Wednesday 15 January 2020

ಸಿರಿಭೂವಲಯದಲ್ಲಿ ಬಾಹ್ಯಾಕಾಶಯಾನದ ವಿಚಾರ

*** ಬಾಹ್ಯಾಕಾಶಯಾನವು ಭಾರತೀಯರಿಗೆ ಹೊಸದಲ್ಲ!!!***

ಉತ್ತರಾಯಣಪುಣ್ಯಕಾಲದಲ್ಲಿ ಈ ಕಾವ್ಯದ ಮಾಹಿತಿಯು
ಓದುಗರ ಜ್ಞಾನ ವೃದ್ಧಿಸಲೆಂದು ಆಶಿಸುವೆ.

ಸಾಮಾನ್ಯ ಕವಿಗಳೇ  ತಮ್ಮ ಕಾವ್ಯ/ಕವನಗಳ ರಚನೆಯ ಸಮಯದಲ್ಲಿ ಪ್ರಕೃತಿಯ ಸೊಬಗನ್ನು ಕುರಿತು ಬರೆಯುವುದು ಸಹಜ.  ಹಾಗಿರುವಲ್ಲಿ ಸಿರಿಭೂವಲಯದಂಥ ಮಹೋನ್ನತವಾದ ವಿಶ್ವಸಾಹಿತ್ಯವನ್ನು ಸೃಷ್ಟಿಸುವ ಸನ್ನಿವೇಶದಲ್ಲಿ ಕವಿಯು ತನ್ನ ಸುತ್ತಮುತ್ತಲಿನ ಪ್ರಕೃತಿಯ ವಿಶೇಷಗಳನ್ನು ಗಮನಿಸದಿರಲು ಸಾಧ್ಯವೇ!?  ಸರ್ವಜ್ಞಾನಮಯಿಯಾದ ಈ ಕಾವ್ಯರಚನೆಯ ಸನ್ನಿವೇಶದಲ್ಲಿ ಸರ್ವಜ್ಞಸ್ವರೂಪಿಯದ ಕುಮುದೇಂದುಮುನಿಯು ಈ ರೀತಿಯ ಪ್ರಾಕೃತಿಕ ವಿಶೇಷಗಳನ್ನು ತನ್ನ ಕಾವ್ಯದಲ್ಲಿ ಉಪಮೆಯಾಗಿ, ಪ್ರತಿಮೆಗಳಾಗಿ ಬಳಸಿರುವ ಉದಾಹರಣೆಗಳು ಹಲವಾರು!
ಇವುಗಳ ಪೈಕಿ ಇನ್ನೊಂದು ಉದಾಹರಣೆಯನ್ನು ಇಲ್ಲಿ ಗಮನಿಸೋಣ. ಸಾಮಾನ್ಯವಾಗಿ ಯಾವುದಾದರೊಂದು ವಿಷಯವನ್ನು ಕುರಿತ ಬರಹದಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳದೇ ಪ್ರಾಧಾನ್ಯತೆ.  ಆದರೆ ಸಿರಿಭೂವಲಯದ ಪರಿ ಇಂಥದಲ್ಲ!! ಇದು ಸರ್ವವಿಷಯಾತ್ಮಕವಾದ ಕಾವ್ಯವಾದುದರಿಂದ ಇಲ್ಲಿ ಪ್ರತಿಯೊಂದು ವಿಚಾರವೂ ಮಹತ್ವಪೂರ್ಣವಾದುದೇ ಆಗಿವೆ.
ನಮ್ಮ ಸಾಮಾಜಿಕ ಪರಿಸರದಲ್ಲಿ ನಾಣ್ನುಡಿಗಳ ಪ್ರಭಾವವು ದಟ್ಟವಾಗಿರುವುದು ಹಿಂದಿನಿಂದಲೂ  ಬೆಳೆದುಬಂದಿರುವ ಪರಂಪರೆ. ’ಬಾಳೆಗೆ ಒಂದೇ ಗೊನೆ; ಬಾಳುವವನಿಗೆ ಒಂದೇ ಮಾತು’ ಎಂಬುದೊಂದು ಗಾದೆ. ಇಲ್ಲಿ ಬಾಳಿಬದುಕುವವರು ಎಂದೆಂದಿಗೂ ತಮ್ಮ ಮಾತಿಗೆ ತಪ್ಪಬಾರದೆಂಬ ಸಂದೇಶದೊಂದಿಗೆ ಬಾಳೆಯಗಿಡವು ಕೊಡುವುದು ಒಂದೇ ಗೊನೆ ಎಂಬ ಮಾಹಿತಿಯೂ ಸೇರಿದೆ.
 ಈ ರಿತಿಯಲ್ಲಿ ಬರುವ ಒಂದು ಹೂವನ್ನು ಕುರಿತಂತೆಯೂ ನಮ್ಮಲ್ಲಿ ಮೊದಲಿನಿಂದಲೂ ಹಲವಾರು  ನಂಬಿಕೆಗಳು ಬೆಳೆದು ಉಳಿದುಬಂದಿವೆ.  ಬಾಳೆಯಗಿಡಲ್ಲಿ ಹೊರಹೊಮ್ಮುವ ಈ ಒಂದೇ ಒಂದು ಹೂವು ನಮ್ಮಲ್ಲಿರುವ ದಶದಿಕ್ಕುಗಳ ಪೈಕಿ ಯಾವುದಾದರೊಂದು ದಿಕ್ಕಿಗೆ ಮೂತಿಮಾಡಿಕೊಂಡು ಗಿಡಿದಿಂದ ಹೊರಹೊಮ್ಮಿ, ಕೊನೆಗೆ ನೆಲದತ್ತ ಮುಖಮಾಡಿ ಬಾಗುತ್ತದೆ.
ಗಿಡದಬುಡಕ್ಕೆ ಯಾವದಿಕ್ಕಿನಲ್ಲಿ ಈ ಹೂವು (ಮಾತೆ/ಮೂತಿ, ಬಾಳೆಗೊನೆಯ ಮುಂದಿನ ಹೂವು) ಬಾಗಿರುತ್ತದೆಯೋ ಅದನ್ನು ಅವಲಂಬಿಸಿ ಶುಭಾಶುಭಗಳನ್ನು  ಊಹಿಸುವ ಕ್ರಮವಿರುತ್ತದೆ.  ಇದನ್ನು ನಂಬುವುದೂ ಬಿಡುವುದೂ ಬೇರೆ ವಿಚಾರ. ಆದರೆ ಹಲಸಿನ ಮರದ ಹೂವುಗಳ ಪರಿ ಈರೀತಿಯದಲ್ಲ!!  ಅದು ಬಿಡುವುದು ಒಂದೆರಡು ಹೂವಲ್ಲ! ಸಾವಿರಾರು ಹೂವುಗಳು.  ಅವುಗಳ ಮೂತಿಯೂಕೂಡ ಯಾವುದೋ ಒಂದು ದಿಕ್ಕಿಗೆ ಸೀಮಿತವಲ್ಲ!! ದಶದಿಕ್ಕುಗಳಿಗೂ ಅದು ಮೂತಿಮಾಡಿಕೊಂಡು ಹೊರಹೊಮ್ಮುತ್ತವೆ!! ಇದೊಂದು ಪ್ರಕೃತಿಯ ಕೌತುಕ!!
ಸರ್ವ ವಿಷಯಾತ್ಮಕವಾದ ತನ್ನ ಸಿರಿಭೂವಲಯಕಾವ್ಯವು  ಹಲಸಿನಹೂವಿನಂತೆ ಬಹುಮುಖವಾಗಿ ವಿಕಸಿಸಿರುವುದೆಂಬುದನ್ನು ಸೂಚಿಸುವಲ್ಲಿ ಕುಮುದೇಂದು ಮುನಿಯು ಒಂದು ಸಾಂಗತ್ಯಪದ್ಯವನ್ನು ರಚಿಸಿರುವುದಿದೆ. ಅದರಲ್ಲಿ ಕೇವಲ ಹಲಸಿನಹೂವಿನ ವಿಚಾರಮಾತ್ರವಲ್ಲ; ಇಂದಿನ ದಿನಗಳಲ್ಲೂ ಅತಿ ಕಷ್ಟಕರವೆನಿಸಿರುವ ಬಾಹ್ಯಾಕಾಶಯಾನದ ವಿಚಾರವನ್ನು ಕುರಿತೂ ಖಚಿತವಾದ ವಿವರವನ್ನು ಸೂಚಿಸಿರುವುದಿದೆ.
ಅಗತ್ಯಕ್ಕೆ ಅನುಗುಣವಾದ  ಏರೋ ಇಂಜಿನ್ನಿನ ತಯಾರಿಕೆಯನಂತರ ಆಧುನಿಕ ವಿಜ್ಞಾನ ಕ್ಷೇತ್ರದಲ್ಲಿ ಮೊದಲಿಗೆ ಭೂಮಿಗೆ ಸಮಾಂತರವಾಗಿ ಆಕಾಶದಲ್ಲಿ ಹಾರಾಡುವ ವಿಮಾನಗಳ ಆವಿಷ್ಕಾರವಾಯಿತು.  ಕಾಲಕ್ರಮದಲ್ಲಿ ಭೂಮಿಯ ಗುರುತ್ವಾಕರ್ಷಣಶಕ್ತಿಯನ್ನು ಮೀರಿ ಗಗನದತ್ತ ಹಾರಿ, ಅಲ್ಲಿ ಒಂದು ಸ್ಥಿರವಾದ ಕಕ್ಷೆಯಲ್ಲಿ  ಉಪಗ್ರಹವನ್ನು ಸ್ಥಾಪಿಸುವತ್ತ ವಿಜ್ಞಾನಿಗಳು ಗಮನಹರಿಸಿದರು. ’ಕ್ರಯೋಜನಿಕ್’ ಇಂಜಿನ್ನಿನ ನಿರೂಪಣೆಯಿಂದ ಈ ಕಾರ್ಯ ಯಶಸ್ವಿಯಾಯಿತು.  ಇದು ಹಲವಾರು ದಶಕಗಳ ಸಾಧನೆಯ ಫಲವೆಂಬುದು ಸರ್ವವಿದಿತ. ಇದು ಆಧುನಿಕ ವಿಜ್ಞಾನದ ಮಹತ್ತರವಾದ ಸಾಧನೆಯೆಂಬುದು ಎಲ್ಲರ ಅನಿಸಿಕೆ.  ಆದರೆ, ೧೨೦೦ ವರ್ಷಗಳ ಹಿಂದಿನವನಾದ ಕುಮುದೇಂದುಮುನಿಯು ಈ ರೀತಿಯ ಅನೂಹ್ಯವಾದ ಕಾರ್ಯದ ಖಚಿತವಾದ ಸ್ಪಷ್ಟವಿವರಣೆಯನ್ನು ಸೂಚಿಸಿರುವುದಿದೆ!! ಸಿರಿಭೂವಲಯದಲ್ಲಿ ’ದೇಹವನ್ನು ಆಕಾಶಕ್ಕೆ ಹಾರಿಸಿ, ಅಲ್ಲಿ ಸ್ಥಿರವಾಗಿ ನಿಲ್ಲಿಸುವ ಘನವೈಮಾನಿಕಕಾವ್ಯ’ ಎಂದಿರುವುದಿದೆ!
 ’ ಸೆಟಲೈಟ್ ಟೆಕ್ನಾಲಜಿ’ಯು ಸಾಧಿಸಿರುವುದು ಇದೇ ಕಾರ್ಯವನ್ನು ತಾನೇ!!??  ’ಘನವೈಮಾನಿಕ’ ಎಂದರೆ, ವಿಮಾನಯಾನಕ್ಕಿಂತ ಮಿಗಿಲಾದ ’ಸ್ಪೂಟ್ನಿಕ್ ಟೆಕ್ನಾಲಜಿ’ ಎಂದು ಅರ್ಥೈಸಿಕೊಳ್ಳಬೇಕು. ”’ಹಲಸಿನಹೂವಿನಂಥ ಸರ್ವತೋಮುಖವಾದ ಈ ಕಾವ್ಯವು ವಿಶ್ವದ ಆಕಾಶದಂತಿರುವ ಕಾವ್ಯ. ಜೀವನದ ಜಂಜಡದಿಂದ ಬಿಡುಗಡೆಹೊಂದಿದವನ ರೂಪದ ಅಭೇದ್ಯವಾದಕಾವ್ಯ’’ ಎಂದೂ ಕವಿಯು ಸೂಚಿಸಿರುವುದಿದೆ. ನೋಡಿ:  ”ತನುವನು ಆಕಾಶಕೆ ಹಾರಿಸಿ ನಿಲಿಸುವ | ಘನವೈಮಾನಿಕದಿವ್ಯಕಾವ್ಯ| ಪನಸಪುಷ್ಪದಕಾವ್ಯವಿಶ್ವಂಭರಕಾವ್ಯ|ಜಿನರೂಪಿನಭದ್ರಕಾವ್ಯ||
ಇಲ್ಲಿ ನೀಡಿರುವ ಮಾಹಿತಿಯು ಮಿತಿಮೀರಿದ ಅರ್ಥವಿವರಣೆಯಾಗಿದೆ. ಇಂದಿನ ಆಧುನಿಕ ವಿಜ್ಞಾನಿಗಳ  ಸತತವಾದ ಪರಿಶ್ರಮದಿಂದ ನಡೆಸಿರುವ ಸಂಶೋಧನೆಯ ವಿವರಗಳೆಲ್ಲವೂ ನಮ್ಮ ಪ್ರಾಚೀನರಿಗೆ ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತೆಂದು ಸೂಚಿಸುವುದು ಮೌಢ್ಯತೆಯ ಪರಮಾವಧಿ.  ಎಂದು ಕೆಲವರು ಅವಹೇಳನಮಾಡಬಹುದು. ಅದರಿಂದ  ಕವಿಗೂ, ಕಾವ್ಯಕ್ಕೂ, ಕಾವ್ಯದ ಸಂಶೋಧಕರಿಗೂ, ಸರಳಪರಿಚಯಕಾರನಿಗೂ ನಷ್ಟವೇನಿಲ್ಲ!!
ಈ ಕಾವ್ಯವನ್ನು ಆಧುನಿಕ ಕಂಪ್ಯೂಟರ್  ಗೆ ಅಳವಡಿಸಿ,  ವ್ಯಾಪಕವಾದ ಸಂಶೋಧನೆಮಾಡುವ ಉದ್ದೇಶದಿಂದ ಮೈಸೂರಿನ ಭಾರತೀಯಭಾಷಾಸಂಸ್ಥಾನದಲ್ಲಿ ಒಂದು ವಿಚಾರ ವಿನಿಮಯಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
 ಡಾಕ್ಟರೇಟ್ ಪದವಿ ಪಡೆದ ಹಲವಾರು ವಿದ್ವಾಂಸರು, ವಿಜ್ಞಾನಿಗಳು ಅದರಲ್ಲಿ ಭಾಗವಹಿಸಿದ್ದರು. ಸಿರಿಭೂವಲಯದ ವಿಚಾರದಲ್ಲಿ ’ಏನೋ ಒಂದಿಷ್ಟು ಕೆಲಸಮಾಡಿದ್ದಾನೆ’ ಎಂಬ ಕಾರಣದಿಂದಾಗಿ  ಅನಿವಾರ್ಯವಾಗಿ ಈ ಸಿರಿಭೂವಲಯದಸುಧಾರ್ಥಿಗೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು’ ಅಪರೂಪದ ’ ಅವಕಾಶ ದೊರೆತಿತ್ತು!!
 ಸಮಾರಂಭದಲ್ಲಿ ಭಾಗವಹಿಸಲು ಸೂಕ್ತವಾದ ವಸತಿ, ಊಟೋಪಚಾರದ ವ್ಯವಸ್ಥೆ,ಹಾಗು ವಿಮಾನಯಾನದ ವೆಚ್ಚಭರಿಸುವ ಸೌಲಭ್ಯವಿದ್ದ ಕಾರಣ ಹಲವಾರು ಹೆಸರಾಂತ ಗಣ್ಯರು ಅದರಲ್ಲಿ ಭಾಗವಹಿಸಿದ್ದರು. ವಾಸ್ತವವಾದ ಹಾಗೂ ವ್ಯಸನದ ಸಂಗತಿಯೆಂದರ, ಅಲ್ಲಿ ಸೇರಿದ್ದವರ ಪೈಕಿ ಎಂಟು-ಹತ್ತು ಜನಗಳನ್ನು  ಬಿಟ್ಟರೆ, ಉಳಿದವರಿಗೆ ಈ ಕಾವ್ಯದ ಹೆಸರೂ ಸರಿಯಾಗಿ ತಿಳಿಯದ್ದು!!
 ಕಾರ್ಯಕ್ರಮದ ಉದ್ಘಾಟನೆಗೆ ಮೊದಲೇ ವ್ಯವಸ್ಥಾಪಕರು  ’ನೀವೇ ಮೊದಲಿಗೆ ಭಾಷಣಮಾಡಿ’ ಎಂದು ಸುಧಾರ್ಥಿಗೆ ಸೂಚಿಸಿದರು. ”ಕಂಪ್ಯೂಟರ್ ಬಳಕೆಯಿಂದಮಾತ್ರವೇ ಸಿರಿಭೂವಲಯದ ಸಂಶೋಧನೆಸಾಧ್ಯ’’ ಎಂಬುದನ್ನು ಪ್ರತಿಪಾದಿಸುವುದೇ ಆ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಆದರೆ, ಅದು ಸಾಧ್ಯವಿಲ್ಲವೆಂಬ ಖಚಿತವಾದ ನಿರ್ಧಾರ ಸುಧಾರ್ಥಿಯದು!
 ಈ ಕಾರಣದಿಂದಾಗಿ ’ ದೂರದೂರದ ಊರುಗಳಿಂದ ಬಂದಿರುವ ವಿದ್ವಾಂಸರ ವಿಚಾರ ಮಂಡನೆ ಮೊದಲಾಗಲೀ,  ಕೊನೆಯಲ್ಲಿ ನಾನು ಮಾತನಾಡುತ್ತೇನೆ’ ಎಂದು ಸುಧಾರ್ಥಿ ಸೂಚಿಸಿದ್ದಾಯಿತು.  ಕಾರ್ಯಕ್ರಮದ ಪ್ರಾರಂಭದಲ್ಲಿ ’ಪ್ರಧಾನಭಾಷಣ’ ಮಾಡಿದ ಮಹನೀಯರ ’ಸಿರಿಭೂವಲಯದ ಪಾಂಡಿತ್ಯ’ ಎಷ್ಟಿದ್ದಿತೆಂದರೆ,  ಅದು ಅಗಾಧವಾದುದು!!
ಈಹಿಂದೆ ಸುಧಾರ್ಥಿಯ ಹಳ್ಳಿಗೆ ಬಂದಿದ್ದ ಈ ದಿಳ್ಳಿಯ ನಿವಾಸಿ ವಿದ್ವಾಂಸರು  ಅಂದಿನ ಕಾರ್ಯಕ್ರಮಕ್ಕೆ ಮೊದಲು ಸಭಿಕರ ಸಾಲಿನಲ್ಲಿದ ಸುಧಾರ್ಥಿಯಪಕ್ಕದಲ್ಲಿ ಕುಳಿತು,  ಕುಮುದೇಂದುವಿಗೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿಗಳು, ಸಿರಿಭೂವಲಯ ಕುರಿತ ಕೆಲವು  ಮಾಹಿತಿಗಳನ್ನು ಮೌಖಿಕವಾಗಿ ಸಂಗ್ರಹಿಸಿಕೊಂಡು, ತಮ್ಮ ’ಪ್ರಧಾನಭಾಷಣವನ್ನು’ ಯಶಸ್ವಿಯಾಗಿ ಪೂರೈಸಿದರು. 
ಮುಂದೆ ಸಿರಿಭೂವಲಯಕುರಿತು ಮಾತನಾಡಿದವರಿಗೆ ಸಿರಿಭೂವಲಯನ್ನು ಕಂಪ್ಯೂಟರಿಗೆ ಹೇಗೆ ಅಳವಡಿಸ ಬೇಕೆಂಬುದರ ಚಿಂತನೆ ಇತ್ತೇ ಹೊರತು, ಸಿರಿಭೂವಲಯದ ಸ್ವರೂಪವೇನೆಂಬುದರ ಪರಿಚಯವಿರಲಿಲ್ಲ!! ಅದನ್ನು ಕುರಿತು ಪ್ರಶ್ನಿಸಿದವರಿಗೆ ’ಅದೆಲ್ಲವನ್ನೂ ಸುಧಾರ್ಥಿ ಜೀ ಯವರು ತಿಳಿಸುತ್ತಾರೆ’ ಎಂದು ಮುಂದುವರೆದರು!!
 ’ಸಿರಿಭೂವಲಯದಲ್ಲಿ ಸಂಸ್ಕೃತ ಸಾಹಿತ್ಯ ಉಗಮವಾಗುವ ಕ್ರಮ’ ಎಂಬ ವಿಚಾರವಾಗಿಮಾತನಾಡಿದ ವಿದ್ವಾಂಸರು ’ ಸಾಲಿನಲ್ಲಿ ಒಂದು ಅಕ್ಷರಹಿಡಿದು ಕೊನೆಯವರೆವಿಗೂ ಸಾಗಿದಲ್ಲಿ ಸಂಸ್ಕೃತ ಸಾಹಿತ್ಯ ಬರುತ್ತದೆ, ಸಾಲಿನಲ್ಲಿ ಕೆಲವು ಅಕ್ಷಬಿಟ್ಟು ಕೆಲವು ಅಕ್ಷರಗಳನ್ನು ಜೋಡಿಸಿಕೊಂಡು ಓದಿದರೆ, ಸಂಸ್ಕೃತ ಸಾಹಿತ್ಯ ಸಿಗುತ್ತದೆ’ ಎಂಬ ವಿವರಣೆಯಲ್ಲೇ ಸುತ್ತತೊಡಗಿದರು! 
ಪ್ರಸಿದ್ಧ ವಿದ್ವಾಂಸರೊಬ್ಬರು ಎದ್ದು ನಿಂತು ’ಅಲ್ಲಿ ಯಾವ ಸಾಹಿತ್ಯ ಸಿಗುತ್ತದೆ ಎಂಬುದನ್ನು ಸ್ವಲ್ಪ ತಿಳಿಸಿ’ ಎಂದು ಪ್ರಶ್ನಿಸಿದಾಗ ಅವರು ’ಸುಧಾರ್ಥಿಯವರು ಅದನ್ನೆಲ್ಲ ವಿಸ್ತಾರವಾಗಿ ಬರೆದಿದ್ದಾರೆ. ಮುಂದೆ ಅವರೇ ಇದನ್ನೆಲ್ಲ ವಿವರಿಸುತ್ತಾರೆ’  ಎಂದು ಸೂಚಿಸಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಕೊನೆಗೆ ಸುಧಾರ್ಥಿಯ ಸರದಿ ಬಂದಿತು. ”ನೀವು ಆಯೋಜಿಸಿರುವ ಈ ಕಾರ್ಯಕ್ರಮದ ಉದ್ದೇಶದಂತೆ ಸಿರಿಭೂವಲಯವನ್ನು ಕಂಪ್ಯೂಟರ್ ನೆರವಿನಿಂದ ಸಂಶೋಧನೆ ಮಾಡಲು ಸಾಧ್ಯವೇ ಇಲ್ಲ. ಕಂಪ್ಯೂಟರ್ ಬಳಕೆಯಿಂದ ಸಂಶೋಧನೆಯ ಕೆಲಸದ ವೇಗವನ್ನು ಮಾತ್ರ ಹೆಚ್ಚಿಸಬಹುದು.  ಸಿರಿಭೂವಲಯ ಕಾವ್ಯರನೆಯಾಗಿರುವುದು ಕನ್ನಡ ಭಾಷೆಯಲ್ಲಿ.  ಅಲ್ಲಿ ಉಗಮವಾಗಿ ಅಂತರ್ಸಾಹಿತ್ಯವು  ಯಾವುದೇ ಭಾಷೆಯಲ್ಲಿರಲೀ, ಅದನ್ನು ವಿಂಗಡಿಸಲು ಕನ್ನಡಭಾಷೆಯ ಪರಿಚಯ ಅತ್ಯವಶ್ಯಕ. ಸಿರಿಭೂವಲಯಕಾವ್ಯದ ವಿಚಾರವಾಗಿ ಸಾಕಷ್ಟು ಮಾಹಿತಿಯ ಅರಿವೂ ಇರಲೇಬೇಕು.
 ಇದನ್ನೋದುವುದಕ್ಕೂ, ಅರ್ಥಮಾಡಿಕೊಳ್ಳುವುದಕ್ಕೂ ಸಾಕಷ್ಟು ಸಾಹಿತ್ಯಿಕ ಜ್ಞಾನದ ಅಗತ್ಯವಿರುತ್ತದೆ. ಈ ವಿಚಾರದಲ್ಲಿ ಕಂಪ್ಯೂಟರ್ ನೆರವಾಗಬಹುದೇ ವಿನಃ ಅದೇ ಸ್ವತಂತ್ರವಾಗಿ  ಸಂಶೋಧನೆ ಮಾಡಲಾರದು’’ ಎಂಬ ಅಪ್ರಿಯವಾದ ಖಚಿತಮಾಹಿತಿಯನ್ನು ಸಭೆಯ ಗಮನಕ್ಕೆ ತರುವುದರೊಂದಿಗೆ , ಸುಧಾರ್ಥಿಯು ಈ  ’ಉಪಗ್ರಹ’ ವಿಚಾರಕ್ಕೆ ಸಂಬಂಧಿಸಿದ ಸಾಂಗತ್ಯ ಪದ್ಯವನ್ನು ಸೂಚಿಸಿ ಅದರ ವಿವರಣೆನೀಡಿದಾಗ, ಸಭೆಯಲ್ಲಿ ಕೆಲವರಿಗೆ ಅಚ್ಚರಿಯಾದರೇ, ಕೆಲವರಿಗೆ ವಿವರಿಸಲಾಗದ ’ಅಸಮಾಧಾನ’ ಉಂಟಾದುದು ನಿಶ್ಚಯ.
ಕಾರ್ಯಕ್ರಮ ಮುಕ್ತಾಯವಾದನಂತರ ಸಭಿಕರೆಲ್ಲರೂ ಗುಂಪುಗಳಾಗಿ ಕಲೆತು ಮಾತಿಗೆ ತೊಡಗಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಸೇರಿದ ಅಧಿಕಾರಿಯೊಬ್ಬರ ಸುತ್ತ ಸೇರಿದ ಕೆಲವರು ಸುಧಾರ್ಥಿಯು ವಿವರಿಸಿದ ಮಾಹಿತಿಯನ್ನು ಕುರಿತು ಅವರಲ್ಲಿ ಪ್ರಶ್ನಿಸ ತೊಡಗಿದರು.
 ವಿವೇಕಶಾಲಿಯಾಗಿದ್ದ ಅವರು ಕೂಡಲೇ ಯಾವುದೇ ನಿರ್ಧಾರಸೂಚಿಸದೇ. ’ಅವರು ವೇದಿಕೆಯಲ್ಲಿ ವಿವರಿಸಿದ ಮಾಹಿತಿಯನ್ನು ನಿರಾಕರಿಸುವುದು ಸುಲಭವಲ್ಲ. ಅದನ್ನು ಕುರಿತು ಕಾವ್ಯಾಭ್ಯಾಸಿಗಳು ಹೆಚ್ಚಿನ ವಿಚಾರ ಸೂಚಿಸಬೇಕು’ ಎಂದು ಉತ್ತರಿಸಿದರು.
ಇಲ್ಲಿರುವ ಸಮಸ್ಯೆ ಎಂದರೆ:  ’ಯಾವುದೇ ಪದವಿ, ಪ್ರಶಸ್ತಿ ಪಡೆಯದ ಗ್ರಾಮೀಣ ಬರಹಗಾರನ ವಿವರಣೆಯನ್ನು ವಿದ್ವಾಂಸರು ಮಾನ್ಯಮಾಡಲು ಹೇಗೆ ಸಾಧ್ಯ!?  ಎಂಬುದು!!!  ಈ ಕಾವ್ಯಕ್ಕೆ ಸಂಬಂಧಿಸಿದಂತೆ ಕಳೆದ ೬೫ ವರ್ಷಗಳಿಂದಲೂ ಈರೋಗ ಪ್ರಚಲಿತವಿದೆ!! ಇದಕ್ಕೆ ಮದ್ದು ಹುಡುಕುವುದು ವಿಜ್ಞಾನಿಗಳಿಗೆ ಬಿಟ್ಟ ಸಂಗತಿ!!!
ಕಾವ್ಯದೊಳಗೆ ಇಳಿದು ಹುಡುಕುವ ಯೋಗ್ಯತೆ ಇರಬೇಕು, ಅಥವಾ ಈಗ ಹುಡುಕಿರುವ ಮಾಹಿತಿಗಳಿಗೆ ಸಮ್ಮತಿಸುವ ಸೌಜನ್ಯವಿರಬೇಕು!! ಎರಡೂ ಇಲ್ಲದವರನ್ನು ಕುರಿತು ಈ ಕಾವ್ಯದ ಸಂಶೋಧಕ ಕರ್ಲಮಂಗಲಂ ಶ್ರೀಕಂಠಯ್ಯನವರು ”’ನೀವೆಲ್ಲ ಬಾಡಿಗೆ ವಿದ್ವಾಂಸರು. ವಿದ್ವತ್ ನಪುಂಸಕರು. ನಿಮಗೆ ಇವೆಲ್ಲ ಅರ್ಥವಾಗುವುದಿಲ್ಲ’ ಎಂದು  ೬೫ ವರ್ಷಗಳ ಹಿಂದೆಯೇ ಸೂಕ್ತವಾದ  ಪ್ರಶಸ್ತಿ ನೀಡಿದ್ದಾಗಿದೆ!!!
 ಇಂಥ ಖಚಿತವಾದ ವಿವರಣೆಗಳೂ  ಸುಳ್ಳು, ’ಸ್ವಕಪೋಲಕಲ್ಪಿತ’ವಾದುವು ಎಂದು ಇನ್ನೂ ಯಾರಾದರೂ ಸೂಚಿಸುವುದಾದಲ್ಲಿ ಅಂಥವರಿಗೆ ಉತ್ತರಿಸುವ ಅಗತ್ಯವಿದೆಯೇ? ಎಂಬುದನ್ನು ಓದುಗರೇ ನಿರ್ಧರಿಸಬೇಕು.
                                                                                                                 -ಸಿರಿಭೂವಲಯದಸುಧಾರ್ಥಿ.

No comments:

Post a Comment