Friday 29 May 2020

ಸರ್ವಭಾಷಾಮಯೀಭಾಷಾಸಿರಿಭೂವಲಯಸಾರ

ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ
ಭಾಗ: ೨.

೧)** ಸರ್ವಭಾಷಾಮಯೀಭಾಷಾಸಿರಿಭೂವಲಯಸಾರ**

೨೦೧೦ರಲ್ಲಿ ಪ್ರಕಟವಾಗಿರುವ ಈ ವಿನೂತನವಾದ ಪರಿಚಯಕೃತಿಯು ಡೆಮಿ೧/೪ ಆಕೃತಿಯ ೪೪೪ ಪುಟಗಳ ವ್ಯಾಪ್ತಿಯಲ್ಲಿ ಬೆಳೆದಿದೆ.  ಕುಮುದೇಂದುಮುನಿಯು  ಯಾಪನೀಯ ಸಂಪ್ರದಾಯದ ದಿಗಂಬರಮುನಿ. ಯಾಪನೀಯರು ಧರ್ಮದ ವಿಚಾರದಲ್ಲಿ ತುಂಬಾ ಉದಾರಿಗಳಾಗಿದ್ದವರು.  ಕುಮುದೇಂದು ಮುನಿಯಂತೂ ಮಹಾನ್ ಮಾನವತಾವಾದಿ. ಜಗತ್ತಿನಲ್ಲಿ ಪ್ರಚಲಿತವಿರುವ ಮತ ಸಂಪ್ರದಯಗಳೆವೂ ಒಂದೇ ಮೂಲದಿಂದ ಬಂದವು ಎಂಬ ವಿಚಾರದಲ್ಲಿ ನಂಬಿಕೆ ಇದ್ದವನು. ಇದೊಂದು ಪ್ರಧಾನವಾದ ನಿಲುವು. ಇದನ್ನು ಸಮರ್ಪಕವಾಗಿ ಪ್ರತಿಫಲಿಸುವ ಉದ್ದೇಶದಿಂದ ಈ ಪರಿಚಯಕೃತಿಗೆ ಒಂದು ವಿನೂತನವಾದ ಮುಖಚಿತ್ರವನ್ನು ಅಳವಡಿಸಲಾಗಿದೆ.
ಸನತನವಾದ  ’ऒं ’ ಕಾರದಿಂದಲೇ ಜಗತ್ತಿನ ಸಕಲ ಮತಧರ್ಮಗಳೂ ಉಗಮವಾಗಿರುವ ವಿಚಾರವನ್ನು ಸೂಚಿಸುವ ಇಲ್ಲಿನ ಚಿತ್ರದಲ್ಲಿ   ’ऒं ’  ಕಾರವನ್ನು ಸನಾತನಧರ್ಮದ ಪ್ರತಿನಿಧಿಯನ್ನಾಗಿಸಿ, ಅದರಸುತ್ತಲೂ ಕಾಲಾನುಕ್ರಮದಲ್ಲಿ ಮಹಾನ್ ಧರ್ಮೋಪದೇಶಕರಾದರ ಜೈನ, ಕೃಷ್ಣ, ಬುದ್ಧ, ಏಸು, ಪೈಗಂಬರ್  ಶಂಕರ, ರಾಮಾನುಜ, ಬಸವೇಶ್ವರ, ಮಧ್ವಾಚಾರ್ಯರ ಚಿತ್ರಗಳನ್ನು ಅಳವಡಿಸಿ, ಸರ್ವಧರ್ಮ ಸಮನ್ವಯದ  ಸುಂದರವಾದ ಕಲ್ಪನೆಯನ್ನು ಸಾಕಾರಗೊಳಿಸಲಾಗಿದೆ.  ’ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ’ ಎಂಬ ಅನ್ವರ್ಥಕವಾದ ಹೆಸರಿನೊಂದಿಗೆ  ’೧ ರಿಂದ ೬೪ ಅಂಕಿಗಳನ್ನೊಳಗೊಂಡ ೧೬೦೦೦ ಅಂಕಚಕ್ರಗಳು, ೭೧೮ ಭಾಷೆಗಳ ಸಾಹಿತ್ಯ, ೩೬೩ ಮತಧರ್ಮಗಳ ವಿವೇಚನೆ ಮತ್ತಿತರ ವಿಸ್ಮಯಕಾರಿ ಸಂಗತಿಗಳು’ ಎಂಬ  ಮಹತ್ವದ ಮಾಹಿತಿಯನ್ನು ನಮೂದಿಸಲಾಗಿದೆ. ಕವಿ: ಕುಮುದೇಂದುಮುನಿ.  ಸಂಶೋಧಕ: ಕರ್ಲಮಂಗಲಂ ಶ್ರೀಕಂಠಯ್ಯ.  ಸಾರಗ್ರಾಹಿ:  ಸುಧಾರ್ಥಿ ಹಾಸನ ಎಂಬ ಮಾಹಿತಿಯೂ ಅಲ್ಲಿ ನಮೂದಾಗಿದೆ.
ಸಿರಿಭೂವಲಯವನ್ನು ಕುರಿತಂತೆ ಸುಧಾರ್ಥಿಯು ರೂಪಿಸಿರುವ ’ಸಿರಿಭೂವಲಸಾರ’ ಕ್ಕೆ   ಪ್ರಸಿದ್ಧ ಶಿಕ್ಷಣತಜ್ಞ ಹಾಗೂ ಪುತ್ತೂರಿನ ವಿವೇಕಾನಂದ  ಮಹಾವಿದ್ಯಾಲಯದ ಪ್ರಾಂಶುಪಾಲರಾಗಿದ್ದ  ಪ್ರೊ. ಎಂ ಎಸ್. ಅಪ್ಪ  ಅವರು ಮುನ್ನುಡಿ ಬರೆದಿದ್ದಾರೆ.  ಮುಚ್ಚುಮರೆ ಇಲ್ಲದ ಈ ಮುನ್ನುಡಿಯು ಪ್ರಕೃತ ಪರಿಚಯಕೃತಿಯನ್ನು ಯಾರೂ ನಿರ್ಲಕ್ಷಿಸದಂತೆ  ತಡೆಯೊಡ್ಡಿದೆ! ಕಾವ್ಯದ ಸಂಶೋಧನೆ ಹಾಗೂ ಸಮಕಾಲೀನ ವಿದ್ವಾಂಸರ ಮನೋಧರ್ಮವನ್ನು ಕುರಿತಂತೆ, ಸುಧಾರ್ಥಿಯ ಬರಹವು ಬಹಳ ತೀಕ್ಷ್ಣವಾಗಿದೆ.
೨೦೦೦ ದಿಂದ ಈಚೆಗೆ ಪುಸ್ತಕಶಕ್ತಿ ಪ್ರಕಾಶನವು  ಸಿರಿಭೂವಲಯಕ್ಕೆ ಸಂಬಂಧಿಸಿದಂತೆ  ಪ್ರಕಟಿಸಿರುವ ಎಲ್ಲ ಕೃತಿಗಳ ವಿವರಗಳನ್ನೂ ಕುರಿತಂತೆ ವಸ್ತುನಿಷ್ಟವಾಗಿ  ವಿಶ್ಲೇಷಿಸಿರುವ  ಇವರ ಕೃತಿಯಲ್ಲಿ  ಬಹಳ ನಿಷ್ಠೂರವಾದ  ಶೈಲಿಯು  ಅಡಕವಾಗಿದೆ. ಕೆಲವರು ಇದನ್ನು ಒಂದು ದೋಷವೆಂದು ಪರಿಗಣಿಸಬಹುದು.  ವಾಸ್ತವತೆಗೆ ಬೆಳಕುಬೀರಬೇಕಾದಲ್ಲಿ ಪರಿಚಯಕಾರನಿಗೆ ಈ  ನಿಷ್ಠುರಶೈಲಿ ಅನಿವಾರ್ಯವಾಗಿತ್ತು.  ಮೇಲು ನೋಟಕ್ಕೆ ಈ ದೋಷವು  ಪ್ರಮುಖವೆನಿಸುವಂತೆ ಕಾಣಿಸಿದರೂ ಈ ಪರಿಚಯಕೃತಿಗಳಲ್ಲಿ  ಅಳವಡಿಸಿರುವ  ’ಅಂತರ್ಸಾಹಿತ್ಯ’ ದ ಅತಿ ಪ್ರಮುಖ ಮಾಹಿತಿಗಳಿಂದಾಗಿ  ಈ ದೋಷವು  ಗೌಣವಾಗಿಬಿಡುವುದು ಸಹಜ ಸಂಗತಿಯಾಗಿದೆ.
ಈ ವಿಶಿಷ್ಟ  ಪರಿಚಯಕೃತಿಯ  ಮುನ್ನುಡಿಕಾರರಾದ ಪ್ರೊ. ಎಂ ಎಸ್. ಅಪ್ಪ  ಅವರು  ’ಖಂಡಿತವಾದಿ ಲೋಕವಿರೋಧಿ ಎಂಬ  ನಾಣ್ನುಡಿಯೊಂದಿದೆ. ಸತ್ಯಸಂಗತಿಗಳ ಅರಿವಿರುವವರು ಖಂಡಿತವಾದಿಗಳಾಗುವುದು ಸಹಜಸಂಗತಿ.  ಈ ಹಾದಿಯಲ್ಲೇ ತಮ್ಮ ಬರವಣಿಗೆಯನ್ನು ಮುಂದುವರೆಸಿರುವ ಸುಧಾರ್ಥಿಯವರ ನಿರೂಪಣೆಯು ಕೆಲವೊಮ್ಮೆ ಕಠಿಣವೆನಿಸಬಹುದು. ಆದರೂ ಅದರ ಅನಿವಾರ್ಯತೆಯನ್ನು  ಇವರು ಸೂಚಿಸಿ, ತಮ್ಮ ಕಾಠಿಣ್ಯಕ್ಕೆ  ಕ್ಷಮೆಕೇಳುವ  ಸೌಜನ್ಯ ಹೊಂದಿರುವುದು ಗಮನಾರ್ಹ ಸಂಗತಿ.  ತಾವು ತಿಳಿದ ವಿಚಾರಗಳನ್ನು ದಿಟ್ಟತನದಿಂದ ಓದುಗರಮುಂದಿರಿಸಿ, ತಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ಸೂಚಿಸಿ, ಅದರ ನಿರ್ಣಯವನ್ನು ಓದುಗರ  ವಿವೇಚನೆಗೇ ಬಿಡುವುದು ಇವರ ಬರಹದ  ವಿಶೇಷತೆ’  ಎಂದು ಸೂಚಿಸಿರುವುದು ಪರಿಚಯಕಾರನ ಮುಕ್ತ ಮನಸ್ಸಿನ  ಅನಿಸಿಕೆಗಳು ಬಹುಪಾಲು ಮಾನ್ಯವೆಂಬುದನ್ನು ಸಾರಿಹೇಳುವಂತಿದೆ.
ಸರ್ವಭಾಷಾಮಯೀಭಾಷಾ ಸಿರಿಭೂವಲಯದ ಒಂದು ಪಕ್ಷಿನೋಟ; ಸಿರಿಭೂವಲಯ ಕುರಿತು ಸ್ವಲ್ಪ ವಿವರ; ಸಿರಿಭೂವಲಯ ಕಾವ್ಯದ ಸ್ಥೂಲಪರಿಚಯ; ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಪುಸ್ತಕಶಕ್ತಿಯ ಪ್ರಕಟಣೆಗಳ ಸಾರಾಂಶ;  ಸಿಭೂವಲಯ ಒಂದು ಪರಿಚಯ; ಸಿರಿಭೂವಲಯ ಭಾಗ ೧ ರಿಂದ ೮;  ಸಾಹಸ ದೊಡ್ಡದು;  ವಿಸ್ಮಯಗಳ ಅಗರ ಸಿರಿಭೂವಲಯ;  ಗ್ರಂಥಸಂರಕ್ಷರ ಮಾತು;  ನೂತನ ಪರಿಷ್ಕರಣ ಮುನ್ನುಡಿ; ನೂತನ ಪರಿಷ್ಕರಣದ ಪ್ರಸ್ಥಾವನೆ;  ವಿದ್ವಾಂಸರ ಅಭಿಪ್ರಾಯಗಳು;  ಸಿರಿಭೂವಲಯ ಸ್ತಂಭಕಾವ್ಯಗಳು; ಸಿರಿಭೂವಲಯ ಅನಂತಸುಬ್ಬರಾಯರು ಕಂಡಂತೆ; ಸಿರಿಭೂವಲಯ ಭಾಗ ೨; ಪ್ರೊ. ಜಿ. ವೆಂಕಟಸುಬ್ಬಯ್ಯನವರ ಮುನ್ನುಡಿ; ಪ್ರೊ. ಎಸ್. ಕೆ. ರಾಮಚಂದ್ರರಾಯರ ಅಧ್ಯಕ್ಷಭಾಷಣ;  ಪ್ರೊ. ಎಲ್. ಎಸ್. ಶೇಷಗಿರಿರಾಯರ  ಅಧ್ಯಕ್ಷಭಾಷಣ;  ಡಾ||  ಟಿ.ವಿ. ವೆಂಕಟಾಚಲಶಾಸ್ತ್ರಿಗಳಭಾಷಣ; ಸಿರಿಭೂವಲಯದಲ್ಲಿ ದೊರೆಯುವ ಅಂತರ್ಸಾಹಿತ್ಯದರ್ಶನ;  ಸಿರಿಭೂವಲಯದಲ್ಲಿರುವ ಜಯಾಖ್ಯಾನಾಂತರ್ಗತ ಭಗವದ್ಗೀತಾ;  ಭಗವದ್ಗೀತೆಯ ಶ್ಲೋಕರೂಪ;  ಸಿರಿಭೂವಲಯದ ಕೆಲವು ಸಾಂಗತ್ಯಪದ್ಯಗಳು;  ಅನುಬಂಧಗಳು; ಸಿರಿಭೂವಲಯಕ್ಕೆ ಸಂಬಂಧಿಸಿದ ಮೂವರು ಮಹನೀಯರ ಸಂಕ್ಷಿಪ್ತ ಜೀವನಪರಿಚಯ; (ಯಲ್ಲಪ್ಪಶಾಸ್ತ್ರಿಗಳ ಜೀವನಪರಿಚಯ; ಕರ್ಲಮಂಗಲಂ ಶ್ರೀಕಂಠಯ್ಯನವರ ಜೀವನಪರಿಚಯ;  ಕೆ. ಅನಂತಸುಬ್ಬರಾಯರ ಜೀವನ ಪರಿಚಯ;  ಶ್ರೀಕಂಠಯ್ಯನವರ ಸಾಹಿತ್ಯದ ಸಂಕ್ಷಿಪ್ತಪರಿಚಯ; -ವಿಶ್ವಭಾಷೆಗಳಮೇಲೆಕನ್ನಡದ ಪ್ರಭಾವ;  ಯಮ-ಯಮಿ, ವೈದಿಕ ದೇವತೆಗಳು-ಈರಾನಿದೇವತೆಗಳು; ಶ್ರೀಸರಸ್ವತಿ; ಸಂಸ್ಕೃತಭಾಷೆಯಲ್ಲಿ ಹಾಡುಗಬ್ಬಗಳು;  ವೇದೋಪನಿಷತ್ತುಗಳಲ್ಲಿ  ದೇವರ ಕಲ್ಪನೆ; ಸಂಕ್ಷೇಪವಾಗಿ ಶಿವ ವಿಷ್ಣು ಬ್ರಹ್ಮರ ಕಲ್ಪನೆಗಳು; ಜಯ, ಭಾರತ, ಮಹಾಭಾರತ;  ಮಹಾಭಾರತದ ಮಹಾಸ್ವರೂಪ;  ವ್ಯಾಸನಾಮಕ ವ್ಯಕ್ತಿಗಳು; ಮಹಾಭಾರತದ ಯುದ್ಧಕಾಲ; ರಾಮಾನುಜರಕಾಲದ ಧಾರ್ಮಿಕ ಪರಿಸ್ಥಿತಿ;  ಯಜ್ಞೋಪವೀತಧಾರಣೆಗೆ  ವೇದಶಾಸ್ತ್ರಗಳ ಆಧಾರಗಳು; ಮಧ್ವಾಚಾರ್ಯರಕಾಲದ ಧಾರ್ಮಿಕಪರಿಸ್ಥಿತಿ;  ಬಡಗನಾಡುಬ್ರಾಹ್ಮಣರ ಇತಿಹಾಸ;  ಸಿರಿಭೂವಲಯ ಕುರಿತ ಪರಿಚಯಭಾಷಣಗಳು;  ಗ್ರಂಥದಹೆಸರನ್ನು ಕುರಿತು ಸ್ವಲ್ಪ ವಿವರ;  ಕಾಲಗಣನೆ; ಶಂಕರವಿಜಯಕ್ಕೆ ಸಂಬಂಧಿಸಿದ ಒಂದು ವಿಚಾರ; ಪಾಶ್ಚಾತ್ಯರ ಪುರಾಣಶೈಲಿ;  ಸಂಸ್ಕೃತಭಾಷೆಯ ಸಂಕ್ಷಿಪ್ತ ಇತಿಹಾಸ;  ಧರ್ಮ ರಾಜಕಾರಣ ಹಾಗೂ ಸಾಹಿತ್ಯ ಪರಂಪರೆಯ ಸಂಕ್ಷಿಪ್ತ ಪರಿಚಯ; ಹೆಸರಿನ ಮಹತ್ವ;  ಕನ್ನಡದ ಮಹತ್ವ; ಸಿರಿಭೂವಲಯದ ಸಂಶೋಧನೆಯಿಂದ ಬೆಳಕಿಗೆಬಂದ ಕೆಲವಾರು ತಪ್ಪುಗ್ರಹಿಕೆಗಳು,  ಸಿರಿಭೂವಲಯವು ಉಳಿದುಬಂದಿರುವ ದಿಸೆಯಲ್ಲಿ ಮಹಿಳೆಯರಪಾತ್ರ;  ಶಾಶ್ವತವಾದ ನವಸಮಾಜರಚನೆ ಒಂದು ಭ್ರಮೆ;  ಹಿನ್ನುಡಿ; -ಸಿರಿಭೂವಲಯಕುರಿತು ಒಂದುಮಾತು; ಸಿರಿಭೂವಲಯದಲ್ಲಿ ಸೂಚಿಸಿರುವ ವರ್ಣಲಿಪಿಯಭಾಷೆಗಳಲ್ಲಿ ಕೆಲವು ಹೆಸರುಗಳು; ಮುಖ್ಯಮಂತ್ರಿಗಳಿಗೆಪತ್ರ; ಕನ್ನಡಭಾಷೆಯ ಪ್ರಾಚೀನತೆಗೆ ಶಾಸನಗಳ ಆಧಾರ;  ಮಾಯಾ ಚಕ್ರಗಳು ಹಾಗೂ ಸಿರಿಭೂವಲಯದ ಅಂಕಚಕ್ರಗಳ ಸಂಬಂಧಕುರಿತು ಒಂದುಮಾತು; ಕನ್ನಡ ಅಂಕಿಗಳ ಉಗಮ ಮತ್ತು ವಿಕಾಸ;  ಸರ್ವಭಾಷಾಮಯೀಭಾಷಾ ವರ್ಣಮಾಲೆಯ ೬೪ ಧ್ವನಿ ಸಂಕೇತಗಳು;  ಮಲ್ಲಿಕಬ್ಬೆಯ ಮೂಲಪ್ರತಿಯ ನಕಲು;  ಪ್ರಥಮಚಕ್ರದ ನಕಲುಪ್ರತಿ; ಅಕ್ಷರ ಚಕ್ರ; ಗ್ರಂಥಋಣ ಎಂಬುದಾಗಿ ಸುಮಾರು ೬೬ ಶಿರೋನಾಮೆಗಳಲ್ಲಿ ಸಂಬಂಧಿಸಿದ ವಿಚಾರಗಳ ವಿವರಗಳನ್ನು ಚರ್ಚಿಸಲಾಗಿದೆ.
 ಪ್ರಿಯ ಓದುಗರೇ, ಇಲ್ಲಿಸೂಚಿಸಿರುವ ಪರಿವಿಡಿಯನ್ನು ಗಮನಿಸಿದರೇ ನಿಮಗೆ ಈ ಸರಳಪರಿಚಯಕೃತಿಯ ವ್ಯಾಪ್ತಿ ಹಾಗೂ ವಿಸ್ತಾರದ ಪರಿಧಿ ಎಷ್ಟೆಂಬುದು ವೇದ್ಯವಾಗಿರಬಹುದೆಂದು ಭಾವಿಸಿದ್ದೇನೆ. ಇಲ್ಲಿಸೂಚಿಸಿರುವ ಶಿರೋನಾಮೆಗಳನ್ನು ಕುರಿತು ಒಂದೊಂದು ವಾಕ್ಯದಷ್ಟು  ವಿವರವನ್ನು ಸೂಚಿಸಿದರೂ ಅದೇ ಒಂದು ಕಿರುಹೊತ್ತಿಯ ವ್ಯಾಪ್ತಿಗೆ ಬೆಳೆಯುವುದು ನಿಸ್ಸಂಶಯ.  ಈಕಾರಣದಿಂದಾಗಿ ನಾನು ಆ ಕಾರ್ಯಕ್ಕೆ ಕೈಹಾಕಿಲ್ಲ.
 ಆದರೂ  ಸಿರಿಭೂವಲಯದ ಖಚಿತವಾದ ಪರಿಚಯವಿಲ್ಲದೇ ಅದನ್ನು ಪುನರುಜ್ಜೀವನಮಾಡುವ ಸಾಹಸಕ್ಕೆ ಕೈಹಾಕಿ,  ಕೇವಲ ೧೯೫೩ ರ ಅಕ್ಷರ ಅವತರಣಿಕೆಯನ್ನು ಅಪೂರ್ಣವಾಗಿ ಮರುಮುದ್ರಣಮಾಡುವ ಪ್ರಯತ್ನದಲ್ಲೇ  ತೊಳಲಾಟಕ್ಕೆ ಸಿಕ್ಕಿ, ಸಿರಿಭೂವಲಕಾವ್ಯದ ವಿಚಾರವಾಗಿ ಇಲ್ಲದ ಇತಿಹಾಸ ನಿರೂಪಿಸುವ ಸಾಹಸಕ್ಕೆ ಕೈಹಾಕಿ ವಿಫಲರಾದ ಪುಸ್ತಕಶಕ್ತಿ ಪ್ರಕಾಶನ ಹಾಗೂ ಅವರ ’ವಿದ್ವಾಂಸರಮಂಡಳಿ’ಯನ್ನು ಕಿಂಚಿತ್ತೂ ಕರುಣೆಯಿಲ್ಲದೇ ನಿರ್ದಯವಾಗಿ ತಮ್ಮ ಶಕ್ತ್ಯಾನುಸಾರವಾಗಿ ಆಧಾಸಹಿತವಾಗಿ ಖಂಡಿಸಿರುವ ಈ ಸರಳಪರಿಚಯಕಾರನ ವಿಚಾರಮಂಡನೆಯ ಶೈಲಿಯು ಎಂಥವರನ್ನೂ ಬೆಚ್ಚಿ ಬೀಳಿಸುವಂತೆ ರಭಸವಾಗಿ ಪ್ರವಹಿಸಿರುವುದನ್ನು ಓದುಗರು ಸಿರಿಭೂವಲಯಸಾರದಲ್ಲಿ ಕಾಣಬಹುದಾಗಿದೆ ಎಂದು ಇಲ್ಲಿ ತಿಳಿಸಬಯಸುತ್ತೇನೆ.
 ಸಿರಿಭೂವಲಯ ಕುರಿತು ಮುಂದಿನ ಸಂಶೋಧನೆಗೆ ತೊಡಗುವವರನ್ನು ದಾರಿತಪ್ಪಿಸುವ   ಅಪಾಯದಿಂದ ರಕ್ಷಿಸುವುದಷ್ಟೇ  ಇಲ್ಲಿ ತನ್ನ ಉದ್ದೇಶವೆಂದೂ ಯಾವುದೇ ವಿದ್ವಾಂಸರನ್ನೂ ಅವಹೇಳಮಾಡುವುದು ತನ್ನ ಉದ್ದೇಶವಲ್ಲವೆಂದೂ  ಸ್ಪಷ್ಟಪಡಿಸಿರುವ ಪರಿಚಯಕಾರನ ಅಂತರಂಗವು ವಿಚಾರಶಾಲಿ ಓದುಗರಿಗೆ ಅಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.
 ಸರ್ವಾರ್ಥಸಿದ್ಧಿಸಂಘದವರು ಪ್ರಕಟಿಸಿದ್ದ  ೧ ರಿಂದ ೩೩ ರ ವರೆಗಿನ  ಅಧ್ಯಾಯಗಳ ಅಶ್ವಗತಿ ಹಾಗೂ ಸ್ತಂಬಕಾವ್ಯರೂಪದ ಅಂತರ್ಸಾಹಿತ್ಯವನ್ನು ಮೊಟ್ಟಮೊದಲಿಗರಾಗಿ , ವ್ಯವಸ್ಥಿತವಾಗಿ  ಸಂಗ್ರಹಿಸಿ ಪ್ರಕಟಿಸಿರುವುದು ಈ ಪರಿಚಯಕೃತಿಯ ಬಹುಮುಖ್ಯವಾದ ಅಂಶವಾಗಿದೆ. ಇಲ್ಲಿಕಾಣಬರುವ ಹಲವಾರು ಹೊಸ ಹೊಸ ಮಾಹಿತಿಗಳು  ಸಾಮಾನ್ಯ ಓದುಗರಿಗೆ ಕುಮುದೇಂದುವಿನ ಸಿರಿಭೂವಲಯದ  ಸಮೀಪದರ್ಶನ ಮಾಡಿಸುವಲ್ಲಿ ಯಶಸ್ವಿಯಾಗಿದೆ.
ಅಂತರ್ಸಾಹಿತ್ಯದಲ್ಲಿ ಅಡಕವಾಗಿರುವ ಅಪರೂಪದ ಮಾಹಿತಿಗಳು ಸಿರಿಭೂವಲಯವನ್ನು ಕುರಿತಂತೆ ಪರಿಚಯಕಾರನ ಶ್ರಮದ ಸಾಧನೆಗೆ ಸಾಕ್ಷಿಯಾಗಿದ್ದರೆ, ಗ್ರಂಥಋಣದಲ್ಲಿ ಸೂಚಿತವಾಗಿರುವ ಕೃತಿಗಳ ವ್ಯಾಪ್ತಿಯು ಈ ವ್ಯಕ್ತಿಯ ವಿಸ್ತಾರವಾದ ಹಾಗೂ ಆಳವಾದ ಸಾಹಿತ್ಯಾಧ್ಯಯನದ ಸೂಚಿಯಂತಿದ್ದು, ಕೃತಿರಚನೆಗೆ ಪೂರಕವಾದ  ಅಪಾರ ಮಾಹಿತಿಗಳ ಖಚಿತತೆಯನ್ನು ನಿರ್ದೇಶಿಸುವಂತಿದೆ.
ಇಷ್ಟು ವ್ಯಾಪಕವಾದ ಪ್ರಾಚೀನಕಾವ್ಯದ ಪರಿಚಯಕೃತಿಯ ಪ್ರಕಟಣೆಯ ವಿಚಾರವು ಬಹಳ ಸಮಸ್ಯಾತ್ಮಕವಾದುದ್ದು.  ಹೆಚ್ಚಿನ ಆರ್ಥಿಕಸಂಪತ್ತನ್ನು ನಿರೀಕ್ಷಿಸುವಂಥದ್ದು. ಮೊದಲಿಗೇ ಮೂಲ ಕೃತಿಯು ’ಕಬ್ಬಿಣದಕಡಲೆ’ ಎಂಬ ಅಪಖ್ಯಾತಿ ಹೊಂದಿದ್ದು!! ಕಳೆದ ಶತಮಾನದ ಪೂರ್ತ ಈ ಕಾವ್ಯವು ವಿವಾದದ ನೆರಳಿನಲ್ಲೇ ಇದ್ದದ್ದು. ಮೂಲಕಾವ್ಯದ ಸುತ್ತ ಹುಟ್ಟಿಬೆಳೆದಿದ್ದ ಹಲವಾರು ಹುತ್ತಗಳ ವಿಚಾರ ಕೆದಕಿರುವ ಈ ಪ್ರಯತ್ನದ ಫಲವನ್ನು ಸಾಹಿತ್ಯಲೋಕಕ್ಕೆ ಒದಗಿಸಲು ವೃತ್ತಿನಿರತ ಪ್ರಕಾಶಕರು ಯಾರೂ ಮುಂದೆಬರುವ ಸಾಧ್ಯತೆ ಇರಲಿಲ್ಲ.
ಹೀಗಾಗಿ, ಸುಧಾರ್ಥಿಯೇ  ಕಾಗದ, ಮುದ್ರಣ ಮತ್ತಿತರ ವೆಚ್ಚವನ್ನು ಹೊರುವ ನಿರ್ಧಾರಮಾಡಿ ಈ ಕೆಲಸಕ್ಕೆ ಚಾಲನೆ ನೀಡಿದ ಕಾರಣದಿಂದಾಗಿ ನೆಪಮಾತ್ರಕ್ಕೆ ಈ ಪರಿಚಯಕೃತಿಯ  ಪ್ರಕಟಣೆಯ ಹೊಣೆಹೊತ್ತ ದತ್ತಿ ಸಂಸ್ಥೆ ಕಾಶಿ ಶೇಷಶಾಸ್ತ್ರೀ ಚಾರಿಟಬಲ್ ಟ್ರಸ್ಟಿನ  ಉಲ್ಲೇಖವು ಇಲ್ಲಿ ಕೇವಲ ಔಪಚಾರಿಕವಾದೀತಷ್ಟೇ.
ಈ ವಿಸ್ತಾರವಾದ ಪರಿಚಯಕೃತಿಯಲ್ಲಿ ಅಡಕವಾಗಿರುವ ಸ್ವಾರಸ್ಯಕರವಾದ, ಕುತೂಹಲಕರವಾದ ವಿವರಣೆಗಳಿಂದಾಗಿ ಓದುಗರಿಗೆ ಸಿರಿಭೂವಲಯ ಕಾವ್ಯದ ಸಮೀಪ ದರ್ಶನವಾಗುವುದು ನಿಜವಾದರೂ ; ಅಂತರ್ಸಾಹಿತ್ಯಭಾಗವು ಮೂಲಸಾಹಿತ್ಯರೂಪದಲ್ಲೇ  ಸರ್ವಭಾಷಾಮಯೀಭಾಷಾ ಕನ್ನಡದ ಸ್ವರೂಪದಲ್ಲೇ  ಇರುವ ಕಾರಣದಿಂದಾಗಿ ಅದನ್ನು ಸುಲಭವಾಗಿ ಓದಿ ತಿಳಿಯುವುದು ಸಾಮಾನ್ಯ ಓದುಗರಿರಲೀ ವಿದ್ವಾಂಸರಿಗೂ  ಕಠಿಣವಾಗಿಯೇ ಉಳಿದಿತ್ತು!     
ಈ ಸಮಸ್ಯೆಯ ಪರಿಹಾರಕ್ಕಾಗಿ  ಸುಧಾರ್ಥಿಯು ಎರಡನೇ ಹಂತದ ಸಂಕ್ಷಿಪ್ತ ಪರಿಚಯಕೃತಿಯೊಂದನ್ನು ರೂಪಿಸುವ ಕಾರ್ಯಕ್ಕೆ ಕೈಹಾಕಿರುವುದು ಕಾಣಬರುತ್ತದೆ. ಇದಕ್ಕೆ ಮೈಸೂರಿನ ವಿದ್ವಾಂಸರಾಗಿದ್ದ ಜಿ. ಬ್ರಹ್ಮಪ್ಪನವರು ನೀಡಿದ್ದ ಮೌಖಿಕ ಸಲಹೆ ಸೂಚನೆಯು ಮೂಲಕಾರಣವಾಗಿ  ಉತ್ತೇಜನನೀಡಿರುವುದನ್ನು ಸುಧಾರ್ಥಿಯು ಸ್ಮರಿಸಿರುವುದನ್ನು ಮುಂದಿನ ಸರಳ ಪರಿಚಯಕೃತಿಯಲ್ಲಿ ಕಾಣಬಹುದು.  (ಇನ್ನೂಇದೆ)
                                                                                                                                                                                             -ಜಮದಗ್ನಿಸುತ.

No comments:

Post a Comment