Tuesday 26 May 2020

ಸಿರಿಭೂವಲಯಸಾಗರರತ್ನಮಂಜೂಷ ೨. (ಭಾಗ-೧)

***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ***
ಭಾಗ: ೯.

** ಸಿರಿಭೂವಲಯಸಾಗರರತ್ನಮಂಜೂಷ ೨. ** (ಭಾಗ-೧)

ಸಿರಿಭೂವಲಯಸಾಗರರತ್ನಮಂಜೂಷದ ಮುಂದುವರೆದ ಭಾಗವಾಗಿ  ಪ್ರಥಮಖಂಡದ ೫೧ನೇ ಅಧ್ಯಾಯದಿಂದ ೫೯ನೇ ಅಧ್ಯಾಯದವರೆಗಿನ ಮೂಲಸಾಹಿತ್ಯ ಹಾಗೂ ಅದಕ್ಕೆ ಸಂಬಂಧಿಸಿದ ಅಂತರ್ಸಾಹಿತ್ಯವನ್ನೊಳಗೊಂಡ ಕೃತಿಗೆ  ’ಸಿರಿಭೂವಲಯಸಾಗರರತ್ನಮಂಜೂಷ ೨’ ಎಂದು ಹೆಸರಿಟ್ಟು ಮುದ್ರಣಕಾರ್ಯವನ್ನು ಮುಗಿಸಲಾಯಿತು.
ಡೆಮಿ ೧/೪ ಅಳತೆಯ  ೨೬೦ ಪುಟಗಳ ಈ ಪರಿಚಯಕೃತಿಗೂ ’ಸಿರಿಭೂವಲಯಸಾಗರರತ್ನಮಂಜೂಷ’ದ ರಕ್ಷಾಪುಟವನ್ನೇ  ’ಸಿರಿಭೂವಲಯಸಾಗರರತ್ನಮಂಜೂಷ-೨ ’ ಎಂದು ಸೂಚಿಸಿ ಅಲಂಕರಿಸಲಾಗಿದೆ. ಸಿರಿಭೂವಲಯಕಾವ್ಯದ ಸರಳಭಾವಾನುವಾದವನ್ನು ಆಂಗ್ಲಾಭಾಷೆಯಲ್ಲಿ ರೂಪಿಸಿದ ಶ್ರೀ ಕವಿ ಸುರೇಶ್ ಅವರು ಈ ಪರಿಚಯಕೃತಿಗೆ ಮುನ್ನುಡಿ ಬರೆದಿರುವುದು ಒಂದು ವಿಶೇಷವಾಗಿದೆ. ಈ ಪ್ರಯತ್ನ ಕುರಿತು ಅವರು ತಮ್ಮ ಮನದಾಳದ ಅನಿಸಿಕೆಗಳನ್ನು  ಈ ರೀತಿಯಲ್ಲಿ ಸೂಚಿಸಿರುವುದನ್ನು ಕಾಣಬಹುದು. ..
”ಕುಮುದೇಂದುಮುನಿಯ ಸಿರಿಭೂವಲಯ ಅನೇಕರಿಂದ, ಅನೇಕಬಾರಿ ಮತ್ತು ಅನೇಕವೇದಿಕೆಗಳಲ್ಲಿ  ವರ್ಣಿಸಲ್ಪಟ್ಟಿರುವಂತೆ  ಒಂದು ಅತ್ಯದ್ಭುತ ಮತ್ತು ಅಚ್ಚರಿಯ ಅಂಕಕಾವ್ಯ ಎಂಬುದರಲ್ಲಿ ಎರಡುಮಾತಿಲ್ಲ. ದಿವಂಗತ ಕರ್ಲಮಂಗಲಂ ಶ್ರೀಕಂಠಯ್ಯನವರಿಂದ ಪ್ರಾರಂಭವಾದ ಇದರ ಅನ್ವೇಷಣಾ ಕಾರ್ಯ ಇಂದು ಹಾಸನದ ಸುಧಾರ್ಥಿಯವರ  ಸಿರಿಭೂವಲಯದ ಹಲವಾರು ಪರಿಚಯಗ್ರಂಥಗಳ ಮೂಲಕ ಒಂದು ತಾತ್ವಿಕ ನೆಲೆಗೆ ಬಂದು ನಿಂತಿದೆ. ... ಅವರು ತಮ್ಮ ಪ್ರತಿಯೊಂದು ವಿಚಾರವನ್ನೂ  ತಮಗೆ ಒಪ್ಪಿಗೆಯಾದ  ಆಧಾರಗಳಮೇಲೆ ಬಹು ನೇರವಾಗಿ ಮತ್ತು ಖಚಿತವಾಗಿ ಪ್ರಸ್ತುತ ಪಡಿಸಿದ್ದಾರೆ.   ಕುಮುದೇಂದು ಕವಿಯ ಮೂಲ, ಕಾಲ, ಕಾವ್ಯರಚನಾಶೈಲಿ, ಕಾವ್ಯದ ಪ್ರಾಚೀನತೆ, ಕಾವ್ಯದಲ್ಲಿ ಅಂತರ್ಗತವಾಗಿರುವ  ಬಹುಭಾಷಾಸಾಹಿತ್ಯ,  ಅಂಕಾಕ್ಷರಗಳ ವಿಶ್ಲೇಷಣೆ ಇತ್ಯಾದಿ ಅನೇಕ ವಿಚಾರಗಳ ಬಗ್ಗೆ ಕೂಡ ಅವರು ಸ್ಪಷ್ಟವಾದ  ವಿವರಗಳನ್ನು ನೀಡಿದ್ದಾರೆ. 
ಇಂತಹ ವಿಚಾರಗಳನ್ನು  ’ಸಂಪ್ರದಾಯವಾದಿ’ ವಿದ್ವಾಂಸರು  ವಿರೋಧಿಸುವುದು ಸಹಜವೇ ಅಗಿದೆ.  ಹಾಗಾಗಿಯೇ ಬಹುಶಃ ನಿಷ್ಟುರ ಸತ್ಯಪ್ರತಿಪಾದಕರಾದ ಕುಮುದೇಂದುಮುನಿ, ಸಂಶೋಧಕ ಕೆ. ಶ್ರೀಕಂಠಯ್ಯನವರು, ಪ್ರಚಾರಕ ಕೆ. ಅನಂತಸುಬ್ಬರಾಯರು, ಪರಿಚಯಕಾರ  ಸುಧಾರ್ಥಿಯವರು ಸಹ ಸ್ವಲ್ಪ ಮಟ್ಟಿಗೆ ಅವಜ್ಞೆಗೆ ಒಳಗಾಗಿದ್ದಾರೆ ಎಂದರೆ ತಪ್ಪಗಲಾರದು. ... ಸುಧಾರ್ಥಿಯವರೇ ತಿಳಿಸಿರುವಂತೆ ಅವರೊಬ್ಬ ಬ್ರಾಹ್ಮಣರು ಎಂಬ ಕಾರಣಕ್ಕಾಗಿಯೇ  ಕೆಲವು ಸಮುದಾಯದವರು ಇದನ್ನು ಉಪೇಕ್ಷಿಸುತ್ತಿದ್ದಾರೆ. ಬಹುಶಃ ಸುಧಾರ್ಥಿಯವರು ಬ್ರಾಹ್ಮಣೇತರರಾಗಿದ್ದರೆ ಅವರಿಗೆ ಈಹೊತ್ತಿಗೆ ಸಾಕಷ್ಟು ಪ್ರಚಾರ, ಪ್ರಸಿದ್ಧಿ ಮತ್ತು ಪ್ರಶಸ್ತಿಗಳು ಹಿಂಬಲಿಸುತ್ತಿದ್ದುವು.... ಈ ಮಹಾನ್ ಕಾವ್ಯದ ಬಗ್ಗೆ ಕನ್ನಡಿಗರ ದಿವ್ಯ ನಿರ್ಲಕ್ಷ್ಯ ಸಹಜವಾಗಿಯೇ ಸುಧಾರ್ಥಿಯವರಿಗೆ ನಿರಾಸೆ ತಂದಿದೆ. ಇವರ ಪರಿಶ್ರಮವನ್ನು ಗುರುತಿಸದ ಮತ್ತು ಅವರು ಪ್ರಸ್ತಾಪಿಸಿರುವ ಅನೇಕ ಮೂಲಭೂತ ವಿಚಾರಗಳಬಗ್ಗೆ ಈವರೆವಿಗೂ ಒಬ್ಬಿಬ್ಬರನ್ನು ಹೊರತುಪಡಿಸಿ, ಉಳಿದ ಯಾವ ವಿದ್ವಾಂಸರೂ  ’ಚ’ ಕಾರವೆತ್ತದಿರುವ ಪ್ರವೃತ್ತಿ ನಮ್ಮ ಸಮಾಜದ ಮತ್ತು ಸಾಹಿತ್ಯಲೋಕದ ಒಂದು ದೋಷವೆಂದೇ ಭಾವಿಸಬೇಕಾಗುತ್ತದೆ. ... ಸಿರಿಭೂವಲಯ ಕೃತಿ ಕುರಿತು ಪ್ರಚಾರ ಮತ್ತು ಪರಿಚಯಕಾರ್ಯದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಸುಧಾರ್ಥಿ ದಂಪತಿಗಳಿಗೆ ಕುಮುದೇಂದುಮುನಿಯು ಮತ್ತು ಆ ನಿರಾಮಯನ ಸಂಪೂರ್ಣ ಅನುಗ್ರಹ ಲಭಿಸಲಿ ಮತ್ತು ಅವರ ಸಿರಿಭೂವಲಯದ ಈ ಪರಿಚಯಗ್ರಂಥಗಳು ತಮ್ಮ ಉದ್ದೇಶಿತಗುರಿಯನ್ನು ಸಾಧಿಸಲಿ ಎಂದು ಆತ್ಮೀಯವಾಗಿ ಹಾರೈಸುತ್ತೇನೆ” ಎಂಬ ಮಾತುಗಳು ಸಮಯೋಚಿತವಾಗಿವೆ. ಆದರೆ, ಈ ಸರಳಪರಿಚಯಕೃತಿಗಳಿಂದ ಜನಸಾಮಾನ್ಯರಿಗೆ ಸಿರಿಭೂವಲಯವನ್ನು ಕುರಿತ ಆಸಕ್ತಿಯುಂಟಾಗಲೆಂಬುದೇ ಈ ಸುಧಾರ್ಥಿ ದಂಪತಿಗಳ ಪ್ರಧಾನ ಉದ್ದೇಶವೇ ವಿನಃ. ಇವುಗಳ ಮಾರಾಟದಿಂದ ಹೇರಳವಾಗಿ ಹಣಸಂಪದಿಸಬೇಕೆಂಬ ಆಶೆಯನ್ನಂತೂ  ಇವರು ಹೊಂದಿದವರಲ್ಲ ಎಂಬುದು ಬಹಳಷ್ಟು ಜನಗಳಿಗೆ ತಿಳಿದಿಲ್ಲ.
ಓದುಗರೊಂದಿಗೆ ತಮ್ಮ ಮನದಾಳದ ಕೆಲವು ಮಾತುಗಳನ್ನು ಹಂಚಿಕೊಂಡಿರುವ ಪರಿಚಯಕಾರನು  ಕವಿ ಕುಮುದೇಂದುಮುನಿ, ಸಂಶೋಧಕ ಕೆ. ಶ್ರೀಕಂಠಯ್ಯನವರು, ಹಾಗೂ ಈ ಕಾವ್ಯದ ಸರಳಪರಿಚಯಕೃತಿಗಳ ಆಂಗ್ಲಾ ಭಾವಾನುವಾದಕರಾದ ಶ್ರೀ  ಕವಿ ಸುರೇಶ್ ಕುರಿತು ಸೂಚಿಸಿರುವ ಕೆಲವು ಮತುಗಳು ಇಲ್ಲಿ ಸ್ಮರಣೀಯವಾದುವು. ”ಸರ್ವಜ್ಞಸ್ವರೂಪಿಯದ ಕುಮುದೇಂದುವಿನ ಪ್ರತಿಭೆಗೆ ಅಂದಿನ ವಿದ್ವಜ್ಜನರ  ಸಾರ್ವತ್ರಿಕವಾದ ’ಕೃಪಾಶೀರ್ವಾದ’  ಇರದಿದ್ದಕಾರಣದಿಂದಾಗಿಯೇ  ಈ ಜಗದ್ವಿಖ್ಯಾತವಾದ ಕನ್ನಡ ಅಂಕಕಾವ್ಯವು  ತನ್ನ ಅರ್ಹತೆಗೆ ತಕ್ಕಂತೆ ಜನಮನ್ನಣೆ ಪಡೆಯಲಾಗಲಿಲ್ಲ.  ಸಂಶೋಧಕ ಕೆ.  ಶ್ರೀಕಂಠಯ್ಯನವರ ವಿಚಾರವೂ  ಇದೇ ರೀತಿಯದಾಯಿತು.  ಆದರೆ, ಯಾವರೀತಿಯಿಂದಲೂ ಈ ಮಹಾನ್ ಚೇತನಗಳ ಪ್ರತಿಭೆಯ ಸನಿಹವೂ ಸುಳಿಯಲಾಗದ ಸುಧಾರ್ಥಿಯ ’ಯೋಗ’ ಮಹತ್ತರವಾದುದು. 
ಸಮಕಾಲಿನ ಸಾಹಿತ್ಯಕ್ಷೇತ್ರದ  ಇಬ್ಬರು ಹಿರಿಯ ಚೇತನಗಳು  ತಮ್ಮ ಕೃಪಾಶೀರ್ವಾದಗಳನ್ನು ಮುನ್ನುಡಿಯಮೂಲಕ ಈ ಪರಿಚಯಕಾರನಿಗೆ  ಕರುಣಿಸಿದ್ದಾರೆ.  ವಯೋಮಾನದಲ್ಲಿ ಸುಧಾರ್ಥಿಗಿಂತಲೂ  ಕಿರಿಯರಾದರೂ  ಶಿಕ್ಷಣ ಹಾಗೂ  ಸಾಹಿತ್ಯಿಕ ಪ್ರತಿಭೆಯಲ್ಲಿ ಸುಧಾರ್ಥಿಗಿಂತಲೂ  ಹೆಚ್ಚು ಮುನ್ನಡೆಸಾಧಿಸಿರುವ  ಆತ್ಮೀಯಮಿತ್ರರಾದ ಶ್ರೀ ಸುರೇಶ್ ಅವರು  ಈಗ ಈ ಪರಿಚಯಕೃತಿಗೆ  ಮುನ್ನುಡಿಬರೆದು, ಸುಧಾರ್ಥಿಯ ಪ್ರಯತ್ನಕ್ಕೆ  ಬೆಂಬಲನೀಡಿದ್ದಾರೆ. ಈ ಮುನ್ನುಡಿಯ ಭಾವವು ಕೇವಲ ಒಬ್ಬರನ್ನೊಬ್ಬರು ಪ್ರಶಂಸಿಸುವ ಸ್ತರದ್ದಲ್ಲ.
 ಈ ಪರಿಚಯಕೃತಿಗಳ ಭಾವಾನುವಾದದ ಕಾರಣಕ್ಕಾಗಿ ಶ್ರೀ ಸುರೇಶ್ ಅವರು ಸಿರಿಭೂವಲಯದ ವಿಚಾರದಲ್ಲಿ  ಸುಧಾರ್ಥಿಗಿಂತಲೂ  ಹೆಚ್ಚಿನ ಸಾಮರ್ಥ್ಯ, ಅನುಭವ ಹೊಂದಿದ್ದರೆಂಬುದು ಸ್ವಯಂ ವೇದ್ಯವಾಗಿದೆ. ಸುಧಾರ್ಥಿಯು ೩೫ ವರ್ಷಗಳಕಾಲ ಅಧ್ಯಯನಮಾಡಿದ್ದನ್ನು  ಇವರು ಕೇವಲ ಕೆಲವೇ ವಾರಗಳಲ್ಲಿ ಸಮರ್ಪಕವಾಗಿ ಗ್ರಹಿಸಿ, ಇದನ್ನು ಆಂಗ್ಲಾಭಾಷೆಯಮೂಲಕ ಸಮರ್ಥವಾಗಿ ಪರಿಚಯಿಸಿದ್ದಾರೆ.  ಇವರುಗಳ ಔದಾರ್ಯದಿಂದಾಗಿ ಓದುಗರಿಗೆ ಸುಧಾರ್ಥಿಯವಿಚಾರದಲ್ಲಿ ಅಭಿಮನ ಹೆಚ್ಚಲು ಸಹಕಾರಿಯಗಿರುವುದು  ಮಾತ್ರವಲ್ಲ; ಪರಿಚಯಕಾರನಿಗೆ ಉನ್ನತ ಮಟ್ಟದ ಮನೋನೆಮ್ಮದಿಯನ್ನು ದೊರಕಿಸಿಕೊಟ್ಟಿದೆ.
ಸಿರಿಭೂವಲಯಸಾರದಲ್ಲಿ ಕಾವ್ಯದ ಪ್ರಥಮ ಖಂಡದ ೧ನೇ ಅಧ್ಯಾಯದಿಂದ ೩೩ನೇ ಅಧ್ಯಾಯದವರೆವಿಗೆ ಪ್ರಕಟಿಸಲಾಗಿದ್ದ ಸ್ಥೂಲಪರಿಚಯವು. ಇಲ್ಲಿ ೩೪ನೇ ಅಧ್ಯಾಯದಿಂದ ೫೯ನೇ ಅಧ್ಯಾಯದವರೆವಿಗೂ ಮುಂದುವರೆದಿದೆ.  ೫೧ನೇ ಅಧ್ಯಾಯದ ಮೂಲ ಅಕ್ಷರಸಾಹಿತ್ಯದ ಮುದ್ರಣ ಇಲ್ಲಿಉಗಮವಾಗುವ ಅಶ್ವಗತಿ, ಸ್ತಂಬಕಾವ್ಯ, ಹಾಗೂ ಸರ್ಪಗತಿ ಮತ್ತು ಜೋಡಿನಗರಬಂದದಲ್ಲಿ ಸಾಗಿದಾಗ ಉಗಮವಾಗುವ  ಅಂತರ್ಸಾಹಿತ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಮುದ್ರಿಸಲಾಗಿದೆ.  ೫೯ನೇ ಅಧ್ಯಾಯದವರೆವಿಗೂ  ಇದೇ ಕ್ರಮದಲ್ಲಿ  ಮೂಲಸಾಹಿತ್ಯ ಹಾಗೂ ಅಂತರ್ಸಾಹಿತ್ಯವನ್ನು ಮುದ್ರಿಸಲಾಗಿದೆ.
ಅಗತ್ಯವೆನಿಸಿದಲ್ಲೆಲ್ಲ,  ಕೆಲವೊಂದು ಮಾಹಿತಿಗಳನ್ನು ’ಸಂದೂಕ’ ದಲ್ಲಿ  ಮುದ್ರಿಸುವ ಕ್ರಮವನ್ನು  ಪರಿಚಯಕರನು ಅನುಸರಿಸಿರುವುದುಂಟು. ಇಂಥಮಾಹಿತಿಗಳು ಓದುಗರಿಗೆ ಹೆಚ್ಚಿನ ವಿಚಾರಗಳನ್ನು ಒದಗಿಸಿಕೊಡುತ್ತವೆ. ಅಂಥದೊಂದು ಪ್ರಸಂಗವನ್ನು ಇಲ್ಲಿ ಗಮನಿಸೋಣ:  ”ಈ ಮೊದಲೇ ಒಮ್ಮೆ ಸೂಚಿಸಿರುವಂತೆ  ಅಂತರ್ಸಾಹಿತ್ಯವನ್ನು ಗುರುತಿಸುವಾಗ, ಎರಡು ಅಥವಾ ಅದಕ್ಕೂ ಹೆಚ್ಚಿನ ಬೇರೆ ಬೇರೆ ಕಾವ್ಯಭಾಗಗಳು ಒಟ್ಟೊಟ್ಟಿಗೇ ಪ್ರವಹಿಸಿರುವುದನ್ನು ಕಾಣಬಹುದು.  ಈ ಕಾರಣದಿಂದಾಗಿ, ಇಲ್ಲಿ ಸಂಗ್ರಹಿಸಿರುವ ಅಶ್ವಗತಿಯ ಅಂತರ್ಸಾಹಿತ್ಯವು  ಸಮರ್ಪಕವಲ್ಲವೆದು ತಿಳಿಯಬೇಕು.  ಪ್ರಚೀನ ಕನ್ನಡ,  ಸಂಸ್ಕೃತ,  ಪ್ರಾಕೃತ ಸಾಹಿತ್ಯಗಳ ವ್ಯಾಪಕ ಪರಿಚಯವಿರುವವರುಮಾತ್ರ ಇಲ್ಲಿನ ಅಂತರ್ಸಾಹಿತ್ಯವನ್ನು ಕ್ರಮಬದ್ಧವಾಗಿ ವಿಂಗಡಿಸಲು ಸಾಧ್ಯವಾಗುತ್ತದೆ. ಆದರೆ, ನಮ್ಮ ದುರಾದೃಷ್ಟದಿಂದ  ಈ ಅಚ್ಚರಿಯಕಾವ್ಯವು  ನಮ್ಮ ವಿದ್ವಜ್ಜನರಿಂದ ಒಂದುರೀತಿಯಲ್ಲಿ ಬಹಿಷ್ಕೃತವಾದ ಸಾಹಿತ್ಯವೆಂಬ ಪರಿಸರವಿರುವುದರಿಂದ  ನಮ್ಮ ಸಮಕಾಲಿನ ವಿದ್ವಾಂಸರು  ಈ ವಿಚಾರವಾಗಿ ಅಸಕ್ತಿವಹಿಸಿ, ಹೊಸವಿಚಾರಗಳನ್ನು  ಹೊರಕ್ಕೆ ತರುವ ಕಾರ್ಯಕ್ಕೆ ಕೈಹಾಕುವರೆಂಬ ನಂಬಿಕೆ ನನಗಿಲ್ಲ.
ಕನ್ನಡದಹೆಮ್ಮೆಯನ್ನು  ಜಗದ್ವಿಖ್ಯಾತಗೊಳಿಸುವ  ಆಕಾಂಕ್ಷೆಹೊಂದಿ,  ಮುಂದೆ ಹುಟ್ಟಿಬರುವ  ಯಾರಾದರೂ ಪ್ರತಿಭಾಶಾಲಿಯು  ಈ ಕಠಿಣವಾದ ಕಾರ್ಯಕ್ಕೆ ಪ್ರಯತ್ನಿಸಬಹುದೇನೋ ಎಂಬ ಆಶೆಯಿಂದ ನಾನು ಈ ಕಾಯಕ ನಡೆಸಿದ್ದೇನೆ.  ಸರಳವಾಗಿ ಇಂದಿನ ಒತ್ತಕ್ಷರದ ಲಿಪಿಕ್ರಮದಲ್ಲೇ ಓದಿತಿಳಿಯಬಹುದಾದ ಆವೃತಿಯು  ’ಸಿರಿಭೂವಲಯಸಾರ’ ಎಂಬುದಾಗಿ ೨೦೧೦ರಲ್ಲೇ ಪ್ರಕಟವಾಗಿದ್ದರೂ  ಇದುವರೆವಿಗೆ ಯಾರೊಬ್ಬ ಸಂಸ್ಕೃತ, ಪ್ರಾಕೃತ ಅಥವಾ ಕನ್ನಡ ವಿದ್ವಾಂಸರೂ  ಇಲ್ಲಿನ ಮಾಹಿತಿಗಳ ಒಪ್ಪು ತಪ್ಪುಗಳನ್ನು  ಕುರಿತು ತಮ್ಮ ತುಟಿಬಿಚ್ಚರಿದಿರುವುದರಿಂದ ನಾನು ಈ ಅನಿಸಿಕೆಯನ್ನು ವ್ಯಕ್ತಗೊಳಿಸುವುದು ಅನಿವಾರ್ಯವಾಗಿದೆ. ಜೈನಸಂಪ್ರದಯದವರಾಗಲೀ; ಬ್ರಹ್ಮಣರಾಗಲೀ, ಉಳಿದಯಾವುದೇ ಸಮುದಾಯದವರಾಗಲೀ  ಈ ಜಗತ್ತಿನ ಅಚ್ಚರಿಯ ಕಾವ್ಯದವಿಚಾರವಾಗಿ ಯಾವುದೇ ಅಸಕ್ತಿ ತೋರಿಸದೇ  ಉಪೇಕ್ಷಿಸುತ್ತಿರುವುದು ನನ್ನ ಅನುಭವಕ್ಕೆ ಬಂದಿದೆ.  ಈ ಅಚ್ಚರಿಯ ಪ್ರಾಚೀನ ಕನ್ನಡ ಅಂಕಕಾವ್ಯದಲ್ಲಿ ಅಡಗಿರುವ ಮಹತ್ತರವಾದ ಮಹಿತಿಗಳತ್ತ ಎಲ್ಲರೂ ಗಮನಹರಿಸಬೇಕೆಂಬುದು ನನ್ನ ಕಳಕಳಿಯ ಮನವಿಯಾಗಿದೆ.  ಈ ಕಾರಣದಿಂದಲಾದರೂ  ಇಂದಿನ ವಿದ್ವಾಂಸರು ಇತ್ತ ಗಮನಹರಿಸಿದರೆ,  ಈ ಕಾವ್ಯದಿಂದ ಮಹತ್ತರವಾದ ಲೋಕೋಪಕಾರವಾದೀತೆಂದು  ಕನಸು ಕಾಣುತ್ತಿದ್ದೇನೆ.” ಎಂದು ಈ ಪರಿಚಯಕಾರನು  ಹಂಬಲಿಸಿರುವುದನ್ನು ನೋಡಿದಾಗ  ಕೇವಲ ಹಣಸಂಪಾದನೆಗಾಗಿ ಈತನು ಈ ಕೆಲಸಕ್ಕೆ ಕೈಹಾಕಿದ್ದರೆ, ಇಷ್ಟುದೂರ ಸಾಗುವ ಸಾಧ್ಯತೆ ಇರುತ್ತಿರಲಿಲ್ಲ ಎಂಬುದು ವೇದ್ಯವಾಗುತ್ತದೆ.
ಪ್ರತಿಯೊಂದು ಅಧ್ಯಾಯದ ಪಾದಪದ್ಯಗಳಲ್ಲಿ ಉಗಮವಾಗುವ ಅಂತರ್ಸಾಹಿತ್ಯವನ್ನು ಕುರಿತು ಒಂದು ಮಾತು ಎಂಬ ಶೀರ್ಷಿಕೆಯಲ್ಲಿ  ಕೆಲವಾರು ಸಲಹೆ ಸೂಚನೆಗಳೊಂದಿಗೆ,  ಈ ಪಾದಪದ್ಯಗಳನ್ನು ಮುದ್ರಿಸುವಲ್ಲಿ ಕಾಣಬರುವ ಕೆಲವೊಂದು ಗಮನಸೆಳೆಯುವ ಅಂಶಗಳನ್ನು ವಿವರಿಸಲಾಗಿದೆ.  ಇವುಗಳಲ್ಲಿ ಅಶ್ವಗತಿ ಹಾಗೂ ಸರ್ಪಗತಿಯಲ್ಲಿ ಸಾಗುವ ಕ್ರಮವನ್ನು ಕುರಿತು ವಿವರಣೆ ನೀಡಲಾಗಿದೆ.
 ಇಲ್ಲಿನ ಅಂತರ್ಸಾಹಿತ್ಯವನ್ನು ತೆಗೆಯುವಕಾರ್ಯವು ಅಪೂರ್ಣವಾಗಿದೆಯೆಂಬ ಮಾಹಿತಿಯನ್ನೂ , ಅದಕ್ಕಾಗಿ ಶ್ರದ್ಧಾವಂತ ಪ್ರಯತ್ನವು ನಡೆಯಬೇಕೆಂಬುದನ್ನೂ ಸೂಚಿಸಲಾಗಿದೆ. ಭಗವದ್ಗೀತೆಯು ಜೈನಸಂಪ್ರದಾಯದ ಗ್ರಂಥವಲ್ಲವೇ? ಎಂಬ ಶೀರ್ಷಿಕೆಯಲ್ಲಿ ಜೈನಸಂಪ್ರದಾಯಕ್ಕೆ ಸೇರಿದ ಕೆಲವಾರು ಮುಖ್ಯ ಅಂಶಗಳನ್ನು ಸೂಚಿಸಲಾಗಿದೆ. 
ಪರಪೀಡನೆ ಮಾಡದೇ  ಜೀವನಸಾಗಿಸುವವರು ಯಾರೇ ಇರಲೀ, ಅವರು ಮಾನವಧರ್ಮಕ್ಕೆ ಸೇರುತ್ತಾರೆಯೇ ವಿನಃ ಅವರಲ್ಲಿ ಜೈನ, ಬ್ರಾಹ್ಮಣ ಎಂದಾಗಲೀ,  ಮೇಲು-ಕೀಳೆಂಬುದಾಗಿ ವಿಭಾಗವಾಗಲೀ ಇಲ್ಲ.  ನಾವೇ ಎಲ್ಲರಿಗಿಂತಲೂ ಶ್ರೇಷ್ಠರು  ಎಂದು ಹೇಳಿಕೊಳ್ಳುವವರುಮಾತ್ರ ಈ ರೀತಿಯಲ್ಲಿ ಪಕ್ಷಪಾತಮಾಡಲು ಸಾಧ್ಯ.  ಎಂಬ ವಿವೇಕವನ್ನು ಸೂಚಿಸಲಾಗಿದೆ. ಅದರೆ ತಮ್ಮ ಜೀವಿತದಲ್ಲಿ  ಒಮ್ಮೆಯೂ ಸಿರಿಭೂವಲಯ ಕಾವ್ಯವನ್ನೇ ನೋಡದಿರುವವರು  ಈ ಮಹಿತಿಯನ್ನು ಅರಿಯಲು ಹೇಗೆಸಾಧ್ಯ?  ಎಂಬ ಪ್ರಶ್ನೆಯನ್ನೂ ಪರಿಚಯಕಾರನು ಸೂಚಿಸಿರುವುದಿದೆ.
ನಿರ್ಗುಣಪೂಜಾ: ಎಂಬ ಶೀರ್ಷಿಕೆಯಲ್ಲಿ ಶಂಕರರು ಸಗುಣೋಪಸನೆಯೊಂದಿಗೆ ’ನಿರ್ಗುಣೋಪಸನೆ’ಗೂ ಪ್ರಾಮುಖ್ಯತೆ ನೀಡಿರುವುದನ್ನು ಸೂಚಿಸಲಾಗಿದೆ. ನಿರ್ಗುಣಪೂಜಾಕ್ರಮದ ಸಂಸ್ಕೃತ ಶ್ಲೋಕರೂಪ ಹಾಗೂ ಅದರ ಕನ್ನಡ ಭಾವಾನುವಾದವನ್ನೂ ಇಲ್ಲಿ ಸೇರಿಸಲಾಗಿದೆ.ಇಲ್ಲಿನ ಮಾಹಿತಿಗಳು ಆಸಕ್ತಿ ಇರುವವರಿಗೆ ಉಪಯುಕ್ತವಾಗಿವೆ,
ನಗೆಯುಬರುತಿದೆ ನನಗೆ ನಗೆಯುಬರುತಿದೆ;  ಎಂಬ ಶೀರ್ಷಿಕೆಯಲ್ಲಿ  ಸಿರಿಭೂವಲಯ ಕಾವ್ಯಕುರಿತು ಒಂದು  ದತ್ತಿನಿಧಿ ಉಪನ್ಯಾಸನೀಡಲು ಉಡುಪಿಗೆ ಹೋದಾಗ ಅನುಭವಿಸಿದ ವಿಚಿತ್ರ ಪ್ರಸಂಗವನ್ನು ಕುರಿತ ವಿವರಣೆಯಿದೆ. ಈ ಪ್ರಸಂಗದಲ್ಲಿ ಸೇರಿರುವವರೆಲ್ಲರೂ ಹೆಚ್ಚಿನ ವಿಧ್ಯಾಭ್ಯಾಸ ಹೊಂದಿದವರೇ!  ಆದರೂ ಹಿರಿಯವ್ಯಕ್ತಿಯೊಬ್ಬರ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು  ಈ ಕಾರ್ಯಕ್ರಮದಲ್ಲಿ ನೆಪಮಾತ್ರಕ್ಕೆ ’ಸಿರಿಭೂವಲಯಕ್ಕೆ’ ಅವಕಾಶನೀಡಿದ್ದು ಸ್ಪಷ್ಟವಾಗಿದ್ದಿತು!! ಹೆಚ್ಚಿನ ವಿವರಗಳಿಗೆ ಈ ಪರಿಚಯದ ಮೂಲಕೃತಿಯನ್ನು ನೋಡಿ.
ಸಿರಿಭೂವಲಯದ ಸೇವೆಗೆ ಡಾಕ್ಟರುಗಳಿಗಿಂತಲೂ ಪೇಷಂಟುಗಳು , ಬಾಣಸಿಗರು ಹೆಚ್ಚು ಅಗತ್ಯ ಎಂಬ ಶೀರ್ಷಿಕೆಯಲ್ಲಿ  ಸಿರಿಭೂವಲಯದ ಸಂಶೋಧನೆಯಲ್ಲಿ  ಡಾಕ್ಟರೇಟ್  ಪಡೆದವರಿಗಿಂತ ವಿಷಯದ ಜ್ಞಾನವಿರುವವರ ಅಗತ್ಯವೇ ಹೆಚ್ಚು ಎಂಬುದನ್ನು ಸ್ವಾರಸ್ಯಕರವಾಗಿ ವಿವರಿಸಲಾಗಿದೆ.
ಸಿರಿಭೂವಲಯ ಗ್ರಂಥಕ್ಕೆ ಸಂಬಂಧಿಸಿದ ನಿಗೂಢ ಸಂಗತಿಗಳು  ಎಂಬ ಶೀರ್ಷಿಕೆಯಲ್ಲಿ  ಕವಿ ಕುಮುದೇಂದುವಿನ ಕಾಲದಿಂದ ಪ್ರಾರಂಭವಾಗಿ, ದೇವಪ್ಪ ನೆಂಬುವವನು ಸಂಸ್ಕೃತದಲ್ಲಿ ಕುಮುದೇಂದುವನ್ನು ಕುರಿತು ರಚಿಸಿರುವ ಒಂದು ಶತಕದ ವಿಚಾರ,  ಮಲ್ಲಿಕಬ್ಬೆಯು ಪ್ರತಿಲಿಪಿಮಾಡಿಸಿದ ಅಂಕಭೂವಲಯವನ್ನು ವಂಶಪಾರಂಪರ್ಯವಾಗಿ ಹೊಂದಿದ್ದ ದೊಡ್ಡಬೆಲೆ ಧರಣೇಂದ್ರ ಪಂಡಿತರು ಅನುಭವಿಸಿದ ನ್ಯಾಯಲಯದ ವಿಚಾರಣೆ,  ಅಂಕಭೂವಲಯವು ಯಲ್ಲಪ್ಪಶಾಸ್ತ್ರಿಯವರ ಸ್ವಾಧೀನಕ್ಕೆ ಬಂದ ಅಸಲಿ ವಿಚಾರ, ಯಲ್ಲಪ್ಪಶಾಸ್ತ್ರಿಯವರು ಹಾಗೂ ಕೆ. ಶ್ರೀಕಂಠಯ್ಯನವರು ತಮ್ಮ ಸಮಕಾಲೀನ ವಿದ್ವಾಂಸರ  ದಿಕ್ಕುತಪ್ಪಿಸಿ, ಜಗತ್ತಿನ ಅಚ್ಚರಿಯೆನಿಸಿದ ಈ ಮಹನ್ ಕಾವ್ಯದ ವಿಚಾರವಾಗಿ ಎಲ್ಲರೂ ಉದಾಸೀನರಾಗಿ ನಿರ್ಲಕ್ಷಿಸುವಂತಾಗಲು ಅವಕಾಶಕಲ್ಪಿಸಿದ್ದು, ಪುಸ್ತಕಶಕ್ತಿಯವರ ’ಸಿರಿಭೂವಲಯ ಫೌಂಡೇಷನ್’ ಉದಯವಾದದ್ದು.  ಅವರ ಮೂಲ ಉದ್ದೇಶ.  ಸುಧಾರ್ಥಿಯ  ಅಧ್ಯಯನ ಫಲವಾಗಿ  ಸರಳಪರಿಚಯಕೃತಿಗಳು ಬೆಳಕು ಕಂಡದ್ದು ಇತ್ಯಾದಿ ಸಂಗತಿಗಳ ವಿವರ, ಸಿರಿಭೂವಲಯದ ಸರಳಪಾರಿಚಯಕಾರ್ಯಕ್ಕಾಗಿ ಪರಿಚಯಕಾರನು ಪಡೆದಿರುವ  ಜೀವನಸಾರ್ಥಕತೆ,  ಅಂತರ್ಜಾಲತಾಣದಲ್ಲಿ ಈಗ ಯಥೇಚ್ಚವಾಗಿ ದೊರೆಯುವ ಸಿರಿಭೂವಲಯ ಕುರಿತ ಅರೆಬೆಂದ ಮಹಿತಿಗಳ ಎರವಲು ವಿವರಣೆ, ಕನ್ನಡೇತರರಿಗೆ ಸಿರಿಭೂವಲಯದ ಸೂಕ್ತ ಪರಿಚಯನೀಡಲು  ಅನುಕೂಲವಗುವಂತೆ ಹಿಂದೀ ಹಾಗೂ ಆಂಗ್ಲಾ ಭಾಷಾಂತರಗಳಿಂದಾದ ನೆರವು,  ಇತ್ಯಾದಿಗಳಿಗೆ ಸಂಬಂಧಿಸಿದ ’ನಿಗೂಢ’ ಮಹಿತಿಗಳನ್ನು ಅನಾವರಣಗೊಳಿಸಲಾಗಿದೆ.  (ಮುಂದುವರೆಯುವುದು) 

No comments:

Post a Comment