Tuesday 26 May 2020

ಸಿರಿಭೂವಲಯಸಾಗರರತ್ನಮಂಜೂಷ ೨. ** (ಭಾಗ-೨)

***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ 
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ***
ಭಾಗ: ೯.

** ಸಿರಿಭೂವಲಯಸಾಗರರತ್ನಮಂಜೂಷ ೨. **  (ಭಾಗ-೨)

ಇಲ್ಲಿನ ಕೆಲವು ವಿವರಣೆಗಳು ಕೆಲವರಿಗೆ ಇಷ್ಟವಾಗದಿರಬಹುದು. ಯಾರಿಗೇ ಆಗಲೀ ಇಷ್ಟವಾಗದ್ದನ್ನು ಒತ್ತಾಯವಾಗಿ ಸೂಚಿಸಬೇಕೆಂಬ ಇಚ್ಛೆ ಈ ಪರಿಚಯಕಾರನಿಗಿಲ್ಲ. ನಡೆದ ಹಾದಿಯಲ್ಲಿ ತಾನು ಕಂಡು, ಅನುಭವಿಸಿದ್ದನ್ನು, ಮುಂದಿನವರ ಮಾರ್ಗದರ್ಶನಕ್ಕಾಗಿ ಯಥಾವತ್ತಾಗಿ ದಾಖಲಿಸಬೇಕೆಂಬುದಷ್ಟೇ ಇಲ್ಲಿನ ಉದ್ದೇಶವಾಗಿದೆ.  ಇದರಲ್ಲಿಯೂ ಏನೋ ’ನಿಗೂಢ’ ಇರಬಹುದೆಂದು ಯಾರೂ ನಿರೀಕ್ಷಿಸಬಾರದು!!
೫೩ನೇ ಅಧ್ಯಾಯದ ಪೂರ್ಣಪದ್ಯಗಳ ಸ್ತಂಬಕಾವ್ಯಗಳು ಉಗಮವಾಗುವಲ್ಲಿ ೩ನೇ ಪಾದದ ಮೊದಲನೇ ಅಕ್ಷರದಲ್ಲಿ  ಮೇಲಿನಿಂದ ಕೆಳಕ್ಕೆಸಾಗಿದಾಗ,  ಕನ್ನಡಭಾಷಾಸಾಹಿತ್ಯದ ತುಣುಕೂ; ಕೆಳಗಿನಿಂದ ಮೇಲಕ್ಕೆ ಸಾಗಿದಾಗ, ಸಂಸ್ಕೃತಭಾಷಾಸಾಹಿತ್ಯದ ತುಣುಕೂ  ಎರಡೂ ಪ್ರತ್ಯೇಕ ನದಿಗಳಂತೆ ಪ್ರವಹಿಸಿ ಮಧ್ಯಲ್ಲಿ ಒಂದು ಬಿಂದುವಿನಲ್ಲಿ ಸಂಧಿಸುವ  ಕೌತುಕವು  ಕವಿಯು ಬಳಸಿರುವ ಗಣಿತಸೂತ್ರಗಳ ವ್ಯಾಪಕ ಪರಿಧಿಯನ್ನು ಸೂಚಿಸುತ್ತದೆ!
ನರಕವಿಲ್ಲವೇ? ನರಕದಲ್ಲಿ ಶಿಕ್ಷೆ ವಿಧಿಸುವುದು ಸುಳ್ಳೆ? ಎಂಬ ಶೀರ್ಷಿಕೆಯಲ್ಲಿ ಆನುಷಂಗಿಕವಾದ ಮಾಹಿತಿಯನ್ನು ಸೂಚಿಸಲಾಗಿದೆ.
ಹಿನ್ನುಡಿಯಲ್ಲಿ ಅಕ್ಷರಭೂವಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕುರಿತು ವಿವರವಾಗಿ ಚರ್ಚಿಸಿ,  ಸಿರಿಭೂವಲಯದ ಮುಂದಿನ ೮ ಖಂಡಗಳ ಅಕ್ಷರ ಅವತರಣಿಕೆಯು ಸಂಪೂರ್ಣವಾಗಿ ನಾಶವಾಗುವ ಮೊದಲು ಅದನ್ನು ಮುದ್ರಿಸಲು ಅವಕಾಶನೀಡಬೇಕೆಂದು ಸಂಬಂಧಿಸಿದವರಲ್ಲಿ ಮನವಿ ಮಾಡಲಾಗಿದೆ.
 ಕುಂದೂರಿನ ಕಾರ್ಯಕ್ರಮ,  ಎಂಬ ಶೀರ್ಷಿಕೆಯಲ್ಲಿ  ಕನಕಗಿರಿಯ ಶ್ರೀ ಭುವನಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಕೇವಲ ಐದೇ ನಿಮಿಷಗಳ ಅವಧಿಯಲ್ಲಿ ಸಿರಿಭೂವಲಯಕುರಿತು ನೀಡಿದ ಉಪನ್ಯಾಸವು ಭಟ್ಟಾರಕರ ಮನಸಿನಮೇಲೆ ಬೀರಿದ ಪರಿಣಾಮದ ವಿವರವಿದೆ.  ಇದರಿಂದಲೂ ಈ ಪರಿಚಯಕಾರನ ವಿಚಾರದಲ್ಲಿ ಆ ಸಮುದಾಯದ ’ವಿಧ್ಯಾವಂತ’ ರಲ್ಲಿ ಬದಲಾವಣೆ ಕಾಣಬರಲಿಲ್ಲ.  ಅಲ್ಲಿನ ಎರಡನೇ ದಿನದ ಕಾರ್ಯಕ್ರಮದಲ್ಲಿ ಹಂಪನಾ ಅವರು ಭಾಗವಹಿಸಲಿದ್ದರು. ಸುಧಾರ್ಥಿಯೂ ಅಂದು ಸಮರಂಭಕ್ಕೆ ಬರಬೇಕೆಂಬ ಆಹ್ವಾನನೀಡಿದರು. ಹೋಗಲಾಗಲಿಲ್ಲ.  ಅದುವರೆವಿಗೂ ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಸುಧಾರ್ಥಿಯ ಬರಹದವಿಚಾರದಲ್ಲಿ ಜೈನಸಮುದಾಯದ ಕನ್ನಡಾಭಿಮಾನಿಗಳು ಹೊಂದಿದ್ದ ಅಭಿಮಾನವು ಮುಂದೆ ಬಹುಪಾಲು ಕ್ಷೀಣಿಸಿತು. ಇದಂರಿಂದ ಸುಧಾರ್ಥಿಯು ವಿಚಲಿತನಾಗಲಿಲ್ಲ.
’ನಿಗೂಢಗಳಗೂಡು ಸಿರಿಭೂವಲಯ ಹಾಗೂ ವಿದ್ವಾಂಸರಿಬ್ಬರ ವಿಶ್ಲೇಷಣೆ’ ಎಂಬ ತಲೆಬರಹದಲ್ಲಿ ’ಕನ್ನಡಭಾಷಾಸಾಹಿತ್ಯಕ್ಕೆ ಕೋಟ್ಯಾಂತರ ವರ್ಷಗಳ ಇತಿಹಾಸವನ್ನು ಖಚಿತವಾಗಿ ಗುರುತಿಸಿಕೊಟ್ಟಿರುವ ಪ್ರಾಚೀನ ಕವಿ ಕುಮುದೇಂದುವಿನಿಂದ ಮೊದಲ್ಗೊಂಡು, ಪಂಪ, ರನ್ನಾದಿಗಳಿಂದ ಮುಂದುವರೆದು, ಪ್ರೊ|| ಜಿ.ವಿ. ಯವರಂಥವರ ವರೆವಿಗೂ  ಸಾವಿರಾರುಜನಗಳು, ಲಕ್ಷಾಂತರಜನಗಳು,  ಕೋಟ್ಯಾಂತರ ಜನ ಕನ್ನಡಾಭಿಮಾನಿಗಳು ಕನ್ನಡಭಾಷೆಗೆ ಸೇವೆಸಲ್ಲಿಸಿದ್ದಾರೆ. ಇವರಲ್ಲಿ ಕೆಲವರು ತಮ್ಮ ಮೌಲಿಕ ಬರಹಗಳಿಂದ ಹೆಸರುಗಳಿಸಿದ್ದರೆ, ಇನ್ನು ಕೆಲವರು ತಮ್ಮ ವ್ಯವಹಾರ ಕುಶಲತೆಯಿಂದ ಮೇಲುಗೈ ಸಾಧಿಸಿದ್ಧಾರೆ.  ಇಂಥವರ  ಸಮೂಹದಲ್ಲಿ ಎಂಥೆಂಥವರೋ ತೆರೆಮರೆಗೆ ಸರಿದು ಅಪ್ರಸ್ತುತರೆನಿಸಿರುವುದಿದೆ. ಮಹಾನ್ ಕನ್ನಡಾಭಿಮನಿಯಾಗಿರುವ ಕುಮುದೇಂದುವಿನ ಕಾವ್ಯವೇ ೧೨೦೦ ವರ್ಷಗಳಕಾಲ ಕಣ್ಮರೆಯಾಗಿದ್ದಿದೆ!!
ಕುಮುದೇಂದುವಿನ ಸಿರಿಭೂವಲಯವನ್ನು ಸಾಮನ್ಯ ಓದುಗರಿಗೂ ಮನಮುಟ್ಟುವರೀತಿಯಲ್ಲಿ ಸರಳಗೊಳಿಸಿದವರಲ್ಲಿ  ಕೆ. ಶ್ರೀಕಂಠಯ್ಯನವರು ಹಾಗೂ ಹಾಸನದ ಸುಧಾರ್ಥಿ ಪ್ರಮುಖರು ಎಂಬುದು ಸಂಶಯಾತೀತ ಸಂಗತಿ.  ಸುಮಾರು ೬೦ ವರ್ಷಗಳ ಅಂತರದಲ್ಲಿ ಕಾರ್ಯನಿರ್ವಹಿಸಿದ ಈ  ಇಬ್ಬರಿಗೂ ಸೇತುವೆಯಾಗಿ ಸಿರಿಭೂವಲಯದ ಪ್ರಚಾರಕಾರ್ಯ ನಿರ್ವಹಿಸಿದ ಕೆ. ಅನಂತಸುಬ್ಬರಯರ ಸಾಧನೆಯೂ ಗಮನಾರ್ಹವಾದುದು. ಈ ಮೂವರ ನಿಜವಾದ  ಕನ್ನಡಾಭಿಮಾನದಿಂದಾಗಿ  ಇಂದು ಕುಮುದೇಂದುಮುನಿಯು  ಕನ್ನಡಸಾರಸ್ವತಲೋಕದಲ್ಲಿ ಸಾಮಾನ್ಯ ಓದುಗರಿಗೂ ಸಮೀಪವಾಗಿರುವುದು ವಾಸ್ತವವಾದ ವಿಚಾರ.
ಒಬ್ಬ ಕಾರ್ಮಿಕನಾಗಿದ್ದ, ಕೃಷಿಕನಾಗಿದ್ದ ಸುಧಾರ್ಥಿಯಂಥ ಸಾಮಾನ್ಯ ವ್ಯಕ್ತಿಯು ಈ ಸಿರಿಭೂವಲಯವನ್ನು ಪರಿಚಯಮಾಡಿಕೊಟ್ಟದ್ದು ಕೆಲವರಿಗೆ ಕಸಿವಿಸಿಯ ಸಂಗತಿಯಾಗಿದೆ.  ವಿಶ್ವವಿದ್ಯಾಲಯದ ಪ್ರೊಫೆಸರುಗಳಾದ ಕೆಲವರು ಸಿರಿಭೂವಲಯದ ಸರಳಪರಿಚಯಕೃತಿಗಳನ್ನು ಓದಿಕೊಂಡು, ತಾವೇ ಸಿರಿಭೂವಲಯವನ್ನು ಸಂಶೋಧಿಸಿದ್ದೇವೆಂಬ ಭ್ರಮೆಯಿಂದ  ’ವಾಸ್ತವವಾಗಿ ಸಿರಿಭೂವಲಯದ ವಿಚಾರವಾಗಿ ಆಳವಾದ ಅಧ್ಯಯನ ನಡೆಸಿದವರೆಂದರೆ ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು ಮತ್ತು ಡಾ|| ಟಿ.ವಿ. ವೆಂಕಟಾಚಲಶಾಸ್ತ್ರಿಯವರು ಮಾತ್ರ ಎಂಬುದು ಪ್ರಶ್ನಾತೀತ ಸಂಗತಿಯಾಗಿದೆ’  ಎಂದು ಭಾಷಣ ಬಿಗಿದದ್ದಾಯಿತು.
 ಈ ಇಬ್ಬರು ಮಹನೀಯರೂ ಕನ್ನಡ ಸಾರಸ್ವತ ಲೋಕದಲ್ಲಿ ಉನ್ನತವಾದ ಸಾಧನೆ ಸಾಧಿಸಿರುವರೆಂಬುದು ನಿಜ. ಆದರೆ. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಮಹನೀಯರ ವಾಸ್ತವವಾದ ಕೊಡುಗೆ ಏನು? ಎಂಬುದನ್ನು ಕುರಿತು  ಸಿರಿಭೂವಲಯಸಾರದಲ್ಲಿ  ಖಚಿತವಾಗಿ ವಿವರಿಸಿದ್ದಾಗಿದೆ!  ಹೀಗಿದ್ದೂ ಕೆಲವರು ಸುಧಾರ್ಥಿಯ ಸಾಧನೆಯನ್ನು ತೆರೆಮರೆಗೆ ಸರಿಸುವ ದುಸ್ಸಾಹಸಕ್ಕೆ ಮುಂದಾಗಿದ್ದಿದೆ!
ಮೈಸೂರಿನ ಪ್ರಸಿದ್ಧ ವಿದ್ವಾಂಸರಿಬ್ಬರು ಬಹಳ ಜಾಣ್ಮೆಯಿಂದ  ಸುಧಾರ್ಥಿಯನ್ನು ಸನ್ಮಾನಿಸುವ ನೆಪದಲ್ಲಿ  ಬೆಂಗಳೂರಿಗೆ ಆಹ್ವಾನಿಸಿ, ಜೈನಸಮುದಯದವರಿಂದಲೇ ತುಂಬಿದ ಸಭೆಯಲ್ಲಿ ತಮ್ಮ ಮನಸ್ಸಿಗೆ ಬಂದಂತೆ ಸುಧಾರ್ಥಿಯನ್ನೂ ಕೆ. ಶ್ರೀಕಂಠಯ್ಯನವರನ್ನೂ ವರ್ಣಿಸಿ, ಹೆಮ್ಮೆ ಮೆರೆದದ್ದಿದೆ.  ಪಾಪ ಈ ಮೇಧಾವೀ ವಿದ್ವಾಂಸರಿಗೆ ತಿಳಿಯದು, ತಾವು ಆಡುವ ಅವಿವೇಕದ ಮಾತುಗಳು ಸಭೆಯಲ್ಲೇ ಲೀನವಾಗುತ್ತವೆ. ಆದರೆ ಇವು ಮುಂದೆ ಚರಿತ್ರೆಯಲ್ಲಿ ದಾಖಲಾಗಿ ತಮ್ಮ ಗೌರವವನ್ನು ಹಾಡಿ ಹೊಗಳುತ್ತವೆ ಎಂಬ ವಿಚಾರ!!
ಪ್ರೊ|| ಶುಭಚಂದ್ರ ಅವರು ತಮ್ಮ ಭಾಷಣದಲ್ಲಿ ಸಿರಿಭೂವಲಯದ ಸ್ವರೂಪವನ್ನು ಸೂಚಿಸುತ್ತ... ’ಪ್ರತಿಯೊಂದು ಪದ್ಯದ ಮೊದಲನೇ ಅಕ್ಷರಗಳನ್ನು ಜೋಡಿಸಿಕೊಳ್ಳುತ್ತಾ  ಮೇಲಿನಿಂದ ಕೆಳಕ್ಕೆ ಸಾಗಿದರೆ; ’ಓಕಾರಂ ಬಿಂಧುಸಂಯುಕ್ತಂ.. ’ ಎಂಬ ಸಂಸ್ಕೃತಭಾಷಾಸಾಹಿತ್ಯ ಬರುತ್ತದೆ. ಎಂಟನೇ ಅಕ್ಷರಗಳನ್ನು ಇದೇ ಕ್ರಮದಲ್ಲಿ ಜೋಡಿಸಿಕೊಂಡರೆ, ”ಅಟ್ಟವಿಹಕಮ್ಮವಿಯಲಾಣಟ್ಟ... ಎಂಬ ಪ್ರಾಕೃತ ಭಾಷಾ ಸಾಹಿತ್ಯ ಬರುತ್ತದೆ ’ ಎಂದು ವೇದಿಕೆಯಮೇಲೆ ಸೂಚಿಸಿದ್ಧು ಅಸಂಬದ್ಧವಾದ ಮಾಹಿತಿ! ಇದು ಸಭಿಕರನ್ನು ತಪ್ಪುದಾರಿಗೆಳೆಯುವುದು ಸಹಜ. ವಿದ್ಯವಂತರು ತಪ್ಪುಮಹಿತಿನೀಡುವವರಲ್ಲ. ರಾಜಕೀಮುಖಂಡರಂತೆ ಮನಸಿಗೆ ಬಂದುದನ್ನು ಹೇಳುವವರಲ್ಲ ಎಂಬ ನಂಬಿಕೆ ಇರುತ್ತದೆ. ಈ ನಂಬಿಕೆಯ ಬಲದಿಂದಲೇ ಅಂದು ಸಮಾರಂಭದ ಸಾನಿಧ್ಯವಹಿಸಿದ್ದ ಸ್ವಾಮೀಜಿಯವರು ತಮ್ಮ ಅನುಗ್ರಹವಚನದಲ್ಲಿ ಈ ಪ್ರೊ|| ಮಹಾಶಯರ  ಮೇಲ್ಕಾಣಿಸಿದ ವಾಕ್ಯವನ್ನೇ ಉಲ್ಲೇಖಿಸಿ, ಸಭಿಕರಿಗೆ ಸಂದೇಶನೀಡಿದರು. ತಮ್ಮ ಸಮುದಾಯದ ವಿದ್ವಾಂಸರು, ಸ್ವಾಮಿಗಳು ಹೇಳಿದ್ದೇ ಸತ್ಯವೆಂದು ತಿಳಿತಿಯುವ  ಸಮುದಾಯದ ಜನಸಾಮಾನ್ಯರು ಅನವಶ್ಯಕವಾಗಿ ಈ ಪರಿಚಯಕರನಮೇಲೆ ಆಕ್ಷೇಪಣೆಯ ಸುರಿಮಳೆ ಸುರಿಸುವುದುಂಟು!
ಅಂದಿನ ಸಭೆಯಲ್ಲಿ ಹಾಜರಿದ್ದ ಸರ್ವಶ್ರೀ ಪ್ರಸನ್ನಯ್ಯ, ,ಧರಣೇಂದ್ರಕುಮರ್, ಡಾ|| ಸತೀಶ್ ಕಗವಾಡ್ ಹಾಗೂ ಸುಧಾರ್ಥಿಯನ್ನು ವೇದಿಕೆಗೆ ಆಹ್ವಾನಿಸಿ, ಸನ್ಮಾನಿಸಲಾಯಿತು. ಯಾರಿಗೂ ವೇದಿಕೆಯಮೇಲೆ ಮಾತನಾಡಲು ಅವಕಾಶವಿರಲಿಲ್ಲ ಸುಧಾರ್ಥಿಯನ್ನು ವೇದಿಕೆಗೆ ಆಹ್ವಾನಿಸುವಾಗ, ಕಾರ್ಯಕ್ರಮದ ನಿರೂಪಕಿಯು ನೀಡಿದ ಕಿರಿಪರಿಚಯದಲ್ಲಿ  ”ಸುಧಾರ್ಥಿಯವರು ಶಾರದಾದೇವಿಯವರ ಸಿರಿಭೂವಲಯದ ವಾಚನಕ್ಕೆ ಉತ್ತೇಜನ ನೀಡಿದವರು. ಅವರ ಸಲಹೆಯೇ ಈ ಧ್ವನಿಸುರುಳಿಯ ನಿರ್ಮಾಣದ ಮೂಲಕಾರಣ” ಎಂಬ ಮಾಹಿತಿ ನೀಡಿದರು!
ಅಧ್ಯಕ್ಷತೆ ವಹಿಸಿದ್ದ ಶ್ರೀ ಡಿ. ಸುರೇಂದ್ರಕುಮರ್ ಅವರು ಯಾವುದೇ ವಿವಾದಕ್ಕೂ ಆಸ್ಪದವಿರದಂತೆ  ಡಾ|| ಎಂ.ಎ. ಜಯಚಂದ್ರ ಹಾಗೂ ಪ್ರೊ|| ಶುಭಚಂದ್ರ ಅವರ ಪಾಂಡಿತ್ಯವನ್ನು ಪ್ರಶಂಸಿಸಿ, ಅಧ್ಯಕ್ಷಭಾಷಣ ಮುಗಿಸಿದರು.
ಅಂದಿನ ಸಮಾರಂಭ ಮುಗಿದಕೂಡಲೇ  ಕೆಲವರು  ’ನಿಮಗೆ ಮಾತನಾಡಲು ಅವಕಾಶಕೊಡದೇ ಸನ್ಮಾನಿಸಿದ್ದೇಕೆ!? ಉಳಿದ ವಿಧ್ವಾಂಸರ ಭಾಷಣ ಕೇಳಿದ್ದೆವು.  ನಿಮ್ಮಭಾಷಣ ಕೇಳಲು ಬಂದಿದ್ದೆವು. ಕೇವಲ ಹಾರಹಾಕಿಸಿಕೊಂಡು, ಶಾಲುಹೊದೆಸಿಕೊಳ್ಳಲು  ಹಾಸನದಿಂದ ಇಲ್ಲಿಗೆ ಬರಬೇಕಿತ್ತೆ?  ನೀವಾದರೂ ಮಾತನಾಡಲು ಅವಕಾಶಕೇಳಬೇಕಿತ್ತು’ ಎಂದು ಅಕ್ಷೇಪಿಸಿದ್ದಿದೆ.  ’ಆರೀತಿ ಅವಕಾಶಕೇಳಿ, ಭಾಷಣಮಡುವ ಅವಶ್ಯಕತೆ ನನಗಿಲ್ಲ’ ಎಂದು ಉತ್ತರಿಸಿದ್ದಾಯಿತು.
ಈ ಧ್ವನಿಸುರುಳಿಬಿಡುಗಡೆ ಸಮಾರಂಭದಲ್ಲಿ ’ಸೂತ್ರಧಾರ’ ರು ಒಂದೇ ಕಲ್ಲಿನಿಂದ ಹಲವಾರು ಹಕ್ಕಿಗಳನ್ನು ಹೊಡೆದುರುಳಿಸಿದ ಚಮತ್ಕಾರ ನಡೆಸಿದವರು!!  ೧)  ಸಮಾರಂಭದ ಮರ್ಗದರ್ಶಕರಾಗಿನಿಂತು ಶ್ರೀಮತಿ ಶಾರದಾದೇವಿಯವರ ಕುಟುಂಬದ ಸದಸ್ಯರ ಪ್ರಸಂಸೆಗೆ ಪತ್ರರಾದುದು.  ೨) ಧರಣೆಂದ್ರ ಪಂಡಿತರ ಮನೆಯವರು ಸಿರಿಭೂವಲಯದ ವಿಚಾರ ತಿಳಿದವರಾಗಿರಲಿಲ್ಲ, ಯಲ್ಲಪ್ಪ ಮಾವನೇ ಅದಕ್ಕೆ ಸೂಕ್ತ ವಾರಸುದರರಾಗಿದ್ದರು ಎಂದು ಬಿಂಭಿಸಿ, ಯಲ್ಲಪ್ಪಶಾಸ್ತ್ರಿಯವರ ಕುಟುಂಬದ ಸದಸ್ಯರ ಮೆಚ್ಚಿಗೆ ಗಳಿಸಿದ್ದು. ೩)  ಸಿರಿಭೂವಲಯದ ಹೆಸರಿನಲ್ಲಿ  ಜೈನಸಮುದಯದಿಂದ ಹಣಸಂಪಾದಿಸಲು ಹವಣಿಸುತ್ತಿರುವವನು ಎಂದು ಅವರು ನಿರ್ಧರಿಸಿರುವ ಸುಧಾರ್ಥಿಯ ಪರಿಚಯಕೃತಿಗಳಲ್ಲಿ  ತಪ್ಪುಗಳಿವೆ.  ಈ ಕೃತಿಗಳು ಮಹತ್ವದವಲ್ಲ ಎಂದು  ಸುಧಾರ್ಥಿಯ ಮುಂದೆಯೇ ಜೈನಸಮುದಾಯದ ಎದುರು ವ್ಯಾಪಕ ಪ್ರಚಾರ ನೀಡುವುದು,. ೪)  ಸಿರಿಭೂವಲಯಕ್ಕಾಗಿ ಸಂಗ್ರಹವಾದ ಹಣದಲ್ಲಿ ಪಾಲುಪಡೆಯಲು ಧರಣೇಂದ್ರ ಪಂಡಿತರ ವಂಶದವರು ಕಾದಾಟಕ್ಕಿಳಿದರು ಎಂಬ ಖಚಿತವಾದ ಮಾಹಿತಿಯನ್ನು ವೇದಿಕೆಯಲ್ಲಿ ಬಹಿರಂಗ ಪಡಿಸುವುದು.  ೫)  ಇಷ್ಟೆಲ್ಲ ಬುದ್ಧಿಶಾಲಿಗಳು ನೀವೇ ಅಣ್ಣತಮ್ಮಂದಿರು ಯಾಕೆ ಸಿರಿಭೂವಲಯದ  ಸಂಶೋಧನೆ ಮಾಡಲಿಲ್ಲ? ಎಂದು ಯಾರೊಬ್ಬರೂ ಪ್ರಶ್ನಿಸದಂತೆ ’ಸಂಶೋಧನೆಗೆ ಪ್ರತಿಗಳು ಸಿಗಲಿಲ್ಲ’ ಎಂದು ಕುಂಟುನೆಪ ಮುಂದೊಡ್ಡಿ, ತಮ್ಮ  ಮಾನ ಉಳಿಸಿಕೊಂಡದ್ದು!! ನಮ್ಮ ಕನ್ನಡಿಗರು ಎಷ್ಟು ಮೇಧವಿಗಳು ಎಂಬುದನ್ನು ತಿಳಿಯಲು ಇದಕ್ಕಿಂತ ಬೇರೆ ಉದಾಹರಣೆ ಬೇಕೇನು!!??
 ಸುಧಾರ್ಥಿಯ ಪರಿಚಯಕೃತಿಗಳಲ್ಲಿ ತೀರ್ಥಂಕರರನ್ನು ಕುರಿತಂತೆ ಕಾಣಬರುವ ಏಕವಚನ ಪ್ರಯೋಗದ ವಿಚಾರವಾಗಿಯೂ ಹಾಸ್ಯಾಸ್ಪದವಾದ ಆರೋಪವನ್ನೂ ಅಂದಿನ ಸಮಾರಂಭದಲ್ಲಿ ಹೊರಿಸಲಾಯಿತು!!  ಇದಕ್ಕೆ ಸಂಬಂಧಿಸಿದ ಸ್ವಾರಸ್ಯಕರವಾದ ವಿವರಗಳನ್ನು ಆಸಕ್ತರು ’ಸಿರಿಭೂವಲಯಸಾಗರರತ್ನಮಂಜೂಷ-೨ ರಲ್ಲಿ  ನೋಡಬಹುದು.       
ಸಿರಿಭೂವಲಯಕುರಿತು  ಪುಸ್ತಕಶಕ್ತಿ ಹಾಗೂ ಸುಧಾರ್ಥಿಯಬಾಂಧವ್ಯ ಎಂಬ ಶೀರ್ಷಿಕೆಯಲ್ಲಿ . ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಸುಧಾರ್ಥಿಯ ಬರಹಗಳಿಂದ  ಪುಸ್ತಕಶಕ್ತಿ ಪ್ರಕಶನದವರಿಗೂ, ಅವರಿಗೆ ನೆರವಾಗಿದ್ದ ವಿದ್ವಾಂಸರಿಗೂ  ಮುಜುಗರವಾದದ್ದು ಸಹಜ ಸಂಗತಿ. ಆದರೆ, ಇರುವ ವಿಚಾರವನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿರಲಿಲ್ಲ.   ಈ ವಿಚಾರದಲ್ಲಿ ಕಾನೂನು ಕ್ರಮ ಜರುಗಿಸಲು ಕೆಲವರು  ’ಪುಸ್ತಕಶಕ್ತಿ’ ಯವರನ್ನು ಪ್ರೇರೇಪಿಸಿದರಂತೆ!  ಅವರು ನಿರಾಸಕ್ತಿಯಿಂದ ಯಾವುದೇ ಕ್ರಮ ಜರುಗಿಸಲಿಲ್ಲವಂತೆ! -ಇದು ನಿರಾಸಕ್ತಿಯಲ್ಲ. ನ್ಯಾಯಾಲಯದ ಮೆಟ್ಟಿಲು ಹತ್ತಿದರೆ, ಅದರ ಪರಿಣಾಮ ಏನಾದೀತೆಂಬುದು ವ್ಯವಹಾರ ಕುಶಲಿಯಾದ ಅವರಿಗೆ ಅರಿವಿತ್ತು!
ಸಿರಿಭೂವಲಯದ ಪ್ರಚಾರಕ ಕೆ. ಅನಂತಸುಬ್ಬರಾಯರ ಜೀವನಚರಿತ್ರೆ ’ಅನಂತ’ ಪರಿಚಯಕೃತಿಯು   ಸಿರಿಭೂವಲಯ ಕುರಿತು ಸಂಕ್ಷಿಪ್ತವಾಗಿ ಸಾಕಷ್ಟು ಮಾಹಿತಿಗಳನ್ನೊಳಗೊಂಡಿದೆ.. ಇದರ ಪರಿಚಯವಿದ್ದ ಈ ಪ್ರಕಾಶಕರು ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಕಿರುಹೊತ್ತಿಗೆ ರಚಿಸಿಕೊಡಿ ಎಂದು ವಿನಂತಿಸಿದ್ದರು. ಆಗಲಿ ಎಂದು ಹೇಳಿ ’ಅನಂತಸುಬ್ಬರಾಯರು ಕಂಡಂತೆ ಸಿರಿಭೂವಲಯ’ ಎಂಬ ಕೃತಿಯನ್ನು ರಚಿಸಿ, ಅವರಿಗೆ ತಿಳಿಸಿದೆ.
ಅದನ್ನು ಕಳಿಸಿಕೊಡಲೂ ಅವರು ಸೂಚಿಸಲಿಲ್ಲ!  ಆದರೆ ಕೆಲವೇ ಸಮಯದಲ್ಲಿ ಅವರ ಸಂಸ್ಥೆಯ ಉದ್ಯೋಗಿಯೊಬ್ಬರು ರೂಪಿಸಿದ್ದೆಂದು ಹೇಳಲಾದ ಇದೇ ಹೆಸರಿನ ಕಿರುಹೊತ್ತಿಗೆಯು ’ಅನಂತ’ ದ ಮಾಹಿತಿಗಳನ್ನೇ ಸಿಕ್ಕಂತೆ ಅಪಹರಣಮಾಡಿ, ಅಳವಡಿಸಿಕೊಂಡು,  ಅಸಂಬದ್ಧವಾಗಿ  ಸಿದ್ಧಪಡಿಸಿ, ಪ್ರಕಟಿಸಿದ್ದಾಗಿತ್ತು!!
ಸುಧಾರ್ಥಿಯು ರಚಿಸಿದ್ದ ’ಧನ್ವಂತರಿ’ ಎಂಬ ಪರಿಚಯಕೃತಿಯನ್ನು ಪುನರ್ಮುದ್ರಿಸುವ ವಿಚಾರವಾಗಿ ಪುಸ್ತಕಶಕ್ತಿಯವರು ಒಮ್ಮೆ ವಿಚಾರಿಸಿದ್ದರು.  ’ಆಗಲಿ. ಮಾತನಾಡೋಣ’ ಎಂದು ಸೂಚಿಸಿದ್ದೆ.  ಆದರೆ ನನ್ನ ಲಿಖಿತ ಅನುಮತಿ ಇಲ್ಲದೆಯೇ ಅವರು ಅದನ್ನು ಪುನರ್ಮುದ್ರಿಸಿ ಸರ್ಕಾರದ  ಸಗಟು ಖರೀದಿ ಯೋಜನೆಯ ಫಲಾನುಭವಿಯಗಿದ್ದು  ಗ್ರಂಥಾಲಯ ಇಲಾಖೆಯಮೂಲಕ ನನ್ನ ಗಮನಕ್ಕೆ ಬಂದಿತು. ಆ ವಿಚಾರವನ್ನು ಹೆಚ್ಚು ಬೆಳೆಸಲು ಇಚ್ಛಿಸದ ಆವರು ಸ್ವಲ್ಪ ಸಂಭಾವನೆಯ ಹಣನೀಡಿ ವಿಚಾರವನ್ನು ತಣ್ಣಗಾಗಿಸಿದ್ದರು.  ವಿಚಾರ ಹೀಗಿರುವಲ್ಲಿ ಅವರು ಸುಧಾರ್ಥಿಯ ವಿರುದ್ದ ನ್ಯಾಯಲಯದ ಮೆಟ್ಟಿಲು ಹತ್ತಲು ಹೇಗೆ ಸಾಧ್ಯ!?
 ಇಷ್ಟಾದರೂ  ಅವಶ್ಯಕತೆ ಇರುವಲ್ಲೆಲ್ಲ ಸುಧಾರ್ಥಿಯು ಪುಸ್ತಕಶಕ್ತಿಯವರ ಕೊಡುಗೆಯ ಉತ್ತಮವಾದ ಅಂಶಗಳನ್ನು ಸ್ಮರಿಸದೇ ಬಿಟ್ಟಿಲ್ಲ.  ಇದಕ್ಕೆ ಪ್ರತಿಯಾಗಿ ಅವರೂ  ತಾವು ಪ್ರಕಟಿಸಿರುವ  ’ಸಿರಿಭೂವಲಯದ ಅಂತರ್ಸಾಹಿತ್ಯಗಳು’  ಎಂಬ ಕೃತಿಯಲ್ಲಿ  ಸುಧಾರ್ಥಿಯ ಹೆಸರನ್ನು ಸೂಚಿಸಿರುವುದಿದೆ!
ಪುಸ್ತಕಶಕ್ತಿಯವರು ಪ್ರಕಟಿಸಿರುವ ’ಸಿರಿಭೂವಲಯದ ಅಂತರ್ಸಾಹಿತ್ಯಗಳು’ ಎಂಬ ಕೃತಿಯ ನಿರೂಪಣೆಯು ಬಹಳ ವಿಶೇಷವಾದುದಾಗಿದೆ!
ಈ ಕೃತಿಯನ್ನು ಸುಧಾರ್ಥಿಯು ಪ್ರಕಾಶಕರಿಂದಲೇ ಕೊಂಡುತಂದದ್ದಾಗಿದೆ.  ೨೦೧೦ರಲ್ಲಿ ’ಸಿರಿಭೂವಲಯಸಾರ’  ಪ್ರಕಟವಾದನಂತರ, ಅದರಲ್ಲಿ ಅಡಕವಾಗಿದ್ದ ತೀಕ್ಷ್ಣವಾದ ಬರಹ ಹಾಗೂ ವಾಸ್ತವಮಾಹಿತಿಗಳ ಹಿನ್ನೆಲೆಯಲ್ಲಿ ಸಿರಿಭೂವಲಯ ಫೌಂಡೇಷನ್ನಿನ ಬೆನ್ನೆಲುಬಾಗಿದ್ದ ವಿದ್ವಾಂಸರು ಇವರಿಂದ ದೂರವಾದರು! ಸಮರ್ಥರಾದ ವಿದ್ವಾಂಸರ ನೆರವಿಲ್ಲದೇ ಪ್ರಕಾಶಕರು ಮುಂದಿನ ಚಟುವಟಿಕೆಗಾಗಿ ಬೇರೊಬ್ಬ ವಿದ್ವಾಂಸರನ್ನೇ ಸೃಷ್ಟಿಸಿ, ತಮ್ಮ ಚಟುವಟಿಕೆಯನ್ನು ಮುಂದುವರೆಸಿದರು!!
ಸಿರಿಭೂವಲಯದ ಅಂತರ್ಸಾಹಿತ್ಯವನ್ನು ನಾವೂ ಸಂಗ್ರಹಿಸಿದ್ದೇವೆ. ಅದನ್ನು ಸಧ್ಯದಲ್ಲೇ ಪ್ರಕಟಿಸುತ್ತೇವೆ ಎಂದು  ಪುಸ್ತಕಶಕ್ತಿಯವರು ಸುಧಾರ್ಥಿಗೆ ೨೦೧೧ರ ಸುಮಾರಿನಲ್ಲಿ ಸೂಚಿಸಿದ್ದರು.  ಆದರೆ. ಈ ಬೃಹತ್ ಕೃತಿಯು ೨೦೧೦ ರಲ್ಲೇ  ಪ್ರಕಟವಾಗಿರುವುದನ್ನು ಗಮನಿಸಿ ಸುಧಾರ್ಥಿಗೆ ಅಚ್ಚರಿಯಾಯಿತು!!
ಈ ಯೋಜನೆಯ ಸಂಪಾದಕರ ಸ್ಥಾನದಲ್ಲಿ  ವೈ. ಕೆ. ಮೋಹನ್ ಅವರ ಹೆಸರು ನಮೂದಾಗಿತ್ತು!  ಸಂಶೋಧಕಾರಾಗಿ ಶ್ರೀ. ಪಿ.ಆರ್.ರಾವ್ ಎಂಬ ಹೆಸರು ಕಾಣಿಸಿಕೊಂಡಿತ್ತು.  ( ಈ ಮಹನೀಯರು ಹಿಂದೆ ಕನ್ನಡ ಟೈಪ್ರೈಟರ್ ವಿಚಾರದಲ್ಲಿ ಕೆ. ಅನಂತಸುಬ್ಬರಾಯರಿಗೆ ಪ್ರತಿಸ್ಪರ್ಧಿಯಾಗಿ ಪ್ರವೇಶಿಸಿ, ಪರಾಜಿತರಾಗಿದ್ದ ಸಂಶೋಧಕರು!!) ಕೃತಿಗೆ ಸಂಬಂಧಿಸಿದ ಮಾಹಿತಿ ನೀಡುವಲ್ಲಿಯೂ ಪ್ರಥಮ ಮುದ್ರಣ ೨೦೦೯ ಎಂದು ನಮೂದಾಗಿದೆ!! ಪುಸ್ತಕಕ್ಕೆ ಬಳಸಿರುವ  ಕಾಗದವನ್ನು  ೭೦ ಜಿ ಎಂ ಎಸ್. ಮ್ಯಾಪ್ ಲಿಥೋ ಎಂದು ನಮೂದಾಗಿದೆ. ಅದರೆ, ಬಳಸಿರುವುದು ನ್ಯೂಸ್ ಪ್ರಿಂಟ್ ಎಂಬುದು ಯಾರಿಗಾದರೂ ತಿಳಿಯುತ್ತದೆ!
ಅದರಲ್ಲಿ  ಪುಸ್ತಕಶಕ್ತಿಯ ಸಿರಿಭೂವಲಯದ ಪ್ರತಿಯೊಂದನ್ನು ಹಿಡಿದ ಹಿರಿಯ ವ್ಯಕ್ತಿಯೊಬ್ಬರ ಚಿತ್ರ ಮುದ್ರಿತವಾಗಿದೆ. ಚಿತ್ರದ ಕೆಳಭಾಗದಲ್ಲಿ  ’ಛಲಬಿಡದ ತ್ರಿವಿಕ್ರಮನಂತೆ ೬೦ ವರ್ಷಗಳ ಕಾಲ ಸಿರಿಭೂವಲಯದ ಸಂಶೋಧನೆಯಲ್ಲಿ ತೊಡಗಿದ್ದ ರಾಯರು ದಿನಾಂಕ ೧೨-೦೮ -೨೦೧೦ ರಂದು ಗುರುವಾರ ರಾತ್ರಿ ೯-೦೦ ರ ವರೆವಿಗೆ ಸಿರಿಭೂವಲಯ ಅಂತರ್ಕಾವ್ಯದ ಅಧ್ಯಯನದಲ್ಲಿ ತೊಡಗಿ ತಮ್ಮ ಕಂಪ್ಯೂಟರಿನಲ್ಲಿ  ದಾಖಲಿಸುತ್ತಿದ್ದಾಗ ಎದೆನೋವಿನ ತೊಂದರೆ ಕಾಣಿಸಿದಾಗ ತಮ್ಮ ಪತ್ನಿಯನ್ನು ಕರೆದು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೆಲ್ಲ ವಿವರಿಸಿ , ನನ್ನಿಂದ ಮುಂದುವರೆಸಲು ಸಾಧ್ಯವಿಲ್ಲ ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಿ ತಮ್ಮ ೮೦ ನೇ ವಯಸ್ಸಿನಲ್ಲಿ ದೇಹತ್ಯಾಗಮಾಡಿದ ಮಾಹಿತಿಯನ್ನು ನಮೂದಿಸಲಾಗಿದೆ!!!  ಹಿರಿಯ ಸಂಶೋಧಕರಿಗೆ ಶ್ರದ್ಧಾಂಜಲಿ ಸೂಚಿಸುವುದಾಗಿ ಪ್ರಕಾಶಕರು ಸೂಚಿಸಿದ್ದಾರೆ.
ಸುಧಾರ್ಥಿಯ ಸಿರಿಭೂವಲಯದ ಅಧ್ಯಯನ ೩೦ ವರ್ಷದ್ದಾದರೆ, ಈ ಮಹನೀಯರ ಅಧ್ಯಯನ ೬೦ ವರ್ಷದ್ದು!!  ಆದರೂ ಇವರು ಪ್ರಚಾರಬಯಸದೇ ದೂರದ ಮುಂಬೈನಲ್ಲಿದ್ದವರು. ೧೯೯೮ ರಿಂದಲೇ ಪುಸ್ತಕಶಕ್ತಿಯವರ ಸಾಹಸದ ಪರಿಚಯವಿದ್ದರೂ ೨೦೦೩ರವರೆವಿಗೂ ಅವರು ಮೌನವಾಗಿದ್ದಾರೆ! ೨೦೦೮ರಲ್ಲಿ ಈ ಸಂಶೋಧಕರಿಗೂ ಪುಸ್ತಕಶಕ್ತಿಯವರಿಗೂ ಸಂಬಂಧವೇರ್ಪಟ್ಟಿದೆ. ಅದರೂ ಇವರ ಸಂಪಾದಕಮಂಡಳಿಯವರಿಗಾಗಲೀ, ಮಾರ್ಗದರ್ಶಕರಾದ ಪ್ರೊ| ಜಿ. ವಿ ಅವರಿಗಾಗಲೀ ಇದರ ಸುಳಿವು ಬಿಟ್ಟುಕೊಟ್ಟಿಲ್ಲ!!
೨೦೦೯ರಲ್ಲಿ ಪ್ರಕಟವಾಗಿರುವ ಈ ಬೃಹತ್ ಹೊತ್ತಿಗೆಯಲ್ಲಿ ೨೦೧೧ರಲ್ಲಿ ಪ್ರಕಟವಾಗಿರುವ ಸುಧಾರ್ಥಿಯ ಬರಹದ ವಿಚಾರ ಸೇರಲು ಹೇಗೆ ಸಾಧ್ಯ!? ಇರಲಿ, ದಿನಾಂಕ ೧೨-೮-೨೦೧೦ರಂದು ನಿಧನರಾದ ಸಂಶೋಧಕ ರಾವ್ ಅವರಿಗೆ ಪ್ರಕಾಶಕರು ೨೦೦೯ ರಲ್ಲೇ  ಮುಂಗಡವಾಗಿ ಶ್ರದ್ಧಾಂಜಲಿ ಅರ್ಪಿಸಲು ಹೇಗೆ ಸಾಧ್ಯವಾಯಿತು!?? ಇವರ ’ಸಾಧನೆಗೆ’  ಸಂಬಂಧಿಸಿದಂತೆ  ಇಷ್ಟು ಮಹಿತಿ ಸಾಕಲ್ಲವೇ!? ಈಗ ಪ್ರಕಾಶಕರು ಈ ದೋಷವನ್ನು ತಿದ್ದಿದ್ದಾರೆಂದು ಮಾಹಿತಿ. ಅದನ್ನು ಸುಧಾರ್ಥಿ ಗಮನಿಸಿಲ್ಲ,
ಒಟ್ಟಿನಲ್ಲಿ ಸಿರಿಭೂವಲಯದ ಸಂಶೋಧನೆಯನ್ನು  ಸುಧಾರ್ಥಿಗಿಂತ ಮೊದಲಿನಿಂದಲೂ ನಾವು ನಡೆಸಿದ್ದೇವೆ ಎಂಬುದಕ್ಕೆ ಒಂದು ಕೂಟಸಾಕ್ಷಿಯ ಅಗತ್ಯವಿತ್ತು. ಅದನ್ನು ಸೃಷ್ಟಿಸಿದ್ದಾಯಿತು!  ಇಲ್ಲಿನ ವಿಚಾರ ಕುರಿತು ಮುಂದಿನ ಸಂಶೋಧಕರು ಗೊಂದಲದ ಗೂಡಿನಲ್ಲಿ ಸಿಕ್ಕಿ ತೊಳಲಾಡಲಿ. ಇವರಿಗೆ ಬೇಕಿರುವುದು ಹಣಸಂಪಾದನೆಯೊಂದೇ!  ಅದರಲ್ಲಿ ಸಿದ್ಧಿಪಡೆದದ್ದಾಯಿತು.  ಉಳಿದದ್ದು ಹೇಗಾದರೂ ಹಾಳಾಗಿಹೋಗಲಿ. (ಹೆಚ್ಚಿನ ಮಾಹಿತಿಗಳಿಗೆ ಮೂಲವನ್ನು ಗಮನಿಸಿರಿ)
ಸಿರಿಭೂವಲಯದ ಹೊಸ ಸಂಶೋಧನೆಗಳು: ಎಂಬ ಶೀರ್ಷಿಕೆಯಲ್ಲಿ  ’ಹೇಗಾದರೂ ಸರಿ  ಸಿರಿಭೂವಲಯದ ಸಂಶೋಧನೆಯ ಸಾಲಿನಲ್ಲಿ ನಮ್ಮ ಹೆಸರೂ ದಾಖಲಾದರೆ ಸಾಕು ’ಎಂಬ ಧ್ಯೇಯದಿಂದ ಶ್ರಮಿಸುವವರನ್ನು ಕುರಿತ ವಿವರಣೆಯನ್ನು ಇಲ್ಲಿ  ಒಂದೆರಡು ಉಪಕಥೆಗಳೊಂದಿಗೆ ನೀಡಲಾಗಿದೆ.
ಸಿರಿಭೂವಲಯ ಕುರಿತ  ತಪ್ಪು ಕಲ್ಪನೆ ಅಪಪ್ರಚಾರ ಇನ್ನೂ ಮುಂದುವರೆದಿದೆ! ಎಂಬ ಶೀರ್ಷಿಕೆಯಲ್ಲಿ ಸಿರಿಭೂವಲಯವು ಪ್ರಾರಂಭದಿಂದಲೂ ತಪ್ಪು ಕಲ್ಪನೆಯ ನೆರಳಿನಲ್ಲೇ  ಉಳಿದುಬಂದಿರುವುದನ್ನು ಪಟ್ಟಿಮಾಡಿ, ಕೊನೆಯಲ್ಲಿ ೨೦೧೩ರ ’ನವೆಂಬರ್’ ತಿಂಗಳ ಕನ್ನಡದ ಉತ್ಸಾಹದಲ್ಲಿ ಖಾಸಗಿ ದೂರದರ್ಶನ ವಾಹಿನಿಯೊಂದು ಹಂಪನಾ ಹಾಗೂ ಪುಸ್ತಕಶಕ್ತಿ ಪ್ರಕಾಶನದ ಮೋಹನ್ ಅವರ ಸಂಭಾಷಣೆಯ ರೂಪದ  ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದ್ದರ ಮುಖ್ಯಾಂಶಗಳನ್ನು ಪರಿಚಯದ ಮಿತ್ರರೊಬ್ಬರು ಸುಧಾರ್ಥಿಯ ಗಮನಕ್ಕೆ ತಂದಿರುವುದನ್ನು ಸೂಚಿಸಲಾಗಿದೆ.
 ಕಾರ್ಯಕ್ರಮದ ನಿರೂಪಕರು ಸಿರಿಭೂವಲಯದ ವಿಚಾರವಾಗಿ ಸುಧಾರ್ಥಿಯು ಪರಿಚಯಕೃತಿಗಳನ್ನು ರಚಿಸಿರುವ ಮಹಿತಿ ಸೂಚಿಸಿದ್ದಾರೆ.  ಹಂಪನಾ ಅವರು ” ಸಿರಿಭೂವಲಯದಲ್ಲಿ ಏನೇನು ಮಹಿತಿಗಳು ಅಡಕವಾಗಿವೆ ಎಂಬುದನ್ನು ಕುರಿತು ಕನ್ನಡ, ಪ್ರಾಕೃತ, ಸಂಸ್ಕೃತಭಾಷೆ ಬಲ್ಲವರು ಈ ಗ್ರಂಥದ ಸಮರ್ಪಕ ಸಂಶೋಧನೆಮಾಡಿ, ಸೂಕ್ತವಾಗಿ ಪಾರಿಚಯಿಸಬೇಕಿದೆ.  ಮೈಸೂರು ನಗರ ನಿವಾಸಿ  ಶ್ರೀಮತಿ ಪದ್ಮಾವತಿ ಎಂಬುವವರು ಈ ಸಿರಿಭೂವಲಯದ ವಿಚಾರವಾಗಿ ಸಂಶೋಧನೆ ಮಾಡಿದ್ದಾರೆ.  ಇಂದೂರಿನ ಕುಂದ ಕುಂದ ಜ್ಞಾನಪೀಠದವರೂ ಹಲವಾರು ವರ್ಷಗಳಿಂದ ಸಿರಿಭೂವಲಯದ ಸಂಶೋಧನೆ ಮಾಡುತ್ತಿದ್ದಾರೆ.’  ಎಂದು ನೂತನವಾದ ಸಂಶೋಧನೆಯ ವಿಚಾರವನ್ನು ಹಂಪನಾ ಅವರು ಹರಿಯಬಿಟ್ಟಿದ್ದಾರೆ!
ಸುಧಾರ್ಥಿಯು ಮೈಸೂರು ನಿವಾಸಿ, ಗಣಿತಶಾಸ್ತ್ರ ವಿಶಾರದೆ ಶ್ರೀಮತಿ ಪದ್ಮಾವತಿಯವರನ್ನು ಭೇಟಿಮಾಡಿದ್ದಾಗಿದೆ.  ಗಣಿತಶಾಸ್ತ್ರ ವಿಶಾರದೆಯಾದ ಈಕೆ ಕನ್ನಡಿಗರೂ ಆಗಿರುವುದರಿಂದ ಇವರು ಸಿರಿಭೂವಲಯದ ವಿಚಾರವಾಗಿ ಸಂಶೋಧನೆಮಾಡಬೇಕೆಂದು ಸುಪ್ರಸಿದ್ಧ ದಿಗಂಬರ ಜೈನಮುನಿ  ಶ್ರೀ ತರುಣಸಾಗರ ಮುನಿಜಿಯವರು ಸೂಚಿಸಿದ್ದರಂತೆ.  ತಮ್ಮ ಬಾಲ್ಯದಿಂದಲೂ ಈ ಕಾವ್ಯದ ಸ್ವರೂಪವನ್ನು ಗಮನಿಸಿದ್ದ ಈಕೆ  ಅದನ್ನು ಓದುವುದಕ್ಕೇ ಸಾಧ್ಯವಿಲ್ಲ ಇನ್ನು ಸಂಶೋಧನೆಮಾಡುವುದು ಏನು!? ಎಂದು ನಿರ್ಧರಿಸಿಕೊಂಡವರು!!  ಇಂಥವರು ಈ ಕಾವ್ಯದ ಸಂಶೋಧನೆ ಮಾಡುತ್ತಿರುವುದಾಗಿ ಹಂಪನಾ ಅವರ ಹೇಳಿಕೆ!!!
ಇನ್ನು ಇಂದೂರಿನ ವಿದ್ವಾಂಸರ ಸಂಶೋಧನೆಯ ವಿಚಾರ.  ಈ ಕಾವ್ಯದ ಸಮರ್ಪಕ ಅಧ್ಯಯನಕ್ಕೆ, ಸಂಶೋಧನೆಗೆ ಸಮರ್ಥರಾದ ವಿದ್ವಾಂಸರನ್ನು ಕಳಿಸಿಕೊಡಿ ಎಂದು ಅವರು ಇಲ್ಲಿನ ಆಧಾರಸ್ತಂಬಗಳಿಗೆ ಹಲವುಸಲ ಮನವಿಮಾಡಿದ್ದಾಗಿದೆ.  ಸಿರಿಭೂವಲಯವನ್ನು ಓದುವ ಹಲವಾರು ಬಂಧಗಳನ್ನು ಅವರು ಕಂಡುಹಿಡಿದಿದ್ದರೆಂಬ ಮಾಹಿತಿಯೂ ಪತ್ರಿಕೆಯಲ್ಲಿ ಪ್ರಕಟವಾದದ್ದಿದೆ!  ಕನ್ನಡದ ಪ್ರಸಿದ್ಧ ವಿದ್ವಾಂಸರಿಗೇ ಓದಿ ತಿಳಿಯಲಾಗದ ಈ ಕಾವ್ಯವನ್ನು ಕುರಿತು ಕನ್ನಡಬಾರದ ಆ ಹಿಂದಿಭಾಷಿಕರು ಏನು ಸಂಶೋಧನೆ ಮಾಡಲಾದೀತು!?  ಹೀಗಿದ್ದೂ ಅಲ್ಲಿನ  ಸಂಶೋಧಕರು ಮೈಸೂರಿನ ಸಮ್ಮೇಳನವೊಂದರಲ್ಲಿ ಸುಧಾರ್ಥಿಯನ್ನು ಕಂಡು ಮಾತನಾಡಿದ್ದುಂಟು.
ಮುಂದೆ ಇಂದೂರಿನಲ್ಲಿ ಇವರುಗಳು ನಡೆಸಿದ ಒಂದು ಸಮಾವೇಶಕ್ಕೆ ಸುಧಾರ್ಥಿಯನ್ನೂ ಆಹ್ವಾನಿಸಿದ್ದರು. ಇಂಥ ಸಮಾವೇಶದಿಂದ ಯಾವುದೇ ಸಾಧನೆ ಸಿದ್ಧಿಸದೆಂದು ನಿರ್ಧರಿಸಿದ್ದ ಸುಧಾರ್ಥಿಯು ಅದರಲ್ಲಿ ಭಾಗವಹಿಸಲಿಲ್ಲ. ಆ ಸಮ್ಮೇಳನವು ವಿಫಲವಾದನಂತರವೂ,   ಮತ್ತೆ ಬೆಂಗಳೂರಿನಲ್ಲಿ ಇಂಥ ಸಮ್ಮೇಳನ ಏರ್ಪಡಿಸಿದರು. ಅದೂ ನಡೆಯಲಿಲ್ಲ! ನಿಜವಾಗಿ ವಿಚಾರತಿಳಿದವನನ್ನು ದೂರವಿರಿಸುವುದು, ಏನೂ ತಿಳಿಯದ ಎಳೆನಿಂಬೆಕಾಯಿಗಳನ್ನು ಸೇರಿಸಿ ಸಮ್ಮೇಳನ ಮಾಡುವುದು!! ಇದರಿಂದ ಸಿರಿಭೂವಲಯದ ಸಂಶೋಧನೆ ಆದೀತೇನು!?
ಇತ್ತೀಚೆಗೆ  ಇಂದೂರಿನ ಆ ವಿದ್ವಾಂಸರೇ ಹಾಸನದ ಸಮೀಪ ಸುಧಾರ್ಥಿಯು ನೆಲೆಸಿರುವ ಗ್ರಮಕ್ಕೆ ಆಗಮಿಸಿ, ನಾಲ್ಕಾರುಗಂಟೆಗಳಕಾಲ ಪ್ರತಿಯೊಂದು ವಿಚಾರವನ್ನೂ ಕೂಲಂಕಶವಾಗಿ ಚರ್ಚಿಸಿ, ಸುಧಾರ್ಥಿಯ  ನಿಲುವಿಗೆ ಸಮ್ಮತಿಸಿ, ಹಿಂದಿರುಗಿದ್ದಾಗಿದೆ!
 ಈ ಪ್ರಕಾಶಕರು ಹಾಗೂ ’ವಿದ್ವಾಂಸರು’ ಸೇರಿ ಸುಧಾರ್ಥಿಯನ್ನು ತೆರೆಮರೆಗೆ ಸರಿಸಿ, ಹೊಸದಾಗಿ ’ಸಿರಿಭೂವಲಯದ ಸಂಶೋಧನೆಯ’ ನಾಟಕಕ್ಕೆ ನಾಂದಿ ಹಾಡಿದರೆ  ಅದರಿಂದ ಉಪಯೋಗವೇನಾದೀತು!? ಇಂಥ ಪ್ರಯತ್ನಕ್ಕೆ ಕೈಹಾಕಿರುವವರು ಇದೊಂದೇ ಗುಂಪಿನವರಲ್ಲ! ಇನ್ನೂ ಕೆಲವರು ಈ  ಯೋಜನೆಯಿಂದ ’ಕೃತಾರ್ಥ’ ರಾಗುವ ಕನಸು ಕಾಣುತ್ತಿದ್ದಾರೆ.!!!  ನಮ್ಮ ಸಾಮಾಜಿಕ ಜೀವನದಲ್ಲಿ ಮೂರೂಬಿಟ್ಟ ರಾಜಕಾರಣಿಗಳು ಇಂಥ ಮೇಧಾವಿ ವಿದ್ಯಾವಂತರಿಗೆ ನೆರವಾಗಿ, ಸರ್ವಜನಿಕಸಂಪತ್ತನ್ನು ಲೋಟಿ ಹೊಡೆಯಲು ಸಂಚುಮಾಡಿದಲ್ಲಿ ಅದನ್ನು ತಡೆಗಟ್ಟಲು ಯಾರಿಂದ ತಾನೇ ಸಾಧ್ಯವಾದೀತು!??   (ಮುಂದುವರೆಯುವುದು)
                         -ಜಮದಗ್ನಿಸುತ.

No comments:

Post a Comment