Friday 9 April 2021

ವೇದ, ವೇದ. ಏನಿದನ್ನು ಕುರಿತ ವಾದ ಪ್ರತಿವಾದ; ವಿವಾದ!? (ಭಾಗ: ೬)

 

 

ಕೆ. ಶ್ರೀಕಂಠಯ್ಯನವರ ಸಾಹಿತ್ಯದ ಪರಿಧಿ:

೧೯೫೩ರಲ್ಲ್ಲಿ ಮುದ್ರಣವಾದ ಸರ್ವಭಾಷಾಮಯೀಭಾಷಾ ಸಿರಿಭೂವಲಯದಲ್ಲಿ  ಸಂಪಾದಕ  ಕೆ. ಶ್ರೀಕಂಠಯ್ಯನವರು ಮುವ್ವತ್ತು ಪುಟಗಳ ವಿಸ್ತಾರವಾದ , ವಿದ್ವತ್ಪೂರ್ಣವಾದ ಮುನ್ನುಡಿ ಬರೆದಿದ್ದಾರೆ. ಅದರಲ್ಲಿ ಅಡಕವಾಗಿರುವ ನೂರಾರು ವಿಚಾರಗಳಲ್ಲಿ ಮಹವೀರನ ಕಾಲನಿರ್ಣಯಕ್ಕೆ  ಸಂಬಂಧಿಸಿದ ವಿಚಾರವೂ ಒಂದು. ಈ ವಿಚಾರವಾಗಿ ಅವರು ನೀಡಿರುವ  ಮಾಹಿತಿಗಳು ಚಾರಿತ್ರಿಕವಾಗಿ ಬಹಳ ಗಮನಾರ್ಹವಾದುದು. ಅಲ್ಲಿ ಕಾಣಬರುವ ಮಾಹಿತಿಯನ್ನು ಸರಳವಾಗಿ ಅರ್ಥಮಾಡಿಕೊಂಡರೆ, ದೊರೆಯುವ ಸಾರಾಂಶವಿಷ್ಟು:   ಗೌತಮಬುದ್ಧನು  ೨೩ನೇ ತೀರ್ಥಂಕರ ಪಾರ್ಶ್ವನಾಥನಿಗೆ ಶಿಷ್ಯನಾಗಿದ್ದವನು.  ೨೪ನೇ ತೀರ್ಥಂಕರ ಮಹವೀರನ ಹಾಗೂ ಪಾರ್ಶ್ವನಾಥನ ನಡುವಿನ ಕಾಲದ ಅಂತರ  ೨೫೦ ವರ್ಷಗಳು.

 ಬುದ್ಧನ ಜೀವಿತಕಾಲದಲ್ಲಿ ಅವನ ಚಿಕ್ಕಮ್ಮನ ಮಕ್ಕಳಾದ್ಸ ದೇವದತ್ತ, ಪೂರ್ಣಕಸ್ಸಪ, ಪಕುಧ ಕಾತ್ಯಾಯನ, ಸಂಜಯ ಬೇಲಟ್ಠಿಪುತ್ರ, ನಿಗ್ಗಂಠನಾಥಪುತ್ತ ಎಂಬ ಐವರು ಸಹೋದರರು ಬುದ್ಧನು ಸ್ಥಾಪಿಸಿದ ಬೌದ್ಧಮತಕ್ಕೂ ಬುದ್ಧನ ವ್ಯಕ್ತಿತ್ವಕ್ಕೂ  ಶತೃಗಳಾಗಿ ತಾವೇ ಒಂದೊಂದು ಹೊಸ ಮತದ ಸ್ಥಾಪನೆಗೆ ಕೈ ಹಾಕಿದರು.  ನಿಗ್ಗಂಠನಾಥಪುತ್ತನು ಬೋಧಿಸುತ್ತಿದ್ದ ಮತ ತತ್ವದ ಸಾರವನ್ನು ಕುರಿತು ಬೌದ್ಧಧರ್ಮದ ತ್ರಿಪಿಟಿಕಗಳಲ್ಲಿ ವಿಸ್ತಾರವಾದ ವಿವರಣೆಗಳಿವೆ.  ಶ್ರಾಮಣ್ಯ ಧರ್ಮಫಲಸೂತ್ರಎಂಬ ಕೃತಿಯಲ್ಲಿ ಈ ಐದೂಜನ ಮತ ಪ್ರವರ್ತಕರ ಉಪದೇಶಸ್ಗಳ ಸಂಗ್ರಹವಿದೆ.  ಇದರಲ್ಲಿ ನಿಗ್ಗಂಠ ನಾಥಪುತ್ತನು ಅಂದಿನ ದಿನಗಳಲ್ಲಿ  ಮಹಾದಂಡನಾಯಕ ನಾಗಿದ್ದ ಸೇನಾಪತಿಸಿಂಹ  ಎಂಬುವವನಿಗೆ ಗುರುವಾಗಿದ್ದವನು. ಇವನನ್ನೇ ನಾಥಪುತ್ತಮಹವೀರ  ಎಂದು ಬೌದ್ಧಗ್ರಂಥಗಳಿಂದ ಊಹಿಸಿ, ಮಹವೀರನ ಕಾಲವನ್ನು ಬುದ್ಧನಕಾಲದೊಂದಿಗೆ ಸೇರಿಸಿ, ಮೊದಲಿಗೆ ಪಾಶ್ಚಾತ್ಯವಿದ್ವಾಂಸರೂ; ಅನಂತರ ಪೌರಾತ್ಯವಿದ್ವಾಂಸರೂ ಒಪ್ಪಿಕೊಂಡಿದ್ದಾರೆ.  ಜೈನಸಂಪ್ರದಾಯದ ವಿದ್ವಾಂಸರೂ ಇದನ್ನೇ ಒಪ್ಪಿಕೊಂಡಿದ್ದಾರೆ!!

ಈ ನಿಗ್ಗಂಠನಾಥಪುತ್ತನು ನಾಥವಂಶದವನು. ತೀರ್ಥಂಕರ ಮಹವೀರನೂ ನಾಥವಂಶೀಯ. ಈ ರೀತಿಯಲ್ಲಿ ನಮಸಾದೃಶ್ಯ ಹಾಗೂ ವಂಶಸಾದೃಶ್ಯದಿಂದಾಗಿ ಮಹವೀರನ ಕಾಲವನ್ನು ತಪ್ಪಾಗಿ ನಿರ್ಣಯಿಸಲು ಅವಕಾಶವಾಗಿದೆ.  ಬೌದ್ಧಸಾಹಿತ್ಯದಲ್ಲಿ ಬರುವ ನಿಗ್ಗಂಠನಾಥಪುತ್ತನ  ಚರಿತ್ರೆಯು ಬಹಳ ಕೀಳುಮಟ್ಟದ್ದಾಗಿದೆ.  ಆದರೂ ಈ  ಮಾಹಿತಿಗಳನ್ನು; ಘಟನೆಗಳನ್ನು ಸಂಪೂರ್ಣವಾಗಿ ಸುಳ್ಳು ಎಂದು ನಿರಾಕರಿಸುವಂತಿಲ್ಲ! ಈ ನಿಗ್ಗಂಠನಾಥಪುತ್ತನು  ಜೀವಕನೆಂಬುವವನೊಂದಿಗೆಹೋಗಿ, ಬುದ್ಧನಿಗೆ ನಿರೂಪಿಸಿದ  ಶ್ರಾಮಣ್ಯ ಫಲಸೂತ್ರಎಂಬ ಕೃತಿಯಲ್ಲಿ ಬರುವ ತತ್ವಶಾಸ್ತ್ರಕ್ಕೆ, ನಿಗ್ಗಂಠನಾಥಪುತ್ತನ ಮಾತುಗಳಿಗೆ ಜೈನಮತದ ಯಾವ ವಿಭಾಗದಲ್ಲಿ ಹೊಂದಾಣಿಕೆ ಇದೆಯೋ ಎಂಬುದು ಜೈನೇತರನಾದ ನನಗಂತೂ ತಿಳಿಯದು ಎಂದು ಕೆ. ಶ್ರೀಕಂಠಯ್ಯನವರು  ಖಚಿತವಾಗಿ ವಿವರಿಸಿರುವುದಿದೆ. ಸಂಬಂಧಿಸಿದ ವಿದ್ವಾಂಸರು ಸಮಗ್ರವಾಗಿ ಅಧ್ಯಯನಮಾಡಿ ನಿರ್ಧರಿಸಬೇಕಾದ ವಿಚಾರವಿದು.

ಈ ಮಾಹಿತಿಯಿಂದ ನಾವು ತಿಳಿಯಬಹುದದ  ಸಂಗತಿಯೆಂದರೆ: ಅಂದಿನ ದಿನಗಳಲ್ಲಿ ಮಹಾದಂಡನಾಯಕನಾಗಿದ್ದ ಸೇನಾಪತಿಸಿಂಹಎಂಬುವವನಿಗೆ  ಗುರುವಾಗಿದ್ದ ನಿಗ್ಗಂಠನಾಥಪುತ್ತ ನೆಂಬುವವನು ತನಗಿದ್ದ ಪಾಂಡಿತ್ಯ ಹಾಗೂ ಅಧಿಕಾರಬಲದ  ಅಮಲಿನಲ್ಲಿ ತಾನೇ ಒಂದು ಸ್ವತಂತ್ರವಾದ ಧರ್ಮವನ್ನು  ಸ್ಥಾಪಿಸಿ ಅದನ್ನು ಪ್ರಚಾರಕ್ಕೆ ತರುವ ಪ್ರಯತ್ನ ನಡೆಸಿದ್ದಾನೆ.  ಈ ಪ್ರಯತ್ನವು ಸಫಲವಾಗದಿದ್ದರೂ ಮುಂದೆ ೨೫೦ ವರ್ಷಗಳ ನಂತರ ಪ್ರಸಿದ್ಧಿಗೆ ಬಂದ ಮಹವೀರನ ಕಾಲನಿರ್ಣಯಿಸುವಾಗ ಇಲ್ಲದ ಗೊಂದಲವ್ಗನ್ನು ಸೃಷ್ಠಿಸುವಲ್ಲಿ ಈ ಘಟನೆಯು ಯಶಸ್ವಿಯಾಗಿದೆ ಇದು ಒಂದು ರೀತಿಯಲ್ಲಿ ಇಲ್ಲದ ಇತಿಹಾಸ ನಿರ್ಮಿಸ್ವುವ  ವ್ಯರ್ಥ ಸಾಹಸವಾಗುತ್ತದೆ. ಸತ್ಯಾಸತ್ಯವನ್ನು ತಿಳಿದವರು ಇದನ್ನು  ಪ್ರಶ್ನಿಸುತ್ತಾರೆ. ತಿಳಿಯದವರು ಸುಮ್ಮನೆ ಒಪ್ಪಿಕೊಳ್ಳುತ್ತಾರೆ!!

***

ಅಪೌರುಷೇಯವೆನಿಸಿರುವ  ವೇದಗಳೇ ಜಗತ್ತಿನಲ್ಲಿರುವ ಎಲ್ಲ  ಮತ ಸಂಪ್ರದಾಯಗಳಿಗೂ  ಮೂಲವೆಂದು ಹೇಳಿದರೆ; ಅದು ಕೆಲವರಿಗೆ ಅಪಹಾಸ್ಯದ  ವಿಚಾರವಾಗಬಹುದು. ಆದರೆ, ಜಗತ್ತಿನಾದ್ಯಂತವೂ ಹರಡಿರುವ ಸನಾತನ, ಜೈನ, ಬೌದ್ಧ, ಪಾರಸಿ, ಯಹೋದಿ, ಕ್ರಿಶ್ಚಿಯನ್, ಹಾಗೂ ಮುಸ್ಲಿಮ್ ಜನಾಂಗಗಳ  ಮೂಲಬೇರನ್ನು ಹುಡುಕುತ್ತಹೋಗಿ,  ಅವರ ಪ್ರಾಚೀನ ಪರಂಪರೆಯ ಆಧಾರಗ್ರಂಥಗಳ ವಿವರಗಳ ಸಾರವನ್ನು ತುಲನೆಮಾಡಿದರೆ,  ಮೇಲೆ ಸೂಚಿಸಿರುವ ಹೇಳಿಕೆಯು  ಸಮಂಜಸವೆನಿಸುತ್ತದೆ.  ಇದಕ್ಕೆ ಪೋಷಕವಾದ ಅಪಾರ ಮಾಹಿತಿಗಳನ್ನು  ಒಂದೆಡೆ ಕಲೆಹಾಕಿ  ಸಿರಿಭೂವಲಯದ ಶ್ರೀಕಂಠಯ್ಯನವರು ನಮ್ಮದೇಶದ ಪ್ರಾಚೀನ ಕಾಲದ ಚರಿತ್ರೆಗೆ ಸಂಬಂಧಿಸಿದಂತೆ ಮಹತ್ತರವಾದ ಲೋಕೋಪಕಾರಮಾಡಿರುವುದನ್ನು ಅವರ  ಸಾಹಿತ್ಯ ಕೃತಿಗಳಲ್ಲಿ ಕಾಣಬಹುದಾಗಿದೆ. ಅದನ್ನು ಮಾನ್ಯಮಾಡಲು ಇಚ್ಛಿಸದವರು ಶಾಲಾ ಕಾಲೇಜುಗಳಲ್ಲಿ ತಾವು ಕಲಿತ ಹಾಗೂ ಇಂದಿಗೂ ಪ್ರಚಾರದಲ್ಲಿರುವ ಅಸಂಬದ್ಧ ಚರಿತ್ರೆಯ ವಿಚಾರಗಳನ್ನೇ ಮೆಲುಕುಹಾಕುತ್ತ, ಖಚಿತವಾದ ಐತಿಹಾಸಿಕ ಮಾಹಿತಿಗಳನ್ನು ಯಾವುದೇ ಸಂಕೋಚವಿಲ್ಲದೇ ನಿರಾಕರಿಸಿ ನಿರ್ಲಕ್ಷಿಸುವವರಾಗಿರುತ್ತಾರೆ.

***

ಭಾರತೀಯ ಇತಿಹಾಸ ಕುರಿತು ಶ್ರೀ ಎಂ. ವಿ. ಆರ್. ಶಾಸ್ತ್ರಿಯವರ ಬರಹದ ಮಹತ್ವ:

ಭಾರತ ದೇಶದ ಪ್ರಾಚೀನ ಹಾಗೂ ಆಧುನಿಕ ಇತಿಹಾಸದತುಂಬ  ಹಲವಾರು ಅಸಂಗತಗಳು ತುಂಬಿಕೊಂಡಿರುವುದನ್ನು ಹಲವಾರು ಪ್ರಾಜ್ಞರು ಪಟ್ಟಿಮಾಡಿತೋರಿಸಿರುವುದುಂಟು. ಅಂಥವರ ಪೈಕಿ ಶ್ರೀ. ಎಂ.ವಿ.ಆರ್. ಶಾಸ್ತ್ರಿಯವರ ಬರಹವು ಗಮನಾರ್ಹವಾದುದು.  ತೆಲುಗು ಭಾಷಿಕರಾದ ಶ್ರೀ ಶಾಸ್ತ್ರಿಯವರು  ಹಲವಾರು ತೆಲುಗು ಪತ್ರಿಕೆಗಳ ಸಂಪಾದಕರಾಗಿದ್ದವರು. ಅನೇಕ ಕೃತಿಗಳನ್ನು ರಚಿಸಿದವರು. ಅವುಗಳ ಪೈಕಿ ಏದಿ ಚರಿತ್ರ  ಒಂದು ಮಹತ್ತರವಾದ ಇತಿಹಾಸದ  ದರ್ಶನವಾಗಿದೆ. ಕನ್ನಡ ಪ್ತ್ರಕರ್ತ ಹಾಗೂ ಸಾಹಿತ್ಯ ಅಕಾಡಮಿ ಪುರಸ್ಕೃತ  ಬಾಬು ಕೃಷ್ಣಮೂರ್ತಿಯವರು  ಈ ಆಸಕ್ತಿದಾಯಕವಾದ ಕೃತಿಯನ್ನು  ಯಾವುದು ಚರಿತ್ರೆಎಂಬ  ಹೆಸರಿನಲ್ಲಿ  ಕನ್ನಡಕ್ಕೆ ಭಾಷಾಂತರಿಸಿದ್ದು, ಬೆಂಗಳೂರಿನ ವಸಂತ ಪ್ರಕಾಶನದವರು ಅದನ್ನು ೨೦೧೩ರಲ್ಲಿ ಪ್ರಕಟಿಸಿದ್ದಾರೆ.

ಪ್ರಾಚೀನಕಾಲದಿಂದ ಹಿಡಿದು; ಮಧ್ಯಕಾಲದ ವರೆಗಿನ ನಮ್ಮ ದೇಶದ ಚರಿತ್ರೆಗೆ ಸಂಬಂಧಿಸಿದಂತೆ ಹಲವಾರು ಮಹನೀಯರು  ರಾಶಿಗಟ್ಟಳೆ ಮಾಹಿತಿಗಳನ್ನು ದಾಖಲಿಸಿರುವುದಿದೆ.  ಆಸಕ್ತಿ ಇರುವವರು ಅವುಗಳನ್ನು ತಾಳ್ಮೆಯಿಂದ ಅಧ್ಯಯನಮಾಡಬೇಕಷ್ಟೇ.ಈ ರೀತಿಯ ಶ್ರಮದ ಅಧ್ಯಯನಮಾಡುವ ಶಕ್ತಿಯು ಸ್ವಾತಂತ್ರ್ಯಾನಂತರದ ವಿದ್ಯಾರ್ಥಿಗಳಲ್ಲಿ  ಬಹಳವಾಗಿ ಕ್ಷೀಣಿಸಿದೆ.  ಅದಕ್ಕೆ ಮೂಲಕಾರಣ: ಅವರಿಗೆ ಶಿಕ್ಷಣನೀಡಿದ ಶಿಕ್ಷಕರು ಪಾಶ್ಚಾತ್ಯ ವಿದ್ವಾಂಸರ ದಾಸಾನುದಾಸರಾಗಿವರ್ತಿಸಿರುವುದು! ಮತ್ತು ದೇಶದ ನಿಜವಾದ ಚರಿತ್ರೆಯ ವಿಚಾರದಲ್ಲಿ  ಕಿವುಡರಂತೆಯೂ; ಮೂಗರಂತೆಯೂ ವರ್ತಿಸಿರುವುದು!! ಚರಿತ್ರೆಗೆ ಸಂಬಂಧಿಸಿದಂತೆ  ಇವೆಲ್ಲ ನ್ಯೂನತೆಗಳನ್ನೂ ಗಮನದಲ್ಲಿರಿಸಿಕೊಂಡು ಶ್ರೀ ಎಂ.ವಿ.ಆರ್. ಶಾಸ್ತ್ರಿಯವರು ತಮ್ಮ  ಏದಿ ಚರಿತ್ರವನ್ನು ರೂಪಿಸಿದ್ದಾರೆ.

ದೇಶದ ಪ್ರಚೀನ ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಸಂಬಂಧಿಸಿದಂತೆ ತೆರೆದುಕೊಳ್ಳುವ ಹೊಸ ಹೊಸ ಮಾಹಿತಿಗಳ ವಿಚಾರದಲ್ಲಿ  ಸೂಕ್ತವಾಗಿ ಸ್ಪಂಧಿಸದಿರುವ ಮೇಧಾವಿಗಳು ಹಾಗೂ ವಿದ್ವಾಂಸಾರವಿಚಾರವಾಗಿ ನಿರಾಶೆಯನುಡಿಗಳೊಂದಿಗೆ ಪ್ರಾರಂಭವಾಗುವ ಈ ಕೃತಿಯು  ಹಸಿಸುಳ್ಳುಗಳ ದಂಡಯಾತ್ರೆ; ಒಣಗಿದನದಿಗೆ ವಂದನೆ; ಆಷಾಢಭೂತಿ ಮ್ಯಾಕ್ಸ್ ಮುಲ್ಲರ್; ಆರ್ಯರುಯಾರು? ಬೊಗಳೆ ಪುರಣಗಳು,;  ಬಿಳಿದೊರೆಗಳು ನುಂಗಿದ ಚರಿತ್ರೆ; ಇವನಿರಬೇಕು ಬಹುಷಃ; ಶಕೆಗಳು, ಶಕಾರಿಗಳು; ಮತಮುಂದೆ..ಪ್ರವರ್ತಕ ಹಿಂದೆ; ಆದಿಶಂಕರರೇ ಕ್ಷಮಿಸಿ ಇತ್ಯಾದಿ ಹಲವಾರು ತಲೆಬರಹದಲ್ಲಿ ಮೊಗಲರ ದುರಾಡಲಿತ ಹಾಗೂ ಅವೆಲ್ಲವನ್ನೂ ಮರೆಮಾಚುವ ಇತಿಹಾಸದ ನಿರೂಪಣೆಗಳನ್ನು  ಎಳೆ ಎಳೆಯಾಗಿ ವಿವರಿಸಿ, ಸಾಮಾನ್ಯ ಓದುಗರಿಗೆ ನಿಜವಾದ ಇತಿಹಾಸದ ಸತ್ಯದರ್ಶನ ಮಾಡಿಸಿದ್ದಾರೆ.   ಇವುಗಳಲ್ಲಿ  ಘಜನೀ ಮಹಮದನ ದುರಾಕ್ರಮಣ ಹಾಗೂ ಲೂಟಿಯಿಂದಾರಂಭಿಸಿ ಗುಲಾಮಿಸಂತತಿಯವರು, ಖಿಲ್ಜಿಸಂತತಿಯವರು;  ತುಘಲಕ್ ಸಂತತಿಯವರು, ಬಹಮನಿ ಸಂತತಿಯವರು; ಅದಿಲ್ಷಾಹಿಗಳು ಮುಂತಾದವರ ಆಡಳಿ ವೈಖರಿಯೂ; ತೈಮೂರನಿಂದ ಆರಂಭವಾಗಿ, ಹುಮಾಯೂನ್;, ಅಕ್ಬರ್ ದಿಗ್ರೇಟ್, ಇವನು ಸ್ಥಾಪಿಸಿದ ದೀನ್ ಇಲಾಹಿಎಂಬ ನೂತನ ಧರ್ಮದವಿಚಾರ;  ಷಾಜಹಾನ,  ಬಾಬರ್, ಜಹಾಂಗೀರ,  ಔರಂಗಜೇಬ ಮುಂತಾದವರ ವಿಚಾರಗಳು,  ಇವರುಗಳ ಮತಾಂಧತೆಯ ಕ್ರೂರ ವರ್ತನೆ, ತಾಜ್ ಮಹಲಿನ ನಿಜ ಚರಿತ್ರೆ;  ಶಿವಾಜಿಯ ವಿಚಾರ ಹೀಗೆ ನೂರಾರು ವಿಚಾರಗಳು ಈ ಕೃತಿಯಲ್ಲಿ ಸಮಾವೇಶವಾಗಿರುವುದನ್ನು ಓದುಗರು ಗಮನಿಸಬಹುದಾಗಿದೆ.

ಇದಕ್ಕಾಗಿ ಅವರು ಆಧಾರವಾಗಿ ಪರಿಗಣಿಸಿರುವುದು ಮೊಗಲರ ಆಡಳಿತಾವಧಿಯ ದಾಖಲೆ ಪತ್ರಗಳನ್ನೇ! ಈ ಕಾರಣದಿಂದಾಗಿ ಯಾರೊಬ್ಬರೂ ಈ ಬರಹವನ್ನು ಆಧಾರರಹಿತವಾದ ಸ್ವಕಪೋಲಕಲ್ಪಿತ ಮಾಹಿತಿಗಳೆಂದು ಅಲ್ಲಗಳೆಯಲಾಗದು!! ಈ ವಿದೇಶೀ ಆಕ್ರಮಣಕಾರರ ದುರಾಡಳಿತದ ಹಲವಾರು  ದುಷೃತ್ಯಗಳ ವಿವರಗಳನ್ನು ಶ್ರೀ ಶಾಸ್ತ್ರಿಯವರು ಸೂಕ್ತವಾದ ದಾಖಲೆಗಳ ಸಹಿತವಾಗಿ ಎಂಥವರಿಗೂ ಮನವರಿಕೆಯಾಗುವಂತೆ  ರೂಪಿಸಿಸಿದ್ದಾರೆ.  ಇಂಥ ಸತ್ವಶಾಲೀ ಬರಹಗಳ ಅಧ್ಯಯನವು ಇಂದಿನ ಯುವಜನತೆಯ ಅಂತಸ್ಸತ್ವವನ್ನು ಸಾಕಷ್ಟು ಪರಿಷ್ಕರಿಸುತ್ತದೆ.

***

ಉಪಸಂಹಾರ:

ಶಾಸ್ತ್ರವಚನಗಳನ್ನು ಅವಹೇಳನಮಾಡಿ; ಮೂದಲಿಸಿ  ಮೂಲೆಗುಂಪುಮಾಡುವುದು ಸುಲಭದ ವಿಚಾರ. ಆದರೆ, ಕಷ್ಟನಷ್ಟಗಳನ್ನು  ನೋವನ್ನು ಅನುಭವಿಸುವುದು ಬಹಳ ಯಾತನೆಯವಿಚಾರವೆಂಬುದು ಎಲ್ಲರಿಗೂ ತಿಳಿಯಬೇಕು. 

ನಾವು ಯೋಗ್ಯರಾದರೂ ನಮಗೇ ಕಷ್ಟಗಳು ಬರುತ್ತವೆಂದು ಭಾವಿಸಿ; ಕಣ್ಣಿಗೆ ಕಾಣಿಸದ  ದೈವಶಕ್ತಿಯನ್ನು ನಿಂದಿಸುವುದು ಇನ್ನೂ ಹೆಚ್ಚಿನ ಪಾಪಕಾರ್ಯ.  ನಮ್ಮ ಪ್ರಾಚೀನ ಕರ್ಮದ ನಾಶಕ್ಕಾಗಿ ಜಪತಪಗಳನ್ನಾಚರಿಸುವುದನ್ನೂ ಶಾಸ್ತ್ರಗಳು ಸೂಚಿಸಿವೆ.  ಇದು ಸಾಮಾನ್ಯವಾಗಿ ಎಲ್ಲರಿಗೂ ಅನಿವಾರ್ಯವಾದ ಕ್ರಿಯೆ.

ಹಿಂದಿನ ಋಷಿಮುನಿಗಳು ತಪಸ್ಸನ್ನಾಚರಿಸಲು ಕಾಡಿಗೆ ತೆರಳಬೇಕಿತ್ತು. ನಿಯತಿದೇವಿಯು ಇಂದಿನ ಲೌಕಿಕರಿಗೆ ಹೆಚ್ಚಿನ ಕರುಣೆ ತೋರಿದ್ದಾಳೆ. ನಾವು ತಪಸ್ಸುಮಾಡುವುದಕ್ಕಾಗಿ ಕಾಡಿಗೆ ತೆರಳುವ ಅಗತ್ಯವಿಲ್ಲ.   ಬಿಡುವಿಲ್ಲದ ನಮ್ಮ ದುಡಿಮೆಯನಡುವೆ ದೊರೆಯುವ ಅಲ್ಪಸ್ವಲ್ಪ ವಿರಾಮವನ್ನೂ ನಾವು ವ್ಯರ್ಥಮಾಡದೇ  ಏಕಾಗ್ರಚಿತ್ತದಿಂದಿಂದ ಶಾಂತಮನಸ್ಕರಾಗಿ ಜಪಧ್ಯಾನದಲ್ಲಿ ನಿರತರಾದರೆ,  ನಮಗೇ ಅಚ್ಚರಿಯೆನಿಸುವಂತೆ ಅದರಿಂದ ಸತ್ಫಲದೊರೆಯುವುದನ್ನು ನಾವು ಪರೀಕ್ಷಿಸಬಹುದು.

ಜಪಮಾಡಲು ಯಾವ ಮಂತ್ರೋಪದೇಶ ಬೇಕು? ಎಂಬ ಪ್ರಶ್ನೆಯ ಗೊಂದಲವು ಅನವಶ್ಯಕ. ಹಿಂದಿನಿಂದ ಇಂದಿನವರೆವಿಗೆ; ಮುಂದೆಯೂ ಸಾಮಾನ್ಯ ಲೌಕಿಕರಿಗೆ ಗಾಯತ್ರೀಮಂತ್ರಕ್ಕಿಂತ ಸುಲಭವಾದ ಮಂತ್ರಜಪ ಬೇರಾವುದು ಬೇಕು!?  ತೀರಾ ಅಪರಿಚಿತರಿಗೆ ಈ ಪ್ರಯತ್ನದಲ್ಲಿ  ಪ್ರಾರಂಭದಲ್ಲಿ ಕೆಲವು ತೊಂದರೆಗಳು ಕಾಣಿಸಬಹುದು. ಅಭ್ಯಾಸವಾದಂತೆ ಎಲ್ಲವೂ ಸರಿಯಾಗುತ್ತದೆ. ಆಗದಿದ್ದಲ್ಲಿ ನಾವೇ ಪ್ರಯತ್ನಿಸಿ ಸರಿಪಡಿಸಿಕೊಳ್ಳಬೇಕು. ನಮ್ಮ ಪೂರ್ವಾರ್ಜಿತಪುಣ್ಯ ಬಲದಿಂದ ಗಾಯತ್ರೀ ಮಂತ್ರವು ಸಿದ್ದಿಯಾದಲ್ಲಿ ಕ್ರಮೇಣ ನಮಗೆ ವಾಕ್ಸಿದ್ಧಿಯುಂಟಾಗುತ್ತದೆ.  ಆ ಸ್ಥಿತಿಯಲ್ಲಿ ಯಾರಿಗೂ ಕೆಟ್ಟದಾಗಲೆಂದು ನುಡಿಯಬಾರದು.. ಇದರಿಂದ ನಮ್ಮ ವಾಕ್ಸಿದ್ಧಿಯು ಕ್ಷೀಣಿಸಿ, ಲೋಪವಾಗುವುದು ಖಚಿತ. ವಾಕ್ಸಿದ್ಧಿಯು ನಮ್ಮ ಅನುಭವಕ್ಕೆ ಬಂದನಂತರವೂ ನಾಮಗೆ  ಇಷ್ಟವಿದ್ದಲ್ಲಿ ಜಪಕ್ರಮವನ್ನು ಮುಂದುವರೆಸಬಹುದು.  ಇಲ್ಲವಾದಲ್ಲಿ ಮುಂದೆ ನೆಮ್ಮದಿಯಿಂದ ಜೀವಿಸಬಹುದು.

ಧರ್ಮೋ ರಕ್ಷತಿ ರಕ್ಷಿತಃ ಅಂದರೆ; ಧರ್ಮವನ್ನು ಪಾಲಿಸುವ ಮೂಲಕ ರಕ್ಷಿಸಿದವನನ್ನು ಧರ್ಮವು ರಕ್ಷಿಸುತ್ತದೆ.  ಜಗತ್ತಿನಲ್ಲಿರುವ ೩೬೩ ಮತಧರ್ಮಗಳೂ ಅವಿನಾಶಿಯಾದುವೆಂದು ಕನ್ನಡದವೇದ ಸಿರಿಭೂವಲಯದ ಕವಿ ಕುಮುದೇಂದುಮುನಿಯು ಘೋಷಿಸಿರುವುದನ್ನು         ಈಗಾಗಲೇ ತಿಳಿದದ್ದಾಗಿದೆ.  ಸಾವಿರಾರು ವರ್ಷಗಳಿಂದಲೂ  ಸನಾತನಧರ್ಮವನ್ನು ನಾಶಮಾಡುವ ಕಾರ್ಯದಲ್ಲಿ ಕೋಟ್ಯಾಂತರಜನ ದೈತ್ಯರು ಶ್ರಮಿಸಿದ್ದಾಗಿದೆ. ಆದರೂ ನಮ್ಮ ಕಾಲದವರೆವಿಗೂ ಈ ಕಾರ್ಯ ಯಶಸ್ವಿಯಾಗಿಲ್ಲ!!   ದ್ವಾಪರಯುಗದ ಕೊನೆಯಲ್ಲಿ ಮಹಾಭಾರತದ ಯುದ್ಧನಡೆದು,  ಕೌರವ- ಪಾಂಡವರಿಗೆ ಸೇರಿದ ೧೮ ಅಕ್ಷೋಹಿಣಿ ಸೈನ್ಯವು ನಾಶವಾಯಿತು. ಈ ಯುದ್ಧದಲ್ಲಿ ಭಾಗವಹಿಸದೇ ಉಳಿದ  ಕೃಷ್ಣನ ದ್ವಾರಕೆಯ ಯಾದವರೂ ತಮ್ಮತಮ್ಮಲ್ಲಿಯೇ ಹೊಡೆದಾಡಿಕೊಂಡು ಸರ್ವನಾಶ ವಾದರು! ಮೊಗಲರು  ಹಾಗೂ ಆಂಗ್ಲರಂತೂ ಅತ್ಯಂತ ಕ್ರೂರವಾಗಿ ಹಿಂದೂಗಳನ್ನು ಹಿಂಸಿಸಿ, ಮತಾಂತರಗೊಳಿಸುವ ಮೂಲಕ ಅಥವಾ ಕೊಲೆಮಾಡುವಮೂಲಕ  ಸನಾತನಧರ್ಮದ ನಾಶಕ್ಕೆ ಪ್ರಯತ್ನಿಸಿದ್ದಾಗಿದೆ. ಆದರೂ ಈ ಪ್ರಾಚೀನವಾದ  ಧರ್ಮವು ಇನ್ನೂ ಜೀವಂತವಿದೆ.!!

ಇನ್ನು ಮುಂದಿನ ವಿಚಾರ. ಇಂದಿನ ಪರಿಸರದಲ್ಲಿ  ಹಿಂದೂಗಳಲ್ಲದವರ ಕುತಂತ್ರದಿಂದಾಗಿ  ಹಿಂದೂ ಧರ್ಮವು ವಿನಾಶದ ಅಂಚಿಗೆ ಬಂದಿರುವುದು.  ಅದಕ್ಕಾಗಿ ಯಾರೂ ಕಳವಳಗೊಂಡರೂ ಏನೂ  ಪ್ರಯೋಜನವಿಲ್ಲ!! ಒಂದು ಸ್ಥರದಲ್ಲಿ ನಿಷ್ಪ್ರಯೋಜಕರಾದ  ಸನಾತನಿಗಳ ಸಂತತಿಯು ಸಂಪೂರ್ಣವಾಗಿ ಕ್ರಿಶ್ಚಿಯನ್ ಅಥವಾ ಇಸ್ಲಾಂ ಸಂಪ್ರದಾಯಕ್ಕೆ ಮತಾಂತರಗೊಂಡರೂ; ಆ ಸಮುದಾಯದಲ್ಲೇ ಅಂತಃ ಕಲಹವು ಹುಟ್ಟಿಕೊಂಡು, ಅಲ್ಲಿನ  ನಿರುಪಯೋಗಿಗಳೆಲ್ಲರೂ ನಾಶವಾಗಿ ಮನುಕುಲವೇ ಕ್ಷೀಣವಾಗುವುದು ಖಚಿತ! ಅದನ್ನು ಯಾರೊಬ್ಬರೂ ತಡೆಯಲಾರರು. 

ಇಂದಿನ ಕಲ್ಪಾಂತ್ಯದಿಂದ ಮುಂದಿನ ಕಲ್ಪಾರಂಭದ ವರೆವಿಗೆ  ಗೊಂದಲದ ಸ್ಥಿತಿಯಿದ್ದರೂ, ಮುಂದಿನ ಕಲ್ಪದಲ್ಲಿ ಎಲ್ಲವೂ ಸಮರ್ಪಕವಾಗಿ ಪುನರ್ವ್ಯವಸ್ಥೆಗೊಳ್ಳುವುದು ಪ್ರಕೃತಿಯ ನಿಯಮ. ಅದಕ್ಕಾಗಿ ಯಾರೊಬ್ಬರೂ ಸಂಭ್ರಮಿಸುವುದಾಗಲೀ; ಕಳವಳಗೊಳ್ಳುವುದಾಗಲೀ ಉಪಯೋಗವಿಲ್ಲ  ಎಂಬುದನ್ನರಿತು,  ನಾವು ಹುಟ್ಟಿಬೆಳೆದ ಧಾರ್ಮಿಕ ಸಂಪ್ರದಾಯವನ್ನು ಶ್ರದ್ಧೆಯಿಂದ ಅನುಸರಿಸುತ್ತ ಯಾವುದೇ ಗೊಂದಲಕ್ಕೆ ಸಿಲುಕದೇ ನೆಮ್ಮದಿಯಿಂದ ಜೀವಿಸುವುದಷ್ಟೇ ನಮ್ಮ ಕರ್ತವ್ಯ.  ಎಂಬ ಆತ್ಯಂತಿಕ ನಿಲುವನ್ನು ಅನುಸರಿಸುವುದು ಸೂಕ್ತವಾಗಿರುತ್ತದೆ.

ಇದೇ ಧರ್ಮವು ನಮಗೆ ತಿಳಿಸುವ ಕರ್ತವ್ಯವಾಗಿದೆ.  ಶ್ರದ್ಧೆ ಹಾಗೂ ನಂಬಿಕೆಯಿಂದ ಇದನ್ನು ಪಾಲಿಸೋಣ. ಉಳಿದದ್ದು ಸರ್ವಶಕ್ತನ ಇಚ್ಛೆಗೆ ಸೇರಿದ್ದು ಅದನ್ನು ಬದಲಿಸಲು ಯಾರೊಬ್ಬರಿಗೂ ಸಾಧ್ಯವಿಲ್ಲ ಎಂಬ ವಿಚಾರ ನಮಗೆ ಮನವರಿಕೆಯಾದರೆ ಸಾಕು.  ಇವೆಲ್ಲ ಮಾಹಿತಿಗಳನ್ನೂ ಶಾಂತಮನಸ್ಸಿನಿಂದ ಓದಿ, ಆಲೋಚಿಸಿ, ವಿವೇಚಿಸಿ, ಧರ್ಮಬದ್ಧವಾದ ಮಾರ್ಗದಲ್ಲಿ ನಮ್ಮ ಜೀವನಸಾಗಿಸುವ  ವಿವೇಕ; ತಾಳ್ಮೆ, ನಮ್ಮೆಲ್ಲರಿಗೂ ಒದಗಿಬರಲೆಂದು ಸರ್ವಶಕ್ತನಲ್ಲಿ ಪ್ರಾರ್ಥಿಸೋಣ.

ಸಿರಿಭೂವಲಯದಸುಧಾರ್ಥಿ.

_()_

ಇಲ್ಲಿನ ವಿವರಣೆಗಳ ವಿಚಾರದಲ್ಲಿ  ಹೆಚ್ಚಿನ ಮಾಹಿಯನ್ನು ಬಯಸುವವರು ಗಮನಿಸಬಹುದಾದ ಮೂಲಕೃತಿಗಳು:

೧) ಎನ್. ಎಸ್. ಅನಂತರಂಗಾಚಾರ್ ಅವರ ವೈದಿಕ ಸಾಹಿತ್ಯ ಚರಿತ್ರೆ

೨) ಬ್ರಹ್ಮೀಭೂತ ಶ್ರೀ ಪರಮಾನಂದಭಾರತೀ ಸ್ವಾಮಿಗಳವರ  ಪ್ರಥಮಸೋಪಾನ.

೩) ಶ್ರೀ ಎಂ.ವಿ.ಆರ್. ಶಾಸ್ತ್ರಿಯರು ತೆಲುಗುಭಾಷೆಯಲ್ಲಿ ಬರೆದಿರುವ ಏದಿ ಚರಿತ್ರಾಎಂಬ ಕೃತಿಯ ಕನ್ನಡಾನುವಾದವಾದ ಯಾವುದು ಚರಿತ್ರೆ?’ ಎಂಬ ಕೃತಿ:     (ಅನುವಾದಕಾರು ಶ್ರೀ. ಬಾಬುಕೃಷ್ಣಮೂರ್ತಿ)

 ೪) ಹಾಸನದ ಸುಧಾರ್ಥಿಯ ತ್ರಿಮತಸ್ಥ ಸಂಧ್ಯಾವಂದನೆ

೫) ಇದೇ ಲೇಖಕನ .ವೇದಗಳು ಅಪೌರುಷೇಯ ಎಂಬ ಕಿರುಹೊತ್ತಿಗೆ

೬)ಇದೇ ಲೇಖಕನ ಸಿರಿಭೂವಲಯದ ಸರಳಪರಿಚಯ ಕೃತಿಗಳಲ್ಲೊಂದಾದ ಜಗತ್ತಿನ ಹತ್ತನೇ ಅಚ್ಚರಿ

) ಗೂಗಲ್ಲಿನ ಕೆಲವು ಮಾಹಿತಿಗಳು.

***

No comments:

Post a Comment