Tuesday 25 February 2020

ಸಿರಿಭೂವಲಯವು ಮೇಧಾವಿಗಳಿಗೂ; ದಡ್ಡರಿಗೂ ಅರ್ಥವಾಗುವ ಕಾವ್ಯ


ಪ್ರಾಚೀನವಾದ ಕಾವ್ಯ, ಶಾಸ್ತ್ರಗಳನ್ನು ಕುರಿತ ಬಹವೇ ಆಗಿರಲೀ; ಯಾವುದೇ ವಿಷಯಕುರಿತ ಆಧುನಿಕ ಬರಹವೇ ಇರಲೀ,  ಅದು ಜನಸಾಮಾನ್ಯರಿಗೂ ಹಾಗೂ ವಿದ್ವಾಂಸರಿಗೂ ಒಂದೇ ರೀತಿಯಲ್ಲಿ ಅರ್ಥವಾಗುವಂತೆ ರಚನೆಯಾಗುವುದು ಬಹಳ ಅಪರೂಪದ ಸಂಗತಿ.
 ಸಾಮನ್ಯಜನರಿಗೆ ಇಷ್ಟವಾಗುವಂತಿದ್ದರೆ; ವಿದ್ವಾಂಸರು ಅದರ ಸರಳತೆಯನ್ನೇ ದೋಷವಾಗಿ ಪರಿಗಣಿಸಿ, ಅದನ್ನು ಉಪೇಕ್ಷಿಸುತ್ತಾರೆ. ತಮಗೆ ಸುಲಭವಾಗಿ ಅರ್ಥವಾಗದರೀತಿಯಲ್ಲಿ, ವಿದ್ವಾಂಸರಿಗೆಮಾತ್ರ  ತಿಳಿಯುವಂಥ ಕಾವ್ಯವಾಗಿದ್ದಲ್ಲಿ, ಸಾಮ್ಮಾನ್ಯಜನರು ಅಂಥ ಬರಹವನ್ನು ಓದಲು ಇಷ್ಟಪಡುವುದಿಲ್ಲ; ಸಾಧ್ಯವೂ ಇರುವುದಿಲ್ಲ!! 
ಆದರೆ,  ಸಿರಿಭೂವಲಯಕಾವ್ಯವು ಈ ವಿಚಾರದಲ್ಲಿ ತನ್ನದೇಆದ ಒಂದು ವಿಶೇಷತೆಯನ್ನು ಹೊಂದಿದ್ದು ಅದು ಮಹಾನ್ ವಿದ್ವಾಂಸರಿಗೂ, ಹೆಚ್ಚಿನ ವಿಧ್ಯಾಭ್ಯಾಸವಿಲ್ಲದ  ಸಾಮಾನ್ಯಜನರಿಗೂ ಅರ್ಥವಾಗುವಂಥ,  ಉಪಯೋಗಕ್ಕೆ ಬರುವಂಥ  ಏಕೈಕಕಾವ್ಯವಾಗಿದೆ!  ಈ ಮಾತನ್ನು ಕವಿ ಕುಮುದೇಂದುಮುನಿಯೇ ತನ್ನ ವಿಶ್ವಕಾವ್ಯವಾದ ಸಿರಿಭೂವಲಯದಲ್ಲಿ ಸೂಚಿಸಿರುವುದುಂಟು!!!
ವಿರುದ್ಧವಲ್ಲವ ಸಿದ್ಧಾಂತಗಳನ್ನು ಮಹಾವ್ರತಕ್ಕಾಗಿಯೂ;  ನವಪದಗಳು ಅಣುವ್ರತಕ್ಕಾಗಿಯೂ ಸೇರಿಸಿ ಸ್ವಾರಸ್ಯಕರವಾಗಿ ಮೂಢರಿಗೂ, ಫ್ರೌಢರಿಗೂ ತಿಳಿಯುವಂತೆ ರಚಿಸಿರುವ ನವಪದದ ಭಕ್ತಿಯಿರುವ ಒಂದೇ ಕಾವ್ಯ ಎಂಬ ಮಾತನ್ನು ಕವಿಯು ಖಚಿತವಾಗಿ ಸೂಚಿಸಿರುವುದಿದೆ. ’ಮವಿರುದ್ಧಸಿದ್ಧಾಂತವನುಮಹಾವ್ರತಕೆಂದು|ನವಪದವಣುವ್ರತಕೆಂದು|ಸವಿಯಾಗಿಸಿಫ್ರೌಢ ಮೂಢರೀರ್ವರಿಗೊಂದೆ|ನವಪದಭಕ್ತಿ ಭೂವಲಯ||’  ಎಂಬ  ವಿವರವನ್ನು ಪ್ರಥಮಖಂಡದ ಪ್ರಥಮ ಅಧ್ಯಾಯದಲ್ಲೇ ಓದುಗರು ಕಾಣಬಹುದಾಗಿದೆ.
 ಇದು ಅಕ್ಷರಶಃ ನಿಜವಾದಮಾತು!!  ಸಿರಿಭೂವಲಯಕಾವ್ಯವು ಕಳೆದ ಶತಮಾನದ ಧರಣೇಂದ್ರಪಂಡಿತರು,  ಚಂದಾಪಂಡಿತರು,  ಕೆ. ಶ್ರೀಕಂಠಯ್ಯನವರು, ಡಾ|| ಶ್ರೀಕಂಠಶಾಸ್ತ್ರಿಯವರು, ಕೆ. ಅನಂತಸುಬ್ಬರಾಯರಂಥ ಮಹಾನ್ ಮೇಧಾವಿಗಳಿಗೂ; ಮುಂದೆ ಹಾಸನದ ಸುಧಾರ್ಥಿಯಂಥ ಅವಿದ್ಯಾವಂತನಿಗೂ ಅವರವರ ಶಕ್ತಿಗೆ ತಕ್ಕಂತೆ ಅರ್ಥವಾಗಿರುವುದನ್ನು ನೋಡಿದಾಗ ಇದು ಎಂಥವರಿಗೂ ಮನವರಿಕೆಯಾಗಲೇಬೇಕು. ಇವರಿಗೆ ಅರ್ಥವಾದದ್ದು ಉಳಿದವರಿಗೇಕೆ ಅರ್ಥವಾಗುವುದಿಲ್ಲ!!!???
                                                                                                                                            -ಸಿರಿಭೂವಲಯದಸುಧಾರ್ಥಿ. 

No comments:

Post a Comment