Tuesday 26 May 2020

ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ

***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ 
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ***
ಭಾಗ:೫. 

”ಸಿರಿಭೂವಲಯದ ಜಯಾಖ್ಯಾನಾಂತರ್ಗತ  ಭಗವದ್ಗೀತಾ” 

 ಇದುವರೆವಿಗೆ ಪ್ರಕಟವಾಗಿರುವ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ಪ್ರಥಮಖಂಡದಲ್ಲಿ ಅಡಕವಾಗಿರುವ ಅಂತರ್ಸಾಹಿತ್ಯಕೃತಿಗಳಲ್ಲಿ ’ಭಗವದ್ಗೀತೆ’ಯು ಹೆಚ್ಚು ಪ್ರಮುಖವಾದುದು.  ವ್ಯಾಸಮಹರ್ಷಿಯ ಜಯಾಖ್ಯಾನಾಂತರ್ಗತವಾದ ಗೀತೆಯ ಭಾಗವಿದೆಂದು ಸಿರಿಭೂವಲಯದ ಕವಿ ಕುಮುಂದೇಂದುಮುನಿಯು ಖಚಿತವಾಗಿ ಸೂಚಿಸಿರುವುದಿದೆ.  ಇದರೊಂದಿಗೆ ’ಇಂದ್ರಕೃತ: ಇಂದ್ರಾಕ್ಷೀಸ್ತೋತ್ರ’  ಹಾಗೂ ನಾಟ್ಯಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಸಂಸ್ಕೃತ ಹಾಡುಗಬ್ಬವು  ಇದುವರೆಗೆ ಈ ಕಾವ್ಯಾಂತರ್ಗತವಾಗಿ ದೊರೆತಿರುವ ವಿಚಾರವಿದೆ. ಇವಲ್ಲದೇ ಇನ್ನೂ ಹಲವರು ಪ್ರಾಚೀನಸಾಹಿತ್ಯದ ಭಾಗಗಳು ಈ ಕಾವ್ಯದಲ್ಲಿ ಅಂತರ್ಸಹಿತ್ಯವಾಗಿ ಉಗಮವಾಗಿರುವುದಿದೆ. ಅವುಗಳನ್ನು ಬಲ್ಲವರು ಪರಿಶೀಲಿಸಿ ಪ್ರತ್ಯೇಕವಾಗಿ ಪ್ರಕಟಿಸಬೇಕಿದೆ.
ಸಿರಿಭೂವಲಯವನ್ನು ಕುರಿತು ಸುಧಾರ್ಥಿಯು ಪ್ರಕಟಿಸತೊಡಗಿದ ಪರಿಚಯಕೃತಿಗಳ ಸರಣಿಯಿಂದ ಕೆಲವು ವಿದ್ವಾಂಸರಿಗೆ  ವಿಪರೀತ ಮುಜುಗರ ಉಂಟಾಗತೊಡಗಿತು! ಈ ಕಾರಣಕ್ಕಾಗಿ ಅವರು ತಮ್ಮ ವ್ಯಾಪ್ತಿಯಲ್ಲಿ ಸಾಧ್ಯವಾದ ಮಟ್ಟಿಗೆ ಈ ಪರಿಚಯಕೃತಿಗಳ ವಿರುದ್ಧ ಉದ್ದೇಶಪೂರ್ವಕವಾದ ಅಪಪ್ರಚಾರಕ್ಕೆ ಪ್ರಾರಂಭಿಸಿದರು.  ತಾವುಗಳು ಯಾರೂ ಕಳೆದ ೬೫ ವರ್ಷಗಳಿಂದ ಕೈಹಾಕಲಾಗದೇ ಉಳಿದಿದ್ದ ಈ ಕಾವ್ಯದ ವಿಚಾರವನ್ನು ಈತ ಇಷ್ಟು ವಿವರವಾಗಿ ಪರಿಚಯಿಸುತ್ತಿದ್ದಾನಲ್ಲ ಎಂಬುದು ಅವರ ವಿರೋಧಕ್ಕೆ ಮೂಲಕರಣವೆಂಬ ಸಂಗತಿ ಈ ಸುಧಾರ್ಥಿಗೆ ತಿಳಿಯದ್ದೇನಲ್ಲ!
’ಸಿರಿಭೂವಲದಲ್ಲಿ ಯಾವುದಾವುದೋ ಪ್ರಾಚೀನ ಸಾಹಿತ್ಯ ಕೃತಿಗಳು ಅಡಕವಾಗಿದೆಯೆಂದು ಇಲ್ಲದ ಪ್ರಚಾರಮಾಡಲಾಗುತ್ತಿದೆ. ಇಷ್ಟು ದಿನವಾದರೂ ಸಿರಿಭೂವಲಯದಲ್ಲಿ ಅಂತರ್ಗತವಾದುದೆಂದು ಒಂದಾದರೂ ಪ್ರಚೀನ ಸಾಹಿತ್ಯವನ್ನು ಇವರು ಜನತೆಯ ಮುಂದಿರಿಸಿಲ್ಲ. ಎಲ್ಲವೂ ಕೇವಲ ಬಾಯಿಮತಿನ ಹೇಳಿಕೆಗಳು ’ಎಂದು ಕೆಲವರು ಲೇವಡಿಮಾಡಿದ್ದೂ ಈ ಸುಧಾರ್ಥಿಯ ಗಮನಕ್ಕೆ ಬಾರದಿರಲಿಲ್ಲ!
ಈ ಕಾರಣದಿಂದಾಗಿಯೇ ಸಿರಿಭೂವಲಯಲ್ಲಿ ಎಲ್ಲೆಲ್ಲೊ ಚದುರಿದಂತೆ ದೊರೆಯುವ ’ಭಗವದ್ಗೀತೆ’ಯ ಪಾಠವನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈಹಾಕಿದಾಗ, ಕೆಲವೊಂದು ಅಚ್ಚರಿಯ ಮಾಹಿತಿಗಳು ಗಮನಸೆಳೆದುವು. ಅವುಗಳನ್ನೆಲ್ಲ ವ್ಯವಸ್ಥಿತವಾಗಿ ಕ್ರೋಢೀಕರಿಸಿ ರೂಪಿಸಿದ ಒಂದು ಅಮೂಲ್ಯವಾದ ಬರಹವೇ ಈ  ”ಸಿರಿಭೂವಲಯದ ಜಯಾಖ್ಯಾನಾಂತರ್ಗತ  ಭಗವದ್ಗೀತಾ”
ಪ್ರಥಮಖಂಡದ ೫೯ ಅಧ್ಯಾಯಗಳಪೈಕಿ ಬೇರೆ ಬೇರೆ ಅಧ್ಯಾಯಗಳಿಗೆ ಸೇರಿದಂತೆ ಮೂರು ಸ್ಥಳಗಳಲ್ಲಿ ಉಗಮವಾಗುವ ಈ ಭಗವದ್ಗೀತೆಯ ವಿವರಗಳನ್ನು ಕುರಿತಂತೆಯೇ ಸುಧಾರ್ಥಿಯು ಈ ಕಿರುಹೊತ್ತಿಗೆಯನ್ನು  ರೂಪಿಸಿದ್ದಾಗಿದೆ.  ಡೆಮಿ ೧/೮ ಆಕಾರದ ಸುಮಾರು ೭೬ ಪುಟಗಳವ್ಯಾಪ್ತಿಯಲ್ಲಿ  ವಿಷಯಕ್ಕೆ ಸಂಬಂಧಿಸಿದ ಸಮಗ್ರಮಾಹಿತಿಗಳ ಪ್ರತಿಪಾದನೆಯೊಂದಿಗೆ ತುಂಬ ಸರಳವಾಗಿ ಈ ಕಿರುಹೊತ್ತಿಗೆಯನ್ನು ನಿರೂಪಿಸಿದ್ದಾಗಿದೆ.  ಇಷ್ಟು ಮಹತ್ವಪೂರ್ಣವಾದ  ಈ ಕಿರುಹೊತ್ತಿಗೆಯು ೨೦೧೨ರಲ್ಲಿ ಪ್ರಕಟವಾಗಿದೆ.  ಈ ಪರಿಚಯಕೃತಿಯನ್ನೂ ಕೂಡ. ಹಾಲುವಾಗಿಲು ಗ್ರಾಮದಲ್ಲಿ ನೆಲೆಸಿರುವ ಶ್ರೀಮತಿ ಗಿರಿಜಾ ಅವರೇ ಪ್ರಕಟಿಸಿದ್ದಾರೆ.
ಓದುಗರೊಂದಿಗೆ, ಸರ್ವಭಾಷಾಮಯೀಭಾಷಾ ಸಿರಿಭೂವಲಯದಲ್ಲಿರುವ ಜಯಾಖ್ಯಾನಾಂತರ್ಗತ ಭಗವದ್ಗೀತಾ,  ಪ್ರತ್ಯೇಕ ಗಣಿತಸಾರಂ, ಟಿಪ್ಪಣಿಗಳು ಎಂದು ಪರಿಚಯಕೃತಿಯನ್ನು ವಿಂಗಡಿಸಿ ವಿಷಯನಿರೂಪಣೆಮಾಡಲಾಗಿದೆ.
ಸಿರಿಭೂವಲಯದಲ್ಲಿ ಬಂದಿರುವ  ಜಯಾಖ್ಯಾನಾಂತರ್ಗತ ಭಗವದ್ಗೀತಾ ಹಾಗೂ ಇಂದಿನ ಮಹಾಭಾರತದ ಭಗವದ್ಗೀತೆ ಇವುಗಳ ನಡುವೆ ಮೇಲುನೋಟಕ್ಕೇ ಕಾಣಬರುವ ಕೆಲವೊಂದು ವಿಶೇಷ ಅಂಶಗಳನ್ನು ಸೂಚಿಸಿ ಒಂದು ಪಟ್ಟಿಯನ್ನು ನೀಡಲಾಗಿದೆ. ಇಲ್ಲಿಕಾಣಬರುವ ಸರಳವಾದ ಮಾಹಿತಿಯು ಎಂಥವರಿಗೂ ಈ ಕಾವ್ಯಾಂತರ್ಗತವಾದ ಭಾಗದಲ್ಲಿನ ವ್ಯತ್ಯಾಸವನ್ನು ತೋರಿಸಿಕೊಡುತ್ತದೆ.
ಜಯಾಖ್ಯಾನಾಂತರ್ಗತ ಭಗವದ್ಗೀತಾ,  ಎಂಬ ಶೀರ್ಷಿಕೆಯಲ್ಲಿ  ಕಾಣಬರುವ ಮೂರು ಅಧ್ಯಾಯಗಳಿಗೆ ಸೇರಿದ ಶ್ಲೋಕಗಳನ್ನು ಸೂಚಿಸಲಾಗಿದೆ. 
 ಪ್ರತ್ಯೇಕ ಗಣಿತಸಾರಂ ಎಂಬ ಶೀರ್ಷಿಕೆಯಲ್ಲಿ   ಎಂಟು ಶ್ಲೋಕಗಳನ್ನು ನೀಡಲಾಗಿದೆ. ಇದರಲ್ಲಿ ೫ ಶ್ಲೋಕಗಳು ಇಂದಿನ ಭಗವದ್ಗೀತೆಯ ಬೇರೆ ಬೇರೆ ಅಧ್ಯಾಯಗಳಿಗೆ ಸೇರಿದವುಗಳಾಗಿವೆ. ಭಗವದ್ಗೀತೆಗೆ ಸಂಬಂಧಿಸಿ ಕೆಲವು ಮಾಹಿತಿಗಳನ್ನು  ಕೊನೆಯಲ್ಲಿ ’ಟಿಪ್ಪಣಿಯ’ ರೂಪದಲ್ಲಿ ನೀಡಲಾಗಿದೆ. 
ಈ ಸರಳಸುಂದರವಾದ ಕಿರುಹೊತ್ತಿಗೆಯ ಬೆನ್ನುಡಿಯಾಗಿ ಪರಿಚಯಕಾರನು ” ರಷ್ಯಾದೇಶದ ಒಂದು ಪ್ರಾಂತ್ಯದ ಆಡಳಿತವು ೨೦೧೧ರ ಸುಮಾರಿನಲ್ಲಿ ’ಭಗವದ್ಗೀತೆಯನ್ನು’ ಕಾನೂನು ಮೂಲಕ ನಿಷೇಧಿಸುವ ಆಲೋಚನೆ ಹೊಂದಿದೆ ಎಂಬ ಮಾಹಿತಿಯನ್ನು ನಮೂದಿಸಿ, ಈ ವಿಚಾರವಾಗಿ ಸಿರಿಭೂವಲಯದಲ್ಲಿ ಕಾಣಬರುವ ಪ್ರಸಂಗವನ್ನು  ವಿವರಿಸಿರುವುದಿದೆ.  ಇವರ ಮನೋಧರ್ಮ ಕುರಿತು  ”ಶೀತದೇಶದ ಜನರ ಅರಿವ ಅರಿವೆಂದರಿಯಲಾಗದು ಅರಿಯೆಂದು ತಿಳಿದು ಇರಿ” ಎಂದು ದ್ವಾರಕೆಯ ಶ್ರೀಷ್ಣನು   ಭಗವದ್ಗೀತೆಯಲ್ಲಿ ಹೇಳಿರುವ ಮಾತು ಸಿರಿಭೂವಲಯದಲ್ಲಿದೆ!!   ಈ ಮಾತು ಕೇವಲ ೪೦೦೦ ವರ್ಷಗಳ ಹಿಂದಿನ ಪರಿಸರಕ್ಕೆ ಸೀಮಿಯವಾದುದಲ್ಲ!! ಇಂದಿಗೂ ಇದು ಬಹಳ ಸೂಕ್ತವಾಗಿ ಅನ್ವಯಿತ್ತದೆ.  ರಷ್ಯಾ, ಚೀನ,  ಮುಂತಾದ ಶೀತದೇಶಗಳು ಹಾಗೂ ಅಮೆರಿಕ, ಫ್ರಾನ್ಸ್, ಇಂಗ್ಲೇಂಡ್, ಜರ್ಮನಿ, ಮುಸ್ಲಿಮ್ ದೇಶಗಳು  ತೀರ ಲೌಕಿಕ ಜೀವನಕ್ಕೆ  ಜೋತುಬಿದ್ದು, ಭಾರತದಂಥ ಸೌಮ್ಯವಾದಿಗಳನ್ನು ತಮ್ಮ ಜೀವವಿರೋಧಿ ನೀತಿಯಿಂದ ಹಿಂಸಿಸುತ್ತಿರುವುದು  ಸರ್ವವಿದಿತ.
ಜಗತ್ತಿನ ಸಾಹಿತ್ಯೇತಿಹಾಸದಲ್ಲಿ ಅತ್ಯಂತ ಅಚ್ಚರಿಯ ಕಾವ್ಯವೆನಿಸಿರುವ ಸಿರಿಭೂವಲಯವು ಭಗವದ್ಗೀತೆಯನ್ನುಕುರಿತ ಪರಂಪರಾಗತ ನಂಬಿಕೆಯನ್ನು ಬುಡಮೇಲುಮಾಡುವ ಮಾಹಿತಿಗಳನ್ನು ಈ ಕಿರುಹೊತ್ತಿಗೆಯು ತನ್ನ ಒಡಲೊಳಗೆ ಅಡಗಿಸಿಕೊಂಡಿದೆ!!
ಸಿರಿಭೂವಲಯದಲ್ಲಿ ಅಡಕವಾಗಿರುವ ಜಯಾಖ್ಯಾನಾಂತರ್ಗತ ಭಗವದ್ಗೀತೆಯು ಮೂರೇ ಅಧ್ಯಾಯಗಳಲ್ಲಿ ಮುಕ್ತಾಯವಾಗಿದೆ! ಅಲ್ಲಿರುವ ಒಟ್ಟು ಶ್ಲೋಕಗಳಸಂಖ್ಯೆ ೧೬೩ ಮಾತ್ರ!!  ಪ್ರಥಮ ಅಧ್ಯಾಯದಲ್ಲಿ ೫೩ ಶ್ಲೋಕಗಳಿವೆ.  ಈ ೫೩ ಶ್ಲೋಕಗಳ ಮೊದಲನೇ ಅಕ್ಷರಗಳನ್ನು ಜೋಡಿಸಿಕೊಂಡಾಗ ’ಓಂ ಇತ್ಯೇಕಕ್ಷರಮ್ ಬ್ರಹ್ಮ ವ್ಯಾಹರನ್ ಮಾಮನುಸ್ಮರನ್ | ಯದ್ ಪ್ರಯಾತ್ಯಜನ್ ದೇಹಂ ಸಯಾತ್ಪರಮಾಮ್ ಗತಿಂ’  ಎಂಬುದಾಗಿ ಈ ಅಧ್ಯಯದ  ಎರಡನೇ  ಶ್ಲೋಕವು ಪುನರುತ್ಪತ್ತಿಯಗುತ್ತದೆ!!
ಎರಡನೇ ಅಧ್ಯಾಯದಲ್ಲಿ ೫೪ ಶ್ಲೋಕಗಳಿವೆ. ಇವುಗಳ ಮೊದಲನೇ ಅಕ್ಷರಗಳನ್ನು ಜೋಡಿಸಿಕೊಂಡಾಗ:   ’ಮಮಯೋನಿರ್ಮಹದ್ ಬ್ರಹ್ಮಾತಸ್ಮಿನ್ಗರ್ಭಂದಧಾಂಯಹಂ | ಸಂಭವಸ್ಸರ್ವಭೂತಾನಾಂ ತತೋಭವತಿಭಾರತ| ’  ಎಂಬುದಾಗಿ ಈ ಅಧ್ಯಾಯದ ಮೊದಲನೇ ಶ್ಲೋಕವು ಉಗಮವಾಗುತ್ತದೆ!!
ಮೂರನೇ ಅಧ್ಯಾಯದಲ್ಲಿ ೫೪ ಶ್ಲೋಕಗಳಿವೆ. ಇವುಗಳ ಮೊದಲನೇ ಅಕ್ಷರಗಳನ್ನು ಜೋಡಿಸಿಕೊಂಡರೆ: ’ತತಿಗುಹ್ಯತಮಂ ಶಾಸ್ತ್ರಂಇದಮುಕ್ತಂಮಯಾನಘ| ಏತದ್ಭುದ್ಧ್ವಾದುದ್ಧಿಮಾನ್ ಸ್ಯಾತ್ ಕೃತ ಕೃತ್ಯಶ್ಚ (ಸ್ಯ)ಭಾರತ’ ಎಂಬುದಾಗಿ ಈ ಅಧ್ಯಾಯದ ಮೊದಲನೇ ಶ್ಲೋಕವು ಉಗಮವಾಗುತ್ತದೆ!!
ಮೊದಲನೇ ಅಧ್ಯಾಯದ ಕೊನೆಯಲ್ಲಿ ”ಅಥಾ ಅನುಸಂಧೇಯಾಃಸ್ತೋತ್ರಶ್ಲೋಕಾಃ ಚಿದಾನಂದಘನೇಕೃಷ್ಣೇನೋಕ್ತಸ್ವಮುಖತೋರ್ಜುನಂ| ವೇದತ್ರಯೀಪರಮಾನಂದತತ್ವಾರ್ಥಋಷಿಮಂಡಲಂ| ಎಂಬ ಶ್ಲೋಕವು ನಮೂದಾಗಿದೆ.   ಮೂರನೇ ಅಧ್ಯಾಯದ ಪ್ರಾರಂಭದಲ್ಲಿ ”ಅಥಾ ವ್ಯಾಸರ್ಷಿಪ್ರಣೀತ ಜಯಾಖ್ಯನಾಂತರ್ಗತ ಶ್ರೇಡಿ ಋಕ್ ಮಂತ್ರಾಂತರ್ಗತ ಗೀತಾ” ಎಂದು ಸೂಚಿಸಲಾಗಿದೆ.
ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು ತಮ್ಮ ’ಜೈನಭಗವದ್ಗೀತೆ’ ಎಂಬ ಲೇಖನದಲ್ಲಿ ಹಲವಾರು ಅಮೂಲ್ಯಮಾಹಿತಿಗಳನ್ನು ತಿಳಿಸಿದ್ದಾರೆ. ಅವುಗಳಲ್ಲಿಆದಿತೀರ್ಥಂಕರ ಋಷಭದೇವನು  ಭರತ ಬಾಹುಬಲಿಯ ಉಪನಯನದಲ್ಲಿ  ’ಅನಾದಿಗೀತೆ’ ಯನ್ನು ಬೋಧಿಸಿದ್ದು; ಇದನ್ನೇ ನೇಮಿ ತೀರ್ಥಂಕರನು ಬಲರಾಮ ಶ್ರೀಕೃಷ್ಣರಿಗೆ ಬೋಧಿಸಿದ್ದು; ಅದನ್ನೇ  ವ್ಯಸರು ತಮ್ಮ ಜಯಾಖ್ಯಾನದಲ್ಲಿ ಸೇರಿಸಿದ್ದು; ಇದನ್ನೇ ಕೃಷ್ಣನು ಅರ್ಜುನನಿಗೆ ತಿಳಿಯುವಂತೆ ಎಂಟುಭಾಷೆಗಳಲ್ಲಿ ಹೇಳಿದ್ದು, ಪ್ರಮುಖಸಂಗತಿಗಳಾಗಿವೆ.  ಕನ್ನಡ, ಪ್ರಾಕೃತ, ಸಂಸ್ಕೃತ, ಪೈಶಾಚಿಕ ಇತ್ಯಾದಿ ಪಂಚಭಷೆಗಳ ಭಗವದ್ಗೀತೆಯನ್ನು  ಕುಮುದೆಂದುಮುನಿಯು ತನ್ನ ಸಿರಿಭೂವಲಯದಲ್ಲಿ ಅಳವಡಿಸಿರುವುದಿದೆ.
’ ಭಾಷೆ, ಸಂಸ್ಕೃತಿ, ಚರಿತ್ರೆ ಮುಂತಾದುವುಗಳಿಗೆ ಸಂಬಂಧಿಸಿದ ಇಂದಿನ ಹಲವಾರು ನಂಬಿಕೆಗಳನ್ನು ಸಿರಿಭೂವಲಯವು  ಬುಡಮೇಲುಮಾಡುತ್ತದೆ, ಅದನ್ನು ಒಪ್ಪುವುದು ಅನಿವಾರ್ಯ ಎಂದು ಪ್ರಜ್ಞಾವಂತರು ನುಡಿದಿರುವುದಿದೆ!! ಸಿರಿಭೂವಲಯದ  ಪ್ರಾಚೀನತೆಯನ್ನೇ ಅಲ್ಲಗಳೆಯುವಮೂಲಕ ಈ ಕಾವ್ಯದ ಮಹತ್ವವನ್ನೇ ಮೂಲೆಗುಂಪು ಮಾಡುತ್ತಾ, ಕನ್ನಡದ ವಿದ್ಯಾವಂತರು ೬೦ ವರ್ಷಗಳಕಾಲ ನಡೆದುಬಂದಿದ್ದಾರೆ!! ಇಂದಿನ ಭಗವದ್ಗೀತೆಯ ಮೂಲ ಸೆಲೆಯು ಯಾವುದು? ಎಂಬುದನ್ನು  ಸಂಶಯಾತೀತವಾಗಿ ತಿಳಿಸುವ ಕಾರ್ಯವನ್ನು ಸಿರಿಭೂವಲವು ಖಚಿತವಾಗಿ ನಿರ್ವಹಿಸಿದೆ.
ಇದಕ್ಕೆ ಸಂಬಂಧಿಸಿದ ಅಚ್ಚರಿಯ ಮಾಹಿತಿಗಳನ್ನು  ಓದುಗರು ಈ ಕಿರುಹೊತ್ತಿಗೆಯಲ್ಲಿ ಕಾಣಬಹುದಾಗಿದೆ’ ಎಂದು ಸೂಚಿಸಿರುವುದು ಓದುಗರ ಅಂತರಂಗದ ತುಮುಲವನ್ನು ತಡೆಯಲು ವಹಿಸಿದ ಮುನ್ನೆಚ್ಚರಿಯ ಕ್ರಮದಂತಿದೆ. ಹೌದು! ಈ ಕಿರುಹೊತ್ತಿಗೆಯು ಸ್ಫೋಟಿಸಿರುವ ಹಲವಾರು ಖಚಿತಮಾಹಿತಿಗಳು ನಿಜಕ್ಕೂ ವಿಸ್ಮಯಕಾರಿಯಾಗಿವೆ.
ಓದುಗರೊಂದಿಗೆ ಮಾತನಾಡುವ ಸನ್ನಿವೇಶದಲ್ಲಿ ಸುಧಾರ್ಥಿಯು ”ವಿಶ್ವಸಾಹಿತ್ಯದಲ್ಲಿ ವ್ಯಾಸ; ಕಾಳಿದಾಸ; ಶೇಕ್ಸ್ಪಿಯರ್; ಪಂಪ ಮುಂತಾದವರ ಕಾವ್ಯಗಳನ್ನು ಕುರಿತು ಅವರ ಬರಹದ ಗಾತ್ರದ ನೂರುಪಾಲಿನಷ್ಟು  ಬೇರೆಯವರ ಬರಹಗಳು ಪ್ರಕಟವಾಗಿರುವುದಿದೆ!  ಆದರೆ, ಈಗ ಪ್ರಕಟ ವಾಗಿರುವಷ್ಟು  ಸಿರಿಭೂವಲಯ ಕಾವ್ಯವನ್ನು ಓದಿರುವವರೇ ಜಗತ್ತಿನಲ್ಲಿ ಬೆರಳೆಣಿಕೆಗೂ ಸಾಲದಷ್ಟು ಜನಗಳೆಂದಮೇಲೆ; ಅದನ್ನುಕುರಿತು ಬರೆಯುವವರಾದರೂ ಯಾರು!?  ಈಕಾರಣದಿಂದಾಗಿ ಸಿರಿಭೂವಲಯ ಕಾವ್ಯವನ್ನು ಕುರಿತು ಮತ್ತೆ ಮತ್ತೆ ಬರೆಯಲೇಬೇಕಾದುದು ನನಗೆ ಅನಿವಾರ್ಯ ” ಎಂಬುದನ್ನು ಸ್ಪಷ್ಟಪಡಿಸಿರುವುದಿದೆ. 
 ”ಸಿರಿಭೂವಲಯದ ಅಂತರ್ಸಾಹಿತ್ಯಗಳಪೈಕಿ ಭಗವದ್ಗೀತೆಯು ಹೆಚ್ಚಿನ ಗಮನಸೆಳೆಯುವಂಥದು. ಇದಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಇಂದಿನ ಭಗವದ್ಗೀತೆಯ ಅಭಿಮಾನಿಗಳ ಹಾಗೂ ವಿದ್ವಾಂಸರ ಗಮನಕ್ಕೆ ತರುವ ಉದ್ದೇಶದಿಂದ ಈ ಕಿರುಹೊತ್ತಿಗೆಯನ್ನು ಪ್ರಕಟಿಸಲಾಗಿದೆ. ಇಲ್ಲಿನ ಮಾಹಿತಿಗಳನ್ನು ಮುಕ್ತಮನಸ್ಸಿನಿಂದ  ಪರಿಶೀಲಿಸುವ ಔದಾರ್ಯವನ್ನು  ಹೊಂದಿರುವವರಿಗೆ ಮಾತ್ರವೇ  ೧೨೦೦ ವರ್ಷಗಳ ಹಿಂದೆ ನಮ್ಮ ಸಾಮಾಜಿಕ ಹಾಗೂ ಸಾಹಿತ್ಯಿಕ ಪರಿಸರದ ಖಚಿತ ಮಾಹಿತಿಯ ದರ್ಶನವಾಗಲು ಸಾಧ್ಯ!! 
ಇದು ನಾನು ಸೂಚಿಸುವ ಅನಿಸಿಕೆಯಲ್ಲ! ಜಗತ್ತಿನ ಅತ್ಯಂತ ಅಚ್ಚರಿಯ ಕಾವ್ಯವೆನಿಸಿದ ಸಿರಿಭೂವಲಯವನ್ನು ಕುರಿತು ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು ಸೂಚಿಸಿರುವ ಖಚಿತವಾದ ನಿಲುವಿನ ಸಾರಾಂಶ” ಎಂದು ಸೂಚಿಸುತ್ತ, ಇಂದಿನ ವಿದ್ವಾಂಸರು ತನ್ನ ವಿರುದ್ಧ ಯಾವುದೇ ಧಾಳಿಯನ್ನೂ ನಡೆಸಲಾಗದಂತೆ ಸುಧಾರ್ಥಿಯು ರಕ್ಷಣೆಯ ಕೋಟೆ ನಿರ್ಮಿಸಿಕೊಂಡಿರುವುದು ಗಮನಾರ್ಹವಾಗಿದೆ!!!
ಸಂಶೋಧಕ ಕೆ. ಶ್ರೀಕಂಠನವರು ಸಿರಿಭೂವಲಯಾಂತರ್ಗತವಾದ ಭಗವದ್ಗೀತೆಯನ್ನು ಪ್ರತ್ಯೇಕವಾಗಿ ವಿಂಗಡಿಸಿ, ಮುದ್ರಿಸಿದ್ದರೆಂಬ ಮಾಹಿತಿ, ಹಾಗೂ  ಈ ಸಂಗ್ರಹವನ್ನು ಬೆಂಗಳೂರಿನ ಶ್ರೀ  ಕೆ. ನಾಗರಾಜ ಎಂಬುವವರು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಪ್ರಕಟಿಸಿರುವರೆಂಬ ಪತ್ರಿಕಾ ವರದಿಯೂ ಇಲ್ಲಿ ದಾಖಲಾಗಿವೆ.
ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತೆಯ ೧೬೩ ಶ್ಲೋಕಗಳಿರುವ ೩ ಅಧ್ಯಾಯಗಳು ದೇವನಾಗರೀ ಲಿಪಿಯಲ್ಲಿ ಮುದ್ರಿತವಾಗಿರುವ ಮಾಹಿತಿಯೂ ಇಲ್ಲಿ ದಾಖಲಾಗಿದೆ.
ಸಿರಿಭೂವಲಯದಲ್ಲಿ ಭಗವದ್ಗೀತೆಯು ಸ್ತಂಬರೂಪದ ಅಂತರ್ಸಾಹಿತ್ಯವಾಗಿ ಉಗಮವಾಗುವ ಕ್ರಮದೊಂದಿಗೆ ಅವುಗಳನ್ನು ಪುನಃ ಅಶ್ವಗತಿಯಲ್ಲಿ ಸಾಗುತ್ತ ಪೂರ್ಣ ಸಾಹಿತ್ಯದ ಶುದ್ಧರೂಪವನ್ನು ಸಂಪಾದಿಸುವ ಕಠಿಣವಾದ ಕ್ರಮವನ್ನು ಸರಳವಾಗಿ ವಿವರಿಸಿರುವುದನ್ನು ಓದುಗರು ಗಮನಿಸಬಹುದು.
ಕೆ. ಶ್ರೀಕಂಠಯ್ಯನವರು ೧೯೫೩ರಲ್ಲಿ ಸಿದ್ಧಪಡಿಸಿದ ಈ ಜಯಾಖ್ಯಾನಾಂತರ್ಗತ ಭಗವದ್ಗೀತೆಯ ಪೂರ್ಣಪಾಠವನ್ನು ವಿಮರ್ಶಿಸಿರುವ ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು ದಿನಾಂಕ ೨೭-೦೮- ೧೯೬೧ ರ ಕರ್ಮವೀರ  ಸಾಪ್ತಾಹಿಕದಲ್ಲಿ  ’ಜೈನಭಗವದ್ಗೀತೆ’ ಎಂಬ ಲೇಖನ ಬರೆದು  ಕೆಲವಾರು ಅಮೂಲ್ಯ ವಿಚಾರಗಳನ್ನು ಹೊರಗೆಡಹಿರುವುದನ್ನು ಇಲ್ಲಿ ಸೂಚಿಸಲಾಗಿದೆ.
ತಮ್ಮಕಾಲದಲ್ಲಿದ್ದ ಸಾಮಾಜಿಕ ಪರಿಸರದ ಗೊಂದಲವನ್ನು ನಿರೋಧಿಸುವ ದಿಸೆಯಲ್ಲಿ ಶಂಕರಭಗವತ್ಪಾದರು ವೇದೋಪನಿಷತ್ತುಗಳ ಮತ್ರಾಂತರ್ಗತವಾದ ಮಾಹಿತಿಗಳನ್ನು ಭಗವದ್ಗೀತೆಯ ಛಂದಸ್ಸಿಗೆ ಪರಿವರ್ತಿಸಿ,  ಜಯಾಖ್ಯಾನಾಂತರ್ಗತವಾಗಿದ್ದ ೧೬೩ ಶ್ಲೋಕಗಳವ್ಯಾಪ್ತಿಯ ಭಗವದ್ಗೀತೆಯನ್ನು ೭೦೦ಶ್ಲೋಕಗಳ ವ್ಯಾಪ್ತಿಗೆ ವಿಸ್ತರಿಸಿ,  ೧೮ ಅಧ್ಯಾಯಗಳಾಗಿ ವಿಂಗಡಿಸಿ, ದಿನನಿತ್ಯದ ಪಾರಾಯಣಕ್ಕೆ; ಮನನಕ್ಕೆ ಅನುಕೂಲವಾಗುವಂತೆ ಅದಕ್ಕೆ ಒಂದು ನಾಟಕದ ಸ್ವರೂಪ ನೀಡಿ, ಅದನ್ನು  ಸೌತಿಯ  ’ಮಹಾಭಾರತದಲ್ಲಿ’  ಸಮಾವೇಶಗೊಳಿಸಿದರೆಂಬ ವಿಚಾರವನ್ನು ತಾರ್ಕಿಕವಾಗಿ ಸಮಂಜಸವೆನಿಸುವಂತೆ ಈ ಸರಳಪರಿಚಯಕೃತಿಯಲ್ಲಿ ನಿರೂಪಿಸಲಾಗಿದೆ.
 ಮುಂದೆ ಈ ಭಾಗವು   ಉಪನಿಷತ್ತುಗಳು; ಬ್ರಹ್ಮಸೂತ್ರಗಳೊಂದಿಗೆ ಸರಿಸಮಾನವಾದ ಸ್ಥಾನ ಪಡೆಯುವಂತಾಗಿ, ’ಪ್ರಸ್ಥಾನತ್ರಯ’ ಎಂಬ ಮಹತ್ವ ಪಡೆದು, ಭಗವತ್ಪಾದರಾದಿಯಾಗಿ , ರಾಮಾನುಜರು ಮತ್ತು ಮಧ್ವಾಚಾರ್ಯರು ಈ ಪ್ರಸ್ಥಾನತ್ರಯಗಳಿಗೆ ವ್ಯಾಖ್ಯಾನರಚಿಸಿರುವುದನ್ನುಕುರಿತೂ  ಮಾಹಿತಿಯು ಸೇರಿದೆ.
ಭಗವದ್ಗೀತೆಯು ಸೂಚಿಸಿರುವ ಜೀವನಧರ್ಮಸಾರವನ್ನು ಕುರಿತು ಪ್ರಕಟವಾಗಿರುವ ಹಲವಾರು ಕೃತಿಗಳ ಪೈಕಿ ಭಾರತ ದರ್ಶನ ಪ್ರಕಾಶನದ ವಿದ್ವಾಂಸರ ಅಭಿಪ್ರಾಯಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಆಲ್ಬರೂನಿ ಎಂಬುವವನು ೭೪೫ ಶ್ಲೋಕಗಳ ಭಗವದ್ಗೀತೆಯನ್ನೇ ಪರ್ಷಿಯನ್ ಭಾಷೆಗೆ ತರ್ಜುಮೆ ಮಾಡಿರುವ ವಿಚಾರವನ್ನೂಭರತದರ್ಶನದ ವಿದ್ವಾಂಸರಮಂಡಳಿಯು  ಚರ್ಚಿಸಿರುವುದಿದೆ.
ಮಹಾಭಾರತವೆಂಬುದು ಇಂದಿನ ಜಾಗತಿಕ ಸಾಹಿತ್ಯಕ್ಷೇತ್ರದಲ್ಲಿ ದೊಡ್ಡಕಾವ್ಯವಾಗಿ ಪರಿವರ್ತಿತವಾಗಿರುವ ಹಿನ್ನೆಲೆಯನ್ನು ಕುರಿತು ಕೆ. ಶ್ರೀಕಂಠಯ್ಯನವರು ರೂಪಿಸಿರುವ ವಿವಿಧ ಮಾಹಿತಿಗಳ ವಿವರಗಳನ್ನೂ ಇಲ್ಲಿ ಅಳವಡಿಸಲಾಗಿದೆ. 
ವ್ಯಕ್ತಿಜೀವನದ ಹಾದಿಯನ್ನು ಕುರಿತು ಸನಾತನಧರ್ಮ ಹಾಗೂ ಜೈನಸಂಪ್ರದಾಯದ ವಿವರಣೆಗಳಲ್ಲಿ  ಕಂಡುಬರುವ ವ್ಯತ್ಯಾಸಗಳ ವಿವರಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಕೆ. ಶ್ರೀಕಂಠಯ್ಯನವರು ಮಹಾಭಾರತವನ್ನು ಕುರಿತು ಆಳವಾದ ಅಧ್ಯಯನ ನಡೆಸಿ  ’ಜಯ-ಭಾರತ-ಮಹಾಭಾರತ’  ಹಾಗೂ ’ಮಹಾಭಾರತದ ಮಹಾಸ್ವರೂಪ’ ಎಂಬ ಎರಡು ಲೇಖನಗಳಲ್ಲಿ ಸೂಚಿಸಿರುವ ಮಹತ್ತರವಾದ ವಿಚಾರಗಳನ್ನು ಕುರಿತು ಇಲ್ಲಿ ವಿವರಿಸಲಾಗಿದೆ.
ಅವುಗಳ ಪೈಕಿ, ವ್ಯಾಸಮಹರ್ಷಿಯುಬರೆದ ’ಜಯಾಖ್ಯಾನ’ ದಲ್ಲಿ ಕೇವಲ ೮೮೫೦ ಶ್ಲೋಕಗಳಿರುವುದು; ವೈಶಂಪಾಯನನ  ’ಭಾರತ’ ದಲ್ಲಿ ೨೪೦೦೦ ಶ್ಲೋಕಗಳಿರುವುದು ಹಾಗೂ ಸೂತಪುರಾಣಿಕನ ವಂಶಜನಾದ ’ಸೌತಿ’ಯು ಬರೆದ ’ಮಹಾಭಾರದಲ್ಲಿ’ ಒಂದುಲಕ್ಷ ಶ್ಲೋಕಗಳಿರುವುದನ್ನು ಸೂಚಿಸಲಾಗಿದೆ. ಕ್ರಿ. ಶ. ೪೪೨ರವೇಳೆಗಾಗಲೇ ಈ ಒಂದುಲಕ್ಷಶ್ಲೋಕಗಳವ್ಯಾಪ್ತಿಯ ಮಹಾಭಾರತವು ಪ್ರಚಲಿವಿದ್ದುದಕ್ಕೆ ಶಾಸನದ ಆಧಾರವನ್ನು ಕೆ. ಶ್ರೀಕಂಠಯ್ಯನವರು ವಿವರಿಸಿರುವ ಮಾಹಿತಿಯೂ ಈ ಸರಳಪರಿಚಯದಲ್ಲಿ ದಾಖಲಾಗಿದೆ.
ಭಗವದ್ಗೀತೆಯನ್ನು ಮೆಚ್ಚುವವರು ಇರುವಂತೆಯೇ  ಚುಚ್ಚುವವರು ಹಾಗೂ ಕಚ್ಚುವವರೂ ಇರುವುದು ಸಹಜ! ಇಂಥ ಎರಡುಗುಂಪುಗಳಿಗೂ ಸಮಾನವಾಗಿ ಅನ್ವಯವಾಗುವ ಒಂದು ನಿಲುವನ್ನು ಈ ಸರಳಪರಿಚಯಕಾರನು ಸೂಚಿಸಿರುವುದಿದೆ! ಅದನ್ನು ಕುರಿತು ಇಲ್ಲಿ ಸ್ವಲ್ಪ ಗಮನಹರಿಸೋಣ. ’ಅಗಾಧವಾದ ವೇದೋಪನಿಷತ್ತುಗಳು; ಅಸಂಖ್ಯಾತವಾದಧರ್ಮಶಾಸ್ತ್ರಗಳು; ರಾಮಾಯಣ; ಮಹಾಭಾರತ; ಭಾಗವತ ಮುಂತಾದುವುಗಳನ್ನೆಲ್ಲ ಸಮಗ್ರವಾಗಿ ಅಧ್ಯಯನಮಾಡಿದರೂ ದೊರೆಯುವ ಜ್ಞಾನವೆಂದರೆ ಬ್ರಹ್ಮಜ್ಞಾನಮಾತ್ರ!
ಇಷ್ಟೆಲ್ಲ ಅಪಾರ ಸಾಹಿತ್ಯದ ರಾಶಿಯನ್ನು ಅಧ್ಯಯನಮಾಡುವ ಅಗತ್ಯವಿಲ್ಲದೇ ; ಕೇವಲ ೭೦೦ ಶ್ಲೋಕಗಳ ಪಠಣ ಹಾಗೂ ಮನನದಿಂದ ಇಂಥ ಮಹತ್ತರವಾದ ಬ್ರಹ್ಮಜ್ಞಾನವನ್ನುಒದಗಿಸುವುದಕ್ಕಾಗಿಯೇ  ಭಗವದ್ಗೀತೆಯು ರೂಪುಗೊಂಡಿದೆ ಎಂಬುದು ಅತ್ಯಂತ ಸ್ಪಷ್ಟವಾದ ಸಂಗತಿಯಾಗಿದೆ.  ಭಗವದ್ಗೀತೆಯ ಕರ್ತೃಯಾರು?  ರಚಿಸಿದಕಾಲಯಾವುದು?  ಅಲ್ಲಿರುವ ಶ್ಲೋಕಗಳ ಸಂಖ್ಯೆ ಎಷ್ಟು?  ಇದನ್ನು ಯಾರು ? ಯಾರಿಗೆ?  ಎಲ್ಲಿ? ಯಾವಾಗ, ಏಕೆ ಹೇಳಿದರು?  ಇತ್ಯಾದಿ ಅನುಪಯುಕ್ತವಾದ ಸಂಗತಿಗಳನ್ನು ಕುರಿತು ಶುಷ್ಕ ಚರ್ಚೆಗಿಂತಲೂ  ಭಗವದ್ಗೀತೆಯು ಪ್ರತಿಪಾದಿಸುವ ಬ್ರಹ್ಮಸಾಕ್ಷಾತ್ಕಾರ ಪಡೆಯುವುದು ಜಾಣತನವೆಂದು ನನ್ನ ಭಾವನೆ. ಎಷ್ಟೆಲ್ಲ ಶಾಸ್ತ್ರ, ಪುರಾಣ, ಧರ್ಮ, ವೇದೋಪನಿಷತ್ತುಗಳ ಸಾರವು ಈ ಭಗವದ್ಗೀತೆಯಲ್ಲಿ ಅಡಗಿದೆ ಎಂಬುದನ್ನು  ಕುರಿತು ಹಲವಾರು ವಿದ್ವಾಂಸರು ಖಚಿತಪಡಿಸಿರುವುದು ಸ್ವಯಂವೇದ್ಯವಾಗಿದೆ. ಅಂದಮೇಲೆ  ಅದನ್ನು ಕುರಿತು ಕುಹಕವಾಡದೇ; ನಂಬಲು, ಆಚರಿಸಲು ಅಡ್ಡಿಯೇನಿದೇ!!??
ಭಗವದ್ಗೀತೆಯ ರೂಪಾಂತರವನ್ನು ಕುರಿತು ಈ ಪರಿಚಯಕೃತಿಯಲ್ಲಿರುವ ಮಾಹಿತಿಗಳ ವಿವರಗಳನ್ನು ಒಪ್ಪುವುದೂ ಬಿಡುವುದೂ ಓದುಗರ ಹಾಗೂ ವಿದ್ವಾಂಸರ ನಿರ್ಧಾರಕ್ಕೆ ಬಿಟ್ಟುದೆಂಬ ಹೇಳಿಕೆಯನ್ನು ಸೂಚಿಸುವಮೂಲಕ ಪರಿಚಯಕಾರನು  ಇದಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡವನ್ನೂ ಇಲ್ಲಿ ಹಾಕದಿರುವುದು ಪ್ರಮುಖವಿಚಾರವಾಗಿದೆ.
ಈ ಕಿರುಹೊತ್ತಿಗೆಯ ಕೊನೆಯಲ್ಲಿ ಸೂಚಿಸಿರುವ ಟಿಪ್ಪಣಿಗಳು ಎಂಬ ಶೀರ್ಷಿಕೆಯಲ್ಲಿ ಸಿರಿಭೂವಲಯದ ಭಗವದ್ಗೀತೆಗೂ  ಇಂದಿನ ಪ್ರಚಲಿತ ಭಗವದ್ಗೀತೆಗೂ ಕೆಲವೊಂದು ವ್ಯತ್ಯಾಸಗಳಿರುವುದನ್ನು  ಪರಿಚಯಕಾರನು ಸೂಚಿಸಿರುವುದಿದೆ.
ತಾನು ಚರ್ಚಿಸುವ ಯಾವುದೇ ವಿಚಾರವಿರಲೀ ಅದಕ್ಕೆ ಸಂಬಂಧಿಸಿದಂತೆ ತಾರ್ಕಿಕವಾದ ಆಧಾರಗಳನ್ನು ಸೂಚಿಸುತ್ತ ಸಾಗಿರುವ ಪರಿಚಯಕಾರನ ಪ್ರಯತ್ನವನ್ನು ಸಾರಾಸಗಟಾಗಿ ತಳ್ಳಿಹಾಕಲು ಅವಕಾಶವಿಲ್ಲದೇ ಸಮಕಾಲೀನ ವಿದ್ವಾಂಸರು ಇವುಗಳನ್ನು ಕುರಿತು ಉಪೇಕ್ಷೆಯಿಂದ ವರ್ತಿಸುವ ಹಾದಿಹಿಡಿದರು. ಅಂಥವರೆಲ್ಲರೂ  ಜನಸಾಮಾನ್ಯರಿಗೆ ಇದನ್ನು ವಿವರಿಸುವಲ್ಲಿ ದೂರವಾಗಿದ್ದಾರೆಂದು  ಪರಿಚಯಕಾರನು ಸೂಚಿಸುವುದು ಸೂಕ್ತವೋ ಅಲ್ಲವೋ ಎಂಬುದನ್ನು ಕುರಿತು ಓದುಗರೇ ನಿರ್ಧರಿಸಬೇಕಿದೆ. (ಮುಂದುವರೆಯುವುದು) 
                             -ಜಮದಗ್ನಿಸುತ.

No comments:

Post a Comment