪ್ರೊ. ಎಂ ಎಸ್. ಅಪ್ಪ  ಅವರು ಮುನ್ನುಡಿ ಬರೆದಿದ್ದಾರೆ.  ಮುಚ್ಚುಮರೆ ಇಲ್ಲದ ಈ ಮುನ್ನುಡಿಯು ಪ್ರಕೃತ ಪರಿಚಯಕೃತಿಯನ್ನು ಯಾರೂ ನಿರ್ಲಕ್ಷಿಸದಂತೆ  ತಡೆಯೊಡ್ಡಿದೆ! ಕಾವ್ಯದ ಸಂಶೋಧನೆ ಹಾಗೂ ಸಮಕಾಲೀನ ವಿದ್ವಾಂಸರ ಮನೋಧರ್ಮವನ್ನು ಕುರಿತಂತೆ, ಸುಧಾರ್ಥಿಯ ಬರಹವು ಬಹಳ ತೀಕ್ಷ್ಣವಾಗಿದೆ.
೨೦೦೦ ದಿಂದ ಈಚೆಗೆ ಪುಸ್ತಕಶಕ್ತಿ ಪ್ರಕಾಶನವು  ಸಿರಿಭೂವಲಯಕ್ಕೆ ಸಂಬಂಧಿಸಿದಂತೆ  ಪ್ರಕಟಿಸಿರುವ ಎಲ್ಲ ಕೃತಿಗಳ ವಿವರಗಳನ್ನೂ ಕುರಿತಂತೆ ವಸ್ತುನಿಷ್ಟವಾಗಿ  ವಿಶ್ಲೇಷಿಸಿರುವ  ಇವರ ಕೃತಿಯಲ್ಲಿ  ಬಹಳ ನಿಷ್ಠೂರವಾದ  ಶೈಲಿಯು  ಅಡಕವಾಗಿದೆ. ಕೆಲವರು ಇದನ್ನು ಒಂದು ದೋಷವೆಂದು ಪರಿಗಣಿಸಬಹುದು.  ವಾಸ್ತವತೆಗೆ ಬೆಳಕುಬೀರಬೇಕಾದಲ್ಲಿ ಪರಿಚಯಕಾರನಿಗೆ ಈ  ನಿಷ್ಠುರಶೈಲಿ ಅನಿವಾರ್ಯವಾಗಿತ್ತು.  ಮೇಲು ನೋಟಕ್ಕೆ ಈ ದೋಷವು  ಪ್ರಮುಖವೆನಿಸುವಂತೆ ಕಾಣಿಸಿದರೂ ಈ ಪರಿಚಯಕೃತಿಗಳಲ್ಲಿ  ಅಳವಡಿಸಿರುವ  ’ಅಂತರ್ಸಾಹಿತ್ಯ’ ದ ಅತಿ ಪ್ರಮುಖ ಮಾಹಿತಿಗಳಿಂದಾಗಿ  ಈ ದೋಷವು  ಗೌಣವಾಗಿಬಿಡುವುದು ಸಹಜ ಸಂಗತಿಯಾಗಿದೆ.
ಈ ವಿಶಿಷ್ಟ  ಪರಿಚಯಕೃತಿಯ  ಮುನ್ನುಡಿಕಾರರಾದ ಪ್ರೊ. ಎಂ ಎಸ್. ಅಪ್ಪ  ಅವರು  ’ಖಂಡಿತವಾದಿ ಲೋಕವಿರೋಧಿ ಎಂಬ  ನಾಣ್ನುಡಿಯೊಂದಿದೆ. ಸತ್ಯಸಂಗತಿಗಳ ಅರಿವಿರುವವರು ಖಂಡಿತವಾದಿಗಳಾಗುವುದು ಸಹಜಸಂಗತಿ.  ಈ ಹಾದಿಯಲ್ಲೇ ತಮ್ಮ ಬರವಣಿಗೆಯನ್ನು ಮುಂದುವರೆಸಿರುವ ಸುಧಾರ್ಥಿಯವರ ನಿರೂಪಣೆಯು ಕೆಲವೊಮ್ಮೆ ಕಠಿಣವೆನಿಸಬಹುದು. ಆದರೂ ಅದರ ಅನಿವಾರ್ಯತೆಯನ್ನು  ಇವರು ಸೂಚಿಸಿ, ತಮ್ಮ ಕಾಠಿಣ್ಯಕ್ಕೆ  ಕ್ಷಮೆಕೇಳುವ  ಸೌಜನ್ಯ ಹೊಂದಿರುವುದು ಗಮನಾರ್ಹ ಸಂಗತಿ.  ತಾವು ತಿಳಿದ ವಿಚಾರಗಳನ್ನು ದಿಟ್ಟತನದಿಂದ ಓದುಗರಮುಂದಿರಿಸಿ, ತಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ಸೂಚಿಸಿ, ಅದರ ನಿರ್ಣಯವನ್ನು ಓದುಗರ  ವಿವೇಚನೆಗೇ ಬಿಡುವುದು ಇವರ ಬರಹದ  ವಿಶೇಷತೆ’  ಎಂದು ಸೂಚಿಸಿರುವುದು ಪರಿಚಯಕಾರನ ಮುಕ್ತ ಮನಸ್ಸಿನ  ಅನಿಸಿಕೆಗಳು ಬಹುಪಾಲು ಮಾನ್ಯವೆಂಬುದನ್ನು ಸಾರಿಹೇಳುವಂತಿದೆ.
ಸರ್ವಭಾಷಾಮಯೀಭಾಷಾ ಸಿರಿಭೂವಲಯದ ಒಂದು ಪಕ್ಷಿನೋಟ; ಸಿರಿಭೂವಲಯ ಕುರಿತು ಸ್ವಲ್ಪ ವಿವರ; ಸಿರಿಭೂವಲಯ ಕಾವ್ಯದ ಸ್ಥೂಲಪರಿಚಯ; ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಪುಸ್ತಕಶಕ್ತಿಯ ಪ್ರಕಟಣೆಗಳ ಸಾರಾಂಶ;  ಸಿಭೂವಲಯ ಒಂದು ಪರಿಚಯ; ಸಿರಿಭೂವಲಯ ಭಾಗ ೧ ರಿಂದ ೮;  ಸಾಹಸ ದೊಡ್ಡದು;  ವಿಸ್ಮಯಗಳ ಅಗರ ಸಿರಿಭೂವಲಯ;  ಗ್ರಂಥಸಂರಕ್ಷರ ಮಾತು;  ನೂತನ ಪರಿಷ್ಕರಣ ಮುನ್ನುಡಿ; ನೂತನ ಪರಿಷ್ಕರಣದ ಪ್ರಸ್ಥಾವನೆ;  ವಿದ್ವಾಂಸರ ಅಭಿಪ್ರಾಯಗಳು;  ಸಿರಿಭೂವಲಯ ಸ್ತಂಭಕಾವ್ಯಗಳು; ಸಿರಿಭೂವಲಯ ಅನಂತಸುಬ್ಬರಾಯರು ಕಂಡಂತೆ; ಸಿರಿಭೂವಲಯ ಭಾಗ ೨; ಪ್ರೊ. ಜಿ. ವೆಂಕಟಸುಬ್ಬಯ್ಯನವರ ಮುನ್ನುಡಿ; ಪ್ರೊ. ಎಸ್. ಕೆ. ರಾಮಚಂದ್ರರಾಯರ ಅಧ್ಯಕ್ಷಭಾಷಣ;  ಪ್ರೊ. ಎಲ್. ಎಸ್. ಶೇಷಗಿರಿರಾಯರ  ಅಧ್ಯಕ್ಷಭಾಷಣ;  ಡಾ||  ಟಿ.ವಿ. ವೆಂಕಟಾಚಲಶಾಸ್ತ್ರಿಗಳಭಾಷಣ; ಸಿರಿಭೂವಲಯದಲ್ಲಿ ದೊರೆಯುವ ಅಂತರ್ಸಾಹಿತ್ಯದರ್ಶನ;  ಸಿರಿಭೂವಲಯದಲ್ಲಿರುವ ಜಯಾಖ್ಯಾನಾಂತರ್ಗತ ಭಗವದ್ಗೀತಾ;  ಭಗವದ್ಗೀತೆಯ ಶ್ಲೋಕರೂಪ;  ಸಿರಿಭೂವಲಯದ ಕೆಲವು ಸಾಂಗತ್ಯಪದ್ಯಗಳು;  ಅನುಬಂಧಗಳು; ಸಿರಿಭೂವಲಯಕ್ಕೆ ಸಂಬಂಧಿಸಿದ ಮೂವರು ಮಹನೀಯರ ಸಂಕ್ಷಿಪ್ತ ಜೀವನಪರಿಚಯ; (ಯಲ್ಲಪ್ಪಶಾಸ್ತ್ರಿಗಳ ಜೀವನಪರಿಚಯ; ಕರ್ಲಮಂಗಲಂ ಶ್ರೀಕಂಠಯ್ಯನವರ ಜೀವನಪರಿಚಯ;  ಕೆ. ಅನಂತಸುಬ್ಬರಾಯರ ಜೀವನ ಪರಿಚಯ;  ಶ್ರೀಕಂಠಯ್ಯನವರ ಸಾಹಿತ್ಯದ ಸಂಕ್ಷಿಪ್ತಪರಿಚಯ; -ವಿಶ್ವಭಾಷೆಗಳಮೇಲೆಕನ್ನಡದ ಪ್ರಭಾವ;  ಯಮ-ಯಮಿ, ವೈದಿಕ ದೇವತೆಗಳು-ಈರಾನಿದೇವತೆಗಳು; ಶ್ರೀಸರಸ್ವತಿ; ಸಂಸ್ಕೃತಭಾಷೆಯಲ್ಲಿ ಹಾಡುಗಬ್ಬಗಳು;  ವೇದೋಪನಿಷತ್ತುಗಳಲ್ಲಿ  ದೇವರ ಕಲ್ಪನೆ; ಸಂಕ್ಷೇಪವಾಗಿ ಶಿವ ವಿಷ್ಣು ಬ್ರಹ್ಮರ ಕಲ್ಪನೆಗಳು; ಜಯ, ಭಾರತ, ಮಹಾಭಾರತ;  ಮಹಾಭಾರತದ ಮಹಾಸ್ವರೂಪ;  ವ್ಯಾಸನಾಮಕ ವ್ಯಕ್ತಿಗಳು; ಮಹಾಭಾರತದ ಯುದ್ಧಕಾಲ; ರಾಮಾನುಜರಕಾಲದ ಧಾರ್ಮಿಕ ಪರಿಸ್ಥಿತಿ;  ಯಜ್ಞೋಪವೀತಧಾರಣೆಗೆ  ವೇದಶಾಸ್ತ್ರಗಳ ಆಧಾರಗಳು; ಮಧ್ವಾಚಾರ್ಯರಕಾಲದ ಧಾರ್ಮಿಕಪರಿಸ್ಥಿತಿ;  ಬಡಗನಾಡುಬ್ರಾಹ್ಮಣರ ಇತಿಹಾಸ;  ಸಿರಿಭೂವಲಯ ಕುರಿತ ಪರಿಚಯಭಾಷಣಗಳು;  ಗ್ರಂಥದಹೆಸರನ್ನು ಕುರಿತು ಸ್ವಲ್ಪ ವಿವರ;  ಕಾಲಗಣನೆ; ಶಂಕರವಿಜಯಕ್ಕೆ ಸಂಬಂಧಿಸಿದ ಒಂದು ವಿಚಾರ; ಪಾಶ್ಚಾತ್ಯರ ಪುರಾಣಶೈಲಿ;  ಸಂಸ್ಕೃತಭಾಷೆಯ ಸಂಕ್ಷಿಪ್ತ ಇತಿಹಾಸ;  ಧರ್ಮ ರಾಜಕಾರಣ ಹಾಗೂ ಸಾಹಿತ್ಯ ಪರಂಪರೆಯ ಸಂಕ್ಷಿಪ್ತ ಪರಿಚಯ; ಹೆಸರಿನ ಮಹತ್ವ;  ಕನ್ನಡದ ಮಹತ್ವ; ಸಿರಿಭೂವಲಯದ ಸಂಶೋಧನೆಯಿಂದ ಬೆಳಕಿಗೆಬಂದ ಕೆಲವಾರು ತಪ್ಪುಗ್ರಹಿಕೆಗಳು,  ಸಿರಿಭೂವಲಯವು ಉಳಿದುಬಂದಿರುವ ದಿಸೆಯಲ್ಲಿ ಮಹಿಳೆಯರಪಾತ್ರ;  ಶಾಶ್ವತವಾದ ನವಸಮಾಜರಚನೆ ಒಂದು ಭ್ರಮೆ;  ಹಿನ್ನುಡಿ; -ಸಿರಿಭೂವಲಯಕುರಿತು ಒಂದುಮಾತು; ಸಿರಿಭೂವಲಯದಲ್ಲಿ ಸೂಚಿಸಿರುವ ವರ್ಣಲಿಪಿಯಭಾಷೆಗಳಲ್ಲಿ ಕೆಲವು ಹೆಸರುಗಳು; ಮುಖ್ಯಮಂತ್ರಿಗಳಿಗೆಪತ್ರ; ಕನ್ನಡಭಾಷೆಯ ಪ್ರಾಚೀನತೆಗೆ ಶಾಸನಗಳ ಆಧಾರ;  ಮಾಯಾ ಚಕ್ರಗಳು ಹಾಗೂ ಸಿರಿಭೂವಲಯದ ಅಂಕಚಕ್ರಗಳ ಸಂಬಂಧಕುರಿತು ಒಂದುಮಾತು; ಕನ್ನಡ ಅಂಕಿಗಳ ಉಗಮ ಮತ್ತು ವಿಕಾಸ;  ಸರ್ವಭಾಷಾಮಯೀಭಾಷಾ ವರ್ಣಮಾಲೆಯ ೬೪ ಧ್ವನಿ ಸಂಕೇತಗಳು;  ಮಲ್ಲಿಕಬ್ಬೆಯ ಮೂಲಪ್ರತಿಯ ನಕಲು;  ಪ್ರಥಮಚಕ್ರದ ನಕಲುಪ್ರತಿ; ಅಕ್ಷರ ಚಕ್ರ; ಗ್ರಂಥಋಣ ಎಂಬುದಾಗಿ ಸುಮಾರು ೬೬ ಶಿರೋನಾಮೆಗಳಲ್ಲಿ ಸಂಬಂಧಿಸಿದ ವಿಚಾರಗಳ ವಿವರಗಳನ್ನು ಚರ್ಚಿಸಲಾಗಿದೆ.
 ಪ್ರಿಯ ಓದುಗರೇ, ಇಲ್ಲಿಸೂಚಿಸಿರುವ ಪರಿವಿಡಿಯನ್ನು ಗಮನಿಸಿದರೇ ನಿಮಗೆ ಈ ಸರಳಪರಿಚಯಕೃತಿಯ ವ್ಯಾಪ್ತಿ ಹಾಗೂ ವಿಸ್ತಾರದ ಪರಿಧಿ ಎಷ್ಟೆಂಬುದು ವೇದ್ಯವಾಗಿರಬಹುದೆಂದು ಭಾವಿಸಿದ್ದೇನೆ. ಇಲ್ಲಿಸೂಚಿಸಿರುವ ಶಿರೋನಾಮೆಗಳನ್ನು ಕುರಿತು ಒಂದೊಂದು ವಾಕ್ಯದಷ್ಟು  ವಿವರವನ್ನು ಸೂಚಿಸಿದರೂ ಅದೇ ಒಂದು ಕಿರುಹೊತ್ತಿಯ ವ್ಯಾಪ್ತಿಗೆ ಬೆಳೆಯುವುದು ನಿಸ್ಸಂಶಯ.  ಈಕಾರಣದಿಂದಾಗಿ ನಾನು ಆ ಕಾರ್ಯಕ್ಕೆ ಕೈಹಾಕಿಲ್ಲ.
 ಆದರೂ  ಸಿರಿಭೂವಲಯದ ಖಚಿತವಾದ ಪರಿಚಯವಿಲ್ಲದೇ ಅದನ್ನು ಪುನರುಜ್ಜೀವನಮಾಡುವ ಸಾಹಸಕ್ಕೆ ಕೈಹಾಕಿ,  ಕೇವಲ ೧೯೫೩ ರ ಅಕ್ಷರ ಅವತರಣಿಕೆಯನ್ನು ಅಪೂರ್ಣವಾಗಿ ಮರುಮುದ್ರಣಮಾಡುವ ಪ್ರಯತ್ನದಲ್ಲೇ  ತೊಳಲಾಟಕ್ಕೆ ಸಿಕ್ಕಿ, ಸಿರಿಭೂವಲಕಾವ್ಯದ ವಿಚಾರವಾಗಿ ಇಲ್ಲದ ಇತಿಹಾಸ ನಿರೂಪಿಸುವ ಸಾಹಸಕ್ಕೆ ಕೈಹಾಕಿ ವಿಫಲರಾದ ಪುಸ್ತಕಶಕ್ತಿ ಪ್ರಕಾಶನ ಹಾಗೂ ಅವರ ’ವಿದ್ವಾಂಸರಮಂಡಳಿ’ಯನ್ನು ಕಿಂಚಿತ್ತೂ ಕರುಣೆಯಿಲ್ಲದೇ ನಿರ್ದಯವಾಗಿ ತಮ್ಮ ಶಕ್ತ್ಯಾನುಸಾರವಾಗಿ ಆಧಾಸಹಿತವಾಗಿ ಖಂಡಿಸಿರುವ ಈ ಸರಳಪರಿಚಯಕಾರನ ವಿಚಾರಮಂಡನೆಯ ಶೈಲಿಯು ಎಂಥವರನ್ನೂ ಬೆಚ್ಚಿ ಬೀಳಿಸುವಂತೆ ರಭಸವಾಗಿ ಪ್ರವಹಿಸಿರುವುದನ್ನು ಓದುಗರು ಸಿರಿಭೂವಲಯಸಾರದಲ್ಲಿ ಕಾಣಬಹುದಾಗಿದೆ ಎಂದು ಇಲ್ಲಿ ತಿಳಿಸಬಯಸುತ್ತೇನೆ.
 ಸಿರಿಭೂವಲಯ ಕುರಿತು ಮುಂದಿನ ಸಂಶೋಧನೆಗೆ ತೊಡಗುವವರನ್ನು ದಾರಿತಪ್ಪಿಸುವ   ಅಪಾಯದಿಂದ ರಕ್ಷಿಸುವುದಷ್ಟೇ  ಇಲ್ಲಿ ತನ್ನ ಉದ್ದೇಶವೆಂದೂ ಯಾವುದೇ ವಿದ್ವಾಂಸರನ್ನೂ ಅವಹೇಳಮಾಡುವುದು ತನ್ನ ಉದ್ದೇಶವಲ್ಲವೆಂದೂ  ಸ್ಪಷ್ಟಪಡಿಸಿರುವ ಪರಿಚಯಕಾರನ ಅಂತರಂಗವು ವಿಚಾರಶಾಲಿ ಓದುಗರಿಗೆ ಅಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.
 ಸರ್ವಾರ್ಥಸಿದ್ಧಿಸಂಘದವರು ಪ್ರಕಟಿಸಿದ್ದ  ೧ ರಿಂದ ೩೩ ರ ವರೆಗಿನ  ಅಧ್ಯಾಯಗಳ ಅಶ್ವಗತಿ ಹಾಗೂ ಸ್ತಂಬಕಾವ್ಯರೂಪದ ಅಂತರ್ಸಾಹಿತ್ಯವನ್ನು ಮೊಟ್ಟಮೊದಲಿಗರಾಗಿ , ವ್ಯವಸ್ಥಿತವಾಗಿ  ಸಂಗ್ರಹಿಸಿ ಪ್ರಕಟಿಸಿರುವುದು ಈ ಪರಿಚಯಕೃತಿಯ ಬಹುಮುಖ್ಯವಾದ ಅಂಶವಾಗಿದೆ. ಇಲ್ಲಿಕಾಣಬರುವ ಹಲವಾರು ಹೊಸ ಹೊಸ ಮಾಹಿತಿಗಳು  ಸಾಮಾನ್ಯ ಓದುಗರಿಗೆ ಕುಮುದೇಂದುವಿನ ಸಿರಿಭೂವಲಯದ  ಸಮೀಪದರ್ಶನ ಮಾಡಿಸುವಲ್ಲಿ ಯಶಸ್ವಿಯಾಗಿದೆ.
ಅಂತರ್ಸಾಹಿತ್ಯದಲ್ಲಿ ಅಡಕವಾಗಿರುವ ಅಪರೂಪದ ಮಾಹಿತಿಗಳು ಸಿರಿಭೂವಲಯವನ್ನು ಕುರಿತಂತೆ ಪರಿಚಯಕಾರನ ಶ್ರಮದ ಸಾಧನೆಗೆ ಸಾಕ್ಷಿಯಾಗಿದ್ದರೆ, ಗ್ರಂಥಋಣದಲ್ಲಿ ಸೂಚಿತವಾಗಿರುವ ಕೃತಿಗಳ ವ್ಯಾಪ್ತಿಯು ಈ ವ್ಯಕ್ತಿಯ ವಿಸ್ತಾರವಾದ ಹಾಗೂ ಆಳವಾದ ಸಾಹಿತ್ಯಾಧ್ಯಯನದ ಸೂಚಿಯಂತಿದ್ದು, ಕೃತಿರಚನೆಗೆ ಪೂರಕವಾದ  ಅಪಾರ ಮಾಹಿತಿಗಳ ಖಚಿತತೆಯನ್ನು ನಿರ್ದೇಶಿಸುವಂತಿದೆ.
ಇಷ್ಟು ವ್ಯಾಪಕವಾದ ಪ್ರಾಚೀನಕಾವ್ಯದ ಪರಿಚಯಕೃತಿಯ ಪ್ರಕಟಣೆಯ ವಿಚಾರವು ಬಹಳ ಸಮಸ್ಯಾತ್ಮಕವಾದುದ್ದು.  ಹೆಚ್ಚಿನ ಆರ್ಥಿಕಸಂಪತ್ತನ್ನು ನಿರೀಕ್ಷಿಸುವಂಥದ್ದು. ಮೊದಲಿಗೇ ಮೂಲ ಕೃತಿಯು ’ಕಬ್ಬಿಣದಕಡಲೆ’ ಎಂಬ ಅಪಖ್ಯಾತಿ ಹೊಂದಿದ್ದು!! ಕಳೆದ ಶತಮಾನದ ಪೂರ್ತ ಈ ಕಾವ್ಯವು ವಿವಾದದ ನೆರಳಿನಲ್ಲೇ ಇದ್ದದ್ದು. ಮೂಲಕಾವ್ಯದ ಸುತ್ತ ಹುಟ್ಟಿಬೆಳೆದಿದ್ದ ಹಲವಾರು ಹುತ್ತಗಳ ವಿಚಾರ ಕೆದಕಿರುವ ಈ ಪ್ರಯತ್ನದ ಫಲವನ್ನು ಸಾಹಿತ್ಯಲೋಕಕ್ಕೆ ಒದಗಿಸಲು ವೃತ್ತಿನಿರತ ಪ್ರಕಾಶಕರು ಯಾರೂ ಮುಂದೆಬರುವ ಸಾಧ್ಯತೆ ಇರಲಿಲ್ಲ.
ಹೀಗಾಗಿ, ಸುಧಾರ್ಥಿಯೇ  ಕಾಗದ, ಮುದ್ರಣ ಮತ್ತಿತರ ವೆಚ್ಚವನ್ನು ಹೊರುವ ನಿರ್ಧಾರಮಾಡಿ ಈ ಕೆಲಸಕ್ಕೆ ಚಾಲನೆ ನೀಡಿದ ಕಾರಣದಿಂದಾಗಿ ನೆಪಮಾತ್ರಕ್ಕೆ ಈ ಪರಿಚಯಕೃತಿಯ  ಪ್ರಕಟಣೆಯ ಹೊಣೆಹೊತ್ತ ದತ್ತಿ ಸಂಸ್ಥೆ ಕಾಶಿ ಶೇಷಶಾಸ್ತ್ರೀ ಚಾರಿಟಬಲ್ ಟ್ರಸ್ಟಿನ  ಉಲ್ಲೇಖವು ಇಲ್ಲಿ ಕೇವಲ ಔಪಚಾರಿಕವಾದೀತಷ್ಟೇ.
ಈ ವಿಸ್ತಾರವಾದ ಪರಿಚಯಕೃತಿಯಲ್ಲಿ ಅಡಕವಾಗಿರುವ ಸ್ವಾರಸ್ಯಕರವಾದ, ಕುತೂಹಲಕರವಾದ ವಿವರಣೆಗಳಿಂದಾಗಿ ಓದುಗರಿಗೆ ಸಿರಿಭೂವಲಯ ಕಾವ್ಯದ ಸಮೀಪ ದರ್ಶನವಾಗುವುದು ನಿಜವಾದರೂ ; ಅಂತರ್ಸಾಹಿತ್ಯಭಾಗವು ಮೂಲಸಾಹಿತ್ಯರೂಪದಲ್ಲೇ  ಸರ್ವಭಾಷಾಮಯೀಭಾಷಾ ಕನ್ನಡದ ಸ್ವರೂಪದಲ್ಲೇ  ಇರುವ ಕಾರಣದಿಂದಾಗಿ ಅದನ್ನು ಸುಲಭವಾಗಿ ಓದಿ ತಿಳಿಯುವುದು ಸಾಮಾನ್ಯ ಓದುಗರಿರಲೀ ವಿದ್ವಾಂಸರಿಗೂ  ಕಠಿಣವಾಗಿಯೇ ಉಳಿದಿತ್ತು!     
ಈ ಸಮಸ್ಯೆಯ ಪರಿಹಾರಕ್ಕಾಗಿ  ಸುಧಾರ್ಥಿಯು ಎರಡನೇ ಹಂತದ ಸಂಕ್ಷಿಪ್ತ ಪರಿಚಯಕೃತಿಯೊಂದನ್ನು ರೂಪಿಸುವ ಕಾರ್ಯಕ್ಕೆ ಕೈಹಾಕಿರುವುದು ಕಾಣಬರುತ್ತದೆ. ಇದಕ್ಕೆ ಮೈಸೂರಿನ ವಿದ್ವಾಂಸರಾಗಿದ್ದ ಜಿ. ಬ್ರಹ್ಮಪ್ಪನವರು ನೀಡಿದ್ದ ಮೌಖಿಕ ಸಲಹೆ ಸೂಚನೆಯು ಮೂಲಕಾರಣವಾಗಿ  ಉತ್ತೇಜನನೀಡಿರುವುದನ್ನು ಸುಧಾರ್ಥಿಯು ಸ್ಮರಿಸಿರುವುದನ್ನು ಮುಂದಿನ ಸರಳ ಪರಿಚಯಕೃತಿಯಲ್ಲಿ ಕಾಣಬಹುದು.  (ಇನ್ನೂಇದೆ)
                                                                                                                                                                                             -ಜಮದಗ್ನಿಸುತ.

ಸಿರಿಭೂವಲಯದ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ **


**ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ**** ಭಾಗ: ೩.

 ೨.  **ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ
        ಸಿರಿಭೂವಲಯದ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ **

ಸಿರಿಭೂವಲಯದ ಅಕ್ಷರ ಅವತರಣಿಕೆಯಲ್ಲಿ ಮೂಲಸಾಹಿತ್ಯದ ಸ್ವರೂವು
”ಅಷ್ ಟ ಮಹಾಪ್ ರಾತಿಹಾರ್ ಯ ವಯ್ ಬವದಿನ್ ದ|ಅಷ್ ಟಗುಣನ್ ಗಳೊಳ್ ಓಮ್ ದಮ್ ||
ಸೃಷ್ ಟಿಗೆ ಮನ್ ಗಲ ಪರ್ ಯಾಯದಿನಿತ್ ತ|ಅಷ್ ಟಮಜಿನಗೆರಗುವೆನು|| ”   ಎಂದಿರುತ್ತದೆ.  ಇದರಲ್ಲಿ ಮೂಲಾಕ್ಷರ ಹಾಗೂ ಸಂಯುಕ್ತಾಕ್ಷರ ಎರಡೂ ಬೆರೆತಿರುತ್ತದೆ!  ಇದನ್ನು ಸುಲಭವಾಗಿ ಓದಲು ಸಾಧ್ಯವಿಲ್ಲ.!  ಇದನ್ನೇ ಇಂದಿನ ಒತ್ತಕ್ಷರ ಕ್ರಮದಲ್ಲಿ ಬರೆದಾಗ:
”ಅಷ್ಟಮಹಾಪ್ರಾತಿಹಾರ್ಯವೈಭವದಿಂದ|
ಅಷ್ಟಗುಣಂಗಳೊಳೊಂದಮ್||
ಸೃಷ್ಟಿಗೆ ಮಂಗಲ ಪರ್ಯಾಯದಿನಿತ್ತ|
ಅಷ್ಟಮ ಜಿನಗೆರಗುವೆನು”||  ಎಂದಾಗುತ್ತದೆ!! ಮೂಲಸಾಹಿತ್ಯವನ್ನು ಈ ಕ್ರಮದಲ್ಲಿ ಬದಲಿಸಿಕೊಂಡನಂತರ ಅದನ್ನು ಪದವಿಭಾಗಮಾಡಿಕೊಂಡು, ತಾತ್ಪರ್ಯವನ್ನು ರೂಪಿಸಿಕೊಂಡು ಅರ್ಥೈಸಿಕೊಳ್ಳಬೇಕು!   ಈ ಕಾವ್ಯದ ೯ ಖಂಡಗಳಲ್ಲಿ ಈ ರೀತಿಯ  ಆರು ಲಕ್ಷ ಸಾಂಗತ್ಯ ಪದ್ಯಗಳು ದೊರೆಯುತ್ತವೆ  ಇವುಗಳಲ್ಲಿ  ಅಶ್ವಗತಿಯೊಂದಿಗೆ  ಸ್ತಂಬಕಾವ್ಯರೂಪದ ಅಂತರ್ಸಾಹಿತ್ಯವು ಹಲವಾರು ಶ್ರೇಣಿಗಳಲ್ಲಿ ಉಗಮವಾಗುತ್ತವೆ!!  ಈಗ ಪ್ರಥಮ ಖಂಡದ ೫೯ ಅಧ್ಯಾಯಗಳ ಮೂಲಸಾಹಿತ್ಯ ಹಾಗೂ ಅದರಿಂದ ಉಗಮವಾಗುವ ಅಂತರ್ಸಾಹಿತ್ಯವನ್ನು ತೆಗೆದು  ಸುಮರು ೨೦೦೦೦ ಸಾವಿರಕ್ಕೂ ಹೆಚ್ಚಿನ ಸಾಂಗತ್ಯಪದ್ಯಗಳನ್ನು ಮುದ್ರಿಸಲಾಗಿದೆ. ಇವುಗಳಪೈಕಿ  ಕೆಲವು ಸಾಂಗತ್ಯ ಪದ್ಯಗಳನ್ನು ಸಾಧ್ಯವಿರುವ ಮಟ್ಟಿಗೆ ವಿಶ್ಲೇಷಿಸಲಾಗಿದೆ.
 ಕಾವ್ಯರಚನೆಯಲ್ಲಿ ಕವಿಯು ಆರುಸಾವಿರ ಗಣಿತಸೂತ್ರಗಳನ್ನು ಬಳಸಿರುವುದಾಗಿ ಸೂಚಿಸಿರುವುದಿದೆ. ಈ ಕಾವ್ಯಾದಲ್ಲಿ ಆರುಸಾವಿರ ಪ್ರಶ್ನೆಗಳಿಗೆ ಉತ್ತರಗಳಿವೆಯೆಂದೂ, ಜಗತ್ತಿ ೭೧೮ ಭಾಷೆಗಳ ಸಾಹಿತ್ಯವು ಇದರಲ್ಲಿ  ಅಡಗಿದೆಯೆಂದೂ, ಜಗತ್ತಿ ಎಲ್ಲಭಾಷೆಯ, ಎಲ್ಲವಿಷಯಗಳಿಗೆ ಸೇರಿದ ೬೪ ಕಲೆಗಳ ಮಾಹಿತಿಯೂ ಇದರಲ್ಲಿ ಅಡಕವಾಗಿದೆಯೆಂದೂ ಕವಿಯ ಹೇಳಿಕೆಯಿದೆ!  ಈ ಕಾವ್ಯವನ್ನು ಓದಲು ಸುಮಾರು ೪೦ ಬಂದಗಳಿರುವುದಾಗಿಯೂ ಕವಿಯು ಸೂಚಿಸಿದ್ದಾನೆ.
’ಜಗತ್ತಿನಲ್ಲಿ ಎಲ್ಲವೂ ಗಣಿತಾತ್ಮಕವಾಗಿಯೇ ನಡೆಯುತ್ತವೆ. ಯಾವುದೂ ಆಕಸ್ಮಿಕವಾಗಿ ನಡೆಯುವುದಿಲ್ಲ, ಜಗತ್ತಿನ ಮಾನವರೆಲ್ಲರಿಗೂ ಒಂದೇ ಧರ್ಮ, ಅದು ’ಮಾನವಧರ್ಮ’ ಜಗತ್ತಿನಲ್ಲಿರುವುದೆಲ್ಲವೂ ಅರೆಸತ್ಯ; ಅರೆಮಿಥ್ಯ  ಎಂಬುದಾಗಿ ಮೂರು ಮಹತ್ವದ ಮಾಹಿತಿಯನ್ನು ಕವಿಯು ಘೋಷಿಸಿರುವುದಿದೆ! ಇದರೊಂದಿಗೆ ’ಜಗತ್ತಿನ ಎಲ್ಲ ಜ್ಞಾನಕ್ಕೂ ಋಗ್ವೇದವೇ ಮೂಲ ಆಕರ’ ಎಂಬ ಸಾರ್ವಕಾಲಿಕ ಸತ್ಯವನ್ನೂ ಕವಿಯು ಘೋಷಿಸಿರುವುದಿದೆ!!
ಕವಿಯು ಜೈನಸಂಪ್ರದಾಯದವನೇ ಆಗಿದ್ದರೂ, ಸರ್ವಧರ್ಮ ಸಮನ್ವಯಿಯಾಗಿ ಈ ಘೋಷಣೆ ಮಾಡಿದ್ದಾನೆ!!  ಜೈನಸಂಪ್ರದಾಯದವರಿಗೆ ವೇದಗಳು ಪ್ರಮಾಣವಲ್ಲ!! ಈ ಕಾರಣದಿಂದಾಗಿ ಆ ಸಮುದಾಯದ ಕೆಲವು ವಿದ್ವಾಂಸರು ಇದನ್ನು ತೀವ್ರವಾಗಿ ವಿರೋಧಿಸುತ್ತಾರೆ!! ಈ ವಿರೋಧದ ತೀವ್ರತೆ ಎಷ್ಟಿರುವುದೆಂದರೆ ಈ ಕಾವ್ಯದ ಸರಳ ಪರಿಚಯಕಾರನನ್ನು ’ಜೈನಸಮುದಯಕ್ಕೆ ವಿಷಹಾಕುವ ಕೊಲೆಗಾರ’ ಎಂದು ಸೂಚಿಸುವಷ್ಟು ಪ್ರಖರತೆ ಅದರಲ್ಲಿ ತುಂಬಿರುತ್ತದೆ!! ಇನ್ನು ಕೆಲವು ಮೇಧಾವಿಗಳು ’ಸಿರಿಭೂವಲಯವು ಜೈನಸಂಪ್ರದಾಯದ ಕಾವ್ಯ. ಇದನ್ನು  ಸರಳಪರಿಚಯದ ಹೆಸರಿನಲ್ಲಿ  ಈ ಬ್ರಾಹ್ಮಣನು ವೇದಸಾಹಿತ್ಯಕ್ಕೆ ’ಹೈಜಕ್ ’ ಮಾಡಿ,  ವಂಚನೆ ಮಾಡುತ್ತಿದ್ದಾನೆ. ಎಂದು ಪ್ರಲಾಪಿಸಿರುವುದಿದೆ!
 ಮತ್ತೆ ಕೆಲವರು ’ಇನ್ನುಮುಂದೆ ಜೈನಸಮುದಾಯದವರೇ ಈ ಕಾವ್ಯದ ಸಂಶೋಧನೆ ಮಾಡಬೇಕು.  ಅಂಥ ಸಂಶೋಧನೆಯ ತಂಡದಲ್ಲಿ ಜೈನೇತರರಿಗೆ ಅವಕಾಶನೀಡಬಾರದು’ ಎಂದು  ಠರಾವು ಮಾಡಿಕೊಂಡಿರುವುದೂ ಉಂಟು!!! ’ಜೈನ ಸಂಪ್ರದಾಯವು ಜಗತ್ತಿನಲ್ಲಿ ವೇದಸಂಪ್ರದಾಯಕ್ಕಿಂತಲೂ ಪ್ರಚೀನವಾದುದು! ಜಗತ್ತಿನ ಉಳಿದೆಲ್ಲ ಧರ್ಮಗಳಿಂದಲೂ ಸ್ವಲ್ಪ ಸ್ವಲ್ಪ ವಿಚಾರಗಳನ್ನು ತೆಗೆದುಕೊಂಡು ವೇದಗಳನ್ನು ರಚಿಸಲಾಗಿದೆ’ ಎಂಬ ಮಹಾನ್ ಸಂಶೋಧಕರೂ ಈ ಗುಂಪಿನಲ್ಲಿದ್ದಾರೆ!!
 ಇಂಥ ಉದಾರಹೃದಯಿಗಳಿಗೆ ಶತೃವಾಗಿರುವ ಈ ಸುಧಾರ್ಥಿಯು ಮಾಡಿರುವ ಮಹಾಪರಾಧವೆಂದರೆ,  ಈ ಸಿರಿಭೂವಲಯಸಾಗರದ ಆಳದಲ್ಲಿದ್ದ ಬಂಡೆಗಳನ್ನು ಸೀಳಿ, ಪುಡಿಮಾಡಿ, ಅಲ್ಲಿದೊರೆತ ಅಮೂಲ್ಯ ರತ್ನಗಳನ್ನು ಹೊರತಂದು, ಜಗತ್ತಿನೆದುರು ಪ್ರದರ್ಶಿಸಿದ್ದು! ನಿಜಕ್ಕೂ ಇದೊಂದು  ಆತ್ಮಪ್ರಶಂಸೆಯ ಮಾತಲ್ಲ. ಈ ಬಡಪಾಯಿ ಪರಿಚಯಕಾರನು ಸುಮಾರು ೩೦ ವರ್ಷಗಳಕಾಲ ಅವಿವೇಕಿಯಂತೆ ಈ ಕಾವ್ಯದಲ್ಲಿ ಮುಳುಗಿದ್ದಕ್ಕೆ ಇದಕ್ಕಿಂತ ವಿಶೇಷ ಕೊಡುಗೆ ಇನ್ನೇನಿದೆ!!??
ಸಿರಿಭೂವಲಯ ಕಾವ್ಯವನ್ನು ಸಾಮಾನ್ಯ ಓದುಗರಿಗೂ ಇಂದಿನ ಓದುವ ಕ್ರಮದಲ್ಲಿ ಸುಲಭವಾಗಿ ಓದಲು ಸಹಕಾರಿಯಾಗಲೆಂಬ  ಉದ್ದೇಶದಿಂದ ರೂಪಿಸಿದ ಈ ಕೃತಿಯನ್ನು ಸುಧಾರ್ಥಿಯ  ಕೈಹಿಡಿದಾಕೆ ಶ್ರೀಮತಿ  ಗಿರಿಜಾ ಅವರು  ಪ್ರಕಟಿಸಿದ್ದಾರೆ. ಡೆಮಿ ೧/೪ ಅಳತೆಯ ಸುಮಾರು ೨೧೦ ಪುಟಗಳ ವ್ಯಾಪ್ತಿಯ ಈ ಸಾಂಗತ್ಯಪದ್ಯಗಳ ಸಂಕಲನವು ೨೦೧೧ರಲ್ಲಿ  ಪ್ರಕಟವಾಗಿದೆ.   ಹೆಸರು  ಸೂಚಿಸ ಬಯಸದ ಸಿರಿಭೂವಲಯದ ಅಭಿಮಾನಿಯೊಬ್ಬರು ಈ ಕೃತಿಯ ಮುದ್ರಣ ಹಾಗೂ ಕಾಗದಕ್ಕೆ ಸಂಬಂಧಿಸಿದ ವೆಚ್ಚಕ್ಕಾಗಿ ೩೪ ಸಾವಿರ ರುಪಾಯಿಗಳನ್ನು ಕೊಡುಗೆಯಾಗಿ ನೀಡಿದ್ದರು,   ಕಾಲಕ್ರಮದಲ್ಲಿ ಈ ಮೊತ್ತವನ್ನು ಅವರಿಗೆ ಬೇರೊಂದು ರೂಪದಲ್ಲಿ ಪೂರ್ಣವಾಗಿ ಹಿದಿರುಗಿಸಲಾಗಿದೆ.
ಕೇವಲ ಹನ್ನೆರಡು ಪುಟಗಳ ಸಂಕ್ಷಿಪ್ತ ವಿವರಣೆಯಲ್ಲಿ ಸಿರಿಭೂವಲಯದ ಸಮಗ್ರ ವಿವರಗಳನ್ನು ಸಂಗ್ರಹರೂಪದಲ್ಲಿ ನೀಡಿರುವ ಸುಧಾರ್ಥಿಯು ಸಿರಿಭೂವಲಯದ ಮೂಲಸಾಹಿತ್ಯ ಹಾಗೂ ಅಂತರ್ಸಾಹಿತ್ಯದ ಸಾಂಗತ್ಯಪದ್ಯಗಳಲ್ಲಿ ಪ್ರಮುಖವಾದ ೬೪೮ ಪದ್ಯಗಳನ್ನು ಸಂಗ್ರಹಿಸಿ, ಇಂದಿನ ಓದುವ ಲಿಪಿಕ್ರಮದಲ್ಲಿಯೇ  ಮುದ್ರಿಸಿ ಪ್ರಕಟಿಸಿದ್ದಾಗಿದೆ.
ಸಾಂಗತ್ಯ ಪದ್ಯಗಳನ್ನು ವಿಷಯಾನುಸಾರವಾಗಿ  ಹನ್ನೊಂದು ಗುಂಪುಗಳಾಗಿ ವಿಂಗಡಿಸಿರುವ ಸಂಗ್ರಹಕಾರನು  ಅಂಕವಿಜ್ಞಾನ; ಅಣುವಿಜ್ಞಾನ; ಆಕಾಶಗಮನ ಹಾಗೂ ಗಣಕಯಂತ್ರಕ್ರಮ; ಮೋಜಿಣಿ ಹಾಗೂ ಕಟ್ಟಡವಿಜ್ಞಾನ;  ದಾಂಪತ್ಯವಿಜ್ಞಾನ;  ಭವಿಷ್ಯವಾಣಿ; ಲಲಿತಾಯುರ್ವೇದ;  ಭಾಷೆ ಮತ್ತು ಲಿಪಿ;  ಕನ್ನಡಭಗವದ್ಗೀತೆ; ಕಾವ್ಯ ಹಾಗೂ ಕವಿ;  ಧಾರ್ಮಿಕ ವಿಷಯಗಳು  ಎಂಬುದಾಗಿ ಈ ಗುಂಪುಗಳಿಗೆ ಸೂಕ್ತವಾದ ಶೀರ್ಷಿಕೆಗಳನ್ನು ನೀಡಲಾಗಿದೆ. 
ಕವಿ; ಕಾವ್ಯ,  ಕಾಲ,  ಸಂಶೋಧನೆ ಮುಂತಾದ ವಿಚಾರಗಳಿಗೆ ಸೇರಿದಂತೆ  ಸೂಕ್ತವಾದ ಮಾಹಿತಿಗಳನ್ನು ಹಿನ್ನುಡಿಯ ರೂಪದಲ್ಲಿ ಸೂಚಿಸಲಾಗಿದೆ. ವರರುಚಿಯ ’ಕಟಪಯಾದಿಸೂತ್ರ’ ಕುರಿತು ಸಂಕ್ಷಿಪ್ತವಾದ  ವಿವರಣೆಯನ್ನೂ ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸಿರಿಭೂವಲಯದ ಸಾಂಗತ್ಯಪದ್ಯಗಳನ್ನು ಕುರಿತ ಪರಿಚಯವು ಸಾಕಷ್ಟು ಜನಪ್ರಿಯವಾಗುತ್ತಿದೆ. ಆದರೆ ೨೦೧೧ರಲ್ಲಿ ಈ ಪರಿಚಯ ಕೃತಿಯು ಪ್ರಕಟವಾದ ಸನ್ನಿವೇಶದಲ್ಲಿ ಅದರ ಪರಿಚಯ ಹೊಂದಿದ್ದವರು ಬಹಳ ವಿರಳವಾಗಿದ್ದುದು ಖಚಿತ.  ಅಂಥಪರಿಸರದಲ್ಲೂ  ಈ ಸಿರಿಭೂವಲಯ ಕಾವ್ಯದ ಕೆಲವಾರು ಸಾಂಗತ್ಯ ಪದ್ಯಗಳು ಜನಸಾಮಾನ್ಯರ ನಾಲಿಗೆಯಮೇಲೆ ನಲಿದಾಡುವಂತಾದುದು  ಈ ಸಂಕಲನದ ಯಶಸ್ಸಿಗೆ ಸಾಕ್ಷಿಯಾಗಿದೆ.
’ಅಂಕವೆಂದರದೇನು ಅಂಕದಂಕಿಗಳೆಷ್ಟು|
ಅಂಕವದೆಲ್ಲಿ ಹುಟ್ಟಿಬಹುದು|
ಅಂಕವಿರುವುದೆಲ್ಲಿ ಅಂಕದ ಕಾಲದ|
 ಅಂಕಿಯಕಾಣುವುದೆಂತು||

ಅಣುವುನೀರೊಳಗೆಷ್ಟುಅನಲವಾಯುಗಳೆಷ್ಟು|
ನೆನೆದುಸುಡದಣುವೆಷ್ಟು|
ತನಿವರ್ಣನಾಲ್ಕರಿಂಪೂರಣಗನಲದೆ|
ಮಿನುಗುವ ಪರಮಾಣುವೆಷ್ಟು||

ತನುವನು ಆಕಾಶಕೆ ಹಾರಿಸಿನಿಲಿಸುವ|
ಘನವೈಮಾನಿಕದಿವ್ಯಕಾವ್ಯ|
ಪನಸಪುಷ್ಪದಕಾವ್ಯವಿಶ್ವಂಬರಕಾವ್ಯ|
ಜಿನರೂಪಿನಭದ್ರಕಾವ್ಯ||

ಹಾಡಲುಸುಲಭವಾದಂಗ|
ನೋಡಲುಮೆಚ್ಚುವಗಣಿತ|
ಜೋಡಿಯಂಕದಕೂಟದಂಗ|
ಕೂಡುವಪುಣ್ಯಾಂಗಭಂಗ||

ಯವೆಯಕಾಳಿನಕ್ಷೇತ್ರದಳತೆಯೊಳಡಗಿಸಿ|
ಅವರೊಳನಂತವಸಕಲಾನ್|
ಕವನವದೊಳ್ ಸವಿಯಾಗಿಸಿಪೇಳುವ|
ನವಸಿರಿಇರುವಭೂವಲಯ||
 ಮುಂತಾದ ಸಾಂಗತ್ಯಗಳ ಒಳಗೆ ಇಣುಕಿನೋಡಿದಾಗ ಅಲ್ಲಿ ಇಂದಿನ ಆಧುನಿಕ ಪರಿಸರದ  ಅಂಕವಿಜ್ಞಾನ, ಅಣುವಿಜ್ಞಾನ, ಆಕಾಶಗಮನ, ಗಣಕಯಂತ್ರ ವಿಜ್ಞಾನ ಮುಂತಾದುವಕ್ಕೆ ನೇರವಾಗಿ ಸಂಬಂಧಿಸಿದ ವಿಚಾರಗಳು ಅಡಕವಾಗಿರುವುದನ್ನು ಓದುಗರು ಕಾಣಬಹುದಾಗಿದೆ.
ಕಾವ್ಯದಲ್ಲಿ ಕಾಣಬರುವ ಒಂದು ಸಾಂಗತ್ಯ..
’ಕರುಣೆಯಧವಲವರ್ಣದಪಾದಗಳಿಹ|
ಪರಮಾತ್ಮಪಾದದ್ವಯದೆ|
ಸಿರವಿಹನಾಲ್ಕಂಕವೆರಸಿಸಿಂಹದಮುಖ|
ಭರತಖಂಡದಶುಭಚಿಹ್ನೆ||
ಇದನ್ನು ವಿವರಿಸುವಲ್ಲಿ ಕವಿಯು ಸುಮಾರು ೧೨೦೦ವರ್ಷಗಳ ಹಿಂದೆಯೇ ಸ್ವತಂತ್ರಭಾರತದ ರಾಷ್ಟ್ರಧ್ವಜದ ಚಿಹ್ನೆಯನ್ನು ಕುರಿತು ಸೂಚಿಸಿದ್ದಾನೆಂದು ಪರಿಚಯಿಸಿರುವುದನ್ನು, ಇಂದಿನವಿದ್ವಾಂಸರು ಇದೆಲ್ಲವೂ ಸಮರ್ಪಕವಲ್ಲವೆಂದೇ ವಾದಿಸುವರೆಂದರೆ,  ಈ ಸರಳ ಪರಿಚಯಕಾರನು ಅಂಥವರನ್ನು ಕುರಿತು ಬಳಸಿರುವ ಪದಗಳು ಉಚಿತವೋ; ಅನುಚಿತವೋ ಎಂಬುದನ್ನು ಓದುಗರೇ ನಿರ್ಧರಿಸಬೇಕಾಗುತ್ತದೆ.
’ಸಿರಿಭೂವಲಯದ  ಸಾಂಗತ್ಯಪದ್ಯಗಳು ಅಕ್ಷರಗಣ ಅಥವಾ ಮಾತ್ರಾಗಣಕ್ಕೆ ಹೊಂದಿಕೆಯಾಗುವುದಿಲ್ಲ. ಕುಮುದೇಂದುವು ಇದನ್ನು ’’ಶಬ್ದಗಣ’’ ಎಂದು ಹೆಸರಿಸಿದ್ದಾನೆ.  ಇದನ್ನು ಕನ್ನಡದ  ಪ್ರಥಮ ಶಬ್ದಗಣದ ಸಾಂಗತ್ಯವೆನ್ನಬಹುದು. ಇದು ರೂಪುಗೊಂಡದ್ದು ೯ನೇ ಶತಮಾನದಲ್ಲಿ ೧೫ ನೇ ಶತಮಾನದಲ್ಲಲ್ಲಾ ಎಂಬ ಮಾಹಿತಿಯನ್ನು  ವ್ಯಾಕರಣ ಶಾಸ್ತ್ರಜ್ಞರು  ಗಮನಿಸಬೇಕು’ ಎಂದು ಸೂಚಿಸಿರುವ ಪರಿಚಯಕಾರನು  ಈ ಕಾವ್ಯದ ಛಂದಸ್ಸಿನ ವಿಚಾರವಾಗಿ ಶುಷ್ಕವಾದ ವಾದ- ಪ್ರತಿವಾದದಲ್ಲಿ ತೊಡಗಿ ವಿವಾದ ಸೃಷ್ಟಿಸಿರುವವರಿಗೆ ಸೂಕ್ತವಾದ ಮಾಹಿತಿಯನ್ನು ಒದಗಿಸಿರುವುದಿದೆ. 
ಅಂಕಭೂವಲಯವನ್ನು ಆಧರಿಸಿದ  ಸಂಶೋಧನೆ ಎಂಬುದನ್ನೇ ಪ್ರಧಾನವಾಗಿ   ಬಿಂಬಿಸಿ, ೧೯೫೩ ರರ ಅಕ್ಷರ ಭೂವಲಯದ ಪ್ರಚಾರವಾಗಿತ್ತು.    ಅಲ್ಲಿ ಪ್ರಕಟವಾಗಿದ್ದ  ’ಮಲ್ಲಿಕಬ್ಬೆ ಎಂಬ ಸಾಧ್ವಿಯು ಕೋರಿಕಾಗದದಲ್ಲಿ ಪ್ರತಿಲಿಪಿಮಾಡಿಸಿ, ತನ್ನ ಗುರು ಮಾಘಣನಂದಿಗೆ ಶಾಸ್ತ್ರದಾನಮಾಡಿದ್ದ ಪ್ರತಿಗಳಪೈಕಿ (ಸುಮಾರು ನಾನೂರುವರ್ಷಗಳಹಿಂದೆ) ಒಂದು ಪ್ರತಿಯು ದೊಡ್ಡಬೆಲೆ ಧರಣೇಂದ್ರಪಂಡಿತರಲ್ಲಿ ಉಳಿದುಬಂದಿತ್ತು, ಅದನ್ನು ಬಳಸಿಕೊಂಡು, ಶ್ರಮವಹಿಸಿ  ಅಂಕಿಗಳಿಗೆ ಅಕ್ಷರಗಳನ್ನು ಅಳವಡಿಸಿ, ಅಕ್ಷರಗಳ ಸರಪಣಿಯಿಂದ ಸಾಂಗತ್ಯ ಪದ್ಯಗಳನ್ನು ರೂಪಿಸಿ ಮುದ್ರಿಸಲಾಗಿದೆ  ಎಂಬ ಮಾಹಿತಿಗೆ ಹೆಚ್ಚಿನ ಒತ್ತುಕೊಟ್ಟು ೧೯೫೩ರ ಅಕ್ಷರ ಅವತರಣಿಕೆಯನ್ನು ಪ್ರಕಟಿಸಲಾಗಿದೆ  ಎಂಬ ವಿಚಾರವಿತ್ತು.
ಅಂಕಭೂವಲಯದ ಒಂದು ಪುಟದ ನಕಲು ಪ್ರತಿಯನ್ನೂ ಅಳವಡಿಸಲಾಗಿತ್ತು.  ಆ ಅಂಕಚಕ್ರವನ್ನು ಶ್ರೇಢಿಬಂದದಲ್ಲಿ ಓದುವ ಕ್ರಮವನ್ನು ಸುಧಾರ್ಥಿಗೆ ಕೆ. ಅನಂತಸುಬ್ಬರಾಯರು  ವಿವರಿಸಿದ್ದರು . ಅದೇ ಕ್ರಮವನ್ನನುಸರಿ, ಆ ಅಂಕಚಕ್ರವನ್ನು ಅಕ್ಷರಕ್ಕೆ ಪರಿವರ್ತಿಸಿ, ಮೂಲಸಾಹಿತ್ಯವನ್ನು ಪಡೆಯಲು ಪ್ರಯತ್ನಿಸಿದಾಗ, ಅದರಲ್ಲಿ ಕೆಲವಾರು ನ್ಯೂನತೆಗಳು ಕಂಡುಬಂದುದನ್ನು ದಾಖಲಿಸಲಾಯಿತು.  ಆದರೂ, ಸಿರಿಭೂವಲಯಸಾರವನ್ನು ನಿರೂಪಿಸುವಾಗ ಸುಧಾರ್ಥಿಯೂ ಇಂಥಮಾಹಿತಿಗಳಿಗೆ ಹೆಚ್ಚಿನ ಮಹತ್ವ ನೀಡುವುದು ಅನಿವಾರ್ಯವಾಗಿತ್ತು.
 ೧೯೫೩ರ ಅಕ್ಷರ ಅವತರಣಿಕೆಯಲ್ಲಿ ಅಂತರ್ಗತವಾಗಿರುವ ಅಂತರ್ಸಾಹಿತ್ಯವನ್ನು ಮೊದಲಿಗೆ ಪ್ರತ್ಯೇಕಿಸಿ ಪರಿಚಯಿಸುವ ಉತ್ಸಾಹದಲ್ಲಿ  ಅಂಕಭೂವಲಯ ಹಾಗೂ ಅಕ್ಷರಭೂವಲಯದ ವಿಚಾರವಾಗಿ ಸುಧಾರ್ಥಿಯು ಹೆಚ್ಚಿನ ಗಮನಹರಿಸಿರಲಿಲ್ಲ. ಆದರೆ ಆಯ್ದಸಾಂಗತ್ಯಪದ್ಯಗಳ  ಸಂಗ್ರಹವನ್ನು ರೂಪಿಸುವೇಳೆಗೆ ಮೂಲಸಾಹಿತ್ಯದಲ್ಲೇ ಈ ಅಕ್ಷರಸಾಹಿತ್ಯದ ವಿಚಾರವಾಗಿ ಕಾಣಬರುವ ಸುಳುಹುಗಳು ಗಮನಸೆಳೆದು.  ಸಾಂಗತ್ಯ ಪದ್ಯಗಳ ಸಂಗ್ರಹದಲ್ಲೇ ಇದಕ್ಕೆ ಸಂಬಂಧಿಸಿದ ಮಾಹಿತಿಯ ಅಂಕುರಾರ್ಪಣವಾಯಿತು.
ಮುಂದೆ ಈ ವಿಚಾರವಾಗಿ ಹೆಚ್ಚಿನ ಮಹಿತಿಗಳನ್ನು ಸಂಗ್ರಹಿಸಿ, ೧೯೫೩ರ ಅಕ್ಷರ ಭೂವಲಯದ ಸಿದ್ಧತೆಗೆ ಪ್ರಾಚೀನ ತಾಳೆಯೋಲೆಯ ಅಕ್ಷರಭೂವಲಯವು ಆಧಾರವೇ ವಿನಃ ಅಂಕಭೂವಲಯವನ್ನು ಅಕ್ಷರಕ್ಕೆ ಬದಲಿಸಿ, ಅದರಿಂದ ಶ್ರೇಢಿಬಂಧದಲ್ಲಿ ಸಾಗಿ ೧೯೫೩ರ ಅಕ್ಷಭೂವಲಯವನ್ನು ರೂಪಿಸಿರುವ  ಮಾಹಿತಿಯು ತಪ್ಪೆಂದು ಸೂಕ್ತವಾಗಿ ಸಮರ್ಥಿಸಲಾಯಿತು.  ಎಂಬುದನ್ನು ಸರಳಪರಿಚಯಕಾರನು ನಮೂದಿಸಿರುವುದಿದೆ.
ಕಂಪ್ಯೂಟರನ್ನು ಬಳಸಿಕೊಂಡರೆ, ಸಿರಿಭೂವಲಯದ ಸಂಶೋಧನೆಯು ಕ್ಷಣಮಾತ್ರದಲ್ಲಿ ನಡೆಯುತ್ತದೆ  ಎಂಬುದು ಈಚಿನದಿನಗಳಲ್ಲಿ ಕೆಲವರ ಉಡಾಫೆಯ ವಾದವಾಗಿತ್ತು! ಕಂಪ್ಯೂಟರಿನ ಬಳಕೆಯಿಂದ ಎಷ್ಟು ಚಕ್ರಗಳನ್ನಾದರೂ ಕ್ಷಣಮಾತ್ರದಲ್ಲಿ ಅಕ್ಷರಕ್ಕೆ ಬದಲಿಸಬಹುದು ನಿಜ. ಅದನ್ನು ಹಲವಾರು ಕಿ. ಮೀ. ಗಳಷ್ಟು ದೂರದ ಅಕ್ಷರಗಳ ಸರಪಣಿಯನ್ನಾಗಿಯೂ ಅದು ಪರಿವರ್ತಿಸಿಕೊಡುತ್ತದೆ ಸರಿ.
ಆದರೆ, ಅವುಗಳಲ್ಲಿರುವ ಸ್ವರಾಕ್ಷರಗಳು ಹಾಗೂ ವ್ಯಂಜನಾಕ್ಷರಗಳನ್ನು ಜೋಡಿಸುವ ಕ್ರಮವನ್ನು ಹೇಳಿಕೊಡುವವರುಯಾರು!? ಅಲ್ಲದೇ ಸಾಂಗತ್ಯ ಪದ್ಯಗಳ ನಾಲ್ಕು ಪಾದಗಳನ್ನು ಸೂಕ್ತವಾಗಿ ವಿಂಗಡಿಸುವುದು ಹೇಗೆ!? ಪಾದಪದ್ಯಗಳನ್ನು ಯಾವ ಆಧಾರದಲ್ಲಿ ಬೇರ್ಪಡಿಸುತ್ತೀರಿ!?
 ಈಗ ಮುದ್ರಿತವಾಗಿರುವ ಶಬ್ದಗಣದ ಸಾಂಗತ್ಯ ಪದ್ಯಗಳ ರೂಪಕ್ಕೆ ಸಿದ್ಧಪಡಿಸಬಲ್ಲ ’ಸಾಫ್ಟ್ ವೇರನ್ನು’ ಬರೆಯುವ ಮೇಧಾವಿ ಯಾರಿದ್ದಾರೆ!! ಯಾರಿಗಾದರೂ ಈ ಸಾಂಗತ್ಯಪದ್ಯಗಳ ಸ್ವರೂಪ ಅರ್ಥವಾಗಿದ್ದರೆ ತಾನೇ ಅದನ್ನು ರೂಪಿಸಲು ಕಂಪ್ಯೂಟರನ್ನು ಬಳಸುವ ಪ್ರಸಂಗ ಬರುವುದು!!
ಸಾಂಗತ್ಯ ಛಂದಸ್ಸಿನಲ್ಲಿ  ಅಕ್ಷರಗಣ, ಮಾತ್ರಾಗಣದ ಲೆಕ್ಕಾಚಾರವಿರುತ್ತದೆ. ಅದರೆ ಕುಮುದೇಂದುಮುನಿಯು ಬಳಸಿರುವ ’ಶಬ್ದಗಳದ ಸಾಂಗತ್ಯದಲ್ಲಿ’ ಯಾವ ಲೆಕ್ಕಾಚಾರವೂ ನಿಲ್ಲುವುದಿಲ್ಲ!!  ಎಲ್ಲೆಡೆಯೂ ೪ ಪಾದಗಳಿರುವುದು ನಿಶ್ಚಯ. ಆದರೆ ಪ್ರತಿಯೊಂದು ಪಾದದ ಅಕ್ಷರಗಳ ಸಂಖ್ಯೆಯೂ ಅನಿಯಮಿತವಾಗಿದೆ! ಕೇವಲ ೮-೧೦  ಅಕ್ಷರಗಳಿಂದ ನೂರಕ್ಕೂ ಹೆಚ್ಚಿನ ಅಕ್ಷರಗಳು ಕೆಲವು ಸಾಂಗತ್ಯಗಳಲ್ಲಿರುತ್ತವೆ! ಹಾಗಿರುವಲ್ಲಿ ಯಾವ ಲೆಕ್ಕಾಚಾರದಲ್ಲಿ ಸಾಫ್ಟ್ ವೇರ್ ನಲ್ಲಿ ಸೂಕ್ತವಾದ ನಿರ್ದೇಶನ ನೀಡಲು ಸಾಧ್ಯವಿದೆ!!?
ಈ ಕಾರಣದಿಂದಾಗಿ ಪರಿಚಯಕಾರನು ಯಾವಕಾರಣಕ್ಕೂ ಕಂಪ್ಯೂಟರನ್ನು ಬಳಸಿಕೊಂಡು ಅಕ್ಷರಗಳಸರಪಣಿಯನ್ನು ಸಾಂಗತ್ಯಪದ್ಯಗಳರೂಪಕ್ಕೆ ಸಿದ್ಧಪಡಿಸಲು ಸಾಧ್ಯವೇ ಇಲ್ಲವೆಂದು ಪ್ರಾರಂಭದಿಂದಲೂ ವಾದಿಸಿದ್ದಾಗಿದೆ.
  ಕಂಪ್ಯೂಟರ್ ವಿಜ್ಞಾನದಲ್ಲಿ ಹೆಚ್ಚಿನ ಜ್ಞಾನ ಪಡೆದ ವಿದ್ಯಾವಂತರು ಇದನ್ನು ಬಲವಾಗಿ ಖಂಡಿಸುತ್ತಿದ್ದರು. ಈಗ ಅವರಿಗೂ ಈ ಸಮಸ್ಯೆಯ ಮೂಲವು ’ಕೊರೋನ’ ವೈರಸ್ಸಿನಂತೆ ಕಣ್ಣಿಗೆ ಕಾಣಿಸದ ಸತ್ಯದರ್ಶನಮಾಡಿಸುತ್ತಿದೆ!!  ಈ ಕಾರಣದಿಂದಾಗಿ. ಅಂಕಭೂವಲಯದ ವಿಚಾರವನ್ನು ಬದಿಗಿರಿಸಿ, ಹಲವರು ಯಾರಿಗೂ ಸಿಗದಂತೆ ರಹಸ್ಯವಾಗಿ ಮುಚ್ಚಿರಿಸಿರುವ ’ಅಕ್ಷರಭೂವಲಯದ’  ನಕಲು ಪ್ರತಿಯನ್ನಾದರೂ ಆಸಕ್ತರಿಗೆ ದೊರಕಿಸಿದರೆ, ಮುಂದಿನ ವಿಶ್ಲೇಷಣೆಗೆ ಅನುಕೂಲವಾದೀತು. ಆದರೆ ಈ ಕಾರ್ಯಕ್ಕೆ ಸಂಬಂಧಿಸಿದಂತೆ ನಮ್ಮ ಕನ್ನಡಿಗರಲ್ಲಿ ಈರೀತಿಯ ಉದಾರತೆಯನ್ನು ಈ ಪರಿಚಯಕಾರನು ಕಳೆದೊಂದು ದಶಕದಿಂದಲೂ ಕಾಣಲು ಸಾಧ್ಯವಾಗಿಲ್ಲ!! ಮುಂದೆಯೂ ಸಾಧ್ಯವಾಗಲಾರದು!!!
ಈಗ,  ೧೯೫೩ರ ಅಕ್ಷರಭೂವಲಯ ಹಾಗೂ ಪುಸ್ತಕಶಕ್ತಿಪ್ರಕಾಶನದ ವಿದ್ವಾಂಸಮಂಡಳಿಯು ರೂಪಿಸಿರುವ ನೂತನ ಅಕ್ಷರ ಸಂಸ್ಕರಣದಲ್ಲಿ ಕಾಣಬರುವ ಹಲವಾರು ನ್ಯೂನತೆಗಳನ್ನೂ  ಪಟ್ಟಮಾಡಿ ವಿವರಿಸಲಾಗಿದೆ. ಸಿರಿಭೂವಲಯದ್ದೇ ಆದ ಒಂದು ವಿಶಿಷ್ಟ ಲಿಪಿಕ್ರಮದಲ್ಲಿ ಉಗಮವಾಗುವ ಸಾಂಗತ್ಯ ಪದ್ಯಗಳನ್ನು ಅವು ಮೂಲದಲ್ಲಿ ದೊರೆಯುವಕ್ರಮದಲ್ಲೇ ಓದುವುದು ಬಹಳ ಶ್ರಮದ ಕಾರ್ಯ! ಈ ಕಾರಣದಿಂದಾಗಿಯೇ ಈ ಕಾವ್ಯವನ್ನು ಕನ್ನಡಸಾಹಿತ್ಯ ಕ್ಷೇತ್ರದ ದಿಗ್ಗಜಗಳು ’ಕಬ್ಬಿಣದಕಡಲೆ’ ಎಂಬ ಹಣೆಪಟ್ಟಿ ಕಟ್ಟಿ ಮೂಲೆಗೆಸೇರಿಸಿದ್ದರು!
೨೦೧೧ರಲ್ಲಿ ರೂಪಿತವಾಗಿ ಪ್ರಕಟಗೊಂಡ ಈ ಆಯ್ದ ಸಾಂಗತ್ಯಪದ್ಯಗಳ ಸಂಗ್ರಹವು ಈ ಕೊರತೆಯನ್ನು ಪರಿಹರಿಸಿ, ಇಂದಿನ ಸುಲಭವಾಗಿ ಓದುವ ಒತ್ತಕ್ಷರ ಕ್ರಮದಲ್ಲೇ  ಸಾಂಗತ್ಯ ಪದ್ಯಗಳನ್ನು ರೂಪಿಸಿರುವುದು ಒಂದು ಉತ್ತಮ ಸೌಲಭ್ಯವಾಗಿದೆ. ಈ ಕಾರಣದಿಂದಾಗಿ ಕನ್ನಡಭಾಷೆಬಲ್ಲ ಯಾರುಬೇಕಾದರೂ ಈ ಸಾಂಗತ್ಯ ಪದ್ಯಗಳನ್ನು ಸುಲಭವಾಗಿ ಓದಿ ತಿಳಿಯಬಹುದಾಗಿದೆ.
ಈ ಅಮೂಲ್ಯವಾದ ಪರಿಚಯಕೃತಿಯನ್ನು  ಸೂಕ್ತರಾದವರಿಗೇ ’ಅರ್ಪಣೆ’ ಮಾಡಬೇಕೆಂಬ ಉದ್ದೇಶದಿಂದ ಇದನ್ನು ”ಸಿರಿಭೂವಲಯವು ರಚನೆಯಾದಂದಿನಿಂದ  ಇಂದಿನವರೆವಿಗೂ  ಇದರ ಸರಳ ಪರಿಚಯನೀಡದೇ  ಕಾವ್ಯವನ್ನು ಕತ್ತಲೆಯ ಕೋಣೆಯೊಳಗಿರಿಸಿ ಸಾಮಾನ್ಯ ಜನರಿಗೆ  ಇದೊಂದು ಕಬ್ಬಿಣದ ಕಡಲೆ  ಎನಿಸುವಲ್ಲಿ ಯಾಶಸ್ಸು ಸಾಧಿಸಿರುವ ಕನ್ನಡಸಾಹಿತ್ಯಕ್ಷೇತ್ರದ  ದಿಗ್ಗಜಗಳೆಲ್ಲರಿಗೂ ಕೃತಜ್ಞತಾಪೂರ್ವಕವಾಗಿ  ಅರ್ಪಣೆ” ಎಂದು ಸೂಚಿಸಿರುವುದು ಮೇಲುನೋಟಕ್ಕೆ ಗಮನಸೆಳೆಯದಿದ್ದರೂ, ಈ ಕಾವ್ಯವನ್ನು   ಸಕಾರಣವಾಗಿಯೋ ಅಕಾರಣವಾಗಿಯೋ ಉಪೇಕ್ಷಿಸಿದವರಿಗೆ ಗಾಯದಮೇಲೆ ಬರೆ ಹಾಕಿದಂತಾಗಿರುವುದು ಖಚಿತ.
 ಕನ್ನಡ ಲಿಪಿಯನ್ನು ಓದಬಲ್ಲ ಯಾರುಬೇಕಾದರೂ ಕುಮುದೇಂದುವಿನ ಸಿರಿಭೂವಲಯವನ್ನು ಈ ಸಂಗ್ರಹದಲ್ಲಿ ಸುಲಭವಾಗಿ ಓದಿ  ತಿಳಿಯುವ ಸೌಲಭ್ಯ ದೊರೆತಿರುವುದು ಈ ಕೃತಿಯ ಪ್ರಮುಖವಾದ ಸಂಗತಿಯಾಗಿದೆ.
ಸಿರಿಭೂವಲಯಸಾರವನ್ನು ಕುರಿತು ಓದುಗರು ವ್ಯಕ್ತಪಡಿಸಿರುವ  ವಿಭಿನ್ನ ರೀತಿಯ ಅನಿಸಿಕೆಗಳೂ ಇಲ್ಲಿ ದಾಖಲಾಗಿರುವುದು  ವಿಶೇಷ ಸಂಗತಿಯಾಗಿದೆ.  ಇವುಗಳಪೈಕಿ ಹಿರಿಯವಿದ್ವಾಂಸರಾದ ಜಿ. ಬ್ರಹ್ಮಪ್ಪನವರ ಅನಿಸಿಕೆ ಒಂದು ಪ್ರಮುಖವಾದುದು. ಸಿರಿಭೂವಲಯಸಾರದಲ್ಲಿ ಸುಧಾರ್ಥಿಯು ಬಾಹುಬಲಿಯನ್ನು ಎರಡನೇ ತೀರ್ಥಂಕರ  ಅಜಿತ ಎಂದು ತಪ್ಪಾಗಿ  ನಮೂದಿಸಿರುವುದಕ್ಕೆ ಈ ವಿದ್ವಾಂಸರು ತಿದ್ದುಪಡಿ ಸೂಚಿಸಿ, ವಿವರಣೆ ನೀಡಿದ್ದಾರೆ.  ಅದನ್ನು ಇಲ್ಲಿ ಸೂಚಿಸಲಾಗಿದೆ. ಇದೊಂದು ತಪ್ಪನ್ನೇ ಕೆಲವರು ವಿದ್ವಾಂಸರು ಅಕ್ಷಮ್ಯ ಅಪರಾಧವೆಂಬಂತೆ ಅಪಪ್ರಚಾರಮಾಡಿರುವುದಿದೆ!   (ಇನ್ನೂಇದೆ)
                                                                -ಜಮದಗ್ನಿಸುತ

Tuesday 26 May 2020

ಸಿರಿಭೂವಲಯದ ಒಂದು ಮಿಂಚುನೋಟ

**ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ   
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ**** ಭಾಗ.೪

೩)**ಸಿರಿಭೂವಲಯದ ಒಂದು ಮಿಂಚುನೋಟ**       
                                                                                           
   ’ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯವು  ಕನ್ನಡದ ಒಂದು ಅಂಕಕಾವ್ಯ.  ಪ್ರಪಂಚದ ಹತ್ತನೇ ಆಚ್ಚರಿ  ಎನಿಸಿರುವ ಈ ಕಾವ್ಯವು ಜಗತ್ತಿನ ಮೊಟ್ಟಮದಲನೆಯ ವಿಶ್ವಕೋಶ. ಜ್ಞಾನಕ್ಕೆ ಸಂಬಂಧಿಸಿದಂತೆ  ಈಕಾವ್ಯದಲ್ಲಿ ಅಡಕವಾಗದೇ ಇರುವ ವಿಚಾರವು ಯಾವುದೂ ಇಲ್ಲ ಎಂಬುದು  ಕವಿಯ ಘೋಷಣೆ! ಕಾವ್ಯವು ರಚನೆಯಾದ ಕಾಲದಲ್ಲಿ (ಕ್ರಿ.ಶ. ೮೦೦) ಭಾರತದಲ್ಲಿ ಪ್ರಚಲಿತವಿದ್ದ ಸಮಗ್ರ ಸಾಹಿತ್ಯ ಕೃತಿಗಳ  ಸಾರವನ್ನೂ ನೂರುಸಾವಿರಲಕ್ಷಕೋಟಿ ಶ್ಲೋಕಗಳ ವ್ಯಾಪ್ತಿಯಲ್ಲಿ, ಕನ್ನಡ ಭಾಷೆಯಲ್ಲಿ, ಕನ್ನಡದ ಅಂಕಿಗಳ ರೂಪದಲ್ಲಿ  ಈ ಕಾವ್ಯದಲ್ಲಿ ಕಟ್ಟಿರಿಸಲಾಗಿದೆ!!
ಸಾವಿರದಿನ್ನೂರು ವರ್ಷಗಳಷ್ಟು ಹಿಂದೆ ಆತ್ಮಜ್ಞಾನ; ಗಣಕಯಂತ್ರಕ್ರಮ; ಗಣಿತ; ವಸ್ತುವಿಜ್ಞಾನ; ಸಾಹಿತ್ಯ; ಕಲೆ ಇತ್ಯಾದಿ ವಿಚಾರಗಳಲ್ಲಿ ಭಾರತೀಯರು ಅದರಲ್ಲೂ ಕನ್ನಡಿಗರು ಹೊಂದಿದ್ದ ಮಹೋನ್ನತಿಯು  ಯಾವಮಟ್ಟದ್ದೆಂಬುದನ್ನು ಖಚಿತವಾಗಿ ತಿಳಿಯಲು  ಇದೊಂದು ಜೀವಂತಸಾಕ್ಷಿಯಾಗಿ  ಉಳಿದಿದೆ.  ಇದನ್ನು ಉಳಿಸಿಕೊಟ್ಟ  ಕುಮುದೇಂದುಮುನಿಗೆ  ಭಾರತೀಯರು; ವಿಶೇಷವಾಗಿ ಕನ್ನಡಿಗರು  ಎಷ್ಟು ಕೃತಜ್ಞತೆಯನ್ನರ್ಪಿಸಿದರೂ  ಸಾಲದೆನಿಸುತ್ತದೆ.
 ಇಂಥ ಮಹತ್ತರವಾದ ಪ್ರಾಚೀನಕಾವ್ಯವನ್ನು ಇಂದಿನ ಓದುಗರಿಗೆ ಮನವರಿಕೆಯಾಗುವಂತೆ ಸರಳವಾಗಿ ಪರಿಚಯಿಸುವುದು ನಿಜಕ್ಕೂ ಬಹಳ ಕಠಿಣವಾದ ಕಾರ್ಯ.  ಇಂಥ ದುಸ್ಸಾಹಸಕ್ಕೆ ಕೈ ಹಾಕಿದ ಹಾಸನದ ಸುಧಾರ್ಥಿಯು  ’ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ  ಒಂದು ಮಿಂಚುನೋಟ’ ಎಂಬ ಕಿರುಹೊತ್ತಿಗೆಯನ್ನು  ರೂಪಿಸಿದ್ದು ಅದನ್ನೂ ಶ್ರೀಮತಿ ಗಿರಿಜಾ ಅವರೇ ೨೦೧೨ರಲ್ಲಿ ಪ್ರಕಟಿಸಿದ್ದಾರೆ.  ಈ ಕಿರುಹೊತ್ತಿಗೆಯು ಡೆಮಿ ೧/೪ ಅಳತೆಯ   ೯೫ ಪುಟಗಳ ವ್ಯಾಪ್ತಿಯಲ್ಲಿದೆ.
ಓದುಗರೊಂದಿಗೆ, ಮೊದಲಮಾತು,  ಪೀಠಿಕೆ; ಸಿರಿಭೂವಲಯದ ಮಿಂಚುನೋಟ,  ಸಿರಿಭೂವಲಯಕ್ಕೆ ಸಂಬಂಧಿಸಿದ ಕೆಲವು ಸತ್ಯ-ಮಿಥ್ಯಗಳು,  ಸಿರಿಭೂವಲಯಸಾರ ಕುರಿತು ಒಂದೆರಡು ಅನಿಸಿಕೆಗಳು, ಕೆಲವೊಂದು ದೂ(ರು)ರವಾಣಿಯ ಅನಿಸಿಕೆಗಳು,  ಸಿರಿಭೂವಲಯದ ಕೆಲವು ಸಾಂಗತ್ಯಪದ್ಯಗಳು ಎಂಬುದಾಗಿ ಬರಹವನ್ನು ವಿಂಗಡಿಸಲಾಗಿದೆ.  ಮೂಲಕೃತಿಗೆ ಸಂಬಂಧಿಸಿದ ಕೆಲವೊಂದು ವಿಚಾರಗಳನ್ನು ’ಮಂಜೂಷ ಮಾಹಿತಿಗಳ’ ರೂಪದಲ್ಲಿ ಕೊಟ್ಟಿರುವುದು ಹೆಚ್ಚು ಗಮನಸೆಳೆಯುತ್ತವೆ ಹಾಗೂ ಉಪಯುಕ್ತವಾದುವಾಗಿವೆ.
ಪೀಠಿಕೆಯಲ್ಲಿ ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಸಂಬಂಧಿಸಿದ ಸಂಕ್ಷಿಪ್ತವಿವರಣೆ, ಗಾಯತ್ರೀಮಂತ್ರದ ವಿಚಾರ,  ಜೈನ ಸಂಪ್ರದಾಯದ ಉಗಮ, ಸ್ಯಾದ್ವಾದದ ಸ್ವರೂಪ, ಈ ಸಂಪ್ರದಾಯದ ಮೂಲಪುರುಷ ಆಧಿತೀರ್ಥಂಕರ ಋಷಭದೇವನು ಉಪದೇಶಿಸಿದ  ’ದಿವ್ಯಧ್ವನಿ’ಯು ೨೪ನೇ ತೀರ್ಥಂಕ ಮಹಾವೀರನ ವರೆವಿಗೂ ಹರಿದುಬಂದಿರುವ ವಿಚಾರ ಇತ್ಯಾದಿಗಳಿಗೆ   ಸಂಬಂಧಿಸಿದಂತೆ ವಿವರಣೆಯನ್ನು ಇಲ್ಲಿ ನೀಡಲಾಗಿದೆ.  ಇತ್ತೀಚಿನ ಕೆಲವರು ಮಹಾವೀರನೇ ಜೈನ ಸಂಪ್ರದಾಯದ ಮೂಲಪುಋಷ ಎಂದು  ಸೂಚಿಸುವುದಿದೆ. ಆದರೆ ಇದು ಸರಿಯಲ್ಲ. ಕೋಟ್ಯಾಂತರ ವರ್ಷಗಳಷ್ಟು ಪ್ರಾಚೀನನಾದ ಋಷಭದೇವನಿಂದ ಪ್ರಾರಂಭವಾಗಿ ಮಹಾವೀರನವರೆಗೆ ೨೪ ಜನ ತೀರ್ಥಂಕರರು ಜೈನಸಂಪ್ರದಾಯದ ಧರ್ಮೋಪದೇಶ ಮಾಡಿರುವರೆಂಬುದಕ್ಕೆ ಪುರಾಣಕೃತಿಗಳ ಆಧಾರ ಉಳಿದುಬಂದಿದೆ. ಇದನ್ನು ಅಲ್ಲಗಳೆಯಲಾಗದು.
ಆದಿನಾಥ ಋಷಭದೇವನಿಂದ ರೂಪಿಸಲ್ಪಟ್ಟ  ’ಧರ್ಮಚಕ್ರ’ ದಲ್ಲಿ ಒಂದು ಕೋಟಿ ಹತ್ತುಲಕ್ಷದ ಮುವ್ವತ್ತುಸವಿರ ಅರೆಗಳಿರುವ ಮಾಹಿತಿ, ೧ ರಿಂದ  ೬೪ ಅಂಕಿಗಳಿಗೆ ಅನ್ವಯವಾಗುವ ೬೪ ಅಕ್ಷರಗಳ ಕನ್ನಡ ವರ್ಣಮಾಲೆ. ಈ ಅಕ್ಷರಗಳ ಸಂಯೋಗ ಭಂಗದಿಂದ ಜಗತ್ತಿನ ಸಕಲ ಶಬ್ದಾಗಮವೂ ಹುಟ್ಟಿಬರುವ ಅಚ್ಚರಿಯಮಾಹಿತಿಯನ್ನು ಕವಿ ಕುಮುದೇಂದುಮುನಿಯು ನಿರೂಪಿಸಿರುವ ವಿಚಾರ ಮುಂತಾದುವುಗಳು ಈ ಕಿರುಹೊತ್ತಿಗೆಯಲ್ಲಿ ಅಡಕವಾಗಿವೆ.
ಸಿರಿಭೂವಲಯದ ಮಿಂಚುನೋಟದಲ್ಲಿ  ಈ ಮಹಾನ್ ಕಾವ್ಯದ  ಪ್ರಾಕ್ಚರಿತ್ರೆ ಹಾಗೂ ಪ್ರಾಚೀನ ಮತ್ತು ಆಧುನಿಕ ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿಗಳ ಗೋಜಲನ್ನು ಸೂಕ್ತವಾಗಿ ಬಿಡಿಸಿ, ಖಚಿತವಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಸಮರ್ಪಕವಾಗಿ ಸೂಚಿಸಲಾಗಿದೆ.
ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲವಾರು ವಿಚಾರಗಳನ್ನು ಕುರಿತ ಸಂಕ್ಷಿಪ್ತವಿವರಣೆಯೂ  ಇಲ್ಲಿ ದಾಖಲಾಗಿದೆ. ಸಿರಿಭೂವಲಯದಲ್ಲಿ ಅಡಕವಾಗಿರುವ ಮಾಹಿತಿಗಳ ನೆಲೆಯಲ್ಲಿ ನಮ್ಮ ದೇಶ, ಭಾಷೆ, ಸಾಹಿತ್ಯ ಹಾಗೂ ಧರ್ಮಕ್ಕೆ  ಸಂಬಂಧಿಸಿದ ಹಲವಾರು ತಪ್ಪುಗ್ರಹಿಕೆಗಳು, ಬುಡಮೇಲಾಗಿರುವ ಸಂಗತಿಯನ್ನು ಸೂಚಿಸಲಾಗಿದೆ.
ಸಿರಿಭೂವಲಯಕಾವ್ಯವು ಅಂಕರೂಪಕ್ಕೆ ಪರಿರ್ತಿತವಾಗಿರುವ ಕ್ರಮವನ್ನು ಕುರಿತ ಸಂಕ್ಷಿಪ್ತಮಾಹಿತಿಯೂ ಇಲ್ಲಿ ಸೇರಿದೆ.  ಕಾವ್ಯರಚನೆಯ ಕಾಲವನ್ನು ಕುರಿತು ಆಧುನಿಕವಿದ್ವಾಂಸರು ತೆಗೆದಿದ್ದ ತಕರಾರುಗಳಿಗೆ  ಸಮಂಜಸವಾದ ಉತ್ತರಗಳನ್ನು ಸೂಚಿಸಲಾಗಿದೆ.
ಜೈನಸಂಪ್ರದಾಯದ ದ್ವಾದಶಾಂಗಸೂತ್ರಗಳು, ಛಕ್ಖಂಡಾಗಮ,  ಧವಳಗಳು, ಪೂರ್ವೇಕಾವ್ಯ, ಮಂಗಳಪಾಹುಡ, ಭೂತಬಲಿಯ ಭೂವಲಯ,  ಇತ್ಯಾದಿ ವಿಚಾರಗಳ ಪರಸ್ಪರ ಸಂಬಂಧವನ್ನು  ಕುರಿತು ಸೂಚಿಸಲಾಗಿದೆ.
ಮಲ್ಲಿಕಬ್ಬೆ ಎಂಬ ಸಾಧ್ವಿಯು ಪ್ರತಿಲಿಪಿಮಾಡಿಸಿದ ಅಂಕಭೂವಲಯದ ಪ್ರತಿಯ ಮಾಹಿತಿ, ದೊಡ್ಡಬೆಲೆ ಧರಣೇಂದ್ರಪಂಡಿತರಲ್ಲಿ ಅದು ವಂಶಪಾರಂಪರ್ಯವಾಗಿ ಉಳಿದುಬಂದಿದ್ದಮಾಹಿತಿ, ಇವರ ದೂರದ ಸಂಬಂಧಿ ಯಲ್ಲಶಾಸ್ತ್ರಿಯವರಿಗೆ ಈ ಪ್ರತಿಯು ಪ್ರಾಪ್ತವಾದ ಮಾಹಿತಿ,  ಕೆ. ಶ್ರೀಕಂಠಯ್ಯನವರು ಹಾಗೂ ಕೆ. ಅನಂತಸುಬ್ಬರಾಯರು  ಈ ಅಂಕಚಕ್ರಗಳ ಸಂಪರ್ಕಕ್ಕೆ ಬಂದದ್ದು,  ಮಹರ್ಷಿ ದೇವರಾತರ ಆಸಕ್ತಿಯಿಂದಾಗಿ ಡಾ|| ರಾಜೇಂದ್ರಪ್ರಸಾದರು ಈ ಅಚ್ಚರಿಯ ಕಾವ್ಯದ ಕೆಲವು ಭಾಗಗಳನ್ನು ರಾಷ್ಟ್ರೀಯ ಪ್ರಾಚ್ಯಪತ್ರಾಗಾರ  ಇಲಾಖೆಯಲ್ಲಿ ಸಂರಕ್ಷಿಸಿದ್ದು, ಮುಂದೆ ೧೯೫೩ರಲ್ಲಿ ಆಧುನಿಕ ಮುದ್ರಣದಲ್ಲಿ ಸಿರಿಭೂವಲಯದ ಅಕ್ಷರ ಅವತರಣಿಕೆಯು ಪ್ರಕಟವಾದುದು,  ಇದಕ್ಕೆ ಸಂಬಂಧಿಸಿದಂತೆ ಅಂದಿನ ವಿದ್ವಾಂಸರು ಸೃಷ್ಟಿಸಿದವಿವಾದ, ಇಂದಿಗೂ ಕನ್ನಡದ ವಿದ್ವಾಂಸರು ಸಿರಿಭೂವಲಯದ ವಿಚಾರವಾಗಿ ಹೊಂದಿರುವ ತಪ್ಪು ಕಲ್ಪನೆ ಮುಂತಾದ ವಿಚಾರಗಳ ಸರಳ ಪರಿಚಯವು ಇಲ್ಲಿ ದಾಖಲಾಗಿವೆ. ಸಂಶೋಧಕ ಕರ್ಲಮಂಗಲಂ ಶ್ರೀಕಂಠಯ್ಯನವರು ಸಿರಿಭೂವಲಯದ ಸಂಶೋಧನೆಯಹಾದಿಯಲ್ಲಿ  ಪ್ರಕಟಿಸಿರುವ  ಸೂಕ್ಷ್ಮ ಪ್ರತಿಭೆಯನ್ನೂ ಇಲ್ಲಿ ದಾಖಲಿಸಲಾಗಿದೆ.
೧೯೫೩ರ ಅಕ್ಷರ ಅವತರಣಿಕೆಯು  ಅಂಕಭೂವಲಯದಿಂದ ರೂಪುಗೊಂಡದ್ದಲ್ಲ ಎಂಬ ಮಾಹಿತಿಯನ್ನು ಕುರಿತು ಈ ಕಿರುಹೊತ್ತಿಗೆಯಲ್ಲಿ ಖಚಿತವಾಗಿ ಸೂಚಿಸಲಾಗಿದೆ. ೧೯೫೩ರರ ಅಕ್ಷರಭೂವಲಯಕ್ಕೆ ಸಂಬಂಧಿಸಿದ ಸತ್ಯಸಂಗತಿಯನ್ನು ಕೆ. ಶ್ರೀಕಂಠಯ್ಯನವರು ಗುಪ್ತವಾಗಿರಿಸಿರುವುದು  ಯಾವಕಾರಣದಿಂದಲೇ ಆಗಿರಲೀ,  ಇದೊಂದು  ’ರಹಸ್ಯಕಾರ್ಯಾಚರಣೆಯ ಸಂಶೋಧನೆ’  ಎಂಬ ಕಲಂಕಕ್ಕೆ ಪಾತ್ರವಾದದ್ದಂತೂ ತಪ್ಪಲಿಲ್ಲ’  ಎಂದು ನಿಷ್ಪಕ್ಷಪಾತವಾಗಿ ಸೂಚಿಸಲಾಗಿದೆ.
ಅಕ್ಷರ ಭೂವಲಯದ ಪ್ರತಿಗಳು ಬೇರೆಡೆಯಲ್ಲಿ ದೊರೆಯುವುದೆಂಬ ವಿಚಾರವಾಗಿ ಇಲ್ಲದ  ಅಸಕ್ತಿ ಹುಟ್ಟಿಸಿ, ಎಲ್ಲೆಲ್ಲಿಗೂ ನಿರುಪಯುಕ್ತವಾಗಿ ಅಲೆದಾಡುವಂತೆಮಾಡಿದ ಕೆಲವಾರು ಗಣ್ಯರ ವಿಚಾರವಾಗಿಯೂ ಈ ಕಿರುಹೊತ್ತಿಗೆಯಲ್ಲಿ ಮಹಿತಿಯು ಅಡಕವಾಗಿದೆ!  ಸಿರಿಭೂವಲಯದ ವಿಚಾರವಾಗಿ ಕನ್ನಡಿಗರ ಸರ್ಕಾರವು ಪ್ರಕಟಿಸಿರುವ ನಿರ್ಲಕ್ಷ್ಯದ ಮಾಹಿತಿಯೂ ಇಲ್ಲಿದೆ! ಕೆಲವು ವಿದ್ವಾಂಸರು ತಮಗೆ ಅರ್ಥವಾಗದ ಈ ಮಹಾಕಾವ್ಯದಲ್ಲಿ ’ಏನೂ ಇಲ್ಲ’   (ಸಿರಿಭೂವಲಯದಲ್ಲಿ ಏನಿದೆ ಮಣ್ಣು!?) ಎಂದು ನೀಡಿರುವ ಹೋಣೆಗೇಡಿ ಹೇಳಿಕೆಗಳ ಮಾಹಿತಿಯೂ ಇಲ್ಲಿ ದಾಖಲಾಗಿವೆ.
ಸಿರಿಭೂವಲಸಾರದಲ್ಲಿ ವಿಸ್ತಾರವಾಗಿ ಚರ್ಚಿಸಿರುವ  ಪ್ರಮುಖ ವಿಚಾರಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಸೂಚಿಸಲಾಗಿದೆ.  ಸಿರಿಭೂವಲಯವನ್ನು ಕುರಿತ ಸಮರ್ಪಕವಾದ ಸರಳ ಪರಿಚಯಕೃತಿಯು ಪ್ರಕಟವಾಗಿ ವರ್ಷಗಳು ಉರುಳಿದರೂ ಕನ್ನಡವಿದ್ವಾಂಸರು ಹಾಗೂ ಕರ್ನಾಟಕದ ಸರ್ಕಾರವು ಈ ಪ್ರಾಚೀನ ಕನ್ನಡ ಕಾವ್ಯದ ವಿಚಾರದಲ್ಲಿ ಮೌನವಾಗಿರುವುದನ್ನು ಕುರಿತು ಇಲ್ಲಿ ವಿವರಿಸಲಾಗಿದೆ.
ಸಿರಿಭೂವಲಯವನ್ನು ಕುರಿತ ಸರಳ ಪರಿಚಯಕೃತಿಗಳ ವಿಚಾರವಾಗಿ ಆಸಕ್ತಿವಹಿಸಿದವರನ್ನು ಕುರಿತೂ ಇಲ್ಲಿ ದಾಖಲಿಸಲಾಗಿದೆ.
ಜೈನಯತಿಗಳಲ್ಲಿ ಪ್ರಚಲಿತವಿದ್ದ ’ಸಹಸ್ರಾವಧಾನ’ ಕುರಿತ ಸರಳ ವಿವರಣೆಯು ಅಚ್ಚರಿಯ ಸಂಗತಿಯಾಗಿದೆ. ಕೋಷ್ಟಬುದ್ಧಿ, ಬೀಜಬುದ್ಧಿ, ಪದಾನುಸಾರಿಣೀಬುದ್ಧಿ, ಸಂಛಿನ್ನಶ್ರೋತೃಬುದ್ಧಿ ಎಂಬ ನಾಲುರೀತಿಯ ವಿಶೇಷ ಬುದ್ಧಿಶಕ್ತಿಯನ್ನು ಕುರಿತ ವಿವರವು ನಮ್ಮ ಪ್ರಾಚೀನರ ಬುದ್ಧಿಶಕ್ತಿಯನ್ನು ಕುರಿತ ಅಚ್ಚರಿಯ ಮಾಹಿತಿಯಾಗಿದೆ.
 ಅಂಕಿಗಳು ಹಾಗೂ ಅಕ್ಷರಗಳ ನಡುವೆ ಅಡಗಿರುವ ಅಚ್ಚರಿಯ ಸಂಬಂಧ, ಅಂಕಿಗಳ ರೂಪದಲ್ಲಿ ಅಗಾಧವಾದ ಸಾಹಿತ್ಯ ರಾಶಿಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳುವ ಮೇಧಾವಿತನ, ಅಪಾರವಾದ ವ್ಯಾಪ್ತಿಹೊಂದಿದ ಅಂಕಿಗಳ ಸಮೂಹವನ್ನು ಗಣಿತ ಶಾಸ್ತ್ರದ ಸಕಲ ಪರ್ಯಾಯಗಳನ್ನೂ ತಿಳಿಯುವ ಅತ್ಯಂತ ಕ್ಲಿಷ್ಟವಾದ  ವಿಚಾರಗಳು ಈ ನಾಲ್ಕುಕ್ರಮದ ಬುದ್ಧಿಶಕ್ತಿಯಲ್ಲಿ ಅಡಕವಾಗಿರುವುದನ್ನ ಸೂಕ್ಷ್ಮವಾಗಿ ಸೂಚಿಸಲಾಗಿದೆ.
ಸರಳವಾದ ಕನ್ನಡ ವಿವರಣೆಗಳೊಂದಿಗೆ ಕೆಲವಾರು ಸಾಂಗತ್ಯ ಪದ್ಯಗಳನ್ನೂ ಇಲ್ಲಿ ಅಳವಡಿಸಲಾಗಿದೆ. ಸಿರಿಭೂವಲಯದ ಸರಳಪರಿಚಯಕೃತಿಗಳ ಸಂಕ್ಷಿಪ್ತ ಮಾಹಿತಿಯೊಂದಿಗೆ, ಕನ್ನಡ ಅಂಕಿಗಳ ಉಗಮ ಮತ್ತು ವಿಕಾಸವನ್ನು ಕುರಿತ ಚಿತ್ರ,  ಸಿರಿಭೂವಲಯದ ೬೪ ಅಕ್ಷರಗಳ ವರ್ಣಮಾಲೆ, ಸಿರಿಭೂವಲಯದ ಅಂಕಚಕ್ರದ ಚಿತ್ರ ಹಾಗೂ ಅಕ್ಷರ ಚಕ್ರದ ಚಿತ್ರಗಳನ್ನು ನೀಡಲಾಗಿದೆ. ಕೇವಲ ೯೫ ಪುಟಗಳ ವ್ಯಾಪ್ತಿಯಲ್ಲಿ ಸಿರಿಭೂವಲಯಕಾವ್ಯಕ್ಕೆ ಸಂಬಂಧಿಸಿದ ಅಗಾಧವಾದ ಮಾಹಿತಿಗಳನ್ನು ಕುರಿತು ವಿವರ ಒದಗಿಸಿರುವುದು  ಓದುಗರಿಗೆ ಉಪಯುಕ್ತವಾಗಿರುವುದರಲ್ಲಿ ಸಂಶಯವಿಲ್ಲ. (ಮುಂದುವರೆಯುವುದು) 
                                                                 -ಜಮದಗ್ನಿಸುತ.

ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ

***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ 
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ***
ಭಾಗ:೫. 

”ಸಿರಿಭೂವಲಯದ ಜಯಾಖ್ಯಾನಾಂತರ್ಗತ  ಭಗವದ್ಗೀತಾ” 

 ಇದುವರೆವಿಗೆ ಪ್ರಕಟವಾಗಿರುವ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ಪ್ರಥಮಖಂಡದಲ್ಲಿ ಅಡಕವಾಗಿರುವ ಅಂತರ್ಸಾಹಿತ್ಯಕೃತಿಗಳಲ್ಲಿ ’ಭಗವದ್ಗೀತೆ’ಯು ಹೆಚ್ಚು ಪ್ರಮುಖವಾದುದು.  ವ್ಯಾಸಮಹರ್ಷಿಯ ಜಯಾಖ್ಯಾನಾಂತರ್ಗತವಾದ ಗೀತೆಯ ಭಾಗವಿದೆಂದು ಸಿರಿಭೂವಲಯದ ಕವಿ ಕುಮುಂದೇಂದುಮುನಿಯು ಖಚಿತವಾಗಿ ಸೂಚಿಸಿರುವುದಿದೆ.  ಇದರೊಂದಿಗೆ ’ಇಂದ್ರಕೃತ: ಇಂದ್ರಾಕ್ಷೀಸ್ತೋತ್ರ’  ಹಾಗೂ ನಾಟ್ಯಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಸಂಸ್ಕೃತ ಹಾಡುಗಬ್ಬವು  ಇದುವರೆಗೆ ಈ ಕಾವ್ಯಾಂತರ್ಗತವಾಗಿ ದೊರೆತಿರುವ ವಿಚಾರವಿದೆ. ಇವಲ್ಲದೇ ಇನ್ನೂ ಹಲವರು ಪ್ರಾಚೀನಸಾಹಿತ್ಯದ ಭಾಗಗಳು ಈ ಕಾವ್ಯದಲ್ಲಿ ಅಂತರ್ಸಹಿತ್ಯವಾಗಿ ಉಗಮವಾಗಿರುವುದಿದೆ. ಅವುಗಳನ್ನು ಬಲ್ಲವರು ಪರಿಶೀಲಿಸಿ ಪ್ರತ್ಯೇಕವಾಗಿ ಪ್ರಕಟಿಸಬೇಕಿದೆ.
ಸಿರಿಭೂವಲಯವನ್ನು ಕುರಿತು ಸುಧಾರ್ಥಿಯು ಪ್ರಕಟಿಸತೊಡಗಿದ ಪರಿಚಯಕೃತಿಗಳ ಸರಣಿಯಿಂದ ಕೆಲವು ವಿದ್ವಾಂಸರಿಗೆ  ವಿಪರೀತ ಮುಜುಗರ ಉಂಟಾಗತೊಡಗಿತು! ಈ ಕಾರಣಕ್ಕಾಗಿ ಅವರು ತಮ್ಮ ವ್ಯಾಪ್ತಿಯಲ್ಲಿ ಸಾಧ್ಯವಾದ ಮಟ್ಟಿಗೆ ಈ ಪರಿಚಯಕೃತಿಗಳ ವಿರುದ್ಧ ಉದ್ದೇಶಪೂರ್ವಕವಾದ ಅಪಪ್ರಚಾರಕ್ಕೆ ಪ್ರಾರಂಭಿಸಿದರು.  ತಾವುಗಳು ಯಾರೂ ಕಳೆದ ೬೫ ವರ್ಷಗಳಿಂದ ಕೈಹಾಕಲಾಗದೇ ಉಳಿದಿದ್ದ ಈ ಕಾವ್ಯದ ವಿಚಾರವನ್ನು ಈತ ಇಷ್ಟು ವಿವರವಾಗಿ ಪರಿಚಯಿಸುತ್ತಿದ್ದಾನಲ್ಲ ಎಂಬುದು ಅವರ ವಿರೋಧಕ್ಕೆ ಮೂಲಕರಣವೆಂಬ ಸಂಗತಿ ಈ ಸುಧಾರ್ಥಿಗೆ ತಿಳಿಯದ್ದೇನಲ್ಲ!
’ಸಿರಿಭೂವಲದಲ್ಲಿ ಯಾವುದಾವುದೋ ಪ್ರಾಚೀನ ಸಾಹಿತ್ಯ ಕೃತಿಗಳು ಅಡಕವಾಗಿದೆಯೆಂದು ಇಲ್ಲದ ಪ್ರಚಾರಮಾಡಲಾಗುತ್ತಿದೆ. ಇಷ್ಟು ದಿನವಾದರೂ ಸಿರಿಭೂವಲಯದಲ್ಲಿ ಅಂತರ್ಗತವಾದುದೆಂದು ಒಂದಾದರೂ ಪ್ರಚೀನ ಸಾಹಿತ್ಯವನ್ನು ಇವರು ಜನತೆಯ ಮುಂದಿರಿಸಿಲ್ಲ. ಎಲ್ಲವೂ ಕೇವಲ ಬಾಯಿಮತಿನ ಹೇಳಿಕೆಗಳು ’ಎಂದು ಕೆಲವರು ಲೇವಡಿಮಾಡಿದ್ದೂ ಈ ಸುಧಾರ್ಥಿಯ ಗಮನಕ್ಕೆ ಬಾರದಿರಲಿಲ್ಲ!
ಈ ಕಾರಣದಿಂದಾಗಿಯೇ ಸಿರಿಭೂವಲಯಲ್ಲಿ ಎಲ್ಲೆಲ್ಲೊ ಚದುರಿದಂತೆ ದೊರೆಯುವ ’ಭಗವದ್ಗೀತೆ’ಯ ಪಾಠವನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈಹಾಕಿದಾಗ, ಕೆಲವೊಂದು ಅಚ್ಚರಿಯ ಮಾಹಿತಿಗಳು ಗಮನಸೆಳೆದುವು. ಅವುಗಳನ್ನೆಲ್ಲ ವ್ಯವಸ್ಥಿತವಾಗಿ ಕ್ರೋಢೀಕರಿಸಿ ರೂಪಿಸಿದ ಒಂದು ಅಮೂಲ್ಯವಾದ ಬರಹವೇ ಈ  ”ಸಿರಿಭೂವಲಯದ ಜಯಾಖ್ಯಾನಾಂತರ್ಗತ  ಭಗವದ್ಗೀತಾ”
ಪ್ರಥಮಖಂಡದ ೫೯ ಅಧ್ಯಾಯಗಳಪೈಕಿ ಬೇರೆ ಬೇರೆ ಅಧ್ಯಾಯಗಳಿಗೆ ಸೇರಿದಂತೆ ಮೂರು ಸ್ಥಳಗಳಲ್ಲಿ ಉಗಮವಾಗುವ ಈ ಭಗವದ್ಗೀತೆಯ ವಿವರಗಳನ್ನು ಕುರಿತಂತೆಯೇ ಸುಧಾರ್ಥಿಯು ಈ ಕಿರುಹೊತ್ತಿಗೆಯನ್ನು  ರೂಪಿಸಿದ್ದಾಗಿದೆ.  ಡೆಮಿ ೧/೮ ಆಕಾರದ ಸುಮಾರು ೭೬ ಪುಟಗಳವ್ಯಾಪ್ತಿಯಲ್ಲಿ  ವಿಷಯಕ್ಕೆ ಸಂಬಂಧಿಸಿದ ಸಮಗ್ರಮಾಹಿತಿಗಳ ಪ್ರತಿಪಾದನೆಯೊಂದಿಗೆ ತುಂಬ ಸರಳವಾಗಿ ಈ ಕಿರುಹೊತ್ತಿಗೆಯನ್ನು ನಿರೂಪಿಸಿದ್ದಾಗಿದೆ.  ಇಷ್ಟು ಮಹತ್ವಪೂರ್ಣವಾದ  ಈ ಕಿರುಹೊತ್ತಿಗೆಯು ೨೦೧೨ರಲ್ಲಿ ಪ್ರಕಟವಾಗಿದೆ.  ಈ ಪರಿಚಯಕೃತಿಯನ್ನೂ ಕೂಡ. ಹಾಲುವಾಗಿಲು ಗ್ರಾಮದಲ್ಲಿ ನೆಲೆಸಿರುವ ಶ್ರೀಮತಿ ಗಿರಿಜಾ ಅವರೇ ಪ್ರಕಟಿಸಿದ್ದಾರೆ.
ಓದುಗರೊಂದಿಗೆ, ಸರ್ವಭಾಷಾಮಯೀಭಾಷಾ ಸಿರಿಭೂವಲಯದಲ್ಲಿರುವ ಜಯಾಖ್ಯಾನಾಂತರ್ಗತ ಭಗವದ್ಗೀತಾ,  ಪ್ರತ್ಯೇಕ ಗಣಿತಸಾರಂ, ಟಿಪ್ಪಣಿಗಳು ಎಂದು ಪರಿಚಯಕೃತಿಯನ್ನು ವಿಂಗಡಿಸಿ ವಿಷಯನಿರೂಪಣೆಮಾಡಲಾಗಿದೆ.
ಸಿರಿಭೂವಲಯದಲ್ಲಿ ಬಂದಿರುವ  ಜಯಾಖ್ಯಾನಾಂತರ್ಗತ ಭಗವದ್ಗೀತಾ ಹಾಗೂ ಇಂದಿನ ಮಹಾಭಾರತದ ಭಗವದ್ಗೀತೆ ಇವುಗಳ ನಡುವೆ ಮೇಲುನೋಟಕ್ಕೇ ಕಾಣಬರುವ ಕೆಲವೊಂದು ವಿಶೇಷ ಅಂಶಗಳನ್ನು ಸೂಚಿಸಿ ಒಂದು ಪಟ್ಟಿಯನ್ನು ನೀಡಲಾಗಿದೆ. ಇಲ್ಲಿಕಾಣಬರುವ ಸರಳವಾದ ಮಾಹಿತಿಯು ಎಂಥವರಿಗೂ ಈ ಕಾವ್ಯಾಂತರ್ಗತವಾದ ಭಾಗದಲ್ಲಿನ ವ್ಯತ್ಯಾಸವನ್ನು ತೋರಿಸಿಕೊಡುತ್ತದೆ.
ಜಯಾಖ್ಯಾನಾಂತರ್ಗತ ಭಗವದ್ಗೀತಾ,  ಎಂಬ ಶೀರ್ಷಿಕೆಯಲ್ಲಿ  ಕಾಣಬರುವ ಮೂರು ಅಧ್ಯಾಯಗಳಿಗೆ ಸೇರಿದ ಶ್ಲೋಕಗಳನ್ನು ಸೂಚಿಸಲಾಗಿದೆ. 
 ಪ್ರತ್ಯೇಕ ಗಣಿತಸಾರಂ ಎಂಬ ಶೀರ್ಷಿಕೆಯಲ್ಲಿ   ಎಂಟು ಶ್ಲೋಕಗಳನ್ನು ನೀಡಲಾಗಿದೆ. ಇದರಲ್ಲಿ ೫ ಶ್ಲೋಕಗಳು ಇಂದಿನ ಭಗವದ್ಗೀತೆಯ ಬೇರೆ ಬೇರೆ ಅಧ್ಯಾಯಗಳಿಗೆ ಸೇರಿದವುಗಳಾಗಿವೆ. ಭಗವದ್ಗೀತೆಗೆ ಸಂಬಂಧಿಸಿ ಕೆಲವು ಮಾಹಿತಿಗಳನ್ನು  ಕೊನೆಯಲ್ಲಿ ’ಟಿಪ್ಪಣಿಯ’ ರೂಪದಲ್ಲಿ ನೀಡಲಾಗಿದೆ. 
ಈ ಸರಳಸುಂದರವಾದ ಕಿರುಹೊತ್ತಿಗೆಯ ಬೆನ್ನುಡಿಯಾಗಿ ಪರಿಚಯಕಾರನು ” ರಷ್ಯಾದೇಶದ ಒಂದು ಪ್ರಾಂತ್ಯದ ಆಡಳಿತವು ೨೦೧೧ರ ಸುಮಾರಿನಲ್ಲಿ ’ಭಗವದ್ಗೀತೆಯನ್ನು’ ಕಾನೂನು ಮೂಲಕ ನಿಷೇಧಿಸುವ ಆಲೋಚನೆ ಹೊಂದಿದೆ ಎಂಬ ಮಾಹಿತಿಯನ್ನು ನಮೂದಿಸಿ, ಈ ವಿಚಾರವಾಗಿ ಸಿರಿಭೂವಲಯದಲ್ಲಿ ಕಾಣಬರುವ ಪ್ರಸಂಗವನ್ನು  ವಿವರಿಸಿರುವುದಿದೆ.  ಇವರ ಮನೋಧರ್ಮ ಕುರಿತು  ”ಶೀತದೇಶದ ಜನರ ಅರಿವ ಅರಿವೆಂದರಿಯಲಾಗದು ಅರಿಯೆಂದು ತಿಳಿದು ಇರಿ” ಎಂದು ದ್ವಾರಕೆಯ ಶ್ರೀಷ್ಣನು   ಭಗವದ್ಗೀತೆಯಲ್ಲಿ ಹೇಳಿರುವ ಮಾತು ಸಿರಿಭೂವಲಯದಲ್ಲಿದೆ!!   ಈ ಮಾತು ಕೇವಲ ೪೦೦೦ ವರ್ಷಗಳ ಹಿಂದಿನ ಪರಿಸರಕ್ಕೆ ಸೀಮಿಯವಾದುದಲ್ಲ!! ಇಂದಿಗೂ ಇದು ಬಹಳ ಸೂಕ್ತವಾಗಿ ಅನ್ವಯಿತ್ತದೆ.  ರಷ್ಯಾ, ಚೀನ,  ಮುಂತಾದ ಶೀತದೇಶಗಳು ಹಾಗೂ ಅಮೆರಿಕ, ಫ್ರಾನ್ಸ್, ಇಂಗ್ಲೇಂಡ್, ಜರ್ಮನಿ, ಮುಸ್ಲಿಮ್ ದೇಶಗಳು  ತೀರ ಲೌಕಿಕ ಜೀವನಕ್ಕೆ  ಜೋತುಬಿದ್ದು, ಭಾರತದಂಥ ಸೌಮ್ಯವಾದಿಗಳನ್ನು ತಮ್ಮ ಜೀವವಿರೋಧಿ ನೀತಿಯಿಂದ ಹಿಂಸಿಸುತ್ತಿರುವುದು  ಸರ್ವವಿದಿತ.
ಜಗತ್ತಿನ ಸಾಹಿತ್ಯೇತಿಹಾಸದಲ್ಲಿ ಅತ್ಯಂತ ಅಚ್ಚರಿಯ ಕಾವ್ಯವೆನಿಸಿರುವ ಸಿರಿಭೂವಲಯವು ಭಗವದ್ಗೀತೆಯನ್ನುಕುರಿತ ಪರಂಪರಾಗತ ನಂಬಿಕೆಯನ್ನು ಬುಡಮೇಲುಮಾಡುವ ಮಾಹಿತಿಗಳನ್ನು ಈ ಕಿರುಹೊತ್ತಿಗೆಯು ತನ್ನ ಒಡಲೊಳಗೆ ಅಡಗಿಸಿಕೊಂಡಿದೆ!!
ಸಿರಿಭೂವಲಯದಲ್ಲಿ ಅಡಕವಾಗಿರುವ ಜಯಾಖ್ಯಾನಾಂತರ್ಗತ ಭಗವದ್ಗೀತೆಯು ಮೂರೇ ಅಧ್ಯಾಯಗಳಲ್ಲಿ ಮುಕ್ತಾಯವಾಗಿದೆ! ಅಲ್ಲಿರುವ ಒಟ್ಟು ಶ್ಲೋಕಗಳಸಂಖ್ಯೆ ೧೬೩ ಮಾತ್ರ!!  ಪ್ರಥಮ ಅಧ್ಯಾಯದಲ್ಲಿ ೫೩ ಶ್ಲೋಕಗಳಿವೆ.  ಈ ೫೩ ಶ್ಲೋಕಗಳ ಮೊದಲನೇ ಅಕ್ಷರಗಳನ್ನು ಜೋಡಿಸಿಕೊಂಡಾಗ ’ಓಂ ಇತ್ಯೇಕಕ್ಷರಮ್ ಬ್ರಹ್ಮ ವ್ಯಾಹರನ್ ಮಾಮನುಸ್ಮರನ್ | ಯದ್ ಪ್ರಯಾತ್ಯಜನ್ ದೇಹಂ ಸಯಾತ್ಪರಮಾಮ್ ಗತಿಂ’  ಎಂಬುದಾಗಿ ಈ ಅಧ್ಯಯದ  ಎರಡನೇ  ಶ್ಲೋಕವು ಪುನರುತ್ಪತ್ತಿಯಗುತ್ತದೆ!!
ಎರಡನೇ ಅಧ್ಯಾಯದಲ್ಲಿ ೫೪ ಶ್ಲೋಕಗಳಿವೆ. ಇವುಗಳ ಮೊದಲನೇ ಅಕ್ಷರಗಳನ್ನು ಜೋಡಿಸಿಕೊಂಡಾಗ:   ’ಮಮಯೋನಿರ್ಮಹದ್ ಬ್ರಹ್ಮಾತಸ್ಮಿನ್ಗರ್ಭಂದಧಾಂಯಹಂ | ಸಂಭವಸ್ಸರ್ವಭೂತಾನಾಂ ತತೋಭವತಿಭಾರತ| ’  ಎಂಬುದಾಗಿ ಈ ಅಧ್ಯಾಯದ ಮೊದಲನೇ ಶ್ಲೋಕವು ಉಗಮವಾಗುತ್ತದೆ!!
ಮೂರನೇ ಅಧ್ಯಾಯದಲ್ಲಿ ೫೪ ಶ್ಲೋಕಗಳಿವೆ. ಇವುಗಳ ಮೊದಲನೇ ಅಕ್ಷರಗಳನ್ನು ಜೋಡಿಸಿಕೊಂಡರೆ: ’ತತಿಗುಹ್ಯತಮಂ ಶಾಸ್ತ್ರಂಇದಮುಕ್ತಂಮಯಾನಘ| ಏತದ್ಭುದ್ಧ್ವಾದುದ್ಧಿಮಾನ್ ಸ್ಯಾತ್ ಕೃತ ಕೃತ್ಯಶ್ಚ (ಸ್ಯ)ಭಾರತ’ ಎಂಬುದಾಗಿ ಈ ಅಧ್ಯಾಯದ ಮೊದಲನೇ ಶ್ಲೋಕವು ಉಗಮವಾಗುತ್ತದೆ!!
ಮೊದಲನೇ ಅಧ್ಯಾಯದ ಕೊನೆಯಲ್ಲಿ ”ಅಥಾ ಅನುಸಂಧೇಯಾಃಸ್ತೋತ್ರಶ್ಲೋಕಾಃ ಚಿದಾನಂದಘನೇಕೃಷ್ಣೇನೋಕ್ತಸ್ವಮುಖತೋರ್ಜುನಂ| ವೇದತ್ರಯೀಪರಮಾನಂದತತ್ವಾರ್ಥಋಷಿಮಂಡಲಂ| ಎಂಬ ಶ್ಲೋಕವು ನಮೂದಾಗಿದೆ.   ಮೂರನೇ ಅಧ್ಯಾಯದ ಪ್ರಾರಂಭದಲ್ಲಿ ”ಅಥಾ ವ್ಯಾಸರ್ಷಿಪ್ರಣೀತ ಜಯಾಖ್ಯನಾಂತರ್ಗತ ಶ್ರೇಡಿ ಋಕ್ ಮಂತ್ರಾಂತರ್ಗತ ಗೀತಾ” ಎಂದು ಸೂಚಿಸಲಾಗಿದೆ.
ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು ತಮ್ಮ ’ಜೈನಭಗವದ್ಗೀತೆ’ ಎಂಬ ಲೇಖನದಲ್ಲಿ ಹಲವಾರು ಅಮೂಲ್ಯಮಾಹಿತಿಗಳನ್ನು ತಿಳಿಸಿದ್ದಾರೆ. ಅವುಗಳಲ್ಲಿಆದಿತೀರ್ಥಂಕರ ಋಷಭದೇವನು  ಭರತ ಬಾಹುಬಲಿಯ ಉಪನಯನದಲ್ಲಿ  ’ಅನಾದಿಗೀತೆ’ ಯನ್ನು ಬೋಧಿಸಿದ್ದು; ಇದನ್ನೇ ನೇಮಿ ತೀರ್ಥಂಕರನು ಬಲರಾಮ ಶ್ರೀಕೃಷ್ಣರಿಗೆ ಬೋಧಿಸಿದ್ದು; ಅದನ್ನೇ  ವ್ಯಸರು ತಮ್ಮ ಜಯಾಖ್ಯಾನದಲ್ಲಿ ಸೇರಿಸಿದ್ದು; ಇದನ್ನೇ ಕೃಷ್ಣನು ಅರ್ಜುನನಿಗೆ ತಿಳಿಯುವಂತೆ ಎಂಟುಭಾಷೆಗಳಲ್ಲಿ ಹೇಳಿದ್ದು, ಪ್ರಮುಖಸಂಗತಿಗಳಾಗಿವೆ.  ಕನ್ನಡ, ಪ್ರಾಕೃತ, ಸಂಸ್ಕೃತ, ಪೈಶಾಚಿಕ ಇತ್ಯಾದಿ ಪಂಚಭಷೆಗಳ ಭಗವದ್ಗೀತೆಯನ್ನು  ಕುಮುದೆಂದುಮುನಿಯು ತನ್ನ ಸಿರಿಭೂವಲಯದಲ್ಲಿ ಅಳವಡಿಸಿರುವುದಿದೆ.
’ ಭಾಷೆ, ಸಂಸ್ಕೃತಿ, ಚರಿತ್ರೆ ಮುಂತಾದುವುಗಳಿಗೆ ಸಂಬಂಧಿಸಿದ ಇಂದಿನ ಹಲವಾರು ನಂಬಿಕೆಗಳನ್ನು ಸಿರಿಭೂವಲಯವು  ಬುಡಮೇಲುಮಾಡುತ್ತದೆ, ಅದನ್ನು ಒಪ್ಪುವುದು ಅನಿವಾರ್ಯ ಎಂದು ಪ್ರಜ್ಞಾವಂತರು ನುಡಿದಿರುವುದಿದೆ!! ಸಿರಿಭೂವಲಯದ  ಪ್ರಾಚೀನತೆಯನ್ನೇ ಅಲ್ಲಗಳೆಯುವಮೂಲಕ ಈ ಕಾವ್ಯದ ಮಹತ್ವವನ್ನೇ ಮೂಲೆಗುಂಪು ಮಾಡುತ್ತಾ, ಕನ್ನಡದ ವಿದ್ಯಾವಂತರು ೬೦ ವರ್ಷಗಳಕಾಲ ನಡೆದುಬಂದಿದ್ದಾರೆ!! ಇಂದಿನ ಭಗವದ್ಗೀತೆಯ ಮೂಲ ಸೆಲೆಯು ಯಾವುದು? ಎಂಬುದನ್ನು  ಸಂಶಯಾತೀತವಾಗಿ ತಿಳಿಸುವ ಕಾರ್ಯವನ್ನು ಸಿರಿಭೂವಲವು ಖಚಿತವಾಗಿ ನಿರ್ವಹಿಸಿದೆ.
ಇದಕ್ಕೆ ಸಂಬಂಧಿಸಿದ ಅಚ್ಚರಿಯ ಮಾಹಿತಿಗಳನ್ನು  ಓದುಗರು ಈ ಕಿರುಹೊತ್ತಿಗೆಯಲ್ಲಿ ಕಾಣಬಹುದಾಗಿದೆ’ ಎಂದು ಸೂಚಿಸಿರುವುದು ಓದುಗರ ಅಂತರಂಗದ ತುಮುಲವನ್ನು ತಡೆಯಲು ವಹಿಸಿದ ಮುನ್ನೆಚ್ಚರಿಯ ಕ್ರಮದಂತಿದೆ. ಹೌದು! ಈ ಕಿರುಹೊತ್ತಿಗೆಯು ಸ್ಫೋಟಿಸಿರುವ ಹಲವಾರು ಖಚಿತಮಾಹಿತಿಗಳು ನಿಜಕ್ಕೂ ವಿಸ್ಮಯಕಾರಿಯಾಗಿವೆ.
ಓದುಗರೊಂದಿಗೆ ಮಾತನಾಡುವ ಸನ್ನಿವೇಶದಲ್ಲಿ ಸುಧಾರ್ಥಿಯು ”ವಿಶ್ವಸಾಹಿತ್ಯದಲ್ಲಿ ವ್ಯಾಸ; ಕಾಳಿದಾಸ; ಶೇಕ್ಸ್ಪಿಯರ್; ಪಂಪ ಮುಂತಾದವರ ಕಾವ್ಯಗಳನ್ನು ಕುರಿತು ಅವರ ಬರಹದ ಗಾತ್ರದ ನೂರುಪಾಲಿನಷ್ಟು  ಬೇರೆಯವರ ಬರಹಗಳು ಪ್ರಕಟವಾಗಿರುವುದಿದೆ!  ಆದರೆ, ಈಗ ಪ್ರಕಟ ವಾಗಿರುವಷ್ಟು  ಸಿರಿಭೂವಲಯ ಕಾವ್ಯವನ್ನು ಓದಿರುವವರೇ ಜಗತ್ತಿನಲ್ಲಿ ಬೆರಳೆಣಿಕೆಗೂ ಸಾಲದಷ್ಟು ಜನಗಳೆಂದಮೇಲೆ; ಅದನ್ನುಕುರಿತು ಬರೆಯುವವರಾದರೂ ಯಾರು!?  ಈಕಾರಣದಿಂದಾಗಿ ಸಿರಿಭೂವಲಯ ಕಾವ್ಯವನ್ನು ಕುರಿತು ಮತ್ತೆ ಮತ್ತೆ ಬರೆಯಲೇಬೇಕಾದುದು ನನಗೆ ಅನಿವಾರ್ಯ ” ಎಂಬುದನ್ನು ಸ್ಪಷ್ಟಪಡಿಸಿರುವುದಿದೆ. 
 ”ಸಿರಿಭೂವಲಯದ ಅಂತರ್ಸಾಹಿತ್ಯಗಳಪೈಕಿ ಭಗವದ್ಗೀತೆಯು ಹೆಚ್ಚಿನ ಗಮನಸೆಳೆಯುವಂಥದು. ಇದಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಇಂದಿನ ಭಗವದ್ಗೀತೆಯ ಅಭಿಮಾನಿಗಳ ಹಾಗೂ ವಿದ್ವಾಂಸರ ಗಮನಕ್ಕೆ ತರುವ ಉದ್ದೇಶದಿಂದ ಈ ಕಿರುಹೊತ್ತಿಗೆಯನ್ನು ಪ್ರಕಟಿಸಲಾಗಿದೆ. ಇಲ್ಲಿನ ಮಾಹಿತಿಗಳನ್ನು ಮುಕ್ತಮನಸ್ಸಿನಿಂದ  ಪರಿಶೀಲಿಸುವ ಔದಾರ್ಯವನ್ನು  ಹೊಂದಿರುವವರಿಗೆ ಮಾತ್ರವೇ  ೧೨೦೦ ವರ್ಷಗಳ ಹಿಂದೆ ನಮ್ಮ ಸಾಮಾಜಿಕ ಹಾಗೂ ಸಾಹಿತ್ಯಿಕ ಪರಿಸರದ ಖಚಿತ ಮಾಹಿತಿಯ ದರ್ಶನವಾಗಲು ಸಾಧ್ಯ!! 
ಇದು ನಾನು ಸೂಚಿಸುವ ಅನಿಸಿಕೆಯಲ್ಲ! ಜಗತ್ತಿನ ಅತ್ಯಂತ ಅಚ್ಚರಿಯ ಕಾವ್ಯವೆನಿಸಿದ ಸಿರಿಭೂವಲಯವನ್ನು ಕುರಿತು ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು ಸೂಚಿಸಿರುವ ಖಚಿತವಾದ ನಿಲುವಿನ ಸಾರಾಂಶ” ಎಂದು ಸೂಚಿಸುತ್ತ, ಇಂದಿನ ವಿದ್ವಾಂಸರು ತನ್ನ ವಿರುದ್ಧ ಯಾವುದೇ ಧಾಳಿಯನ್ನೂ ನಡೆಸಲಾಗದಂತೆ ಸುಧಾರ್ಥಿಯು ರಕ್ಷಣೆಯ ಕೋಟೆ ನಿರ್ಮಿಸಿಕೊಂಡಿರುವುದು ಗಮನಾರ್ಹವಾಗಿದೆ!!!
ಸಂಶೋಧಕ ಕೆ. ಶ್ರೀಕಂಠನವರು ಸಿರಿಭೂವಲಯಾಂತರ್ಗತವಾದ ಭಗವದ್ಗೀತೆಯನ್ನು ಪ್ರತ್ಯೇಕವಾಗಿ ವಿಂಗಡಿಸಿ, ಮುದ್ರಿಸಿದ್ದರೆಂಬ ಮಾಹಿತಿ, ಹಾಗೂ  ಈ ಸಂಗ್ರಹವನ್ನು ಬೆಂಗಳೂರಿನ ಶ್ರೀ  ಕೆ. ನಾಗರಾಜ ಎಂಬುವವರು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಪ್ರಕಟಿಸಿರುವರೆಂಬ ಪತ್ರಿಕಾ ವರದಿಯೂ ಇಲ್ಲಿ ದಾಖಲಾಗಿವೆ.
ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತೆಯ ೧೬೩ ಶ್ಲೋಕಗಳಿರುವ ೩ ಅಧ್ಯಾಯಗಳು ದೇವನಾಗರೀ ಲಿಪಿಯಲ್ಲಿ ಮುದ್ರಿತವಾಗಿರುವ ಮಾಹಿತಿಯೂ ಇಲ್ಲಿ ದಾಖಲಾಗಿದೆ.
ಸಿರಿಭೂವಲಯದಲ್ಲಿ ಭಗವದ್ಗೀತೆಯು ಸ್ತಂಬರೂಪದ ಅಂತರ್ಸಾಹಿತ್ಯವಾಗಿ ಉಗಮವಾಗುವ ಕ್ರಮದೊಂದಿಗೆ ಅವುಗಳನ್ನು ಪುನಃ ಅಶ್ವಗತಿಯಲ್ಲಿ ಸಾಗುತ್ತ ಪೂರ್ಣ ಸಾಹಿತ್ಯದ ಶುದ್ಧರೂಪವನ್ನು ಸಂಪಾದಿಸುವ ಕಠಿಣವಾದ ಕ್ರಮವನ್ನು ಸರಳವಾಗಿ ವಿವರಿಸಿರುವುದನ್ನು ಓದುಗರು ಗಮನಿಸಬಹುದು.
ಕೆ. ಶ್ರೀಕಂಠಯ್ಯನವರು ೧೯೫೩ರಲ್ಲಿ ಸಿದ್ಧಪಡಿಸಿದ ಈ ಜಯಾಖ್ಯಾನಾಂತರ್ಗತ ಭಗವದ್ಗೀತೆಯ ಪೂರ್ಣಪಾಠವನ್ನು ವಿಮರ್ಶಿಸಿರುವ ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು ದಿನಾಂಕ ೨೭-೦೮- ೧೯೬೧ ರ ಕರ್ಮವೀರ  ಸಾಪ್ತಾಹಿಕದಲ್ಲಿ  ’ಜೈನಭಗವದ್ಗೀತೆ’ ಎಂಬ ಲೇಖನ ಬರೆದು  ಕೆಲವಾರು ಅಮೂಲ್ಯ ವಿಚಾರಗಳನ್ನು ಹೊರಗೆಡಹಿರುವುದನ್ನು ಇಲ್ಲಿ ಸೂಚಿಸಲಾಗಿದೆ.
ತಮ್ಮಕಾಲದಲ್ಲಿದ್ದ ಸಾಮಾಜಿಕ ಪರಿಸರದ ಗೊಂದಲವನ್ನು ನಿರೋಧಿಸುವ ದಿಸೆಯಲ್ಲಿ ಶಂಕರಭಗವತ್ಪಾದರು ವೇದೋಪನಿಷತ್ತುಗಳ ಮತ್ರಾಂತರ್ಗತವಾದ ಮಾಹಿತಿಗಳನ್ನು ಭಗವದ್ಗೀತೆಯ ಛಂದಸ್ಸಿಗೆ ಪರಿವರ್ತಿಸಿ,  ಜಯಾಖ್ಯಾನಾಂತರ್ಗತವಾಗಿದ್ದ ೧೬೩ ಶ್ಲೋಕಗಳವ್ಯಾಪ್ತಿಯ ಭಗವದ್ಗೀತೆಯನ್ನು ೭೦೦ಶ್ಲೋಕಗಳ ವ್ಯಾಪ್ತಿಗೆ ವಿಸ್ತರಿಸಿ,  ೧೮ ಅಧ್ಯಾಯಗಳಾಗಿ ವಿಂಗಡಿಸಿ, ದಿನನಿತ್ಯದ ಪಾರಾಯಣಕ್ಕೆ; ಮನನಕ್ಕೆ ಅನುಕೂಲವಾಗುವಂತೆ ಅದಕ್ಕೆ ಒಂದು ನಾಟಕದ ಸ್ವರೂಪ ನೀಡಿ, ಅದನ್ನು  ಸೌತಿಯ  ’ಮಹಾಭಾರತದಲ್ಲಿ’  ಸಮಾವೇಶಗೊಳಿಸಿದರೆಂಬ ವಿಚಾರವನ್ನು ತಾರ್ಕಿಕವಾಗಿ ಸಮಂಜಸವೆನಿಸುವಂತೆ ಈ ಸರಳಪರಿಚಯಕೃತಿಯಲ್ಲಿ ನಿರೂಪಿಸಲಾಗಿದೆ.
 ಮುಂದೆ ಈ ಭಾಗವು   ಉಪನಿಷತ್ತುಗಳು; ಬ್ರಹ್ಮಸೂತ್ರಗಳೊಂದಿಗೆ ಸರಿಸಮಾನವಾದ ಸ್ಥಾನ ಪಡೆಯುವಂತಾಗಿ, ’ಪ್ರಸ್ಥಾನತ್ರಯ’ ಎಂಬ ಮಹತ್ವ ಪಡೆದು, ಭಗವತ್ಪಾದರಾದಿಯಾಗಿ , ರಾಮಾನುಜರು ಮತ್ತು ಮಧ್ವಾಚಾರ್ಯರು ಈ ಪ್ರಸ್ಥಾನತ್ರಯಗಳಿಗೆ ವ್ಯಾಖ್ಯಾನರಚಿಸಿರುವುದನ್ನುಕುರಿತೂ  ಮಾಹಿತಿಯು ಸೇರಿದೆ.
ಭಗವದ್ಗೀತೆಯು ಸೂಚಿಸಿರುವ ಜೀವನಧರ್ಮಸಾರವನ್ನು ಕುರಿತು ಪ್ರಕಟವಾಗಿರುವ ಹಲವಾರು ಕೃತಿಗಳ ಪೈಕಿ ಭಾರತ ದರ್ಶನ ಪ್ರಕಾಶನದ ವಿದ್ವಾಂಸರ ಅಭಿಪ್ರಾಯಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಆಲ್ಬರೂನಿ ಎಂಬುವವನು ೭೪೫ ಶ್ಲೋಕಗಳ ಭಗವದ್ಗೀತೆಯನ್ನೇ ಪರ್ಷಿಯನ್ ಭಾಷೆಗೆ ತರ್ಜುಮೆ ಮಾಡಿರುವ ವಿಚಾರವನ್ನೂಭರತದರ್ಶನದ ವಿದ್ವಾಂಸರಮಂಡಳಿಯು  ಚರ್ಚಿಸಿರುವುದಿದೆ.
ಮಹಾಭಾರತವೆಂಬುದು ಇಂದಿನ ಜಾಗತಿಕ ಸಾಹಿತ್ಯಕ್ಷೇತ್ರದಲ್ಲಿ ದೊಡ್ಡಕಾವ್ಯವಾಗಿ ಪರಿವರ್ತಿತವಾಗಿರುವ ಹಿನ್ನೆಲೆಯನ್ನು ಕುರಿತು ಕೆ. ಶ್ರೀಕಂಠಯ್ಯನವರು ರೂಪಿಸಿರುವ ವಿವಿಧ ಮಾಹಿತಿಗಳ ವಿವರಗಳನ್ನೂ ಇಲ್ಲಿ ಅಳವಡಿಸಲಾಗಿದೆ. 
ವ್ಯಕ್ತಿಜೀವನದ ಹಾದಿಯನ್ನು ಕುರಿತು ಸನಾತನಧರ್ಮ ಹಾಗೂ ಜೈನಸಂಪ್ರದಾಯದ ವಿವರಣೆಗಳಲ್ಲಿ  ಕಂಡುಬರುವ ವ್ಯತ್ಯಾಸಗಳ ವಿವರಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಕೆ. ಶ್ರೀಕಂಠಯ್ಯನವರು ಮಹಾಭಾರತವನ್ನು ಕುರಿತು ಆಳವಾದ ಅಧ್ಯಯನ ನಡೆಸಿ  ’ಜಯ-ಭಾರತ-ಮಹಾಭಾರತ’  ಹಾಗೂ ’ಮಹಾಭಾರತದ ಮಹಾಸ್ವರೂಪ’ ಎಂಬ ಎರಡು ಲೇಖನಗಳಲ್ಲಿ ಸೂಚಿಸಿರುವ ಮಹತ್ತರವಾದ ವಿಚಾರಗಳನ್ನು ಕುರಿತು ಇಲ್ಲಿ ವಿವರಿಸಲಾಗಿದೆ.
ಅವುಗಳ ಪೈಕಿ, ವ್ಯಾಸಮಹರ್ಷಿಯುಬರೆದ ’ಜಯಾಖ್ಯಾನ’ ದಲ್ಲಿ ಕೇವಲ ೮೮೫೦ ಶ್ಲೋಕಗಳಿರುವುದು; ವೈಶಂಪಾಯನನ  ’ಭಾರತ’ ದಲ್ಲಿ ೨೪೦೦೦ ಶ್ಲೋಕಗಳಿರುವುದು ಹಾಗೂ ಸೂತಪುರಾಣಿಕನ ವಂಶಜನಾದ ’ಸೌತಿ’ಯು ಬರೆದ ’ಮಹಾಭಾರದಲ್ಲಿ’ ಒಂದುಲಕ್ಷ ಶ್ಲೋಕಗಳಿರುವುದನ್ನು ಸೂಚಿಸಲಾಗಿದೆ. ಕ್ರಿ. ಶ. ೪೪೨ರವೇಳೆಗಾಗಲೇ ಈ ಒಂದುಲಕ್ಷಶ್ಲೋಕಗಳವ್ಯಾಪ್ತಿಯ ಮಹಾಭಾರತವು ಪ್ರಚಲಿವಿದ್ದುದಕ್ಕೆ ಶಾಸನದ ಆಧಾರವನ್ನು ಕೆ. ಶ್ರೀಕಂಠಯ್ಯನವರು ವಿವರಿಸಿರುವ ಮಾಹಿತಿಯೂ ಈ ಸರಳಪರಿಚಯದಲ್ಲಿ ದಾಖಲಾಗಿದೆ.
ಭಗವದ್ಗೀತೆಯನ್ನು ಮೆಚ್ಚುವವರು ಇರುವಂತೆಯೇ  ಚುಚ್ಚುವವರು ಹಾಗೂ ಕಚ್ಚುವವರೂ ಇರುವುದು ಸಹಜ! ಇಂಥ ಎರಡುಗುಂಪುಗಳಿಗೂ ಸಮಾನವಾಗಿ ಅನ್ವಯವಾಗುವ ಒಂದು ನಿಲುವನ್ನು ಈ ಸರಳಪರಿಚಯಕಾರನು ಸೂಚಿಸಿರುವುದಿದೆ! ಅದನ್ನು ಕುರಿತು ಇಲ್ಲಿ ಸ್ವಲ್ಪ ಗಮನಹರಿಸೋಣ. ’ಅಗಾಧವಾದ ವೇದೋಪನಿಷತ್ತುಗಳು; ಅಸಂಖ್ಯಾತವಾದಧರ್ಮಶಾಸ್ತ್ರಗಳು; ರಾಮಾಯಣ; ಮಹಾಭಾರತ; ಭಾಗವತ ಮುಂತಾದುವುಗಳನ್ನೆಲ್ಲ ಸಮಗ್ರವಾಗಿ ಅಧ್ಯಯನಮಾಡಿದರೂ ದೊರೆಯುವ ಜ್ಞಾನವೆಂದರೆ ಬ್ರಹ್ಮಜ್ಞಾನಮಾತ್ರ!
ಇಷ್ಟೆಲ್ಲ ಅಪಾರ ಸಾಹಿತ್ಯದ ರಾಶಿಯನ್ನು ಅಧ್ಯಯನಮಾಡುವ ಅಗತ್ಯವಿಲ್ಲದೇ ; ಕೇವಲ ೭೦೦ ಶ್ಲೋಕಗಳ ಪಠಣ ಹಾಗೂ ಮನನದಿಂದ ಇಂಥ ಮಹತ್ತರವಾದ ಬ್ರಹ್ಮಜ್ಞಾನವನ್ನುಒದಗಿಸುವುದಕ್ಕಾಗಿಯೇ  ಭಗವದ್ಗೀತೆಯು ರೂಪುಗೊಂಡಿದೆ ಎಂಬುದು ಅತ್ಯಂತ ಸ್ಪಷ್ಟವಾದ ಸಂಗತಿಯಾಗಿದೆ.  ಭಗವದ್ಗೀತೆಯ ಕರ್ತೃಯಾರು?  ರಚಿಸಿದಕಾಲಯಾವುದು?  ಅಲ್ಲಿರುವ ಶ್ಲೋಕಗಳ ಸಂಖ್ಯೆ ಎಷ್ಟು?  ಇದನ್ನು ಯಾರು ? ಯಾರಿಗೆ?  ಎಲ್ಲಿ? ಯಾವಾಗ, ಏಕೆ ಹೇಳಿದರು?  ಇತ್ಯಾದಿ ಅನುಪಯುಕ್ತವಾದ ಸಂಗತಿಗಳನ್ನು ಕುರಿತು ಶುಷ್ಕ ಚರ್ಚೆಗಿಂತಲೂ  ಭಗವದ್ಗೀತೆಯು ಪ್ರತಿಪಾದಿಸುವ ಬ್ರಹ್ಮಸಾಕ್ಷಾತ್ಕಾರ ಪಡೆಯುವುದು ಜಾಣತನವೆಂದು ನನ್ನ ಭಾವನೆ. ಎಷ್ಟೆಲ್ಲ ಶಾಸ್ತ್ರ, ಪುರಾಣ, ಧರ್ಮ, ವೇದೋಪನಿಷತ್ತುಗಳ ಸಾರವು ಈ ಭಗವದ್ಗೀತೆಯಲ್ಲಿ ಅಡಗಿದೆ ಎಂಬುದನ್ನು  ಕುರಿತು ಹಲವಾರು ವಿದ್ವಾಂಸರು ಖಚಿತಪಡಿಸಿರುವುದು ಸ್ವಯಂವೇದ್ಯವಾಗಿದೆ. ಅಂದಮೇಲೆ  ಅದನ್ನು ಕುರಿತು ಕುಹಕವಾಡದೇ; ನಂಬಲು, ಆಚರಿಸಲು ಅಡ್ಡಿಯೇನಿದೇ!!??
ಭಗವದ್ಗೀತೆಯ ರೂಪಾಂತರವನ್ನು ಕುರಿತು ಈ ಪರಿಚಯಕೃತಿಯಲ್ಲಿರುವ ಮಾಹಿತಿಗಳ ವಿವರಗಳನ್ನು ಒಪ್ಪುವುದೂ ಬಿಡುವುದೂ ಓದುಗರ ಹಾಗೂ ವಿದ್ವಾಂಸರ ನಿರ್ಧಾರಕ್ಕೆ ಬಿಟ್ಟುದೆಂಬ ಹೇಳಿಕೆಯನ್ನು ಸೂಚಿಸುವಮೂಲಕ ಪರಿಚಯಕಾರನು  ಇದಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡವನ್ನೂ ಇಲ್ಲಿ ಹಾಕದಿರುವುದು ಪ್ರಮುಖವಿಚಾರವಾಗಿದೆ.
ಈ ಕಿರುಹೊತ್ತಿಗೆಯ ಕೊನೆಯಲ್ಲಿ ಸೂಚಿಸಿರುವ ಟಿಪ್ಪಣಿಗಳು ಎಂಬ ಶೀರ್ಷಿಕೆಯಲ್ಲಿ ಸಿರಿಭೂವಲಯದ ಭಗವದ್ಗೀತೆಗೂ  ಇಂದಿನ ಪ್ರಚಲಿತ ಭಗವದ್ಗೀತೆಗೂ ಕೆಲವೊಂದು ವ್ಯತ್ಯಾಸಗಳಿರುವುದನ್ನು  ಪರಿಚಯಕಾರನು ಸೂಚಿಸಿರುವುದಿದೆ.
ತಾನು ಚರ್ಚಿಸುವ ಯಾವುದೇ ವಿಚಾರವಿರಲೀ ಅದಕ್ಕೆ ಸಂಬಂಧಿಸಿದಂತೆ ತಾರ್ಕಿಕವಾದ ಆಧಾರಗಳನ್ನು ಸೂಚಿಸುತ್ತ ಸಾಗಿರುವ ಪರಿಚಯಕಾರನ ಪ್ರಯತ್ನವನ್ನು ಸಾರಾಸಗಟಾಗಿ ತಳ್ಳಿಹಾಕಲು ಅವಕಾಶವಿಲ್ಲದೇ ಸಮಕಾಲೀನ ವಿದ್ವಾಂಸರು ಇವುಗಳನ್ನು ಕುರಿತು ಉಪೇಕ್ಷೆಯಿಂದ ವರ್ತಿಸುವ ಹಾದಿಹಿಡಿದರು. ಅಂಥವರೆಲ್ಲರೂ  ಜನಸಾಮಾನ್ಯರಿಗೆ ಇದನ್ನು ವಿವರಿಸುವಲ್ಲಿ ದೂರವಾಗಿದ್ದಾರೆಂದು  ಪರಿಚಯಕಾರನು ಸೂಚಿಸುವುದು ಸೂಕ್ತವೋ ಅಲ್ಲವೋ ಎಂಬುದನ್ನು ಕುರಿತು ಓದುಗರೇ ನಿರ್ಧರಿಸಬೇಕಿದೆ. (ಮುಂದುವರೆಯುವುದು) 
                             -ಜಮದಗ್ನಿಸುತ.

**कवि कुमुदॆंदुमुनीजी की रचना सिरिभूवलय की एक् झांकी**

***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ   
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ***   
ಭಾಗ: ೬.

**कवि कुमुदॆंदुमुनीजी की  रचना
    सिरिभूवलय की एक्  झांकी**

मूल कन्नड परिचयकार : सुधार्थि हासन.

भावानुवाद  :  ऎस . रामण्ण

ಹಲವಾರು ವರ್ಷಗಳ  ಅಪಾರ ಶ್ರಮದ ಪರಿಣಾಮವಾಗಿ ರೂಪುಗೊಂಡ  ಸಿರಿಭೂವಲಯದ ಸರಳಪರಿಚಯಕೃತಿಗಳನ್ನು  ಅವುಗಳಿಗೆ ಅರ್ಹವಾದ ಪ್ರಮಾಣದಲ್ಲಿ ಕನ್ನಡಿಗರು ಸ್ವಾಗತಿಸದೇ ಹೋದರೂ,  ಸುಧಾರ್ಥಿಯು ನಿರಾಶನಾಗದೇ, ಇವುಗಳ ಸಂಕ್ಷಿಪ್ತರೂಪವನ್ನಾದರೂ ಭಾರತದಲ್ಲಿ ಹೆಚ್ಚುಜನಗಳಿಗೆ ಪರಿಚಯವಿರುವ ರಾಷ್ಟ್ರಭಾಷೆ  ಹಿಂದಿಯಮೂಲಕ ಸಾಹಿತ್ಯಾಸಕ್ತರ ಗಮಕ್ಕೆ ತರಲೇಬೇಕೆಂಬ ಹಂಬಲ ಈತನ ಆಂತರ್ಯಲ್ಲಿ ಅಂಕುರಿಸಿತು. 
 ಸುಧಾರ್ಥಿಯ ಶ್ರೀಮತಿ  ಗಿರಿಜಾ ಅವರ ತವರೂರು ಸಕಲೇಶಪುರ. ಸಕಲೇಶಪುರದಲ್ಲಿ ಹಿಂದಿ ಪ್ರಚಾರಕರಾಗಿದ್ದ ಎಸ್. ರಾಮಣ್ಣನವರು  ಚಿರಪರಿಚಿತರು. ಕೂಡಲೇ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಯಿತು. ಅವರು ಸಕಲೇಶಪುರದಿಂದ ಹಾಸಕ್ಕೆ ವಲಸೆಬಂದಿರುವ ಮಾಹಿತಿ ದೊರೆಯಿತು.  ಅವರ ನೆಲೆಯನ್ನು ಪತ್ತೆಮಾಡಿ, ಅವರಿಗೆ ಈ ಅನುವಾದಕಾರ್ಯದ ಯೋಜನೆಯನ್ನು ವಿವರಿಸಲಾಯಿತು.
 ವಯೋಸಹಜವಾಗಿ  ಅನಾರೋಗ್ಯದಲ್ಲಿದ್ದ ಅವರಿಗೆ ಈ ಕಾರ್ಯವನ್ನು ನಿರ್ವಹಿಸಲು ಆದೀತೋ ಇಲ್ಲವೋ ? ಎಂಬ ಸಂಶಯವಿತ್ತು. ಆದರೂ ಕೂಡಲೇ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ನಿಶ್ಚಯಿಸಿದರು!  ಒಂದೆರಡು ದಿನಗಳಲ್ಲಿಯೇ ಸಿರಿಭೂವಲಯಸಾರದ ಸ್ವರೂಪವನ್ನು ಪರಿಶೀಲಿಸಿದ  ರಾಮಣ್ಣನವರು ಮೊದಲ ಪುಟದಿಂದ ಕೊನೆಯ ಪುಟದವರೆವಿಗೆ ಪ್ರವಹಿಸಿರುವ ಬರಹದ ಪ್ರವಾಹವನ್ನು ಗಮನಿಸಿ, ಅದನ್ನು ಯಥಾವತ್ತಾಗಿ ಹಿಂದೀಭಾಷೆಗೆ ಅನುವಾದಿಸಲು ಸಾಧ್ಯವಾಗದೆಂಬ ನಿಲುವನ್ನು ಸೂಚಿಸಿದರು. 
ಸ್ವಾಭಾವಿಕವಾಗಿಯೇ ಈ ಸುಧಾರ್ಥಿಯದು ಬಹಳ ಉದ್ದವಾದ ವಾಕ್ಯಸರಣಿಯ ಸಂಕೀರ್ಣವಾದ ಶೈಲಿ.  ಜೊತೆಗೆ ಬರಹದವ್ಯಾಪ್ತಿಯೂ ತುಂಬಾ ವಿಸ್ತಾರವಾದುದು.  ಸಂಪೂರ್ಣವಾಗಿ ಅಲ್ಲಿನ ಎಲ್ಲ ಮಾಹಿತಿಗಳನ್ನೂ ಮನನಮಾಡಿಕೊಂಡು ಯಥಾವತ್ತಾಗಿ ಅನುವಾದಮಾಡಲು  ಹಲವಾರು ವರ್ಷಗಳಾದರೂ ಬೇಕೆಂಬುದು ಖಚಿತವಿತ್ತು. ’ವಿಷಯ ಗ್ರಹಣಕ್ಕಾಗಿ ನೀವು ಈ ವಿಸ್ತಾರವಾದ ಬರಹವನ್ನುಒಮ್ಮೆ ಓದಿ, ಅನುವಾದಕ್ಕೆ ಸೂಕ್ತವಾದ ಬರವಣಿಗೆಯನ್ನು ಪ್ರತ್ಯೇಕವಾಗಿ  ರೂಪಿಸಿ ಕೊಡುತ್ತೇನೆ’ ಎಂದು ಸೂಚಿಸಿದ್ದಾಯಿತು.
ತನ್ನದೇ ಬರವಣಿಗೆಯಲ್ಲಿ ಆಯ್ಕೆ, ಕತ್ತರಿಸು, ನಕಲಿಸು ತಂತ್ರದಮೂಲಕ ಅಗತ್ಯ ಮಾಹಿತಿಗಳನ್ನು ಒಂದೆಡೆ ಸೇರಿಸಿ, ಅಲ್ಲಿವ ವಾಕ್ಯ ಸರಣಿಯನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಿಸಿ, ಅದನ್ನು ರಾಮಣ್ಣನವರಿಗೆ ತಲುಪಿಸಲಾಯಿತು.   ಈ ನೂತನ ಪ್ರತಿಯ ಸರಳ ಶೈಲಿಯನ್ನು ನೋಡಿ ರಾಮಣ್ಣನವರಿಗೆ ಸಂತೋಷವಾಯಿತು.
 ಅಲ್ಲಿಂದ ಮುಂದಕ್ಕೆ ಯಾವುದೇ ಅಡಚಣೆಯಿಲ್ಲದೆ ಅತಿ ಶೀಘ್ರವಾಗಿ ಅನುವಾದದ ಕಾರ್ಯ ಮುಂದುವರೆದು ಮುಕ್ತಾಯವಾಯಿತು!   ರಾಮಣ್ಣನವರ  ಸೊಸೆ ಶ್ರೀಮತಿ ಎನ್.ಎ. ಶುಭಾ ಅವರು  ಈ  ಹಿಂದೀ ಅವತರಣಿಕೆಯನ್ನು  ಕಂಪ್ಯೂಟರಿನಲ್ಲಿ ಮುದ್ರಿಸಿಕೊಟ್ಟ ಕಾರಣ,  ಮುದ್ರಣಕ್ಕಾಗಿ  ಉತ್ತಮಪ್ರತಿಯನ್ನು ರೂಪಿಸುವ ಸಮಯ ಹಾಗೂ ಶ್ರಮವನ್ನು ಕಡಿತಗೊಳಿಸಿತು.
ಮುನಿಕೃಪೆಯಿಂದಾಗಿ, ನಿರೀಕ್ಷಿಸಿದ್ದಕ್ಕಿಂತ  ಸುಲಭವಾಗಿ, ಶೀಘ್ರವಾಗಿ, ಸಮರ್ಪಕವಾಗಿ ಸಿರಿಭೂವಲಯದ ಸರಳಪರಿಚಯಕೃತಿಗಳ ಭಾವಾನುವಾದವು ಸಿದ್ಧವಾಯಿತು!!! ಎಸ್. ರಾಮಣ್ಣನವರೇ ಈ ಭಾವಾನುವಾದಿತಕೃತಿಗೆ  ’ಸಿರಿಭೂವಲಯಕೀ ಏಕ್ ಝಾಂಕಿ’  ಎಂದು ನಾಮಕರಣ ಮಾಡಿದರು! 
 ’ ಒಂದು ಮಿಂಚುನೋಟ’  ”ಭಗವದ್ಗೀತಾ’ ಹಾಗೂ ’ಸಿರಿಭೂವಲಯಕೀ ಏಕ್ ಝಾಂಕಿ’ ಮೂರುಕೃತಿಗಳೂ ಮುದ್ರಣಾಲಯವನ್ನು ಸೇರಿ,  ಪ್ರಕಟಣೆಗೆ ಸಿದ್ಧವಾದುವು. ಡೆಮಿ ೧/೪ ಅಳತೆಯ ಸುಮಾರು ೧೪೪ ಪುಟಗಳವ್ಯಾಪ್ತಿಯ ಈ ಭಾವಾನುವಾದದ ಪ್ರಕಟಣೆಯ ಹೊಣೆಯನ್ನೂ  ಶ್ರೀಮತಿ ಗಿರಿಜಾಶಂಕರ್ ಅವರೇ  ವಹಿಸಿಕೊಂಡರು.
 ಆತ್ಮೀಯಮಿತ್ರರಾದ ಶ್ರೀ ಹರಿಹರಪುರ ಶ್ರೀಧರ್ ಅವರ ಹಾಸನದ ಸ್ವಗೃಹ ’ಈಶಾವಾಸ್ಯಮ್’ ನಲ್ಲಿ ಇವುಗಳ ಲೋಕಾರ್ಪಣೆಯ ಸಮಾರಂಭವೂ ಸರಳವಾಗಿ ನಡೆಯಿತು.  ಕನ್ನಡದ ಕೀರ್ತಿಕಳಶವೆನಿಸುವ ಈ ಅಮೂಲ್ಯಕೃತಿಯಲ್ಲಿ  ಸುಧಾರ್ಥಿಯವರ ಮಿತ್ರ ಶ್ರೀ ಎಚ್. ಎಂ. ಸದಾನಂದ ಅವರು ’ಓದುಗರೊಂದಿಗೆ’        ( पाठकॊं से एक बात ) ಎಂಬ ಶೀರ್ಷಿಕೆಯಲ್ಲಿ,   ಸಿರಿಭೂವಲಯದ ಸರಳಪರಿಚಯ ಕೃತಿಗಳ ರಚನೆಯಲ್ಲಿ ಸುಧಾರ್ಥಿಯವರ ಪ್ರಯತ್ನದ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
  ’अनुवदक की दॊ, बातॆ’ ಎಂಬ ಶೀರ್ಷಿಕೆಯಲ್ಲಿ  ಹಿಂದೀಪಂಡಿತ್ ಎಸ್. ರಾಮಣ್ಣವರು  ಸಿರಿಭೂವಲಯಕ್ಕೆ ಸಂಬಂಧಿಸಿದ  ಹೇಳಿಕೆಗಳನ್ನು ಕುರಿತು, ಕನ್ನಡ ವಿದ್ವಾಂಸಾರು ತಳೆದಿರುವ ನಿಲುವುಗಳನ್ನು ಕುರಿತು,   ಕಳೆದ ೬೦ ವರ್ಷಗಳಿಂದ ಕನ್ನಡವಿದ್ವಾಂಸರ ವಲಯದಲ್ಲಿ ಈ ವಿಶ್ವಕಾವ್ಯದ ವಿಚಾರವಾಗಿ ಬೆಳೆದುಬಂದಿರುವ ’ಹಟದ’ಸ್ವಭಾವವನ್ನು ಕುರಿತು, ಸಿರಿಭೂವಲಯದಂಥ ಮಹಾನ್ ಸಾಹಿತ್ಯಕೃತಿಯ ಸರಳಪರಿಚಯಮಾಡಿಕೊಡಲು ೬೦ ವರ್ಷಗಳಿಂದಲೂ  ಕನ್ನಡದ ಪ್ರಸಿದ್ಧ ವಿದ್ವಾಂಸರಿಗೆ ಏಕೆ ಸಾಧ್ಯವಾಗಲಿಲ್ಲ? ಎಂಬುದನ್ನು ಕುರಿತು, ಸುಮಾರು ೨೫ ಪ್ರಶ್ನೆಗಳಿಗೆ  ಸುಧಾರ್ಥಿಯವರ ಸರಳ ಪರಿಚಯಕೃತಿಗಳಲ್ಲಿ ಸಮರ್ಪಕವಾದ ಉತ್ತರಗಳು ಅಡಕವಾಗಿವೆ.  ಎಂಬ ಮಾತುಗಳನ್ನಾಡಿದ್ದಾರೆ.
ಅವುಗಳಲ್ಲಿ ಕೆಲವನ್ನು  ಈ ಸಂಕ್ಷಿಪ್ತ  ಸರಳ ಭಾವಾನುವಾದದಲ್ಲಿ ಅಳವಡಿಸಲಾಗಿದೆ.

कन्नड-भाषा ने संसार की समस्त भाषाओं कॊ अपने ’उदर’ में आश्रय दिया है । यह कथन क्या सत्य है ?

कन्नड -भाषा को करॊडों वर्षॊं का इतिहास है  ।  क्या यह विचार आप को  ज्ञात है ?

इस र्पाचीन  साहित्य  कृति में  विश्व की ७१८ भाषावों के साहित्य का सार है ।  यह बात, क्या सच है ?

संसारके  समस्त ज्ञान -विज्ञान  , मत-धर्म , कला मॆ संम्बंधित सारॆ विवरण  इस  सिरिभूवलय काव्य में निहित हुए है? । क्या यह सच है ?

सर  १९५३ में अक्षर रूप मॆं  प्रकाशित हुआ यह  आश्चर्यपूर्ण काव्य को  कन्नड-  सरस्वत  लॊक ने  काली-कोठरी में  क्यॊं रखा है ?

गत ६० वर्ष से कन्नड-साहित्य क्षॆत्र के विद्वानॊं को यह सिरिभूवलय कव्य को अर्थ न हॊने का कारण क्या है ?

इस ग्रंथ के संषॊधन  से  संबन्धित  सुप्रसिद्ध  इतिहस प्राध्यापक डा॥  एस . श्रीकंठशास्त्रीजी के  सत्य निष्ट वास्तव  विचार  क्या है ?

वास्तव में विश्व विद्यलयॊं ने  इस ग्रंथ का संशॊधन कार्य  संपन्न किया  हो तॊ  कई  भाषाओं के हजारॊं छात्रॊं के  शॊधकार्य में पूर्णावधि  कार्यक्रम मिलॆगा ।
ಸರಳಪರಿಚಯಕಾರರ ಇಚ್ಛೆಯಂತೆ ನಾನು ಈ ಮಹಾನ್ ಕೃತಿಯ ಭಾವಾನುವಾದಕ್ಕೆ ಕೈಹಾಕಿದ್ದೇನೆ.  ಇಷ್ಟು ವ್ಯಾಪಕವಾದ ಪರಿಚಯ ಕೃತಿಯ ಭಾವಾನುವಾದದ ಕಾರ್ಯ ಕಠಿಣವಾದುದು, ಆದರೂ ನನ್ನ ಶಕ್ತ್ಯಾನುಸಾರವಾಗಿ ಇದನ್ನು ನಿರ್ವಹಿಸಿದ್ದೇನೆ.  ಸುಧಾರ್ಥಿಯವರು ಹಾಗೂ ಅವರ ಪತ್ನಿ ಶ್ರೀಮತಿ ಗಿರಿಜಾಶಂಕರ್ ಅವರಿಗೆ ಧನ್ಯವಾದಗಳನ್ನರ್ಪಿಸಿದ್ದೇನೆ ಎಂಬ ಮಾತುಗಳನ್ನು ಭಾವಾನುವಾದಕರು  ದಾಖಲಿಸಿದ್ದಾರೆ.
  ’भूमिका’  ಎಂಬ ಶೀರ್ಷಿಕೆಯಲ್ಲಿ ಸುಧಾರ್ಥಿಯವರು ಈ ಯೋಜನೆಯನ್ನು ಕುರಿತಂತೆ ತಮ್ಮ  ಅನಿಸಿಕೆಗಳನ್ನು ಸೂಚಿಸಿ, ನೆರವಾದವರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.
’सर्वभाषामयी  भाषा  सिरिभूवलय की एक विहंगम दृष्टि अथवा एक झांकी’ (ग्रंथ का उदय तथा  विकास) ಎಂಬ ಶೀರ್ಷಿಕೆಯಲ್ಲಿ  ಸಂಬಂಧಿಸಿದ ಮಾಹಿತಿಯನ್ನು ವಿವರಿಸಲಾಗಿದೆ.  ’सिरिभूवलय का कुछ ब्यॊरा’ ಎಂಬ ಶೀರ್ಷಿಕೆಯಲ್ಲಿ  ಕೇವಲ ೫ ಪುಟಗಳವ್ಯಾಪ್ತಿಯಲ್ಲಿ  ವ್ಯಾಪಕವಾದ ಮಾಹಿತಿಯನ್ನು ನೀಡಲಾಗಿದೆ.
’सिरिभूवलय का स्वरूप , निर्माण , वृद्धि, तथा  बची हुई रीति’  ಎಂಬ ಶೀರ್ಷಿಕೆಯಲ್ಲಿ  ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯೊಂದಿಗೆ ಕನ್ನಡದ ಮೂಲ ಸಾಹಿತ್ಯವನ್ನು ದೇವನಾಗರೀ ಲಿಪಿಯಲ್ಲಿ ಸೂಚಿಸುವ ಮೂಲಕ ಭಾವಾನುವಾದವನ್ನು ನೀಡಿ ಹಿಂದೀಭಾಷಿಕರಿಗೆ ಮೂಲಕೃತಿಯನ್ನು ಕುರಿತು ಹೆಚ್ಚಿನ ಪರಿಚಯಾಗುವಂತೆ ಮಾಡಲಾಗಿದೆ.
संशॊधन , संरक्षण , सिरिभूवलय मॆ आयुर्वॆद ,  सिरिभूवलय मॆ  विज्ञान ,  सिरिभूवलय मॆ धर्म , ಎಂಬ ಶೀರ್ಷಿಕೆಗಳಡಿಯಲ್ಲಿ ಸಂಬಂಧಿಸಿದ ವಿಷಯಗಳ ಮಾಹಿತಿಯನ್ನು ಸೂಕ್ತವಾಗಿ ಪರಿಚಯಿಸಲಾಗಿದೆ.
ಮುಂದೆ    सर्वभाषामयीभाषा  सिरिभूवलय ग्रंथ का स्थूलपरिचय’  ಎಂಬ ಶೀರ್ಷಿಕೆಯಲ್ಲಿ  प्रथम अध्याय ದಿಂದ तैंतीस्वा  अध्याय ದ ವರೆವಿಗಿನ ಮೂಲಕಾವ್ಯದ ಸಾರವನ್ನುಸಂಗ್ರಹಿಸಿ,  ಸಂಕ್ಷಿಪ್ತವಾದ ಭಾವಾನುವಾದವನ್ನು ನೀಡಲಾಗಿದೆ.
ಈ ಪ್ರಯತ್ನದಿಂದಾಗಿ ಹೆಚ್ಚಿನ ಶ್ರಮವಿಲ್ಲದೇ ಆಸಕ್ತಿ ಇರುವ ಹಿಂದೀಭಾಷಾ ಓದುಗರು ಈ ಕನ್ನಡದ ಅಚ್ಚರಿಯ ಕಾವ್ಯವನ್ನು ಕುರಿತು ಅಮೂಲ್ಯವಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿಯಾದರೂ  ಸಮರ್ಪಕವಾಗಿ ಪಡೆಯಲು ಸಹಕಾರಿಯಾಗಿದೆ.  ಕೆಲವೊಂದು ಪ್ರಮುಖ ಮಾಹಿತಿಗಳನ್ನು ಅಲ್ಲಲ್ಲೇ  ಸಂಕ್ಷಿಪ್ತವಾಗಿ ’ಮಂಜೂಷ’ ರೂಪದಲ್ಲಿ ನೀಡಲಾಗಿದೆ.
’कुमुदॆंदु मुनीजी की रचना सिरिभूवल की एक झांकी  ಎಂಬ ಶೀರ್ಷಿಕೆಯಲ್ಲಿ  ಹಿಂದೀಭಾಷಾ ಓದುಗರಿಗೆ  ಈ ಕನ್ನಡಕಾವ್ಯದ ಸೊಬಗನ್ನು ಮೂಲರೂಪದಲ್ಲೇ ಸವಿಯಲು ಅನುಕೂಲವಾಗುವಂತೆ ಕಾವ್ಯಾರಂಭದ ಮೊದಲ ಶ್ಲೋಕರಿಂದ ಪ್ರಾರಂಭಿಸಿ  ೩೩ನೇ ಅಧ್ಯಾಯದವರೆಗಿನ ಸಾಹಿತ್ಯದಲ್ಲಿ ೪೮ ಪ್ರಮುಖ ಸಾಂಗತ್ಯ ಪದ್ಯಗಳನ್ನು ಆಯ್ಕೆಮಾಡಿ, ದೇವನಾಗರಿಲಿಪಿಯಲ್ಲೂ. ಅವುಗಳ  ಭಾವಾರ್ಥವನ್ನು ಹಿಂದೀಭಾವಾನುವಾದವಾಗಿ  ಸುಮಾರು ೧೪ ಪುಟಗಳ ವ್ಯಾಪ್ತಿಯಲ್ಲಿ ನೀಡಲಾಗಿದೆ. 
’ द्वितीय खंड श्रुतावतार वदनरंगस्थलाधिकार  का  प्रथम् ’स’ अध्याय’  ಎಂಬ ಶೀರ್ಷಿಕೆಯಲ್ಲಿ  ಸಿರಿಭೂವಲಯದ ದ್ವಿತೀಯಖಂಡ ಶ್ರುತಾವತಾರ ವದನರಂಗಸ್ಥಲಾಧಿಕರವೆಂಬ ’ಸ’ ಅಧ್ಯಾಯವನ್ನು ಕುರಿತು ವಿವರಿಸಲಾಗಿದೆ. ಸಿರಿಭೂವಲಯದಲ್ಲಿ ೭೧೮ ಭಾಷೆಗಳ ಸಾಹಿತ್ಯವಿರುವುದೆಂಬ ಹೇಳಿಕೆಯನ್ನು ಅಲ್ಲಗಳೆಯುತ್ತಿದ್ದ ಅಂದಿನ ವಿದ್ವಾಂಸರ ಗಮನ ಸೆಳೆಯಲು ಈ ಮಾಹಿತಿಯನ್ನು ಮುಂದಾಗಿ ಪ್ರಕಟಸಲಾಗಿತ್ತು. ಇದರಲ್ಲಿನ ಮಾಹಿತಿಗಳನ್ನು ಈಲ್ಲಿ ದಾಖಲಿಸಲಾಗಿಲ್ಲ.  ಬದಲಿಗೆ ಜಗತ್ತಿನಲ್ಲಿ ಅಮೂಲ್ಯವಾಗಿರುವ ಅಕ್ಷರ ಸಾಹಿತ್ಯವು ನಾಶವಾಗದರೀತಿಯಲ್ಲಿ ಅವುಗಳನ್ನು ಅಂಕಿಗಳಲ್ಲಿ ಕಟ್ಟಿಡುವ ಉದ್ದೇಶದಿಂದ ರಾಶಿ ರಾಶಿಯಾಗಿ ಅಂಕಗಳನ್ನು ಸೃಷ್ಟಿಸಿ, ಈ ಅಂಕಕಾವ್ಯವನ್ನು ರಚಿಲಾಗಿರುವ ಮಾಹಿತಿಯನ್ನು ಸೂಚಿಸಲಾಗಿದೆ. ಸಿರಿಭೂವಲಯದ ಪ್ರಚಾರಕರಾದ ಸುಧಾರ್ಥಿಯ ಸಂಕ್ಷಿಪ್ತ ಪರಿಚಯವನ್ನು ನೀಡಲಾಗಿದೆ.  ಕೊನೆಯಲ್ಲಿ ಕನ್ನಡ ಅಂಕಿಗಳ ಉಗಮ ಹಾಗೂ ವಿಕಾಸಕ್ಕೆ ಸಂಬಂಧಿಸಿದ ಚಿತ್ರ  ಹಾಗೂ ಕನ್ನಡ ಅಕ್ಷರ ಚಕ್ರದ ಒಂದು ಚಿತ್ರವನ್ನೂ ನೀಡಲಾಗಿದೆ. (ಮುಂದುವರೆಯುವುದು) 
                                                               -ಜಮದಗ್ನಿಸುತ.

ಸಿರಿಭೂವಲಯದ ಒಳನೋಟ**

***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ***
ಭಾಗ: ೭

**ಸಿರಿಭೂವಲಯದ ಒಳನೋಟ**

ಸಿರಿಭೂವಲಯವನ್ನು ಕುರಿತು  ಸುಧಾರ್ಥಿಯು ರೂಪಿಸಿದ ೬ನೇ ಸರಳಪರಿಚಯಕೃತಿ ’ಸಿರಿಭೂವಲಯದ ಒಳನೋಟ’  ಬೆಂಗಳೂರಿನ  ಪಂ|| ಎ. ಶಾಂತಿರಾಜಶಾಸ್ತ್ರಿ ಟ್ರಸ್ಟಿನವರ ಮೂಲಕ ಪ್ರಕಟವಾಗಿರುವ ಈ ಕೃತಿಯು  ಟ್ರಸ್ಟಿನ ನೀತಿ, ನಿಲುವುಗಳಿಗನುಗುಣವಾಗಿಯೇ ರೂಪಿತವಾಗಿದ್ದರೂ, ”ಈ ಕೃತಿಯಲ್ಲಿ  ಪ್ರತಿಪಾದಿತವಾಗಿರುವ ವಸ್ತು, ವಿಷಯ, ವಿಚಾರಗಳು ಲೇಖಕರ ಅಭಿಪ್ರಾಯವಾಗಿರುತ್ತವೆಯೇ ಹೊರತು,ಈ ಕೃತಿಯನ್ನು ಪ್ರಕಾಶಿಸಿರುವ ಧರ್ಮಸಂಸ್ಥೆಯ(ಟ್ರಸ್ಟಿನ) ಅಭಿಪ್ರಾಯವಲ್ಲ. ಈ ಅಭಿಪ್ರಾಯಗಳಿಗೆ ಧರ್ಮಸಂಸ್ಥೆ ಯವುದೇ ರೀತಿಯ ಹೊಣೆಯಲ್ಲ”  ಎಂಬ ಮುಂಜಾಗ್ರತೆಯ ಸೂಚನೆಯನ್ನು ನಮೂದಿಸಿರುವುದು ವಿಶೇಷವಾಗಿದೆ! 
ಯಾವುದಾದರೂ ರಾಷ್ಟ್ರವಿರೋಧಿ ಬರಹಕ್ಕೆ ಪತ್ರಿಕಾಸಂಪಾದಕರು ಲೇಖನದ ಸಂಪೂರ್ಣ  ಹೊಣೆಗಾರಿಕೆಯನ್ನು ಲೇಖಕನ ಮೇಲೆ ಹೊರಿಸುವ ಸಂಪ್ರದಾಯವನ್ನು ಇದು ನೆನಪಿಸುತ್ತದೆ!! ಕುಮುದೇಂದು ಮುನಿಯಂಥ ಸರ್ವಜ್ಞಸ್ವರೂಪಿಯಾದ ಜಗದ್ವಿಖ್ಯಾತ ಕವಿಯ ಕಾವ್ಯವನ್ನು ಸರಳವಾಗಿ ಪರಿಚಯಿಸುವ ಕಿರುಹೊತ್ತಿಗೆಯು ಇಷ್ಟೊಂದು ’ಭಯೋತ್ಪದಕ’ ಎನಿಸುವುದಾಗಿದ್ದರೆ, ಪ್ರಕಾಶಕರು ಇದರ ಪ್ರಕಟಣೆಯನ್ನೇ ಕೈ ಬಿಡಬಹುದಿತ್ತು!! 
 ಈ ಕಿರುಹೊತ್ತಿಗೆಯು ೨೦೧೨ರಲ್ಲಿ ಪ್ರಕಟವಾಗಿದೆ.  ಕ್ರೌನ್ ೧/೪ ಅಳತೆಯ ಸುಮಾರು ೧೨೮ ಪುಟಗಳವ್ಯಾಪ್ತಿಯ ಈ ಕಿರುಹೊತ್ತಿಗೆಯಲ್ಲಿ ಪೀಠಿಕೆ, ಸಿರಿಭೂವಲಯದ ಒಂದು ಪಕ್ಷಿನೋಟ,  ಸಿರಿಭೂವಲಯಕುರಿತು ಸ್ವಲ್ಪ ವಿವರ, ಸಿರಿಭೂವಲಯದ ಸ್ವರೂಪ, ಹುಟ್ಟು-ಬೆಳವಣಿಗೆ: ರಕ್ಷಣೆ, ಸಿರಿಭೂವಲಯದಲ್ಲಿ ದೊರೆಯುವ ಅಂತರ್ಸಾಹಿತ್ಯ ದರ್ಶನ, ಸಿರಿಭೂವಲಯದಲ್ಲಿ  ಪ್ರಕಟವಾಗಿರುವ ಅಂತರ್ಸಾಹಿತ್ಯದ ಕಿರುಪರಿಚಯ, ಅಧ್ಯಾಯ ೧ ರಿಂದ ೩೩ ರ ವರೆವಿಗೆ ಪ್ರತಿಯೊಂದು ಪೂರ್ಣಪದ್ಯದ  ೨೭ನೇ ಅಕ್ಷರಹಿಡಿದು  ಕೆಳಗೆ ಸಾಗಿದಾಗ ದೊರೆಯುವ  ಸಂಸ್ಕೃತಭಾಷಾ ಸಾಹಿತ್ಯ.  ಐದನೇ ಅಧ್ಯಾಯಾಂತರ್ಗತ ಸಂಸ್ಕೃತ ಸಾಹಿತ್ಯ, ೧೨ನೇ ಅಧ್ಯಾಯದ ಪಾದಪದ್ಯಗಳೂ ಸೇರಿದಂತೆ ಪೂರ್ಣಪದ್ಯಗಳಲ್ಲಿ  ಅಶ್ವಗತಿಯಲ್ಲಿ ಸಾಗಿದಾಗ ಸಿಗುವ ಕನ್ನಡಸಾಹಿತ್ಯ, ೨೦ನೇ ಅಧ್ಯಾಯಾಂತರ್ಗತ ಕನ್ನಡಸಾಹಿತ್ಯ, ೨೨ನೇ ಅಧ್ಯಾಯಾಂತರ್ಗತ ಕನ್ನಡ ಸಾಹಿತ್ಯ.  ೨೩ನೇ ಅಧ್ಯಾಯಾಂತರ್ಗತ ಕನ್ನಡ ಸಾಹಿತ್ಯ. ೧೬ನೇ ಅಧ್ಯಾಯಾಂತರ್ಗತ ಕನ್ನಡ ಸಾಹಿತ್ಯ. ೨೯ನೇ ಅಧ್ಯಾಯಾಂತರ್ಗತ ಕನ್ನಡ ಸಾಹಿತ್ಯ. ಅನುಬಂಧ, ೧. ದ್ವಿತೀಯಖಂಡದ  ವದನರಂಗಸ್ಥಲಾಧಿಕಾರವೆಂಬ ಒಂದನೇ  ’ಸ್’ ಅಧ್ಯಾಯ, ಸಿರಿಭೂವಲಯ ಕುರಿತು ಒಂದು ಪತ್ರಿಕೆಯ ಅನಿಸಿಕೆ, ಕಂಪ್ಯೂಟರ್ ಕ್ಷೇತ್ರದಲ್ಲಿ ಕನ್ನಡದ ಮಹತ್ವ,  ಸಿರಿಭೂವಲಯದ ಕೆಲವು ಸಾಂಗತ್ಯಪದ್ಯಗಳು,  ಸಿರಿಭೂವಲಯದ ಮೂಲಚಕ್ರಗಳನ್ನು ಓದುವಕ್ರಮ, ಇತ್ಯಾದಿ ಶೀರ್ಷಿಕೆಗಳಲ್ಲಿ  ವಿವರಗಳನ್ನು ರೂಪಿಸಲಾಗಿದೆ.
’ಕನ್ನಡದವೇದ’ ಎಂದು ಪರಿಗಣಿಸಬೇಕಿರುವ ಸಿರಿಭೂವಲಯದಲ್ಲಿ ಉಪನಿಷತ್ತುಗಳಿಗೆ ಸೇರಿದ ಹಲವಾರು ಮಹತ್ತರವಾದ ಮಹಿತಿಗಳು ಸರಳವಾದ ಕನ್ನಡಭಾಷ್ಯಲ್ಲಿ ನಿರೂಪಿತವಾಗಿವೆ.  ಕೇವಲ ಉಪನಿಷತ್ತುಗಳ ಮಾಹಿತಿ ಮಾತ್ರವಲ್ಲ. ಕವಿಯು ಸಿರಿಭೂವಲಯದಲ್ಲಿ ಒಂದೆಡೆ ’ಋಗ್ಮಂತ್ರ’ವು ಉಗಮವಗುವ ಸ್ಥಳವನ್ನು ಕುರಿತು  ಖಚಿತವಾದ ಸುಳಿವು ನೀಡಿರುವುದೂ ಇದೆ.  ೧೯೫೩ರರ ಅಕ್ಷರ ಅವತರಣಿಕೆಯ ಸಿರಿಭೂವಲಯವು ಪ್ರಕಟವಾದ ತರುಣದಲ್ಲಿ ’ಸತ್ಯ’ ಎಂಬ ಪತ್ರಿಕೆಯು  ಸಿರಿಭೂವಲಯಕಾವ್ಯದಲ್ಲಿ ಋಗ್ಮಂತ್ರಗಳು ಅಡಕವಾಗಿರುವ ವಿಚಾರ ಸೂಚಿಸುವಲ್ಲಿ ’ಋಗ್ವೇದದ ಪ್ರಾಚೀನತ್ವದಲ್ಲಿ ಶಂಕೆ ಉಳಿದಿಲ್ಲ. ಈಗಿರುವ ಶಾಕಲ ಸಂಪಾದಿತ ಋಗ್ವೇದವು ’ಅಗ್ನಿಮೀಳೇ’ ಎಂಬ ಮಂತ್ರದಿಂದ ಪ್ರಾರಂಭವಾಗುತ್ತದೆ.  ಸಿರಿಭೂವಲಯದಲ್ಲಿ ಮೂಲ ಋಗ್ವೇದವನ್ನು ಕೊಡುವೆನೆಂದು ಕವಿ ತಿಳಿಸಿದ್ದಾನೆ. ಅವನ ಪ್ರಕಾರ ಋಗ್ವೇದ ’ಓಂ ತತ್ಸವಿತುಃವರೇಣ್ಯಂ’ ಎಂಬ ಗಾಯತ್ರೀಮಂತ್ರದಿಂದ ಪ್ರಾರಂಭವಗುತ್ತದೆ ಎಂದು ಹೇಳಲಾಗಿದೆ. ಹೆಚ್ಚಿನ ವಿವರಗಳು ದೊರೆಯಬೇಕಿದೆ.
 ಋಗ್ವೇದದ ಮೊದಲಮಂತ್ರ ಅಗ್ನಿಮೀಳೆ ಅಲ್ಲ;  ’ಓಂತತ್ಸವಿತುಃವರೇಣ್ಯಂ’  ಎಂಬ ಗಾಯತ್ರೀ ಮಂತ್ರ ಎಂದಮಾತ್ರಕ್ಕೆ ಪ್ರಮಾದವೇನೂ ಇಲ್ಲ.... ಹಿಂದಿದ್ದುವೆಂದು ಹೇಳಲಾಗುವ ಅನೇಕ ಪುಸ್ತಕಗಳು ಈಗ ದೊರೆಯುವುದೇ ಇಲ್ಲ! ಅವುಗಳಲ್ಲಿ ಕೆಲವಾದರೂ ಸಿರಿಭೂವಲಯದಲ್ಲಿ ಅಡಗಿ ಕೊಂಡಿದ್ದು ಸಿರಿಭೂವಲಯದ ಮೂಲಕ ಬೆಳಕು ಕಾಣುವುದಾದರೆ ಯಾರಿಗೆ ಬೇಡ? ..... ಹಾಗಲ್ಲದೇ  ”ಬೋದ್ಧಾರೋಮತ್ಸರಗ್ರಸ್ತಾಃಪ್ರಭವಃಸ್ಮಯದೂಷಿತಾಃ| ಅಬೋಧೋಪಹತಾಶ್ಚನ್ಯೇ ಜೀರ್ಣಮಂಗೇ ಸುಭಾಷಿತಂ|” ಎಂಬ ಭರ್ತೃಹರಿಯ ವ್ಯಂಗ್ಯೋಕ್ತಿ ಸಿರಿಭೂವಲಯದ ಬಗ್ಗೆಯದರೂ ಚರಿತಾರ್ಥವಾಗದಿರಲೆಂದು ನಾವು ಆಶಿಸುತ್ತೇವೆ” ಎಂದು ಸಿರಿಭೂವಲಯಕುರಿತು ಅಂದಿನ ಪರಿಸರವನ್ನು ಚಿತ್ರಿಸಿರುವುದಿದೆ. ಇದೇ ಪರಿಸರವು ಇಂದಿಗೂ ಮುಂದುವರೆದಿದೆ! ಪ್ರಾಯಶಃ ಮುದೆಯೂ ಇದೇ ಮುಂದುವರೆಯುವುದು ಖಚಿತವೇನೋ!?
ಸಿರಿಭೂವಲಯಕ್ಕೆ ಸಂಬಂಧಿಸಿದ ಮಾಹಿತಿಗಳು, ಈ ಕಾವ್ಯಾವಲೋಕನಕ್ಕೆ ಅಗತ್ಯವಾದ ಪೂರ್ವಸಿದ್ಧತೆ,  ಕಾವ್ಯದ ಓದಿಗೆ ಅಗತ್ಯವಾದ ಮಾರ್ಗದರ್ಶನ ಮುಂತಾದುವುಗಳನ್ನು ಅಳವಡಿಸಿ, ಆಸಕ್ತರು ತಾವೇ ಸ್ವತಂತ್ರವಾಗಿ ಕಾವ್ಯಾಧ್ಯಯನಕ್ಕೆ ಪ್ರಯತ್ನಿಸಬಹುದಾದ ಸ್ತರದಲ್ಲಿ ಈ ಪರಿಚಯಕೃತಿಯನ್ನು ರೂಪಿಸಲಾಗಿದೆ.  ಈ ಪರಿಚಯಕೃತಿಯನ್ನೇ ಓದಿ ತಿಳಿಯಲಾಗದವರು ಇನ್ನು ಸಿರಿಭುವಲಯದ  ಅಧ್ಯಯನ ಹಾಗೂ ಸಂಶೋಧನೆಯತ್ತ ಗಮನಹರಿಸುವುದು ಕನಸಿನಮಾತೆನಿಸುತ್ತದೆ! 
ಈ ಸರಳ ಪರಿಚಯವು ಪ್ರಕಟವಾಗಿ ಸುಮಾರು ೮ ವರ್ಷಗಳು ಕಳೆದರೂ ಕನ್ನಡನಾಡಿನ ಯಾವುದೇ ಸಮುದಾಯದವರೂ ಇವುಗಳ ವಿಚಾರವಾಗಿ ಯೋಚಿಸುವ ಗೋಜಿಗೇ ಹೋಗದಿರುವುದು ಕನ್ನಡ ಸಾರಸ್ವತಲೋಕದ ಹಿರಿಮೆಯಾಗಿದೆ!!!
ಸಿರಿಭೂವಲಯದ ಸರಳಪರಿಚಯದ ಸರಣಿಯಲ್ಲಿ ಆರನೇ ಕೃತಿಯಾಗಿ ಬೆಳಕುಕಂಡ ಈ ಕಿರುಹೊತ್ತಿಗೆಯ ರಚನೆಯು ಪರಿಚಯಕಾರನ ಆತಂರ್ಯಕ್ಕೆ ಅತಿ ಹೆಚ್ಚಿನ ನೋವುತಂದದ್ದಾಗಿದೆ. ಇದನ್ನುಕುರಿತು ಸುಧಾರ್ಥಿಯು ಮುಂದಿನ ಸರಳಪರಿಚಯಕೃತಿಗಳಲ್ಲಿ ಸಾಕಷ್ಟು ವಿವರವಾಗಿ ಸೂಚಿಸಿರುವುದಿದೆ.   ಸಿರಿಭೂವಲಯದ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ ಬೆಳಗಾವಿಜಿಲ್ಲೆಯ  ಚಿಕ್ಕೋಡಿಯನಿವಾಸಿ ಶ್ರೀ ಧರಣೇಂದ್ರಕುಮರ್ ಅವರಿಗೆ  ಏಷ್ಟೇ ಶ್ರಮವಾದರೂ, ಸಿರಿಭೂವಲಯದಂಥ ಜಗದ್ವಿಖ್ಯಾತ ಕಾವ್ಯವನ್ನು ಜೈನಸಮುದಯದಲ್ಲಾದರೂ ಹೆಚ್ಚು ಪ್ರಚುರಪಡಿಸಬೇಕೆಂಬ ಹಂಬಲ.
ಅವರ ಪರಿಚಯದ ದತ್ತಿ ಸಂಸ್ಥೆಯೊಂದರ ಮೂಲಕ ಸಿರಿಭೂವಲಯವು ಪ್ರಕಟವಾದರೆ. ’ಹಲವು ಸಾವಿರ ಸದಸ್ಯರಿಗೆ’ ಉಚಿತವಾಗಿ ಅವುಗಳ  ವಿತರಣೆಯಾಗಿ, ಹೆಚ್ಚು ಪ್ರಚಾರವಾಗುವುದೆಂಬುದು ಹಾಗೂ ಸುಧಾರ್ಥಿಯ ನೇರ ಮಾರ್ಗದರ್ಶನವಿಲ್ಲದೆಯೂ ಯಾರುಬೇಕಾದರೂ  ಈ ಕಾವ್ಯದ ಅಧ್ಯಯನಮಾಡಲು ಹಾಗೂ ಮುಂದಿನ ಸಂಶೋಧನೆ ನಡೆಸಲು ಸಾಧ್ಯವಾಗುವುದೆಂಬುದು  ಅವರ ಭ್ರಮೆಯಾಗಿತ್ತು!
ಬೆಂಗಳೂರಿನ ಪಂಡಿತರತ್ನ  ಎ. ಶಾಂತರಾಜಶಾಸ್ತ್ರಿ ಟ್ರಸ್ಟ್ ನವರೊಂದಿಗೆ ಮಾತನಾಡುವ ಸಲಹೆ ನೀಡಿದರು.
 ಈ ಕಾವ್ಯದ ವಿಚಾರದಲ್ಲಿ ಇಂಥ ಪ್ರಯತ್ನಗಳಾವುವೂ ಫಲಕಾರಿಯಲ್ಲವೆಂಬುದು ಸುಧಾರ್ಥಿಯ ನಿಲುವು. ಆದರೂ ಗೆಳೆತನದ ಒತ್ತಾಯಕ್ಕೆ ಕಟ್ಟುಬಿದ್ದು.   ಬೆಂಗಳೂರಿಗೆಹೋಗಲು ಸಮ್ಮತಿಸಿದ್ದಾಯಿತು. ಮಾತುಕತೆಯ ಸಮಯದಲ್ಲಿ ಸ್ವಾಭಾವಿಕವಾಗಿಯೇ ಅವರು ಹಾಕಿದ ನಿಬಂಧನೆಗಳು ಸುಧಾರ್ಥಿಗೆ ಸಮ್ಮತವಾಗಲಿಲ್ಲ.  ಕೃತಿಪ್ರಕಟಣೆಗಾಗಿ ಸುಧಾರ್ಥಿಯು ಯಾವುದೇ ಸಂಭಾವನೆಗೂ ಒತ್ತಯಿಸಿರಲಿಲ್ಲ. ಆದರೆ, ಪರಿಚಯಕೃತಿಯಲ್ಲಿ  ಯಾವುದೇ ವಿದ್ವಾಂಸರನ್ನು ಕುರಿತು ಯಾವುದೇ ಆಕ್ಷೇಪಾರ್ಹ ಮಹಿತಿಯೂ ಇರಬಾರದೆಂಬುದು , ಕೃತಿಯನ್ನು ಸೂಕ್ತವಾಗಿ ಪರಿಷ್ಕರಿಸುವ ಹಕ್ಕು ಪ್ರಕಾಶಕರಿಗಿರಬೇಕೆಂಬುದು ಟ್ರಸ್ಟ್ ನವರ ಅಪೇಕ್ಷೆ!
ಇದರಿಂದ ಬರಹದಲ್ಲಿ ಬಿಗಿತಪ್ಪುವುದೆಂಬುದು ಸುಧಾರ್ಥಿಯ ನಿಲುವು. ಈ ವಿಚಾರವಾಗಿ ಬರಹಗಾರ ಹಾಗೂ ಪ್ರಕಾಶಕರನ್ನು ಒಪ್ಪಿಸುವ ವಿಚಾರದಲ್ಲಿ ಧರಣೇಂದ್ರಕುಮರರ ಪ್ರಯತ್ನ ಸಫಲವಾಗಲಿಲ್ಲ.   ಮಾತುಕತೆ ವಿಫಲವಾಯಿತು.
ಹಾಸನಕ್ಕೆ ಹಿಂದಿರುಗಿದಮೇಲೆ ವಿಚಾರತಿಳಿದ ಶ್ರೀಮತಿ ಗಿರಿಜಾ ಅವರು  ’ಸಿರಿಭೂವಲಯದ ಸಂಶೋಧನೆಯ ವಿಚಾರಕ್ಕೆ ಸಂಬಂಧಿಸಿ ಯಾವುದೇ ಮಾಹಿತಿಯನ್ನೂ ಸೂಚಿಸದೇ,  ಕೇವಲ ಕಾವ್ಯದ ವಿಚಾರಮಾತ್ರ ಪರಿಚಯಿಸಿ ಕೃತಿರಚನೆ ಮಾಡಿದಲ್ಲಿ ಅದನ್ನು ಪರಿಷ್ಕರಿಸುವ ಸಂಭವವೇ ಇರದೆಂದು  ಸೂಕ್ತವಾದ ಸಲಹೆನೀಡಿದರು.  ಹೊಸದಾಗಿ ಮತ್ತೆ ಬರೆಯುವ ವಿಚಾರದಲ್ಲಿ ಸುಧಾರ್ಥಿಗೆ ಆಸಕ್ತಿ ಇರಲಿಲ್ಲವಾದರೂ, ಇದೂ ಒಂದು ಹೊಸಪ್ರಯೋಗ. ಏಕಮಾಡಬಾರದೆಂಬ ವಿಚಾರ ಎದುರಾಯಿತು.  ಇದನ್ನು ಧರಣೇಂದ್ರಕುಮಾರರ ಗಮನಕ್ಕೆ ತಂದಾಗ, ಅವರಿಗೆ ಸಂತಸವಾಯಿತು. ಆದಷ್ಟು ಬೇಗ ಬರೆದು ಮುಗಿಸಿ, ಎಂದು ಸಲಹೆನೀಡಿದರು.
ಟ್ರಸ್ಟಿನವರ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಅತ್ಯಲ್ಪ ಕಾಲಾವಧಿಯೊಳಗೇ ’ ಸಿರಿಭೂವಲಯದ ಒಳನೋಟ’  ಸಿದ್ಧವಾಗಿ,  ಪ್ರಕಾಶಕರ ಕೈಸೇರಿತು.
ಸಿರಿಭೂವಲಯಕುರಿತು ಸಿದ್ಧವಾಗಿದ್ದ ಮೂರು ಪರಿಚಯಕೃತಿಗಳು ಮುದ್ರಣವಾಗಿ, ದಿನಾಂಕ ೨೦-೦೧-೨೦೧೨ ರಂದು ಅವು ಹಾಸನದ ವೇದಸುಧೆಯ ಈಶಾವಾಸ್ಯದಲ್ಲಿ  ಲೋಕರ್ಪಣೆಗೊಂಡದ್ದೂ ಅಯಿತು.  ಐದಾರು ತಿಂಗಳು ಕಳೆದರೂ,  ಬೆಂಗಳೂರಿನ ಪ್ರಕಾಶಕರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ!  ಅವರಿಗೆ ಈ ಕೃತಿಯನ್ನು ಪ್ರಕಟಿಸಲು ತೊಂದರೆ ಇದ್ದಲ್ಲಿ  ತಿಳಿಸಲಿ, ನಾನೇ ಅದನ್ನೂ ಪ್ರಕಟಿಸುವೆ ಎಂದು ತನ್ನ  ಮಿತ್ರರಿಗೆ ಸುಧಾರ್ಥಿ ಸೂಚಿಸಿದ್ದೂ ಆಯಿತು!
ಸುಮಾರು ಒಂದು ವರ್ಷದ ಅವಧಿಯನಂತರ ’ಸಿರಿಭೂವಲಯದ ಒಳನೋಟ’ ಪ್ರಕಟವಾಗುವ  ಸೂಚನೆ ಕಾಣಿಸಿತು! ದಿನಾಂಕ ೧೪-೧೦-೨೦೧೨ರಂದು  ಬೆಂಗಳೂರಿನಲ್ಲಿ ಒಂದು ’ಸ್ಮರಣೀಯ’ ಸಮಾರಂಭದಲ್ಲಿ ಈ ಪರಿಚಯ ಕೃತಿಯು ಬೆಳಕು ಕಾಣಲಿರುವ   ಆಹ್ವಾನಪತ್ರ ಹಾಗೂ ’ನಿಮಗೆ ಸನ್ಮಾನವನ್ನೂ ಏರ್ಪಡಿಸಲಾಗಿದೆ ಬನ್ನಿ’ ಎಂಬ ಪ್ರತ್ಯೇಕ ಚೀಟಿಯು ತಲುಪಿತು!
೧೦೮ ಮುನಿಶ್ರೀ ಪುಣ್ಯಸಾಗರ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅದ್ದೂರಿಯ ಆಹ್ವಾನಪತ್ರಿಕೆಯಲ್ಲಿ ಸಾಧ್ಯವಿರುವಷ್ಟೂ ಅತಿಸಣ್ಣ ಅಕ್ಷರದಲ್ಲಿ ಶ್ರೀ ಸುಧಾರ್ಥಿ ಹಾಸನ ಅವರ ’ಸಿರಿಭೂವಲಯದ ಒಳನೋಟ’  ಕೃತಿ ಬಿಡುಗಡೆ ಎಂಬ ಮಾಹಿತಿಯನ್ನು ಹುಡುಕಿ ನೋಡಬೇಕಿತ್ತು!!
 ಆಹ್ವಾನ ಪತ್ರಿಕೆಯಲ್ಲಿ ಈ ಮಹಿತಿಯ ವಿಚಾರ ಎಲ್ಲಾದರೂ ಹೋಗಲೀ, ಜಗದ್ವಿಖ್ಯಾತ ಕವಿ ಕುಮುದೇಂದುವಿನ ಹೆಸರಿಗೂ  ಅಲ್ಲಿ ಪ್ರವೇಶವಿರಲಿಲ್ಲ!! ಬರಹಗಾರನನ್ನು ಸನ್ಮಾನಿಸುವ ಮಾಹಿತಿಯೂ ಇಲ್ಲ!! ಸಮಾರಂಭಕ್ಕೆ ಹೋಗುವುದೋ ಬೇಡವೋ ಎಂಬ ಸಮಸ್ಯೆ ಎದುರಾಯಿತು.
೨೦೧೦ರಲ್ಲಿ ’ಸಿರಿಭೂವಲಸಾರ’ ಪ್ರಕಟವಾದಾಗ ಆ ಟ್ರಸ್ಟ್  ನವರಿಂದ ಆಹ್ವಾನ ಪತ್ರಿಕೆಯೂ ಇರಲಿಲ್ಲ!! ಕಾರ್ಯಕ್ರಮದ ಸ್ಥಳ, ಸಮಯ ಕೇಳಿದಾಗ, ’ಅಂತರ್ಜಾಲತಾಣದಲ್ಲಿದೆ ನೋಡಿ’  ಎಂದು ಅವರು ಉತ್ತರಿಸಿದ್ದರು!  ಈ ಟ್ರಸ್ಟ್ ನವರು ನಿಮಗಾಗಿಯಲ್ಲವಾದರೂ  ಗಣ್ಯರ ಸಲುವಾಗಿ ಅದ್ಧೂರಿಯ ಆಹ್ವಾನಪತ್ರಿಕೆ ಮಾಡಿಸಿದ್ದಾರೆ!   ಯಾವುದೋ ನಿಗೂಢ ಉದ್ದೇಶದಿಂದ ಈ ರೀತಿವ್ಯವಸ್ಥಿತವಾಗಿ ನಡೆದಿದೆ.  ಏನಾದರಾಗಲೀ ಕಾರ್ಯಕ್ರಮಕ್ಕೆ ಹೋಗಿ ಬರುವುದು ಸೂಕ್ತ ಎಂದು ಹಿತೈಷಿಗಳು ಸೂಚಿಸಿದರು.
ಅಂದಿನ ಕಾರ್ಯಕ್ರಮದ ಪ್ರಾರಂಭಕ್ಕೆ ಸ್ವಲ್ಪ ಮುಂಚಿತವಾಗಿಯೇ ಸುಧಾರ್ಥಿಯು ಸಭಾಂಗಣಕ್ಕೆ ಪ್ರವೇಶಿಸಿದ್ದಾಯಿತು. ಪರಿಚಯದ ಮಿತ್ರರೊಬ್ಬರು ಈತನನ್ನು ಸಭಾಂಗಣದ  ಪಕ್ಕಕ್ಕೆ ಕರೆದೊಯ್ದು,  ’ನಿಮಗೆ ವೇದಿಕೆಯಮೇಲೆ ಆಸನವಿಲ್ಲ. ಸಭಿಕರೊಂದಿಗೇ ಕುಳಿತಿರಬೇಕು. ಸನ್ಮಾನಕ್ಕೆ ಹೆಸರು ಸೂಚಿಸಿದಾಗಲಷ್ಟೇ ವೇದಿಕೆಯಮೇಲಕ್ಕೆ ಹೋಗಬೇಕು. ಇಬ್ಬರು ಪೊಲೀಸ್ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿರುತ್ತಾರೆ.  ಹಲವಾರು ಜನ ಪೊಲೀಸರು ಮಫ್ತಿಯಲ್ಲಿ ಸಭಿಕರಾಗಿದ್ದಾರೆ. ಹಂ.ಪ. ನಾಗರಾಜಯ್ಯನವರು ನಿಮ್ಮ ಪುಸ್ತಕದ ವಿಚಾರವಾಗಿ ಮಾತನಾಡುತ್ತಾರೆ.  ಅವರು ಏನೇ ಮಾತನಾಡಿದರೂ ನೀವು ಯಾವುದೇ ಪ್ರತಿಕ್ರಿಯೆ ತೋರಿಸಬೇಡಿ. ನಿಮ್ಮ ಪಕ್ಕದಲ್ಲಿ ಕುಳಿತವರು ಅದನ್ನು ಗಮನಿಸುತ್ತಾರೆ. ದಯವಿಟ್ಟು ಯಾವುದೇ ಅಸಮಧಾನವನ್ನೂ ವ್ಯಕ್ತ ಪಡಿಸಬೇಡಿ’ ಎಂದು ಕಿವಿಮಾತು ಹೇಳಿ ಮುನ್ನೆಚ್ಚರಿಕೆ ನೀಡಿದರು!!
ಅಲ್ಲಿಗೆ ಅಗಮಿಸಿದ ಟ್ರಸ್ಟ್ ನವರು ಸುಧಾರ್ಥಿಯನ್ನು ಗುರುತಿಸಿ, ಸಭಾಂಗಣಕ್ಕೆ ಕರೆದೊಯು, ಪ್ರೇಕ್ಷರ ಸಾಲಿನಲ್ಲಿ ಕುಳ್ಳಿರಿಸಿದರು. ನಾಲ್ಕು ಕೃತಿಗಳ ಬಿಡುಗಡೆ ಹಾಗೂ ೯೦ ಜನ ಪ್ರತಿಭಾವಂತ ವಿಧ್ಯಾರ್ಥಿಗಳನು ಪುರಸ್ಕರಿಸುವಕಾರ್ಯಕ್ರಮವಿದ್ದ ಕಾರಣದಿಂದ ಸಾವಿರಾರು ಪ್ರೇಕ್ಷಕರಿಂದ ಸಭಾಂಗಣವು  ತುಂಬಿ ತುಳುಕುತ್ತಿತ್ತು.  ಕಾರ್ಯಕ್ರಮದ ನಿಯೋಜಿತ  ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಅಂದಿನ ವೇದಿಕೆಯಲ್ಲಿ ಸಿರಿಭೂವಲಯಕ್ಕೆ ಸಂಬಂಧಿಸಿದ ಕೃತಿಯಲ್ಲದೇ, ಬೇರೆ ಮೂರು ಮರುಮುದ್ರಿತ ಕೃತಿಗಳ ಬಿಡುಗಡೆಯಾಗಲಿದ್ದುವು.  ನಾಲ್ಕು ಕೃತಿಗಳನ್ನು ಕುರಿತು ಮಾತನಾಡಿದ ಶ್ರೀ ಹಂಪನಾ ಅವರು ಮೂರು ಕೃತಿಗಳ ವಿಚಾರವಾಗಿ ನಾಲ್ಕು ನಾಲ್ಕು ಮಾತುಗಳನ್ನಾಡಿ, ’ಸಿರಿಭೂವಲಯದ ಒಳನೋಟದ’ ವಿಚಾರಕ್ಕೆ ಪ್ರವೇಶಿಸಿದರು.   
’ ಎಷ್ಟೇ ಒತ್ತಾಯವಿದ್ದರೂ ನಾನು ಸಿರಿಭೂವಲಯದ ವಿಚಾರವಾಗಿ ಬಾಯಿಮುಚ್ಚಿಕೊಂಡಿದ್ದೆ.  ಇಂದು ಪ್ರಥಮಬಾರಿಗೆ ವೇದಿಕೆಯಿಂದ ಮಾತನಾಡುತ್ತಿದ್ದೇನೆ. ಇದಕ್ಕೆ ಕಾರಣ: ಶ್ರೀ . ಎಂ. ಜಯಚಂದ್ರ ಅವರು.  ’ಕಳೆದ ೫೦  ವರ್ಷಗಳಿಂದ ನೀವು ಸಿರಿಭೂವಲಯದ ವಿಚಾರವಾಗಿ  ಮೌನವಾಗಿದ್ದೀರಿ. ಹೀಗೇ ಸುಮ್ಮನಿದ್ದರಾಗುವುದಿಲ್ಲ. ವಾಸ್ತವ ಸಂಗತಿ ತಿಳಿಸಿ, ಈಗಲಾದರೂ ಏನಾದರೂ ಹೇಳಿ’ ಎಂದು ಒತ್ತಾಯಿಸಿದ ಕಾರಣದಿಂದ  ಮೊದಲಬರಿಗೆ ವೇದಿಕೆಯಿಂದ ಸಿರಿಭೂವಲಯ ಕುರಿತು ಮಾತನಾಡಲಿದ್ದೇನೆ’ ಎಂದು ಸೂಚಿಸಿ,  ’೧೯೫೦ ರಿಂದ ಸಿರಿಭೂವಲಯದ ವಿಚಾರ ಪ್ರಚಾರದಲ್ಲಿದೆ. ಈ ವಿಚಾರವಾಗಿ  ಹಾಸನದ ಸುಧಾರ್ಥಿಯವರು .  ವಿಸ್ತಾರವಾಗಿ ಬರೆದಿದ್ದಾರೆ.
ಕಲ್ಪನೆಯಿಂದ ಭಾವನಾತ್ಮಕವಾಗಿ ವಿಹರಿಸುವವರಿಗೆ ಇದು ಇಷ್ಟವಾಗುತ್ತದೆ. ಅದರೆ, ಸ್ಪಷ್ಟವಾದ ಇತಿಹಾಸದ ವಿವರಗಳು ದೊರೆತಿಲ್ಲ.  ಎಲ್ಲವೂ ಕಲ್ಪನೆಯಿಂದ ಕೂಡಿದ್ದು.  ಈ ಸಿರಿಭೂವಲಯಗ್ರಂಥಕ್ಕೆ ಮುಖ್ಯವಾದ ಚೌಕಟ್ಟು ನೀಡಿದವರು ಯಲ್ಲಪ್ಪಶಾಸ್ತ್ರಿಯವರು.  ಈ ವಿಚಾರವಾಗಿ ಸುಧಾರ್ಥಿಯವರು ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳನ್ನು ನಾನು ಓದಿದ್ದೇನೆ. ....... ಸಿರಿಭೂವಲಯದಲ್ಲಿ ಏನಿದೆ ಎಂಬುದನ್ನು ಎಲ್ಲರೂ ಒಪ್ಪುವಂತೆ ಸಾಧಿಸಿ ತೋರಿಸಬೇಕು. ಅದಿನ್ನೂ ಅಗಿಲ್ಲ! 
ಏನೇ ಇರಲೀ, ಸುಧಾರ್ಥಿಯವರು ಕಳೆದ ೨೫ ವರ್ಷಗಳಿಂದ ವ್ರತವಾಗಿ- ನೋಂಪಿಯಗಿ ಆಚರಿಸಿ ಈ ಪರಿಚಯಕೃತಿಗಳನ್ನು ಬರೆದಿದ್ದಾರೆ. ಅದಕ್ಕಾಗಿ ಸುಧಾರ್ಥಿಯವರನ್ನು ಜೈನ ಸಂಪ್ರದಾಯದವರುಮಾತ್ರವಲ್ಲ, ಎಲ್ಲರೂ ಅಭಿನಂದಿಸಿ, ಬೆನ್ನು ತಟ್ಟಬೇಕು’ ಎಂಬುದು ಹಂಪನಾ ಅವರ ಅಂದಿನ ಭಾಷಣದ ಸಾರಾಂಶ.            ( ಇದನ್ನು ಕುರಿತು ಸಮಗ್ರವಾದ ಮಹಿತಿಗಳನ್ನು ಸೂಚಿಸಿ, ಅಂತರ್ಜಾಲತಾಣದಲ್ಲೂ,  ಮುಂದೆ  ೨೦೧೩ರಲ್ಲಿ ಪ್ರಕಟವಾದ  ’ಸಿರಿಭೂವಲಯಸಗರರತ್ನಮಂಜೂಷ’ ದಲ್ಲಿಯೂ ವಿವರವಾದ ಮಾಹಿತಿಯನ್ನು ನೀಡಲಾಗಿದೆ.  ಇಲ್ಲಿಗೆ ಅಗತ್ಯವಾದಷ್ಟು ಮಾಹಿತಿಗಳನ್ನು ಮಾತ್ರ ಇಲ್ಲಿ ಸೂಚಿಸಲಾಗಿದೆ. ವಿವರಗಳನ್ನು ನೋಡಬಯಸುವವರು  ಮೇಲೆ ಸೂಚಿಸಿರುವೆಡೆಯಲ್ಲಿ ಇವುಗಳನ್ನು ಗಮನಿಸಬಹುದಾಗಿದೆ)
ಅಂದಿನ ಸಮಾರಂಭದಲ್ಲಿ ಹಂಪನಾ ಅವರ ಭಾಷಣವು ಮುಕ್ತಾಯವಾದನಂತರ ಲೇಖಕನನ್ನು ಸನ್ಮಾನಿಸಲು ವೇದಿಕೆಗೆ ಆಹ್ವಾನಿಸಲಾಯಿತು.  ಲೇಖಕನು ವೇದಿಕೆಗೆ ಆಗಮಿಸಿದ ಕೂಡಲೇ  ಹಂಪನಾ ಅವರು ಆತನ ಕೈ ಕುಲುಕಿ ಅಭಿನಂದಿಸಿ, ’ಬಹಳ ಒಳ್ಳೆಯ ಕೆಲಸಮಾಡಿದ್ದೀರಿ.  ಸಿರಿಭೂವಲಯ ಕುರಿತ ನಿಮ್ಮ ಪರಿಚಯಗ್ರಂಥಗಳ ರಚನೆ ತುಂಬ ಶ್ಲಾಘನೀಯ. ಈ ಪ್ರಯತ್ನ ನಿಲ್ಲಿಸಬೇಡಿ. ಮುಂದುವರೆಸಿ’ ಎಂದು ಸಾಂಪ್ರದಾಯಿಕವಾಗಿ  ಅಭಿನಂದಿಸಿದ್ದಾಯಿತು. ಆದರೆ, ಈ ಅಭಿನಂದನೆಯ ಮಾತುಗಳು ಸಭಿಕರನ್ನು ತಲುಪಲು  ಅವಕಾಶವಿರಲಿಲ್ಲ ಮೈಕಾಸುರನ ಕುತ್ತಿಗೆಯನ್ನು ಹಿಸುಕಿ ನಿಷ್ಕ್ರಿಯಗೊಳಿಸಲಾಗಿತ್ತು!!
ಲೇಖಕನಿಗೆ ಸನ್ಮಾನವಾದನಂತರ ಅದಕ್ಕೆ ಕೃತಜ್ಞತೆ ಸೂಚಿಸಿ ಎರಡುಮಾತನಾಡಲೂ ಅವಕಾಶವಿರಲಿಲ್ಲ! ಹಂಪನಾ ಅವರ ಭಾಷಣದ ಅನಿಸಿಕೆಗೆ ಪ್ರತ್ಯುತ್ತರ ಕೊಡಲೂ ಲೇಖಕನಿಗೆ ಅವಕಾಶವಿರಲಿಲ್ಲ!!  ಒಂದು ರೀತಿಯಲ್ಲಿ ಎದುರಾಳಿಯ ಕೈಕಾಲುಗಳನ್ನು ಕಟ್ಟಿಹಾಕಿ, ಎಲ್ಲರೆದುರಿಗೆ ಅವನ ಕೆನ್ನೆಗೆ ಚೆನ್ನಾಗಿಬಾರಿಸಿ, ಬುದ್ಧಿವಾದ ಹೇಳಿದಂಥ ಅನುಭವ ಸುಧಾರ್ಥಿಗಾಯಿತು!
ಕುಮುದೇಂದುಮುನಿಯು ಬಳಸಿರುವ ’ಸಾಂಗತ್ಯ ಛಂದಸ್ಸಿನ’ ಸ್ವರೂಪವನ್ನು ಎಷ್ಟೇ ಸಾವಿರ ಸಲ ಹೇಳಿದರೂ ಕನ್ನಡ ವಿದ್ವಾಂಸರು  ’ಸಾಂಗತ್ಯ ಛಂದಸ್ಸು ೧೫ನೇ ಶತಮನದಿಂದ ಈಚೆಗೆ ಪ್ರಚಾರಕ್ಕೆ ಬಂದದ್ದು. ಆದ್ದರಿಂದ  ಸಾಂಗತ್ಯಛಂದಸ್ಸಿನ ಸಿರಿಭೂವಲಯವು  ೯ ನೇ ಶತಮಾನದ್ದಲ್ಲ’ ಎಂಬ ತುತ್ತೂರಿಯನ್ನು ಊದುತ್ತಲೇ ಇದ್ದಾರೆ. ಹಂಪನಾ ಅವರೂ  ಅಂದಿನ ವೇದಿಕೆಯಲ್ಲಿ ಇದನ್ನೇ ಮರುಪ್ರಸಾರಮಾಡಿದರು!
ಕೃತಿರಚನೆಯ ಕಾಲದವಿಚಾರವಾಗಿ ಸಾಂಗತ್ಯ ಛಂದಸ್ಸಿನ ಸ್ವರೂಪದ ವಿಚಾರವಾಗಿ ಸ್ವತಃ ಕವಿಯೇ  ನೀಡಿರುವ ಖಚಿತಮಾಹಿತಿಗಳಿಗಿಂತಲೂ, ಇಂದಿನ ವಿಶ್ವ ವಿದ್ಯಾಲಯದ ಮೇಧಾವಿ ಪ್ರಾಧ್ಯಾಪಕರುಗಳ ಊಹಾತ್ಮಕವಾದ ಹೇಳಿಕೆಗಳಿಗೇ ಹೆಚ್ಚು ಮಹತ್ವ ನೀಡುವುದಾದಲ್ಲಿ, ಅವರು ತಮ್ಮ ಜೀವಿತದ ಪೂರ್ತಿ ಅದನ್ನೇ ಭಜನೆಮಾಡುತ್ತ ಇರಲಿ!  ಅದರಿಂದ ಸುಧಾರ್ಥಿಗೆ ಅಗುವ ನಷ್ಟ ಯಾವುದೂ ಇಲ್ಲ!! ವಿವೇಕವಿದ್ದವರು ಕವಿಯ ಮಾತಿಗೆ ಕಿವಿಗೊಟ್ಟು ಮಾನ್ಯತೆ ನೀಡಲೀ, ಇಲ್ಲವಾದಲಿ ಇನ್ನೂ ಒಂದೆರಡು ಶತಮಾನಗಳ ಕಾಲ ಈ ಕಾವ್ಯವು ’ಕಬ್ಬಿಣದ ಕಡಲೆ’ಯಾಗಿಯೇ ಉಳಿಯಲಿ!!! ಎಂಬುದು ಈ ಸರಳ ಪರಿಚಯಕಾರನ ನಿಷ್ಠುರದ ನಿಲುವು!!
 ಈ ಕೃತಿಯಲ್ಲಿ ಮುದ್ರಿತ ಪ್ರತಿಗಳಸಂಖ್ಯೆಯನ್ನು ೧೦೦೦ ಎಂದು ನಮೂದಿಸಲಾಗಿದೆ. ಅದನ್ನು ಹಲವು ಸಾವಿರ ಸದಸ್ಯರಿಗೆ ಹಂಚುವುದಾರೂ ಹೇಗೆ!?  ಸಂಸ್ಥೆಯ ಆಜೀವ ಸದಸ್ಯತ್ವ ಪಡೆದ ಹಲವರು ಸುಧಾರ್ಥಿಯೊಂದಿಗೆ  ಇದರ ಪ್ರತಿಗಾಗಿ ಸಂಪರ್ಕಿಸಿದ್ದಿದೆ! ಪ್ರಕಾಶಕರನ್ನು ಸಂಪರ್ಕಿಸಲು ಹೇಳಿದ್ದಾಯಿತು!! 
ಕಳೆದ ೬೫ ವರ್ಷಗಳಿಂದಲೂ ಸಿರಿಭೂವಲಯದ ವಿಚಾರದಲ್ಲಿ ಅಸಮರ್ಪಕವಾಗಿ ವ್ಯವಹರಿಸಿರುವ ವಿದ್ವಾಸರೆಲ್ಲರ ಅನಿಸಿಕೆಗಳಿಗೂ ’ಸಿರಿಭೂವಲಯಸಾರ’ ದಲ್ಲಿ ಸೂಕ್ತವಾಗಿ ಪ್ರತಿಕ್ರಿಯಿಸಿದ್ದಾಗಿತ್ತು.  ಇದುವರೆವಿಗೆ ಹಂಪನಾ ಅವರು ಈ ವಿಚಾರವಾಗಿ ಬಾಯಿಬಿಚ್ಚಿರಲಿಲ್ಲ! ಈಗ ಬಿಚ್ಚಿದರು, ಈಮೂಲಕ ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿದ್ದಾಯಿತು.  ಇನ್ನು ಮುಂದೆ ಈ ಕಾವ್ಯದ ವಿಚಾರವಾಗಿ ಯಾರು ಏನುಬೇಕಾದರೂ ಹೇಳಿಕೊಳ್ಳಲಿ, ಅನಗತ್ಯವಾಗಿದ್ದಲ್ಲಿ ಅದಕ್ಕೆ ತಾನು ಪ್ರತಿಕ್ರಿಯಿಸುವುದು ಬೇಕಿಲ್ಲ ಎಂಬುದು ಸುಧಾರ್ಥಿಯ ಈಚಿನ ನಿಲುವಾಗಿದೆ! (ಮುಂದುವರೆಯುವುದು) 
                                     -ಜಮದಗ್ನಿಸುತ.

ಸಿರಿಭೂವಲಯಸಾಗರರತ್ನಮಂಜೂಷ

***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ***
ಭಾಗ: ೮.

** ಸಿರಿಭೂವಲಯಸಾಗರರತ್ನಮಂಜೂಷ**

ಪ್ರಿಯ ಓದುಗರೇ,
ಈಗ ನೀವು ಓದಲಿರುವ ಪರಿಚಯಕೃತಿಯ ರಚನೆಯು ಒಂದು ಮಹತ್ವಪೂರ್ಣವಾದುದು. ಈಕಾರಣದಿಂದಾಗಿ ನೇರವಾಗಿ ಕೃತಿಯವಿಚಾರ ವಿವರಿಸದೇ ಇದರ ರಚನೆಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಮೊದಲಿಗೆ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.
೧೯೫೩ರಲ್ಲಿ ಬೆಂಗಳೂರಿನ ಸರ್ವಾರ್ಥಸಿದ್ಧಿಸಂಘದವರು ’ಸಿರಿಭೂವಲಯ’ ಎಂಬ ಪ್ರಾಚೀನ ಅಂಕಕಾವ್ಯದ ಅಕ್ಷರ ಅವತರಣೆಕೆಯನ್ನು ಪ್ರಕಟಿಸಿ, ಅದನ್ನು ನಾಡಿನ ವಿದ್ವನ್ಮಣಿಗಳು ಮಾನ್ಯಮಾಡದೇ ನಿರಾಕರಿಸಿದನಂತರ, ಸುಮಾರು ಅರ್ಧ ಶತಮಾನದಮೇಲೆ  ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದವರು ಸಾಕಷ್ಟು ಪೂರ್ವ ಸಿದ್ಧತೆಯ ಮೂಲಕ ಸಿರಿಭೂವಲಯದ ಮರುಮುದ್ರಣಕಾರ್ಯವನ್ನು ಪ್ರಾರಂಭಿಸಿ ಇಲ್ಲದ ಇತಿಹಾಸವನ್ನು ನಿರ್ಮಾಣಮಾಡುವ ಸನ್ನಾಹದಲ್ಲಿರುವ ವೇಳೆಗೆ ಈ ಸಿರಿಭೂವಲಯವೆಂಬ ಕಾವ್ಯವು ಒಂದು ನಿಗೂಢಗಳ ಮಡುವಾಗಿತ್ತು.
ಸ್ವಲ್ಪ ಆಸಕ್ತಿವಹಿಸಿದರೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದ್ದ ಈ ಕಾವ್ಯದ ಅಂತರಂಗವನ್ನರಿಯಲು ಯಾರೂ ಮುಂದಾಗಿರಲಿಲ್ಲ.  ನಾಡಿನ ಹೆಸರಾಂತ ವಿದ್ವಾಂಸರ ಸಮೂಹವೇ ಪುಸ್ತಕಶಕ್ತಿಯವರ ಬೆಂಬಲಕ್ಕೆ ನಿಂತಾಗ,  ಈ ಕಾವ್ಯದ ನಿಗೂಢ ರಹಸ್ಯಗಳೆಲ್ಲವೂ ಬಯಲಾಗುವುದೆಂಬ ಭ್ರಮೆಯನ್ನು ಉಂಟುಮಾಡಲಾಯಿತು.
೧೯೫೩ ರ ಪ್ರಥಮಮುದ್ರಣದಲ್ಲಿ ಸಮಾವೇಶವಾಗಿದ್ದ   ಪ್ರಥಮ ಖಂಡದ ೩೩ ಅಥಾಯಗಳಪೈಕಿ ೨೦ ಅಧ್ಯಾಯಗಳನ್ನು ಸಾಕಷ್ಟು ಅಧ್ವಾನವಾಗಿ ಮರುಮುದ್ರಣಮಾಡುವುದರೊಳಗಾಗಿಯೇ ಅವರ ಇಲ್ಲದ ಇತಿಹಾಸ ಸೃಷ್ಟಿಸುವ ಸಾಹಸಕ್ಕೆ ಪಾರ್ಶ್ವವಾಯು ಹೊಡೆದಂತಾಯಿತು.  ಹಾಸನದ ಸುಧಾರ್ಥಿಯು ಈ ೩೩ ಅಧ್ಯಾಯಗಳಿಗೆ ಸಂಬಂಧಿಸಿದ ಅಂತರ್ಸಾಹಿತ್ಯವನ್ನು ಹುಡುಕಿ ಪ್ರತ್ಯೇಕವಾಗಿ ಪ್ರಕಟಿಸಿದನಂತರ ಸಾಮಾನ್ಯವಾಗಿ ಎಲ್ಲರಿಗೂ ಈ ಸಿರಿಭೂವಲಯವೆಂಬ ಅಚ್ಚರಿಯಕಾವ್ಯದ ಅಂತರಂಗವು ಬಹಿರಂಗವಾಯಿತು!  ಇಷ್ಟೆಲ್ಲ ಚಟುವಟಿಕೆಗಳು ನಡೆದರೂ ಅವೆಲ್ಲವೂ ಕೇವಲ ಪ್ರಥಮಖಂಡದ ೩೩ ಅಧ್ಯಾಯಗಳಿಗೆ ಸೀಮಿತವಾಗಿಯೇ ಸುತ್ತಾಡುತ್ತಿತ್ತು!
ಸಾಹಿತ್ಯಾಸಕ್ತಿಯಿರುವ ಯಾವೊಬ್ಬ ಸಾಮಾನ್ಯ ಬರಹಗರನಕೈಗೂ ಸಿಗದಂತೆ ರಹಸ್ಯವಾಗಿ ಮುಚ್ಚಿರಿಸಲಾಗಿದ್ದ  ೩೪ರಿಂದ ೫೯ನೇ ಅಧ್ಯಾಯದವರೆಗಿನ ಅಕ್ಷರ ರೂಪದ ಮೂಲಸಾಹಿತ್ಯವು ತೀರ ಅನಿರೀಕ್ಷಿತವಾಗಿ ಸುಧಾರ್ಥಿಯ ಕೈಗೆ ಸಿಕ್ಕಿದ ಕೂಡಲೇ ಅದನ್ನು ಸೂಕ್ತವಾಗಿ ವಿಶ್ಲೇಷಿಸುವ ಕಾರ್ಯವು ಪ್ರಾರಂಭವಾಯಿತು.
 ಮೈಮೇಲೆ ದೆವ್ವ ಹಿಡಿದವನಂತೆ ಈ ಸುಧಾರ್ಥಿಯು ಹಗಲಿರುಳೆನ್ನದೇ ಈ ಸಿರಿಭೂವಲಯ ಸಾಗರದಲ್ಲೇ ಮುಳುಗಿದ ಫಲವಾಗಿ ಅತ್ಯಲ್ಪಕಾಲವಧಿಯಲ್ಲೇ  ೩೪ ರಿಂದ ೫೦ ನೇ ಅಧ್ಯಾಯದ ವರೆಗಿನ ಮೂಲಸಾಹಿತ್ಯವನ್ನು ಕಲ್ಲಿನಗಾಣಕ್ಕೆ ಹಾಕಿ ಅದರಲ್ಲಿರುವ ರಸವನ್ನು ಹೊರತೆಗೆಯುವ ಕಾರ್ಯವು ಮುಂದುವರೆಯಿತು. ಇದರಿಂದಾಗಿ   ಸುಧಾರ್ಥಿ ದಂಪತಿಗಳಿಗೆ ಜಗತ್ತನ್ನೇ ಜಯಿಸಿ ತಮ್ಮ ಸ್ವಾಧೀನಕ್ಕೆ ಪಡೆದಷ್ಟು ಆನಂದವುಂಟಾಯಿತು. ಈ ಆನಂದದ ಮನಸ್ಥಿತಿಯಲ್ಲೇ ಪ್ರೊ|| ಜಿ . ವೆಂಕಟಸುಬ್ಬಯ್ಯನವರನ್ನು ಕಂಡು ಈಗ ಹೊಸದಾಗಿ ಬೆಳಕುಕಂಡ ಮಾಹಿತಿಗಳ ವಿವರವನ್ನು ಅವರಿಗೆ ವಿವರಿಸಿದ್ದಾಯಿತು.
ನಿಜಕ್ಕೂ ಆ ಹಿರಿಯಜೀವಕ್ಕೆ ಆದ ಆನಂದವು ಸುಧಾರ್ಥಿದಂಪತಿಗಳ ಆನಂದದ ಪರಿಧಿಯನ್ನೂ ಮೀರಿತ್ತು! ನೂತನವಾಗಿ ಬೆಳಕಿಗೆಬಂದ ಮಾಹಿತಿಗಳನ್ನೆಲ್ಲ ಸೂಕ್ತವಾಗಿ ಅಳವಡಿಸಿ ಪ್ರಕಟಣೆಗೆ ಸಿದ್ಧಪಡಿಸಲು ಸುಮಾರು ೪-೫ ತಿಂಗಳ ಅವಧಿಯಾದರೂ ಬೇಕಿತ್ತು. ಆದರೆ ಪ್ರೊ. ಜಿ.ವಿ ಯವರು ಈ ಪುಸ್ತಕವು ಪ್ರಕಟವಾಗುವುದನ್ನು ತಾವು ನೋಡಬೇಕೆಂದು ಅಪೇಕ್ಷಿಸಿದ ಕಾರಣ ಅಧ್ಯಾಯ ೩೪ ರಿಂದ ೫೦ನೇ ಅಧ್ಯಾಯಕ್ಕೆ ಸಿಮಿತಗೊಳಿಸಿ, ಅಲ್ಲಿನ ಪ್ರಮುಖ ಮಾಹಿತಿಗಳನ್ನು ಪ್ರತ್ಯೇಕವಾಗಿ  ಸಂಗ್ರಹಿಸಿಕೊಟ್ಟು, ಈ ಅಪರೂಪದ ಕೃತಿಗೆ ಮುನ್ನುಡಿ ಬರೆಯಲು  ಅವರನ್ನು ಪ್ರಾರ್ಥಿಸಲಾಯಿತು.
 ಸುಧಾರ್ಥಿದಂಪತಿಗಳು ನಿರೀಕ್ಷಿಸದೇ ಇರುವಷ್ಟು ಶೀಘ್ರವಾಗಿ,  ವ್ಯಾಪಕವಾಗಿ ಈ ಹಿರಿಯಜೀವವು ಅಂಕಿತವಿರಿಸಿದ ’ಮುನ್ನುಡಿ’ಯೊಂದಿಗೆ ಹಸ್ತ ಪ್ರತಿಯು ಮುದ್ರಣಾಲಯಕ್ಕೆ ಸೇರಿತು. ಶ್ರೀಮತಿ ಗಿರಿಜಾಶಂಕರ ಅವರು ಕೃತಿಗೆ ’ಸಿರಿಭೂವಲಯಸಾಗರರತ್ನಮಂಜೂಷ’  ಎಂದು ನಾಮಕರಣಮಾಡಿದರು. ಕ್ಲುಪ್ತಕಾಲಾವಧಿಯೊಳಗಾಗಿಯೇ ಕೃತಿಯ ಮುದ್ರಣಕಾರ್ಯವು ಮುಕ್ತಾಯವಾಯಿತು.
ಬೆಂಗಳೂರಿನ ಚಾಮರಾಜಪೇಟಿಯ  ಶ್ರೀ ಕೃಷ್ಣರಾಜೇಂದ್ರ ಪರಿಷನ್ಮಂದಿರದಲ್ಲಿ ದಿನಾಂಕ: ೧೩-೦೫-೨೦೧೩ ರಂದು ಸೋಮವಾರ ಬೆಳೆಗ್ಗೆ ೧೦-೩೦ಕ್ಕೆ ’ಸಿರಿಭೂವಲಯಸಾಗರರತ್ನಮಂಜೂಷ’ ದ ಲೋಕಾರ್ಪಣೆಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಕ.ಸಾ.ಪದ  ಅಂದಿನ ಅಧ್ಯಕ್ಷರಾಗಿದ್ದ ಪುಂಡಲೀಕ ಹಾಲಂಬಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿತ್ತು.  ಸಮಾರಂಭದ ಆಹ್ವಾನ ಪತ್ರದ ಮುದ್ರಣಕ್ಕೆ ಮೊದಲೇ ಈ ಕಾರ್ಯಕ್ರಮಕ್ಕೆ ಮೊದಲನೆಯ ಆಘಾತ ಎರಗಿತು. !
ಸಮಗ್ರಕರ್ನಾಟಕದ ಮಹಾಜನತೆಗೆ ಭವಿಷ್ಯದಲ್ಲಿ ಮಹೋನ್ನತವಾದ ಹಲವಾರು ’ಭಾಗ್ಯ’ ಗಳನ್ನು ಕರುಣಿಸಲಿದ್ದ ಶ್ರೀ ಸಿದ್ಧರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ತೆಗೆದು ಕೊಳ್ಳುವ ಕಾರ್ಯಕ್ರಮವು ಅದೇ ದಿನಕ್ಕೆ ಏರ್ಪಾಡಾಗಿತ್ತು!   ಈ ಕಾರ್ಯಕ್ರಮವನ್ನು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು.  ಈ ಅದ್ದೂರಿಯ ಸಮಾರಂಭಕ್ಕೆ   ಬೆಂಗಳೂರಿನಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿದ್ದ ವ್ಯಕ್ತಿಗಳನ್ನು   ಆಗ್ರಹಪೂರ್ವಕವಾಗಿ ಆಹ್ವಾನಿಸಲಾಗಿತ್ತು! ಅಂಥವರ ಪೈಕಿ ಈ ಸಿರಿಭೂವಲಯಸಾಗರರತ್ನಮಂಜೂಷದ ಲೋಕಾರ್ಪಣೆಮಾಡಬೇಕಿದ್ದ ಪ್ರೊ. ಜಿ ವೆಂಕಟಸುಬ್ಬಯ್ಯನವರೂ ಒಬ್ಬರು!!
ಅದುವರೆವಿಗೂ ಸಂತೋಷದಿಂದ ಶ್ರಮವಹಿಸಿ ಮಾಡಿದ್ದ ವ್ಯವಸ್ಥೆಗಳೆಲ್ಲವೂ ಅವ್ಯವಸ್ಥೆ ಗೊಂಡಂತಾಯಿತು. ಕೂಡಲೇ ವೆಂಕಟಸುಬ್ಬಯ್ಯನವರು ದೂರವಣಿಯಮೂಲಕ ಸಂಪರ್ಕಿಸಿ, ’ಸರ್ಕಾರದ ಕಾರ್ಯಕ್ರಮ ೧೧-೩೦ಕ್ಕೆ ನಿಗಧಿಯಾಗಿದೆ. ನೀವು ನಿಮ್ಮ ಕಾರ್ಯಕ್ರಮವನ್ನು  ೯-೩೦ಕ್ಕೆ ಪ್ರಾರಂಭಿಸಿ,  ಅಷ್ಟರೊಳಗೆ ಮುಕ್ತಾಯಮಾಡಿಬಿಡಿ.  ನಾನು ಅಲ್ಲಿಂದಲೇ ಮುಖ್ಯಮಂತ್ರಿಯವರ ಪ್ರಮಾಣವಚನಸಮಾರಂಭಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದು ಮಾರ್ಗದರ್ಶನ ಮಾಡಿದರು. ಅದರಂತೆಯೇ ಆಹ್ವಾನ ಪತ್ರವನ್ನು ಮುದ್ರಿಸಿ, ಅಭಿಮಾನಿಗಳನ್ನು ಸಮಯಕ್ಕೆ ಸರಿಯಗಿ ಆಗಮಿಸಿ ಸಹಕರಿಸಲು ಕೋರಲಾಯಿತು.
ಅನಾರೋಗ್ಯದ ನಿಮಿತ್ತ  ಶ್ರೀ ಪುಂಡಲೀಕ ಹಾಲಂಬಿಯವರು ಸಮಾರಂಭಕ್ಕೆ ಬಾರದಿರುವ ಮಾಹಿತಿ ಬಂದಿತು!  ೯-೩೦ಕ್ಕೆ ಸರಿಯಾಗಿ ಪ್ರೊ|| ಜಿ. ವಿ ಯವರು ಸಭಾಗಣಕ್ಕೆ ಆಗಮಿಸಿದರು.  ನಮ್ಮ ಕಳಕಳಿಯ ಮನವಿ ಏನೇಇದ್ದರೂ, ಸಮಾರಂಭದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಿದ್ದವರೇ ಹಲವರು ಬಂದಿರಲಿಲ್ಲ! ಇನ್ನು ಸಭಿಕರನ್ನು ಅಷ್ಟು ಶೀಘ್ರವಾಗಿ ನಿರೀಕ್ಷಿಸುವುದು ಹೇಗೆ!?
ಅಂತೂ ೧೦ ಗಂಟೆಯವೇಳೆಗೆ  ಹತ್ತಾರು ಜನಗಳು ಸೇರಿದ್ದಾಯಿತು! ಈ ವೇಳೆಗೆ ಕಂಠೀರವ ಕ್ರೀಡಾಂಗಣದ ಸಮಾರಂಭಕ್ಕೆ ಪ್ರೊ|| ಜಿ,ವಿ ಅವರನ್ನು ಕರೆದೊಯ್ಯಲು ಪೊಲೀಸರ ದಂಡೇ ಆಗಮಿಸಿಬಿಟ್ಟಿತು. ತರಾತುರಿಯಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮೊದಲಿಗೆ ಪ್ರೊ. ಜಿ.ವಿ ಅವರು ಸುಧಾರ್ಥಿಯನ್ನು ಅಭಿನಂದಿಸಿ, ಶಾಲುಹೊದಿಸಿ ಆಶೀರ್ವದಿಸಿದ್ದಾಯಿತು!
ಸಂಕ್ಷಿಪ್ತವಾಗಿ ಸಮಾರಂಭವು ಮುಗಿಯಿತೆಂದು ನಿರ್ಧರಿಸಿದ ಪೊಲೀಸರು ಹೊರಡುವ ಆತುರ ಪ್ರಕಟಿಸಿದರು. ಕೆಲವು ನಿಮಿಷಗಳ ಕಾಲಾವಕಾಶ ಕೇಳಿದ ನಮ್ಮ ಮನವಿಗೆ ಪೊಲೀಸರು ಸಹಕರಿಸುವ ಲಕ್ಷಣ ಇರಲಿಲ್ಲ! ಕೂಡಲೇ ಪ್ರೊ. ಜಿ.ವಿ ಯವರೇ ’ಐದು ನಿಮಿಷ ಸಹಕರಿಸಿ, ಪುಸ್ತಕ ಬಿಡುಗಡೆ ಮಾಡಿಬಿಡುತ್ತೇನೆ’ ಎಂದು ಸೂಚಿಸಬೇಕಾಯಿತು.
ಕೂಡಲೇ ವೇದಿಕೆಯಮೇಲೆ ಪೂರ್ಣ ಸಿದ್ಧತೆ ಇಲ್ಲದೆಯೇ, ಪುಸ್ತಕದಕಟ್ಟನ್ನು ಅನಾವರಣಗೊಳಿಸಿ ಕೃತಿಬಿಡುಗಡೆಮಾಡಿಸಿ, ಫೋಟೋ ತೆಗೆಸಿಕೊಂಡದ್ದಾಯಿತು! ಸಿರಿಭೂವಲಯದ ಅಭಿಮಾನಿಯೊಬ್ಬರು ಷಿಲಾಂಗ್ ನಿಂದ ತಂದಿದ್ದ ಕರಕುಶಲಕಲೆಯ ವಿಶಿಷ್ಟ ರೀತಿಯ ಟೋಪಿಯನ್ನು ತೊಡಿಸಿ,  ಪ್ರೊ|| ಜಿ.ವಿ. ಯವರನ್ನು ಸನ್ಮಾನಿಸಲಾಯಿತು.
 ಅಪರಾಧಿಯನ್ನು ಸುತ್ತುವರಿದು ಹೊರಗೆ ಸಾಗಿಸಿಕೊಂಡು ಹೋಗುವ  ಶೈಲಿಯಲ್ಲೇ ಈ ಸಮಾರಂಭದ ಗಣ್ಯ ಅತಿಥಿ ಶತಾಯುಷಿ ಶ್ರೀ ಜಿ.ವಿ ಯವರನ್ನು ಪೊಲೀಸ್ ವಾಹನದತ್ತ ಕರೆದೊಯ್ಯಲಾಯಿತು.  ಕನ್ನಡದ ಸಾಂಸ್ಕೃತಿಕ ಪರಿಸರವು ಹಿಡಿದ ಅವನತಿಯ ಹಾದಿಯನ್ನು ನೆನೆದು ಈ ಕಾವ್ಯದ ಸರಳಪರಿಚಯಮಾಡಿದ ಸುಧಾರ್ಥಿಯ ಕಣ್ಣಂಚಿನಲ್ಲಿ  ಹನಿಯಾಡಿತು.
 ಪ್ರೊ. ಜಿ.ವಿ ಯವರ ಘನೆತೆಗಾಗಿಯಾದರೂ ಈ ಕಾರ್ಯಕ್ರಮದ ಮಾಹಿತಿಯನ್ನು ಪ್ರಕಟಿಸಬೇಕಾದ ಅನಿವಾರ್ಯತೆಗೆ ಸಿಕ್ಕಿದ್ದ ಮಾಧ್ಯಮದವರೂ ಉತ್ಸಾಹದಿಂದ ಪೊಲೀಸ್ ವಾಹನವನ್ನು ಹಿಂಬಾಲಿಸಿ ಹೊರಟರು!,  ನಿಧಾನವಾಗಿ ಸುಮಾರು ನೂರಕ್ಕೂ ಹೆಚ್ಚಿನ ಸಭಿಕರ ಆಗಮನವಾದನಂತರ ಔಪಚಾರಿಕವಾಗಿ ಕಾರ್ಯಕ್ರಮನಡೆಸಿ,  ಬಂದಿದ್ದವರನ್ನು ಸೂಕ್ತವಾಗಿ ಸತ್ಕರಿಸುವ ಕಾರ್ಯವು ಯಾಂತ್ರಿಕವಾಗಿ ಮುಕ್ತಾಯವಾಯಿತು.
 ಆಕ್ಷಣಲ್ಲೇ ಸುಧಾರ್ಥಿಯು ಇನ್ನು ಯಾವಕಾರಣಕ್ಕೂ ಮುಂದೆ ಈ ಪರಿಚಯಕೃತಿಯ ಲೋಕಾರ್ಪಣೆಗೆ ಕಾರ್ಯಕ್ರಮವನ್ನು ನಡೆಸಬಾರದೆಂಬ ನಿರ್ಧಾರ ಮಾಡಿಕೊಂಡದ್ದಾಯಿತು!!  ಎಂಥವರ ಮನಸಿಗೂ ಕ್ಲೇಶ ಉಂಟುಮಾಡುವ ಇಂಥ ಅವ್ಯವಸ್ಥೆಯಲ್ಲಿ  ’ಸಿರಿಭೂವಲಸಾಗರರತ್ನಮಂಜೂಷ’ ದ ಲೋಕರ್ಪಣೆ ಮುಕ್ತಾಯವಾಯಿತು.  ಇಂಥ ಸರಳ ಪರಿಚಯಕೃತಿಯಲ್ಲಿ ಅಡಕವಾಗಿರುವ ಮಾಹಿತಿಗಳ ಸಮೀಕ್ಷೆಯನ್ನು  ಈಗ ಗಮನಿಸೋಣ.
’ಸಿರಿಭೂವಲಯಸಾಗರರತ್ನಮಂಜೂಷ’ವು ಹೆಸರಿಗೆ ತಕ್ಕಂತೆ ಸಾಹಿತ್ಯಸಾಗರದ ರತ್ನಗಳ ಸಂದೂಕವೇ ಆಗಿದೆ,  ಇದರಲ್ಲಿ ಏನೇನು ಅಡಗಿದೆ ಎಂಬುದನ್ನು ನೋಡುವ ಮೊದಲಿಗೆ ಈ ಸರಳಪರಿಚಯಕೃತಿಯ ಹೊರನೋಟವನ್ನು ಕುರಿತು ಸ್ವಲ್ಪ ಪರಿಚಯ ಪಡೆಯೋಣ.  ಡೆಮಿ ೧/೪ ಅಳತೆಯ ಸುಮಾರು ೪೧೫ ಪುಟಗಳ ವ್ಯಾಪ್ತಿಯ ಈ ಕೃತಿಯ ಮುಖಪುಟವು ಈ ಕಾವ್ಯಾಂತರ್ಗತವಾಗಿರುವ ಸೃಷ್ಟಿಸ್ಥಿತಿಲಯಗಳಿಗೆ ಸಂಬಂಧಿಸಿದ ಮಹತ್ತರವಾದ ಮಹಿತಿಗಳನ್ನು ಒಳಗೊಂಡಿದೆ ಎಂಬುದನ್ನು ಸಂಕೇತರೂಪದಲ್ಲಿ ಸೂಚಿಸುವಂತೆ ವಿಶ್ವತರಂಗಗಳೊಂದಿಗೆ ಪಸರಿಸುವ  ಓಂ ಕಾರವು ಅಕಾರ ಉಕಾರ ಮಕಾರಗಳ ಸಂಯೋಗವಾಗಿ ರೂಪುಗೊಂಡಿರುವುದನ್ನು ಪ್ರತಿನಿಧಿಸುವ ಅರ್ಥವತ್ತಾದ ಚಿತ್ರವನ್ನು ಮುಖಪುಟಕ್ಕೆ ರೂಪಿಸಲಾಗಿದೆ.
 ಸಿರಿಭೂವಲಯದ ವರ್ಣಮಾಲೆಯ ಕ್ರಮ ಹಾಗೂ ಅದಕ್ಕೆ ಅನ್ವಯವಾಗುವ ಅಂಕಿಗಳ ಪ್ರಸ್ತುತಿಯೊಂದಿಗೆ  ’ಅರ್ಪಣೆ’ ಎಂಬುದನ್ನು ರೂಪಿಸಿ ( ೧ ೫೪ ೪೮ ೧ ೪೨ ೧೬= ಅ ರ್ ಪ್ ಅ ಣ್ ಎ) ಸಿರಿಭೂವಲಯಕಾವ್ಯವು ಉಗಮವಾಗುವ ಕ್ರಮವನ್ನು ತೋರಿಸಲಾಗಿದೆ!
ಮುನ್ನುಡಿ,  ಓದುಗರೊಂದಿಗೆ, ೩೪ ನೇ ಅಧ್ಯಾಯದಿಂದ ೫೦ ನೇ ಅಧ್ಯಾಯದವರೆಗೆ ಪೂರ್ಣ ಪದ್ಯದ ಅಂತರ್ಸಾಹಿತ್ಯ, ಪಾದ ಪದ್ಯದ ಅಂತರ್ಸಾಹಿತ್ಯ,  ಅಶ್ವಗತಿಯ ಅಂತರ್ಸಾಹಿತ್ಯ, ಸ್ತಂಬಕಾವ್ಯ, ಸರ್ಪಗತಿ, ಜೋಡಿನಾಗರಬಂದ  ಎಂಬ ಕ್ರಮದಲ್ಲಿ ೧೭ ಅಧ್ಯಾಯಗಳಲ್ಲಿ ಉಗಮವಾಗುವ ಅಂತರ್ಸಾಹಿತ್ಯವನ್ನು ವಿಂಗಡಿಸಿ ಮುದ್ರಿಸಲಾಗಿದೆ.  ಈ ೧೭ ಅಧ್ಯಾಯಗಳ ಮೂಲಸಾಹಿತ್ಯದ ಅಕ್ಷರ ಅವತರಣೆಕೆಯು ಮೊಟ್ಟಮೊದಲಬಾರಿಗೆ ಮುದ್ರಣಕ್ರಮದಲ್ಲಿ ಬೆಳಕು ಕಂಡಿರುವುದು ಈ ಪರಿಚಯಕೃತಿಯ ವಿಶೇಷವಾಗಿದೆ.
ಕುಮುದೇಂದುಮುನಿಯು ಪ್ರಶಂಸಿಸಿರುವ ಅದ್ವೈತದ ಸಂಕ್ಷಿಪ್ತರೂಪ. ಕುಮುದೇಂದುಮುನಿಯು  ಸೂಚಿಸಿರುವ ಸಾಯುಜ್ಯಮೋಕ್ಷ ಹಾಗೂ ಇಂದಿನ ಜಗತ್ತು ಸಾಗಿರುವ ಹಾದಿ,  ಪಗಡೆಯಾಟದ ಪ್ರಚೀನತೆ ಹಾಗೂ ಪ್ರಾಮುಖ್ಯತೆ ಮತ್ತು ಶ್ರೀ ಶಂಕರ ಭಗವತ್ಪಾದರ ಮಹತ್ವ, ಫಲಜ್ಯೋತಿಷ್ಯ ಚಕ್ರದ ವಿಚಾರ.  ಸನ್ಯಾಸಾಶ್ರಮ ಜೀವನ ಬಹಳಕಷ್ಟಕರ, ಜೈನಸಂಪ್ರದಾಯದ ಮುನಿಜೀವನ ಬಹಳ ಕಠಿಣ.  ಆಕಾಶದ ವಿಸ್ತಾರ ಹಾಗೂ ಗ್ರಹಗಳ ಚಲನೆಗೆ ಸಂಬಂಧಿಸಿದಂತೆ ಒಂದು ಮಾತು.  ಕನ್ನಡಿಗರೆಲ್ಲರೂ ಗಮನಿಸಲೇ ಬೇಕಾದ ಸಂಗತಿ. ಸಿರಿಭೂವಲಯ ಕುರಿತು ಇತ್ತೀಚಿನ ಬೆಳವಣಿಗೆ,
ಅಭಿಮಾನಿಯೊಬ್ಬರ ಆಸಕ್ತಿಯ ಫಲ.  ಕೃತಿಯ ಮಾಹಿತಿಯನ್ನು ಬೆಳೆಕಿಗೆತಂದುದಕ್ಕೆ  ಕರ್ತೃವಿಗೆ ಕತ್ತಲ ಕೋಣೆಯಲ್ಲಿ ಸನ್ಮಾನ!  ಒಲ್ಲದ ಉಪನ್ಯಾಸಕ್ಕೆ ಸಲ್ಲದ ಸನ್ಮಾನ!! ಧರಣೇಂದ್ರಕುಮಾರರ ಇನ್ನೊಂದು ಸಾರ್ಥಕ ಪ್ರಯತ್ನ. ಕನ್ನಡದ ಪ್ರಾಚೀನತೆ ಹಾಗೂ ಸಿರಿಭೂವಲಯ ಕುರಿತು ಒಂದು ಮಾಹಿತಿ.  ಕುಮುದೇಂದುವಿನ ಸಿರಿಭೂವಲಯವು ಒಂದು  ಶಾಪಗ್ರಸ್ತ ಗ್ರಂಥವೇ?  ಸಿರಿಭೂವಲಯದ ಪರಿಚಯಕೃತಿಗಳ ಚರಿತ್ರೆ.  ಕೊನೆಗೂ ’ಸಿರಿಭೂವಲಯದ ಒಳನೋಟ’ ಪ್ರಕಟವಾಯಿತು!
ಪ್ರೊ. ಹಂಪ ನಾಗರಾಜಯ್ಯನವರು ಮತ್ತು ಸಿರಿಭೂವಲಯ. ಮತಧರ್ಮಗಳಲ್ಲಿ ಮೇಲಾವುದು? ಕೀಳಾವುದು? ಕನ್ನಡದ ಆದಿಕವಿ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯವನ್ನು ಕುರಿತು ಒಂದು ಖಚಿತವಾದ  ಸಂಕ್ಷಿಪ್ತ ಇತಿಹಾಸ..  ಕುಮುದೇಂದುಮುನಿಯ ಸಿರಿಭೂವಲಯ ಒಂದು ಶಾಪಗ್ರಸ್ತ ಗ್ರಂಥವೇ?  ಸಿರಿಭೂವಲಯದ ಸ್ವರೂಪಹಾಗೂ ಉಳಿಸುಬಂದ ಹಾದಿ. ಸಿರಿಭೂವಲಯದ ಮೂಲಚಕ್ರಗಳನ್ನು ಓದುವ ಕ್ರಮ.  ಸಿರಿಭೂವಲಯದಲ್ಲಿ  ಅಡಕವಾಗಿರುವ ಮಾಹಿತಿಗಳಿಂದಾಗಿ ನಮ್ಮ ಧರ್ಮ ಹಾಗೂ ಸಹಿತ್ಯಕ್ಷೇತ್ರದಲಿ ಬುಡಮೇಲಾಗಿ ಬಿದ್ದುಹೋಗಿರುವ ಕೆಲವು ವಿಚಾರಗಳು.  ಕಾಡಿನಲ್ಲಿ ಅರಸುತ್ತಿದ್ದ ಬಳ್ಳಿಯು ಕಾಲಿಗೇ ತೊಡರಿದಾಗ!  ಸಿರಿಭೂವಲಯದ ಸಂಶೋಧನೆಯ ಕನಸು ಅದೆಷ್ಟು ಸುಂದರ!  ಸಿರಿಭೂವಲಯದ ಪರಿಚಯವನ್ನು ಯಾರುಬೇಕಾದರೂ  ಮಾಡಬಹುದಿತ್ತು!
ಜಗತ್ತಿನ ಎಲ್ಲವೂ ಉಗಮವಗಿರುವುದು ಶೂನ್ಯದಿಂದ (ಪೂರ್ಣದಿಂದ); ವಿಲಿನವಾಗುವುದೂ ಶೂನ್ಯದಲ್ಲಿ. ಕೆಲವೊಂದು ಮುಖ್ಯ ವಿಚಾರಗಳು.   ಸಿರಿಭೂವಲಯದ ವಿಶ್ವರೂಪ ಕಲ್ಪನೆ. ಕನ್ನಡದ ಪೂಜಾರಪ್ಪನ ಸಿರಿಭೂವಲಯದ ಮೆಚ್ಚುಗೆ.  ಅಂತರ್ಜಾಲತಾಣದಲ್ಲಿ ಸಿರಿಭೂವಲಯ. ಹಿನ್ನುಡಿ ಮುನ್ನುಡಿಗಳ ಮಡಿಲಲ್ಲಿ.
  ಸಿರಿಭೂವಲಯದ ಮೂಲಪ್ರತಿಯ ನಕಲುಗಳನ್ನು ಕುರಿತ ವಿಚಾರ. ಮುದ್ರಣಕ್ಕೆ ಅಕ್ಷರ ಜೋಡಣೆಯ ವಿಚಾರ. ಸಿರಿಭೂವಲಯದ ಕವಿಕಾವ್ಯಸಾರ. (ಒಂದು ಕಿರು ಕಥನಕಾವ್ಯ) ಸುಧಾರ್ಥಿಯವರ  ಸಾಹಿತ್ಯಕೃತಿಗಳನ್ನು ಕುರಿತು ಕೆಲವು ಅನಿಸಿಕೆಗಳು. ಸಿರಿಭೂವಲಯಸಾರ ಕುರಿತು ಕೆಲವೊಂದು ದೂರವಾಣಿ ಅನಿಸಿಕೆಗಳು. ಮರೆತಮಾತು ಎಂಬುದಾಗಿ ಕೆಲವಾರು ಶೀರ್ಷಿಕೆಗಳಲ್ಲಿ ಸಿರಿಭೂವಲಯದ ಹಾಗೂ ಅದಕ್ಕೆ ಸಂಬಂಧಿಸಿದ ಹಲವಾರು ಆನುಷಂಗಿಕ ವಿಚಾರಗಳನ್ನು ಕುರಿತು ವಿವರಣೆ ನೀಡಲಾಗಿದೆ.
ಪ್ರೊ. ಜಿ. ವಿ ಯವರ ವಿಶೇಷವಾದ, ವಿಸ್ತರವಾದ ಮೌಲಿಕ ಮುನ್ನುಡಿಯು ಈ ಪರಿಚಯಕೃತಿಯ ಮಹತ್ವವನ್ನು ಓದುಗರಿಗೆ ಸುಮರು ೫ ಪುಟಗಳ ವ್ಯಾಪ್ತಿಯಲ್ಲಿ ವಿವರಿಸುವುದಾಗಿದೆ.  ”ಸಿರಿಭೂವಲಯದ ಅಕ್ಷರ ಅವತರಣಿಕೆಯು೧೯೫೩ರಲ್ಲಿ ಪ್ರಕಟವಾದ ಪ್ರಾರಂಭದಲ್ಲಿ ಅದರ ವಿಚಾರವಾಗಿ ಸಾಕಷ್ಟು ಆಳವಾಗಿ ಅಧ್ಯಯನ ನಡೆಸಿ, ತಮ್ಮ ಖಚಿತವಾದ  ಅನಿಸಿಕೆಗಳನ್ನು ವ್ಯಕ್ತಪಡಿಸಿರುವವರಲ್ಲಿ ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು  ಮೊದಲಿಗರು. ಇವರ ಅಲೋಚನೆಯ ಜಾಡನ್ನು ಅನುಸರಿಸಿ, ಕೆ. ಅನಂತಸುಬ್ಬರಾಯರು ನೀಡಿದ ಮಾರ್ಗದರ್ಶನದಲ್ಲಿ  ಮುನ್ನಡೆದು, ಕಾವ್ಯದಲ್ಲಿ ಅಡಗಿರುವ ಅಂತರ್ಸಾಹಿತ್ಯವನ್ನು ಹೊರತೆಗೆದು, ಸಿರಿಭೂವಲಯದ ನಿಜವಾದ  ಅಂತರಂಗವನ್ನು ಪರಿಚಯಿಸುವ ಕಾರ್ಯದಲ್ಲಿ  ಸುಧಾರ್ಥಿಯು ಮೊದಲಿಗನೆಂಬುದು ನಿಜಕ್ಕೂ ಹೆಮ್ಮೆಯಸಂಗತಿಯಾಗಿದೆ.
ಸಿರಿಭೂವಲಯದ ವಿಚಾರವಾಗಿ ಸುಧಾರ್ಥಿಯು ಹೊಂದಿರುವ ಆಸಕ್ತಿಯ ಫಲವಾಗಿ ಈಗ ಸಿರಿಭೂವಲಯದ ಅಭಿಮಾನಿಗಳ ಸಂಖ್ಯೆ ಸಾಕಷ್ಟು ಬೆಳೆದಿದೆ.  ಬೆಳಗಾವಿಯ ಅಭಿಮನಿಯೊಬ್ಬರು ಅಲ್ಲಿನ ಭರತೇಶ ಶಿಕ್ಷಣಸಂಸ್ಥೆಗಳ ಸಮೂಹದ ವತಿಯಿಂದ ಸಿರಿಭೂವಲಯವನ್ನು ಓದುವ ಕ್ರಮ ಕುರಿತು ಆರು ದಿನಗಳ ಅವಧಿಯ ಒಂದು ಕಾರ್ಯಾಗಾರವನ್ನು ಯಶಸ್ವಿಯಗಿ ನಡೆಸಿದ್ದು ಒಂದು ಪ್ರಮುಖಸಂಗತಿ” ಎಂಬುದಾಗಿ ನಮೂದಿಸಿರುವ ಪ್ರೊ|| ಜಿ. ವಿ. ಅವರು  ಪ್ರತಿಯೊಂದು ವಿಚಾರವನ್ನೂ ಬಹಳ ಅಸಕ್ತಿಯಿಂದ ಗಮನಿಸಿ, ಅವುಗಳನ್ನೆಲ್ಲ ತಮ್ಮ ಮುನ್ನುಡಿಯಲ್ಲಿ  ಸಾಕಷ್ಟು ವಿವರವಾಗಿ ನಮೂದಿಸಿರುವುದು  ಗಮನಾರ್ಹವಾದ ಸಂಗತಿಯಾಗಿದೆ. ಆಸಕ್ತಿ ಇರುವವರು ಇದಕ್ಕೆ ಸಂಬಂಧಿಸಿದ ವಿವರಗಳನ್ನು siribhoovalayasaara.blogspot.in ನಲ್ಲಿ ವೀಕ್ಷಿಸಬಹುದು. ಅಥವಾ ಉಪಲಬ್ದವಿರುವ ಪರಿಚಯಕೃತಿಗಳನ್ನು  ದೂರವಾಣಿ ಸಂಖ್ಯೆ ೯೪೪೯೯೪೬೨೮೦ ಮೂಲಕ ಸಂಪರ್ಕಿಸಿ, ಸುಧಾರ್ಥಿಯಿಂದ ಮುಖತಃ ಉಚಿತವಾಗಿ ಪಡೆಯಬಹುದು.
೨೦೧೦ರಲ್ಲಿ ’ಸಿರಿಭೂವಲಯಸಾರ’ವು ಪ್ರಕಟವಾದಂದಿನಿಂದಲೂ ಸುಧಾರ್ಥಿಯು ಸಿರಿಭೂವಲಯದ ಸಂಶೋಧನೆಯಲ್ಲಿ ವಾಸ್ತವವಾಗಿರುವ ಕೆ. ಶ್ರೀಕಂಠಯ್ಯನವರ ಪ್ರಾಮುಖ್ಯತೆಯನ್ನು ಪ್ರತಿಪಾದಿಸುತ್ತ ಬಂದಿರುವುದಾಗಿದೆ. ಈ ಕಾರ್ಯಕ್ಕಾಗಿ ಅವರ ವಂಶದ ಉತ್ತರಾಧಿಕಾರಿಗಳು ಕೃತಜ್ಞರಲ್ಲವಾದರೂ ಸೌಹರ್ಧಮನೋಭಾವ ಹೊಂದಿರಬೇಕಾದುದು ಸಹಜ. ಆದರೆ, ಈ ಕುಟುಂಬದ ಇಂದಿನ ಹಿರಿಯರಾದ ಶ್ರೀ ಕೆ. ನಾಗೇಂದ್ರಕುಮಾರ್ ಎಂಬುವವರು ’ಸಿರಿಭೂವಲಯಸಗರರತ್ನಮಂಜೂಷವು’  ಲೋಕಾರ್ಪಣೆಗೊಂದ ತರುಣದಲ್ಲೇ  ’ಇದೊಂದು ಕೃತಿಚೌರ್ಯ’ ಎಂಬ ಒಂದು ಚುಟುಕು ಬರಹವನ್ನು ದಿನಪತ್ರಿಕೆಯೊಂದರಲ್ಲಿ ಪ್ರಕಟಿಸಿ, ತಮ್ಮ ಬುದ್ಧಿಯನ್ನು ತೋರಿಸಿಕೊಂಡರು!!  ೧೯೯೯ಕ್ಕೆ ಮೊದಲಿನಿಂದಲೂ ಪುಸ್ತಕಶಕ್ತಿಪ್ರಕಾಶನದವರು ಸಿರಿಭೂವಲಯದ ಸಂಶೋಧನೆಗೆ ಸಂಬಂಧಿಸಿದಂತೆ ಇಲ್ಲದ ಇತಿಹಾಸ ನಿರ್ಮಿಸಿ, ಶ್ರೀಕಂಠಯ್ಯನವರ ವಿದ್ವತ್ತಿಗೆ, ಅಪಚರಮಾಡುತ್ತಿದ್ದರೂ ತುಟಿಬಿಚ್ಚದಿದ್ದ ಈ ವಾರಸುದಾರರು ಇದ್ದಕ್ಕಿದ್ದಂತೆಯೇ ಸುಧಾರ್ಥಿಯವಿರುದ್ಧ ಪ್ರಚಾರಕ್ಕೆ ಕೈಹಾಕಿದ್ದು ಗಮನಾರ್ಹ ಸಂಗತಿಯಾಗಿದೆ.  ಕೆ.ಶ್ರೀಕಂಠಯ್ಯನವರು ಸಿದ್ಧಪಡಿಸಿರುವ, ಈ ವರಸುದರರಲ್ಲಿ ಸುರಕ್ಷಿತವಾಗಿರುವ ಸಿರಿಭೂವಲಯದ ಜನತಾಸಂಸ್ಕರಣವು  ರಾಷ್ಟ್ರಕವಿ ಎಂದು ಮನ್ನಣೆಪಡೆದ ಕುವೆಂಪು ಅವರಿಂದ ’ಇದು ವಿಶ್ವವಿದ್ಯಾಲಯದಿಂದ ಪ್ರಕಟವಾಗುವ ಅರ್ಹತೆ ಪಡೆದಿಲ್ಲ’ ಎಂದು ತಿರಸ್ಕೃತವಾಗಿ, ೬೦ ವರ್ಷಗಳಿಗೂ ಸಮಯದಿಂದ ಮುದ್ರಣವಾಗದೇ ಮೂಲೆಗುಂಪಾಗಿದೆ! ಇದರ ಪ್ರಕಟಣೆಗಾಗಿ ಸುಧಾರ್ಥಿಯು ಈ ’ವಾರಸುದಾರ’ ರಲ್ಲಿ ೨೦೧೦ರಿಂದಲೂ ಸತತವಾಗಿ ಮನವಿಸಲ್ಲಿಸಿದ್ದಗಿದೆ. ಆದರೂ ಅದು ಅವರ ಕಿವಿಕೆ ತಲುಪಿಲ್ಲ!! ಕೆ. ಶ್ರೀಕಠಯ್ಯನವರು ರೂಪಿಸಿರುವ ಈ ಜನತಾ ಸಂಸ್ಕರಣದಲ್ಲಿ ಸುಮರು ೨೫೦ ಕ್ಕಿಂತ  ಹೆಚ್ಚಿನ  ಅಧ್ಯಯಸಂಖ್ಯೆ ಇರುವ ಮಹಿತಿಯನ್ನು ಸುಧಾರ್ಥಿಯು  ಅವರ ಕರ್ಲಮಂಗಲದ ಮನೆಯಲ್ಲೇ ಪ್ರತ್ಯಕ್ಷವಾಗಿ ನೋಡಿದ್ದಿದೆ. ಪ್ರಥಮಖಂಡದಲ್ಲಿ ಇರುವುದು ೫೯ ಅಧ್ಯಾಯಗಳುಮಾತ್ರ. ಅಂದಮೇಲೆ ಈ ಜನತಾಸಂಸ್ಕರಣದಲ್ಲಿ ಎರಡನೇ ಖಂಡ ಹಾಗೂ ಅದಕ್ಕೂ ಮುಂದಿನ ಖಂಡಗಳ ಮೂಲಸಹಿತ್ಯವನ್ನು ಕುರಿತು ಕೆ. ಶ್ರೀಕಂಠಯ್ಯನವರು ಸಿರಿಭೂವಲಯದ ಮೂಲಪ್ರತಿಯಿಂದಲೇ ಸಂಗ್ರಹಿಸಿರುವುದಾಗಿದೆ.  ಅದನ್ನು ಯಾರೂ ’ಕೃತಿಚೌರ್ಯ’ ಎಂದು ಆರೋಪಿಸುವಂತಿಲ್ಲ. ಆದರೆ ಈ ವಿಧ್ವಾಂಸರ ವಾರಸುದಾರರುಮಾತ್ರ ಸುಧಾರ್ಥಿಯನ್ನು ಕೃತಿಚೌರ್ಯಮಾಡಿದ್ದಾನೆಂದು ಪ್ರಚಾರಮಾಡಬಹುದು!! ಇಂಥ ಅವಿವೇಕದ ಕಾರಣದಿಂದಾಗಿಯೇ ಸಿರಿಭೂವಲಯವು ಒಂದು ರೀತಿಯ ಶಾಪಕ್ಕೊಳಗಾಗಿದೆಯೆಂದು ಭಾವಿಸುವಂತಾಗಿದೆ.
 ಪರಿಚಯಕೃತಿಯ ಪರಿವಿಡಿಯನ್ನು ಗಮನಿಸಿದಾಗ ’ಕುಮುದೇಂದುಮುನಿಯ ಸಿರಿಭೂವಲಯ ಒಂದು ಶಾಪಗ್ರಸ್ತ ಗ್ರಂಥವೇ? ’ ಎಂಬ ಬರಹವು ಎರಡು ಸಲ ಸೇರಿದಂತೆ ಕಾಣುತ್ತದೆ. ಬರಹಗಳನ್ನು ಮುದ್ರಣಕ್ಕೆ ಸಂಗ್ರಹಿಸುವಲ್ಲಿ  ಸೂಕ್ತವಾಗಿ ಗಮನಿಸದೇ, ಈ ದೋಷವು ತಲೆಯೆತ್ತಿದಂತೆ ಕಾಣುತ್ತದೆ.
’ಭಗವಾನ್  ಶ್ರೀ ವೀರಸೇನಾಚಾರ್ಯೋಪದಿಷ್ಟ  ಸಿರಿ ಕುಮುದೇಂದುಮುನಿ ವಿರಚಿತ  ಸರ್ವಭಾಷಾಮಯೀಭಾಷಾ ಸಿರಿಭೂವಲಯ ಗ್ರಂಥದ ಪ್ರಥಮಖಂದ ೩೪ನೇ  ೨೨ ಓ ಅಧ್ಯಾಯ’ ದ ಮೂಲ ಅಕ್ಷರ ಅವತರಣಿಕೆಯೊಂದಿಗೆ  ಈ ಸರಳ ಪರಿಚಯವು ಪ್ರಾರಂಭವಾಗುತ್ತದೆ.  ಸಿರಿಭೂವಲಯ ಕಾವ್ಯದ ಮೂಲರೂಪವನ್ನು ಸುಂದರವಾಗಿ  ಮುದ್ರಿಸಿರುವುದರೊಂದಿಗೆ ಅದಕ್ಕೆ ಸಂಬಂಧಿಸಿದ ಅಂತರ್ಸಾಹಿತ್ಯವನ್ನು ಈಗಾಗಲೇ ಸೂಚಿಸಿರುವಂತೆ  ’ಅಶ್ವಗತಿ,  ಸ್ತಂಬಕಾವ್ಯ,  ಸರ್ಪಗತಿ ಹಾಗೂ ಜೋಡಿನಾಗರ ಬಂಧ ಕ್ರಮದಲ್ಲಿ ಉಗಮವಾಗುವುದನ್ನು ಪ್ರತ್ಯಕ್ಷವಾಗಿ ತೋರಿಸಲಾಗಿದೆ.  ಸಿರಿಭೂವಲಯಕಾವ್ಯಕ್ಕೆ ನೇರ ಸಂಬಂಧವಿಲ್ಲವಾದರೂ ಆನುಷಂಗಿಕವಾದ ಹಲವಾರು ವಿಚಾರಗಳನ್ನು  ಅಳವಡಿಸಿರುವುದು ಓದುಗರಿಗೆ ಹೆಚ್ಚಿನ ಉಪಯುಕ್ತವೆನಿಸುತ್ತದೆ.
ಸಾಕಷ್ಟು ದೊಡ್ಡದಾದ ಈ ಪರಿಚಯಕೃತಿಯ ಸಮಗ್ರಮಾಹಿತಿಯನ್ನೂ ಇಲ್ಲಿ ಪ್ರತ್ಯೇಕವಾಗಿ ವಿವರಿಸುವುದು ಕಾರ್ಯಸಾಧ್ಯವಿಲ್ಲದ್ದು. ಈ ಕಾರಣದಿಂದಾಗಿ ಅತಿ ಪ್ರಮುಖವೆನಿಸುವಂಥ ಒಂದು ಪ್ರಸಂಗವನ್ನು ಮಾತ್ರ ಇಲ್ಲಿ ಸೂಚಿಸುತ್ತಿದ್ದೇನೆ.
ಸಿರಿಭೂವಲಯಕಾವ್ಯದ ೩೭ ಹಾಗೂ ೩೮ನೇ  ಅಧ್ಯಾಯಗಳಲ್ಲಿ  ಪೂರ್ಣಪದ್ಯಗಳ ಎರಡನೇ ಪಾದದ ಮೊದಲನೇ ಅಕ್ಷರಗಳನ್ನು ಮೇಲಿನಿಂದ ಕೆಳಕ್ಕೆ ಸಾಗುತ್ತಾ ಜೋಡಿಸಿಕೊಂಡಾಗ:
”ಸವೆಸಿಣರಕ್ಷಣೇಯಿಂಅಹವವಾಗಲುಬಿಡದೆದುರ್ವರ್ಣದೆತಾಗುವಕ್ಋಷ್ಣನೀಲಗಳವಶಗೊಂಡುದ್ರವ್ಯಲೇಶ್ಯೆಗಳನುಭಾವದವಿಷಯಕೆಅಳವಡದಂತೆಕಸವನುರಸಮಾಡಿಕಸವರಲೋಹವೆಂಬಸಮಾನಋಕ್ಕುಭೂವಲಯವೇದಘೋಷಣೆಆದಿಸಿದ್ಧಾನ್ತವಓದುವಾ”(೩೮ನೇ ಅಧ್ಯಾಯದ ಇದೇ ಸ್ಥಾನದಲ್ಲಿ ಮುಂದುವರೆದಿದೆ)ಚಾರ್ಯನ ಪಾಠಕಾದಿನ ಬರುವಾಗ ಮಾಂಸ ಮೀನುಪ್ಪುಗಾಯಾದಿ ವ್ಯಾಪಾರವು ಸಲ್ಲ ಗರುವಗೊಟ್ಟಿಗನೂರು ಕೇರಿಯೊಳಿಲ್ಲದ ಸರುವಬಾಡನು ಬಿಟ್ಟಜಿನರು ಅರಹಂತ ರೂಪನಿಲ್ಲಿಯೆ ತೋರುವಗುರುವಿಂದು ಇರಬೇಕಾದವರ್ಗೆಲ್ಲ ಪತಮದಿಢವ್ರತದೊಳು ರಾಜದಂಡವನೆನೆಯ ” ಎಂಬ ಅಕ್ಷರಗಳ ಸರಪಣಿಯು ದೊರೆಯುತ್ತದೆ. ಇದನ್ನು ಕ್ರಮಬದ್ಧವಾಗಿ ಜೋಡಿಸಿಕೊಂಡಾಗ: ಸವೆಸಿಣ ರಕ್ಷಣೆಯಿಂ ಅಹವವಾಗಲುಬಿಡದೆ   ದುರ್ವರ್ಣದೆ ತಾಗುವ ಕೃಷ್ಣನೀಲಗಳ  ವಶಗೊಂಡು ದ್ರವ್ಯಲೇಶ್ಯೆಗಳನು  ಭಾವದ ವಿಷಯಕ್ಕೆ ಅಳವಡದಂತೆ ಕಸವನು ರಸಮಾಡಿ ಕಸವರಲೋಹವೆಂಬ ಅಸಮಾನಋಕ್ಕು ಭೂವಲಯ  ವೇದಘೋಷಣೆ ಆದಿ ಸಿದ್ಧಾಂತ ಓದುವಾಚಾರ್ಯನ ಪಾಠಕ್ಕೆಆದಿನ  ಬರುವಾಗ ಮಾಂಸ ಮೀನಿನುಪ್ಪುಗಾಯಿ ಇತ್ಯಾದಿ ವ್ಯಾಪಾರವು ಸಲ್ಲದು. ಗರುವ ಗೊಟ್ಟಿಗನೂರು  ಕೇರಿಯೊಳಿಲ್ಲದ ಸರುವಬಾಡನು ಬಿಟ್ಟ ಜಿನರು ಅರಹಂತರೂಪಮಿಲ್ಲಿಯೆ ತೋರುವಗುರುವಿಂದು ಇರಬೇಕಾದವರ್ಗೆಲ್ಲ  ಪ್ರತಮ ದೃಢವ್ರತದೊಳು ರಾಜದಂಡವ ನೆನೆಯ’ ಎಂಬುದಾಗಿ ಓದಬೇಕಾಗುತ್ತದೆ. ಈ ಎರಡೂ ಸಾಂಗತ್ಯ ಪದ್ಯಗಳನ್ನು ಅವುಗಳ ಸಮೀಪಕ್ಕೆ ಸೇರಿದಂತೆ ಅರ್ಥೈಸಿಕೊಂಡಾಗ :
ಸ್ಪಷ್ಟವಾದ ಮಾತುಗಳಲ್ಲಿ ವೇದವಾಕ್ಯಗಳು ಹಾಗೂ ಭೂವಲಯದ ದಿವ್ಯವಾಣಿ ಎರಡೂ ಒಂದೇ ಆಗಿರುದೆಂದೂ ಸೂಚಿಸಿ; ವೇದಜ್ಞಾನದ ಪ್ರಾಚೀನತೆಯನ್ನು ಕವಿಯು ಖಚಿತಪಡಿಸಿರುವುದನ್ನೂ,  ವೇದದ ಘೊಷಣೆಯಾಗಿರುವ ಅದಿಸಿದ್ಧಾಂತವನ್ನು ಓದುವ ಆಚಾರ್ಯನ  ಪಾಠಕ್ಕೆ ಆ ದಿನ ಬರುವಾಗ ಮಾಂಸ, ಮೀನಿನ ಉಪ್ಪುಗಾಯಿ ಇತ್ಯಾದಿ ವ್ಯಾಪಾರಗಳು ಸಲ್ಲವು.  ಗರುವಗೊಟ್ಟಿಗನೂರು ಕೇರಿಯಲ್ಲಿ ಇಲ್ಲದ ಎಲ್ಲರೀತಿಯ ಮಾಂಸಾಹಾರವನ್ನು ಬಿಟ್ಟ ಜೈನರು ಮೊದಲಿಗೆ ದೃಢವ್ರತವನ್ನಾಚರಿಸುವಲ್ಲಿ ರಾಜದಂಡನೆಯನ್ನು ನೆನಪುಮಾಡಿಕೊಳ್ಳಬೇಕು’  ಎಂದಿರುವುದನ್ನೂ ತಿಳಿಯಬೇಕಾಗುತ್ತದೆ.
ಗರುವ ಗೊಟ್ಟಿಗನೆಂದು ಖ್ಯಾತನಾಗಿದ್ದ ಸೈಗೊಟ್ಟ ಸಿವಮಾರನ ರಾಜ್ಯವು ಇಂದಿನ ತಲೆಕಾಡು; ಕೊಳ್ಳೆಗಾಲದ ಸುತ್ತಮುತ್ತಲಿನ ಪ್ರದೇಶ.  ಈ ರಾಜ್ಯದಲ್ಲಿ ಮಾಂಸಾಹಾರವು ನಿಷಿದ್ಧವಾಗಿತ್ತೆಂಬ ಒಂದು ಸಾಮಾಜಿಕ ಪರಿಸರದ ಚಿತ್ರಣವು ಇಲ್ಲಿ ಕಾಣಬರುತ್ತದೆ.  (ಮುಂದುವರೆಯುವುದು)
                                                             -ಜಮದಗ್ನಿಸುತ